ಮಂಗಳವಾರ, ನವೆಂಬರ್ 8, 2016

ಟಿಪ್ಪು  ಒಬ್ಬ ವ್ಯಕ್ತಿಯಲ್ಲ.


ಇತಿಹಾಸದ ಪುಟಗಳು ಮತ್ತೆ ರಭಸದಿಂದ  ಮಗುಚಲಾರಂಬಿಸಿವೆ. ಟಿಪ್ಪು ನಮ್ಮವನೋ ಅವರವನೋ ಎಂಬ ಲಾಭದ ಲೆಕ್ಕಾಚಾರಗಳು ತಾರಕಕ್ಕೆ ಏರಿವೆ.  ರಾಜಕೀಯದ ಕುಚತುರರು ಯಾರದೋ ಸಾವಿಗೆ ಸಂಚು ಹೂಡುತ್ತಿದ್ದಾರೆ. ಇವೆಲ್ಲಕ್ಕೂ ಮೀರಿ ಟಿಪ್ಪುವಿನ ಕುರಿತು ಒಡೆದಾಳುವ ಶಕ್ತಿಗಳು ನಿದ್ದೆಗೆಟ್ಟು ಅಪಪ್ರಚಾರದಲ್ಲಿ ತೊಡಗಿವೆ.

ಆದರೆ ಪ್ರಚಾರ,ಅಪಪ್ರಚಾರದ ಗೊಡವೆಯೇ ಇಲ್ಲದೆ, ಪೂರ್ವಾಗ್ರಹರಹಿತರಾಗಿ ಟಿಪ್ಪುವನ್ನು ಅಧ್ಯಯನ ಮಾಡುವ ತಾಳ್ಮೆ ಉಳ್ಳವರಿಗೆ, "ಟಿಪ್ಪು" ಕೇವಲ ಒಬ್ಬ ವ್ಯಕ್ತಿಯಲ್ಲ, ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ವಿರೋಧಿ ಶಕ್ತಿ ಯಾಗಿದ್ದ ಎಂಬ ಅರಿವು  ಖಂಡಿತಾ ಮೂಡುತ್ತದೆ.

ವಿದೇಶೀ ಆಳ್ವಿಕೆಯ ವಿರುದ್ಧ ಸೊಲ್ಲೆತ್ತಿದ ಮೊದಲ ರಾಜ, ಮೈಸೂರಿನ ಹುಲಿ ಟಿಪ್ಪು ಸುಲ್ತಾನರನ್ನು ಬರ್ಬರವಾಗಿ ಕೊಂದು ನಿಟ್ಟುಸಿರು ಬಿಟ್ಟ ಬ್ರಿಟಿಷರ ಚರಿತ್ರೆ ಕಣ್ಣಮುಂದೆ ಬರುತ್ತದೆ. ಮನದ ಮೂಲೆಯಲ್ಲಿ ಆ ಚರಿತ್ರೆ ಮಾರ್ಧನಿಸುವಾಗ ದೇಶ ಪ್ರೇಮದ ಕಿಡಿ ಹೃದಯದೊಳಗೆ ದಿಗ್ಗನೆ ಹೊತ್ತಿಕೊಳ್ಳುತ್ತದೆ.

ಟಿಪ್ಪುವಿನ ಪರ ವಾದಿಸಲು ಟಿಪ್ಪು ಯಾರದೋ ಇತಿಹಾಸಕಾರನ ಸಂಬಂಧಿಕನಲ್ಲ.ಅರೇಬಿಕ್ ಹೆಸರಿರುವ ಮಾತ್ರಕ್ಕೆ ಇಸ್ಲಾಂ ಧರ್ಮದವ ಎಂಬ ವಕಾಲತ್ತು ವಹಿಸುವ ದರ್ದೂ ಮುಸ್ಲಿಮರಿಗಿಲ್ಲ. ಆದರೆ  1799 ರಿಂದ ಧೀರನೆಂದು ಸಾಕ್ಷಿ ಸಮೇತ ಬಣ್ಣಿಸಲ್ಪಟ್ಟ ಟಿಪ್ಪುವನ್ನು ಕಳೆದ ಎರಡು ವರುಷಗಳಿಂದ ಅಪಪ್ರಚಾರಕ್ಕೆ ಒಳಗಾಗಿಸುವುದರ ಹಿಂದೆ ಕುತ್ಸಿತ ಪ್ಯಾಶಿಸಂ ಛಾಯೆ ನಿಚ್ಚಳವಾಗಿ ಕಾಣಿಸುತ್ತಿದೆ.

ಸುಲ್ತಾನರ ಧೀರ ಶಕ್ತಿಯನ್ನು ಕಾಣಲು ದೃಷ್ಟಿ ಶಕ್ತಿ ಬೇಕು. ಅದನ್ನು ಅರಿಯಲು ಬುದ್ಧಿ ಶಕ್ತಿ ಬೇಕು.ಇವೆರಡೂ ಶಕ್ತಿ ಕಳಕೊಂಡವರಿಗೆ ಟಿಪ್ಪು ಬೇರೇನೋ ಆಗಿ ಕಂಡರೆ ಅದು ಅವರ ತಪ್ಪೇ ಹೊರತು ಇತಿಹಾಸ ತಜ್ಞರು ಅದಕ್ಕೆ ಹೊಣೆಯಲ್ಲ.

ಬುದ್ಧಿ ಇಲ್ಲದ ವಯಸ್ಸಿನಲ್ಲಿ (1990) ಬೀದಿ ದೀಪವೇ ಇಲ್ಲದ ಕತ್ತಲ ರಸ್ತೆಯಲ್ಲಿ  ತಡಕಾಡಿಕೊಂಡು ನಮ್ಮ ಮನೆಯಿಂದ  ದೂರವಿದ್ದ ಪೋಸ್ಟ್ ಮಾಸ್ಟರೊಬ್ಬರ ಮನೆಯಲ್ಲಿ, ಟಿ.ವಿ ನೋಡೋದು ಹರಾಂ ಎಂದು ಭಾವಿಸುತ್ತಿದ್ದ ಆ ಕಾಲದಲ್ಲಿ,  Sword of Tippu sultan (ಟಿಪ್ಪು ಸುಲ್ತಾನರ ಖಡ್ಗ) ಧಾರಾವಾಹಿಯನ್ನು ಅರ್ಥವೇ ಆಗದ ಹಿಂದಿ ಭಾಷೆಯಲ್ಲಿ ನೋಡಿ ರೋಮಾಂಚನಗೊಳ್ಳುತಿದ್ದ ನೆನಪು ನನ್ನ ಮನದಿಂದ ಇನ್ನೂ ಮಾಸಿಲ್ಲ.

ಮೈಸೂರು ಹುಲಿ ಎಂದರೆ ಯಾರು ಎಂಬ ಪ್ರಶ್ನೆಗೆ ಟಿಪ್ಪು ಸುಲ್ತಾನರ ಮುಖವಲ್ಲದೆ ಬೇರೆ ಯಾರ ಮುಖಾನು ಕಾಣುವುದಿಲ್ಲ.

"ಇಲಿಯಾಗಿ ಬದುಕುವುದಕ್ಕಿಂತ ಹುಲಿಯಾಗಿ ಸಾಯುವುದೇ ಲೇಸು" ಎಂದು ಬ್ರಿಟಿಷರ ವಿರುದ್ಧ ನಿಂತು ಹೋರಾಡಿ ಮಡಿದ ಟಿಪ್ಪುವಿನ ಮಾತನ್ನು ಮರೆಯಲು ಯಾರಿಗೂ  ಸಾಧ್ಯವಿಲ್ಲ.

"ಇತಿಹಾಸ ಸರಿಯಾಗಿ ಅರಿತವರು ಇತಿಹಾಸದಿಂದ ಪಾಠ ಕಲಿಯುತ್ತಾರೆ. ಅರಿಯದವರು ಯಾರದೋ ಗುಲಾಮರಾಗಿ ಇನ್ಯಾರದೋ ಕಾಲು ನೆಕ್ಕುತ್ತಾರೆ" ಎಂದ ಇತಿಹಾಸ ತಜ್ಞರೊಬ್ಬರ ಮಾತು ಈಗ ಮತ್ತೆ ಮತ್ತೆ ನೆನಪಾಗುತ್ತಿದೆ.

#ಉಫಾಕು#