ಸೋಮವಾರ, ಜನವರಿ 23, 2017

ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿರುವುದು ಯಾಕೆ?*

ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರೋ ಗೊತ್ತಿಲ್ಲ. ಆದರೆ ನನ್ನ ಗಮನಕ್ಕೆ ಬಂದಿರುವ, ನ್ಯಾಯ ಕೇಳಿ ನನಗೆ ದೂರು ನೀಡಲಾಗಿರುವ ಮತ್ತು ಆಪ್ತ ಸಮಾಲೋಚನೆ ನಡೆಸಿರುವ ಗಂಡ-ಹೆಂಡತಿ ಮನಸ್ತಾಪಗಳ ಹಿನ್ನೆಲೆಯಲ್ಲಿ ಈ ನಿಲುವಿಗೆ ಬರುತ್ತಿದ್ದೇನೆ. ನಮ್ಮ ಹೆಣ್ಣು ಮಕ್ಕಳು ತಾಳ್ಮೆ ಕಳಕೊಳ್ಳುತ್ತಿದ್ದಾರೆ. ಚಿಕ್ಕ ಪುಟ್ಟ ವಿಚಾರಗಳಿಗೂ ವಿವಾಹ ವಿಚ್ಛೇದನದ ತೀರ್ಮಾನಕ್ಕೆ ಬಂದು ಬಿಡುತ್ತಾರೆ!

ಅನುಪಾತದ ಲೆಕ್ಕಾಚಾರ ಹಾಕಿದರೆ ಕಾಲೇಜು ಮೆಟ್ಟಲು ಹತ್ತಿರುವ ಅಥವಾ ನಾಲ್ಕಕ್ಷರ ತಿಳಿದಿರುವ ಹೆಣ್ಣು ಮಕ್ಕಳಿಗೆ ತಾಳ್ಮೆ ತುಂಬಾ ಕಡಿಮೆ. ಹಾಗಾದರೆ ಅವರಿಗೆ ಶಿಕ್ಷಣ ನೀಡಿದ್ದೇ ತಪ್ಪಾಯಿತೇ? ಧಾರ್ಮಿಕ ಶಿಕ್ಷಣ ನೀಡಿದರೆ ಎಲ್ಲ ಸರಿ ಹೋಗುತ್ತೆ ಎನ್ನುವವರಿದ್ದಾರೆ. ಆದರೆ, ಏನೂ ವ್ಯತ್ಯಾಸ ಕಾಣುತ್ತಿಲ್ಲ!

ಮಹಿಳಾ ಶೋಷಣೆಯ ವಿರುದ್ಧ ಹೋರಾಡಲು ಅನೇಕ ಸಂಸ್ಥೆಗಳಿವೆ. ಪುರುಷ ಶೋಷಣೆಯ ವಿರುದ್ಧ ಇನ್ನು ಸಂಘ-ಸಂಸ್ಥೆಗಳು ಹುಟ್ಟಿಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

ಯಾಕೆಂದರೆ ಪೊಲೀಸ್ ಇಲಾಖೆ, ನ್ಯಾಯಾಲಯಗಳು ಅನೇಕ ಸಲ ಭಾವನಾತ್ಮಕವಾಗಿ ಮಹಿಳಾ ಪರವಾಗಿರುತ್ತೆ. ಈ ಕಾರಣಕ್ಕಾಗಿಯೇ ಇರಬಹುದೇನೋ, ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು "ವರದಕ್ಷಿಣೆ ವಿಚಾರವಾಗಿ ಗಂಡ-ಹೆಂಡತಿ ಜಗಳದ ಕೇಸುಗಳನ್ನು ದೂರು ಬಂದ ಕೂಡಲೇ  ದಾಖಲಿಸಬೇಡಿ. ಸಾಕಷ್ಟು ತನಿಖೆ ನಡೆಸಿದ ಬಳಿಕವೇ ಅಗತ್ಯವಿದ್ದಲ್ಲಿ ಕೇಸು ದಾಖಲಿಸಿ. ನ್ಯಾಯಾಲಯಗಳ ಸಮಯ ಉಳಿಸಿ" ಎಂದು ಪೋಲಿಸ್ ಇಲಾಖೆಗೆ ಆದೇಶಿಸಿದೆ.

ಗಂಡ, ಆತನ ತಂದೆ,ತಾಯಿ ಮತ್ತು ಇಡೀ ಕುಟುಂಬದ ಮೇಲೆ ಸುಳ್ಳು ಕೇಸು ಹಾಕಿ ವರ್ಷಗಟ್ಟಲೆ ಅವರು ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ಅಲೆದಾಡುವಂತೆ ಮಾಡುವ ಹೆಣ್ಣು ಮಕ್ಕಳಿಗೆ ಬುದ್ಧಿ ಹೇಳುವವರು ಯಾರು?

ಮಹಿಳಾ ಶೋಷಣೆ, ಪುರುಷ ಪ್ರಧಾನ ಸಮಾಜ ಎಂದೆಲ್ಲಾ ಕಿರುಚಾಡುವ ಮಂದಿ ಇದಕ್ಕೆ ಉತ್ತರ ನೀಡುತ್ತಾರೆಯೇ?

ತಾಯಿಯ ಬಗ್ಗೆ ಅತಿಯಾದ ಗೌರವ ನಮಗೆ, ಆದರೆ ತಂದೆಯನ್ನು ಯಾಕೆ ಮರೆಯುತ್ತೇವೆ? ನಮ್ಮ ಬೆಳವಣಿಗೆಗೆ ಆತನ ಕೊಡುಗೆ ಏನೂ ಇಲ್ಲವೇ?

ಕುಟುಂಬ, ಮನೆ, ಊರು, ದೇಶ ಬಿಟ್ಟು ಪರವೂರು/ವಿದೇಶಗಳಲ್ಲಿ ಬೆವರು, ರಕ್ತ ಸುರಿಸುತ್ತಾ ಸಂಸಾರಕ್ಕೆ ಬೆಂಗಾವಲಾಗಿ ನಿಂತು ಜೀವ ಸವೆಸುತ್ತಿರುವ ನಮ್ಮ ಹುಡುಗರು ಒಂದರ್ಥದಲ್ಲಿ ಶೋಷಣೆಗೆ ಒಳಪಟ್ಟವರಲ್ಲವೇ?

ಪ್ರಸಕ್ತ ಸಮಾಜದ ಹುಡುಗಿಯರಿಗೆ ಹೋಲಿಸಿದರೆ, ಹುಡುಗರು ಎಷ್ಟೋ ವಾಸಿ ಅನಿಸುತ್ತಿದೆ. ನನ್ನ ನಿಲುವು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ!

*ಉಮರ್ ಯು.ಹೆಚ್.*