ಬುಧವಾರ, ಮೇ 24, 2017

ರಂಝಾನ್

ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳಾಗಲಿ

ಪಾವನ ತಿಂಗಳು ರಂಝಾನ್ ಮಗದೊಮ್ಮೆ ಆಗತವಾಗಿದೆ .ತಿಂಗಳುಗಳ ಪೈಕಿ ಶ್ರೇಷ್ಟತೆಯನ್ನು ಹೊಂದಿದ ರಂಝಾನ್ ನಮ್ಮ ತಪ್ಪುಗಳನ್ನು ತಿದ್ದಿಕೊಂಡು, ಪ್ರಾಯಶ್ಚಿತಪಟ್ಟು ಜೀವಿಸಲು ನಮಗಿರುವ ಅವಕಾಶವಾಗಿದೆ.
ಒಳಿತನ್ನು ಬೋಧಿಸುವ,ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳೆಂದು ಕಲಿಸಿಕೊಟ್ಟ ಧರ್ಮದ ಅನುಯಾಯಿಗಳಿಂದು ಕೆಡುಕಿನತ್ತ ಆಕರ್ಷಿತರಾಗುತ್ತಿದ್ದಾರೆ.ಒಳಿತನ್ನು ಸಂಪೂರ್ಣವಾಗಿ ನಾಮಾವಶೇಷ ಮಾಡಿ ಕೆಡುಕಿನತ್ತ ಧಾವಿಸುತ್ತಿರುವ ಯುವ ಸಮೂಹದ ನಡೆಯು ಒಂದು ರೀತಿಯಲ್ಲಿ ಅಚ್ಚರಿಯನ್ನುಂಟು ಮಾಡುವಾಗ, ಸಮುದಾಯದ ಶ್ರೀಮಂತ ವರ್ಗವು ತಮ್ಮಲ್ಲಿರುವ ಸಂಪತ್ತನ್ನು ಕೆಡುಕಿಗೆ ಉಪಯೋಗಿಸಲ್ಪಡುವಂತಹ ಸನ್ನಿವೇಶಗಳನ್ನು ನಮಗೆ ಕಾಣಿಸಲು ಸಾಧ್ಯ.

ಐಹಿಕವಾದ ಜೀವನದ ಲಾಲಸೆಗಳ ಹಿಂದೆ ಜೋತುಬಿದ್ದ ಮನುಷ್ಯನು,ಪಾರತ್ರಿಕ ಜೀವನದ ಕುರಿತಾದ ಚಿಂತೆಯಿಂದ ದೂರವಾಗಿದ್ದಾನೆ.
ಅತೀ ಗೌರವದಿಂದ ಸ್ವೀಕರಿಸಲ್ಪಡಬೇಕಾದ ರಂಝಾನನ್ನು ಮನುಷ್ಯನಿಂದು ತಿರಸ್ಕಾರದ ನೋಟಗಳಿಂದ  ಕಾಣುತ್ತಿದ್ದಾನೆ.ಕಳೆದ ತಲೆ ಮಾರುಗಳು ರಂಝಾನ್ ತಿಂಗಳ ಆಗಮನವಾಗುವಾಗ ಮನೆಯ ಪರಿಸರಗಳನ್ನೆಲ್ಲಾ ಶುಚಿಯಾಗಿಸಿ,ರಂಜಾನ್ ನನ್ನು ಸ್ವೀಕರಿಸಲು ಸಕಲ ತಯಾರಿಗಳನ್ನು ನಡೆಸುತ್ತಿದ್ದರು ಆದರೆ ಕಾಲಕ್ರಮೇಣ ಮನುಷ್ಯರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಜೀವಿಸಲು ಪ್ರಾರಂಭಿಸಿದರು.ರಂಜಾನ್ ತಿಂಗಳ ಮಹತ್ವವು ಗೊತ್ತಿದ್ದೂ, ಗೊತ್ತಿಲ್ಲದವರಂತೆ ನಟಿಸಿ ಸ್ವೇಚ್ಛಾಚಾರ ದ ಜೀವನವನ್ನು ಅವಲಂಬಿಸತೊಡಗಿದರು.

