ಶನಿವಾರ, ನವೆಂಬರ್ 26, 2016

ಯೋಗ

ಗಂಡ ಹೆಂಡತಿಯನ್ನು ಬೆಳಿಗ್ಗೆ ಎಬ್ಬಿಸುತ್ತಾನೆ:

ಗಂಡ: ಬಾರೇ, ಬೆಳಿಗ್ಗೆ ಯೋಗಾ ಮಾಡಿದ್ರೆ ಒಳ್ಳೆಯದು.

ಹೆಂಡತಿ: ನೀವು ಹೇಳೋದು ಏನೂಂತಾ? ನಾನು ದಪ್ಪ ಅಂತಾನ?

ಗಂ: ಇಲ್ಲ. ಯೋಗಾ ಆರೋಗ್ಯಕ್ಕೆ ಒಳ್ಳೆಯದು ಅಂತ.

ಹೆಂ: ಅಂದ್ರೆ ನನ್ನ ಆರೋಗ್ಯ ಸರಿ ಇಲ್ಲ ಅಂತಾನ?

ಗಂ: ಹೋಗ್ಲಿ ಬಿಡು. ಏಳಬೇಡ.

ಹೆಂ: ಅಂದರೆ ನಾನು ಸೋಮಾರಿ ಅಂತ...

ಗಂ: ಹಾಗಲ್ಲ. ನಿನಗೆ ನಾನು ಹೇಳಿದ್ದು ಅರ್ಥ ಆಗಿಲ್ಲ.

ಹೆಂ: ಅಂದ್ರೆ ನಾನು ನಿಮ್ಮನ್ನ ಅರ್ಥ ಮಾಡಿಕೊಂಡಿಲ್ಲ ಅಂತ ನಿಮ್ಮರ್ಥ..

ಗಂ: ನಾನು ಹಾಗೆ ಹೇಳಲಿಲ್ಲ

ಹೆಂ: ಅಂದರೆ ನಾನು ಸುಳ್ಳು ಹೇಳ್ತೀನಿ ಅಂತ...

ಗಂ: ಎ.. ಸುಮ್ಮನೆ ಬೆಳಿಗ್ಗೆ ಬೆಳಿಗ್ಗೆ ತಲೆ ತಿನ್ನಬೇಡ..

ಹೆಂ: ಅಂದ್ರೆ ನಾನು ಜಗಳಗಂಟಿ ಅಂತ...

ಗಂ: ಹೋಗ್ಲಿ ಬಿಡು.. ನಾನೂ ಯೋಗಕ್ಕೆ ಹೋಗದಿರೋದೇ ಒಳ್ಳೆದು..

ಹೆಂ: ನೋಡಿ ಅದೇ ನಾನು ಹೇಳಿದ್ದು. ನಿಮಗೂ ಹೋಗಕ್ಕೆ ಮನಸ್ಸಿರಲಿಲ್ಲ.. ಸುಮ್ಮನೆ ನನ್ನ ತಲೆ ಮೇಲೆ ಗೂಬೆ ಕೂರ್ಸೋದು..

ಗಂ: ಸರಿ ಮಹಾತಾಯಿ.. ನೀನು ನಿದ್ದೆ ಮಾಡು.. ನಾನು ಒಬ್ನೇ ಹೋಗ್ತೀನಿ.. ಸರೀನಾ?

ಹೆಂ: ಅದೇ... ನಿಮಗೆ ಎಲ್ಲ ಕಡೆಗೂ ಒಬ್ರೇ ಹೋಗಕ್ಕೆ ಇಷ್ಟ.

ಗಂ: ಅಯ್ಯೋ ಮಹಾತಾಯಿ.. ನಿಲ್ಸು.. ನನ್ನ ತಲೆ ಸುತ್ತುತ್ತಾ ಇದೆ...

ಹೆಂ: ಅದೇ ನೋಡಿ.. ನಿಮಗೆ ಯಾವಾಗ್ಲೂ ನಿಮ್ಮ ಆರೋಗ್ಯದ ಬಗ್ಗೆಯೇ ಯೋಚನೆ. ನನ್ನ ಬಗ್ಗೆ ಚೂರೂ ಚಿಂತೆಯಿಲ್ಲ ನಿಮಗೆ...
👌😄😜😜😜😉👌

NRE/NRO ಖಾತೆ, ಏನು? ಯಾಕೆ?*

ವಿದೇಶದಿಂದ ಓರ್ವನು ಊರಿಗೆ ಹಣ ಕಳುಹಿಸುವಾಗ ತನ್ನ NRE (Non Residential External)
ಖಾತೆಗಾಗಿದೆ ಹಣ ಕಳುಹಿಸಬೇಕು. ಊರಿನ ತನ್ನ SB (Savings Bank) ಖಾತೆಗೆ ಕಳುಹಿಸಿದರೆ ಸಾಕಲ್ಲವೇ ಎಂದು ಕೇಳಿದರೆ, ಉತ್ತರ ಇದಾಗಿದೆ.
SB ಖಾತೆಗೆ ಹಣ ಕಳುಹಿಸುವಾಗ ಅದಕ್ಕೊಂದು ಮಿತಿ ಇದೆ.
50,000/-  ರೂಪಾಯಿಗಿಂತ ಹೆಚ್ಚು ಕಳುಹಿಸಿದರೆ ಅದಕ್ಕೆ ತೆರಿಗೆ ಕಟ್ಟಬೇಕು. ಬೇರೆ ತೊಂದರೆ ಏನು ಇಲ್ಲ.
NRE ಖಾತೆಯಲ್ಲಾದರೆ ತೆರಿಗೆ ಕಟ್ಟಬೇಕೆಂದಿಲ್ಲ.

ವಿದೇಶದಲ್ಲಿ ಹಲವು ವರ್ಷಗಳು ಕಳೆದರೂ ಒಂದು NRE ಖಾತೆ ಕೂಡ ತೆರೆಯದ ಹಲವಾರು ಜನರು ಇದ್ದಾರೆ.
ಪ್ರಧಾನವಾಗಿ 2 ಕಾರ್ಯಗಳಾಗಿದೆ NRE ತೆರೆಯದೆ ಇರಲು ಕಾರಣ,
1- ಅಜ್ಞಾನ ಅಥವಾ ತಿಳುವಳಿಕೆ ಇಲ್ಲದಿರುವುದು,
2- ಉದಾಸೀನತೆ ಅಥವಾ ಆಲಸ್ಯ,
ತಿಳುವಳಿಕೆ ಇಲ್ಲದವರಾಗಿದ್ದಲ್ಲಿ ಯಾರಾದರು ಹೇಳಿ ಕೊಟ್ಟರೆ ಮನವರಿಕೆಯಾಗಬಹುದು.

ಆದರೆ ಉದಾಸೀನತೆಯವರನ್ನು ಸರಿ ಮಾಡಲು ತುಂಬಾನೇ ಕಷ್ಟ. ಅವರು ಏನಾದರು ಒಂದು ದೊಡ್ಡ ಗಂಡಾಂತರ ಬಂದಾಗಲೇ ಎಚ್ಚೆತ್ತುಗೊಳ್ಳುವುದು.

ಬ್ಯಾಂಕ್ ಖಾತೆಯಿಂದಲ್ಲದೆ ಊರಿಗೆ ಹಣ ಕಳುಹಿಸುವುದನ್ನಾಗಿದೆ ಕಪ್ಪುಹಣ ಎಂದು ಹೇಳುವುದು. ಹೀಗೆ ಹಣ ಕಳುಹಿಸಿದರೆ ಉಂಟಾಗಲಿರುವ ಗಂಡಾತರ ಏನೆಲ್ಲ ಎಂದು ತಿಳಿಯುವುದು ಒಳ್ಳೇದು.

1- ಕಪ್ಪುಹಣ ನಿಯಮ ವಿರುದ್ಧವಾಗಿದೆ.
2- ಹಿಡಿದರೆ ಹಣವು ನಷ್ಟಗೊಳ್ಳುವುದು ಅದಲ್ಲದೆ ಜೈಲಿಗೂ ಹೋಗಬೇಕು.
3- ಕಪ್ಪು ಹಣ ಏಜಂಟರು, ಹೇಳಿದ ಹಾಗೆ ಹಣ ಮನೆಗೆ ತಲುಪಿಸದಿದ್ದರೆ ನಿಯಮಪರವಾಗಿ ಅವರ ಮೇಲೆ ಕೇಸು ಕೊಡಲು ಸಾಧ್ಯವಿಲ್ಲ.
4- ಎಷ್ಟು ಕೊಟಿಗಳು ಕಳುಹಿಸಿದರೂ ನಿಯಮಪರವಾಗಿ ರೇಖೆಗಳು ಇರಲಿಕ್ಕಿಲ್ಲ.
( ಹಲವು ವಿಷಯಗಳಿಗೆ ತಮ್ಮ ಸಂಪತ್ತಿನ ರೇಖೆಗಳನ್ನು  ತೋರಿಸಬೇಕು.)

(ತಾವು ಇಷ್ಟು ವರ್ಷ ಕಾಲ ವಿದೇಶ ಉದ್ಯೋಗದಿಂದ ತಮ್ಮ ಹಣ ಹೇಗೆ ಭಾರತಕ್ಕೆ ಕಳುಹಿಸಿರುವುದು ಎಂಬ ಪ್ರಶ್ನೆ ಯಾವಾಗಲಾದರೂ ಕಾನೂನು ಬಂದಲ್ಲಿ A/C  ಇಲ್ಲದವರು ತೊಂದರೆಗೆ ಸಿಲುಕುವುದು ಖಂಡಿತಾ.)

