ಹಿಂದೆ ಮನೆತುಂಬಾ ಮಕ್ಕಳು, ಮಿತವಾದ ಆದಾಯ. ಮಕ್ಕಳಿಗೆ ಹಿರಿಯರೊಂದಿಗೆ ಅಂತಹ ಸಲಿಗೆ ಎಂಬುವುದೇ ಇರದೆ ಒಂಥರಾ ಬಿಗುವಿನ ವಾತಾವರಣ. ಅಪ್ಪನೊಡನೆ ಯಾವತ್ತೂ ಮನಬಿಚ್ಚಿ ಮಾತಾಡಿರದ ಹಲವರು, ಒಂದು ಪ್ಯಾಕೆಟ್ ಬಿಸ್ಕತ್ತನ್ನು ಹತ್ತು ಹನ್ನೆರಡು ಮಂದಿ ಹಂಚಿತಿನ್ನಬೇಕಾಗಿದ್ದ ಕಾಲ.
ಅವಿಭಕ್ತ ಕುಟುಂಬಗಳು. ಶಾಲೆಗೆ ಹೊರಡುವಾಗ ಈಗಿನಂತೆ ಪಾಕೆಟ್ ಮನಿಯ ಸಂಸ್ಕಾರ ಇರಲೇ ಇಲ್ಲ. ಕೆಲವರಿಗಂತೂ ದಿನವೂ ಹೊಟ್ಟೆ ತುಂಬ ಅನ್ನವೂ ದೊರಕುತ್ತಿರಲಿಲ್ಲ. ಮನೆತುಂಬಾ ಮಕ್ಕಳಿದ್ದು ನಿಯಮಿತವಾದ ಆದಾಯದಲ್ಲಿ ಮನೆಯ ಖರ್ಚು, ಮಕ್ಕಳ ವಿಧ್ಯಾಭ್ಯಾಸ, ಔಷಧಿ, ಅದು ಇದು ಎಂದು ಖರ್ಚಿನ ಮೇಲೆ ಖರ್ಚಾದಾಗ ಮಕ್ಕಳಿಗೆ ಪಾಕೆಟ್ ಮನಿ ಕೊಡುವುದಾದರೂ ಎಲ್ಲಿಂದ?
ಆಗೆಲ್ಲಾ ಯಾವುದಾದರೂ ಹಬ್ಬಕ್ಕೆ ಹಿರಿಯರು ಎಂಟಾಣೆಯೋ, ಒಂದು ರುಪಾಯಿಯೋ ನೀಡಿದರೆ ಅದನ್ನು ನಿಧಿಯಂತೆ ಕಾಪಾಡಿಕೊಂಡಿರುತ್ತಿದ್ದೆವು. ಯಾವಾಗಲಾದರೂ ನಾಲ್ಕಾಣೆಯ ಬಣ್ಣದ ಐಸ್ ಕ್ಯಾಂಡಿ ಕೊಂಡು ತಿಂದರೆ ಅದು ದೊಡ್ಡ ವಿಷಯ. ಮತ್ತೆಲ್ಲಾದರೂ ಸ್ವಲ್ಪ ಜಾಸ್ತಿ ಹಣವಿದ್ದು ಬೆಲ್ಲದ ಐಸ್ ಕ್ಯಾಂಡಿಯಾದರೆ ಇನ್ನೂ ಜಾಸ್ತಿ ಮರ್ಯಾದೆ. ಅಪ್ಪಿ ತಪ್ಪಿ ಒಂದು ರೂಪಾಯಿಯ ತೆಳುವಾದ ಪೇಪರ್ ನಿಂದ ಕವರ್ ಮಾಡಲ್ಪಟ್ಟ ದೂದ್ ಕ್ಯಾಂಡಿಯೇನಾದರೂ ಕೊಂಡುಕೊಂಡರೆ ಆತ ಮಹಾ ಶ್ರೀಮಂತ ಇತರರ ಕಣ್ಣಲ್ಲಿ.
ಹೌದು ಹಣದ ಬೆಲೆ ನಮಗೆ ತಿಳಿದಿತ್ತು. ಬೇಕೆಂದ ವಸ್ತುಗಳು ಬೇಕೆಂದಾಗ ಸಿಗುತ್ತಿರಲಿಲ್ಲ. ಒಂದು ಹೊಸ ವಸ್ತು ಬೇಕೆಂದರೆ ವರ್ಷವಿಡೀ ಅಪ್ಪನ ಕೃಪೆಗಾಗಿ ಕಾಯಬೇಕಿತ್ತು. ನಡುನಡುವೆ ಅಗತ್ಯ ಬಿದ್ದರೆ ಅಮ್ಮನ ಶಿಫಾರಸ್ಸೂ ಬೇಕಿತ್ತು. ಒಂದು ಪೆನ್ಸಿಲ್ ಮುಗಿದರೆ ಕಾರಣ ಹೇಳಬೇಕಿತ್ತು. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಹೆಪ್ಪುಗಟ್ಟುವ ಪೆನ್ನಿನ ರೀಫಿಲ್ ಅನ್ನು ಬರೆಯುವಂತೆ ಮಾಡಲು ಸರ್ಕಸ್ಸೇ ಮಾಡಬೇಕಿತ್ತು.
