ಮಗು ಹುಟ್ಟುವ ಮುಂಚೆಯೇ ಆ ಮಗುವಿನ ಬಗ್ಗೆ ಕನಸು ಕಾಣ ತೊಡಗುತ್ತಾರೆ ಆ ಮಗುವಿನ ಹೆತ್ತವರಾಗಬಯಸುವವರು. ಮಗು ಹುಟ್ಟಿದ ಮೇಲೆ ಆ ಮಗುವಲ್ಲಿ ತಮ್ಮ ಕನಸುಗಳ ನನಸಾಗಿಸುವ ಬಗ್ಗೆಯೇ ಚಿಂತಿಸುತ್ತಾ ಆ ಮಗುವನ್ನು ಬೆಳೆಸುತ್ತಾರೆ. ಆ ಮಗು ಕೂಡ ಬೆಳೆಯುತ್ತಾ ಹೋದಂತೆ ತನ್ನ ಕನಸಿನ ಪಟ್ಟಿ ಬೆಳೆಸುತ್ತಾ ಹೋಗುತ್ತೆ.
ವಿದ್ಯಭ್ಯಾಸ ಪೂರ್ತಿಗೊಳಿಸಿದ ಮೇಲೆ ಎಲ್ಲರೂ ಸಹಜವಾಗಿ ಕಾಣುವ ಕನಸುಗಳಲ್ಲಿ ವಿದೇಶದ ನೌಕರಿ ಪ್ರಮುಖವಾದುದು. ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿನಂತೆ ತನ್ನ ಹುಟ್ಟೂರಲ್ಲಿ ಏನೂ ಸಾಧಿಸಲಸಾಧ್ಯ. ನಾನೂ ವಿದೇಶಕ್ಕೆ ಆಧುನಿಕ ಮತ್ತು ಸುಖಕರ ಜೀವನ ಶೈಲಿ ತಮ್ಮದಾಗಬಹುದೆಂಬ ಆಸೆಯಿಂದ ವಿದೇಶ ನೌಕರಿಯ ಬಗ್ಗೆ ಕನಸು ಕಾಣ ತೊಡಗುತ್ತಾರೆ.
ಇಂತಹ ಕನಸುಗಾರರು ಮೊದಲು ಮಾಡುವ ಕೆಲಸ ಪಾಸ್ಪೋರ್ಟ್ ಮಾಡಿಸಿ ಇಟ್ಟುಕೊಳ್ಳುವುದು. ಯಾಕೆಂದರೆ ಪಾಸ್ಪೋರ್ಟ್ ತಯಾರಿದ್ದರೆ ನಮಗೆ ಅವಕಾಶ ಸಿಕ್ಕಿದ ತಕ್ಷಣ ವಿದೇಶಕ್ಕೆ ಹಾರಬಹುದೆಂಬ ಕಲ್ಪನೆ. ಊರಿನಲ್ಲಿ ಯಾರದ್ದೋ ಕೈಕಾಲು ಹಿಡಿದು, ಅಧಿಕಾರಿಗಳಿಗೆ ಲಂಚ ನೀಡಿ ಹೇಗೋ ಒದ್ದಾಡಿ ಕೊನೆಗೊಮ್ಮೆ ಪಾಸ್ಪೋರ್ಟ್ ಕೈಗೆ ಸಿಕ್ಕಿದಾಗ ವಿದೇಶಕ್ಕೆ ಹೋದಷ್ಟೆ ಸಂಭ್ರಮ.