*ಇನ್ನು, NRE ಖಾತೆ ತೆರೆದರೆ ಲಭಿಸುವ ಲಾಭ ನೋಡುವಾ;*

1-ನಮ್ಮ ಹಣ/ ಸಂಪತ್ತು  ನಿಯಮಪಾರವಾಗಿ, ಸುರಕ್ಷಿತವಾಗಿ ಬ್ಯಾಂಕಿನಲ್ಲಿ ಇರುತ್ತದೆ.
2- ತೆರಿಗೆ ಇಲ್ಲದಾಗಿಸಬಹುದು.
3-ನಾವು ಖರೀದಿಸುವ ಮನೆ, ವಾಹನ, ವಸ್ತುಗಳು.. ಎಂಬಿತ್ಯಾದಿಗಳ ಸಂಪತ್ತಿನ ರೇಖೆಗಳ ಕುರಿತು ಅನ್ವೇಷಣೆ ಬರುವಾಗ A/C ಸ್ಟೇಟ್ಮೆಂಟ್ ಅನುಗುನವಾಗಬಹುದು.
4- ನಾವು ಕೊಡಲು ಇರುವ ನಗದಿಗೆ ಬದಲು ಚೆಕ್ ಕೊಡುವಾಗ ಎಲ್ಲಾ ಕಾಲಕ್ಕೂ ಆಗುವಂತ ನಿಯಮಪರವಾದ ರೇಖೆಯಾಗುವುದು.

ನಗದು ಸಿಗಲಿಲ್ಲ ಎಂದು ಹೇಳಿ ನಮ್ಮನ್ನು ವಂಚಿಸಲು ಯಾರಿಗೂ ಸಾಧ್ಯವಾಗದು.
5- ನಾವೂ ಕಳುಹಿಸುವುದು, ಖರ್ಚು ಮಾಡುವುದಾದ ನಗದು ಬೇಕಾದಾಗ ಓಡಿಟ್ ಮಾಡಲು ಸಾಧಿಸುತ್ತದೆ.
6-ಯಾರನ್ನು ಹೆದರದೆ ಬ್ಯಾಂಕಿನಲ್ಲಿ ಸುಕ್ಷಿಸುವ ಹಣವನ್ನು, ಅಗತ್ಯಗಳಿಗೆ ಅನುಸರಿಸಿ ATM ಮುಖಾಂತರ ತೆಗೆಯಬಹುದು. ಯಾತ್ರೆಗೆ ಒಳಗೊಂಡ ಎಲ್ಲಾ ಕಾರ್ಯಗಳಿಗೆ ATM ಕಾರ್ಡ್ ಬೇಕಾದಾಗೆ ಎಲ್ಲಾ ಕಡೆಗಳಲ್ಲಿ ಉಪಯೋಗಿಲು ಉಪಕಾರಿಯಾಗಿದೆ.
7-ಚೆಕ್ ಪುಸ್ತಕ ಲಭಿಸುತ್ತದೆ.
ಬಾಡಿಗೆ, ಶುಲ್ಕ, ಬಿಲ್ ಗಳು..
ಮೊದಲಾದವೆಲ್ಲ ಚೆಕ್ ಮುಖಾಂತರ ಮಾಡಿದರೆ ಹೆಚ್ಚು ಸುರಕ್ಷಿತವಾಗುವುದು.
8- ಅತ್ಯಗತ್ಯವಾದ ಸ್ಥಳಗಳಲ್ಲಿ ಗ್ಯಾರಂಟಿಯಾಗಿ ಚೆಕ್ ಕೊಡಬಹುದು.

(NB; ಕರೆಂಟ್ ಖಾತೆಯಾದರೆ ಬಡ್ಡಿ ಬರಲಿಕ್ಕಿಲ್ಲ.
5000 ರೂಪಾಯಿ *ಮಿನಿಮಮ್ ಬ್ಯಾಲೆನ್ಸ್* ಬೇಕು ಕರೆಂಟ್ ಖಾತೆಯಾದರೆ)

NRE ಖಾತೆಯ ತರ ಪ್ರಧಾನವಾದ ಮತ್ತೊಂದಾಗಿದೆ NRO (Non Residential Ordinary) ಖಾತೆ.
ವಿದೇಶದಿಂದ ಹಣ ಕಳುಹಿಸುವುದು NRE ಖಾತೆಗಾದರೆ ಊರಿನಿಂದ ಹಣ ಡಿಪೋಸಿಟ್ ಮಾಡಲು ಇರುವುದಾಗಿದೆ NRO ಖಾತೆ.
(ಊರಿನಲ್ಲಿ SB ಖಾತೆಯ ತರಹ)
ಉದಾರಣೆಗೆ; ಊರಿನ ಭೂಮಿಯೊ, ಬೇರೇನಾದರು ಮಾರಾಟ ಮಾಡಿ ಸಿಕ್ಕಿದ ಒಂದು ಸಂಖ್ಯೆಯನ್ನು ಒಮ್ಮೆಯೂ NRE ಖಾತೆಯಲ್ಲಿ ಡಿಪೋಸಿಟ್ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಕ್ಕೆ ಬೇಕಾಗಿಯಾಗಿದೆ NRO ಖಾತೆ.

*ಹೇಗೆ ಒಂದು NRE/NRO ಖಾತೆ ತೆರೆಯುವುದು!?..
:
ತಾವು ನೆಲೆಗೊಳ್ಳುವ ವಿದೇಶ ರಾಷ್ಟ್ರಗಳ ಯಾವುದಾದರೂ ಬ್ಯಾಂಕಿನಲ್ಲೋ, ಮನಿ ಎಕ್ಷಸ್ಚೇಂಜ್ನಲ್ಲೋ ಹೋದರೆ ಅವರು ಸಹಾಯ ಮಾಡುವರು.

ಪಾಸ್ಪೋರ್ಟ್ ಕಾಪಿ ( ವಿಝ ಪುಟ ಒಳಗೊಂಡ) 2 ಫೋಟೋ, (with white back ground), ಕಡಿಮೆಯಾಗಿ 1000 ರೂಪಾಯಿಯ (inr) ಒಂದು ಡ್ರಾಫ್ಟ್ ಇಷ್ಟಾಗಿದೆ ಅಗತ್ಯವಿರುವುದು....
(ವಿಳಂಬವಾಗದೆ ಚೆಕ್, ಪಸುಬೋಕ್ ಹಾಗು ATMನ ಸಂದೇಶಗಳು ಲಭಿಸುವುದು.)

NRE/NRO ಖಾತೆಗಳು ಇಲ್ಲದವರು ಖಾತೆ ತೆರೆಯಿರಿ.
ನಮ್ಮಲ್ಲಿ ಇರುವ ಸಂಪತ್ತನ್ನು ಸುರಕ್ಷಿತ ಮಾಡಿರಿ.

*ದೀನಿ ಸೂಕ್ಷತೆಗೆ ಬೇಕಾಗಿ ಬ್ಯಾಂಕ್ A/C ವರ್ಜಿಸುವವರು ಇದ್ದಾರೆ. ಆದರೂ ಆಧುನಿಕ ಯುಗದಲ್ಲಿ ಸರಕಾರಕ್ಕೆ ಒಳಪಟ್ಟ ಕಾರ್ಯಗಳಿಗೂ, ಇನ್ನುಳಿದ ಹಲವು ಅತ್ಯಗತ್ಯವಾದ ಕಾರ್ಯಗಳಿಗೆ ಬ್ಯಾಂಕ್ ಮುಖಾಂತರ ಜೋಡಿಸಿಯಾಗಿರುತ್ತದೆ.*

ಆದ್ದರಿಂದ
ಖಾತೆ ಅತ್ಯಗತ್ಯವಾಗಿರುತ್ತದೆ.
ನಮ್ಮ ದೇಶದ ನಿರ್ಬಂಧಿತವಾದ ನಿಯಮಗಳಿಗೆ ಬೇಕಾಗಿ A/C ಅನಿವಾರ್ಯವಾಗಿರುತ್ತದೆ.

(ಬಡ್ಡಿ ದೊಡ್ಡ ಪಾಪವಾಗಿದೆ, ಲೋನ್, ಅಡವು ಇಟ್ಟುಕೊಳ್ಳುವುದು, ಕೊತಚೆಕ್, ಎಂಬಿತ್ಯಾದಿಗಳಿಗೆ ಬ್ಯಾಂಕನ್ನು ಉಪಯೋಗಿಸುವುದು ಅವಘಡವಾಗಿದೆ.)

ಜೀವ ಪಣಕ್ಕಿಟ್ಟ ಕರಾವಳಿಯ ಯುವಕರು

ಮುಳುಗುವವರಿಗೆ ಬದುಕು ಕೊಟ್ಟ ಕಡಲ ವೀರರ ಬದುಕನ್ನು ಕೇಳೋರಿಲ್ಲ..!
************************************************

✍ ರಶೀದ್ ವಿಟ್ಲ.

2007 ರಲ್ಲಿ ಮಂಗಳೂರ ಸಮುದ್ರದಲ್ಲಿ ಡೆನ್ ಡೆನ್ ಹಡಗು ಮುಳುಗಡೆ; ಕಡಲ ಅಲೆಗಳಿಗೆ ಸವಾಲೆಸೆದು 21 ಜನರ ಪ್ರಾಣ ರಕ್ಷಿಸಿದ ಧೀರ ಯುವಕರು. 1993 ರಲ್ಲಿ ತನ್ನೀರುಬಾವಿಯಲ್ಲಿ ವಿದೇಶಿ ಹಡಗು ಮುಳುಗಡೆ; ಆಳದಿಂದ ಶವಗಳನ್ನು ಮೇಲೆತ್ತಿದ ಕಡಲ ಶೂರರು. ಇತ್ತೀಚೆಗೆ ಬೆಂಗಳೂರು ತಿಪ್ಪಗುಂಡನಹಳ್ಳಿ ಕೆರೆಯಿಂದ ಮಾರಿಗುಡಿ ಚಿತ್ರದ ಖಳನಟನ ಮೃತದೇಹ ಪತ್ತೆ ಮಾಡಿದ ವೀರರು. ದಿನನಿತ್ಯ ಕಡಲಕಿನಾರೆಯಲ್ಲಿ, ಜಿಲ್ಲೆಯ ಮೂಲೆಮೂಲೆಗಳಲ್ಲಿ, ರಾಜ್ಯದ ವಿವಿದೆಡೆ ಜಲದುರಂತವಾದಾಗ ಅಲ್ಲಿಗೆ ಸ್ವಯಂಪ್ರೇರಿತವಾಗಿ ತೆರಳಿ ಸಮಸ್ಯೆಗೆ ಪರಿಹಾರ ಸೂಚಿಸಿ ಮಾನವೀಯತೆ ಮೆರೆದವರು.

