ಆತ್ಮೀಯರೆ , ಪತ್ರಕರ್ತರಾದ ಶೃಂಗೇಶ್ ಅವರು ಮೋದಿಯ ಮೋಸದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ದಯವಿಟ್ಟು ಹತ್ತು ನಿಮಿಷ ಬಿಡುವು ಮಾಡಿಕೊಂಡು ಸಮಚಿತ್ತದಿಂದ ಓದಲು ಮನವಿ ಮಾಡುತ್ತೇನೆ. ನೋಟು ರದ್ಧತಿ ಕುರಿತು,
ಜನಶಕ್ತಿಯ ಅಭಿಪ್ರಾಯ
ಇದು ಬಡ ಭಾರತದ ಮೇಲೆ ಮೋದಿ ನಡೆಸಿರುವ ಯುದ್ಧ!
ಆತ್ಮೀಯರೇ,
‘500-1000 ನೋಟುಗಳ ನಿಷೇಧ: ಕಪ್ಪು ಹಣದ ಮೇಲಿನ ದಾಳಿ’ ಎಂದು ಪ್ರಧಾನ ಮಂತ್ರಿಗಳು ಘೋಷಿಸಿದಾಗ ಜನ ಸಾಮಾನ್ಯರು ಸಂತಸ ವ್ಯಕ್ತಪಡಿಸಿದ್ದರು. ಪ್ರಗತಿಪರರಲ್ಲೂ ಹಲವರು ‘ಪ್ರತಿಯೊಂದನ್ನೂ ವಿರೋಧಿಸುವುದು ಸರಿಯಲ್ಲ’ ಎಂದು ವಾದಿಸಿದ್ದರು. ಎರಡು ದಿನದ ನಂತರ ಬ್ಯಾಂಕುಗಳು ಪುನರಾರಂಭವಾದಾಗ ಬಲಾಢ್ಯರ ಬದಲು ಬಡವರು ಬೀದಿಯಲ್ಲಿದ್ದರು! ಹಳೆ ನೋಟು ಹಿಂದಿರುಗಿಸಲು, ಹೊಸ ನೋಟು ಸಂಪಾದಿಸಲು ಎಲ್ಲಾ ಬ್ಯಾಂಕುಗಳ ಮುಂದೆ ಜನ ಸಾಮಾನ್ಯರು ಸಾಲುಗಟ್ಟಿ ನಿಂತಿದ್ದರು. ಆಗಲೂ ‘ದೇಶಕ್ಕಾಗಿ ಒಂದೆರಡು ದಿನದ ಕಷ್ಟ ಸಹಿಸಿಕೊಳ್ಳುವುದು ಅನಿವಾರ್ಯ’ ಎಂದು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡಿದ್ದರು. ‘ನಾವು ಸ್ವಾತಂತ್ರ್ಯ ಬಂದಾಗಿನಿಂದಲೂ ರೇಷನ್ಗೆ, ಕರೆಂಟ್ ಬಿಲ್ ಪಾವತಿಗೆ, ನೀರಿನ ಬಿಲ್ ಪಾವತಿಗೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ.......... ಎಲ್ಲದಕ್ಕೂ ಕ್ಯೂ ನಿಲ್ಲುತ್ತಲೇ ಇದ್ದೇವೆ. ದೇಶಕ್ಕಾಗಿ ಮತ್ತೊಮ್ಮೆ ಕ್ಯೂ ನಿಲ್ಲಲು ಆಗುವುದಿಲ್ಲವೇ? ಅದನ್ನೂ ಮಾಡಿಬಿಡೋಣ’ ಎಂದು ತಮಗಾಗುತ್ತಿದ್ದ ಅಸೌಕರ್ಯಗಳನ್ನು ಮಾತಿಲ್ಲದೆ ಸಹಿಸಿಕೊಂಡರು. ಆದರೆ ದಿನಗಳೆದಂತೆ ಜನಸಾಮಾನ್ಯರ ಪರದಾಟ ಹೆಚ್ಚತೊಡಗಿತು. ದಿನಸಿಗೆ ಕಾಸಿಲ್ಲ, ದವಾಖಾನೆಗೆ ಕಾಸಿಲ್ಲ, ಬಸ್ಸಿಗೆ ಕಾಸಿಲ್ಲ, ಸ್ಕೂಲ್ ಫೀಸಿಗೆ ಕಾಸಿಲ್ಲ, ಕಟ್ಟುತ್ತಿರುವ ಮನೆ ಮುಗಿಸಲು ಕಾಸಿಲ್ಲ, ಮಗಳ ಮದುವೆಗೆ ಕಾಸಿಲ್ಲ........ ಕಾಸಿಲ್ಲ, ಕಾಸಿಲ್ಲ, ಕಾಸಿಲ್ಲ!! ಪರದಾಟ ಶುರುವಾಯಿತು. ಕಷ್ಟದಲ್ಲೇ ಬಂದ ಜನ ಬೈದುಕೊಂಡರೂ ಸಹಿಸಿಕೊಂಡರು. “ಮಾಡಿದ್ದು ಸರಿ, ಆದರೆ ಮೊದಲೇ ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು” ಎಂದು ಗೊಣಗಿಕೊಂಡರು.
ವಾರ ಕಳೆಯುವ ಹೊತ್ತಿಗೆ ಸಮಸ್ಯೆ ಮುಗಿಲುಮುಟ್ಟಿತು. ಒಂದೆರಡು ದಿನಗಳಲ್ಲಿ ಎಲ್ಲಾ ಸರಿಹೋಗುತ್ತದೆಂದು ಟಿವಿಗಳ ವರದಿಗಳನ್ನು ನಂಬಿ ಆರಾಮಾಗಿದ್ದವರಿಗೆ ಅನುಮಾನಗಳು ಹುಟ್ಟಿದವು. ಪ್ರಧಾನಮಂತ್ರಿಯವರ ಹೇಳಿಕೆಗೆ ವಿರುದ್ಧವಾಗಿ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ‘ಸಮಸ್ಯೆ ಸರಿ ಹೋಗಲು ಇನ್ನೂ ಒಂದು ವಾರವಾದರೂ ಬೇಕು’ ಎಂದರು. ವಾರಕ್ಕೆ 10 ಸಾವಿರ ವಿನಿಮಯ ಎಂದು ಒಮ್ಮೆ, 20 ಸಾವಿರ ವಿನಿಮಯ ಎಂದು ಒಮ್ಮೆ, ದಿನಕ್ಕೆ 4 ಸಾವಿರ ಡ್ರಾ ಮಾಡಬಹುದು ಎಂದು ಒಮ್ಮೆ, ನಂತರ ಆ ಮಿತಿಯನ್ನು 2 ಸಾವಿರಕ್ಕೆ ಇಳಿಸಲಾಗಿದೆ ಎಂದು- ಹೀಗೆ ಪ್ರತಿ ದಿನ ಒಂದೊಂದು ನಿಯಮಗಳನ್ನು ರೂಪಿಸುತ್ತಾ ಜನರನ್ನು ಗೊಂದಲಕ್ಕೆ ಕೆಡವಿದರು. ನಿರ್ಮಾಣದ ಕೆಲಸಗಳು ನಿಂತು ಹೋದವು, ಕಾರ್ಮಿಕರಿಗೆ ಅನೇಕ ಕಡೆ ವಾರದ ಬಟವಾಡೆ ಸಹ ಇಲ್ಲವಾಯಿತು, ದಿನಗೂಲಿ ಕೆಲಸಗಳು ಕಡಿಮೆ ಆದವು, ಜನ ಖರ್ಚು ಮಾಡಲು ಹೆದರತೊಡಗಿದರು; ಜನಸಾಮಾನ್ಯರ ಅಂಗಡಿಗಳು ಖಾಲಿ ಹೊಡೆಯತೊಡಗಿದವು; ದಿನಗೂಲಿಗಳು, ರೈತರು, ರಿಕ್ಷಾ ಡ್ರೈವರ್ಗಳು, ಹಮಾಲಿಗಳು, ಹೂವು ಹಣ್ಣು ಮಾರುವವರು, ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ಪ್ರಾಮಾಣಿಕ ಬದುಕಿನಿಂದ ಗಳಿಸಿದ್ದ ಹಣವನ್ನು ಪಡೆದುಕೊಳ್ಳಲಾಗದೇ ತತ್ತರಿಸತೊಡಗಿದರು. ಇರುವ ಕೆಲಸ ಬಿಟ್ಟು ದಿನನಿತ್ಯ ಬ್ಯಾಂಕಿನ ಮುಂದೆ ತಮ್ಮದೇ ಹಣವನ್ನು ಪಡೆಯಲು ಕ್ಯೂನಲ್ಲಿ ನಿಂತು ಬಸವಳಿದರು; ಜೀವವಿಲ್ಲದ ಕಾಸಿಗಾಗಿ 75ಕ್ಕೂ ಹೆಚ್ಚು ಅಮಾಯಕ ಜೀವಗಳು ಪ್ರಾಣಬಿಟ್ಟವು! (ಈ ರೀತಿ ಸಾಯಲುಬೇರೆ ಕಾರಣಗಳೂ ಇರಬಹುದು; ತಕ್ಷಣದ ಕಾರಣ ಇದೇ ಆಗಿತ್ತು ಎಂಬುದು ಬಹುತೇಕ ಪ್ರಕರಣಗಳಲ್ಲಿ ಎದ್ದು ಕಂಡಿತು). ಸಾಲ ನೀಡಿದವರು ಪೀಡಿಸತೊಡಗಿದರು. ಹೊಸ ನೋಟಿನ ಲಭ್ಯತೆ ಇಲ್ಲದಾಗಲೂ ಬಿಜೆಪಿಯ ಮಾಜಿ ಮಂತ್ರಿ ಜನಾರ್ಧನ ರೆಡ್ಡಿಯ ಮಗಳ ಅದ್ದೂರಿ ವಿವಾಹ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಈಗಾಗಲೇ 500-1000ದ ನೋಟು ರದ್ದತಿಯಾಗಿ 20 ದಿನಗಳು ಕಳೆದಿವೆ. ಇದೀಗ ಬ್ಯಾಂಕುಗಳು ಹಳೆ ನೋಟುಗಳನ್ನು ಅಕೌಂಟ್ಗೆ ಹಾಕಿ ಹೋಗಿ, ಹೊಸ ನೋಟು ಸದ್ಯಕ್ಕಿಲ್ಲ ಎನ್ನುತ್ತಿವೆ. ನೂರಾರು ಎಟಿಎಂಗಳಲ್ಲಿ ಈಗಲೂ ‘ನೋ ಕ್ಯಾಶ್’ ಬೋರ್ಡ್ಗಳು ತೂಗಾಡುತ್ತಿವೆ; ಇದ್ದರೂ 2000ದ ನೋಟುಗಳು ಮಾತ್ರ ಲಭ್ಯ! ಈ ಸಂಕಷ್ಟದ ನಡುವೆಯೂ ಜನ ಹರಸಾಹಸ ಬಿದ್ದು 2000ದ ಒಂದೆರಡು ನೋಟುಗಳನ್ನು ಸಂಪಾದಿಸಿ ಸಂತಸ ಪಟ್ಟುಕೊಂಡರು. ಆದರೆ ಈ ಸಂತಸ ಸಹ ಹೆಚ್ಚು ಕಾಲ ಉಳಿಯಲಿಲ್ಲ. ಅದನ್ನು ಅಂಗಡಿಗೆ ಒಯ್ದರೆ ಚಿಲ್ಲರೆ ಇಲ್ಲದೆ ಚಲಾವಣೆ ನಡೆಸುವುದು ಅಸಾಧ್ಯವಾಗಿ ಶಾಕ್ ಹೊಡೆಸಿತು. ಬಡವರು ಅಕ್ಷರಶಃ ಭಿಕ್ಷುಕರಾದರು. ಈ ನಡುವೆ ಪ್ರಧಾನ ಮಂತ್ರಿಗಳು ‘ನನಗೆ ಇದೆಲ್ಲವನ್ನೂ ಸರಿ ಪಡಿಸಲು ಇನ್ನೂ 50 ದಿನಗಳ ಸಮಯಾವಕಾಶ ಬೇಕು’ ಎಂದು ಹೇಳಿಕೆ ನೀಡಿದ್ದಾರೆ!
ತೆರೆಯ ಮುಂದಿನ ಈ ವಾಸ್ತವ ಎಲ್ಲರಿಗೂ ಗೋಚರಿಸುತ್ತಿದೆ. ಸಮಯ ಕಳೆದಂತೆ ಕೆಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಸಾಮಾನ್ಯ ಜನ ತಮ್ಮದೇ ಹಣ ಬ್ಯಾಂಕಿಗೆ ಕಟ್ಟಿದ್ದರಿಂದ ಹೆಚ್ಚಾದ ಠೇವಣಿ ಬಿಟ್ಟರೆ ಎಷ್ಟು ಕಪ್ಪು ಹಣವನ್ನು ಸರ್ಕಾರ ವಶಪಡಿಸಿಕೊಂಡಿದೆ? ನಾವೆಲ್ಲ ಪ್ರತಿ ದಿನ ಕ್ಯೂ ನಿಂತರೂ ದಿನನಿತ್ಯದ ಖರ್ಚಿಗೆ ಹಣ ಹುಟ್ಟುತ್ತಿಲ್ಲ; ದೊಡ್ಡ ಜನಗಳ್ಯಾರೂ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ದು ಕಾಣುತ್ತಿಲ್ಲವಲ್ಲ, ಅವರು ಹೇಗೆ ಬದುಕು ನಡೆಸುತ್ತಿದ್ದಾರೆ? ಹಳೆ ನೋಟುಗಳನ್ನು ಉಗ್ರರು ಖೋಟಾ ನೋಟು ಮಾಡಿಬಿಟ್ಟಿದ್ದಾರೆ, ಈಗಿನ ಹೊಸ 2000ದ ನೋಟನ್ನು ಖೋಟಾ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರಲ್ಲ; ಆದರೆ ಗುಜರಾತಿನಲ್ಲಿ ಕಂತೆ ಕಂತೆ ಹೊಸ 2000ದ ಖೋಟಾ ನೋಟುಗಳು ಹೇಗೆ ಸಿಕ್ಕವು? ಹಾಗಾದರೆ ನೋಟು ರದ್ಧತಿಯಿಂದ ಆದ ಪ್ರಯೋಜನವಾದರೂ ಏನು? ಜನಾರ್ಧನ ರೆಡ್ಡಿ ಕುಟುಂಬದ ಮದುವೆಗೆ ಹೊಸ ನೋಟು ಹೇಗೆ ಸಿಕ್ಕವು?
ನಾವು ಸಿನಿಕರಾಗಬಾರದು, ಆದರೆ ಕಣ್ಣುಗಳಿಗೆ ಕವಿದಿರುವ ಮಬ್ಬನ್ನು ಸರಿಸಬೇಕಾಗಿದೆ; ತೆರೆಯ ಹಿಂದಿನ ಸತ್ಯವನ್ನು ಅರಿಯಬೇಕಾಗಿದೆ! ಬನ್ನಿ ಮೋದಿಯವರ ಮೋಡಿಯಾಟದ ನಿಜಬಣ್ಣ ಅರಿಯೋಣ!!
ನೇರ ಪ್ರಶ್ನೆಗೆ ನೇರ ಉತ್ತರ!
ಮಿಥ್ಯೆ 1. ಏನೇ ಇರಲಿ ಭ್ರಷ್ಟರು ತುಂಬಿಟ್ಟಿದ್ದ ಕಪ್ಪುಹಣಕ್ಕಂತೂ ಕಲ್ಲು ಬಿತ್ತು ತಾನೆ?