ಪಾಸ್ಪೋರ್ಟ್ ಆದಮೇಲೆ ಮಾಡುವ ಮೊದಲ ಕೆಲಸವೆಂದರೆ ಎಲ್ಲರ ಜೊತೆ ಹೇಳಿಡುವುದು.ನನ್ನ ಪಾಸ್ಪೋರ್ಟ್ ರೆಡಿಯಾಗಿದೆ ನನಗೊಂದು ಗಲ್ಫ್ ಚಾನ್ಸ್ ಇದ್ರೆ ಹೇಳಿ. ವಿದೇಶದಿಂದ ಯಾರೋ ಮಿತ್ರರು ಅಥವಾ ಪರಿಚಯಸ್ಥರು ಬಂದಾಗ ಅವರ ಜೊತೆ ಕೂಡಾ ಹೇಳುವುದು ನನ್ನದು ಪಾಸ್ಪೋರ್ಟ್ ರೆಡಿಯಿದೆ ನಾನೂ ಕೂಡ ಬರಬಹುದಾ, ಚಾನ್ಸ್ ಸಿಗಬಹುದಾ ಇಂತದ್ದೆ ಹಲವಾರು ಕುತೂಹಲಭರಿತ ಪ್ರಶ್ನೆಗಳು. ವಿದೇಶದಲ್ಲಿ ಕೆಲಸ ಮಾಡಬೇಕೆಂಬ ಆಸೆಯೋ ಅಥವಾ ಊರಲ್ಲಿ ಸಾಲಮಾಡಿದ ಕೃಪೆಯೋ ಅಂತೂ ಇಂತೂ ಯಾರೋ ಪುಣ್ಯಾತ್ಮರ ಕೈಕಾಲು ಹಿಡಿದು ಅಥವಾ ಯಾವುದೋ ಕಂಪೆನಿಯ ಏಜೇಂಟ್ ಗಳಿಗೆ ಸಾವಿರ ಅಥವಾ ಲಕ್ಷಗಟ್ಟಲೇ ಹಣನೀಡಿ ಕೆಲಸವೇನೆಂದು ವಿಚಾರಿಸದೆ(ಮೊದಲು ಈಗ ಎಲ್ಲಾ ವಿಚಾರಿಸುತ್ತಾರೆ) ಭಾರತೀಯ ರೂಪಾಯಿ ಮೌಲ್ಯದಲ್ಲಿ ವಿದೇಶದ ಸಂಬಳವನ್ನು ಲೆಕ್ಕಹಾಕಿ ಸ್ವಲ್ಪ ಸಮಯ ವಿದೇಶದಲ್ಲಿ ದುಡಿದು ಒಳ್ಳೆ ಹಣ ಮಾಡಿ ಮತ್ತೆ ಊರಲ್ಲಿ ಏನಾದರೂ ವ್ಯವಹಾರ ಮಾಡುತ್ತಾ ಹಾಯಾಗಿರಬಹುದೆಂಬ ಚಿಂತನೆಯಲ್ಲಿ ವಿದೇಶದ ವಿಮಾನವೇರುತ್ತಾರೆ.
ವಿಮಾನವೇರಿದವನ ಮನಸ್ಸಲ್ಲಿ ನೂರಾರು ತಳಮಳ. ಒಂದೆಡೆ ಆಸೆಯ ಹೊಸಪ್ರಪಂಚ ನೋಡುವ ತವಕ ಇನ್ನೊಂದೆಡೆ ತಾನು ಹುಟ್ಟಿಬೆಳೆದ ಹುಟ್ಟೂರನ್ನು ತನ್ನ ಹೆತ್ತವರು, ಕುಟುಂಬವರ್ಗ, ಸ್ನೇಹ ಬಳಗ ಇವೆಲ್ಲವನ್ನು ಬಿಟ್ಟು ಹೋಗುತ್ತಿರುವ ಅನಾಥ ಭಾವನೆ. ವಿಮಾನದ ಸಹಪ್ರಯಾಣಿಕರಲ್ಲಿ ಉಭಯ ಕುಶಲೋಪರಿ ಮಾತಾಡುತ್ತಾ ಅವರು ಗಲ್ಫ್ ನ ಅನುಭವಸ್ಥರಾದರೆ ಅವರಲ್ಲಿ ಆ ರಾಷ್ಟ್ರ, ಅಲ್ಲಿಯ ಅನುಭವಗಳ ಮಾತು ಕೇಳಿ ಮತ್ತಷ್ಟು ಹೊಸಕನಸುಗಳಿಗೆ ಸನ್ನದ್ಧರಾಗುತ್ತೇವೆ.