ಇಂತಹ ಹತ್ತುಹಲವು ದುರ್ಘಟನೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದಂತಹ ವಿಚಾರಗಳು. ಆದರೆ ಇದರ ತೆರೆಯ ಮರೆಯಲ್ಲಿ ಕಾರ್ಯಾಚರಿಸಿದ ಆ ಧೀರರು, ಶೂರರು, ವೀರರು, ಮಾನವೀಯತೆಯ ಹರಿಕಾರರ ಬಗ್ಗೆ ಸುದ್ದಿಯಾಗಲೇ ಇಲ್ಲ. ಯಾಕೆಂದರೆ ಅವರು ಮಾನವೀಯ ಮೌಲ್ಯಗಳನ್ನು ಮೇಲೈಸಿದ ಆಪತ್ಬಾಂಧವರೇ ಹೊರತು ಪ್ರಚಾರ ನಿರೀಕ್ಷೆ ಮಾಡಿದವರಲ್ಲ. ಅದನ್ನು ಬಯಸಿದವರೂ ಅಲ್ಲ. ಕಳೆದ 10-15 ವರ್ಷಗಳಿಂದ ನೀರಿನಲ್ಲಿ ಮುಳುಗಿದ ಸುಮಾರು 150 ಶವಗಳನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದ್ದು ಮಾತ್ರವಲ್ಲ 50 ಕ್ಕೂ ಹೆಚ್ಚಿನ ಜನರ ಜೀವರಕ್ಷಣೆ ಮಾಡಿದ ಐವರು ಕಡಲತಡಿಯ ಯುವಕರ ಸಾಹಸಗಾಥೆ ಅದ್ಭುತವಾದುದು. ಆ ಯುವಕರು ಯಾರು?

ಮಂಗಳೂರಿನ ತನ್ನೀರುಬಾವಿ ಸಮುದ್ರ ತೀರದ ಸುಂದರ ತಾಣ. ದಿನನಿತ್ಯ ಸಹಸ್ರಾರು ಪ್ರಶಾಸಿಗರು ಕಡಲ ಸವಿಯನ್ನು ಆಸ್ವಾದಿಸಲು ಬರುವ ಪ್ರಸಿದ್ದ ಪ್ರವಾಸಿ ಕೇಂದ್ರ. ಈ ತನ್ನೀರುಬಾವಿ ಪ್ರದೇಶದಲ್ಲಿ ಯೂತ್ ಸ್ಪೋರ್ಟ್ಸ್ ಕ್ಲಬ್ ಅನ್ನುವ ಸಂಘಟನೆಯಿದೆ. ಅದಕ್ಕೆ ಸ್ವಂತ ಕಟ್ಟಡ ಕೂಡಾ ಇದೆ. 1993 ರಲ್ಲಿ ಕ್ಲಬ್ ಪ್ರಾರಂಭವಾಗಿದೆ. ಈ ಸ್ಪೋರ್ಟ್ಸ್ ಕ್ಲಬ್ ನ ಜೀವಾಳವೇ ನಾನು ಮೇಲೆ ಉಲ್ಲೇಖಿಸಿರುವ ಐವರು ಸಾಹಸೀ ಯುವಕರು. ಅಸಹಾಯಕರ ಪಾಲಿನ ಆಶಾಕಿರಣ. ಮುಳುಗಿ ಇನ್ನೇನು ಪ್ರಾಣ ಕಳಕೊಳ್ಳುವೆವು ಎನ್ನುವವರಿಗೆ ಜೀವರಕ್ಷಕರು. ನೀರಿನ ಭಯವಿಲ್ಲದ ಮಹಾನ್ ವ್ಯಕ್ತಿ-ಶಕ್ತಿಗಳು. ಮಾನವೀಯತೆಯ ಹರಿಕಾರರಾದ ತನ್ನೀರುಬಾವಿ ನಿವಾಸಿಗಳಾದ ಮಹಮ್ಮದ್ ವಾಸಿಂ, ಸಾದಿಕ್, ಜಾವಿದ್, ಜಾಕಿರ್ ಹುಸೈನ್ ಹಾಗೂ ಹಸನ್ ಪಿ.ಟಿ.

ಇತ್ತೀಚೆಗೆ ಬೆಂಗಳೂರಿನ ತಿಪ್ಪಗುಂಡನಹಳ್ಳಿ ಕೆರೆಯಲ್ಲಿ ಮಾರಿಗುಡಿ ಕನ್ನಡ ಚಿತ್ರೀಕರಣ ನಡೆಯುವಾಗ ಇಬ್ಬರು ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ಕೆರೆಯ ನೀರುಪಾಲಾದರು. ಆ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಹಲವು ಮಂದಿ ಕಂಬನಿ ಮಿಡಿದರು. ಅಗ್ನಿಶಾಮಕದಳ, ಪೊಲೀಸರು, ಎನ್.ಟಿ.ಆರ್.ಎಫ್. ಪಡೆ ಎರಡು ದಿನ ಹಗಲು-ರಾತ್ರಿ ಹುಡುಕಾಡಿದರೂ ಶವ ಸಿಕ್ಕಿಲ್ಲ. ಘಟನೆಯನ್ನು ಪತ್ರಿಕೆಯಲ್ಲಿ ಕಂಡ ತನ್ನೀರುಬಾವಿಯ ಈ ಐವರು ಯುವಕರು ಪಣಂಬೂರು ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿ ಗೆ ಮಾಹಿತಿ ನೀಡಿ ಯಾರೂ ಆಹ್ವಾನಿಸದೆ ಸ್ವಯಂಪ್ರೇರಿತರಾಗಿ ಘಟನೆ ಸ್ಥಳಕ್ಕೆ ತಲುಪಿದರು. ಇವರಲ್ಲಿ ಆಕ್ಸಿಜನ್ ಬಿಟ್ಟು ನೀರಿಗಿಳಿವ ಯಾವುದೇ ಶಸ್ತ್ರ, ಆಯುಧ, ಲೈಫ್ ಜಾಕೆಟ್ ಗಳಿರಲಿಲ್ಲ. ಇವರು ಶವ ಮೇಲಕ್ಕೆತ್ತುವುದು ಅಸಾದ್ಯ ಎಂದೇ ಅಲ್ಲಿದ್ದ ಎಲ್ಲರೂ ಭಾವಿಸಿದ್ದರು. ನೋಡನೋಡುತ್ತಿದ್ದಂತೆಯೇ ತನ್ನೀರುಬಾವಿಯ ಈ ಐವರು ಸಾಹಸಿ ಯುವಕರು ನಟ ರಾಘವ್ ಉದಯ್ ಶವವನ್ನು 70 ಅಡಿ ಆಳದಿಂದ ಮೇಲೆತ್ತಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಆ ಕೆರೆಯಲ್ಲಿ 30 ಅಡಿಯ ಕೆಳಗೆ ಕಗ್ಗತ್ತಲು ಆವರಿಸಿದ್ದರೂ ಕೇವಲ ಆಕ್ಸಿಜನ್ ಬಳಸಿ 70 ಅಡಿ ಆಳದಲ್ಲಿದ್ದ ಶವ ತೆಗೆದಿದ್ದರು. ಅನಿಲ್ ಶವ ಹುಡುಕಾಡಿದರೂ ಸಿಗದಿದ್ದಾಗ ಇಂತಹ ಸ್ಥಳದಲ್ಲೇ ಅದು ಮೇಲೆ ಬರಬಹುದೆಂದು ಭವಿಷ್ಯ ನುಡಿದಿದ್ದ ಈ ಯುವಕರು ಹೇಳಿದ ಹಾಗೆಯೇ ನಡೆದಿತ್ತು. ನಟ ದುನಿಯಾ ವಿಜಯ್ ಸೇರಿದಂತೆ ಅಲ್ಲಿ ಸೇರಿದ್ದ ಸಹಸ್ರಾರು ಮಂದಿ ಕರಾವಳಿ ಯುವಕರ ಸಾಹಸಕ್ಕೆ ಭೇಷ್ ಅಂದರು.

1993 ರಲ್ಲಿ ವಿದೇಶೀ ಹಡಗೊಂದು ತನ್ನೀರುಬಾವಿಯಲ್ಲಿ ಮುಳುಗಿತು. ಅದರಲ್ಲಿದ್ದವರ ಎಲ್ಲಾ ಮೃತದೇಹವನ್ನು ಹೊರತೆಗೆದ ತಂಡ ಅಂದು ಹುಟ್ಟುಹಾಕಿದ ಸಂಸ್ಥೆಯೇ ಯೂತ್ ಸ್ಪೋರ್ಟ್ಸ್ ಕ್ಲಬ್. ಅಂದು ಈ ಯುವಕರು ಇಲ್ಲದೇ ಇದ್ದಿದ್ದರೂ ಆ ಕ್ಲಬ್ ನ ಪ್ರಸ್ತುತ ಜೀವಾಳವೇ ಈ ಐವರು ಧೀರ ಯುವಕರು.