ಸತ್ಯ 1: ಉಹೂಂ. ಇಲ್ಲ, ಖಂಡಿತ ಇಲ್ಲ! ಅಂತಹದೇನೂ ಆಗುವುದೂ ಇಲ್ಲ. ಕಾಳ ಧನಿಕರು ಯಾರು? ಈ ದೇಶದ ಬಹುಪಾಲು ರಾಜಕಾರಣಿಗಳು, ತಮ್ಮ ಕಾನೂನು ಬದ್ಧ ಮತ್ತು ಕಾನೂನು ಬಾಹಿರ ಕಳ್ಳದಂಧೆಗಳನ್ನು ಕಾಪಾಡಿಕೊಳ್ಳಲು ಇಂಥಾ ರಾಜಕಾರಣಿಗಳಿಗೆ ದೇಣಿಗೆ ನೀಡುವ ಉದ್ಯಮಪತಿಗಳು ಮತ್ತು ಅವರಿಗೆ ಕುಮ್ಮಕ್ಕಾಗಿರುವ ಭ್ರಷ್ಟ ಅಧಿಕಾರಿಗಳು. ಈ ನೋಟು ನಿಷೇಧ ಅವರ ತಂಟೆಗೇ ಹೋಗಿಲ್ಲ. ಇವರೆಲ್ಲಾ ಕೂಡಿಟ್ಟಿರುವ ಕಾಳಧನದ ಮೇಲೆ ಈ ನೋಟು ನಿಷೇಧ ಕ್ರಮ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಏಕೆಂದರೆ ಅವರು ದರೋಡೆ ಮಾಡಿರುವ ಕಳ್ಳ ಹಣ 500-1000 ನೋಟುಗಳಲ್ಲಿಲ್ಲ. ಕಪ್ಪು ಹಣವನ್ನು ಧನಿಕರು ಗೋಣಿಚೀಲಗಳಲ್ಲಿ ತುಂಬಿ ಗೋದಾಮುಗಳಲ್ಲಿ ಬಚ್ಚಿಟ್ಟಿರುವುದಿಲ್ಲ. ಅದೆಲ್ಲಾ 80-90ರ ದಶಕದ ಕನ್ನಡ-ಹಿಂದಿ ಸಿನಿಮಾಗಳಲ್ಲಿ ಮಾತ್ರ ಕಾಣಸಿಗುವ ಕಥೆ. ಈ ದೇಶದಲ್ಲಿ ಸೃಷ್ಟಿಯಾಗಿರುವ ಶೇ.90ರಷ್ಟು ಕಪ್ಪು ಹಣ ಚಿನ್ನ, ಭೂಮಿ, ಸೈಟ್, ಅಪಾರ್ಟ್ಮೆಂಟ್, ಬೇನಾಮಿ ಕಂಪನಿ, ಕಂಪನಿ ಬಾಂಡ್ ಮತ್ತು ವಿದೇಶಿ ಕರೆನ್ಸಿ ರೂಪಗಳಲ್ಲಿದೆ. ಮಿಕ್ಕಿದ್ದು ದೇಶದ ಗಡಿದಾಟಿ ವಿದೇಶಿ ಲಾಕರುಗಳಲ್ಲಿ ಮತ್ತು ಅಕೌಂಟುಗಳಲ್ಲಿ ಡಾಲರುಗಳ ರೂಪದಲ್ಲಿ ಭದ್ರವಾಗಿವೆ. ಅದು ಚಿನ್ನ, ರಿಯಲ್ ಎಸ್ಟೇಟ್, ಇತರ ಬೇನಾಮಿ ಚರ ಸ್ಥಿರಾಸ್ತಿಗಳಾಗಿ ಬದಲಾಗಿದೆ. ಸ್ವಿಟ್ಜರೆಲೆಂಡ್, ಪನಾಮ, ಸಿಂಗಾಪುರ, ಮಲೇಷಿಯಾ, ಲಿಚೆನ್ಸ್ಟನ್, ಬ್ರಿಟಿಷ್ ವರ್ಜಿನ್ ಐಲೆಂಡ್ನಂಥ 90ಕ್ಕೂ ಹೆಚ್ಚು ತೆರಿಗೆÉಮುಕ್ತ ತಾಣಗಳಲ್ಲಿ ಭಾರತದ ರಾಜಕಾರಣಿಗಳು, ಉದ್ಯಮಿಗಳು, ನಟರು, ವಿಟರುಗಳು ಬೇನಾಮಿ ಹೆಸರಲ್ಲ್ಲಿ ಕನಿಷ್ಟ 25 ಲಕ್ಷ ಕೋಟಿ ಆಸ್ತಿಪಾಸ್ತಿಗಳನ್ನು ಬಚ್ಚಿಟ್ಟಿದ್ದಾರೆ. ಇದನ್ನು ದಾಖಲೆ ಸಮೇತ 2014ರಲ್ಲಿ ಲಿಚೆಲ್ಸ್ಟೆನ್ ಲೀಕ್ಸ್, 2015ರಲ್ಲಿ ಊSಃಅ-ಸ್ವಿಸ್ ಲೀಕ್ಸ್ ಮತ್ತು 2016ರಲ್ಲಿ ಪ್ರಸಿದ್ಧ ‘ಪನಾಮಾ ಪೇಪರ್ಸ್’ ಬಿಚ್ಚಿಟ್ಟಿವೆ. ಅಂಥಾ ಭಾರತೀಯ ಕಾಳದಂಧೆಕೋರರ 1500 ಹೆಸರುಗಳೂ ಈಗಾಗಲೇ ಬಯಲಿಗೆ ಬಂದಿವೆ. ಬೇನಾಮಿ ಹೆಸರಿನಲ್ಲಿರುವ ಕೋಟಿಕೋಟಿ ಬೆಲೆಬಾಳುವ ಆಸ್ತಿಪಾಸ್ತಿಗಳ ಬಗ್ಗೆಯಾಗಲೀ, ಲಾಕರ್ಗಳಲ್ಲಿರುವ ಚಿನ್ನದ ಗಟ್ಟಿಗಳ ಬಗ್ಗೆಯಾಗಲೀ, ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣದ ಬಗ್ಗೆಯಾಗಲೀ ಮೋದಿ ಉಸಿರೆತ್ತುತ್ತಿಲ್ಲ. ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನೆಲ್ಲಾ ತಂದು ಪ್ರತಿ ಬಡಭಾರತೀಯರ ಅಕೌಂಟಿನಲ್ಲೂ 15 ಲಕ್ಷ ರೂ ಡಿಪಾಸಿಟ್ ಮಾಡಲಾಗುವುದು ಎಂದು ಕೊಚ್ಚಿಕೊಂಡಿದ್ದ ಬಿಜೆಪಿ ಈಗ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. (ಈ ದೇಶದ ಚಿಕ್ಕ ಮಗುವಿಗೂ ಗೊತ್ತು, ಕಪ್ಪು ಹಣ ಎಲ್ಲಿದೇ? ಸ್ವಿಸ್ಬ್ಯಾಂಕ್ನಲ್ಲೀ ಎಂದು – ಎಂದು ಮೋದಿಯವರ ಭಾಷಣ ಇನ್ನೂ ನೆನಪಿನಿಂದ ಮಾಸಿಲ್ಲ).
ಭಾರತದಲ್ಲೇ ನಡೆದಿರುವ ಅಧ್ಯಯನಗಳ ಪ್ರಕಾರ ತೆರಿಗೆ ವಂಚಿಸಿ ಚಲಾವಣೆ ಮಾಡಲಾಗುತ್ತಿರುವ ಕಪ್ಪು ಹಣದಲ್ಲಿ ಕೇವಲ ಶೇ.10ಕ್ಕಿಂತ ಕಡಿಮೆ ಮೊತ್ತ ನೋಟುಗಳ ರೂಪದಲ್ಲಿರುವುದು. ಉಳಿದುದೆಲ್ಲ ಚರ-ಸ್ಥಿರ ಆಸ್ತಿಯಾಗಿ ಬದಲಾಗಿ ‘ಸುರಕ್ಷಿತ’ವಾಗಿದೆ! ಆದ್ದರಿಂದ ಒಂದೇ ಮಾತಿನಲ್ಲಿ ಹೇಳುವುದಾದರೆ ಕಪ್ಪುಹಣದ ತಿಮಿಂಗಿಲಗಳಿಗೆ ಇದರಿಂದ ನಷ್ಟವೇನೂ ಇಲ್ಲ; ಅವರು ನೋಟು ಬದಲಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿದ್ದಾರೆ!
