ಸೋಮವಾರ, ಜನವರಿ 23, 2017

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ

ಕಂಬಳ - ಜಲ್ಲಿಕಟ್ಡು - ಮಡೆಸ್ನಾನ - ಎಡೆಸ್ನಾನ - ಬೆತ್ತಲೆ ಸೇವೆ - ಎದೆಬಡಿದುಕೊಳ್ಳುವುದು ಎಲ್ಲವನ್ನೂ ಬೆಂಬಲಿಸೋಣ ಕಣ್ರೀ . ಯಾವಾಗೆಂದರೆ,
ಎಲ್ಲಾ MLA ಮಂತ್ರಿಗಳೂ,  IAS IPS IFS KAS ಅಧಿಕಾರಿಗಳು,  ಸಿನಿಮಾ ಧಾರವಾಹಿಗಳ ನಟನಟಿ ನಿರ್ದೇಶಕರೂ, ಮಠಾದೀಶರು , ಬುದ್ದಿಜೀವಿಗಳು,  ಧರ್ಮಾಧಿಕಾರಿಗಳು,  ಎಲ್ಲಾ ಹೋರಾಟಗಾರರೂ,  ಇಂಜಿನಿಯರ್ ಡಾಕ್ಟರ್ ಲಾಯರ್ ಟೀಚರ್ ಪ್ರೊಫೆಸರ್, ವಿಜ್ಙಾನಿಗಳು , ಕೋಟ್ಯಾಧಿಪತಿ ಉದ್ಯಮಿಗಳು, ಸಾಹಿತಿ ಬರಹಗಾರರು,  ಜ್ಯೋತಿಷಿಗಳು ,  ಮುಖ್ಯವಾಗಿ ಎಲ್ಲಾ ಮಾಧ್ಯಮದ ಪ್ರಖಾಂಡ ಪಂಡಿತರು ತಮ್ಮ ಕುಟುಂಬ ಸಮೇತ ಈ ಚಟುವಟಿಕೆಗಳಲ್ಲಿ ಪಾತ್ರಧಾರಿಗಳಾಗಿ ಭಾಗವಹಿಸಿದಾಗ.
                       ಇದು ಸಾಧ್ಯವೇ ಇಲ್ಲ ಕಣ್ರೀ. ಅವರುಗಳು ಯಾವತ್ತಾದರೂ ಹಳೆಯ ಹರಿದ ಮಾಸಲು ಬಟ್ಟೆ ಹಾಕಿಕೊಂಡಿರುವುದನ್ನು ನೋಡಿದ್ದೀರಾ. ಯಾವನಾದರೂ ಕೈ ಕಾಲು ಮಣ್ಣು ಮಾಡಿಕೊಂಡಿರುವುದನ್ನು ಕಂಡಿರುವಿರಾ. ಕೆಸರಲ್ಲಿ ಹೊರಳಾಡುವುದನ್ನು ಗಮನಿಸಿದ್ದೀರಾ.
ಅವರು ನಮ್ಮಷ್ಟು ಮೂರ್ಖರಲ್ಲಾ ಕಣ್ರೀ. ಕೊಬ್ಬಿದ ಕೊಂಬಿನ ಹೋರಿಯನ್ನು ಹಿಡಿಯಲು ಹೋಗಿ ಅವರು ಅಥವಾ ಅವರ ಮಕ್ಕಳು ಗಾಯ ಮಾಡಕೊಳ್ಳುವುದೋ ಸಾಯವುದನ್ನೋ ಅನುಭವಿಸಲು  ಅವರಿಗೇನು ಹುಚ್ಚೇ. ಇದೊಂದು ಮಹಾನ್ ಸಂಪ್ರದಾಯ. ಇದು ನಡೆಯದಿದ್ದರೆ ನಮ್ಮ ಬದುಕು ನಮ್ಮ ಸಂಸ್ಕೃತಿ ನಾಶವಾಗಿ ನಾವು ನರಕಕ್ಕೆ ಹೋಗುತ್ತೇವೆ ಎಂದು ಭಾವಿಸಲು ಅವರಿಗೇನು ಹುಚ್ಚುನಾಯಿ ಕಚ್ದಿದೆಯೇ.
ಬೇಡ ಕಣ್ರೀ,  ಇದು ಮೂರ್ಖರು,  ಮುಗ್ಧರು,  ಮೂಢರು,  ಸ್ವತಂತ್ರ ಚಿಂತನೆ ಇಲ್ಲದ ಗುಲಾಮ ಮನಸ್ಥಿತಿಯವರು , ಬಡವರು, ಶೋಷಿತರು ಆಚರಿಸುವ ಸಂಪ್ರದಾಯಗಳು ಕಣ್ರೀ.
                  ಗ್ರಾಮಗಳಲ್ಲಿ ಎಂತೆಂತಹ ಅದ್ಭುತ ಆಟಗಳಿವೆ. ಇಬ್ಬರು ಆಡುವ - ಗುಂಪಾಗಿ ಆಡುವ ದೈಹಿಕ ಮಾನಸಿಕ ಸಾಮರ್ಥ್ಯಕ್ಜೆ ಸವಾಲಾಗುವ ವೈವಿಧ್ಯಮಯ ಕ್ರೀಡೆಗಳಿವೆ. ಯಾವುದೇ ಅಪಾಯವಿಲ್ಲದ ಯಾರಿಗೂ ತೊಂದರೆ ಕೊಡದ ಯಾರ ಅನುಮತಿಯೂ ಬೇಕಿಲ್ಲದ ಸಂಭ್ರಮದ ಆಟಗಳಿಗೆ ಭಾರತದಂತ ಅತ್ಯುತ್ತಮ ಸಾಂಸ್ಕೃತಿಕ ಇತಿಹಾಸ ಹೊಂದಿರುವ ದೇಶದಲ್ಲಿ ಬರವೇ.