ಕೆಲವು ವರ್ಷಗಳ ಮೊದಲು ರಂಜಾನ್ ತಿಂಗಳು ಬಂತೆಂದರೆ ಮನೆಯೊಳಗಿನ ಟಿ.ವಿ, ಅದ್ಯಾವುದೋ ಮೂಲೆಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿತ್ತು.ಆದರೆ,ಇಂದು ಕೆಲವೊಂದು ಮನೆಗಳಲ್ಲಿ ಮಗ್ರಿಬ್ - ಇಶಾ ಬಾಂಗ್ ನ ನಡುವೆ ಧಾರವಾಹಿಗಳದ್ದೇ ಸದ್ದು ಕೇಳಿಸುವಷ್ಡರ ಮಟ್ಟಿಗೆ ಮುಸ್ಲಿಂ ಸಮುದಾಯವು ಮುಂದುವರಿದಿದೆ ಅನ್ನುವುದು ವಿಪರ್ಯಾಸ.

ಸಮುದಾಯದ ನಡುವೆ ಅದೆಷ್ಟೋ ಜನರು ಬಡತನದ ಬೇಗುದಿಯಲ್ಲಿ ದಿನದೂಡುತ್ತಿದ್ದರೂ, ಶ್ರೀ ಮಂತಿಕೆಯಿಂದ ಮೆರೆಯುವ ಒಂದು ವರ್ಗವು ತಮ್ಮ ಸಂಪತ್ತನ್ನು ಅದ್ಯಾವುದೋ ಕ್ರಿಕೆಟ್ ಟೂರ್ನಮೆಂಟಿಗೋ,ಅಥವಾ ಇನ್ನಿತರ ಮನರಂಜನೆ ಕಾರ್ಯಕ್ರಮಗಳಿಗೋ ಲಕ್ಷ, ಲಕ್ಷ ದೇಣಿಗೆಯನ್ನಾಗಿ ನೀಡುವಾಗ ತಮ್ಮ ಪರಿಸರದಲ್ಲೇ ಇರುವ ಬಡವರಿಗೆ ಸಹಾಯ ಮಾಡದೆ ಕುರುಡುತನ ಪ್ರದರ್ಶಿಸುವ ಕಾರಣಗಳಿಂದ ಮುಸ್ಲಿಂ ಸಮುದಾಯದ ಕೆಲವರು ರಂಝಾನ್ ತಿಂಗಳನ್ನು ಭಿಕ್ಷಾಟನೆಯ ತಿಂಗಳನ್ನಾಗಿ ಪರಿವರ್ತಿಸಿರುವುದು ಸಮುದಾಯದ ದುರಂತ.

ಒಂದು ಕಡೆಯಲ್ಲಿ ಉಪವಾಸಿರಾದ ಬಡವರು, ಉಪವಾಸವನ್ನು ತೊರೆಯಲು ಒಂದು ಗ್ಲಾಸ್ ನೀರು,ಒಂದು ಖರ್ಜೂರವನ್ನು ಉಪಯೋಗಿಸಿ ಉಪವಾಸ ತೊರೆಯುವಾಗ ,ಮತ್ತೊಂದು ಕಡೆ ಪ್ರತಿಷ್ಠೆಯ ಹೆಸರಿನಲ್ಲಿ ಸಂಘಟನೆಗಳು ಇಫ್ತಾರ್ ಕೂಟವನ್ನು ಏರ್ಪಡಿಸಿ ,ಸಾವಿರಾರು ರೂಪಾಯಿಗಳ ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ನಷ್ಟಗೊಳಿಸುತ್ತಿದ್ದಾರೆ.
ಕರಾವಳಿಯ ಹಲವು ಆಸ್ಪತ್ರೆಗಳಲ್ಲಿ ಇಂದು ಖಾಯಿಲೆ ಪೀಡಿತರಾಗಿ ಕಳೆಯುತ್ತಿರುವವರಲ್ಲಿ ಮುಸ್ಲಿಮರ ಸಂಖ್ಯೆಯು ಅಧಿಕವಾಗಿದೆ.ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದಿರುವ ಕಾರಣಗಳಿಂದಲೋ,ಅಥವಾ ಬಡತನದ ಕಾರಣಗಳಿಂದಲೋ ಅಲ್ಲಿ ಉಪವಾಸ ಹಿಡಿಯಲು ಸಾಧ್ಯವಾಗದೆ ಕಷ್ಟಪಡುವವರೂ ಇದ್ದಾರೆ,ಒಂದು ದಿನದ ಮುಂಚೆ ತಂದಿರಿಸಿದ ಆಹಾರ ಹಳಸಿದ ಕಾರಣದಿಂದ, ಉಪವಾಸ ನೋಡದೆ ಅಸಹಾಯಕ ನೋಟ ಬೀರುವವರಿಗೆ ಉಪವಾಸ ಹಿಡಿಯಲು ಅನುಕೂಲವಾಗುವ ವ್ಯವಸ್ಥೆ ಮಾಡುವ ಪ್ರಯತ್ನ ಯಾರೂ ಮಾಡುವುದಿಲ್ಲ.

