ಶನಿವಾರ, ಜುಲೈ 2, 2016

ಮಕ್ಕಳ ತರಬೇತಿ ಹೇಗೆ?

ಅಬೂಝೀಶಾನ್, ರಿಯಾದ್

ನಾವು ಬಾಲ್ಯದಲ್ಲಿರುವಾಗ ಶಾಲೆಯ ಪಠ್ಯ ಪುಸ್ತಕದಲ್ಲಿ ಓದಿದ ಕತೆಯಿದು. ಒಬ್ಬ ಟೋಪಿ ಮಾರುವವನಿದ್ದ. ಆತ ಪ್ರತಿದಿನ ತನ್ನ ಬುಟ್ಟಿಯಲ್ಲಿ ಟೋಪಿಗಳನ್ನಿಟ್ಟು ಪೇಟೆಗೆ ಹೋಗಿ ಅವುಗಳನ್ನು ಮಾರಿ ಜೀವನ ಸಾಗಿಸುತ್ತಿದ್ದ. ಒಂದು ದಿನ ಪೇಟೆಗೆ ಹೋಗುತ್ತಿದ್ದಾಗ ದಾರಿ ಯಲ್ಲಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕೂತು ಅಲ್ಲಿಯೇ ನಿದ್ದೆಹೋದ. ಎಚ್ಚರವಾದಾಗ ನೋಡುವುದೇನು? ಬುಟ್ಟಿಯಲ್ಲಿ ಒಂದೇ ಒಂದು ಟೊಪ್ಪಿಯಿಲ್ಲ. ಮರದ ಮೇಲೆ ನೋಡಿದಾಗ ತುಂಬಾ ಮಂಗಗಳು. ಎಲ್ಲದರ ಕೈಯಲ್ಲಿ ಆತನ ಟೋಪಿಗಳಿದ್ದುವು. ಏನು ಮಾಡುವುದೆಂದು ಆಲೋಚಿಸುತ್ತಿರುವಾಗ ತನ್ನ ತಲೆಯಲ್ಲಿಟ್ಟ ಟೋಪಿಯು ಹಾಗೆಯೇ ಇರುವುದು ಆತನಿಗೆ ತಿಳಿಯಿತು. ಆತ ಚಿಂತಾಕ್ರಾಂತವಾಗಿ ತಲೆಯ ಮೇಲೆ ಕೈಯಿಟ್ಟಾಗ ಮಂಗಗಳೂ ಆತನನ್ನೇ ಅನುಕರಿಸುವಂತೆ ತಮ್ಮ ತಲೆಯ ಮೇಲೆ ಕೈಯಿಟ್ಟವು. ಆಗ ಆತನಿಗೆ ಒಂದು ಉಪಾಯ ಹೊಳೆಯಿತು. ತನ್ನ ತಲೆಯ ಮೇಲಿನ ಟೋಪಿಯನ್ನು ತೆಗೆದು ಕೈಯಲ್ಲಿ ಹಿಡಿದ. ಮಂಗಗಳೂ ಹಾಗೆಯೇ ಮಾಡಿದುವು. ತನ್ನ ಟೋಪಿಯನ್ನು ಎತ್ತಿಹಿಡಿದ. ಅವುಗಳೂ ತಮ್ಮ ತಮ್ಮ ಕೈಯಲ್ಲಿದ್ದ ಟೋಪಿಗಳನ್ನು ಎತ್ತಿ ಹಿಡಿದವು. ಆತ ತನ್ನ ಟೋಪಿಯನ್ನು ಗಾಳಿಯಲ್ಲಿ ಎಸೆದ. ಆಗ ಎಲ್ಲ ಮಂಗಗಳೂ ತಮ್ಮ ತಮ್ಮ ಟೋಪಿಯನ್ನು ಗಾಳಿಯಲ್ಲಿ ಎಸೆದವು. ಬಿದ್ದ ಟೋಪಿಗಳನ್ನೆಲ್ಲಾ ಹೆಕ್ಕಿ ಆತ ತನ್ನ ಉಪಾಯಕ್ಕೆ ತಾನೇ ಹೊಗಳುತ್ತಾ ಪೇಟೆಯ ದಾರಿ ಹಿಡಿದ. ಈ ಕತೆ ಹೆಚ್ಚು ಕಮ್ಮಿ ಎಲ್ಲರಿಗೂ ತಿಳಿದಿದೆ. ಆದರೆ ಈ ಕಥೆ ಇನ್ನೂ ಮುಂದುವರಿಯುತ್ತದೆ. ಅದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ. ಇಪ್ಪತ್ತೈದು ವರುಷಗಳು ಕಳೆದುವು. ಆ ಟೊಪ್ಪಿ ಮಾರುವವ ವಯಸ್ಸಾಗಿ ತನ್ನ ಕಸುಬನ್ನು ತನ್ನ ಮಗನಿಗೆ ಹಸ್ತಾಂತರಿಸಿದ. ಆ ಮಗ ಹಾಗೆಯೇ ಟೊಪ್ಪಿ ಮಾರುತ್ತಿರುವಾಗ ಒಂದು ದಿನ ಪೇಟೆಗೆ ಅದೇ ದಾರಿಯಾಗಿ ಹೋಗುವಾಗ ಅದೇ ಮರದ ಕೆಳಗೆ ಟೋಪಿಯ ಬುಟ್ಟಿಯನ್ನಿಟ್ಟು ನಿದ್ದೆಹೋದ. ಎದ್ದಾಗ ಅದೇ ಘಟನೆ ಪುನರಾವರ್ತಿಸಲ್ಪಟ್ಟಿತು. ಆತನ ಟೋಪಿಗಳನ್ನೆಲ್ಲಾ ಮರದ ಮೇಲಿರುವ ಮಂಗಗಳು ತೆಗೆದು ಕೊಂಡು ಹೋಗಿದ್ದುವು. ಆಗ ಆತನಿಗೆ ತಂದೆ ಹೇಳಿದ ತನ್ನ ಘಟನೆ ಹಾಗೂ ಉಪಾಯ ನೆನಪಿಗೆ ಬಂತು. ಆತ ತನ್ನ ತಲೆಯಲ್ಲಿರುವ ಟೋಪಿಯನ್ನು ಕೈಯಲ್ಲಿ ಹಿಡಿದ. ಮಂಗಗಳೂ ಹಾಗೆಯೇ ಮಾಡಿದುವು. ತನ್ನ ಟೋಪಿಯನ್ನು ಎತ್ತಿಹಿಡಿದ. ಮಂಗಗಳೂ ತಮ್ಮ ತಮ್ಮ ಕೈಯಲ್ಲಿದ್ದ ಟೋಪಿಯನ್ನು ಎತ್ತಿಹಿಡಿದುವು. ಆತ ತನ್ನ ಟೋಪಿಯನ್ನು ಗಾಳಿಯಲ್ಲಿ ಎಸೆದ. ಆದರೆ ಆತ ನಿರೀಕ್ಷಿಸಿದಂತೆ ಒಂದು ಮಂಗವೂ ತನ್ನ ಟೋಪಿಯನ್ನು ಗಾಳಿಯಲ್ಲಿ ಎಸೆಯಲಿಲ್ಲ. ಬದಲಾಗಿ ಅಲ್ಲಿದ್ದ ದೊಡ್ಡ ಮಂಗವೊಂದು ಮರದಿಂದ ರಭಸದಿಂದ ಕೆಳಗಿಳಿದು ಬಂದು ಆತ ಬಿಸಾಡಿದ ಟೋಪಿಯನ್ನೂ ತೆಗೆದು ಪುನಃ ಮರ ಹತ್ತಿ ಹೋಗುವಾಗ ಆತನ ಕಪಾಳಕ್ಕೆ ಒಂದು ಪೆಟ್ಟು ಕೊಟ್ಟು ಮೌನವಾಗಿ ಒಂದು ವಿಷಯ ಹೇಳಿತು, "ಮಗನೇ, ನಿನಗೆ ನಿನ್ನ ತಂದೆ ತನ್ನ ಅನುಭವ ಹಾಗೂ ಉಪಾಯವನ್ನು ಹೇಳಿದ ಹಾಗೆಯೇ ನಮಗೂ ನಮ್ಮ ತಂದೆಯವರು ತಮಗಾದ ಅನುಭವವನ್ನು ಹೇಳಿದ್ದಾರೆ. ಹೀಗಾಗಿ ಈ ಉಪಾಯ ನಮ್ಮೊಂದಿಗೆ ನಡೆಯದು."
ಇಂದಿನ ಆಧುನಿಕ ಜಗತ್ತಿನ ಮಕ್ಕಳು ನಮ ಗಿಂತ ಎಷ್ಟೋ ಮುಂದಿದ್ದಾರೆ. ಒಂದನೇ ವಯಸ್ಸಿನಲ್ಲಿಯೇ ಮೊಬೈಲ್ ಅನ್ನು ಹಿಡಿಯಲು ಶುರು ಮಾಡುವ ಮಕ್ಕಳು ಕೆಲವೇ ಸಮಯ ದಲ್ಲಿ ಅದನ್ನು ಉಪಯೋಗಿಸುವ ರೀತಿಯನ್ನು ಸಂಪೂರ್ಣವಾಗಿ ಅರಿಯುತ್ತಾರೆ. ನನ್ನೊಬ್ಬ ಸ್ನೇಹಿತ ಒಂದು ಘಟನೆಯನ್ನು ಹೀಗೆ ಹೇಳಿದ್ದ: ಕಂಪ್ಯೂ ಟರ್‍ನ ಬಗ್ಗೆ ಬಹಳ ಉತ್ತಮವಾದ ಪಾಂಡಿತ್ಯ ಹೊಂದಿದ ಆತ ಕಂಪ್ಯೂಟರ್‍ನಲ್ಲಿ ಗೇಮ್ ಆಡು ತ್ತಿದ್ದ. ಆತನ 8 ವರ್ಷದ ಮಗ ಕೂಡ ಒಟ್ಟಿಗೆ ಕುಳಿತಿರುತ್ತಿದ್ದ. ಒಂದು ಸ್ಟೇಜ್‍ನಲ್ಲಿ ಆತನಿಗೆ ಮುಂದೆ ಹೋಗಲು ದಾರಿ ಕಾಣಲಿಲ್ಲ. ಸುಮಾರು ಎರಡು ಗಂಟೆ ಪ್ರಯತ್ನಿಸಿದ ಆತ ಸುಸ್ತಾಗಿ ಏನೋ ಕೆಲಸಕ್ಕೆ ಹೊರಗೆ ಹೋದ. ಹಿಂದಿರುಗಿ ಬಂದಾಗ ನೋಡುವುದೇನು, ಎರಡು ಗಂಟೆಯಿಂದ ಪ್ರಯತ್ನಿಸುತ್ತಿದ್ದ ದಾರಿ ಕಾಣದ ಆ ದಾರಿಯನ್ನು ಆತನ ಮಗ ಹತ್ತು ನಿಮಿಷದಲ್ಲಿ ಕಂಡು ಹಿಡಿ ದಿದ್ದ. ಹೀಗೆ ನಮಗಿಂತ ಅದೆಷ್ಟೋ ಮುಂದಿರುವ ಮಕ್ಕಳೊಂದಿಗೆ ವ್ಯವಹರಿಸುವ ನಾವು ಈ ಬಗ್ಗೆ ಅತೀವ ಜಾಗೃತೆ ವಹಿಸಬೇಕು. ಹಳೆ ಕಾಲದ ಮಕ್ಕಳಂತೆ ಇಂದಿನ ಮಕ್ಕಳ ತರಬೇತಿ ನಡೆಸಿದರೆ ನಾವಂತು ಸೋಲುವುದು ಖಂಡಿತ.
ಇಂದಿನ ಕಾಲದಲ್ಲಿ ಮಕ್ಕಳಿಗಾಗಿ ಅತಿ ಕಡಿಮೆ ಸಮಯವನ್ನು ವ್ಯಯಿಸಲಾಗುತ್ತದೆ. ಕೆಲವು ಕಡೆ ಮಕ್ಕಳನ್ನು ಅತಿಯಾದ ಲಾಲನೆ ಮಾಡಿ ಈ ಲೋಕದಲ್ಲಿ ಯಾವುದಕ್ಕೂ ಆಗದಂತೆ ಮಾಡಲಾಗು ತ್ತದೆ. ಅದಿಲ್ಲದಿದ್ದರೆ ಮಕ್ಕಳನ್ನು ಶಿಕ್ಷಿಸಿ ಶಿಕ್ಷಿಸಿ ಕಾರುಣ್ಯ, ವಾತ್ಸಲ್ಯ ಅವರಿಗೆ ಏನೆಂದು ತಿಳಿಯದಂತೆ ಹೆದರಿಸಿ, ಮಾತಾಪಿತರು ಭಯಂಕರ ಎಂದು ಮಗು ಅರಿ ಯುವ ಮಟ್ಟಕ್ಕೆ ತಲುಪಿಸಲಾಗುತ್ತದೆ.
ಹನ್ನೆರಡು ವರ್ಷದ ಹೆಣ್ಣು ಮಗು ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾಯಿತು. ಯಾವ ಕಾರಣಕ್ಕಾಗಿ ಆತ್ಮಹತ್ಯೆ ನಡೆಸಲು ಆ ಮಗು ಪ್ರಯತ್ನಿಸಿತು ಎಂದು ಕೌನ್ಸಿಲಿಂಗ್ ನಡೆಸಿ ದಾಗ ಆ ಹನ್ನೆರಡು ವರ್ಷದ ಹೆಣ್ಣುಮಗು ಉತ್ತರಿಸಿತು, "ನನಗೆ ನನ್ನ ತಾಯಿಯ ಪ್ರೀತಿಬೇಕು. ಅದಕ್ಕಾಗಿ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ. ನಾನು ಸತ್ತರೆ ಮಾತ್ರ ನನ್ನ ತಾಯಿಗೆ ನನ್ನ ಮೇಲೆ ಪ್ರೀತಿ ಜಾಸ್ತಿಯಾಗುವುದು." ಇಷ್ಟು ಹೇಳಿ ಆ ಮಗು ತನ್ನ ಮಾತನ್ನು ಮುಂದುವರಿಸಿತು, "ನನ್ನ ತಾಯಿ ನಾನೇನಾದರೂ ಚಿಕ್ಕ ತಪ್ಪು ಮಾಡಿದರೂ ಅದೇನೋ ದೊಡ್ಡ ತಪ್ಪಂತೆ ಕೈ ಯಲ್ಲಿರುವುದರಲ್ಲಿ ನನಗೆ ಹೊಡೆದು ಶಿಕ್ಷಿಸುತ್ತಾರೆ. ಕೆಲವು ಸಮಯ ನಾನು ನನ್ನ ಬುದ್ದಿಯನ್ನು ಉಪಯೋಗಿಸಿ ನನ್ನನ್ನು ನಾನೇ ರಕ್ಷಿಸುತ್ತೇನೆ." ನಿಜವಾಗಿ ಹೆಚ್ಚಿನ ಮಕ್ಕಳ ಅಭಿಪ್ರಾಯ ಹಾಗೆಯೇ. ತಂದೆ ಅಥವಾ ತಾಯಿ ಹೊಡೆಯಲು ಬಂದಾಗ ನಾನು ಜೋರಾಗಿ ಓಡಿದ ಕಾರಣ ಶಿಕ್ಷೆಯಿಂದ ತಪ್ಪಿಸಿದ್ದು ಎಂಬ ಭಾವನೆ ಅವರಲ್ಲಿರುತ್ತದೆ. ಬದಲು ಮಾತಾಪಿತರು ಹೊಡೆಯುವುದು ಬೇಡ ವೆಂದು ಬಿಟ್ಟದ್ದಲ್ಲವೆಂದು ಮಕ್ಕಳು ಆಲೋಚಿಸುವು ದಿಲ್ಲ. ಆ ಮಗು ಮುಂದುವರಿಸಿತು, "ಹಾಗೆಯೇ ಒಮ್ಮೆ ನನ್ನನ್ನು ಹೊಡೆಯಲು ನನ್ನ ತಾಯಿ ಬೆತ್ತ ಹಿಡಿದು ಬಂದಾಗ ನಾನು ಓಡಿ ಹೋಗಿ ಮನೆಯ ಅಟ್ಟದಲ್ಲಿ ಅಡಗಿ ಕುಳಿತೆ. ಎರಡು ಗಂಟೆಯ ಕಾಲ ನಾನಲ್ಲಿ ಕುಳಿತೆ. ನನ್ನ ತಾಯಿ ಕೂಡಾ ತನ್ನ ಕೆಲಸದಲ್ಲಿ ನಿಬಿಡಳಾದಳು. ಎರಡು ಗಂಟೆಯ ನಂತರ ಥಟ್ಟನೆ ತಾಯಿಗೆ ಮಗಳ ನೆನಪಾಯಿತು. ಕಾಣದಾದಾಗ ಯಾವಾ ಗಲೂ ಪ್ರೀತಿ ಜಾಸ್ತಿ ಉಕ್ಕುವುದು. ಹಾಗೆಯೇ ಮಗಳಿಗಾಗಿ ಹುಡುಕಾಟ, ಕೂಗಾಟ ತೊಡಗಿತು. ಅಯ್ಯೋ, ನನ್ನ ಮಗಳು ಎಲ್ಲಿಗೆ ಹೋದಳು? ಪ್ರೀತಿ ಉಕ್ಕಿ ಬಂತು. ಇದನ್ನೆಲ್ಲಾ ಮೇಲೆ ಅಟ್ಟ ದಲ್ಲಿ ಕುಳಿತು ಆ ಮಗು ನೋಡುತ್ತಾ ಇತ್ತು. ಓಹೋ ಹೀಗೋ ವಿಷಯ. ನಾನು ಇರುವಾಗ ನನಗೆ ಏನೂ ಬೆಲೆ ಇಲ್ಲ. ನಾನಿಲ್ಲದಿರುವಾಗ ನನ್ನಮ್ಮನಿಗೆ ಪ್ರೀತಿ
ಹೆಚ್ಚುವುದು. ಹುಡುಕಾಟ, ಕೂಗಾಟ ಹೆಚ್ಚಾದಾಗ ಆ ಮಗು ಕೆಳಗಿಳಿದು ಬಂತು. ಇದನ್ನು ಕಂಡಾಗ ಕೋಪದ ಭರದಲ್ಲಿ ಮಗುವಿಗೆ ತಾಯಿಯಿಂದ ಎರಡು ಬಲವಾದ ಪೆಟ್ಟು ಕೂಡಾ ಸಿಕ್ಕಿತು. ಮಗು ತನ್ನ ಕತೆಯನ್ನು ಮುಂದುವರಿಸಿತು. "ಮತ್ತೊಂದು ಸಲ ಹೀಗೆಯೇ ನನ್ನ ತಾಯಿ ನನ್ನನ್ನು ಹೊಡೆಯಲು ಬಂದಾಗ ನಾನು ಅಂಗಳದ ಬಾವಿಯ ಕಡೆಗೆ ಓಡಿದೆ. ಆ ಓಟದ ರಭಸದಲ್ಲಿ ನನ್ನ ಕಾಲು ತಾಗಿ ಒಂದು ಕಲ್ಲು ಬಾವಿಗೆ ಬಿತ್ತು. ನಾನಾದರೋ ಒಂದು ಮರದ ಹಿಂದೆ ಅಡಗಿ ಕುಳಿತೆ. ನನ್ನನ್ನು ಹಿಂಬಾ ಲಿಸುತ್ತಿದ್ದ ನನ್ನ ತಾಯಿ ನನ್ನನ್ನು ಕಾಣದಾದಾಗ ಹಾಗೂ ಬಾವಿಗೆ ಏನೋ ಬಿದ್ದ ಸದ್ದು ಕೇಳಿದಾಗ ಬಾವಿಗೆ ಇಣುಕಿ ನೋಡಿದರು. ಕಲ್ಲು ಬಿದ್ದ ರಭಸಕ್ಕೆ ನೀರು ಚೆಲ್ಲಾಪಿಲ್ಲಿಯಾದಾಗ ತನ್ನ ಮಗು ಬಾವಿಗೆ ಬಿದ್ದದ್ದೆಂದು ಎಣಿಸಿ ತಾಯಿಯ ಬೊಬ್ಬೆ ಶುರುವಾಯಿತು. ಅಕ್ಕಪಕ್ಕದವರೆಲ್ಲಾ ಓಡಿ ಬಂದರು. ಒಬ್ಬರು ಬಾವಿಗೆ ಜಿಗಿದು ನೋಡಿದಾಗ ಬಿದ್ದದ್ದು ಕಲ್ಲು ಎಂದು ತಿಳಿಯಿತು. ಆಗ ಮರದ ಹಿಂದೆ ಅಡಗಿ ಕುಳಿತ್ತಿದ್ದ ಆ ಮಗು ಮರದ ಹಿಂದಿನಿಂದ ಬಂದಾಗ ಆಗಲೂ ತಾಯಿಯಿಂದ ಸರಿಯಾದ ಪೆಟ್ಟು ಸಿಕ್ಕಿತು. ಯಾವಾಗಲೂ ಸಿಗುತ್ತಿರುವ ಪೆಟ್ಟಾದ ಕಾರಣ ಆ ಮಗು ಅದರ ಬಗ್ಗೆ ತಲೆಕೆಡಿಸಲಿಲ್ಲ. ಆದರೆ ಒಂದು ವಿಷಯ ಮಾತ್ರ ಆ ಮಗುವಿಗೆ ಮನವರಿಕೆಯಾಯಿತು. ನಾನು ಇಲ್ಲದಿರುವಾಗ ಮಾತ್ರ ನನ್ನ ತಾಯಿಗೆ ನನ್ನೊಡನೆ ಜಾಸ್ತಿ ಪ್ರೀತಿ ಇರುವುದು. ಹಾಗಾಗಿ ತಾಯಿಯ ಪ್ರೀತಿಗಾಗಿ ಆ ಮಗು ಆತ್ಮಹತ್ಯೆಗೆ ಪ್ರಯತ್ನಿಸಿತು. ಆ ತಂದೆ ತಾಯಿಯರ ಮೇಲೆ ಅಲ್ಲಾಹನ ದಯೆಯಿಂದ ಮಗು ಅದರಲ್ಲಿ ವಿಫಲವಾಯಿತು. ಇನ್ನು ಎರಡನೇ ಸಲ ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲವಾದಾಗ ಅದನ್ನು ಕೌನ್ಸಿಲಿಂಗ್‍ಗೆ ಕರೆದು ವಿಚಾರಣೆ ನಡೆಸಿದಾಗ ಈ ಸತ್ಯತೆ ಬೆಳಕಿಗೆ ಬಂತು.
ಇಂತಹ ಘಟನೆಗಳು ನಮ್ಮ ಮನೆಗಳಲ್ಲಿಯೂ ಸಂಭವಿ ಸುವುದಿಲ್ಲವೇ? ಖಂಡಿತವಾಗಿಯೂ ಸಂಭವಿಸುತ್ತದೆ. ನಾನೊಂದು ಉದಾಹರಣೆ ಕೊಡುತ್ತೇನೆ. ಓರ್ವ ತಾಯಿ ಬೆಳಿಗ್ಗೆದ್ದು ತರಕಾರಿ ತುಂಡರಿಸುತ್ತಿರುತ್ತಾರೆ ಅಥವಾ ಚಪಾತಿ ಮಾಡುತ್ತಿರುತ್ತಾರೆ. ಸಣ್ಣ ಮಗು ಬೆಳಿಗ್ಗೆದ್ದು ಕೂಗಲು ತೊಡಗುತ್ತದೆ. ಅದು ಬೇಕು, ಇದು ಬೇಕು ಎಂದು ಕೊಟ್ಟಿದ್ದನ್ನೆಲ್ಲಾ ಬೇಡ ಎಂದು ಹೇಳುತ್ತಿರುತ್ತದೆ. ಕೊನೆಗೆ ಕೋಪಗೊಂಡ ತಾಯಿ ಮಗುವನ್ನು ಕೂಗಲು ಬಿಟ್ಟು ಬಿಟ್ಟು ತನ್ನ ಕೆಲಸ ಮುಂದುವರಿಸುತ್ತಾರೆ. ಕೂಗುವ ಮಗು ನನಗೆ ಹಾಲುಬೇಕು ಅಥವಾ ನೀರು ಬೇಕು ಎಂದು ಹೇಳುತ್ತದೆ. ಕೆಲಸವನ್ನು ಬಿಟ್ಟು ಹಾಲು ರೆಡಿ ಮಾಡಿ ತಾಯಿ ಆ ಮಗುವಿಗೆ ಕೊಡುತ್ತಾರೆ ಅಥವಾ ಕೂಗುತ್ತಾ ಇರುವ ಮಗುವಿನ ಹತ್ತಿರ ಇಡುತ್ತಾರೆ. ತಾಯಿ ಬಂದು ತನ್ನ ಕೆಲಸ ಮುಂದುವರಿಸುತ್ತಾ ಇರು ವಾಗ ಆ ಮಗು ತನ್ನ ಕೈಯಲ್ಲಿರುವ ಹಾಲನ್ನು ಚೆಲ್ಲುತ್ತದೆ. ಈಗ ಆ ತಾಯಿಯ ಸಹನೆಯ ಕಟ್ಟೆ ಒಡೆದು ಕೋಪ ನೆತ್ತಿಗೇರುತ್ತದೆ. ಆಗ ಆ ತಾಯಿಯ ಪ್ರತಿಕ್ರಿಯೆ ಏನಾಗಿರಬಹುದು? ನೀವೊಮ್ಮೆ ಯೋಚಿಸಿ ನೋಡಿ. ತರಕಾರಿ ಮುರಿಯುತ್ತಿರುವ ಕತ್ತಿ ಅಥವಾ ಚಪಾತಿ ಮಾಡುವ ಮಣೆಯಿಂದ ಹಿಡಿದು ಆ ಮಗುವಿನ ಹತ್ತಿರ ಬಂದು ಅದನ್ನು ತೋರಿಸಿ ಒಂದೋ ನಿನ್ನನ್ನು ನಾನು ಕತ್ತಿಯಿಂದಲೇ ಕೊಲ್ಲುವೆ ಅಥವಾ ಈ ಚಪಾತಿ ಮಣೆಯಿಂದ ನಿನ್ನ ತಲೆಗೆ ಹೊಡೆ ಯುವೆ ಎಂದಲ್ಲವೇ ಕೋಪಗೊಂಡ ಆ ತಾಯಿ ಹೇಳುವುದು? ಖಂಡಿತ ಇಲ್ಲ. ಆದರೆ ಆ ಮಗು ಹಾಗೆ ಯೋಚಿಸುವುದಿಲ್ಲ. ಅಯ್ಯೋ, ನಾನಿಲ್ಲಿ ಇನ್ನು ನಿಂತರೆ ನನ್ನ ಕೊಲೆಯಾಗುವುದು ಖಂಡಿತ ಎಂದು ಮಗು ಭಾವಿಸಿ ಒಂದೋ ತಂದೆಯೊಂದಿಗೆ ಅಥವಾ ಅಜ್ಜ-ಅಜ್ಜಿಯರೊಂದಿಗೆ ಓಡಿ ಹೋಗುವುದು ಹಾಗೂ ಓಡಿದ ಕಾರಣ ನಾನು ರಕ್ಷಣೆ ಹೊಂದಿದೆ ಎಂದು ಭಾವಿಸುವುದು. ಇಂತಹದ್ದೇ ಒಂದು ಘಟನೆಯಿಂದಲ್ಲವೇ ಆ ಹೆಣ್ಣು ಮಗು ಆತ್ಮಹತ್ಯೆಗೆ ಪ್ರಯತ್ನಿಸಿದ್ದು?
ಇಂದು ಮಕ್ಕಳಿಗೆ ಮಾತಾಪಿತರಿಂದ ಬೇಕಾ ದದ್ದು ಪ್ರೀತಿ ಹಾಗೂ ಸುರಕ್ಷಿತತೆ. ನಾವು ಮಕ್ಕ ಳಿಗೆ ಅವೆರಡನ್ನು ಕೊಡುತ್ತಿದ್ದೇವೆಯೇ? ನಿಜವಾಗಿ ತಮ್ಮ ಮಕ್ಕಳನ್ನು ಪ್ರೀತಿಸದವರು ಈ ಲೋಕದಲ್ಲಿ ಯಾರೂ ಇರಲಿಕ್ಕಿಲ್ಲ. ಅಲ್ಲಾಹನು ಅದನ್ನು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲೂ ಇಟ್ಟಿ ದ್ದಾನೆ. ಆದರೆ ನಾವು ನಮ್ಮ ಮಕ್ಕಳನ್ನು ಪ್ರೀತಿ ಸುತ್ತಿದ್ದೇವೆಂದು ಮಕ್ಕಳು ಭಾವಿಸುತ್ತಿದ್ದಾರೆಯೇ? ನಾವು ನಮ್ಮ ಮಕ್ಕಳ ರಕ್ಷಕರೆಂದು ಮಕ್ಕಳು ಭಾವಿಸುತ್ತಿದ್ದಾರೆಯೇ? ನಮ್ಮ ಮನೆಯಲ್ಲಿ ಮಕ್ಕಳು ಸುರಕ್ಷಿತರೆಂದು ನಾವು ಭಾವಿಸುತ್ತೇವೆ. ಆದರೆ ಮಕ್ಕಳು ಹಾಗೆ ಭಾವಿಸುತ್ತಿದ್ದಾರೆಯೇ? ನಮ್ಮ ಮಕ್ಕಳು ಮನೆಗಿಂತ ಹೊರಗೆ ಇರಲು ಹೆಚ್ಚು ಇಷ್ಟಪಡುತ್ತಿರುವುದಾದರೆ ನಾವು ಆ ಬಗ್ಗೆ ಜಾಗೃತರಾಗಬೇಕು. ಮನೆಯಲ್ಲಿ ಕೇವಲ ತಂದೆ-ತಾಯಿ ಇರುವುದಾದರೂ ಮನೆಯಲ್ಲಿ ಮಕ್ಕಳಿಗೆ ಯಾಕೆ ಸುರಕ್ಷಿತತೆಯ ಭಾವನೆ ಇರುವುದಿಲ್ಲ? ಅವರಿಗೆ ಮನೆಯಲ್ಲಿ ಕಟ್ಟಿಟ್ಟ ಹಾಗೆ ಯಾಕೆ ಭಾಸವಾಗುತ್ತದೆ? ಹಾಗೆಯೇ ನಾವು ಮಕ್ಕಳನ್ನು ಪ್ರೀತಿಸುವುದು ಮಕ್ಕಳಿಗೂ ಭಾಸವಾಗಬೇಕು. ನಮ್ಮ ಪ್ರೀತಿಯನ್ನು ಪ್ರಕಟಪಡಿಸಬೇಕು. ಕೆಲವು ಮಾತಾಪಿತರು ತಮ್ಮ ಪ್ರೀತಿಯನ್ನು ಎಂದೂ ಪ್ರಕಟಪಡಿಸುವುದಿಲ್ಲ. ಪ್ರವಾದಿ(ಸ) 10 ವಯಸ್ಸಿನ ತನ್ನ ಮೊಮ್ಮಗ ಹಸನ್‍ರನ್ನು(ರ) ಚುಂಬಿಸುವುದನ್ನು ನೋಡಿದ ಗ್ರಾಮೀಣನೊಬ್ಬ ಆಶ್ಚರ್ಯಚಕಿತನಾಗಿ "ಇಷ್ಟು ದೊಡ್ಡ ಮಗುವನ್ನು ಚುಂಬಿಸುವುದೇ?" ಎಂದು ಪ್ರವಾದಿಯವರೊಂದಿಗೆ(ಸ) ಕೇಳಿದ. "ನಾನಂತೂ ನನ್ನ ಮಕ್ಕಳನ್ನು ಎಂದೂ ಚುಂಬಿಸು ವುದಿಲ್ಲ" ಎಂದಾಗ ಪ್ರವಾದಿ(ಸ) ನೀಡಿದ ಉತ್ತರ ತಮ್ಮ ಮಕ್ಕಳ ಮೇಲಿನ ಪ್ರೀತಿಯನ್ನು ಪ್ರಕಟಪಡಿಸದ
ವರಿಗೆ ಒಂದು ಉತ್ತರವಾಗಿದೆ. ಪ್ರವಾದಿ(ಸ) ಹೇಳಿ ದರು, "ನಿನ್ನ ಹೃದಯದಿಂದ ಅಲ್ಲಾಹನು ಕರುಣೆ ಯನ್ನು ತೆಗೆದಿದ್ದರೆ ಅದಕ್ಕೆ ನಾನೇನು ಮಾಡಲಿ?"
ಹಾಗಾದರೆ ಅಲ್ಲಾಹನು ಕರುಣೆಯನ್ನು ನಮ್ಮ ಮನಸ್ಸಿನಿಂದ ತೆಗೆಯದಿದ್ದರೆ ನಾವು ನಮ್ಮ ಮಕ್ಕಳನ್ನು ಮುದ್ದಿಸಬೇಕು. ಎರಡು ಮೂರು ವರ್ಷದ ವರೆಗೆ ಎಲ್ಲರೂ ತಮ್ಮ ಮಕ್ಕಳನ್ನು ಚುಂಬಿಸುತ್ತಾರೆ. ಮಕ್ಕಳೂ ಆಗ ಮುದ್ದು ಮುದ್ದಾಗಿರುತ್ತವೆ. ಆದರೆ ಏಳೆಂಟು ವರ್ಷವಾದ ಕೂಡಲೇ ಚುಂಬಿಸುವ ಅಗತ್ಯವಿಲ್ಲವೆಂದು ಹೆಚ್ಚಿನ ವರ ಭಾವನೆ. ಮಕ್ಕಳ ಮನಸ್ಸು ಆಗಲೂ ಕೋಮಲವಾಗಿರುತ್ತದೆಂದು ಹೆಚ್ಚಿನವರು ಮರೆಯು ತ್ತಾರೆ. ನಮ್ಮಲ್ಲಿ ಮಕ್ಕಳು ಸ್ವಲ್ಪ ದೊಡ್ಡವರಾದಾಗ ಅವರ ಬಗ್ಗೆ ಹೆಚ್ಚು ಪ್ರೀತಿಯ ಗಮನವಿರುವುದಿಲ್ಲ. ಅದರ ಬಗ್ಗೆ ಗಮನಹರಿಸುವುದು ಅದು ತುಂಟಾ ಟಿಕೆ ನಡೆಸಿದಾಗ ಮಾತ್ರ. ಹಾಗಾಗಿ ಹೆಚ್ಚಿನ ಸಮ ಯದಲ್ಲಿ ಮಕ್ಕಳು ಮಾತಾಪಿತರ ಗಮನಹರಿಸಲೂ ತುಂಟಾಟಿಕೆ ನಡೆಸುತ್ತದೆ. ನಾವು ಒಂದು ವೇಳೆ ಮಕ್ಕಳೊಂದಿಗೆ ಪ್ರೀತಿ ತೋರಿಸದಿದ್ದರೆ ನಮಗರಿ ವಿಲ್ಲದೆಯೇ ಕರುಣೆಯು ನಮ್ಮೊಳಗಿನಿಂದ ಕಿತ್ತೆಸೆ ಯಲ್ಪಡುವುದು. ಕುರ್‍ಆನಿನಲ್ಲಿ ಅಲ್ಲಾಹನು ಮಾತಾ ಪಿತರಿಗಾಗಿ ಮಕ್ಕಳು ಮಾಡಬೇಕಾದ ಒಂದು ಪ್ರಮುಖ ಪ್ರಾರ್ಥನೆಯನ್ನು ಕಲಿಸುತ್ತದೆ. "ರಬ್ಬಿರ್ ಹಮ್‍ಹುಮಾ ಕಮಾ ರಬ್ಬಯಾನಿ ಸಗೀರ." (ಓ ಅಲ್ಲಾಹ್, ನನ್ನ ಮಾತಾಪಿತರ ಮೇಲೆ ಕರುಣೆ ತೋರು, ಹೇಗೆ ನಾನು ಚಿಕ್ಕದಿರುವಾಗ ನನ್ನ ಮೇಲೆ ಕರುಣೆ ತೋರಿದರೋ ಹಾಗೆ ನಾವು ಒಂದು ವೇಳೆ ನಮ್ಮ ಮಕ್ಕಳ ಬಾಲ್ಯದಲ್ಲಿ ಅವರ ಮೇಲೆ ಕರುಣೆ ತೋರಿರದಿದ್ದರೆ ಈ ಪ್ರಾರ್ಥನೆ ನಮ್ಮ ಮಕ್ಕಳು ನಮಗಾಗಿ ಪ್ರಾರ್ಥಿಸಿದರೂ ಅಲ್ಲಾಹನ ಬಳಿ ಅದು ಸ್ವೀಕೃತವಾಗಬಹುದೇ? ನಾವು ಮಕ್ಕಳ ಮೇಲಿನ ಪ್ರೀತಿಯನ್ನು ಮಕ್ಕಳಿಗೆ ಪ್ರಕಟಪಡಿಸಿದರೆ, ಅದರ ನಂತರ ನಾವು ಮಕ್ಕ ಳಿಗೆ ಹೊಡೆದರೂ, ಅದು ನನ್ನ ಮೇಲಿನ ಪ್ರೀತಿ ಯಿಂದ ನನ್ನನ್ನು ಸುಧಾರಿಸಲು ಹೊಡೆದದ್ದು ಎಂದು ಮಕ್ಕಳಿಗೆ ಖಂಡಿತ ಭಾಸವಾಗುವುದು. ಹಾಗಾಗಿ ಮಕ್ಕಳ ಮೇಲಿನ ಪ್ರೀತಿಯನ್ನು ಮನಸ್ಸಿ ನಲ್ಲಿಡದೆ ನಮ್ಮ ಕ್ರಿಯೆಗಳಿಂದ ಅದನ್ನು ಪ್ರಕಟ ಪಡಿಸುತ್ತಾ ಇರಬೇಕು. ಕೆಲವು ತಂದೆಯಂದಿರು "ನಾನು ನಮ್ಮ ಮಗು ಕೇಳಿದ್ದನ್ನೆಲ್ಲ ಕೊಡುತ್ತೇನೆ"
ಎಂದು ಹೇಳುತ್ತಾರೆ. ಎಲ್ಲವೂ ಕೊಡುತ್ತೀರ ಆದರೆ ಬೇಕಾದ ಪ್ರೀತಿ ಕೊಡದಿದ್ದರೆ ಮತ್ತೆ ಆ ಮಗು ಮುಂದೆ ದಾರಿತಪ್ಪುವ ಹೆಚ್ಚು ಸಾಧ್ಯತೆ ಇದೆ.
ಹಾಗೆಯೇ ಮಕ್ಕಳ ಮೇಲೆ ವಿಶ್ವಾಸ ತೋರ ಬೇಕು. ಅವರ ಮೇಲೆ ವಿಶ್ವಾಸದ ಬಂಧವನ್ನು ಮೂಡಿಸಬೇಕು. ಮಕ್ಕಳ ಮನಸ್ಸಿನಲ್ಲಿ ನನ್ನ ಮಾತಾಪಿತರು ನನ್ನ ಮೇಲೆ ವಿಶ್ವಾಸವಿಡುತ್ತಾರೆ ಎಂಬ ಭಾವನೆ ಮೂಡಿಸಬೇಕು. ಉದಾಹರಣೆಗೆ 8ನೇ ಅಥವಾ 9ನೇ ತರಗತಿಯಲ್ಲಿ ಕಲಿಯುತ್ತಿರುವ ಒಂದು ಹೆಣ್ಣು ಮಗುವಿಗೆ ಒಬ್ಬ ಶಾಲೆಯಲ್ಲಿ ಅಥವಾ ರಸ್ತೆಯಲ್ಲಿ ನಡೆಯುತ್ತಿರುವಾಗ ಒಂದು ಪತ್ರ ಕೊಡುತ್ತಾನೆ. ಮನಸ್ಸು ಬೆಳೆಯದ ಕಾರಣ ಆಕಸ್ಮಿಕವಾಗಿ ಸಿಗುವ ಪತ್ರವನ್ನು ತೆಗೆಯುತ್ತದೆ. ಆತ ಹೇಳುತ್ತಾನೆ, ಒಂದು ಪತ್ರ ಓದಿ ನೋಡು. ಆ ಹೆಣ್ಣು ಮಗು, ಅಯ್ಯೋ ನನಗೆ ಬೇಡ ಎಂದು ಹೇಳುತ್ತದೆ. ಆದರೆ ಆತ ಅದನ್ನು ಹಿಂತೆಗೆಯುವುದಿಲ್ಲ. ಹೆದರಿದ ಆ ಹೆಣ್ಣು ಮಗು ಅದನ್ನು ಬಿಸಾಡಲೂ ಹೆದರಿಕೆ. ಏಕೆಂದರೆ ಬಹುಶಃ ಅದರಲ್ಲಿ ನನ್ನ ಹೆಸರಿರಬಹುದು, ಹಾಗಾಗಿ ಯಾರಾದರೂ ತೆಗೆದು ಓದಿದರೆ? ಹೆದರಿದ ಆ ಹೆಣ್ಣು ಮಗು ಏನು ಮಾಡಬೇಕೆಂದು ತೋಚದೆ ಅದನ್ನು ಬ್ಯಾಗ್‍ನಲ್ಲಿ ಪುಸ್ತಕದೆಡೆಯಲ್ಲಿ ಅಡಗಿಸಿ ಇಡುತ್ತದೆ. ನಂತರ ಆ ಮಗು ಏನು ಮಾಡುತ್ತದೆ? ಅದು ನೇರವಾಗಿ ಬಂದು ತನ್ನ ತಾಯಿಯೊಂದಿಗೆ ನಡೆದ ಘಟನೆಯನ್ನು ಹೇಳು ತ್ತದೆ. ಆದರೆ ಆ ವಿಶ್ವಾಸವಿಲ್ಲದ ತಾಯಿ, "ಅದು ಯಾಕೆ ನಿನಗೆ ಮಾತ್ರ ಪತ್ರ ನೀಡಿದ್ದು? ನಿನ್ನ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿದ್ದಾರೆ. ಅವರಿಗಾರಿಗೂ ಕೊಡದೆ ನಿನಗೆ ಮಾತ್ರ ಯಾಕೆ ಪತ್ರ ಕೊಟ್ಟದ್ದು? ನೀನು ಹೆಚ್ಚು ಸಲಿಗೆಯಿಂದ ವರ್ತಿಸಿದ್ದಾಗಿರಬಹುದು. ಇಲ್ಲವೇ ನೀನು ಕೂಡಾ ಒಂದು ಪತ್ರ ನಿನ್ನೆ ಕೊಟ್ಟಿರಬಹುದು ಅಥವಾ ಬೇರೆಯವರಿಗೂ ಪತ್ರ ಕೊಟ್ಟಿರಬಹುದು. ಅವ ರಾರೂ ತೆಗೆದಿರಲಿಕ್ಕಿಲ್ಲ. ನೀನು ಮಾತ್ರ ತೆಗೆದಿರ ಬಹುದು." ಆ ಮಗು ಆಲೋಚಿಸುತ್ತದೆ, ಇದ ಕ್ಕಿಂತಲೂ ಆ ಪತ್ರ ಕೊಟ್ಟವನೇ ಲೇಸು. ಏಕೆಂದರೆ ಆ ಪತ್ರ ಕೊಡುವವನ ಸ್ನೇಹದಲ್ಲಿ ಎಷ್ಟು ಕಾಪಟ್ಯತೆ ಇದ್ದರೂ ಅದನ್ನು ಆ ಮಗು ಅರ್ಥೈಸುವುದಿಲ್ಲ. ಹಾಗೆಯೇ ತಾಯಿ ಕೇಳುವ ಪ್ರಶ್ನೆಗಳಲ್ಲಿ ಎಷ್ಟು ಆತ್ಮೀಯತೆ ಇದ್ದರೂ ಅದು ಆ ಮಗಳಿಗೆ ಅರ್ಥವಾಗುವುದಿಲ್ಲ. ನೀನು ಇನ್ನು ಶಾಲೆಗೆ ಹೋಗಬೇಡ ಎಂದೆಲ್ಲ ಬೆದರಿಸಲು ಆ ಹೆಣ್ಣು ಮಗು ಮಾಡಿದ ತಪ್ಪೇನು? ಒಬ್ಬ ಅನ್ಯ ಪುರುಷ ಮಾಡಿದ ತಪ್ಪನ್ನು ಬಂದು ತನ್ನ ಪ್ರೀತಿಯ ತಾಯಿಯೊಂದಿಗೆ ಹೇಳಿದ್ದೇ ಅವಳು ಮಾಡಿದ ದೊಡ್ಡ ತಪ್ಪÅ. ಮರುದಿನ ಅದೇ ವ್ಯಕ್ತಿ ನಿನ್ನೆ ಕೊಟ್ಟ ಪತ್ರಕ್ಕೆ ಉತ್ತರ ಕೇಳಿದರೆ ಅಥವಾ ಇನ್ನೊಂದು ಪತ್ರ ಕೊಟ್ಟರೆ ಆ ಮಗಳು ಅದನ್ನು ತನ್ನ ತಾಯಿಯೊಂದಿಗೆ ಹೇಳುವಳೇ? ಖಂಡಿತ ಇಲ್ಲ. ಮಕ್ಕಳಿಗೆ ಕೊಡಬೇಕಾದ ಪ್ರೀತಿ ಹಾಗೂ ವಿಶ್ವಾಸವನ್ನು ಮಾತಾಪಿತರಾದ ನಾವು ಕೊಡದಿದ್ದರೆ ಅದನ್ನು ಕೊಡಲು ಕಾದು ನಿಂತ ಏಜೆಂಟ್‍ಗಳು ಹೊರಗಿದ್ದಾರೆ. ಅಲ್ಲಿ ಆತ್ಮೀಯತೆ, ಪ್ರೀತಿ ಕೇವಲ ತೋರಿಕೆಗಾಗಿ ಇದ್ದು, ಆ ಕಣ್ಣುಗಳು ಬೇರೆಯದನ್ನು ನೋಡುವುದನ್ನು ನಮ್ಮ ಮಕ್ಕಳೂ ಅರ್ಥೈಸುವು ದಿಲ್ಲ. ಇಂದು ಹೆಣ್ಣು ಮಕ್ಕಳು ಇತರ ಪುರುಷ ರೊಂದಿಗೆ ಅದು ಮುಸ್ಲಿಮರಿರಲಿ ಅಥವಾ ಮುಸ್ಲಿಮೇತರರಿರಲಿ ಓಡಿ ಹೋಗುವ ಪ್ರಮುಖ ಕಾರಣ ಇದುವೇ ಆಗಿದೆ.
ಇಲ್ಲಿ ಆಲೋಚಿಸಬೇಕಾದದ್ದು ಅಲ್ಲಾಹನ ಸೃಷ್ಟಿಯಲ್ಲಿ ಪ್ರೀತಿಯ ಅತ್ಯುನ್ನತ ಮಟ್ಟದಲ್ಲಿರುವ ಪ್ರೀತಿಯ ಸಾಕಾರ ಮೂರ್ತಿಯಾದ ತಾಯಿಯ ಪ್ರೀತಿಯನ್ನು ಒಂದು ಮಗು ಬಿಟ್ಟು ಹೋಗ ಬೇಕಾದರೆ ಅದರಲ್ಲಾಗಿರುವ ಲೋಪಗಳೇನು? ಇನ್ನಿರುವ ಪ್ರಶ್ನೆ ಇಂತಹ ಸಂದರ್ಭಗಳಲ್ಲಿ ಮಾತಾಪಿತರು ಏನು ಮಾಡಬೇಕು? ಮಗಳು ಒಂದು ಪತ್ರ ನೀಡಿದೊಡನೆ ತಾಯಿಯಾದವಳು, "ಅಯ್ಯೋ ಮಗಳೇ ಇನ್ನು ಯಾರಾದರೂ ಹಾಗೇನಾದರೂ ಕೊಟ್ಟರೆ ನೀನು ತೆಗೆಯಬೇಡ ಹಾಗೂ ಆ ಭಾಗಕ್ಕೇ ನೋಡಬೇಡ" ಎಂದು ನಯನಾಗಿ ಹೇಳಬೇಕು. ಹಾಗೆಯೇ ಮಗುವಿನ ತಂದೆ ಬಂದೊಡನೆ ಬಹಳ ಜಾಗ್ರತೆಯಿಂದ,
"ಒಂದು ವಿಷಯ ಹೇಳುತ್ತೇನೆ, ಗಾಬರಿಗೊಳ್ಳ ಬೇಡಿ. ನಮ್ಮ ಮಗಳಿಗೆ ಯಾರೋ ಪತ್ರ ಕೊಟ್ಟಿದ್ದಾರೆ. ಆದರೆ ಹೆದರಬೇಕಾಗಿಲ್ಲ. ಅವಳು ನಮ್ಮೊಂದಿಗೆ ಬಂದು ಎಲ್ಲವನ್ನೂ ತಿಳಿಸಿದ್ದಾಳೆ." ಹಾಗೆಯೇ ಮಗಳು ಮರುದಿನ ಶಾಲೆಗೆ ಹೋಗು ವಾಗ ಅವಳಿಗೆ ತಿಳಿಯದೆ ಅಥವಾ ತಿಳಿದೋ ಅವಳ ಹಿಂದಿನಿಂದ ಹೋಗಿ ಜಾಗ್ರತೆ ವಹಿಸುವುದೇ ಬುದ್ಧಿವಂತಿಕೆ ಹಾಗೂ ಬಹಳಷ್ಟು ಅಪಾಯಗಳನ್ನು ಆಗದಂತೆ ತಡೆಯಬಹುದು.
ಮಕ್ಕಳ ಮೇಲೆ ವಿಶ್ವಾಸ ತಾಳದೆ ಇರುವ ಇನ್ನೊಂದು ಉದಾಹರಣೆ, ಒಂದು ಮಗುವಿಗೆ ತಾಯಿ ಹಣ ಕೊಟ್ಟು ಸಾಮಾನು ತರಲು ಹತ್ತಿ ರದ ಅಂಗಡಿಗೆ ಕಳುಹಿಸುತ್ತಾರೆ. ಹಿಂದಿರುಗಿ ಬರುವಾಗ ಒಂದು ರೂಪಾಯಿ ಕಡಿಮೆಯಿರುತ್ತದೆ. ಒಂದೋ ಅಂಗಡಿಯವನು ಕೊಡಲು ಮರೆತಿರ ಬಹುದು ಅಥವಾ ಮಗುವಿನ ಕೈಯಿಂದ ಎಲ್ಲೋ ಬಿದ್ದಿರಬಹುದು. ಮಗು ಹಣ ಹಿಂತಿರುಗಿ ಕೊಡುವಾಗ ಒಂದು ರೂಪಾಯಿ ಕಡಿಮೆ ಇದ್ದದ್ದು ಕಂಡು ತಾಯಿ ಕೇಳುವ ಪ್ರಶ್ನೆ. "ನೀನು ಮಿಠಾಯಿ ತಿಂದಿರಬಹುದು." ಆಗ ಮಗುವಿನ ತಲೆಯಲ್ಲಿ ಬರುವ ವಿಚಾರ ಹ್ಞಾಂ, ಮಿಠಾಯಿ ತಿನ್ನಬಹುದಿತ್ತು! ಇಂದು ಮಿಠಾಯಿ ತಿನ್ನದಿದ್ದರೂ ಅದು ತಿಂದ ಆರೋಪವೂ ಬಿತ್ತು. ಪೆಟ್ಟೂ ಸಿಕ್ಕಿತು! ಮಿಠಾಯಿ ತಿನ್ನದೆ ಪೆಟ್ಟು ಸಿಗುವುದಕ್ಕಿಂತ ಮಿಠಾಯಿ ತಿಂದು ಪೆಟ್ಟು ತಿನ್ನುವುದು ಲೇಸಲ್ಲವೇ? ನಂತರ ಆ ಮಗುವಿನ ಕೈಯಿಂದ ನಿರಂತರ ಒಂದು ರೂಪಾಯಿ ಕಾಣೆಯಾಗ ತೊಡಗುತ್ತದೆ. ಅದಕ್ಕೆ ಆ ಅವಕಾಶ ಅಥವಾ ಉಪಾಯ ಕೊಟ್ಟದ್ದು ಯಾರು? ಸ್ವತಃ ಮಾತಾಪಿತರಲ್ಲವೇ?
ಕೆಲವು ಮಾತಾಪಿತರ ದೂರು ನನ್ನ ಮಗು ಅಥವಾ ಮಗಳು ತುಂಬಾ ಸುಳ್ಳು ಹೇಳುತ್ತಾಳೆ. ಆದರೆ ಆ ಮಗು ತನ್ನ ಜೀವನದಲ್ಲಿ ಪ್ರಥಮವಾಗಿ ಸುಳ್ಳು ಹೇಳಿದ ಘಟನೆಯನ್ನು ನೆನಪಿಸಿದರೆ ಅದಕ್ಕೆ ಉತ್ತರ ಸಿಗಬಹುದು. ಒಂದು ಮಗು ತನ್ನ ಜೀವನದಲ್ಲಿ ಪ್ರಥಮವಾಗಿ ಸುಳ್ಳು ಹೇಳಿ ಸಿಕ್ಕಿ ಬಿದ್ದಾಗ ತಂದೆ ಅಥವಾ ತಾಯಿ ಹೇಳುತ್ತಾರೆ, "ಸತ್ಯ ಹೇಳು, ಏನೂ ಮಾಡುವುದಿಲ್ಲ." ನಿಜವೆಂದು ತಿಳಿದ ಆ ಮಗು ಸತ್ಯ ಹೇಳಿದೊಡನೆ ಚಟ ಚಟನೆ ಎರಡು ಪೆಟ್ಟು ಸಿಗುತ್ತದೆ. ಆ ನೋವನ್ನು ಮಗು ಎಂದೂ ಮರೆಯುವುದಿಲ್ಲ. ಸತ್ಯ ಹೇಳಿದರೆ ಖಂಡಿತವಾಗಿಯೂ ಪೆಟ್ಟು ತಿನ್ನುವೆನೆಂದು ಖಾತ್ರಿ ಯಾಗುವ ಆ ಮಗು ಸುಳ್ಳಿನ ಮಾತಿಗೆ ಹೋಗಿ ನಂತರ ಅದೇ ಅಭ್ಯಾಸವಾಗುತ್ತದೆ. ಇದಕ್ಕೆ ಅವ ಕಾಶ ಮಾಡಿಕೊಟ್ಟದ್ದು ಯಾರು? ಮಾತಾಪಿತರಾದ ನಾವಲ್ಲವೇ?
ಇಂದಿನ ಮಾತಾಪಿತರಿಗೆ ಮಕ್ಕಳೊಂದಿಗೆ ಕಳೆಯಲು ಸಮಯವಿರುವುದಿಲ್ಲ. ಅವರಿಗೆ ಕಂಪ್ಯೂ ಟರ್, ಮೊಬೈಲ್ ಅಥವಾ ಅಟಿಕೆಗಳನ್ನು ಕೊಟ್ಟು ಅವರಷ್ಟಕ್ಕೇ ಬಿಡಲಾಗುತ್ತದೆ. ಇದು ಮಾತಾಪಿತರು ಮಾಡುವ ಅತಿದೊಡ್ಡ ತಪ್ಪÅ. ಎಂದಿಗೂ ಮಾತೃತ್ವ ವನ್ನು ಅಥವಾ ಪಿತೃತ್ವವನ್ನು ಇತರ ವಸ್ತು ಗಳೊಂದಿಗೆ ಬದಲಾಯಿಸಬೇಡಿ. ಹೆಚ್ಚಿನ ಮಾತಾ ಪಿತರು ಇಂದು ದೂರುವುದೇನೆಂದರೆ, ನಮ್ಮ ಮಕ್ಕಳು ದೊಡ್ಡವರಾದ ಮೇಲೆ ನಮ್ಮೊಂದಿಗೆ ಸರಿಯಾಗಿ ಮಾತಾಡುವುದಿಲ್ಲ ಅಥವಾ ನಮ್ಮೊಂದಿಗೆ ಸಮಯ ಕಳೆಯುವುದಿಲ್ಲ ಎಂದು. ಇದಕ್ಕೆ ಕಾರಣ ಯಾರು? ಮಕ್ಕಳೊಂದಿಗೆ ಮಾತಾಡಬೇಕಾದ, ಸಮಯ ಕಳೆಯಬೇಕಾದ ಸಮಯದಲ್ಲಿ ನಾವು ಅದನ್ನು ಮಾಡಲಿಲ್ಲ. ಈಗ ದೂರಿ ಏನು ಪ್ರಯೋಜನ? ಇಂದು ಒಬ್ಬ ತಂದೆ ಕೆಲಸದಿಂದ ಮನೆಗೆ ಬಂದಾಗ ಮಗು ಆತನೊಂದಿಗೆ ಆಡಲು ಬಂದರೆ ಒಂದೋ ಜೋರು ಮಾಡಿ ದೂರ ಕಳುಹಿಸುತ್ತಾನೆ ಅಥವಾ ಮಗುವಿನ ತಾಯಿಯನ್ನು ಕರೆದು ಮಗುವನ್ನು ಎತ್ತಿಕೊಂಡು ಹೋಗಲು ಆ ತಂದೆ ಹೇಳುತ್ತಾನೆ. ಮಕ್ಕಳು ಸಣ್ಣವರಿರುವಾಗ ನಮ್ಮ ಹಿಂದೆ ಹಿಂದೆ ಬರುತ್ತಾರೆ. ಆದರೆ ಅವರು ದೊಡ್ಡವರಾದಾಗ ನಾವು ಅವರ ಹಿಂದೆ ಹೋಗ ಬೇಕಾಗುತ್ತದೆ. ನಾವು ಅವರು ಸಣ್ಣದಿರುವಾಗ ಅವರಿಗೆ ಸಮಯ ಕೊಡದಿದ್ದರೆ, ದೊಡ್ಡವರಾದ ಮೇಲೆÀ ನಮಗೆ ಕೊಡಲು ಅವರ ಬಳಿಯೂ ಸಮಯವಿರದು. ಹಾಗಾಗಿ ನಾವು ಮಕ್ಕಳಿಗೆ ಆದಷ್ಟು ಹೆಚ್ಚು ಸಮಯ ಕೊಡಲು ಪ್ರಯತ್ನಿಸಬೇಕು. ಅವ ರೊಂದಿಗೆ ಆಟವಾಡಬೇಕು. ಅವರ ಭಾವನೆಗಳಿಗೆ ಸ್ಪಂದಿಸಬೇಕು. ಆಗ ಅವರೊಂದಿಗೆ ನಮ್ಮ ಸಂಬಂಧ ಗಾಢವಾಗುವುದು.
ಒಬ್ಬರು ಒಂದು ಘಟನೆ ಹೇಳುತ್ತಾರೆ, ಬಹಳ ಅವಶ್ಯವಿರುವ ಒಂದು ವಿಷಯದ ಬಗ್ಗೆ ಸ್ನೇಹಿತನೊಂದಿಗೆ ಮೊಬೈಲ್‍ನಲ್ಲಿ ಮಾತಾಡುತ್ತಿರು ವಾಗ ಮೂರು ವರ್ಷದ ಮಗು ಬಂದು ಆತನ ಬಟ್ಟೆ ಎಳೆಯುತ್ತಾ ಅಬ್ಬಾ ಅಬ್ಬಾ ಎಂದು ಕರೆ ಯಿತು. ಮಕ್ಕಳ ಮನೋವೃತ್ತಿಯ ಬಗ್ಗೆ ಕಲಿತಿರುವ ಆ ತಂದೆ ತಾನು ಮಾತಾಡುವುದನ್ನು ನಿಲ್ಲಿಸಿ ಮಗುವಿನೊಂದಿಗೆ ಏನೆಂದು ಕೇಳಿದರು. ಮಗು ಎರಡು ಸಲ ಜಿಗಿದು ನಗು ಬೀರಿತು. ಇಂತಹ ಘಟನೆ ನಮ್ಮೊಂದಿಗೆ ನಡೆದರೆ ನಮ್ಮ ಪ್ರತಿಕ್ರಿಯೆ ಏನಾಗಬಹುದು? ಇಷ್ಟು ಅವಶ್ಯಕವಾದ ಮಾತನ್ನಾ ಡುತ್ತಿರುವಾಗ ಮಗು ಬಂದು ಹೀಗೆ ಉಪದ್ರವಿಸು ವುದೇ? ಸಾಧಾರಣವಾಗಿ ಮಕ್ಕಳ ಪ್ರಕ್ರಿಯೆ ಮಾತಾಪಿತರ ಮೇಲೆ ಪ್ರಭಾವ ಬೀರುವುದಾಗಿದೆ. ಹೀಗಾಗಿ ತನ್ನ ಜೀವನದಲ್ಲಿ ಪ್ರಥಮವಾಗಿ ಏನು ಮಾಡಿದರೂ ಓಡಿ ಬಂದು ತಂದೆ ಅಥವಾ ತಾಯಿಗೆ ತೋರಿಸುತ್ತದೆ.
ಕೆಲವೊಮ್ಮೆ ಏನೋ ಒಂದು ಪುಸ್ತಕದಲ್ಲಿ ಗೀಚಿ ಬಂದು ತೋರಿಸುತ್ತದೆ. ನೋಡಿ ನಮಗೆ ನಗು ಬರಬಹುದು. ಆದರೆ ಆಗ ನಾವು ಮಾಡಬೇಕಾದ ಕೆಲಸ, "ವಾಹ್, ಬಹಳ ಸುಂದರವಾಗಿದೆ" ಎಂದು ಹೇಳಿ ಮಗುವನ್ನು ಪ್ರೆÇೀತ್ಸಾಹಿಸುವುದಾಗಿದೆ. ನಾವು ಎಷ್ಟು ನಿಬಿಢತೆಯಲ್ಲಿದ್ದರೂ ಒಂದು ನಿಮಿಷವನ್ನು ಆ ಸಮಯದಲ್ಲಿ ಮಗುವಿಗೆ ಖಂಡಿತ ಕೊಡಬೇಕು. ಹಾಗೆಯೇ ಮಗು ಮಾಡಿದ ಯಾವುದೇ ಕಾರ್ಯವನ್ನು ಅದು ನಮಗೆ ಎಷ್ಟು ತಾತ್ಸಾರವಾಗಿ ತೋರಿದರೂ ಅದನ್ನು ಪ್ರೆÇೀತ್ಸಾಹಿಸಬೇಕು.
ಕೆಲವು ಕಡೆ ಮಾತಾಪಿತರ ದೂರು ಏನೆಂದರೆ, ನಮ್ಮ ಮಕ್ಕಳು ಅಶ್ಲೀಲ ಸ್ವಭಾವದವರು, ಕ್ರೂರ ಸ್ವಭಾವದವರು, ಸಂಗೀತ ಪ್ರಿಯರು ಇತ್ಯಾದಿ. ಇದಕ್ಕೆ ಕಾರಣಗಳೇನು? ಹೆಚ್ಚಿನ ಮಹಿಳೆಯರ ಅಭಿಪ್ರಾಯ ಏನೆಂದರೆ, ಸಣ್ಣ ಮಕ್ಕಳಿಗೆ ಏನೂ ತಿಳಿಯುವುದಿಲ್ಲವೆಂದು. ಆದರೆ ಸಂಶೋಧನೆಯ ಪ್ರಕಾರ ಮಗು ಹೊಟ್ಟೆಯಲ್ಲಿರುವಾಗ ಆರು ತಿಂಗಳಿನಿಂದ ಎಲ್ಲವನ್ನೂ ಗ್ರಹಿಸುತ್ತದೆ. ತಾಯಿ ಆ ಸಮಯದಲ್ಲಿ ಹೆಚ್ಚಾಗಿ ಸಂಗೀತಗಳನ್ನು ಕೇಳುತ್ತಲಿದ್ದರೆ ಹೊರಗೆ ಬರುವ ಮಗು ಸಂಗೀತ ಟೀಚರ್ ಆಗಿ ಹೊರ ಬರುತ್ತದೆ. ಅಮೇರಿಕದಲ್ಲಿ ಒಂದು ಸಂಸ್ಥೆಯಿದೆ. ಅವರ ಪ್ರಕಾರ ನೀವು ಎರಡು ವರ್ಷದ ಮಗುವನ್ನು ನಮಗೆ ಕೊಡಿ, ಅದನ್ನು ನಿಮಗೆ ಹೇಗೆ ಬೇಕೋ ಹಾಗೆ ಮಾಡಿ ಕೊಡುವೆವು. ಅದನ್ನು ಸಂಗೀತ ಪ್ರಿಯರಾಗಿ ಮಾಡಬೇಕಾದರೆ ಒಂದು ಟಿ.ವಿಯ ಮುಂದೆ ಅದನ್ನು ಕುಳ್ಳಿರಿಸಿ ಹಾಡುಗಳ ವೀಡಿಯೋಗಳನ್ನು ಹಾಕಿ ತೋರಿಸಲಾಗುತ್ತದೆ. ಅದನ್ನು ಕ್ರೂರವಾಗಿ ಮಾಡಬೇಕಾದರೆ ಕೊಲ್ಲುವ, ಶೂಟ್ ಮಾಡುವ ಚಲನಚಿತ್ರಗಳನ್ನು ಹಾಕಿ ತೋರಿಸಲಾಗುತ್ತದೆ. ಹೀಗೆ ಏನು ಬೇಕೋ ಅದಕ್ಕನುಗುಣವಾದ ಚಲನಚಿತ್ರ ಗಳನ್ನು ಹಾಕಿ ತೋರಿಸಲಾಗುತ್ತದೆ. ಹೀಗಿರುವಾಗ ನಮ್ಮ ಮನೆಗಳಲ್ಲಿ, ಮಡಿಲಲ್ಲಿ ತನ್ನ ಚಿಕ್ಕ ಮಗು ವನ್ನು ಕೂರಿಸಿ ಧಾರಾವಾಹಿಗಳನ್ನು, ಚಲನಚಿತ್ರ ಗಳಲ್ಲಿ ಬರುವ ಅಶ್ಲೀಲತೆಗಳನ್ನು, ಹಾಡುಗಳನ್ನು ನೋಡುವಾಗ ಮಕ್ಕಳಿಗೆ ಏನೂ ತಿಳಿಯುವುದಿಲ್ಲ ವೆಂದು ಭಾವಿಸುವುದು ಎಷ್ಟು ಸರಿ? ನಂತರ ದೊಡ್ಡವರಾದ ಮೇಲೆ ನಮ್ಮ ಮಕ್ಕಳು ಹಾಗೆ ಹೀಗೆ ಎಂದು ದೂರುವಾಗ ಅದಕ್ಕೆ ಕಾರಣಕರ್ತರು ಯಾರು ಎಂದು ಆಲೋಚಿಸಬೇಡವೇ?
ಕೊನೆಯದಾಗಿ ಬಿತ್ತಿದಂತೆ ಬೆಳೆ ಎಂಬಂತೆ ಮಕ್ಕಳು ಅನುಕರಿಸುವುದು ತಮ್ಮ ಮಾತಾಪಿತರನ್ನು. ನಾವು ನಮ್ಮ ಪತ್ನಿಯರೊಂದಿಗೆ ಪ್ರೀತಿಯಿಂದ ವರ್ತಿಸುವುದಾದರೆ, ನಮ್ಮ ಗುಣಗಳು ಉತ್ತಮ ವಾದರೆ, ಮಕ್ಕಳು ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸುತ್ತಾರೆ. ಹಾಗಾಗಿ ಪತಿ-ಪತ್ನಿಯರು ಒಂದು ವೇಳೆ ಜಗಳವಾಡುವಾಗಲೂ ಮಕ್ಕಳು ಸುತ್ತಮುತ್ತ ಇದ್ದಾರೆಯೇ ಎಂದು ಗಮನಹರಿಸ ಬೇಕು. ಹೆಚ್ಚಿನ ಕಡೆ ಆ ಬಗ್ಗೆ ಗಮನ ಹರಿಸಲಾಗುವುದಿಲ್ಲ. ಇದರ ಪ್ರಭಾವ ಮಕ್ಕಳ ಮೇಲೆ ಖಂಡಿತವಾಗಿಯೂ ಬೀರುತ್ತದೆ. ಅಲ್ಲದೆ ಪತಿ-ಪತ್ನಿಯರು ಜಗಳವಾಡಿದಾಗ ತಮ್ಮ ಕೋಪವನ್ನು ಮಕ್ಕಳ ಮೇಲೆ ಹೊಡೆದೋ ಜರೆದೋ ತೀರಿಸುತ್ತಾರೆ ಹಾಗೂ ಇವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಬದಲಾಗಿ ಮನೆಯಲ್ಲಿ ಧಾರ್ಮಿಕವಾದ ವಾತಾವರಣವನ್ನು ಬೆಳೆಸಬೇಕು. ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಕುರ್‍ಆನ್ ಓದುವ ಪರಿಪಾಠ ಬೆಳೆಸಬೇಕು. ಸಹಾಬಿಗಳ ಪ್ರವಾದಿಗಳ ಘಟನೆಗಳನ್ನು ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಹೇಳುತ್ತಾ ಇರಬೇಕು. ಬೇಡುವವ ರಿಗೆ ಹಣವನ್ನು ಮಕ್ಕಳಿಂದಲೇ ಕೊಡಿಸಿ ದಾನದ ಸ್ವಭಾವವನ್ನು ಚಿಕ್ಕಂದಿನಲ್ಲಿಯೇ ಅವರ ಮನದಲ್ಲಿ ಮೂಡಿಸಬೇಕು. ಅವರಿಗೆ ನರಕದ ಶೈತಾನನ ಬಗ್ಗೆ ಹೇಳಿ ಹೆದರಿಸುವುದಕ್ಕಿಂತ ಸ್ವರ್ಗದ ಸೌಂದರ್ಯದ ಬಗ್ಗೆ ವಿವರಿಸಿ ಅದಕ್ಕೆ ಹೋಗಲು ಮಾಡಬೇಕಾದ ಕೆಲಸಗಳನ್ನು ಹೇಳ ಬೇಕು. ಧಾರ್ಮಿಕ ತರಗತಿಗಳಿಗೆ ಚಿಕ್ಕವರಿರು ವಾಗಲೇ ಕಳುಹಿಸಿ ಅವರಿಗೆ ಅದರ ಬಗ್ಗೆ ಪ್ರೆÇೀತ್ಸಾಹ ಬೆಳೆಸಬೇಕು ಹಾಗೂ ಸದಾ ಅಲ್ಲಾಹ ನಲ್ಲಿ ನಮ್ಮ ಮಕ್ಕಳು ನಮ್ಮ ಕಣ್ಮಣಿಯಾಗಲಿಕ್ಕಾಗಿ ಪ್ರಾರ್ಥಿಸುತ್ತಾ ಇರಬೇಕು. ಸೂರಃ ಫುರ್ಕಾನ್‍ನ ಕೊನೆಯಲ್ಲಿ ಅಲ್ಲಾಹನು ನಮಗೆ ಈ ಪ್ರಾರ್ಥನೆ ಯನ್ನು ಹೇಳಿದ್ದಾನೆ, "ರಬ್ಬನಾ ಹಬ್‍ಲನಾ ಮಿನ್ ಅಝ್ವಾಜಿನಾ ವಝುರ್ರಿಯಾತಿನಾ ಕುರ್ರತ್ ಅಅïಯುನ್, ವಜಅಲ್‍ನಾ ಲಿಲ್ ಮುತ್ತಕೀನ ಇಮಾಮ" (ನಮ್ಮ ಪ್ರಭೂ, ನಮ್ಮ ಪತ್ನಿಯ ರಿಂದಲೂ ನಮ್ಮ ಮಕ್ಕಳಿಂದಲೂ ನಮ್ಮ ಕಣ್ಮನ ಗಳನ್ನು ತಣಿಸು ಮತ್ತು ನಮ್ಮನ್ನು ಧರ್ಮ ನಿಷ್ಠರ ನಾಯಕರಾಗಿ ಮಾಡು).
ನಮ್ಮ ಮಕ್ಕಳು ಉತ್ತಮರಾದರೆ ಅದು ನಮ್ಮ ಈ ಲೋಕಕ್ಕೂ ಹಾಗೂ ನಮ್ಮ ಮರಣದ ನಂತರವೂ ಅವರು ನಮಗಾಗಿ ದುಆ ಮಾಡುವ ಮೂಲಕ ಪರಲೋಕಕ್ಕೂ ಸಹಾಯವಾಗುವುದು. ಇಲ್ಲದಿದ್ದರೆ ಅವರು ಈ ಲೋಕದಲ್ಲೂ ನಮಗೆ ಚಿಂತೆಗೆ ಕಾರಣವಾಗುವರು ಹಾಗೂ ನಮ್ಮ ಮರಣದ ನಂತರ ನಮಗಾಗಿ ದುಆ ಮಾಡಲೂ ಸಿದ್ಧವಾಗಲಾರರು.