ಶುಕ್ರವಾರ, ಜುಲೈ 15, 2016

ಒಂದು ವಾಕ್ಯದ ಕತೆಗಳು


1⃣
ವ್ಯತ್ಯಾಸ
------
      ಮನದ ತುಂಬಾ ಶ್ರೀಮಂತಿಕೆ ತುಂಬಿದ್ದ ಬಡವನೊಬ್ಬನಿಗೆ ಲಾಟರಿಯಿಂದಾಗಿ ಐಶ್ವರ್ಯ ಲಬಿಸಿ ಅಗರ್ಭ ಶ್ರೀಮಂತ ನಾದರೂ ಅವನ ಮನಸ್ಸು ಸದಾ ಹಣ ಮತ್ತು ಮನುಷ್ಯತ್ವದ ಬಡತನದಿಂದ ಸೊರಗುತ್ತಿತ್ತು.
---------------------
2⃣
ಗುಣ
-----
    ಇನ್ನೆಂದೂ ಕಳ್ಳತನ ಮಾಡುವುದಿಲ್ಲವೆಂದು ದೇವರಮುಂದೆ ಪ್ರಾರ್ಥಿಸುತ್ತಿರುವಾಗ ಹುಂಡಿಯಲ್ಲಿರುವ ನೋಟಿಗೆ ದೃಷ್ಟಿಬಿದ್ದು ರಾತ್ರಿ ಬಂದು ಕಳ್ಳತನಮಾಡಿದ.
----------------------
3⃣
ವಿಪರ್ಯಾಸ
-----------
     ಅಕ್ಕಪಕ್ಕ ದೆರಡು ಗೂಡುಗಳಲ್ಲೊಂದರಲ್ಲಿ ಮರಿಹಕ್ಕಿ ಗೆ ತಾಯಿಹಕ್ಕಿ ತುತ್ತು ತಿನ್ನಿಸುತಿತ್ತು ಮತ್ತೊಂದರಲ್ಲಿ ಮುದಿ ಹಕ್ಕಿ  ರೆಕ್ಕೆ ಮುರಿದು ನೋವಿನಿಂದ ಅರಚುತಿತ್ತು.
-----------------------
4⃣
ಕರ್ತವ್ಯ-ಲೋಪ
-------------
ಅನಾಥಾಶ್ರಮದಲ್ಲಿರಿಸಿದ ತನ್ನ ತಂದೆಗೆ ಮಗ ದೂರವಾಣಿಯ ಮೂಲಕ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ.
-----------------------
5⃣
ನಿರ್ಧಾರ
-------
ಸಂಸಾರದ ತಾಪತ್ರಯದಿಂದೊಬ್ಬ ನೇಣುಹಾಕಿ ಸಾಯುವೆನೆಂದು ತೀರ್ಮಾನಿಸಿ ಮರದ ಬಳಿ ತೆರಳಿದಾಗ ಮರದಲ್ಲೊಂದು ಒಂಟಿಕಾಲಿನ ಹಕ್ಕಿ  ತನ್ನ ಮರಿಗೆ ತುತ್ತುತಿನ್ನಿಸುವ ದೃಶ್ಯಕಂಡು ಏನೋ ನಿರ್ಧರಿಸಿ ಮನೆಗೆ ಮರಳಿದ.
-----------------------
6⃣
ವಾಸ್ತವ
-------
ಆಸ್ತಿಕನೊಬ್ಬ ಪ್ರಾಣಿಬಲಿಗೈದು ದೇವರನ್ನು ಒಲಿಸುತ್ತಿರುವಾಗ ನಾಸ್ತಿಕನೊಬ್ಬ ಪ್ರಾಣಿಗಳಿಗೆ ಆಹಾರ ತಿನ್ನಿಸುತಿದ್ದ.
-----------------------
7⃣
ಪ್ರತ್ಯುಪಕಾರ
----------
ಮದುವೆಯಾಗಿ ವರ್ಷಗಳವರೆಗೆ ತಮಗೆ ಮಕ್ಕಳಾಗಲಿಲ್ಲವೆಂದು ಕೊರಗುತ್ತಿದ್ದ ದಂಪತಿಗಳು ಅನಾಥಾಶ್ರಮದಿಂದ ಮಗುವೊಂದನ್ನು ಪಡೆದು ಪೋಷಿಸಿ ಬೆಳೆಸಿದವರೇ  ಕೊನೆಗೆ  ಅನಾಥಾಶ್ರಮದಲ್ಲಿದ್ದಾರೆ.
-----------------------
8⃣
ಕಲ್ಪನೆ-ವಾಸ್ತವ
------------
ಸ್ವರ್ಗವೆಂಬುದು ಮೇಲಿದೆಯೆಂದು ಬಡವನೊಬ್ಬ ತನ್ನ ಮಕ್ಕಳಿಗೆ ಹೇಳುತ್ತಿರುವಾಗ ಪಕ್ಕದ ಶ್ರೀಮಂತ ಅವನ ಮಕ್ಕಳಿಗೆ
ಇವನ ಗುಡಿಸಲನ್ನು ತೋರಿಸಿ ನರಕವೆನ್ನುತ್ತಿದ್ದ.
-----------------------
9⃣
ತಿರುಗುಬಾಣ
-----------
ಸೊಸೆಯಾಗಿದ್ದಾಗ ತನ್ನ ಗಂಡನೊಬ್ಬನೇ ಸಾಕು ನನಗೆಂದು ತನ್ನತ್ತೆ ಮಾವನವರನು ಕಡೆಗಣಿಸಿದವಳು ಈಗ ಅತ್ತೆಯಾಗಿ ಮರುಗುತ್ತಿದ್ದಾಳೆ .
-----------------------
1⃣0⃣
ಕಾರಣ
------
ಪ್ರೀತಿಸಿ ಮದುವೆಯಾದ ಅವರು ಮಗುಬೇಕೆಂದು ನಿರ್ಧರಿಸಿ ಮುದ್ದಾದ ಮಗುವನ್ನು ಪಡೆದು ಲಾಲಿಸಿ ಪೋಷಿಸಿ ಅತಿಮುದ್ದಿನಿಂದ ದುರ್ಬುದ್ಧಿ ಹಿಡಿದವನ ಕಂಡು ತಮ್ಮೊಳಗೆ ಒಬ್ಬರನೊಬ್ಬರು ದೂಷಿಸಿ ಕಡೆಗೆ ಮನನೊಂದು ವಿಚ್ಛೇದನ ಪಡೆದು ಬೇರೆಬೇರೆಯಾದರು.