ಏನಾದರೂ ಕುಡಿಯುವುದಿದ್ದರೂ ತಿನ್ನುವುದಿದ್ದರೂ ಸಮಪಾಲು, ಕ್ರಮಬದ್ದ ಜೀವನ. ಈಗಿನಂತೆ ತಿಂಗಳಿಗೊಮ್ಮೆ ಬಟ್ಟೆ ಕೊಂಡುಕೊಳ್ಳುವ ಪರಿಪಾಠವಿರದೇ ವರ್ಷದಲ್ಲೊಂದು ಹಬ್ಬಕ್ಕೆ ಹೊಸಬಟ್ಟೆ ಅದನ್ನು ಆದಿನ ತೊಟ್ಟು ನಂತರ ಒಗೆದು ಮಡಚಿಟ್ಟರೆ ಮುಂದಿನ ಹಬ್ಬದವರೆಗೂ ಅದು ಪೆಟ್ಟಿಗೆಯಿಂದ ಹೊರಬಾರದು. ಮತ್ತೆ ಆ ವರ್ಷವಿಡೀ ನಡೆಯುವ ಮದುವೆ ಮುಂಜಿಗಳು, ನೆಂಟರ ಮನೆ ಭೇಟಿಗೆಲ್ಲಾ ಅದೇ ಬಟ್ಟೆ ಬೇಕು.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತ ಅನಿಸುತ್ತಿರಬಹುದು ನಿಮಗೆ. ಕಾರಣ ಇಂದಿನ ಮಕ್ಕಳ ಜೀವನಶೈಲಿ. ಒಂದು ಕೇಳಿದರೆ ಹತ್ತು ತಂದುಕೊಡುವ ಹೆತ್ತವರು. ನಮಗೆ ಸಿಗದೇ ಇದ್ದದ್ದು ನಮ್ಮ ಮಕ್ಕಳಿಗೆ ಸಿಗಲಿ ಎಂಬ ಬಯಕೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗೆಗೂ ಚಿಂತಿಸಬೇಕು. ಅತಿಯಾದ ಸಲಿಗೆ, ಕೈತುಂಬಾ ಹಣ, ಕೇಳಿದ ವಸ್ತು ಕೂಡಲೇ ಸಿಗಬೇಕೆಂಬ ಹಠ ಇವೆಲ್ಲಾ ಮಕ್ಕಳನ್ನು ದಾರಿತಪ್ಪಿಸಬಹುದು. ನಮ್ಮ ಬಾಲ್ಯದಲ್ಲಿ ನಾವಿಷ್ಟಪಟ್ಟ ವಸ್ತು ಸಮಯಕ್ಕೆ ಸಿಗದೆ ನಿರಾಸೆಯಾಗಿದೆ ಹಾಗಾಗಿ ನಮ್ಮಂತಹ ನಿರಾಸೆ ನಮ್ಮ ಮಕ್ಕಳಿಗೆ ಬೇಡ ಎಂಬ ಭಾವನೆ ಪ್ರತೀ ಹೆತ್ತವರಿಗೂ ಇರುತ್ತದೆ ಹಾಗೆಂದು ನಾವೇ ನಮ್ಮ ಮಕ್ಕಳನ್ನು ದುರ್ಬಲರನ್ನಾಗಿ ಮಾಡಿ ಅವರ ಭವಿಷ್ಯವನ್ನು ಅಂಧಕಾರಗೊಳಿಸುವುದು ಎಷ್ಟು ಸರಿ? ನಮ್ಮ ಹಿರಿಯರು ನಮಗೆ ನೀಡಿದ ಕ್ರಮಬದ್ದವಾದ ಜೀವನದಿಂದಲೇ ತಾನೇ ನಮಗೆ ಈಗ ಯಾವ ಪರಿಸ್ಥಿತಿಗೂ ಒಗ್ಗಿಕೊಳ್ಳುವಂತಹ ಧೈರ್ಯ? ಅದನ್ನು ನಮ್ಮ ಮಕ್ಕಳಿಗೂ ನೀಡಬೇಕಾದದ್ದು ನಮ್ಮ ಕರ್ತವ್ಯ ತಾನೇ?