ಅಂತೂ ನಮ್ಮ ಪ್ರಯಾಣದ ಕೊನೆಕ್ಷಣದಲ್ಲಿ ಗಗನಸಖಿಯ ಸಿಹಿಧ್ವನಿಯಲ್ಲಿ ನಿಮ್ಮ ಪ್ರಯಾಣ ಇನ್ನೇನೋ ಕೆಲವೇ ಕ್ಷಣಗಳಲ್ಲಿ ಮುಗಿಯಲಿದೆ ಎಂಬ ಮಾತು ಕೇಳಿದಾಗ ನಮ್ಮ ಮನಸಲ್ಲಿ ಮತ್ತಷ್ಟು ಕಾತರ. ಅಂತೂ ವಿಮಾನ ಭೂಸ್ಪರ್ಶಿಸಿ ನಮ್ಮನ್ನು ನಮ್ಮ ಗಮ್ಯದ ಕಡೆ ತಲುಪಿಸಿ ನಮಗೂ ನಮಗೂ ಸಂಬಂಧವೇ ಇಲ್ಲವೆಂಬಂತೆ ನಿಂತುಬಿಡುತ್ತೆ.
ಗಲ್ಫ್ ರಾಷ್ಟ್ರದ ವಿಮಾನ ನಿಲ್ದಾಣದ ಎಲ್ಲಾ ರೀತಿಯ ತಪಾಸಣೆಗಳು ಮುಗಿದ ನಂತರ ನಮ್ಮ ಹೊಸ ಕರ್ಮಭೂಮಿಯ ಮೇಲೆ ನಿಟ್ಟುಸಿರ ಹೆಜ್ಜೆ ಇಟ್ಟು ನಮಗೆ ಕೆಲಸ ಕೊಟ್ಟ ಕಂಪೆನಿಯ ವಾಹನದಲ್ಲಿ ನಮಗೆ ವ್ಯವಸ್ಥೆ ಮಾಡಿದ್ದ ವಸತಿನಿಲಯಕ್ಕೆ ಪ್ರಯಾಣ.
ವಸತಿ ನಿಲಯ ತಲುಪಿದ ಕೂಡಲೇ ಅಲ್ಲಿ ನಮ್ಮ ಪರಿಚಯದವರು ಇದ್ದರೆ ಚೆನ್ನಾಗಿರುತ್ತೆ.ಇಲ್ಲಂದ್ರೆ ಯಾವುದೋ ಗುರುತು ಪರಿಚಯ ಇಲ್ಲದವರಾದರೆ ಕಾಟಾಚರಕ್ಕೆ ನಗು ಬಿಸಾಕಿ ಸ್ವಲ್ಪ ನಮ್ಮ ಬಗ್ಗೆ ವಿಚಾರಿಸಿ ಅವರು ಅವರಷ್ಟಕ್ಕೆ ಸುಮ್ಮನಾಗುತ್ತಾರೆ.
ಒಂದು ರೂಮಿನಲ್ಲಿ ಐದೋ ಆರೋ ಜನರಿದ್ದು ಮಲಗಲು ಕಬ್ಬಿಣದ ಡಬಲ್ ಮಂಚ ಅಂದರೆ ಮೇಲೊಬ್ಬ ಕೆಲಗೊಬ್ಬ, ಬೆಡ್, ತಲೆದಿಂಬು, ಹೊದ್ದುಕೊಳ್ಳಲು ಕಂಬಳಿ, ಇವೆಲ್ಲ ಕೆಲವು ಕಂಪೆನಿಗಳಲ್ಲಿ ನೀಡುವ ಸವಲತ್ತು.
ಬೆಳಗ್ಗೆ ಬೇಗನೆ ಎದ್ದು ಕಂಪೆನಿಯ ಸಮವಸ್ತ್ರ ಧರಿಸಿ ಕಂಪೆನಿಯ ವಾಹನದಲ್ಲಿ ಕೆಲಸಕ್ಕೆ ಮಧ್ಯಾಹ್ನದ ಊಟವನ್ನು ಬುತ್ತಿ ಹಿಡಿದುಕೊಂಡು ಹೊರಟರೆ ಸಂಜೆ ವಾಪಾಸು ಬರುವವರೆಗೆ ವಿಶ್ರಾಂತಿಯಿಲ್ಲದೆ ಕತ್ತೆಯಂತೆ ದುಡಿಯಬೇಕು. ತದನಂತರ ರೂಮಿಗೆ ಬಂದು ಅಡಿಗೆ ಮಾಡಿ ಊರಿನ ನೆನಪಲ್ಲಿ ಊರಿನವರಿಗೆ ದೂರವಾಣಿಯ ಮುಖಾಂತರ ಮಾತಾಡಿ ಮನಸು ಹಗುರ ಮಾಡಿಕೊಂಡ ಸಮಾಧಾನ.