2007 ರಲ್ಲಿ ಆಫ್ರಿಕಾದ ಡೆನ್ ಡೆನ್ ಹಡಗು ಮಂಗಳೂರ ಕಡಲ ಕಿನಾರೆಯಲ್ಲಿ ಮುಳುಗುತ್ತಿತ್ತು. ಅದರಲ್ಲಿ ನಾವಿಕ ಸೇರಿ 23 ವಿದೇಶಿಗರಿದ್ದರು. ಅವರನ್ನು ರಕ್ಷಿಸಲು ಪೊಲೀಸರು, ಅಗ್ನಿಶಾಮಕದಳ ಅಸಹಾಯಕವಾಗಿತ್ತು. ಈ ಸಂದರ್ಭ ಲೈಫ್ ಜಾಕೆಟ್ ಕೂಡಾ ಇಲ್ಲದೆ ನೀರಿಗೆ ದುಮುಕಿ ಹಡಗಿನಲ್ಲಿದ್ದ 21 ಆಫ್ರಿಕನ್ನರನ್ನು ರಕ್ಷಿಸಿ ಸಾಹಸ ಮೆರೆದವರು ಇದೇ ಐವರು ಯುವಕರ ತಂಡ. ಅಂದು ಇವರಿಗೆ ಕೋಸ್ಟ್ ಗಾರ್ಡ್ ಕನಿಷ್ಟ ಲೈಫ್ ಜಾಕೆಟ್ ನೀಡುವ ಸೌಜನ್ಯವನ್ನೂ ತೋರಿಲ್ಲ. ಆದರೆ ಅಂದಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಸ್ವಾತಂತ್ರ್ಯ ದಿನ ರಾಜಭವನಕ್ಕೆ ಆಹ್ವಾನಿಸಿ ಸಾಹಸ ತೋರಿದ ಯುವಕರನ್ನು ಸನ್ಮಾನಿಸಿದ್ದರು. ಕಡಲ ಕಿನಾರೆಯಲ್ಲಿ ವಾರಕ್ಕೆ ಮೂರ್ನಾಲ್ಕು ಪ್ರವಾಸಿಗರ ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಅವರ ಪಾಲಿಗೆ ಆಪತ್ಬಾಂಧವರಾಗುವುದು ಇದೇ ಧೀರರು. ಬಹುಶಃ ಇವರಿಂದಾಗಿ ಅದೆಷ್ಟೋ ಜನ ಪುನರ್ಜನ್ಮ ಪಡೆದಿದ್ದಾರೆ. ಈ ಹಿಂದೆ ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ನದಿ ದುರಂತದಲ್ಲಿ ಸಿಲುಕಿದವರನ್ನು ಹುಡುಕಿಕೊಟ್ಟ ಕೀರ್ತಿ ಈ ಐವರಿಗಿದೆ. ದ.ಕ. ಜಿಲ್ಲೆಯ ಮೂಲೆಮೂಲೆಗಳಲ್ಲದೆ ಹಾಸನ, ಶಿವಮೊಗ್ಗ, ಉಡುಪಿ, ಕುದುರೆಮುಖ, ಕುಮಟಾ ಮೊದಲಾದೆಡೆ ಹಲವು ಬಾರಿ ನೀರಿನ ದುರಂತ ನಡೆದಾಗ ಆಸರೆಯಾದವರು ಇದೇ ಸ್ಪೋರ್ಟ್ಸ್ ಕ್ಲಬ್ ಯುವಕರು. ಈ ಯುವಕರ ತಂಡವನ್ನು ಎಂ.ಫ್ರೆಂಡ್ಸ್ ಮಂಗಳೂರು ಸಂಸ್ಥೆಯು ತನ್ನೀರುಬಾವಿ ಯೂತ್ ಸ್ಪೋರ್ಟ್ಸ್ ಕ್ಲಬ್ ಗೆ ತೆರಳಿ ಊರವರ, ಕ್ಲಬ್ ಅಧ್ಯಕ್ಷರ, ಸ್ಥಳೀಯ ಮಸೀದಿ ಅಧ್ಯಕ್ಷರ ಸಮಕ್ಷಮ ಸನ್ಮಾನಿಸಿ ಹುರಿದುಂಬಿಸಿದೆ.

ಕಡಲ ಸಾಹಸಿಗರಾದ ಮಹಮ್ಮದ್ ವಾಸಿಂ, ಸಾದಿಕ್, ಜಾವಿದ್, ಜಾಕಿರ್ ಹುಸೈನ್, ಹಸನ್ ಪಿ.ಟಿ. ಅವರು ನೀರಿನ ಹರಿವು, ಅದರ ಪ್ರತಿಕೂಲ, ಆಳದ ಬಗ್ಗೆ ಅನುಭವದಿಂದಲೇ ತಿಳಿದುಕೊಂಡವರು. ಈ ಬಗ್ಗೆ ಅವರೇನೂ ತರಬೇತಿ ಪಡೆದಿಲ್ಲ. ಈ ಯುವಕರೇನೂ ಆರ್ಥಿಕವಾಗಿ ಬಲಾಢ್ಯರಲ್ಲ. ಕಡಲ ತಡಿಯಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ದಿನನಿತ್ಯದ ಕೆಲಸದಿಂದ ಬದುಕು ಸವೆಸುವವರು. ಕಡಲ ಚಿಪ್ಪಿ (ಪಚಿಲೆ) ಮೀನು ಹೆಕ್ಕಿ ಅದನ್ನು ಮಾರಿ ಜೀವನ ಕಟ್ಟಿಕೊಂಡವರು. ಇವರ ಆರ್ಥಿಕ ಅಡಚಣೆ ಅಷ್ಟಿಷ್ಟಲ್ಲ. ಹಲವು ಜೀವಗಳಿಗೆ ಮರುಜೀವ ನೀಡಿದ ಈ ವಿವಾಹಿತ, ಸಂಸಾರಸ್ಥ ಯುವಕರ ಜೀವನದ ಬವಣೆ ಕೇಳುವವರಿಲ್ಲ. ಅದು ಬಿಡಿ ಇವರ ಸಾಧನೆಯನ್ನು ಸರಿಯಾಗಿ ಪ್ರೋತ್ಸಾಹಿಸುವವರೂ ಇಲ್ಲ. ಸರಕಾರ, ಪೊಲೀಸರು, ಕರಾವಳಿ ರಕ್ಷಣಾ ಪಡೆಯಾಗಲಿ ಯಾರೂ ಬೆಂಬಲಕ್ಕೆ ನಿಂತಿಲ್ಲ. ಅಕ್ಷರಶಃ ನಿರ್ಲಕ್ಷ್ಯ ತೋರಿದೆ ಎನ್ನಬಹುದು. ಕೆಲವೊಮ್ಮೆ ಒಪ್ಪೊತ್ತಿನ ಊಟಕ್ಕಾಗಿ ತತ್ವಾರ ಪಡುವಂತಹ ದಯನೀಯ ಪರಿಸ್ಥಿತಿ. ಇವರ ಮನೆಯ ಸದಸ್ಯರು ಮಕ್ಕಳನ್ನು ಕಷ್ಟದಲ್ಲಿ ಸಲಹುತ್ತಿದ್ದಾರೆ. ಒಬ್ಬ ಸದಸ್ಯನ ಮನೆಯಲ್ಲಿ ಆತನ ವಿಧವೆ ಸಹೋದರಿ ಹಾಗೂ ಮೂವರು ಮಕ್ಕಳು ಬೇರೆ. ಅದರಲ್ಲಿ ಒಂದು ಮಗುವಿಗೆ ಬಾಯಿ ಬರದ ದುಸ್ಥಿತಿ. ಈ ಐವರು ಯುವಕರ ಅನಿವಾರ್ಯತೆ ಸಮಾಜಕ್ಕಿದೆ. ನೀರಿನ ದುರಂತಗಳು ಸಂಭವಿಸಿದಾಗ ನಮಗೆ ಇವರೇ ಬೇಕು. ಇವರ ಕುಟುಂಬದ ಪೋಷಣೆ, ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಮ್ಮ ಸಮಾಜ ಹೊರಬೇಕಾಗಿದೆ. ಜಾತಿ ಮತ ಬೇಧ ಮರೆತು ಜೀವವನ್ನು ಪಣಕ್ಕಿಟ್ಟು ಹಲವಾರು ಜೀವಗಳಿಗೆ ಮರುಜನ್ಮ ನೀಡಿದ ಈ ಐವರು ಯುವಕರಿಗೆ ನಾವೂ ಪ್ರೋತ್ಸಾಹ, ಸಹಕಾರ ನೀಡೋಣ. ಅವರಿಗೆ ಸಹಾಯಹಸ್ತ ಚಾಚುವವರು ಅಥವಾ ಬೆಂಬಲ ನೀಡುವವರು ತಂಡದ ಸದಸ್ಯರಾದ ಮಹಮ್ಮದ್ ವಾಸಿಂ +91 9845152078 ಅಥವಾ ಎಂ.ಫ್ರೆಂಡ್ಸ್ ಮಂಗಳೂರು ಇದರ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ +91 9980880860 ಅವರನ್ನು ಸಂಪರ್ಕಿಸಬಹುದು. ನಿಮ್ಮ ಕಿಂಚಿತ್ ಸಹಕಾರ ಕಡಲ ವೀರ ಯುವಕರ ಕುಟುಂಬಕ್ಕೆ ದೊಡ್ಡ ವರದಾನವಾಗಬಹುದು.