ಮಿಥ್ಯೆ 2: ಹೋಗಲಿ, ಕನಿಷ್ಟ ಖೋಟಾನೋಟಿಗಾದರೂ ಕತ್ತರಿ ಬಿತ್ತು ತಾನೆ?
ಸತ್ಯ 2: ಖಂಡಿತವಾಗಿಯೂ ಇಲ್ಲ! ಕೇಂದ್ರದ ಗೃಹ ಇಲಾಖೆಗಾಗಿ ಕೇಂದ್ರ ಸರ್ಕಾರದ ಅಂಕಿಅಂಶ ಇಲಾಖೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಈ ದೇಶದಲ್ಲಿ 17 ಲಕ್ಷ ಕೋಟಿ ರೂ.ಗಳಷ್ಟು ಹಣ ಚಲಾವಣೆಯಲ್ಲಿದೆ. ಅದರಲ್ಲಿ 400-420 ಕೋಟಿ ರೂ.ಗಳಷ್ಟು ಮಾತ್ರ ನಕಲಿ ನೋಟು. ಅಂದರೆ ಚಲಾವಣೆಯಲ್ಲಿರುವ ಹಣದಲ್ಲಿ ಶೇ.0.0027ರಷ್ಟು ಮಾತ್ರ! ಈ ಹಣವೂ ಈಗ ಖೋಟಾನೋಟು ಮಾಡುವವರ ಬಳಿ ಇಲ್ಲ. ಅದು ಜನಸಾಮಾನ್ಯರ ನಡುವೆ ಬೆರೆತು ಹೋಗಿದೆ. ಈ ನಷ್ಟ ಭರಿಸಬೇಕಾಗಿ- ರುವುದೂ ಸಹ ಗೊತ್ತಿಲ್ಲದೆ ಇಟ್ಟುಕೊಂಡಿರುವ ಅಮಾಯಕ ಜನರೆ. ಅಲ್ಲದೆ ಹೊಸ ನೋಟುಗಳನ್ನೂ ನಕಲಿ ಮಾಡುವುದು ಸಾಧ್ಯ; ಹೊಸ ನೋಟಿನಲ್ಲಿ ಅದನ್ನು ತಡೆಯುವಂತಹ ಯಾವುದೇ ವಿನ್ಯಾಸಗಳಿಲ್ಲ ಎಂದು ಸ್ವತಃ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. 2000 ನೋಟಿನೊಳಗೆ ಚಿಪ್ಪಿದೆ ಎಂಬುದೆಲ್ಲಾ ಅಮಾಯಕರ ಕೈಗೆ ಚಿಪ್ಪು ಕೊಡುವ ಮಾತು ಎಂಬುದು ಈಗಾಗಲೇ ಬಯಲಾಗಿದೆ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ 500ರ ಮಾಸ್ಟರ್ ನೋಟಿನ ವಿನ್ಯಾಸಕ್ಕೆ ಹೋಲಿಸಿದರೆ, ನಂತರ ರಿಸರ್ವ್ ಬ್ಯಾಂಕ್ ಚಲಾವಣೆಗೆ ಬಿಟ್ಟ ನೋಟುಗಳಲ್ಲಿ 9 ತಪ್ಪುಗಳಿವೆ. ಇದನ್ನೂ ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದೆ!!
ಮಿಥ್ಯೆ 3: ಹೋಗಲಿ, ಭಯೋತ್ಪಾದಕರ ಹಣದ ಮೂಲಕ್ಕಂತೂ ಪೆಟ್ಟು ನೀಡಬಹುದಲ್ಲವೆ?
ಸತ್ಯ 3: ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಸಾಮಾನ್ಯ ಜ್ಞಾನದ ಕೊರತೆ ಇರುವವರು ಮಾತ್ರ ಈ ರೀತಿ ಹೇಳಬಹುದು. ಭಯೋತ್ಪಾದಕರ ಹಣದ ಮೂಲ ಪಾಕಿಸ್ತಾನದಿಂದ ಬರುವ ಖೋಟಾ ನೋಟು ಎಂದು ಇವರು ಹೇಳುತ್ತಿದ್ದಾರೆ. ಒಂದು ವೇಳೆ ಅದೇ ಆಗಿದ್ದರೆ, ಖೋಟಾ ನೋಟಿನ ವಿಚಾರದಲ್ಲಿ ಮೇಲೆ ಏನು ಹೇಳಲಾಗಿದೆಯೋ ಅದೇ ಇದಕ್ಕೂ ಅನ್ವಯಿಸುತ್ತದೆ.
ಮಿಥ್ಯೆ 4: ಹಾಗಾದರೆ ಮೋದಿಯವರು ತಪ್ಪು ಅಂದಾಜಿನಿಂದ ಹೀಗೆ ಮಾಡಿದ್ದಾರಾ?
ಸತ್ಯ 4: ಖಂಡಿತವಾಗಿಯೂ ಇಲ್ಲ. ನೋಟು ರದ್ಧತಿಯಿಂದ ಕಪ್ಪು ಕುಳಗಳಿಗೆ ತೊಂದರೆಯಾಗುವುದಕ್ಕಿಂತ ಹೆಚ್ಚು ಬಡಬಗ್ಗರಿಗೆ ಏಟು ಬೀಳುತ್ತದೆಂದು ಮೋದಿಯವರಿಗೂ, ರಿಸರ್ವ್ ಬ್ಯಾಂಕ್ ಗವನರ್ ಊರ್ಜಿತ್ ಪಟೇಲ್ಗೂ ಇನ್ನುಳಿದ ಸಚಿವ ಸಂಪುಟದ ಹಿರಿಯ ಮಂತ್ರಿಗಳಿಗೂ ಖಂಡಿತ ಗೊತ್ತಿತ್ತು. ಹಾಗಿದ್ದರೆ, ಇಂಥ ನೋಟಿನ ರಾದ್ಧಾಂತವನ್ನು ಸರ್ಕಾರ ಯಾಕಾದರೂ ಸೃಷ್ಟಿಸಿದೆ? ಇದು ಅಸಲಿ ಪ್ರಶ್ನೆ.
