ಬುಧವಾರ, ಜೂನ್ 29, 2016

ಅಪಘಾತಗಳೂ ಸಾಮಾಜಿಕ ಜಾಲತಾಣದ *ದುರಂತಗಳೂ

ಭೀಕರ ಅಪಘಾತದಲ್ಲಿ ವಾಹನದೊಳಗೆ ಅಪ್ಪಚ್ಚಿಯಾಗಿ ಮರಣ ಸಂಕಟದಲ್ಲಿ ನೀರಿಗಾಗಿ ಬಾಯಿ ತೆರೆಯುತ್ತಿದ್ದರೆ ಜನ ನೀರು ನೀಡುವ ಬದಲು ಮೊಬೈಲ್‌ನಿಂದ ಚಿತ್ರೀಕರಿಸುವುದರಲ್ಲಿ ಮಗ್ನರಾಗುತ್ತಾರೆ. 

ಅಪಘಾತ ನಡೆದ ಹತ್ತಿಪ್ಪತ್ತು ನಿಮಿಷದಲ್ಲಿ ರಕ್ತ,ಸಿಕ್ತ, ಹಸಿ ಹಸಿ ದೃಶ್ಯಗಳು ಬಹುತೇಕ  ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡತೊಡಗುತ್ತವೆ. ಅಲ್ಲಿ ಸಂತ್ರಸ್ತರು ಇನ್ನೂ ರಸ್ತೆಯಲ್ಲಿ ವಿಲ, ವಿಲ ಒದ್ದಾಡುತ್ತಿರುತ್ತಾರೆ. 

ಇದನ್ನು ಚಿತ್ರೀಕರಿಸುವುದು ಜನಸಾಮಾನ್ಯ. ಆಮೇಲೆ ಪೊಲೀಸರು ಬರಲು, ಅಂಬುಲೆನ್ಸ್ ಬರಲು ಅರ್ಧ ಗಂಟೆ ವಿಳಂಬ ಮಾಡಿದರು ಎನ್ನುವ ಆರೋಪ ಮಾಡುವವನೂ ಕೂಡಾ ಇದೇ ಜನ ಸಾಮಾನ್ಯ. 

ಹಿಂದೆ ಅಪಘಾತ ನಡೆದಾಗ ಜನರು ತಕ್ಷಣ ನೆರವಿಗೆ ಧಾವಿಸುತ್ತಿದ್ದರು. ಬಳಿಕ ಪೊಲೀಸ್ ಠಾಣೆ, ಕೋರ್ಟ್ ರಗಳೆಗೆ ಅಂಜಿ ನಮಗ್ಯಾಕೆ ಕಿರಿ ಕಿರಿ ಎಂದು ಸುಮ್ಮನಾಗತೊಡಗಿದರು. ಆದರೆ ಕೊಂಚ ಮಾನವೀಯತೆ ಇದ್ದವರು ಪೊಲೀಸ್ ಕಂಟ್ರೋಲ್ ರೂಮ್ ಅಥವಾ ಅಗ್ನಿಶಾಮಕ ದಳಕ್ಕೆ ಕರೆ ಮಾಡುತ್ತಿದ್ದರು. ಮಾನವೀಯತೆ ಮೈದಳೆದವರು ಹಿಂದೆ ಮುಂದೆ ನೋಡದೆ ನೆರವಿಗೆ ಧಾವಿಸುತ್ತಿದ್ದರು. 

ಆದರೆ ಈಗ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಅಪಘಾತ ಆದ ತಕ್ಷಣ ತಮ್ಮ ಕೈಯಲ್ಲಿ ಇರುವ ಮೊಬೈಲ್ ಫೋನ್‌ನಲ್ಲಿ ಶೂಟಿಂಗ್ ಶುರು ಮಾಡುತ್ತಾರೆ. ವಾಟ್ಸಪ್, ಫೇಸ್ ಬುಕ್‌ನಲ್ಲಿ ಫೋಟೊ, ವೀಡಿಯೊ ಹರಿಯಬಿಡುತ್ತಾರೆ. ಅಪಘಾತದಲ್ಲಿ ನೆರವು ನೀಡಿದವರು, ಆಸ್ಪತ್ರೆಗೆ ಸಾಗಿಸಿದವರನ್ನು ಪೊಲೀಸರು ಸಾಕ್ಷಿಗಾಗಿ ಬಲವಂತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಮೇಲೂ, ಇದನ್ನು ತಿಳಿದ ಬಳಿಕವೂ ಜನರೂ ಮಾಡುತ್ತಿರುವುದೇನು ?