ಸರ್ವಶಕ್ತನು ನೀಡಿದ ಅನುಗ್ರಹ,ಸಂಪತ್ತಿನ ಹೆಸರಿನಲ್ಲಿ ಮೆರೆದಾಡಿ, ಬಡ ಜನತೆಯ ಮೇಲೆ ದ್ವೇಷವನ್ನು ಸಾಧಿಸಿ ಮೆರೆದಾಡುವಾಗ, ನನಗೆ ಸಂಪತ್ತು ನೀಡಿ ಪರೀಕ್ಷಿಸಿದ ಸರ್ವಶಕ್ತನಿಗೆ ನನ್ನನ್ನು ಬಡವನನ್ನಾಗಿ ಮಾಡಲು ಸಾಧ್ಯವಿದೆ ಅನ್ನುವ ವಾಸ್ತವ ಸತ್ಯವನ್ನು ಮಾತ್ರ ಯಾರೂ ಅರ್ಥೈಸುವುದಿಲ್ಲ.

ರಂಝಾನ್ ತಿಂಗಳು ನಮ್ಮ ಪಾಲಿಗೆ ಪರಿವರ್ತನೆಯ ತಿಂಗಳಾಗಿ ಬದಲಾಗಲಿ .ಮನದಲ್ಲಿ ಹುದುಗಿರುವ ದ್ವೇಷ,ಮತ್ಸರ, ಅಹಂಕಾರಗಳಿಗೆ ತಿಲಾಂಜಲಿಯಿಟ್ಟು ಪ್ರೀತಿಯಿಂದ ಜೀವಿಸುವಂತವರಾಗೋಣ.
ಧಾರವಾಹಿಯ ಹಿಂದೆ ಜೋತು ಬಿದ್ದು,ಅದರಲ್ಲಿ ಬರುವ ಕಾಲ್ಪಣಿಕ ದೃಶ್ಯಗಳಿಗೆ ಕಂಬನಿ ಮಿಡಿಯುವ ಕಣ್ಣುಗಳು ಪಾರತ್ರಿಕ ನೋಟವ ಬೀರಿ ಕಣ್ಣೀರು ಮಿಡಿಯುವಂತಾಗಲಿ.ಮನೆಯ ಪರಿಸರವನ್ನು ಒಳಿತಿನೆಡೆಗೆ ಆಕರ್ಷಿಸುವಂತೆ ಬದಲಾಯಿಸಿ,ರಂಜಾನ್ ನನ್ನು ಭಿಕ್ಷಾಟನೆಯ ತಿಂಗಳಾಗಿ ಕಾಣುವ ವರ್ಗವನ್ನು ತಡೆಯುವಂತವರಾಗಿ,ತಮ್ಮ ಝಕಾತನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಕಳೆದ ರಂಝಾನ್ ನಲ್ಲಿ ನಮ್ಮೊಂದಿಗಿದ್ದ ಅದೆಷ್ಟೋ ಮಂದಿ ಇಂದು ಆರಡಿ ಮಣ್ಣಿನಡಿಯಲ್ಲಿದ್ದಾರೆ.ಅವರಿಗೂ ನಿರೀಕ್ಷೆಗಳಿದ್ದಿರಬಹುದಿತ್ತು,ಬಣ್ಣ, ಬಣ್ಣದ ಆಸೆಗಳೂ ಇದ್ದಿರಬಹುದಿತ್ತು.ಆದರೆ,ಸರ್ವಶಕ್ತನ ಅನುಲ್ಲಂಘನೀಯವಾದ ವಿಧಿಯ ಮುಂದೆ ಅವರಿಗೆ ತಲೆ ಬಾಗಲೇ ಬೇಕಾಯಿತು.ನಮಗೂ ಈ ಜೀವನ ಶಾಶ್ವತವಲ್ಲ,ಮರಣ ಯಾವ ಸಮಯದಲ್ಲಿ,ಯಾವ ರೂಪದಲ್ಲಿ ಬಂದೊದಗುತ್ತೆ ಅಂತ ಯಾರಿಗೆ ತಾನೇ ಹೇಳಲು ಸಾಧ್ಯ..?
ಅಂತಹ ಅವಘಡ ಮರಣಗಳಿಂದ ನಮ್ಮನ್ನು ರಕ್ಷಿಸಲಿ.(ಆಮೀನ್ )
ಈ ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳನ್ನಾಗಿ ಸ್ವೀಕರಿಸುವವರು ನಾವುಗಳಾಗೋಣವಲ್ಲವೇ..?

*ಸ್ನೇಹಜೀವಿ ಅಡ್ಕ*