ಇದರ ಹಿಂದೆ ಕಾರ್ಪೊರೇಟ್ ಜಗತ್ತನ್ನು ಕಾಪಾಡುವ ದೊಡ್ಡ ಹುನ್ನಾರವೇ ಅಡಗಿದೆ. ನಮಗೆಲ್ಲಾ ಗೊತ್ತಿರುವಂತೆ ಜಗತ್ತಿನ ವಹಿವಾಟು ಇಂದು ಹೆಚ್ಚಾಗಿ ನಡೆಯುತ್ತಿರುವುದು ಸಾಲದ ಮೇಲೆ. ಜನರನ್ನು ಸಾಲಗಾರರನ್ನಾಗಿ ಮಾಡಿ ಸರಕನ್ನು ಮಾರುವುದು ಬಂಡವಾಳಶಾಹಿಗಳ ತಂತ್ರ. ಈ ಸಾಲಗಳ ಕೇಂದ್ರ ಬಿಂದು ಬ್ಯಾಂಕಿಂಗ್ ವ್ಯವಸ್ಥೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಬ್ಯಾಂಕುಗಳು ದೊಡ್ಡ ಮೊತ್ತದ ಸಾಲವನ್ನು ಕಾರ್ಪೋರೇಟ್ ಕಂಪನಿಗಳಿಗೆ, ಒಂದಷ್ಟನ್ನು ಮಧ್ಯಮ ವರ್ಗಕ್ಕೆ, ಒಂದಷ್ಟನ್ನು ರೈತಾಪಿಗೆ, ಒಂದಷ್ಟನ್ನು ಕಾರ್ಮಿಕ ವರ್ಗಕ್ಕೆ ನೀಡುತ್ತಾ ಬಂದಿದೆ. ಇದರಲ್ಲಿ ಕಾರ್ಪೊರೇಟ್ ಕಂಪನಿಗಳು ಹಾಗೂ ರೈತರಿಗೆ ಕೊಟ್ಟ ಸಾಲ ಮರು ವಸೂಲಾಗುತ್ತಿಲ್ಲ. ಕಂಪನಿಗಳು ಹಿಂದಿರುಗಿಸಲು ಸಿದ್ಧವಿಲ್ಲ. ರೈತರು ಸಾಲ ಹಿಂತಿರುಗಿಸುವ ಸ್ಥಿತಿಯಲ್ಲಿ ಇಲ್ಲ. ಹಿಂದಿರುಗದೇ ಉಳಿದಿರುವ ‘ಬ್ಯಾಡ್ ಲೋನ್’ ಎಂದು ಕರೆಯಲಾಗಿರುವ ನೆನೆಗುದಿಗೆ ಬಿದ್ದಿರುವ ಸಾಲದ ಮೊತ್ತ ಬರೋಬ್ಬರಿ 60 ಲಕ್ಷ ಕೋಟಿ. ಅಂದರೆ ಈಗ ಇಡೀ ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ನೋಟುಗಳಿಗಿಂತ ಮೂರು ಪಟ್ಟು ಹೆಚ್ಚು. ಇದರಲ್ಲಿ ಆನೆ ಪಾಲು ಕಾರ್ಪೊರೇಟ್ ಕಂಪನಿಗಳದು. ಇದು ಅಪಾಯಕಾರಿ ಹಾದಿಯಲ್ಲಿ ಸಾಗುತ್ತಿದ್ದು 2008ರಲ್ಲಿ ಅಮೇರಿಕಾದಲ್ಲಿ ಆದಂತೆ ಇಲ್ಲೂ ಆರ್ಥಿಕತೆ ಕುಸಿದುಬೀಳುವ ಅಪಾಯದಲ್ಲಿದೆ. ಈ ರೀತಿ ಬೀಳದಂತೆ ತಡೆಯಲಿಕ್ಕೋಸ್ಕರ ಜಾಗತಿಕ ಬ್ಯಾಂಕಿಂಗ್ ಉದ್ದಿಮೆಯು ಬೇಸಲ್ ಎಂಬ ನಿಯಮವನ್ನು ರೂಪಿಸಿದೆ. ಅದರ ಪ್ರಕಾರ ಹಣಕಾಸಿನ ಆಪತ್ಕಾಲವನ್ನು ಎದುರಿಸಲು ಸುಮಾರು ಶೇ. 8ರಷ್ಟು ಹಣವನ್ನು ಬ್ಯಾಂಕುಗಳು ಮೀಸಲು ನಿಧಿಯಾಗಿ ಎತ್ತಿಡಬೇಕಿದೆ. ಕೊಟ್ಟ ಸಾಲವೇ ಹಿಂದಿರುಗದ ಸಂದರ್ಭದಲ್ಲಿ ವಹಿವಾಟಿಗೆ ಮತ್ತು ಮೀಸಲಿಡಲಿಕ್ಕೆ ಹಣ ಹೊಂದಿಸುವುದು ಹೇಗೆ? ಈ ಸವಾಲು ರಿಸರ್ವ್ ಬ್ಯಾಂಕನ್ನು ಕಾಡುತ್ತಿದೆ.
ಅಗ್ನಿ ಪರೀಕ್ಷೆಯ ಕಾಲದಲ್ಲಿ 2013ರಲ್ಲಿ ರಿಸರ್ವ್ ಬ್ಯಾಂಕಿನ ಮುಳ್ಳಿನ ಕುರ್ಚಿಯಲ್ಲಿ ಕೂತ ರಘುರಾಮ್ ರಾಜನ್ ಅನೇಕ ಕಸರತ್ತುಗಳನ್ನು ಮಾಡಿದರು. ಆದರೂ ಗುರಿ ತಲುಪುವುದು ಸುಲಭವಿರಲಿಲ್ಲ. ಹಣ ಹಿಂದಿರುಗಿಸದ ಕಾರ್ಪೋರೇಟ್ ಕಂಪನಿಗಳ ಬೆನ್ನು ಹತ್ತುವುದು ಅನಿವಾರ್ಯವಾಯಿತು. ಅವರು ನೆನೆಗುದಿಗೆ ಬಿದ್ದ ಸಾಲಗಳ ಮತ್ತು ಸಾಲಗಾರರ ಪಟ್ಟಿ ತಯಾರಿಸುವಂತೆ ಎಲ್ಲಾ ಬ್ಯಾಂಕುಗಳಿಗೂ ತಾಕೀತು ಮಾಡಿದರು. ಕಾರ್ಪೊರೇಟ್ ಕಂಪನಿಗಳು ಮತ್ತು ಬ್ಯಾಂಕ್ ಉನ್ನತ ಅಧಿಕಾರಿಗಳು ಸೇರಿಕೊಂಡು ಮುಚ್ಚಿಟ್ಟಿರುವ ಕಳ್ಳ ಸಾಲಗಳು ಹೊರಬರತೊಡಗಿದವು. ಸಾಲ ವಸೂಲಿಗೆ ಕ್ರಮ ಕೈಗೊಳ್ಳಲು ಬ್ಯಾಂಕುಗಳ ಮೇಲೆ ಒತ್ತಡ ಹೇರಲಾಯಿತು. ಪರಿಣಾಮವಾಗಿಯೇ ವಿಜಯ ಮಲ್ಯ ಸಿಕ್ಕಿಬಿದ್ದ. ಜೈಲಿಗೆ ಹೋಗಬೇಕಿದ್ದ ಅವನನ್ನು ಮೋದಿ ಸರ್ಕಾರ ಕಾಪಾಡಿ ವಿದೇಶಕ್ಕೆ ಕಳಿಸಿಕೊಟ್ಟಿತು. ಸಹಾರಾ ಕಂಪನಿಯ ಸುಬ್ರತಾ ರಾಯ್ ಜೈಲಿಗೆ ಹೋಗಿ, ಮೂರು ತಿಂಗಳಲ್ಲಿ ಸಾಲ ಹಿಂತಿರುಗಿಸುವ ಶರತ್ತಿನ ಮೇಲೆ ಹೊರಬಂದು ಆಸ್ತಿಪಾಸ್ತಿ ಮಾರಿ ಮರುಪಾವತಿ ಮಾಡಬೇಕಾಗಿ ಬಂದಿತು. ಈ ಎಲ್ಲಾ ವಿದ್ಯಮಾನಗಳಿಂದ ಗಾಬರಿಯಾದ ಕಾರ್ಪೊರೇಟ್ ದಣಿಗಳು ಒತ್ತಡ ತಂದು ರಘುರಾಮ ರಾಜನ್ ರಾಜಿನಾಮೆ ನೀಡುವಂತೆ ಮಾಡಿ ಅಂಬಾನಿಯ ಸಲಹೆಗಾರನಾಗಿದ್ದ ಊರ್ಜಿತ ಪಟೇಲ್ನನ್ನು ಕಳೆದ ಸೆಪ್ಟೆಂಬರಿನಲ್ಲಿ ಕುರ್ಚಿಯಲ್ಲಿ ಕೂರಿಸಿ ನಿಟ್ಟುಸಿರುಬಿಟ್ಟರು.
ಈ ಮಧ್ಯೆ ಕಳೆದ ಮೂರು ವರ್ಷಗಳಲ್ಲಿ 100 ದೊಡ್ಡ ಕಂಪೆನಿಗಳ 1.14 ಲಕ್ಷ ಕೋಟಿಗಳಷ್ಟು ಬೃಹತ್ ಮೊತ್ತದ ಹಣವನ್ನು ಸಂಪೂರ್ಣ ಮನ್ನಾ ಮಾಡಲಾಗಿತ್ತು. ಮೊದಲೇ ಕೈಯ್ಯಲಿರಬೇಕಾದ ಹಣದ ಕೊರತೆ ಹಾಗೂ ಅಸಮತೋಲನದ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಬ್ಯಾಂಕುಗಳು ಬಾಗಿಲು ಮುಚ್ಚುವ ಸ್ಥಿತಿ ಬಂತು. ಹೇಗಾದರೂ ದೊಡ್ಡ ಮೊತ್ತದ ಠೇವಣಿಗಳನ್ನು ಬ್ಯಾಂಕ್ಗಳಿಗೆ ಒದಗಿಸುವ ಅನಿವಾರ್ಯತೆ ಎದುರಾಯಿತು.