ಅಪಘಾತ, ದುರಂತಗಳ ನಡೆಯುವುದನ್ನೆ ಕಾಯುತ್ತಿರುವ ಕೆಲವು ವಿಕೃತಿಗಳು. ಕುಹಕಿಗಳು ರಕ್ತ ಬೇಕು, ನೆರವು ನೀಡಿ ಎಂದು ಸುಳ್ಳು ಸಂದೇಶ ರವಾನಿಸಿ ಎಲ್ಲರಿಗೂ ಮೋಸ ಮಾಡಿದೆ ಎಂದು ಭ್ರಮಿಸುತ್ತಾರೆ. ನಿಜ ಹೇಳಬೇಕೆಂದರೆ ಇವರು ಮಾನವೀಯತೆಗೆ ಮೋಸ ಮಾಡಿದವರು. 

ಒಂದುವೇಳೆ ಅಪಘಾತದ ಸಂದರ್ಭ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಸಂದೇಶ, ವೀಡಿಯೋಗಳನ್ನು ಕಳುಹಿಸಲೇ ಬೇಕು ಎಂದಿದ್ದರೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವು ನೀಡಿದ ಒಳ್ಳೆಯ ಕಾರ್ಯವನ್ನು  ಕಳುಹಿಸಬಹುದು.  

ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಜನಸಾಮಾನ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುವ ಅತ್ಯುತ್ತಮ ವೇದಿಕೆಯಾಯಿತು. ಹಿಂದೆಲ್ಲ ಪ್ರಚಾರಕ್ಕೆ ಮಾಧ್ಯಮಗಳಿಗಾಗಿ ಕಾಯುತ್ತಿದ್ದ ಜನಸಾಮಾನ್ಯರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬೇಕಾದಷ್ಟು ಪ್ರಚಾರ ಗಿಟ್ಟಿಸುತ್ತಿದ್ದಾರೆ. 

ಒಳ್ಳೆಯತನ, ಸರಳತೆಗೆ ಪರ್ಯಾಯವೇ ಎಂಬಂತೆ ಬಳಕೆಯಾಗುತ್ತಿದ್ದ *ಜನಸಾಮಾನ್ಯರು* ಪದ ಇದೀಗ ಇಂಥ ವಿಕೃತಿ, ಕುಹಕಗಳಿಂದ ಕುಲಗೆಡುತ್ತಿದೆ. 

*ಕತ್ತಿಯ ಹಾಗೆ*

ಸಾಮಾಜಿಕ ಜಾಲತಾಣ ಎಷ್ಟು ಒಳ್ಳೆಯದು ಮಾಡಿತೋ ಅಷ್ಟೇ ಕೆಟ್ಟದೂ ಆಗುತ್ತಿದೆ. ಅದು ಒಂದು ರೀತಿ ಕತ್ತಿಯಂತೆ. ಕತ್ತಿಯನ್ನು ಕೃಷಿ, ಮನೆಲಗೆಲಸ ಇತ್ಯಾದಿ ನಿತ್ಯದ ಕಾರ್ಯಗಳಿಗೆ ಬಳಸುತ್ತೇವೆ. ಆದರೆ ಕತ್ತಿಯನ್ನು ತಲೆ ಕಡಿಯಲು ಬಳಸಬಹುದು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶಗಳ ಜತೆ, ಕೆಟ್ಟ ಸಂದೇಶಗಳು, ಅಶ್ಲೀಲ ಕ್ಲಿಪ್ಪಿಂಗ್‌ಗಳೂ ಎಲ್ಲೆ ಮೀರಿದೆ. ಮೂಢ ನಂಬಿಕೆಗಳ ಮಾರಾಟವೂ ನಡೆಯುತ್ತಿದೆ. 