ಭಾನುವಾರ, ನವೆಂಬರ್ 20, 2016

ಒಂದು ಬರಹ ಕಮ್ಮಟದ ನಂತರ


ಮುಖಪುಟದ ಕಮೆಂಟೊಂದು ನಮ್ಮನ್ನು ಬಹು ದೂರ ತಲುಪಿಸಿದ ವಿಶಿಷ್ಟ ಅನುಭವ ಸಂಭ್ರಮ ನಮ್ಮ ಪಾಲಿಗೆ ನಿನ್ನೆ, "ಕೆ ಎಂ ಅವರಿಗೆ ಗಿಫ್ಟ್ ಕೊಡಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿರಿ" ಎನ್ನುವ ಮುಸ್ತಫ ಗಡಿಯಾರರ ಒಂದೇ ಒಂದು ಕಮೆಂಟು ಮತ್ತೆ ನಡೆದದ್ದೆಲ್ಲವೂ ನಮ್ಮ ಪಾಲಿಗೆ ಅದ್ಬುತ... ಆ ಕಮೆಂಟಿಗೆ ಬೆಂಬಲವಾಗಿ ಜನಕ್ಕೆ ಜನ ಸೇರಿದರು, ತಮ್ಮ ತರಾತುರಿ ಕೆಲಸವನ್ನೆಲ್ಲ ಬಿಟ್ಟು ನಮ್ಮನ್ನು ಕೂಡಿಕೊಂಡರು."ನಮ್ಮ ಕೆ ಎಂ ಅಲ್ಲವಾ" ಎಂದು ನಮ್ಮೊಂದಿಗೆ ದನಿಗೂಡಿಸಿ ಹುರಿದುಂಬಿಸಿದರು. ಆಗ ನಾವೊಂದಷ್ಟು ಜನ ಫೀಲ್ಡಿಗೆ ಧೈರ್ಯವಾಗಿ ಇಳಿದೆವು ಅದರ ಹಿಂದೆಯೂ ಇದ್ದ ಉತ್ಸಾಹ ನಮ್ಮ ಕೆ ಎಂ ಎನ್ನುವ ಅದಮ್ಯ ಪ್ರೀತಿ. ಜೊತೆಗೆ ನಮ್ಮ ಯುವ ಬರಹಗಾರರಿಗೆ ಏನಾದರೂ ಸಿಗಬೇಕು ಎನ್ನುವ ಛಲ.

ಹಾಗೆಯೇ ಆಯಿತು. ಕೆ ಎಂ. ಅವರಿಗೊಂದು ಗಿಫ್ಟ್ ಕೊಡುವುದರೊಂದಿಗೆ ಒಂದು ಅರ್ಥ ಪೂರ್ಣವೂ ಆರೋಗ್ಯಕರವೂ ಆದ ಬರಹ ಕಮ್ಮಟ ಏರ್ಪಡಿಸಿದರೆ ಹೇಗೆ.. ವರುಷಗಳಿಂದ ನಮ್ಮ ತಲೆಯಲ್ಲಿ ಕೊಳೆಯುತ್ತಿದ್ದ ವಿಚಾರವೊಂದು ಬರಹರೂಪಕ್ಕೆ ಇಳಿದದ್ದೇ ಆಗ. "ಬರಹ ಕಮ್ಮಟಕ್ಕೆ ಸಾಹಿತ್ಯಾಸಕ್ತರು ಸಂಪರ್ಕಿಸಿ" ಎನ್ನುವ ಜಾಲತಾಣದ ಕೋರಿಕೆಗೆ ನಮ್ಮ ಬರಹಗಾರರು ಸ್ಪಂದಿಸಿದ ರೀತಿ ನಮ್ಮೆಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಲ್ಲ ನಮ್ಮ ಬರಹಗಾರರ ಅಕ್ಷರ ದಾಹದ ಉತ್ಸಾಹ ನಿಜಕ್ಕೂ ಶ್ಲಾಘನೀಯ ಆದ್ದರಿಂದ ಮೊದಲು ಕಾದಿರಿಸಿದ್ದ ಸಣ್ಣ ಹಾಲಿನಿಂದ ಕಾರ್ಯಕ್ರಮವನ್ನು ಪಕ್ಕದ ಹಾಲಿಗೆ ಸ್ಥಳಾಂತರಿಸಬೇಕಾಗಿ ಬಂತು. ಅಲ್ ಹಮ್ದುಲಿಲ್ಲಾಹ್. ಶಿಬಿರ ಅರ್ಥಪೂರ್ಣವಾಗಲು ನಾವು ಸತತ ಪ್ರಯತ್ನಗಳನ್ನು ಮಾಡಿದೆವು. ಅದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳ ಕಿಟ್ ಪ್ರತಿ ಶಿಬಿರಾರ್ಥಿಗಳಿಗೂ ಒದಗಿಸಿದೆವು. ಒಂದು ಕಡೆಯಿಂದ ಹೊಸ ಬರಹಗಾರರನ್ನು ಹುಡುಕಿ ಅವರೆಲ್ಲರಿಗೊಂದು ಶಿಬಿರ ಏರ್ಪಡಿಸುವ ಸಿದ್ದತೆ ಮುಗಿಯುವಷ್ಟರಲ್ಲಿ ಕಾರ್ಯಕ್ರಮದ ಇನ್ನೊಂದು ಮಗ್ಗಲು ಸಂಪೂರ್ಣ ಬದಲಾಗಿತ್ತು. ಸಮಾರೋಪ ಸಮಾರಂಭಕ್ಕೆ ನಮ್ಮ ಧಾರ್ಮಿಕ ರಾಜಕೀಯ ಸಾಂಘಿಕ ನೇತಾರರು ಹುಮ್ಮಸ್ಸಿನಿಂದ ಅತಿಥಿಗಳಾಗಿ ಬರಲು ಒಪ್ಪಿದ್ದರು. ಅದಕ್ಕೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳೂ ಒಂದು ಅದ್ಬುತ ಕನಸಿನಂತೆ ನಡೆಯತೊಡಗಿತು.
ಅಷ್ಟರಲ್ಲಿ ನಮ್ಮ ಅಬಿಮಾನ ನಮ್ಮೊಳಗಿನ ಚೇತನ ಸದಾ ಸ್ಪೂರ್ತಿಯ ಚಿಲುಮೆ ಬರಹಗಾರರ ಬೆನ್ನು ತಟ್ಟಿ ಹಲವು ಖ್ಯಾತ ನಾಮರನ್ನು ಜಗತ್ತಿಗೆ ಪರಿಚಯಿಸಿದ ಅಲ್ ಅನ್ಸಾರ್ ಮೊಯ್ಲಾಂಜಿ ಸಂಪಾದಕರಾದ ಕೆ ಎಂ ಅವರಿಗೆ ಕೊಫ್ಟ್ ಕೊಡಲು ನಾವು ಮೊದಲು ನಿಗದಿಪಡಿಸಿದ್ದ ಸಣ್ಣ "ಲ್ಯಾಪ್ ಟಾಪ್" ಕೆ ಎಂ ಅಭಿಮಾನಿಗಳ ಉದಾರ ಮನಸ್ಸಿನ ಅನಾವರಣಕ್ಕೆ ಸಾಕ್ಷಿಯಾಗಿ ಎರಡು ಲಕ್ಷ ರೂಪಾಯಿ ನಗದು, ಒಂದು ಲ್ಯಾಪ್, ಕೋಟು, ಮುಸ್ಲಿಂ ಸಾಹಿತ್ಯದ ಮೇರು ಗುರು ಎಂ ಎ ಉಸ್ತಾದರ ಪುಣ್ಯ ಹೆಸರಿನ ನೂರುಲ್ ಉಲಮಾ ಪ್ರಶಸ್ತಿ, ಪ್ರಶಸ್ತಿ ಪತ್ರ ಹೀಗೆ ಸಾಗುತ್ತಲೇ ಇತ್ತು.ಇದು ನಮ್ಮ ಒಳಗೆ ಕೆ ಎಂ ಸೃಷ್ಟಿಸಿದ ಪುಳಕ ಎಂತದ್ದು ಎನ್ನುವುದಕ್ಕೆ ಸಾಕ್ಷಿ..ಕೊಡಗಿನ ಕೆ ಎಂ ಅಭಿಮಾನಿಯೊಬ್ಬರು ಏಲಕ್ಕಿ ಹಾರವನ್ನು ಕೆ ಎಂ ಅವರ ಕೊರಳಿಗೆ ಹಾಕಿ ಅವರ ಮುಖವನ್ನು ಸವರಿದಾಗ ನನ್ನ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯಿತು. ಮುಸ್ಲಿಂ ಸಾಹಿತ್ಯದಲ್ಲಿ ಕೆ ಎಂ ಎಬ್ಬಿಸಿದ ಹವಾ ಯಾವ ಮಟ್ಟದ್ದು ಎನ್ನುವುದು ನಮಗಂತೂ ಊಹೆಗೂ ನಿಲುಕುತ್ತಿಲ್ಲ..
ನಮ್ಮ ಓರ್ಗನೈಝರ್ ಅನಿವಾಸಿ ಭಾರತೀಯರಾದ ಆಝೀಝ್ ಸಖಾಫಿ ವಿಟ್ಲರವರ ಮಾರ್ಗದರ್ಶನದಲ್ಲಿ ಸಂಪೂರ್ಣ ಸಿದ್ದತೆಯೊಂದಿಗೆ  ಮೂಡಿ ಬಂದ ಸಮಾರಂಭ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ತಮ್ಮ ವೈಯುಕ್ತಿಕ ವಿಚಾರಗಳು ಸಭೆ ಸಮಾರಂಭಗಳು ಇನ್ನಿತರ ಅರ್ಜೆಂಟುಗಳನ್ನು ಬದಿಗಿಟ್ಟು ದಿನದ ಮಟ್ಟಿಗೆ ಎಲ್ಲರೂ ನಮ್ಮನ್ನು ಕೂಡಿಕೊಂಡರು. ಅತಿಥಿಗಳಾಗಿದ್ದ ಅಬೂಬರ್ ರೈ ಕೊ ಅವರು ತಮ್ಮ ವಿದೇಶ ಪ್ರಯಾಣದ ಟಿಕೇಟನ್ನೇ ಮುಂದೂಡಿ ನಮ್ಮೊಂದಿಗೆ ಇದ್ದರು. ಮೊನ್ನೆಯಷ್ಟೇ ಬೈಕಿಂದ ಬಿದ್ದು ಕೈ ಕಾಲುಗಳು ಗಾಯಗೊಂಡು ವಿಪರೀತ ನೋವು ಪಡುತ್ತಿದ್ದ ಬರಹಗಾರ ಮಿತ್ರ ಅದೆಲ್ಲವನ್ನೂ ಲೆಕ್ಕಿಸದೆ ನಮ್ಮ ಕೂಡಿಕೊಂಡು ಕೊನೆವರೆಗೂ ನಮ್ಮೊಂದಿಗೇ ಇದ್ದ. ಇವು ನಮ್ಮ ಕಾರ್ಯಕ್ರಮದ ಯಶಸ್ಸಿನ ಕೆಲವು ಸ್ಯಾಂಪಲ್ಲುಗಳು ಮಾತ್ರ.

ನಾವು ಸಂಘಟಿಸಿದ ಕಾರ್ಯಕ್ರಮದಲ್ಲಿ ಡಾ ನಾದಾ ಶೆಟ್ಟಿಯವರು ಕೊಟ್ಟ ತರಬೇತಿ ಅರ್ಥಪೂರ್ಣವಾಗಿತ್ತು. ಶಿಬಿರಾರ್ಥಿಗಳನ್ನು ಉತ್ಸಾಹ ಇಮ್ಮಡಿಗಿಳಿಸುತ್ತಲೇ ತಮ್ಮ ವಿಚಾರಗಳನ್ನು ಅವರ ಎದೆಗಿಳಿಸುವ ಅವರ ಚಾಕಚಕ್ಯತೆಗೆ ಸಲಾಂ. ಅವರ ತರಬೇತಿಯನ್ನು ಆಲಿಸಿದ ವಕ್ಫ್ ನಿರ್ದೇಶಕರೂ ಎಸ್ ಎಸ್ ಎಫ್ ರಾಜ್ಯಾದ್ಯಕ್ಷರೂ ಆದ ಶಾಫಿ ಸ ಅದಿಯವರೇ  ಅವರನ್ನು ಹಾಡಿ ಹೊಗಳಿದರು. ಜೊತೆ ಇದ್ದ ರೊನಾಲ್ಡ್ ಫೆರ್ನಾಂಡಿಸ್ ಅಚ್ಚುಕಟ್ಟಾಗಿ ಮಾತುಗಳನ್ನಾಡಿ ಶಿಬಿರಾರ್ಥಿಗಳ ಮನ ಗೆದ್ದರಲ್ಲದೆ. ಅವರು ಕೂಡ ತನ್ನ ತರಾತುರಿಯ ದೂರದ ಪ್ರಯಾಣವೊಂದು ಮೊಟಕುಗೊಳಿಸಿ ನಮ್ಮನ್ನು ಕೂಡಿಕೊಂಡು ಎಲ್ಲರ ಸ್ಪೂರ್ತಿಯ ಚಿಲುಮೆಯಾದರು.

ಎಲ್ಲವೂ ನಾವಂದುಕೊಂಡದ್ದಕ್ಕಿಂದ ಎರಡು ಪಟ್ಟು ಜೋರಾಗಿಯೇ ನಡೆದು ಹೋಯಿತು. ಅಲ್ಲಾಹನಿಗೆ ಲಾಕ್ ಲಾಕ್ ಶುಕ್ರ್. ಬೆಳಗ್ಗಿನಿಂದ ಸುತ್ತೆಲ್ಲ ಚಟುವಟಿಕೆಯಲ್ಲಿ ಓಡಾಡುತ್ತಿದ್ದ ಕೆ ಎಂ ಅವರು ಪ್ರಶಸ್ತಿ ಸ್ವೀಕರಿಸುವ ಸಮಯ ಬರುವಷ್ಟರಲ್ಲಿ ಪೇಲವಗೊಂಡಂತಿದ್ದರು. ನಾನು ನನ್ನ ನಾಲ್ಕು ಗೆಳೆಯರಿಗೆ ತಿಳಿಸಿದಾಗ ಅವರು ಅದು ಆನಂದಬಾಷ್ಪ ಅಂತ ತಮ್ಮ ಕೆಲಸದಲ್ಲಿ ಮಗ್ನರಾದರು. ಆದರೆ ನನ್ನ ಮನಸ್ಸು ಕೇಳಲಿಲ್ಲ ಹತ್ತಿರ ಹೋಗಿ ವಿಚಾರಿಸಿದರೆ " ನಾನು ಈ ಪ್ರಶಸ್ತಿಗೆ ಅರ್ಹನೇ ಯಂಶ? ನಾನು ಏನು ಮಾಡಿದ್ದೇನೆ ಅಂತ ನೀವೆಲ್ಲ ಇಷ್ಟು ಪ್ರೀತಿ ತೋರಿಸುತ್ತಿರುವುದು?" ಒಬ್ಬ ಶ್ರೇಷ್ಟ ಸಾಧಕನ ಬಾಯಿಯಿಂದ ಹೊರಟ ಈ ಮಾತುಗಳು ನನ್ನ ಚಕಿತಗೊಳಿಸಿತು. ಅವರು ಆ ಮಾತುಗಳನ್ನಾಡುವಾಗ ಪುಟ್ಟ ಮಗುವೊಂದು ಉಮ್ಮನಲ್ಲಿ ತನ್ನ ಸಂಕಟವನ್ನು ಅರುಹುವ ಹಾಗೆ ಕಂಡರು. ಯಾ ಅಲ್ಲಾಹ್... ಎಂತಾ ಬರಹದ ಶಕ್ತಿಯನ್ನು ನೀನು ನಮಗೆ ಕರುಣಿಸಿದೆ? "ಕೆ ಎಂ.ನಮ್ಮೊಳಗೆ ಖಾಯಂ" ಎಂದು ನಾನಂದು ಹಾಕಿದ್ದ ವಾಟ್ಸಾಪ್ ಸ್ಟೇಟಸ್ಸಿಗೆ ಇಲ್ಲಿ ಪೂರ್ಣ ಪುರಾವೆ ಸಿಕ್ಕಿತ್ತು.

ಕಾರ್ಯಕ್ರಮದ ಕೊನೆಯಲ್ಲಿ ಊಟದ ಏರ್ಪಾಡು ಸುಸೂತ್ರವಾಗಿ ನಡೆಯಿತು. ಸುಮಾರು ಎರಡೂವರೆ ತನಕ ಶಿಬಿರಾರ್ಥಿ ಅತಿಥಿಗಳಾದಿ ಎಲ್ಲರೂ ಹಸಿದೇ ಕೂತಿದ್ದರು. ಕೆ.ಎಂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತರು. ಎಲ್ಲರ ಮನದಲ್ಲೂ ಭದ್ರವಾದರು. ಎಲ್ಲರೂ ಹೊರಟ ಮೇಲೆ ಕೆ. ಎಂ. ತನಗೆ ದೊರಕಿದ ಪ್ರಶಸ್ತಿ, ತನ್ನ ಪುಟ್ಟ ಮಕ್ಕಳೊಂದಿಗೆ ಇನ್ನಷ್ಟು ಸಾಹಿತ್ಯಿಕ ಚಳವಳಿ ಕೆಲಸಗಳು ತರಾತುರಿಯಲ್ಲಿ ಮುಗಿಸಬೇಕಾದ ಜವಾಬ್ದಾರಿ ಹೊತ್ತು. ಆಟೋ ಹತ್ತಿ ಮನೆ ದಾರಿ ಹಿಡಿದರು. ಹೌದು ಎಲ್ಲವೂ ಕನಸಿನಂತೆಯೇ ನಡೆಯಿತು. ಕಾರ್ಯಕ್ರಮಕ್ಕೆ ಆಹೋರಾತ್ರಿ ಶ್ರಮಿಸಿದ ಎಲ್ಲರೂ ನಮ್ಮ ಮನದೊಳಗೆ ಸದಾ ಇದ್ದೇ ಇರುತ್ತಾರೆ. ಕೆ ಎಂ ಮೇಲಿನ ಅಭಿಮಾನಕ್ಕೆ ತಾವು ಕಷ್ಟ ಪಟ್ಟು ದುಡಿದ, ಮರುಭೂಮಿಯಲ್ಲಿ ರಕ್ತ ಬೆವರಾಗಿಸಿದ ಎಲ್ಲರ ನೆರವೂ ಹರಿದು ಬಂದಿತ್ತು. ಕಾರ್ಯಕ್ರಮದಲ್ಲಿ ಸಂಘಟಕರಾಗಿ ಪ್ರತಿ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲರಿಗೂ ಕೃತಜ್ಞ, ಕಾರ್ಯಕ್ರಮದ ನಿರೂಪಕರಿಗೂ ಭಾಗವಹಿಸಿದವರಿಗೂ ಅತಿಥಿಗಳಿಗೂ ನಾವು ಋಣಿ ಅಲ್ಲಾಹನು ಇದನ್ನು ಸತ್ಕರ್ಮಗಳ ಸಾಲಿಗೆ ಸೇರಿಸಲಿ ಆಮೀನ್ ನಿಮ್ಮೆಲ್ಲರ ದುಆ ಪ್ರಾರ್ಥನೆಯ ನಿರೀಕ್ಷೆಯಲ್ಲಿ....

*ನಿಮ್ಮ ಯಂಶ ಬೇಂಗಿಲ ಬೆಂಗಳೂರು*

ಜಮಾಅತ್ ಅಂಕಿಅಂಶ

*ನಮ್ಮ ಮಸೀದಿಯಲ್ಲಿ ಜಮಾಅತ್ ಅಂಕಿಅಂಶ ಇದೆಯೇ?*
********************************

✍🏻 ರಶೀದ್ ವಿಟ್ಲ.

ನಮ್ಮ ಮಸೀದಿ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ಯಾರ್ಯಾರ ಮನೆಗಳು ಮತ್ತು ವ್ಯಕ್ತಿಗಳು ಸುನ್ನೀ ಪಂಗಡದ ಯಾವ ಗ್ರೂಪಿಗೆ ಸೇರಿದವರು? ಜಮಾಅತೆ ಇಸ್ಲಾಮಿಗೆ ಸೇರಿದ ಜನರು ಎಷ್ಟಿದ್ದಾರೆ? ಯಾರು ಸಲಫಿ? ಜಮಾಅತ್ ನಲ್ಲಿ ಮುಜಾಹಿದ್ ಆಶಯದವರಿದ್ದಾರೆಯೇ? ಎಂಬುವುದು ಬಹುತೇಕ ಜಮಾಅತ್ ನ ಆಡಳಿತ ಕಮಿಟಿ ಅಥವಾ ಜಮಾಅತ್ ನವರಿಗೆ ಕರಾರುವಕ್ಕಾಗಿ ಗೊತ್ತಿದೆ. ಈ ಬಗ್ಗೆ ಅವರವರ ಆಶಯದ ಸಮ್ಮೇಳನ ನಡೆಸಲು ಜಮಾಅತ್ ವ್ಯಾಪ್ತಿಯಲ್ಲಿ ಯುವಕರ ಸಂಘಟನೆಗಳೂ ಬೇಕಾದಷ್ಟಿವೆ. ಆದರೆ ನಾನಿಲ್ಲಿ ಪ್ರಶ್ನಿಸಲು ಹೊರಟಿರುವುದು ಇವುಗಳನ್ನಲ್ಲ.

ನಮ್ಮ ಮಸೀದಿ ವ್ಯಾಪ್ತಿಯಲ್ಲಿ ಮನೆಗಳೆಷ್ಟು ಎಂಬ ಲೆಕ್ಕಾಚಾರ ಎಲ್ಲ ಮಸೀದಿಗಳಲ್ಲೂ ಸಾಮಾನ್ಯವಾಗಿ ಇದೆ. ಯಾಕೆಂದರೆ ಉಸ್ತಾದರಿಗೆ ಸಂಬಳ ಕೊಡಲು ತಿಂಗಳ ವಂತಿಗೆ ಸರಿಯಾಗಿ ಜಮೆ ಆಗ್ಬೇಕಲ್ವೇ? ಸಾವಿರ ಮನೆಗಳಿರುವ ದೊಡ್ಡ ಜಮಾಅತ್ ನಿಂದ ಹಿಡಿದು 30-40 ಮನೆಗಳಿರುವ, ಕೆಲವೆಡೆ ಐದಾರು ಮನೆಯಿರುವ ಸಣ್ಣ ಜಮಾಅತ್ ಕೂಡಾ ನಮ್ಮಲ್ಲಿದೆ. ಆದರೆ ಹೆಚ್ಚಿನ ಎಲ್ಲಾ ಜಮಾಅತ್ ಅಥವಾ ಮಸೀದಿಗಳು ತನ್ನ ಅಧೀನದ ಮನೆಗಳನ್ನು ಮಾಸಿಕ ವಂತಿಗೆ, ಕುತುಬಿಯತ್, ನೇರ್ಚೆ, ರಾತೀಬಿನ ರೊಟ್ಟಿಗಳಿಗೆ ಸೀಮಿತಗೊಳಿಸಿದೆ.

ನೀವು ಯಾವುದೇ ಮಸೀದಿಯ ಆಡಳಿತ ಮಂಡಳಿಗೆ ಹೋಗಿ ಜಮಾಅತ್ ನ ಅಂಕಿಅಂಶ ಕೇಳಿ. ಬಹುತೇಕ ಜಮಾಅತಿಗರು ನಮ್ಮ ಅಧೀನದಲ್ಲಿ ಇಂತಿಷ್ಟು ಮನೆಗಳಿವೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾರೆ. ಆದರೆ ಅಲ್ಲಿ ಬಡ/ಅಶಕ್ತರ ಮನೆಗಳು ಎಷ್ಟಿವೆ? ನೋಡಲು ಮಧ್ಯಮ ವರ್ಗದಂತೆ ಕಂಡರೂ ಒಂದೊತ್ತಿನ ಊಟಕ್ಕೆ ಪರದಾಡುವ ಸ್ವಾಭಿಮಾನದ ಕುಟುಂಬಗಳಿವೆಯೇ? ಮನೆಯಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು? ಗಂಡಸರು, ಹೆಂಗಸರು, ಶಾಲೆಗೆ ಹೋಗುವವರು, ಉದ್ಯೋಗದಲ್ಲಿರುವವರು ಯಾರೆಲ್ಲಾ? ಯಾರ ಮನೆಯಲ್ಲಿ ಹದಿಹರೆಯ ಕಳೆದ ವಯಸ್ಸಿನ ಹೆಣ್ಣು ಮಕ್ಕಳು ಎಷ್ಟು ಮಂದಿ ಮದುವೆಯಾಗದೇ ಉಳಿದಿದ್ದಾರೆ? ಯಾವ ಮನೆಯಲ್ಲಿ ಮೂಲಭೂತ ಸೌಕರ್ಯವಾದ ಟಾಯ್ಲೆಟ್, ಬಾತ್ ರೂಮ್ ವ್ಯವಸ್ಥೆ ಇಲ್ಲ? ಯಾರ ಮನೆಗೆ ಇನ್ನೂ ವಿದ್ಯುತ್ ವ್ಯವಸ್ಥೆ ಆಗಿಲ್ಲ? ಎಲ್ಲೆಲ್ಲಾ ಇವತ್ತಿನ ಯುವಕ ಯುವತಿಯರು ಅನಕ್ಷರಸ್ಥರಿದ್ದಾರೆ? ಆರ್ಥಿಕ ಮುಗ್ಗಟ್ಟಿನಿಂದ ಶಾಲೆ ಬಿಟ್ಟವರೆಷ್ಟು? ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗ, ಸರಕಾರಿ ಉದ್ಯೋಗದಲ್ಲಿ ಯಾರಿದ್ದಾರೆ? ಎಷ್ಟು ಆಲಿಂಗಳು, ಮೌಲವಿಗಳು ನಮ್ಮಲ್ಲಿದ್ದಾರೆ? ಉದ್ಯಮಿಗಳ ಸಂಖ್ಯೆ ಎಷ್ಟು? ಯಾವ ಮನೆಗಳಲ್ಲೆಲ್ಲಾ ಮಾರಕ ರೋಗಗಳಿಂದ ಜಮಾಅತರು ತೊಂದರೆಗೆ ಒಳಗಾಗಿದ್ದಾರೆ? ಅವರಿಗೆ ಸೂಕ್ತ ಚಿಕಿತ್ಸೆ ಬೇಕಾಗಿದೆಯೇ? ಯಾರೆಲ್ಲಾ ಹಾಸಿಗೆ ಹಿಡಿದಿದ್ದಾರೆ? ಎಲ್ಲಿ ಮನೆಗಳು ರಿಪೇರಿ ಆಗಬೇಕು? ಗಂಡಂದಿರು ಅಥವಾ ಗಂಡಸರಿಲ್ಲದ ಮನೆಗಳೆಷ್ಟು ಇವೆ? ವಿಧವೆಯರ ಸಂಖ್ಯೆ ಎಷ್ಟು? ಗಲ್ಫ್ ಗೆ ಹೋಗಿರುವ ಸದಸ್ಯರು ಎಷ್ಟಿದ್ದಾರೆ? ಒಂದು ಹೊತ್ತಿನ ಊಟಕ್ಕೆ ಪರದಾಡುವ ಕುಟುಂಬಗಳು ಎಷ್ಟಿವೆ? ಶ್ರೀಮಂತರ ಮನೆಗಳೆಷ್ಟು? ಯಾರ್ಯಾರ ಮನೆಗಳಲ್ಲಿ ಗ್ಯಾಸ್ ಸೌಲಭ್ಯವಿದೆ? ಯಾರ ಮನೆಗಳಿಗೆ ಯಾವುದರ ತುರ್ತು ಅಗತ್ಯವಿದೆ? ಏನು ಸಹಾಯ ಬೇಕಾಗಿದೆ? ಇದನ್ನು ಪ್ರಶ್ನಿಸಿದರೆ  ಹೆಚ್ಚಿನ ಜಮಾಅತ್ ಕಮಿಟಿಯಲ್ಲಿ ಉತ್ತರವಿಲ್ಲ. ಯಾಕೆಂದರೆ ಇದು ಜಮಾಅತಿನ ಕೆಲಸವಲ್ಲವೆಂದು ಸುಮ್ಮನೆ ಕೂರುವವರೇ ಅಧಿಕ.