ಊರಿನ ಜಾತ್ರೆ, ಹಬ್ಬಗಳು ಯಾವುದೂ ಇಲ್ಲದೆ ಸಭೆ ಸಮಾರಂಭಗಳನ್ನು ಕೇವಲ ಫೋಟೋ ಅಥವಾ ವೀಡೀಯೋದಲ್ಲಿ ನೋಡಿ ಸಂಭ್ರಮಿಸುವ ಪರಿಸ್ಥಿತಿ. ಅಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡ ಮೇಲೆ ನಮ್ಮ ಕನಸುಗಳು ಗರಿಗೆದರಲು ಆರಂಭವಾಗುತ್ತದೆ . ಮನೆಕಟ್ಟುವ ಯೋಚನೆಯೋ ಅಥವಾ ಸಹೋದರಿಯರಿಗೆ ಮದುವೆ ಮಾಡುವ ಯೋಚನೆಯೋ ಎಲ್ಲದಕ್ಕೂ ಹಣೊಟ್ಟುಮಾಡುವ ಯೋಚನೆ. ಇವೆಲ್ಲದರ ನಡುವೆ ಊರಸ್ನೇಹಿತರಿಂದ ಸಾಲಕ್ಕಾಗಿಯೋ ಊರಿನ ಯಾವುದೋ ಕಾರ್ಯಕ್ರಮಕ್ಕೆ ದೇಣಿಗೆಯಾಗಿಯೋ ಹಣದ ಬೇಡಿಕೆ. ಇವೆಲ್ಲವನ್ನೂ ಮನದಲ್ಲಿರುವ ಒಂಟಿತನದ ನೋವಲ್ಲಿ ಮರೆಯಲೂ ಆಗದೆ ಕೃತಕ ನಗುವಿನಲ್ಲಿ ಬದುಕುವ ಪ್ರಯತ್ನ ಪಡುತ್ತೇವೆ. ಅನಾರೋಗ್ಯಕ್ಕೆ ತುತ್ತಾಗಿ ಮಲಗಿದ್ದಾಗ ನಮಗೆ ಯಾರೂ ಇಲ್ಲ. ರೂಪಿನವರೆಲ್ಲ ಒಮ್ಮೆ ವಿಚಾರಿಸಿ ಮತ್ತೆ ಅವರವರ ಕೆಲಸದಲ್ಲಿ ನಿರತರಾಗುತ್ತಾರೆ.ಆ ಸಂದರ್ಭದಲ್ಲಿ ನಮ್ಮ ಮನೆಯವರ ನೆನಪು ಕಾಡುವುದು ಅಷ್ಟಿಷ್ಟಲ್ಲ.
ಕೆಲವೊಂದು ಸಲ ಊರಿನ ಸ್ನೇಹಿತರಿಗೆ ಅಥವಾ ನೆಂಟರಿಗೋ ಪ್ರೀತಿಯಿಂದ ಮಾತಾಡೋಣವೆಂದು ದೂರವಾಣಿ ಕರೆಮಾಡಿದ ಕೂಡಲೇ ಅವರಿಂದ ಯಾವುದೋ ಒಂದು ವಸ್ತುವಿಗೆ ಬೇಡಿಕೆ.ಅದನ್ನು ನಿರಾಕರಿಸಲಾಗದೆ ಆಯ್ತು ಎಂಬ ಉತ್ತರ ನಮ್ಮಿಂದ.
