"ಮುಸ್ಲಿಮನಾಗುವುದೆಂದರೆ ಸಮಾಜದ ನೊಗ ಹೊರುವುದು" - ಮುನ್ನುಡಿ
ದಾರಿಯಲ್ಲಿ ಬಿದ್ದ ಮುಳ್ಳನ್ನು ಸರಿಸುವುದನ್ನು ಮುಸ್ಲಿಮನಾಗುವ ಕನಿಷ್ಠ ಅರ್ಹತೆಗಳಲ್ಲಿ ಒಂದು ಎಂದು ಕಲಿಸಲಾಗಿದೆ. ಅರ್ಥಾತ್ ಇಸ್ಲಾಮನ್ನು ಅನುಸರಿಸಲು ಬಯಸುವುದಾದರೆ ಆತ ತನ್ನ ಸುತ್ತಲಿನ ಸಮಾಜದಲ್ಲಿ ಒಳಿತನ್ನು ಖಾತ್ರಿಪಡಿಸುವ ಹೊಣೆಯನ್ನು ಹೊರಬೇಕು ಎಂಬ ಸ್ಪಷ್ಟ ನಿರ್ದೇಶನ. ಮುಂದುವರಿದು "ಅನಾಥರನ್ನು ದೂರ ತಳ್ಳುವವರನ್ನು, ನಿರ್ಗತಿಕರನ್ನು ಅಸಹಾಯಕರನ್ನು ಉಣಿಸದವರನ್ನು, ಧರ್ಮದಲ್ಲಿ ಸುಳ್ಳಾಡುವವರು ಎಂದು ಕರೆಯುವ ಮೂಲಕ, ಇಸ್ಲಾಂ ಮುಸ್ಲಿಮರಿಗೆ ತನ್ನ ಸುತ್ತ ಮುತ್ತಲಿನ ಅನಾಥರನ್ನು ನಿರ್ಗತಿಕರನ್ನು ದತ್ತು ವಹಿಸಿಬಿಡುತ್ತದೆ. ಇನ್ನೊಂದು ಅರ್ಥದಲ್ಲಿ, ಅನಾಥರು,ನಿರ್ಗತಿಕರು,ಅಸಹಾಯಕರಿಗೆ ಹೆಗಲಾಗದ ಮುಸ್ಲಿಮರು, ತಾನು ಮುಸ್ಲಿಮನು ಎಂದು ಘೋಷಿಸಿಕೊಳ್ಳುವುದು ಶುದ್ಧ ಸುಳ್ಳು ಘೋಷಣೆಯಾಗಿದೆ ಎಂದು ಹೇಳುವ ಮೂಲಕ ಇಸ್ಲಾಂ ಮನುಷ್ಯರ ನಡುವಿನ ತಾರತಮ್ಯವನ್ನು, ಅಸಮಾನತೆಯನ್ನು, ಮೇಲು ಕೀಳಿನ ಅಹಂಮನ್ನು ಮುಸ್ಲಿಮನೊಬ್ಬ ಮೆಟ್ಟಿ ನಿಲ್ಲಬೇಕಿರುವ, ನೆರೆಹೊರೆಯ ಹಸಿವು ಆಕ್ರಂದನಗಳಿಗೆ ಕರಗುವ ಮಾನವೀಯತೆ, ಕರುಣೆಯನ್ನು ತನ್ನಲ್ಲಿ ಕಡ್ಡಾಯವಾಗಿ ಹೊಂದಿರಬೇಕಿರುವ ಅವಶ್ಯಕತೆಯನ್ನು, ಅಷ್ಟೇ ಗಂಭೀರವಾಗಿ ಆತನಿಗೆ ಬೋಧಿಸುತ್ತದೆ.
ಅನಾಥರ ನಿರ್ಗತಿಕರ ಕಾಳಜಿ ವಹಿಸದವರನ್ನು ಧರ್ಮದಲ್ಲಿ ಸುಳ್ಳಾಡುವವರು ಎಂದು ಹೇಳುವ ಸೂಕ್ತದ ಮರುಕ್ಷಣವೇ, ನಮಾಜು ಮಾಡುವವರ ಮೇಲೆ ಶಾಪವಿರಲಿ, ಅವರು ತೋರಿಕೆಯ ನಮಾಜು ಮಾಡುವವರಾಗಿದ್ದಾರೆ ಎಂಬ ವಿಸ್ಮಯಕಾರಿಯಾದ ಬೋಧನೆಗಳು , ,ಕಣ್ಣುಕಟ್ಟಿನ ದಾನವನ್ನು ಮಾಡಿ, ಪಡಕೊಳ್ಳುವವನ ಆತ್ಮಗೌರವಕ್ಕೆ ಬೆಲೆಕೊಡದೆ ಹೆಸರಿನ ವ್ಯಾಮೋಹಕ್ಕೆ ತೋರಿಕೆಯ ದಾನಗೈದು ಬಂದು ನಮಾಜಿಗೆ ನಿಲ್ಲುವವರೊಂದಿಗೆ ಚಾಟಿ ಬೀಸಿದಷ್ಟು ತೀಕ್ಷ್ಣವಾಗಿ ಮಾತನಾಡಿದಂತೆ ಅನ್ನಿಸಿಬಿಡುವುದೂ ಇದೆ.