*ರಕ್ತದಾನ, ಬಡವರಿಗೆ ನೆರವು*, ಉಪಕಾರದ ಜತೆಯಲ್ಲಿ ಕಲೆ, ಸಂಸ್ಕೃತಿ, ಯಕ್ಷಗಾನ, ನಾಟಕ ಇತ್ಯಾದಿ ಸಮಾನಾಸಕ್ತರನ್ನು ಒಟ್ಟು ಸೇರಿಸುತ್ತಿದೆ. ಜ್ಞಾನ ಸಂಪಾದನೆಯೂ ಯಥೇಚ್ಛ ಆಗುತ್ತಿದೆ. ಆದರೆ ಇದರ ಜತೆಯಲ್ಲಿ *ಸಾವು ಸಂಭವಿಸಿದ ಮನೆಯಲ್ಲಿ ಹೋಗಿ ಸೆಲ್ಫಿ* ತೆಗೆದುಕೊಳ್ಳುವವರು ಹೆಚ್ಚಿದ್ದಾರೆ. ಅಪಘಾತ ಸಂಭವಿಸಿದಾಗ ರಕ್ಷಣೆಗೆ ಧಾವಿಸದೆ ವೀಡಿಯೋ ತೆಗೆಯುವವರು ಹೆಚ್ಚಿದ್ದಾರೆ. ನೀರಲ್ಲಿ ಮುಳುಗುತ್ತಿರುವವನ್ನು ರಕ್ಷಣೆಗೆ ಧಾವಿಸುವ ಕೈಗಳಿಗಿಂತ ಹೆಚ್ಚು  ಬಿಟ್ಟು ವೀಡಿಯೋ ತೆಗೆಯುವ ಕೈಗಳು ಹೆಚ್ಚಾಗುತ್ತಿವೆ. 

ಯಾವುದೋ ಜೋಡಿಗಳು ಮೈಮರೆತು ಖಾಸಗಿ ಕ್ಷಣಗಳಲ್ಲಿ ಬ್ಯುಸಿಯಾಗಿದ್ದಾಗ ಅದನ್ನು ಚಿತ್ರಿಸುವುದು ಎಷ್ಟು ಸರಿ. 

ಒಂದು ವೇಳೆ ಸಂತ್ರಸ್ತರ ಜಾಗದಲ್ಲಿ ನಾವೇ ಆಗಿದ್ದರೆ ಒಮ್ಮೆ ಊಹಿಸಿ ನೋಡಿ. ಆ ಜಾಗದಲ್ಲಿ *ನಮ್ಮ ಮನೆಯವರು ಇದ್ದರೆ* ನೆರವಿಗೆ ಧಾವಿಸುತ್ತಿಲ್ಲವೇ ? 

ವೀಡಿಯೋ ಚಿತ್ರಿಸಲೇ ಬಾರದು ಎಂದೇನಿಲ್ಲ. ಗಲಭೆ ಸಂದರ್ಭದಲ್ಲಿ ರಕ್ಷಣೆಗೆ ಸಾಧ್ಯವಾಗದೆ ಕನಿಷ್ಠ ಹಂತಕರು, ಅಪರಾಧಿಗಳ ಪತ್ತೆಗೆ ನೆರವಾಗುವುದಾದರೆ ಗುಪ್ತವಾಗಿ ಚಿತ್ರಿಸಬಹುದು. 