ಇಪಿಎಫ್ ಹಣಕ್ಕೆ ಕೈ ಹಾಕಲು ನೋಡಿದ್ದೂ ಇದಕ್ಕಾಗಿಯೇ! ಆದರೆ, ಕರ್ನಾಟಕದ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಇನ್ನಿತರ ಸಂಘಟನೆಗಳ ಉಗ್ರ ಹೋರಾಟದಿಂದ ಕೇಂದ್ರ ಹಣಕಾಸು ಸಚಿವ ಜೇಟ್ಲಿ ಬಾಲ ಮುದುರಿಕೊಂಡು ಯೋಜನೆಯಿಂದ ಹಿಂದೆ ಸರಿಯಬೇಕಾಯಿತು. ಆದರೂ, ಬ್ಯಾಂಕುಗಳಿಗೆ ಹಣದ ಕೊರತೆ ಪೂರೈಸಲೇಬೇಕಿತ್ತು. ಆಗ ತಯಾರಾದದ್ದು ‘ಮಾಸ್ಟರ್ ಪ್ಲಾನ್’!
ಏನದು ಮಾಸ್ಟರ್ ಪ್ಲಾನ್? ಕಳ್ಳರ ಕೂಟದ ಮಾಸ್ಟರ್ಪ್ಲ್ಯಾನಿನ ಅಕ್ರಮ ಸಂತಾನವೇ ಈ 500, 1000 ರೂಗಳ ರದ್ದತಿ. ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳು! ಜನರ ಕಣ್ಣಿನಲ್ಲಿ ಕಪ್ಪು ಹಣದ ಮೇಲೆ ದಾಳಿ ಮಾಡಿದ ಶೂರನಾಗಿ ಮೋದಿಯ ಪ್ರತಿಷ್ಠಾಪನೆ, ಸಾಮಾನ್ಯರ ಕೈಯ್ಯಲ್ಲಿದ್ದ ಸಣ್ಣಪುಟ್ಟ ಮೊತ್ತವೆಲ್ಲ ಸೇರಿ ಬ್ಯಾಂಕ್ಗಳ ಹಣದ ಅಸಮತೋಲನ ನಿವಾರಣೆ, ನಿಜವಾದ ಕಪ್ಪುಕುಳಗಳ ಕೂದಲೂ ಕೊಂಕದಂತೆ ಮುಂಬರುವ ಪಂಜಾಬ್, ಉತ್ತರ ಪ್ರದೇಶಗಳ ಚುನಾವಣೆಗಳಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಭದ್ರ!!
ಉರ್ಜಿತ್ ಪಟೇಲನ ಯೋಜನೆ ಪ್ರಕಾರ ಜನ ಸಾಮಾನ್ಯರ ಬಳಿ ಉಳಿದಿರುವ ಹಣವನ್ನು ಕಬಳಿಸಿ ¨ಂಡವಾಳಶಾಹಿಗಳಿಗೆ ಬೇಕಿರುವ ರೀತಿಯಲ್ಲಿ ಬ್ಯಾಂಕ್ ವ್ಯವಸ್ಥೆಯನ್ನು ಬಲಪಡಿಸಬೇಕು. ಆದರೆ ಹೆಚ್ಚಿನ ಪಾಲು ಜನಸಾಮಾನ್ಯರು ಬ್ಯಾಂಕ್ ಉದ್ದಿಮೆಯಿಂದ ಹೊರಗೇ ಉಳಿದಿದ್ದಾರೆ. ಈಗ ಈ ನೋಟು ರದ್ದತಿ ಮೂಲಕ ಎಲ್ಲರೂ ಬ್ಯಾಂಕಿಗೆ ಬರಲೇಬೇಕಾದ ಪರಿಸ್ಥಿತಿ ನಿರ್ಮಿಸಿದ್ದಾರೆ. ಹಳೆ ಹಣ ಠೇವಣಿ ಮಾಡಿಕೊಂಡು ಹೊಸ ಹಣದ ಬಿಡುಗಡೆ ತಡಮಾಡುತ್ತಿರುವುದು ಸಹಾ ಅದರ ಭಾಗವೆ. ಇದರಿಂದಾಗಿ ಬ್ಯಾಂಕುಗಳ ಬಳಿ ಮೀಸಲು ನಿಧಿ ಹೆಚ್ಚಾಗಿ ಬೇಸಲ್ ಶರತ್ತನ್ನು ಪೂರೈಸಲೂ ಸುಲಭವಾಗುತ್ತದೆ. ಈ ಹಣದ ಒದ್ದಾಟದಿಂದ ಬಸವಳಿಯುವ ಒಂದಷ್ಟು ಜನ ಡಿಜಿಟಲ್ ಖಾತೆಗೆ ವರ್ಗಾವಣೆಯಾಗುತ್ತಾರೆ. ಅಂದರೆ ಕೈಯಲ್ಲಿಟ್ಟುಕೊಳ್ಳುತ್ತಿದ್ದ ಹಣವನ್ನು ಬ್ಯಾಂಕಿನಲ್ಲಿಟ್ಟು, ಕಾರ್ಡನ್ನು ಕೈನಲ್ಲಿಟ್ಟುಕೊಳ್ಳುತ್ತಾರೆ. ಕೈಯಲ್ಲಿರುವ ಕಾರ್ಡು ಖರ್ಚು ಮಾಡಲು ಗ್ರಾಹಕರಿಗೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ಅಲ್ಲದೆ ಈ ಕಾರ್ಡು ವ್ಯಾಪಾರ ಸಾಮಾನ್ಯವಾಗಿ ದೊಡ್ಡ ಮಾಲುಗಳಲ್ಲಿ ಮತ್ತು ಕಂಪನಿ ಬ್ರ್ಯಾಂಡುಗಳ ಖರೀದಿಗೆ ಬಳಕೆಯಾಗುತ್ತದೆ. ಸಾರಾಂಶದಲ್ಲಿ ಜನರ ಬಳಿ ಇರುವ ಹಣ ಬ್ಯಾಂಕು ಮತ್ತು ಕಾರ್ಪೊರೇಟ್ ಕಂಪನಿಗಳ ಕಡೆ ಹರಿಯತೊಡಗುತ್ತದೆ.
ಇದರಿಂದ ಮೋದಿಗೇನು ಲಾಭ? ಮೋದಿ ತನಗೆ ಎರಡು ರೀತಿಯ ಲಾಭವಿದೆ ಎಂದು ಲೆಕ್ಕ ಹಾಕಿಯೇ ಉರ್ಜಿತ್ ಪಟೇಲನ ಮಾಸ್ಟರ್ ಪ್ಲಾನಿಗೆ ಓಕೆ ಅಂದದ್ದು. ಒಂದೋ ತನ್ನ ಆರ್ಥಿಕ ಸಂಪಾದನೆ ಮತ್ತು ಸಂಗ್ರಹದ ಮೂಲವಾಗಿರುವ ಅಂಬಾನಿ, ಅದಾನಿಗಳಿಗೆ ಆಗುವ ಲಾಭ ತನಗೂ ಆಗುವ ಲಾಭ. ಅಲ್ಲದೆ ಪಂಜಾಬಿನ ಚುನಾವಣೆಗಳು ಬರುತ್ತಿರುದರಿಂದ ಆಪ್ ಕಡೆಯಿಂದ ಕಪ್ಪುಹಣದ ಚರ್ಚೆ ಮತ್ತೆ ಏಳುತ್ತದೆ. ಕೊಟ್ಟ ಮಾತು ಈಡೇರಿಸಿಲ್ಲ ಎಂಬ ಆರೋಪಕ್ಕೆ ಉತ್ತರವಿಲ್ಲ. ಕಪ್ಪು ಹಣ ಹಾಗೂ ಭಯೋತ್ಪಾದನೆ ತಡೆಯಲಿಕ್ಕಾಗಿಯೇ ಇದನ್ನು ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಜನರನ್ನು ಮತ್ತು ತನ್ನ ಪಕ್ಷದ ಕಾರ್ಯಕರ್ತರನ್ನು ಏಮಾರಿಸಬಹುದು. ಅಲ್ಲದೆ ತನ್ನ ಪಕ್ಷದ ಮೇಲ್ ಸ್ತರಕ್ಕೆ ಮಾತ್ರ ಈ ಸುದ್ದಿಯನ್ನು ಲೀಕ್ ಮಾಡಿ ಪಕ್ಷದ ಚುನಾವಣಾ ನಿಧಿಗಾಗಿ ಇಟ್ಟಿರುವ ಹಣವನ್ನು ಮೊದಲೇ ಬದಲಾಯಿಸಿಕೊಂಡು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿಗೂ ಶಾಕ್ ನೀಡಬಹುದು. ದಣಿಗಳಿಗೂ ಲಾಭ, ತನಗೂ ಲಾಭ ಇದು ಮೋದಿ ಲೆಕ್ಕಾಚಾರ.
ನೋಟು ರದ್ಧತಿಯ ಈ ದುಷ್ಟ ಯೋಜನೆಯಿಂದ ದೇಶಕ್ಕೆ ಉಂಟಾಗಿರುವ ನಷ್ಟ ಎಷ್ಟು?
ದೇಶದ ಜನಸಾಮಾನ್ಯರು ಕ್ಯೂ ನಿಲ್ಲಬೇಕಾಗಿ ಬಂದಿದೆ ಎಂಬುದಷ್ಟೇ ನಷ್ಟವಲ್ಲ. ದೇಶದ ಭಾರೀ ದೊಡ್ಡ ಜನಸಂಖ್ಯೆ ಅನೌಪಚಾರಿಕ ಅಥವಾ ಅಸಂಘಟಿತ ವ್ಯವಹಾರ ಮತ್ತು ವ್ಯಾಪಾರಗಳಲ್ಲಿ ತೊಡಗಿದೆ. ಅಂಥವರೂ ಸೇರಿದಂತೆ, ವಿವಿಧ ಸೇವಾವಲಯಗಳಲ್ಲಿರುವ ಕೋಟ್ಯಾಂತರ ಕುಟುಂಬಗಳ ಒಟ್ಟೂ ವ್ಯವಹಾರ ಶೇ.30ರಿಂದ ಶೇ.70ರವರೆಗೆ ನಷ್ಟ ಅನುಭವಿಸಿದೆ. ಇದು ಇನ್ನೂ ಎಷ್ಟು ಕಾಲ ನಡೆಯಲಿದೆ ಎಂಬುದರ ಮೇಲೆ ಅವರು ಚೇತರಿಸಿಕೊಳ್ಳುವುದು ಅಷ್ಟಷ್ಟು ತಡವಾಗುತ್ತಾ ಹೋಗುತ್ತದೆ. ಅಥವಾ ಒಂದಷ್ಟು ಭಾಗ ಚೇತರಿಸಿಕೊಳ್ಳದೆಯೇ ಹೋಗಬಹುದು. ಆದರೆ, ಇದರಿಂದ ಏನೋ ಒಳ್ಳೆಯದು ಆಗಿಬಿಡಬಹುದು, ಬಹುಶಃ ನಮಗೆ ಗೊತ್ತಿಲ್ಲ; ಅಥವಾ ಈ ಊರಿನಲ್ಲಿರುವ ಇನ್ಯಾರೋ ದೊಡ್ಡ ಶ್ರೀಮಂತರಿಗೆ ಬಹುಶಃ ದೊಡ್ಡ ಪ್ರಮಾಣದ ನಷ್ಟ ಆಗಬಹುದು, ಅದಾದರೂ ಆಯಿತಲ್ಲ ಎಂಬ ರೀತಿಯಲ್ಲಿ ಹಲವರು ಆಲೋಚಿಸುತ್ತಾ ‘ಒಳ್ಳೆಯ ದಿನ’ಗಳಿಗಾಗಿ ಕಾಯುತ್ತಿದ್ದಾರೆ. ಮೇಲೆ ಹೇಳಲಾದ ಕಾರಣಗಳಿಂದ ಅದೂ ಆಗುವುದಿಲ್ಲ. ಹೀಗಾಗಿ ದೇಶದ ಆರ್ಥಿಕತೆಗೇ ಇದು ಒಂದು ದೊಡ್ಡ ನಷ್ಟದ ಕ್ರಮವಾಗಿದೆ.
ಹಾಗಾದರೆ ನ್ಯಾಯವಾದ ಮಾರ್ಗಗಳಲ್ಲಿ ಕಪ್ಪು ಹಣ ಹೊರತೆಗೆಯಲು ಸಾಧ್ಯವಿಲ್ಲವೆ?
ಖಂಡಿತ ಸಾಧ್ಯವಿದೆ. ಮೊದಲನೇಯದಾಗಿ, ದೊಡ್ಡ ದಂಧೆಯಲ್ಲಿ ತೊಡಗಿರುವ ಮೋದಿ-ಬಿಜೆಪಿ ಮಿತ್ರರಾದ 1000 ಕಂಪೆನಿಗಳಿಗೆ ಅಂಕುಶ ಹಾಕಿದರೆ 125 ಕೋಟಿ ಜನರನ್ನು ಬವಣೆಗೆ ದೂಡಿ ಸಿಗಬಹುದಾದ ಹಣಕ್ಕಿಂತ 20 ಪಟ್ಟು ಹೆಚ್ಚು ಹಣ ಸಿಗುತ್ತದೆ. ಅಂಬಾನಿ, ಅದಾನಿ, ಟಾಟಾ, ಮಹೇಂದ್ರಗಳಂಥ ಮೋದಿ-ಬಿಜೆಪಿಯ ಕೇವಲ 10 ಮಿತ್ರರು ಬ್ಯಾಂಕುಗಳಿಗೆ 10 ಲಕ್ಷ ಕೋಟಿ ಬಾಕಿ ಇದ್ದಾರೆ. ಕೇವಲ ಈ ಹತ್ತು ಜನಗಳ ಮೇಲೆ ಕ್ರಮ ತೆಗೆದುಕೊಂಡರೂ 125 ಕೋಟಿ ಜನರಿಗೆ ಕಷ್ಟ ಕೊಟ್ಟು ಲೂಟಿ ಮಾಡುತ್ತಿರುವ ಹಣಕ್ಕಿಂತ 10 ಪಟ್ಟು ಹೆಚ್ಚು ಹಣ ದೊರೆಯುತ್ತದೆ. ಎರಡನೆಯದಾಗಿ, ಕಪ್ಪು ಹಣವನ್ನು ಸೃಷ್ಟಿಸುತ್ತಿರುವ ಬಹುದೊಡ್ಡ ಮೂಲಗಳಾದ ಖಾಸಗಿ ಶಿಕ್ಷಣ ವಹಿವಾಟು ಮತ್ತು ಖಾಸಗಿ ದೊಡ್ಡ ಮಲ್ಟಿ ಸ್ಪೆಷಾಲಿಟಿ ಜಾಲದ ಮೇಲೆ ದಾಳಿ ಮಾಡುವುದು, ಕಪ್ಪು ಹಣ ಹುಟ್ಟುವುದನ್ನೇ ತಡೆಗಟ್ಟಬಹುದಾದ ಕ್ರಮ. ಖಾಸಗಿ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳು ಕ್ಯಾಪಿಟೇಷನ್, ಡೆವಲಪ್ಮೆಂಟ್ ಶುಲ್ಕ ಮೊದಲಾದ ಹೆಸರಿನಲ್ಲಿ ಸಂಗ್ರಹಿಸುವ ಅನಧಿಕೃತ ಮೊತ್ತವೇ ಸಾವಿರಾರು ಕೋಟಿಗಳಷ್ಟಿರಬಹುದು. ಇದರಲ್ಲಿ ಬಹುಪಾಲು 12ಎ ಅಕೌಂಟ್ಗಳಲ್ಲಿ (ಚಾರಿಟಬಲ್ ಉದ್ದೇಶಗಳಿಗೆ ರಚನೆಯಾಗಿರುವ ಸೇವಾ ಸಂಸ್ಥೆಗಳಿಗೆಂದು ತೆರೆಯಲಾಗುವ ಬ್ಯಾಂಕ್ ಅಕೌಂಟ್ಗಳು. ಬಹುಪಾಲು ಖಾಸಗಿ ಶಿಕ್ಷಣದ ವ್ಯಾಪಾರಿಗಳು ಸೇವಾ ಸಂಸ್ಥೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತವೆ) ತುಂಬಿರುವುದು ಅನಧಿಕೃತ ಕಪ್ಪು ಹಣವೇ. ಆದರೆ, ಇವುಗಳಿಗೆ ಯಾವುದೇ ಸಮಸ್ಯೆಯಿಲ್ಲದೆ ಅಕೌಂಟ್ಗಳಲ್ಲಿರುವ ಎಲ್ಲಾ ಕಪ್ಪುಹಣ ನಿರಾಯಾಸವಾಗಿ ಬಿಳಿ ಹಣವಾಗಿ ಪರಿವರ್ತನೆಯಾಗಿಬಿಟ್ಟಿದೆ! ಮೂರನೆಯದಾಗಿ, ಮಠ, ಮಂದಿರ, ಮಸೀದಿ, ಚರ್ಚ್ ಮೊದಲಾಗಿ ‘ಧಾರ್ಮಿಕ ಕ್ಷೇತ್ರ’ಗಳಲ್ಲಿ ಅಪಾರ ಪ್ರಮಾಣದ ಹಣ ಮತ್ತು ಆಸ್ತಿ ಶೇಖರವಾಗಿದೆ. ಇದರಲ್ಲಿ ಬಹುಭಾಗ ಅನಧಿಕೃತ ಎಂದು ಎಲ್ಲರಿಗೂ ಗೊತ್ತಿದೆ.