ಹೇಗೋ ಎರಡು ವರುಷಗಳನ್ನು ಪೂರೈಸಿ ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸುವ ಸಂಭ್ರಮ.ತಮ್ಮವರಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ಯಾರಿಗೂ ಬೇಸರವಾಗಬಾರದೆಂಬ ಭಾವನೆಯಲ್ಲಿ ಸಣ್ಣದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗೋಣವೆಂದಾಗ ತೂಕದ ಮಿತಿ ನಮ್ಮನ್ನು ಕಾಡುತ್ತೆ. ಯಾಕೆಂದರೆ ವಿಮಾನಪ್ರಯಾಣದಲ್ಲಿ 30 ಕೆಜಿಗಿಂತ ಜಾಸ್ತಿ ಕೊಂಡೋಗಬೇಕಾದರೆ ಜಾಸ್ತಿ ಹಣ ಪಾವತಿಸಬೇಕು. ಅದನ್ನೆಲ್ಲ ಪೂರೈಸಿ ಊರಿಗೆ ಬಂದಾಗ ಊರನ್ನು, ನಮ್ಮ ಬಂಧುಗಳನ್ನು ನೋಡಿದ ಸಂಭ್ರಮೊಂದೆಡೆಯಾದರೆ ಹಿಂದೆ ಯಾವಾಗ ಹೋಗುತ್ತಿ ಎಂಬ ಕೆಲವರ ಚುಚ್ಚುಮಾತುಗಳು. ಊರಿಗೆ ಬರುವಾಗ ಹಾಕಿಕೊಂಡು ಬಂದಂತಹ ಚಿನ್ನದಾಭರಣಗಳು ಹೋಗುವ ಹೊತ್ತಿಗೆ ಬ್ಯಾಂಕ್ ಸೇರಿರುತ್ತದೆ. ಕಾರಣ ಹಣದ ಅಭಾವ. ಕೆಲವು ಸ್ನೇಹಿತರಲ್ಲಿ ಸಾಲ ಪಡೆದು ಹೋಗಿ ವಾಪಾಸು ಮಾಡುತ್ತೇನೆ ಎಂಬ ಮಾತು ನೀಡಿ ಮತ್ತದೆ ವಿಮಾನವನ್ನು ಹತ್ತಬೇಕಾದ ಸನ್ನವೇಶ ಗಲ್ಪ್ ಉದ್ಯೋಗಿಯ ಬದುಕಲ್ಲಿ ಸಾಮನ್ಯ.
ಎರಡು ವರುಷಗಳಲ್ಲಿ ಎಲ್ಲವನ್ನೂ ಸಾಧಿಸಿ ಬರುವೆನೆಂದು ಹೊರಟವನು ಹಲವಾರು ವರುಷ ದುಡಿದರೂ ಅವನ ಕನಸುಗಳು ಮುಗಿಯೋದೆ ಇಲ್ಲ. ಕೊನೆಗೆ ಅವನಿಗೆ ಸಮಾಧಾನ ನೀಡುವುದು ಒಬ್ಬಂಟಿಯಾಗಿ ಕುಳಿತು ಅವ ಸುರಿಸುವ ಕಣ್ಣೀರು ಮಾತ್ರ.ಆದರೆ ಈಗಿನ ಕಾಲ ಬದಲಾಗಿದೆ ಆಧುನಿಕ ಯುಗದಲ್ಲಿ ಎಲ್ಲವೂ ಸನಿಹವಿದ್ದೂ ನಮಗೆ ಬೇಕಾದ ಹಾಗೆ ಇದೆ. ಕೆಲವು ಕಂಪೆನಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಊರಿನವರೆ ಇದ್ದು ಊರಿನ ವಾತಾವರಣವೇ ಇದೇ. ಎಷ್ಟಾದರೂ ನಮ್ಮ ಊರು ಮಾತ್ರ ನೆನಪಾಗದೆ ಇರುವುದಿಲ್ಲ. ಇದೆಲ್ಲ ನಮ್ಮ ಅನುಭವ ಅಲ್ಲದಿದ್ದರೂ ಹೆಚ್ಚಿನ ಗಲ್ಫ್ ವಾಸಿಗಳ ಅನುಭವ ಇದೇ ಆಗಿದೆ.
✍🏻ಕಿಶೋರ್ ಎಕ್ಕಾರ್.