*ಸಿಕ್ಕಿದ್ದನ್ನು ಸಿಕ್ಕಾಪಟ್ಟೆ ಶೇರ್ ಮಾಡುವ ಗುಂಪು ಇನ್ನೊಂದು.* ಅದು ಸತ್ಯವೋ, ಸುಳ್ಳೊ, ಮಾನಹಾನಿಯೋ ಎಂದು ಯೋಚನೆ ಮಾಡದೆ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿಂಬಿಸಿ ಫಾರ್ವರ್ಡ್ ಮಾಡುವ ಗುಂಪು. ಇವರು ಸೈಲೆಂಟ್ ಕಿಲ್ಲರ್‌ಗಳಂತೆ. ಕೆಲವೇ ಕ್ಷಣಗಳಲ್ಲಿ ಇಂಥವರು ಸುಳ್ಳು ಸುದ್ದಿಯನ್ನು ಹರಡಿಸಬಲ್ಲರು, ಆನಾಹುತ ಸೃಷ್ಟಿಸಬಲ್ಲರು. ಕೆಲವರು ಸತ್ಯ ಎಂದು ನಂಬಿ ಕಳುಹಿಸುವವರೂ ಇದ್ದಾರೆ. ಇಲ್ಲಿ ಇಂಥವರಿಂದ ಸುಳ್ಳು, ವದಂತಿಗಳು ಬೇಗವಾಗಿ ಹಬ್ಬಿ ಸಮಾಜಕ್ಕೆ ಹಾನಿ ಆಗುವ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ ಇಲ್ಲ. 

ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪೊಲೀಸರು ವಾಟ್ಸಪ್ ಸಹಾಯವಾಣಿ ಆರಂಭಿಸಿದ್ದಾರೆ. ಅಪಘಾತಗಳಾದಾಗ ಮಾಹಿತಿ ಮತ್ತು ನೆರವು ನೀಡಲು ಜನಸಾಮನ್ಯರೇ ಇರುವ *ಇ ಸಿಟಿ ಟ್ರಾಫಿಕ್ ಅಡ್ವೈಸರಿ ಕಮಿಟಿ*ಯನ್ನು ಬೆಂಗಳೂರಲ್ಲಿ  ಪೊಲೀಸರು ಆರಂಭಿಸಿದ್ದಾರೆ. ವಾಟ್ಸಪ್ ಮೂಲಕ ಪೊಲೀಸರು ಸಂವಹನ ನಡೆಸುತ್ತಾರೆ. ಈ ಸಮಿತಿ ಸದಸ್ಯರು ಅಪಘಾತ ಸಂದರ್ಭ ಮಾಹಿತಿ ನೀಡುವುದಲ್ಲದೆ, ಸಂತ್ರಸ್ತರಿಗೆ ನೆರವು ಕೂಡಾ ಮಾಡುತ್ತಾರೆ. 

*ಮಂಗಳೂರಲ್ಲಿಯೂ ಸಂಚಾರಿ ಪೊಲೀಸರು ಈ ರೀತಿಯ ಮಾದರಿ ಕ್ರಮ ಕೈಗೊಳ್ಳಬಹುದು* 

ಕೋಮುಪ್ರಚೋದಕ ಸುದ್ದಿಗಳ ಜತೆ, ನಮ್ಮ ಧರ್ಮದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ, ಆ ಧರ್ಮದ ವ್ಯಕ್ತಿ ಕೊಲೆ ಮಾಡಬೇಕು ಎಂಬಿತ್ಯಾದಿ ದ್ವೇಷ ಪೂರಿತ ಸುದ್ದಿಗಳು ಕ್ಷಣಾರ್ಧದಲ್ಲಿ ಹರಡಿ ಸಣ್ಣ ಗಲಾಟೆಗಳು ಈಗ ಕೋಮು ಗಲಭೆಗಳಾಗಿ ಪರಿವರ್ತಿತವಾಗುತ್ತಿವೆ. 

ಭಿನ್ನಾಭಿಪ್ರಾಯಗಳೇ ಈಗ ವಿಜೃಂಬಿಸಿ, *ದ್ವೇಷ ಸಾಧನೆಗೆ ವಾಟ್ಸಪ್, ಫೇಸ್‌ಬುಕ್*ಗಳು ಕಾರಣವಾಗುತ್ತಿವೆ. ಇದೆ ನೆಪದಲ್ಲಿ ತೇಜೋವಧೆ, ಅಪಹಾಸ್ಯ ಮಾಡುವ ಕೆಟ್ಟ ಪ್ರವೃತ್ತಿಯೂ ಹೆಚ್ಚುತ್ತಿದೆ. ಮಾನವ ವಿರೋಧಿ ನಿಲುವುಗಳು ಪ್ರಕಟವಾಗುತ್ತಿವೆ. 

