ಮುಖಪುಟದ ಕಮೆಂಟೊಂದು ನಮ್ಮನ್ನು ಬಹು ದೂರ ತಲುಪಿಸಿದ ವಿಶಿಷ್ಟ ಅನುಭವ ಸಂಭ್ರಮ ನಮ್ಮ ಪಾಲಿಗೆ ನಿನ್ನೆ, "ಕೆ ಎಂ ಅವರಿಗೆ ಗಿಫ್ಟ್ ಕೊಡಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿರಿ" ಎನ್ನುವ ಮುಸ್ತಫ ಗಡಿಯಾರರ ಒಂದೇ ಒಂದು ಕಮೆಂಟು ಮತ್ತೆ ನಡೆದದ್ದೆಲ್ಲವೂ ನಮ್ಮ ಪಾಲಿಗೆ ಅದ್ಬುತ... ಆ ಕಮೆಂಟಿಗೆ ಬೆಂಬಲವಾಗಿ ಜನಕ್ಕೆ ಜನ ಸೇರಿದರು, ತಮ್ಮ ತರಾತುರಿ ಕೆಲಸವನ್ನೆಲ್ಲ ಬಿಟ್ಟು ನಮ್ಮನ್ನು ಕೂಡಿಕೊಂಡರು."ನಮ್ಮ ಕೆ ಎಂ ಅಲ್ಲವಾ" ಎಂದು ನಮ್ಮೊಂದಿಗೆ ದನಿಗೂಡಿಸಿ ಹುರಿದುಂಬಿಸಿದರು. ಆಗ ನಾವೊಂದಷ್ಟು ಜನ ಫೀಲ್ಡಿಗೆ ಧೈರ್ಯವಾಗಿ ಇಳಿದೆವು ಅದರ ಹಿಂದೆಯೂ ಇದ್ದ ಉತ್ಸಾಹ ನಮ್ಮ ಕೆ ಎಂ ಎನ್ನುವ ಅದಮ್ಯ ಪ್ರೀತಿ. ಜೊತೆಗೆ ನಮ್ಮ ಯುವ ಬರಹಗಾರರಿಗೆ ಏನಾದರೂ ಸಿಗಬೇಕು ಎನ್ನುವ ಛಲ.
ಹಾಗೆಯೇ ಆಯಿತು. ಕೆ ಎಂ. ಅವರಿಗೊಂದು ಗಿಫ್ಟ್ ಕೊಡುವುದರೊಂದಿಗೆ ಒಂದು ಅರ್ಥ ಪೂರ್ಣವೂ ಆರೋಗ್ಯಕರವೂ ಆದ ಬರಹ ಕಮ್ಮಟ ಏರ್ಪಡಿಸಿದರೆ ಹೇಗೆ.. ವರುಷಗಳಿಂದ ನಮ್ಮ ತಲೆಯಲ್ಲಿ ಕೊಳೆಯುತ್ತಿದ್ದ ವಿಚಾರವೊಂದು ಬರಹರೂಪಕ್ಕೆ ಇಳಿದದ್ದೇ ಆಗ. "ಬರಹ ಕಮ್ಮಟಕ್ಕೆ ಸಾಹಿತ್ಯಾಸಕ್ತರು ಸಂಪರ್ಕಿಸಿ" ಎನ್ನುವ ಜಾಲತಾಣದ ಕೋರಿಕೆಗೆ ನಮ್ಮ ಬರಹಗಾರರು ಸ್ಪಂದಿಸಿದ ರೀತಿ ನಮ್ಮೆಲ್ಲರನ್ನೂ ಚಕಿತಗೊಳಿಸಿದ್ದು ಸುಳ್ಳಲ್ಲ ನಮ್ಮ ಬರಹಗಾರರ ಅಕ್ಷರ ದಾಹದ ಉತ್ಸಾಹ ನಿಜಕ್ಕೂ ಶ್ಲಾಘನೀಯ ಆದ್ದರಿಂದ ಮೊದಲು ಕಾದಿರಿಸಿದ್ದ ಸಣ್ಣ ಹಾಲಿನಿಂದ ಕಾರ್ಯಕ್ರಮವನ್ನು ಪಕ್ಕದ ಹಾಲಿಗೆ ಸ್ಥಳಾಂತರಿಸಬೇಕಾಗಿ ಬಂತು. ಅಲ್ ಹಮ್ದುಲಿಲ್ಲಾಹ್. ಶಿಬಿರ ಅರ್ಥಪೂರ್ಣವಾಗಲು ನಾವು ಸತತ ಪ್ರಯತ್ನಗಳನ್ನು ಮಾಡಿದೆವು. ಅದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳ ಕಿಟ್ ಪ್ರತಿ ಶಿಬಿರಾರ್ಥಿಗಳಿಗೂ ಒದಗಿಸಿದೆವು. ಒಂದು ಕಡೆಯಿಂದ ಹೊಸ ಬರಹಗಾರರನ್ನು ಹುಡುಕಿ ಅವರೆಲ್ಲರಿಗೊಂದು ಶಿಬಿರ ಏರ್ಪಡಿಸುವ ಸಿದ್ದತೆ ಮುಗಿಯುವಷ್ಟರಲ್ಲಿ ಕಾರ್ಯಕ್ರಮದ ಇನ್ನೊಂದು ಮಗ್ಗಲು ಸಂಪೂರ್ಣ ಬದಲಾಗಿತ್ತು. ಸಮಾರೋಪ ಸಮಾರಂಭಕ್ಕೆ ನಮ್ಮ ಧಾರ್ಮಿಕ ರಾಜಕೀಯ ಸಾಂಘಿಕ ನೇತಾರರು ಹುಮ್ಮಸ್ಸಿನಿಂದ ಅತಿಥಿಗಳಾಗಿ ಬರಲು ಒಪ್ಪಿದ್ದರು. ಅದಕ್ಕೆ ಬೇಕಾದ ಎಲ್ಲಾ ಕೆಲಸ ಕಾರ್ಯಗಳೂ ಒಂದು ಅದ್ಬುತ ಕನಸಿನಂತೆ ನಡೆಯತೊಡಗಿತು.
ಅಷ್ಟರಲ್ಲಿ ನಮ್ಮ ಅಬಿಮಾನ ನಮ್ಮೊಳಗಿನ ಚೇತನ ಸದಾ ಸ್ಪೂರ್ತಿಯ ಚಿಲುಮೆ ಬರಹಗಾರರ ಬೆನ್ನು ತಟ್ಟಿ ಹಲವು ಖ್ಯಾತ ನಾಮರನ್ನು ಜಗತ್ತಿಗೆ ಪರಿಚಯಿಸಿದ ಅಲ್ ಅನ್ಸಾರ್ ಮೊಯ್ಲಾಂಜಿ ಸಂಪಾದಕರಾದ ಕೆ ಎಂ ಅವರಿಗೆ ಕೊಫ್ಟ್ ಕೊಡಲು ನಾವು ಮೊದಲು ನಿಗದಿಪಡಿಸಿದ್ದ ಸಣ್ಣ "ಲ್ಯಾಪ್ ಟಾಪ್" ಕೆ ಎಂ ಅಭಿಮಾನಿಗಳ ಉದಾರ ಮನಸ್ಸಿನ ಅನಾವರಣಕ್ಕೆ ಸಾಕ್ಷಿಯಾಗಿ ಎರಡು ಲಕ್ಷ ರೂಪಾಯಿ ನಗದು, ಒಂದು ಲ್ಯಾಪ್, ಕೋಟು, ಮುಸ್ಲಿಂ ಸಾಹಿತ್ಯದ ಮೇರು ಗುರು ಎಂ ಎ ಉಸ್ತಾದರ ಪುಣ್ಯ ಹೆಸರಿನ ನೂರುಲ್ ಉಲಮಾ ಪ್ರಶಸ್ತಿ, ಪ್ರಶಸ್ತಿ ಪತ್ರ ಹೀಗೆ ಸಾಗುತ್ತಲೇ ಇತ್ತು.ಇದು ನಮ್ಮ ಒಳಗೆ ಕೆ ಎಂ ಸೃಷ್ಟಿಸಿದ ಪುಳಕ ಎಂತದ್ದು ಎನ್ನುವುದಕ್ಕೆ ಸಾಕ್ಷಿ..ಕೊಡಗಿನ ಕೆ ಎಂ ಅಭಿಮಾನಿಯೊಬ್ಬರು ಏಲಕ್ಕಿ ಹಾರವನ್ನು ಕೆ ಎಂ ಅವರ ಕೊರಳಿಗೆ ಹಾಕಿ ಅವರ ಮುಖವನ್ನು ಸವರಿದಾಗ ನನ್ನ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯಿತು. ಮುಸ್ಲಿಂ ಸಾಹಿತ್ಯದಲ್ಲಿ ಕೆ ಎಂ ಎಬ್ಬಿಸಿದ ಹವಾ ಯಾವ ಮಟ್ಟದ್ದು ಎನ್ನುವುದು ನಮಗಂತೂ ಊಹೆಗೂ ನಿಲುಕುತ್ತಿಲ್ಲ..
ನಮ್ಮ ಓರ್ಗನೈಝರ್ ಅನಿವಾಸಿ ಭಾರತೀಯರಾದ ಆಝೀಝ್ ಸಖಾಫಿ ವಿಟ್ಲರವರ ಮಾರ್ಗದರ್ಶನದಲ್ಲಿ ಸಂಪೂರ್ಣ ಸಿದ್ದತೆಯೊಂದಿಗೆ ಮೂಡಿ ಬಂದ ಸಮಾರಂಭ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ತಮ್ಮ ವೈಯುಕ್ತಿಕ ವಿಚಾರಗಳು ಸಭೆ ಸಮಾರಂಭಗಳು ಇನ್ನಿತರ ಅರ್ಜೆಂಟುಗಳನ್ನು ಬದಿಗಿಟ್ಟು ದಿನದ ಮಟ್ಟಿಗೆ ಎಲ್ಲರೂ ನಮ್ಮನ್ನು ಕೂಡಿಕೊಂಡರು. ಅತಿಥಿಗಳಾಗಿದ್ದ ಅಬೂಬರ್ ರೈ ಕೊ ಅವರು ತಮ್ಮ ವಿದೇಶ ಪ್ರಯಾಣದ ಟಿಕೇಟನ್ನೇ ಮುಂದೂಡಿ ನಮ್ಮೊಂದಿಗೆ ಇದ್ದರು. ಮೊನ್ನೆಯಷ್ಟೇ ಬೈಕಿಂದ ಬಿದ್ದು ಕೈ ಕಾಲುಗಳು ಗಾಯಗೊಂಡು ವಿಪರೀತ ನೋವು ಪಡುತ್ತಿದ್ದ ಬರಹಗಾರ ಮಿತ್ರ ಅದೆಲ್ಲವನ್ನೂ ಲೆಕ್ಕಿಸದೆ ನಮ್ಮ ಕೂಡಿಕೊಂಡು ಕೊನೆವರೆಗೂ ನಮ್ಮೊಂದಿಗೇ ಇದ್ದ. ಇವು ನಮ್ಮ ಕಾರ್ಯಕ್ರಮದ ಯಶಸ್ಸಿನ ಕೆಲವು ಸ್ಯಾಂಪಲ್ಲುಗಳು ಮಾತ್ರ.
ನಾವು ಸಂಘಟಿಸಿದ ಕಾರ್ಯಕ್ರಮದಲ್ಲಿ ಡಾ ನಾದಾ ಶೆಟ್ಟಿಯವರು ಕೊಟ್ಟ ತರಬೇತಿ ಅರ್ಥಪೂರ್ಣವಾಗಿತ್ತು. ಶಿಬಿರಾರ್ಥಿಗಳನ್ನು ಉತ್ಸಾಹ ಇಮ್ಮಡಿಗಿಳಿಸುತ್ತಲೇ ತಮ್ಮ ವಿಚಾರಗಳನ್ನು ಅವರ ಎದೆಗಿಳಿಸುವ ಅವರ ಚಾಕಚಕ್ಯತೆಗೆ ಸಲಾಂ. ಅವರ ತರಬೇತಿಯನ್ನು ಆಲಿಸಿದ ವಕ್ಫ್ ನಿರ್ದೇಶಕರೂ ಎಸ್ ಎಸ್ ಎಫ್ ರಾಜ್ಯಾದ್ಯಕ್ಷರೂ ಆದ ಶಾಫಿ ಸ ಅದಿಯವರೇ ಅವರನ್ನು ಹಾಡಿ ಹೊಗಳಿದರು. ಜೊತೆ ಇದ್ದ ರೊನಾಲ್ಡ್ ಫೆರ್ನಾಂಡಿಸ್ ಅಚ್ಚುಕಟ್ಟಾಗಿ ಮಾತುಗಳನ್ನಾಡಿ ಶಿಬಿರಾರ್ಥಿಗಳ ಮನ ಗೆದ್ದರಲ್ಲದೆ. ಅವರು ಕೂಡ ತನ್ನ ತರಾತುರಿಯ ದೂರದ ಪ್ರಯಾಣವೊಂದು ಮೊಟಕುಗೊಳಿಸಿ ನಮ್ಮನ್ನು ಕೂಡಿಕೊಂಡು ಎಲ್ಲರ ಸ್ಪೂರ್ತಿಯ ಚಿಲುಮೆಯಾದರು.
ಎಲ್ಲವೂ ನಾವಂದುಕೊಂಡದ್ದಕ್ಕಿಂದ ಎರಡು ಪಟ್ಟು ಜೋರಾಗಿಯೇ ನಡೆದು ಹೋಯಿತು. ಅಲ್ಲಾಹನಿಗೆ ಲಾಕ್ ಲಾಕ್ ಶುಕ್ರ್. ಬೆಳಗ್ಗಿನಿಂದ ಸುತ್ತೆಲ್ಲ ಚಟುವಟಿಕೆಯಲ್ಲಿ ಓಡಾಡುತ್ತಿದ್ದ ಕೆ ಎಂ ಅವರು ಪ್ರಶಸ್ತಿ ಸ್ವೀಕರಿಸುವ ಸಮಯ ಬರುವಷ್ಟರಲ್ಲಿ ಪೇಲವಗೊಂಡಂತಿದ್ದರು. ನಾನು ನನ್ನ ನಾಲ್ಕು ಗೆಳೆಯರಿಗೆ ತಿಳಿಸಿದಾಗ ಅವರು ಅದು ಆನಂದಬಾಷ್ಪ ಅಂತ ತಮ್ಮ ಕೆಲಸದಲ್ಲಿ ಮಗ್ನರಾದರು. ಆದರೆ ನನ್ನ ಮನಸ್ಸು ಕೇಳಲಿಲ್ಲ ಹತ್ತಿರ ಹೋಗಿ ವಿಚಾರಿಸಿದರೆ " ನಾನು ಈ ಪ್ರಶಸ್ತಿಗೆ ಅರ್ಹನೇ ಯಂಶ? ನಾನು ಏನು ಮಾಡಿದ್ದೇನೆ ಅಂತ ನೀವೆಲ್ಲ ಇಷ್ಟು ಪ್ರೀತಿ ತೋರಿಸುತ್ತಿರುವುದು?" ಒಬ್ಬ ಶ್ರೇಷ್ಟ ಸಾಧಕನ ಬಾಯಿಯಿಂದ ಹೊರಟ ಈ ಮಾತುಗಳು ನನ್ನ ಚಕಿತಗೊಳಿಸಿತು. ಅವರು ಆ ಮಾತುಗಳನ್ನಾಡುವಾಗ ಪುಟ್ಟ ಮಗುವೊಂದು ಉಮ್ಮನಲ್ಲಿ ತನ್ನ ಸಂಕಟವನ್ನು ಅರುಹುವ ಹಾಗೆ ಕಂಡರು. ಯಾ ಅಲ್ಲಾಹ್... ಎಂತಾ ಬರಹದ ಶಕ್ತಿಯನ್ನು ನೀನು ನಮಗೆ ಕರುಣಿಸಿದೆ? "ಕೆ ಎಂ.ನಮ್ಮೊಳಗೆ ಖಾಯಂ" ಎಂದು ನಾನಂದು ಹಾಕಿದ್ದ ವಾಟ್ಸಾಪ್ ಸ್ಟೇಟಸ್ಸಿಗೆ ಇಲ್ಲಿ ಪೂರ್ಣ ಪುರಾವೆ ಸಿಕ್ಕಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಊಟದ ಏರ್ಪಾಡು ಸುಸೂತ್ರವಾಗಿ ನಡೆಯಿತು. ಸುಮಾರು ಎರಡೂವರೆ ತನಕ ಶಿಬಿರಾರ್ಥಿ ಅತಿಥಿಗಳಾದಿ ಎಲ್ಲರೂ ಹಸಿದೇ ಕೂತಿದ್ದರು. ಕೆ.ಎಂ ಎಲ್ಲರೊಂದಿಗೂ ಮುಕ್ತವಾಗಿ ಬೆರೆತರು. ಎಲ್ಲರ ಮನದಲ್ಲೂ ಭದ್ರವಾದರು. ಎಲ್ಲರೂ ಹೊರಟ ಮೇಲೆ ಕೆ. ಎಂ. ತನಗೆ ದೊರಕಿದ ಪ್ರಶಸ್ತಿ, ತನ್ನ ಪುಟ್ಟ ಮಕ್ಕಳೊಂದಿಗೆ ಇನ್ನಷ್ಟು ಸಾಹಿತ್ಯಿಕ ಚಳವಳಿ ಕೆಲಸಗಳು ತರಾತುರಿಯಲ್ಲಿ ಮುಗಿಸಬೇಕಾದ ಜವಾಬ್ದಾರಿ ಹೊತ್ತು. ಆಟೋ ಹತ್ತಿ ಮನೆ ದಾರಿ ಹಿಡಿದರು. ಹೌದು ಎಲ್ಲವೂ ಕನಸಿನಂತೆಯೇ ನಡೆಯಿತು. ಕಾರ್ಯಕ್ರಮಕ್ಕೆ ಆಹೋರಾತ್ರಿ ಶ್ರಮಿಸಿದ ಎಲ್ಲರೂ ನಮ್ಮ ಮನದೊಳಗೆ ಸದಾ ಇದ್ದೇ ಇರುತ್ತಾರೆ. ಕೆ ಎಂ ಮೇಲಿನ ಅಭಿಮಾನಕ್ಕೆ ತಾವು ಕಷ್ಟ ಪಟ್ಟು ದುಡಿದ, ಮರುಭೂಮಿಯಲ್ಲಿ ರಕ್ತ ಬೆವರಾಗಿಸಿದ ಎಲ್ಲರ ನೆರವೂ ಹರಿದು ಬಂದಿತ್ತು. ಕಾರ್ಯಕ್ರಮದಲ್ಲಿ ಸಂಘಟಕರಾಗಿ ಪ್ರತಿ ಕೆಲಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ ಎಲ್ಲರಿಗೂ ಕೃತಜ್ಞ, ಕಾರ್ಯಕ್ರಮದ ನಿರೂಪಕರಿಗೂ ಭಾಗವಹಿಸಿದವರಿಗೂ ಅತಿಥಿಗಳಿಗೂ ನಾವು ಋಣಿ ಅಲ್ಲಾಹನು ಇದನ್ನು ಸತ್ಕರ್ಮಗಳ ಸಾಲಿಗೆ ಸೇರಿಸಲಿ ಆಮೀನ್ ನಿಮ್ಮೆಲ್ಲರ ದುಆ ಪ್ರಾರ್ಥನೆಯ ನಿರೀಕ್ಷೆಯಲ್ಲಿ....
*ನಿಮ್ಮ ಯಂಶ ಬೇಂಗಿಲ ಬೆಂಗಳೂರು*