ಮಕ್ಕಳ ಮೇಲಿನ ವ್ಯಾಮೋಹ ಹೆತ್ತವರಲ್ಲಿ ಸಹಜ. ಹಾಗೆಂದು ಅವರನ್ನು ಬೆಳೆಸುವುದೂ ಕೂಡಾ ಹೆತ್ತವರ ಜವಾಬ್ದಾರಿ. ದುಬೈಯಲ್ಲಿ ನಾನು ನೋಡಿರುವ ಒಂದು ಸಾಮಾನ್ಯ ದೃಶ್ಯ ಕೆಲ ಅಂಗಡಿಗಳ ಮುಂದೆ ಒಂದು ದಿರ್ಹಮ್ನ ನಾಣ್ಯ ಹಾಕಿದರೆ ಒಂದು ನಿಮಿಷ ಸಂಗೀತದೊಂದಿಗೆ ಅಲ್ಲಾಡುತ್ತಾ ಮಕ್ಕಳ ಮನರಂಜಿಸುವ ಕಾರುಗಳು, ಅಥವಾ ಪ್ರಾಣಿಗಳಂತಹ ಆಟಿಕೆಗಳಿರುತ್ತವೆ. ಅದನ್ನು ಕಂಡು ನನ್ನನ್ನೂ ಕೂರಿಸು ಎಂದು ಹಠಮಾಡದ ಮಕ್ಕಳೇ ಇಲ್ಲ ಎನ್ನಬಹುದು. ಒಂದು ಬಾರಿ ಕೂತರೆ ಮುಗಿಯಿತೇ? ಇಲ್ಲ. ಕೆಲಮಕ್ಕಳಂತೂ ಕಡೇಪಕ್ಷ ಐದು ಕಾಯಿನ್ ಆದರೂ ಹಾಕಿಸುತ್ತಾರೆ. ಇಲ್ಲ ಅಂದರೆ ಸಾಕು ಅಪ್ಪ ಅಮ್ಮನ ಗದರುವಿಕೆಗೂ ಬಗ್ಗದೇ ನೆಲದಲ್ಲಿ ಬಿದ್ದು ಅತ್ತು ಹೊರಳಾಡಿ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಇಂತಹ ವರ್ತನೆಗೆ ಹೆತ್ತವರೇ ಕಾರಣ. ಮಕ್ಕಳಿಗೆ ಹಣದ ಬೆಲೆ ತಿಳಿಸದೇ ಕೇಳಿದ್ದನ್ನೆಲ್ಲಾ ಕೊಟ್ಟು ಅಭ್ಯಾಸ ಮಾಡಿರುತ್ತಾರೆ. ಒಂದಲ್ಲಾ ಒಂದು ದಿನ ನಮ್ಮ ಈ ವರ್ತನೆಗೆ ನಾವೇ ಬೆಲೆ ತೆರಬೇಕಾಗುತ್ತದೆ ಎಂಬ ಕನಿಷ್ಟ ಜ್ಞಾನವನ್ನೂ ಕೂಡಾ ಹೊಂದದೆ ಮಕ್ಕಳ ಬೇಡಿಕೆಗಳನ್ನೆಲ್ಲಾ ಈಡೇರಿಸುತ್ತಾ ಹೋಗುತ್ತಾರೆ.
ಹೌದು ಮಕ್ಕಳು ಚಿಕ್ಕವರಿದ್ದಾಗ ಅವರ ಬೇಡಿಕೆಗಳು ಚಿಕ್ಕಮಟ್ಟದ್ದಾಗಿದ್ದು ಅದನ್ನು ಈಡೇರಿಸುವುದು ಅಂತಹ ಕಷ್ಟಸಾಧ್ಯ ಅನಿಸುವುದಿಲ್ಲ. ಆದರೆ ಬೆಳೆದಂತೆಲ್ಲಾ ಅವರ ಬೇಡಿಕೆಗಳು ದುಬಾರಿಯಾಗುತ್ತವೆ. ಆಗೆಲ್ಲಾ ಅದನ್ನು ಈಡೇರಿಸಲಾಗದಿದ್ದರೆ ಮಕ್ಕಳ ಮನದಲ್ಲಿ ಹೆತ್ತವರ ಬಗ್ಗೆ ದ್ವೇಷ ಹುಟ್ಟಬಹುದು. ಇವರೆಂತಹ ಹೆತ್ತವರು ಎಂಬ ತಿರಸ್ಕಾರವೂ ಉಂಟಾಗಬಹುದು ಅಥವಾ ಆ ಮಕ್ಕಳು ತಮ್ಮ ಇಷ್ಟಪೂರ್ತಿಗಾಗಿ ತಪ್ಪು ದಾರಿ ತುಳಿಯಬಹುದು. ಆಗ ಜೀವನವಿಡೀ ಕೊರಗಬೇಕಾಗುವುದು ಹೆತ್ತವರು.
ನಮ್ಮ ಬಾಲ್ಯದಲ್ಲಿ ಊಟದ ಹೊತ್ತು ಒಂದಗುಳು ಕೆಳಗೆ ಬೀಳಿಸಲೂ ಬಿಡುತ್ತಿರಲಿಲ್ಲ. ಅದಕ್ಕಾಗಿ ನರಕದ ಭಯವನ್ನು ಮೂಡಿಸುತ್ತಿದ್ದರು. ಇಂದು ಬೀಳಿಸಿದ ಒಂದೊಂದಗುಳು ಅನ್ನವೂ ಮಹ್ಶರಾ ದಲ್ಲಿ ಎತ್ತಿನ ರೂಪದಲ್ಲಿ ಬಂದು ಹಾಯುತ್ತದೆ. ಎಂಬ ಬೆದರಿಕೆಗೆ ