ಸೋಮವಾರ, ಆಗಸ್ಟ್ 8, 2016

_ಚಾಯ್ ವಾಲಾ ಮಹಮ್ಮದ್ ಕೋಯಾ ಕೋಟ್ಯಾಧಿಪತಿಯಾದ ಕಥೆ._

*"ವಿಕೆಸಿ" ಚಪ್ಪಲಿಯ ಹಿಂದಿನ ರಹಸ್ಯ ನಿಮಗೊತ್ತೇ?*
*******************************

ಮಹಮ್ಮದ್ ಕೋಯಾ. ಕೇರಳದ ಕಲ್ಲಿಕೋಟೆ ನಿವಾಸಿ. ಏಳನೇ ತರಗತಿ ವಿಧ್ಯಾಭ್ಯಾಸ. ಒಂದು ಕಾಲದಲ್ಲಿ ಬೆಂಕಿಪೊಟ್ಟಣ ಕಂಪೆನಿಯಲ್ಲಿ ಕಾರ್ಮಿಕರಾಗಿ ಕಮ್ಯುನಿಸ್ಟ್ ಪಕ್ಷದ ಸಿದ್ದಾಂತದೊಂದಿಗೆ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ ಹಿರಿಯ ಜೀವಿ. ನಂತರ ತಮಿಳ್ನಾಡಿನ ಕನ್ಯಾಕುಮಾರಿಗೆ ತೆರಳಿ ಎಲೆಕ್ಟ್ರಿಸಿಟಿ ಬೋರ್ಡ್ ಕಾರ್ಮಿಕರಾದರು. ಅಲ್ಲಿ ಟೀಶಾಪ್ ನಡೆಸುತ್ತಾ ಚಾಯ್ ವಾಲಾ ಆದರು.

1967 ರಲ್ಲಿ ಪುನಃ ಕೇರಳಕ್ಕೆ ಹಿಂತಿರುಗಿದ ಮಹಮ್ಮದ್ ಕೋಯಾ ಸ್ವಂತದ್ದಾದ ಉದ್ಯಮಕ್ಕೆ ಸ್ಕೆಚ್ ಹಾಕಿದರು. ತನ್ನಿಬ್ಬರು ಸ್ನೇಹಿತರನ್ನು ಪಾಲುದಾರಿಕೆಯಲ್ಲಿ ಸೇರಿಸಿಕೊಂಡು ಬೆಂಕಿಪೊಟ್ಟಣದ ಮೆಟೀರಿಯಲ್ಸ್ ಸಪ್ಲೈ ವ್ಯವಹಾರಕ್ಕೆ ಕೈ ಹಾಕಿದರು. ವಿ. ಮಹಮ್ಮದ್ ಕೋಯಾ, ಕೆ. ಸೈತಲವಿ ಹಾಗೂ ಸಿ. ಸೈದಲಿಕುಟ್ಟಿ ಸೇರಿಕೊಂಡು ಅವರ ಹೆಸರಿನ ಮುಂದಿರುವ ಇನಿಷ್ಯಲ್ ನ "ವಿಕೆಸಿ" ನಾಮಕರಣದೊಂದಿಗೆ ಉದ್ಯಮ ಪ್ರಾರಂಭಿಸಿದರು. ಆ ಉದ್ಯಮವೇ ಇಂದು ಅಂತರಾಷ್ಟ್ರ ಖ್ಯಾತಿಯ ವಿಕೆಸಿ ಬ್ರಾಂಡ್ ಆಗಿ ವಾರ್ಷಿಕ 1,500 ಕೋಟಿ ರೂ. ವಹಿವಾಟು ಮಾಡುತ್ತಿದೆ. ಇದರ ಹಿಂದಿನ ಪ್ರೇರಕ ಶಕ್ತಿಯೇ ಕಮ್ಯುನಿಸ್ಟ್ ಪಕ್ಷದ (ಸಿಪಿಐಎಂ) ನಾಯಕ ಕಂ ಕಲ್ಲಿಕೋಟೆ ಮುನ್ಸಿಪಾಲಿಟಿಯ ನೂತನ ಮೇಯರ್ ಮಹಮ್ಮದ್ ಕೋಯಾ!

1980 ರ ದಶಕದಲ್ಲಿ ತಾವು ಸ್ಥಾಪಿಸಿದ ಬೆಂಕಿಪೊಟ್ಟಣ ಮೆಟೀರಿಯಲ್ ಉದ್ಯಮ ಕ್ಷೀಣಿಸಿದಾಗ ಧೃತಿಗೆಡದ ಕೋಯಾ ತನ್ನ ವ್ಯವಹಾರದ ಸ್ಥಳದಲ್ಲಿ ಹವಾಯಿ ಶೀಟ್ಸ್ ತಯಾರಿಸಲು ತೀರ್ಮಾನಿಸಿದರು. ನಂತರದ ದಿನಗಳಲ್ಲಿ ಕಲ್ಲಿಕೋಟೆಯ ನಲ್ಲಂ ಎಂಬ ಬೆಂಕಿಪೊಟ್ಟಣ ಮೆಟೀರಿಯಲ್ಸ್ ತಯಾರಿಸುತ್ತಿದ್ದ ಅದೇ ಸ್ಥಳದಲ್ಲಿ ಇಬ್ಬರು ಸ್ನೇಹಿತರ ಜೊತೆಗೂಡಿ ವಿಕೆಸಿ ಫೂಟ್ ವೇರ್ ಕಂಪೆನಿಗೆ ಅಡಿಪಾಯ ಹಾಕುತ್ತಾರೆ. ಪ್ರಾರಂಭದಲ್ಲಿ ಬ್ಯಾಂಕ್ ಲೋನ್ ಮತ್ತು ಚಿಟ್ ಫಂಡ್ ಹಣ ಪಡೆದು 30 ಲಕ್ಷದ ಬಂಡವಾಳದೊಂದಿಗೆ 20 ಸಿಬ್ಬಂದಿಗಳನ್ನು ಇಟ್ಟುಕೊಂಡು ವಿಕೆಸಿ ಫೂಟ್ ವೇರ್ ಕಂಪೆನಿಯ ಜರ್ನಿ ಪ್ರಾರಂಭ ಆಗುತ್ತದೆ. 1985 ರಲ್ಲಿ ಸ್ವಂತದ್ದಾದ ಹವಾಯಿ ಚಪ್ಪಲಿ ವಿಕೆಸಿ ಬ್ರಾಂಡ್ ನೊಂದಿಗೆ ಮಾರುಕಟ್ಟೆಗೆ ಇಳಿಯುತ್ತದೆ. ಕಡಿಮೆ ಬೆಲೆಗೆ ಉತ್ತಮ ದರ್ಜೆಯ ಹವಾಯಿ ಚಪ್ಪಲಿ ತಯಾರಿಸಿದ ಹೆಗ್ಗಳಿಕೆ ವಿಕೆಸಿ ಗೆ ಸಲ್ಲುತ್ತದೆ. ಪ್ರಾರಂಭದಲ್ಲಿ ಕೇರಳದಲ್ಲಿ ಮಾತ್ರ ಇದ್ದ ಹವಾಯಿ ಕ್ರಮೇಣ ಕಂಪೆನಿಯಲ್ಲಿದ್ದ ತಮಿಳ್ನಾಡು ಕಾರ್ಮಿಕರ ಮೂಲಕ ಆ ರಾಜ್ಯಕ್ಕೂ ಕಾಲಿಡುತ್ತದೆ. ಇಂದು ಕರ್ನಾಟಕ, ಕೇರಳ, ತಮಿಳ್ನಾಡು, ಆಂಧ್ರಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳದಲ್ಲಿ ತನ್ನ ತಯಾರಿಕಾ ಘಟಕಗಳನ್ನು ವಿಕೆಸಿ ಹೊಂದಿದೆ. ಕೇರಳವೊಂದರಲ್ಲೇ ನಾಲ್ಕು ಘಟಕಗಳಿವೆ. ಯೂರೋಪ್ ನ ಲೇಟೆಸ್ಟ್ ಮೆಶಿನ್ ಆಮದು ಮಾಡಿ ಚಪ್ಪಲಿ ತಯಾರಿಕೆ ವೇಗಗತಿಯಲ್ಲಿ ಸಾಗುತ್ತದೆ. ಏತನ್ಮಧ್ಯೆ 1990 ರಲ್ಲಿ ವಿಕೆಸಿ ಗೆ ಸಡ್ಡು ಹೊಡೆಯಲು "ಪಿವಿಸಿ" ಹೆಸರಲ್ಲಿ ತೈವಾನ್ ಮತ್ತು ಥೈಲಾಂಡ್ ಚಪ್ಪಲ್ ಭಾರತಕ್ಕೆ ಕಾಲಿಡುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದ ವಿಕೆಸಿ ಸಮರ್ಥವಾಗಿ ಪೈಪೋಟಿ ನೀಡಿ ಮತ್ತೆ ಜೈಸುತ್ತದೆ. ಪಿವಿಸಿ ಮುಗ್ಗರಿಸುತ್ತದೆ.