ಇಂತಹ ಎಲ್ಲ ಕಾಳಧನ ಖೂಳರು ದೇಶದೊಳಗೆ ಮತ್ತು ಹೊರಗೆ ಕೂಡಿಟ್ಟಿರುವ ಬೇನಾಮಿ ಅಕ್ರಮ ಅಕೌಂಟ್ಗಳನ್ನು, ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡರೂ ಸಾಕು ಇಡೀ ದೇಶ ಸುಭಿಕ್ಷವಾಗಿ ಬದುಕುವಷ್ಟು ನಿಧಿಯನ್ನು ಕ್ರೋಢೀಕರಿಸಬಹುದು.
ಹೇಳಿ, ಸತ್ಯ ತಿಳಿದ ನಂತರ ನಾವೇನು ಮಾಡೋಣ?
ಮೊದಲಿಗೆ ಈ ದೇಶದ್ರೋಹಿ ಯೋಜನೆಯನ್ನು ಬಯಲುಗೊಳಿಸಿ ಹಿಂತೆಗೆದುಕೊಳ್ಳಲು ಒತ್ತಾಯಿಸೋಣ.
ಕಾರ್ಪೊರೇಟ್ ಸಾಲಗಳನ್ನು ಒಂದು ವರ್ಷದೊಳಗೆ ಮರುವಸೂಲಿ ಮಾಡಲೇಬೇಕು ಎಂದು ಒತ್ತಾಯಿಸೋಣ.
ಬಯಲಾಗಿರುವ ವಿದೇಶಿ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಒತ್ತಾಯಿಸೋಣ.
ಆಗ್ರೋ ಕಂಪನಿಗಳಿಗೆ ಲೆವಿ ಹಾಕುವ ಮೂಲಕ ರೈತರ ಸಾಲವನ್ನು ಮನ್ನಾ ಮಾಡಲು ಒತ್ತಾಯಿಸೋಣ.
ಕಾರ್ಪೊರೇಟ್ ಚೇಲಾಗಳಾದ ಊರ್ಜಿತ್ ಮತ್ತು ಮೋದಿ ರಾಜಿನಾಮೆ ನೀಡಬೇಕೆಂದು ಒತ್ತಾಯಿಸೋಣ.
500-1000 ನೋಟು ಬಂದನ್ನು ಕೂಡಲೇ ಹಿಂತೆದುಕೊಳ್ಳಿ. ಬಡ ಭಾರತವನ್ನು ಉಳಿಸಿ.
ಕಪ್ಪು ಹಣವನ್ನು ನಿಗ್ರಹಿಸಲು ಮೊದಲು ದೊಡ್ಡ ದೊಡ್ಡ ಕಾಪೆರ್Çರೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸಿ. ಬೇನಾಮಿ ಹೆಸರಲ್ಲಿ ವಿದೇಶಿ ದ್ವೀಪಗಳಲ್ಲಿರುವ ಕಪ್ಪುಹಣವನ್ನು ರಾಷ್ಟ್ರೀಕರಿಸಿ,
125 ಕೋಟಿ ಜನರ ಮೇಲೆ ದಾಳಿ ಮಾಡುವ ಬದಲು ಮೋದಿ-ಬಿಜೆಪಿ ಮಿತ್ರರಾದ 1000 ಶ್ರೀಮಂತರು ಮತ್ತು ಹತ್ತು ಕಂಪನಿಗಳ ಮೇಲೆ ದಾಳಿ ನಡೆಸಿ. ಕಂಪನಿಗಳ ಮೇಲೆ ಲೆವಿ ಹಾಕಿ ರೈತರ ಸಾಲವನ್ನು ರದ್ದುಗೊಳಿಸಿ.
ಕಪ್ಪು ಆರ್ಥಿಕತೆಯನ್ನು ನಿಷೇಧಿಸಿ. ಒಟ್ಟಾರೆ ಆಸ್ತಿ ಹಿಡುವಳಿಯ ಮೇಲೆ ಮಿತಿಯನ್ನು ಹೇರಿ.
ರಾಜಕೀಯ ಪಕ್ಷಗಳಿಗೆ ಕೊಡುವ ಎಲ್ಲಾ ದೇಣಿಗೆಯನ್ನು ಬಹಿರಂಗಗೊಳಿಸಿ. ಅದನ್ನು ಕೇವಲ ಬ್ಯಾಂಕ್ ವ್ಯವಸ್ಥೆಯ ಮೂಲಕ ಆಗುವುದನ್ನು ಕಡ್ಡಾಯಗೊಳಿಸಿ.
2014ರ ಲಿಚೆಲ್ಸ್ಟೆನ್ ಲೀಕ್ಸ್, 2015ರ ಎಚ್ಎಸ್ಬಿಸಿ-ಸ್ವಿಸ್ ಲೀಕ್ಸ್, ಮತ್ತು 2016ರ ಪನಾಮಾ ಪೇಪರ್ಸ್ನಲ್ಲಿ ಬಯಲಾದ ಭಾರತೀಯ ಉದ್ಯಮಿಗಳು ಮತ್ತು ಶ್ರೀಮಂತರ ಕಾಳಧನವನ್ನು ಮತ್ತು ಉದ್ಯಮಗಳನ್ನು ಮುಟ್ಟುಗೋಲು ಹಾಕಿರಿ.
ಕಪ್ಪು ಆರ್ಥಿಕತೆಯ ಗಂಗೋತ್ರಿಯಾದ ಜಾಗತೀಕರಣ ಮತ್ತು ಖಾಸಗೀಕರಣ ಮತ್ತು ಉದಾರೀಕರಣವನ್ನು ರದ್ದುಮಾಡಿ.
ಜನಶಕ್ತಿ,ಕರ್ನಾಟಕ