                ಈ ಸಿದ್ದರಾಮಯ್ಯ, ಯಡಿಯೂರಪ್ಪ,  ಕುಮಾರಸ್ವಾಮಿ, ಶಶಿಕಲಾ,   ಪನ್ನೀರ್ ಸೆಲ್ವಂ, ನರೇಂದ್ರ ಮೋದಿ, ಪ್ರಣವ್ ಮುಖರ್ಜಿ , ಟಿವಿಗಳ ಬಾಯಿಬುಡುಕರು ಯಾರೂ ಇದರಲ್ಲಿ ಭಾಗವಹಿಸುವುದಿರಲಿ ಚಪ್ಪಾಳೆ ತಟ್ಟಲು ಬರುವುದೂ ಅನುಮಾನ. ಏನಾದರೂ ಅನಾಹುತ ನಡೆದರೆ ಟಿವಿಗಳಲ್ಲಿ ನೋಡಿ ಪರಿಹಾರ ಘೋಷಿಸಿ ಹೊಟ್ಟೆತುಂಬ ಮೃಷ್ಟಾನ್ನ ಭೋಜನ ಮಾಡಿ Oxygen bed ನಲ್ಲಿ ಮಲಗಿಕೊಂಡು ಬಿಡ್ತಾರೆ ಕಣ್ರೀ.ರಾತ್ರೋ ರಾತ್ರಿ ಒಂದು ಸಣ್ಣ ಮುಷ್ಕರಕ್ಕೆ ಹೆದರಿ ಸುಪ್ರೀ೦ಕೋರ್ಟ್ ನ ಆದೇಶಕ್ಕೆ ವಿರುಧ್ಧವಾಗಿ ಸುಗ್ರೀವಾಜ್ಞೆ ಹೊರಡಿಸಿದರು  ಪಾಪ ಸಂಪ್ರದಾಯ ಅಂತ ಹೇಳಿ ಈ ಹುಚ್ಚಾಟಕ್ಕೆ ಸತ್ತವನ ಹೆಂಡತಿ ಮಕ್ಕಳು ಬೀದಿಪಾಲಾಗ್ತಾರೆ ಕಣ್ರೀ.
           ಇನ್ನೊಂದು ವಿಪರ್ಯಾಸ ಗೊತ್ತೆ.  ಯಾರು ಈ Digital India, online trading,  cashless economy,  smart city, smart village, advanced technology  global leader, ಅಂತೆಲ್ಲಾ ಮಾತನಾಡುತ್ತಾರೋ ಅವರೇ ಹೆಚ್ಚಾಗಿ ಇದನ್ನು ಬೆಂಬಲಿಸುವುದು ಕಾಣುತ್ತಿದೆ. ಇದು ನನಗೆ ಗೊಂದಲ ಮೂಡಿಸಿದೆ. ಇವರು ಭಾವನಾತ್ಮಕವಾಗಿ ಮಾತ್ರ ಯೋಚಿಸುತ್ತಿದ್ದಾರೆಯೇ ಎಂದು.
ಬೇಡ ಕಣ್ರೀ ... ನಿಮ್ಮ ದಮ್ಮಯ್ಯ ...... ಧರ್ಮ ಜಾತಿ ಎಡ ಬಲ ಪಂಥ ಆ ಪಕ್ಷ ಈ ಪಕ್ಷ ಎಲ್ಲಾ ಸ್ವಲ್ಪ ಪಕ್ಕಕ್ಕಿಟ್ಟು ಭಾರತೀಯತೆಯನ್ನು ಮೈಗೂಡಿಸಿಕೊಂಡು ನಾಗರೀಕ ಸಮಾಜ ಕಟ್ಟೋಣ. ಮಾಡಲು ಇದಕ್ಕಿಂತ ಬಹುಮುಖ್ಯ ಕೆಲಸಗಳಿವೆ. ದಯವಿಟ್ಡು ಈ ಓಟಿನ ರಾಜಕೀಯಕ್ಕೆ ಬಲಿಯಾಗಬೇಡಿ. ವಿಶ್ವ ಬದಲಾಗುತ್ತಿರುವಾಗ ನಾವು ಹಿಮ್ಮುಖವಾಗಿ ಚಲಿಸುವುದು ಬೇಡ. ನಾವೆಲ್ಲಾ ಒಂದೇ ದೋಣಿಯ ಪಯಣಿಗರು. ಇನ್ನಷ್ಟು ವಿಶಾಲ ಮನಸ್ಸಿನಿಂದ ಮತ್ತೊಮ್ಮೆ ಯೋಚಿಸಿ.
ನಿಮ್ಮ ಸ್ವಾತಂತ್ರ್ಯ ನಿಮಗಿದ್ದೇ ಇದೆ.

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಇದು ಮನಸ್ಸುಗಳ ಅಂತರಂಗದ ಚಳುವಳಿ,
ವಿವೇಕಾನ೦ದ. ಹೆಚ್.ಕೆ.