ಕೋಯಾ ಪಕ್ಕಾ ಕ್ಯಾಲ್ಕುಲೇಶನ್ ಮನುಷ್ಯ. ತನ್ನಿಬ್ಬರು ಗಂಡು ಮಕ್ಕಳನ್ನು ಕಂಪೆನಿಗಾಗಿಯೇ ತಯಾರು ಮಾಡುತ್ತಾರೆ. ದೊಡ್ಡಮಗ ರಝಾಕ್ ಗೆ ಎಂಬಿಎ ವಿಧ್ಯಾಭ್ಯಾಸ ಮಾಡಿಸ್ತಾರೆ. ಸಣ್ಣವ ನೌಶಾದ್ ಪಾಲಿಮರ್ ಸೈನ್ಸ್ ಮತ್ತು ರಬ್ಬರ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡ್ತಾರೆ. ಅವರಿಬ್ಬರನ್ನು ಸೇರಿಸಿಕೊಂಡು ವಿಕೆಸಿ ಯನ್ನು ಇನ್ನಷ್ಟು ಪ್ರೊಫೆಶನಲ್ ಗೊಳಿಸ್ತಾರೆ. ರಝಾಕ್ ಇತ್ತೀಚೆಗೆ ಡಿಸೈನಿಂಗ್ ಫೂಟ್ ವೇರ್ ಪ್ರಾರಂಭಿಸಿದ್ದಾರೆ. ಪ್ರಸ್ತುತ ವಿಕೆಸಿ 17 ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ಹೊಂದಿದ್ದು, 30 ನಿರ್ದೇಶಕರಿದ್ದಾರೆ. ಮಹಮ್ಮದ್ ಕೋಯಾ ಅವರು ಇಂದು ಕೇವಲ ಫೂಟ್ ವೇರ್ ಉದ್ಯಮ ಒಂದಕ್ಕೇ ಹೊಂದಿಕೊಳ್ಳದೆ ಕರ್ಮಭೂಮಿ ಕಲ್ಲಿಕೋಟೆಯಲ್ಲಿ ಟೈಲ್ಸ್, ಟಿಂಬರ್ ವ್ಯವಹಾರದಲ್ಲೂ ಕೈಯ್ಯಾಡಿಸಿದ್ದಾರೆ.

ವಿಕೆಸಿ ಕಂಪೆನಿಯಲ್ಲೀಗ 10,000 ಕ್ಕೂ ಅಧಿಕ ನೌಕರರಿದ್ದಾರೆ. 150 ಕ್ಕೂ ಅಧಿಕ ಚಪ್ಪಲ್ ಮಾಡೆಲ್ ಗಳು ಮಾರುಕಟ್ಟೆಗಿಳಿದಿವೆ. ಇಷ್ಟಕ್ಕೇ ಸುಮ್ಮನಾಗದ ಮಹಮ್ಮದ್ ಕೋಯಾ ಫೂಟ್ ವೇರ್ ಡಿಸೈನ್ ಇಂಡಸ್ಟ್ರೀಸ್ ಪ್ರಾರಂಭಿಸಿ ಆ ಮೂಲಕ "ಫೂಟ್ ವೇರ್ ವಿಲೇಜ್" ಎಂಬ ಕಾನ್ಸೆಪ್ಟ್ ಇಟ್ಟುಕೊಂಡು 1,600 ಗೃಹಿಣಿಯರಿಗೆ ಫೂಟ್ ವೇರ್ ತಯಾರಿಕೆಯ ಕುರಿತು ತರಬೇತು ನೀಡಿದ್ದಾರೆ. ಈಗ ಮನೆಯಲ್ಲೇ ಕುಳಿತು ಗೃಹಿಣಿಯರು ಚಪ್ಪಲಿ ತಯಾರಿಸಿ ಹಣ ಸಂಪಾದಿಸುತ್ತಿದ್ದಾರೆ. ವಿಕೆಸಿ ಮೆಟೀರಿಯಲ್ಸ್ ಮನೆಮನೆಗೆ ತಲುಪಿಸುವ ಸಂವಿಧಾನ ಪ್ರಾರಂಭವಾಗಿದೆ. ಘಟಕಗಳು ಮಾತ್ರವಲ್ಲದೆ ಮನೆ ಮನೆಯಲ್ಲಿ ಕೂಡಾ ವಿಕೆಸಿಗೆ ರೂಪ ಸಿಗುತ್ತಿದೆ.