ಕುಂದಾಪುರದ ತ್ರಾಸಿಯಲ್ಲಿ ಶಾಲೆ ಮಕ್ಕಳ ವಾಹನ ಅಪಘಾತದಲ್ಲಿ ಮೃತಪಟ್ಟವರ ಕುರಿತು ಎಲ್ಲೆಡೆ ನೋವು ಮಡುಗಟ್ಟಿರುವಾಗ ಯಾರೋ ಒಬ್ಬ ಕ್ರೂರಿ, ಮಾನವತಾ ವಿರೋಧಿಯೊಬ್ಬ ಸತ್ತರೆ ಸಾಯಲಿ, ಕ್ರೈಸ್ತರ ಮಕ್ಕಳ್ಳವೇ ಎಂದು ಫೇಸ್ ಬುಕ್‌ನಲ್ಲಿ ಕಮೆಂಟ್ ಮಾಡುತ್ತಾನೆ. 

*ಇದೆಂಥಾ ಧರ್ಮ ದ್ವೇಷ*, ಐಸಿಸ್ ಭಯೋತ್ಪಾದಕ ಸಂಘಟನೆಗಳ ನಿಲುವಿಗೂ ಈ ನಿಲುವಿಗೂ ಹೆಚ್ಚಿನ ವ್ಯತ್ಯಾಸ ಏನು ?  ಒಬ್ಬ ಮುಸ್ಲಿಮನ ಕೊಂದರೆ, ಒಬ್ಬ ಹಿಂದುವನ್ನು ಕೊಲ್ಲಿ ಎನ್ನುವ, ಒಬ್ಬ ಹಿಂದುವನ್ನು ಕೊಂದರೆ ಒಬ್ಬ ಮುಸ್ಲಿಮನನ್ನು ಕೊಲ್ಲಿ ಎಂದು ಪ್ರತಿಪಾದಿಸುತ್ತಾ ಅಮಾಯಕ, ದಾರಿಹೋಕರನ್ನು ಕೊಲ್ಲುವುದನ್ನು ಬಹಿರಂಗವಾಗಿಯೇ ಸಮರ್ಥಿಸುವ ಈ ಧಾರ್ಮಿಕ ಮೂಲಭೂತವಾದ ನಮ್ಮ ಊರಿನಲ್ಲಿಯೇ ಭೂತಾಕಾರವಾಗಿ ನಿಂತಿದೆ. ಈ ಪರಿ ದ್ವೇಷ ಮನಸ್ಸಿನೊಳಗೆ ಮೂಡಿರಬೇಕಾದರೆ ಇದಕ್ಕೆ ಕಾರಣ ಯಾರು ? *ಧಾರ್ಮಿಕ ವಾದ ಬೋಧಕರೇ* ?

ಈ ಜಾತಿ, ಧರ್ಮ, ಜನಾಂಗ, ಸಿದ್ಧಾಂತ ವಾದಗಳನ್ನು ಮಾನವ ವಿರೋಧಿಯಾಗಿ ಪರಿವರ್ತಿಸುತ್ತಿರುವ ಬೋಧಕರೇ ಇದಕ್ಕೆ ಕಾರಣ. ಎಲ್ಲರೂ ದೇವರ ಮಕ್ಕಳೇ, ಎಲ್ಲರಲ್ಲೂ ಹರಿಯುವ ರಕ್ತವೂ ಒಂದೇ ಅಲ್ಲವೇ ?

*ಅಪಘಾತದಲ್ಲಿ ಗಾಯಗೊಂಡಿರುವವನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡೋಣ. ನಾವು ಉಳಿಸಿದ ಜೀವ ನಮ್ಮನ್ನು ಖಂಡಿತಾ ಉಳಿಸುತ್ತೆ*

: *ಜಿತೇಂದ್ರ ಕುಂದೇಶ್ವರ*

kundeshwara@gmail.com