ಮಂಗಳೂರಿನ "ಎಂ.ಫ್ರೆಂಡ್ಸ್" ತಂಡ ಈ ಕುರಿತು ಚಿಂತಿಸಿ ಇದೀಗಾಗಲೇ ಮೂರು ಜಮಾಅತ್ ನಲ್ಲಿ ಸರ್ವೇ ಕಾರ್ಯ ನಡೆಸಿದೆ. ಗ್ರಾಮೀಣ ಪ್ರದೇಶವಾದ ವಗ್ಗ ಜಮಾಅತ್ ನ 96 ಮನೆಗಳು, ಕೋಡಪದವು ಜುಮಾ ಮಸೀದಿಯ 65 ಮನೆಗಳು, ಪೊಸೊಳಿಕೆಯ ಜಮಾಅತ್ ನ 41 ಮನೆಗಳನ್ನು ಸಂದರ್ಶಿಸಿ ಅವರ ಫುಲ್ ಡಾಟಾ ಸಂಗ್ರಹಿಸಿ ಪ್ರಾಯೋಗಿಕವಾಗಿ ಸರ್ವೇ ಮಾಡಿ ಯಶಸ್ಸು ಸಾಧಿಸಿದೆ. ಇದಕ್ಕೆ ಆ ಮೂರೂ ಮಸೀದಿಗಳ ಆಡಳಿತ ಸಮಿತಿ ಸಂಪೂರ್ಣ ಸಹಕಾರವನ್ನೂ ನೀಡಿದೆ. "ಎಂ.ಫ್ರೆಂಡ್ಸ್" ತಂಡದ ಕ್ರಿಯಾಶೀಲ ಸದಸ್ಯರ ಹಾಗೂ ಮಸೀದಿ ಕಮಿಟಿಯ 4 ತಂಡಗಳನ್ನು ರಚಿಸಿ ಅವರನ್ನು ತರಬೇತುಗೊಳಿಸಿ ಕೈಯ್ಯಲ್ಲಿ ಡಾಟಾ ಸಂಗ್ರಹದ ಫಾರಂ ನೀಡಿ ಸರ್ವೇ ಮಾಡಲಾಗಿದೆ. ಒಂದೊಂದು ತಂಡಕ್ಕೆ ಒಬ್ಬೊಬ್ಬರು ನಾಯಕರನ್ನು ನೇಮಿಸಿ ಸರ್ವೇ ಬಳಿಕ ಮಸೀದಿ ವಠಾರದಲ್ಲಿ ಕುಳಿತು ಅವರಲ್ಲಿ ವರದಿ ಮಂಡಿಸಲಾಗುತ್ತದೆ. ಕೊನೆಗೆ ಎಲ್ಲ ಮನೆಗಳ ಫಾರಂ ನ್ನು ಒಟ್ಟುಗೂಡಿಸಿದಾಗ ಮಸೀದಿಯ ಸಮಗ್ರ ಚಿತ್ರಣ ಕೈಗೆ ಸಿಗುತ್ತದೆ. ಎಂ.ಫ್ರೆಂಡ್ಸ್ ಈ ಮೇಲಿನ ಮೂರೂ ಜಮಾಅತ್ ಗಳಲ್ಲಿ ಕೇವಲ ಸರ್ವೇಯನ್ನು ಮಾತ್ರ ಮಾಡಿ ಬಿಟ್ಟಿಲ್ಲ. ನಿರಂತರ ಒಂದು ವರ್ಷದ ಕಾಲ ಆ ಜಮಾಅತ್ ನ್ನು ನಿಗಾದಲ್ಲಿ ಇಟ್ಟುಕೊಂಡು ಅಲ್ಲಿನ ಮನೆಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯ ಕಂಡುಹಿಡಿದು ಕೆಲಸ ಮಾಡಿ ತೋರಿಸಿ ಮಾದರಿ ಜಮಾಅತ್ ಆಗಿ ಪರಿವರ್ತನೆ ಮಾಡಲು ಪ್ರಯತ್ನಿಸಲಾಗಿದೆ. ಅಲ್ಲಿರುವ ಸಮಸ್ಯೆಗಳಿಗೆ ದಾನಿಗಳ ನೆರವಿನಿಂದ ಸೂಕ್ತ ಸ್ಪಂದನ ನೀಡಿದೆ. ಸರ್ವೇ ಬಳಿಕ ಒಂದು ದಿನ ಜಮಾಅತ್ ನಲ್ಲಿರುವ ರೋಗಿಗಳನ್ನು, ಮಹಿಳೆಯರನ್ನು, ಪುರುಷರನ್ನು ಸೇರಿಸಿ ಅವರಿಗೆ ವಿವಿಧ ವೈದ್ಯರುಗಳನ್ನು ತರಿಸಿ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಜಾಗೃತಿ ಶಿಬಿರವನ್ನು ನಡೆಸಿ ಪರಿಹಾರ ಸೂಚಿಸಲಾಗಿದೆ. ನಿರಂತರ ಫಾಲೋಅಪ್ ಮಾಡಲಾಗಿದೆ. ಜಮಾಅತ್ ನ ಸದಸ್ಯರ ವಿಶೇಷವಾಗಿ ಯುವಕರ ಬ್ಲಡ್ ಗ್ರೂಪಿಂಗ್ ಮಾಡಲಾಗಿದೆ. ಇದರಿಂದ ಜಮಾಅತ್ ವ್ಯಾಪ್ತಿಯ ಯಾರಿಗಾದರೂ ರಕ್ತದ ತುರ್ತು ಅಗತ್ಯ ಬಂದರೆ ಸಹಕಾರಿಯಾಗಬಲ್ಲದು. ಮನೆಯಿಲ್ಲದವರಿಗೆ ಮನೆ ವ್ಯವಸ್ಥೆ, ಪ್ರತಿ ತಿಂಗಳು ರೇಶನ್, ಟಾಯ್ಲೆಟ್ ನಿರ್ಮಾಣ, ಮಾಡು ದುರಸ್ತಿ, ಸಾರಣೆ ಹೀಗೇ ಹತ್ತು ಹಲವು ಕೆಲಸಗಳನ್ನು ಜಾರಿಗೊಳಿಸಲಾಗಿದೆ. ಮದುವೆಯಾಗದ ಬಡ ಹೆಣ್ಮಕ್ಕಳ ವಿವರವನ್ನು ಸಾಮೂಹಿಕ ವಿವಾಹ ಮಾಡುವ ಸಂಸ್ಥೆಗಳಿಗೆ ನೀಡಲಾಗಿದೆ. ಹೀಗೇ ಒಟ್ಟು ಮೂರು ಜಮಾಅತ್ ಗಳನ್ನು ಎಂ.ಫ್ರೆಂಡ್ಸ್ ತಂಡ ಕರಾರುವಕ್ಕಾಗಿ ವಿಶಿಷ್ಟವಾಗಿ ಸರ್ವೇ ಮಾಡಿ ಮಾದರಿಯೋಗ್ಯ ಜಮಾಅತ್ ನ್ನಾಗಿ ಮಾಡಲು ಪ್ರಯತ್ನಿಸಿ ಸಫಲವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಮುಂದುವರೆಸಿಕೊಂಡು ಹೋಗಬೇಕಾದುದು ಆಯಾಯ ಜಮಾಅತ್ ನ ಕರ್ತವ್ಯ. ಎಂ.ಫ್ರೆಂಡ್ಸ್ ಇದಕ್ಕೊಂದು ಮಾರ್ಗ ತೋರಿಸಿಕೊಟ್ಟಿದೆಯಷ್ಟೆ.

ನಮ್ಮ ಜಮಾಅತ್ ನಲ್ಲಿರುವ ಯುವಕರನ್ನು ಇಂತಹ ಕೆಲಸಗಳಿಗೆ ಖತೀಬರು ಪ್ರೇರೇಪಿಸಬೇಕು. ಪ್ರತಿ ಮಸೀದಿಗಳಲ್ಲೂ ಡಾಟಾ ಫಾರಂ ಮುದ್ರಣ ಮಾಡಿ ತಮ್ಮ ಅಧೀನದ ಮನೆಗಳ ಡಾಟಾವನ್ನು ಸಂಗ್ರಹಿಸಿ ಅದನ್ನು ಸಮುದಾಯದ ಉದಾರಿಗಳಿಗೆ ತೋರಿಸಿಕೊಟ್ಟರೆ ಬಹುತೇಕ ಮುಸ್ಲಿಮರ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ. ಅದರ ಜೊತೆಗೆ ಮಸೀದಿಗೆ ತಮ್ಮ ವ್ಯಾಪ್ತಿಯ ಸಮಗ್ರ ವಿವರ ಕೂಡಾ ಸಿಗುತ್ತದೆ. ಡಾಟಾ ಸಂಗ್ರಹಿಸಿದರೆ ಸಮಸ್ಯೆಗಳಿರುವವರಿಗೆ ಪರಿಹಾರ ನೀಡಲು ನಮ್ಮಲ್ಲಿ ಅವೆಷ್ಟೋ ದೊಡ್ಡ ದೊಡ್ಡ ಸೇವಾ ಸಂಸ್ಥೆಗಳಿವೆ. ಇಂತಹುದಕ್ಕೆ ಖಂಡಿತಾ ಸ್ಪಂದಿಸುವವರಿದ್ದಾರೆ. ನಮ್ಮ ಖಾಝಿಗಳು, ಖತೀಬರು, ಜಮಾಅತ್ ಕಮಿಟಿ, ಸಂಯುಕ್ತ ಜಮಾಅತ್ ಕಮಿಟಿಗಳು, ಮುಸ್ಲಿಮ್ ಸಂಘ ಸಂಸ್ಥೆಗಳು ಈ ಬಗ್ಗೆ ಗಹನವಾದ ಚಿಂತನೆ ನಡೆಸಿ ಮುಂದಡಿ ಇಡಬೇಕಾಗಿದೆ. ಈ ಕೆಲಸ ಆಗಬಹುದೆಂದು ನಿರೀಕ್ಷಿಸೋಣ. ನಮ್ಮ ಮಸೀದಿ ವ್ಯಾಪ್ತಿಯ ಜಮಾಅತ್ ಇತರರಿಗೆ ಮಾದರಿಯಾಗಲೆಂದು ಆಶಿಸೋಣ.