ಹೀಗೆ ಇಸ್ಲಾಂ ನ ಹಲವಾರು ಬೋಧನೆಗಳು ಒಬ್ಬ ಮುಸ್ಲಿಮನು ಸಮಾಜದಿಂದ ಬೇರೆಯಾಗಿರಲು ಸಾಧ್ಯವಿಲ್ಲದಷ್ಟು ಆತನ ಮೇಲೆ ಹೊಣೆಗಾರಿಕೆಗಳನ್ನು ವಹಿಸುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದಾಗ, "ಮುಸ್ಲಿಮನಾಗುವುದೆಂದರೆ ಸಮಾಜದ ನೊಗ ಹೊರುವುದು" ಎಂಬ ಟಿಪ್ಪಣಿಯೊಂದನ್ನು ಕಂತುಗಳಲ್ಲಿ ಬರೆಯಬೇಕು ಅಂದುಕೊಂಡಿದ್ದೆ. ಆದರೆ ಇಸ್ಲಾಂ ನ ಕುರಿತು ಸಕಾರಾತ್ಮಕವೇ ಆಗಲಿ,ನಕಾರಾತ್ಮಕವೇ ಆಗಲಿ, ಯೋಚಿಸಿದಷ್ಟು ಬರವಣಿಗೆ ಸುಲಭವಲ್ಲ ಎಂಬ ಶಕ್ತ ಅರಿವಿರುವ ಕಾರಣ ಅದು ಮುಂದೂಡುತ್ತಾ ಹೋಯಿತು. ಸಾಧ್ಯವಾದರೆ ಬರೆಯುತ್ತೇನೆ. ಸಹನೆಯಿರುವ ಯುವ ಮನಸ್ಸುಗಳಿಗೆ ತಲುಪಲು ಈ ಅಕ್ಷರಗಳಿಗೆ ಸಾಧ್ಯವಾಗಲಿ. ಇಸ್ಲಾಂ ಸಮಾಜದ ಒಳಿತಿಗಾಗಿ ಇರುವುದು ಮಾತ್ರ ಸತ್ಯ , ಮಿಕ್ಕೆಲ್ಲ ಕೆಟ್ಟ ಹೆಸರುಗಳೂ ಮುಸ್ಲಿಮರು ಇಸ್ಲಾಮನ್ನು ಅರಿಯದೇ ಹೋದುದರ ಕಾರಣಕ್ಕೆ, ಇಲ್ಲಾ ಅರಿತೂ ಇಸ್ಲಾಮನ್ನು ಅದರ ಬೋಧನೆಗೆ ವಿರುದ್ಧವಾಗಿ ಅಪಹಾಸ್ಯಗೈದುದರ ಕಾರಣಕ್ಕೆ ಪಡೆದುಕೊಂಡವುಗಳು ಎಂಬ ನಂಬಿಕೆಯೊಂದಿಗೆ ಮುಂದಿನ ಕಂತುಗಳಲ್ಲಿ, ನೀವೆಲ್ಲರೂ ತಾರ್ಕಿಕವಾಗಿ ಒಪ್ಪಬಹುದಾದ, ನನ್ನ ಸರಳ ಭಾಷೆಯಲ್ಲಿ ನಿಲುಕುವಷ್ಟು, ಇಸ್ಲಾಂ, ತನ್ನ ಅನುಯಾಯಿಗಳನ್ನು, ಸ್ವಸ್ಥ ನ್ಯಾಯಬದ್ಧ ನೈತಿಕ ಸಮಾಜದ ಧ್ವಜವಾಹಕರಾಗಿಸುವ ಅದ್ಭುತವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಿದ್ದೇನೆ. ಅವನು ಇಚ್ಚಿಸಿದರೆ ಅದು ನಿಮಗೂ ಅಷ್ಟೇ ಸರಳವಾಗಿ ಒಳಗಿಳಿಯಬಹುದು.
ಒಂದು ಪ್ರಾರ್ಥನೆಯಷ್ಟೇ, ಸಹನೆ ಇಲ್ಲದವರು, ಕುತರ್ಕಗಳನ್ನು ಮಾಡುವ ಅಲ್ಪ ಜ್ಙಾನಿಗಳು ಹೇಳುವ ,ಕಲಿಯುವ ನಮ್ಮ ಪ್ರಯತ್ನಗಳಿಗೆ ತೊಡಕಾಗದಿರಲಿಯಷ್ಟೇ.
-ಕಂದ