ವಿಕೆಸಿ ತಾನು ಬೆಳೆಯುವುದಲ್ಲದೆ ತನ್ನ ಕಾರ್ಮಿಕರನ್ನು ಕೂಡಾ ಬೆಳೆಸುತ್ತಿದೆ. ಅವರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದೆ. ಮಲಪ್ಪುರಂ ಮತ್ತು ವಯನಾಡ್ ನಲ್ಲಿ ತನ್ನ ಸಿಬ್ಬಂದಿಗಳಿಗಾಗಿ ಉದಾರವಾಗಿ ಫ್ಲಾಟ್ ನಿರ್ಮಿಸಿಕೊಟ್ಟಿದೆ. ತನ್ನ ಸಿಬ್ಬಂದಿಗಳಿಗೆ ಪ್ರಾಥಮಿಕ ಇಂಗ್ಲಿಷ್ ಜ್ಞಾನದ ಶಿಕ್ಷಣ, ಅವರ ಮಕ್ಕಳಿಗೆ ಮತ್ತು ಆ ಪ್ರದೇಶದಲ್ಲಿ ಸ್ಕಾಲರ್ ಶಿಪ್ ನೀಡುತ್ತಿದೆ. ವಿಕೆಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಬೈಪೊರೆ ಡೆವಲಪ್ ಮೆಂಟ್ ಮಿಷನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಹಲವು ಶಾಲೆಗಳ ದತ್ತು, ಆಸ್ಪತ್ರೆಗಳಲ್ಲಿ ಬ್ಲಾಕ್ ಕಟ್ಟಡ ರಚನೆ, ಡಯಾಲಿಸಿಸ್ ಮೆಶಿನ್ ಸ್ಥಾಪನೆ ಮೊದಲಾದ ಸಾಮಾಜಿಕ ಕಾರ್ಯವನ್ನು ಮಾಡುತ್ತಿದೆ. ಮಹಮ್ಮದ್ ಕೋಯಾ ಪ್ರಥಮವಾಗಿ ಮಾರ್ಕಿಸ್ಟ್ ಸಿದ್ದಾಂತದವರು. ನಂತರ ಇಂಡಸ್ಟ್ರಿಯಲಿಸ್ಟ್ ಆದ ಕಾರಣ ತನ್ನ ಕಾರುಣ್ಯದ ಹಸ್ತ ಎಲ್ಲೆಡೆ ಚಾಚುತ್ತಿದ್ದಾರೆ. ಕೋಯಾ ಪ್ರಸ್ತುತ ಕಲ್ಲಿಕೋಟೆ ನಗರದ ಮೇಯರ್ ಆದರೂ ಈ ಹಿಂದೆ ಅವರು 2001 ರಿಂದ 2006 ರ ತನಕ ಬೈಪೊರೆ ಕ್ಷೇತ್ರದ ಶಾಸಕರಾಗಿದ್ದರು.

ವಿಕೆಸಿ ಚಪ್ಪಲ್ ಇಂದು ಭಾರತವಲ್ಲದೆ ಸಿಂಗಾಪುರ, ಮಲೇಶ್ಯಾ ಮತ್ತು ಗಲ್ಫ್ ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಮುಂದಿನ ದಿನಗಳಲ್ಲಿ ಇತರ ದೇಶಗಳಿಗೆ ವಿಶೇಷವಾಗಿ ಯೂರೋಪ್ ಖಂಡಕ್ಕೆ ಕಾಲಿಡಲಿದೆ. ಪ್ರಸ್ತುತ ಮೇಯರ್ ಆಗಿರುವ ವಿಕೆಸಿ ಜನಕ ಮಹಮ್ಮದ್ ಕೋಯಾ ಕಲ್ಲಿಕೋಟೆ ನಗರದ ಬಗ್ಗೆ ತುಂಬಾ ಕನಸು ಇಟ್ಟುಕೊಂಡಿದ್ದಾರೆ. ಟ್ರಾಫಿಕ್ ಸಿಸ್ಟಮ್, ವೇಸ್ಟ್ ಮೇನೇಜ್ ಮೆಂಟ್, ಬೀದಿ ದೀಪದ ದುರಸ್ತಿಗೆ ಕಾಯಕಲ್ಪ ನೀಡುವುದು ಕೋಯಾ ಕನಸು. ಸರಕಾರಿ ಕಛೇರಿಗಳ ಕೆಲಸ ಕ್ಷಿಪ್ರಗೊಳಿಸಿ ಬಡ/ಅಶಕ್ತರ ಸಮಸ್ಯೆಗೆ ಪರಿಹಾರ ಹುಡುಕಲು ಮೇಯರ್ ಮಹಮ್ಮದ್ ಕೋಯಾ ಸಜ್ಜಾಗಿದ್ದಾರೆ. ಅವರಿಗೆ ಶುಭವಾಗಲಿ.

*_-ರಶೀದ್ ವಿಟ್ಲ._*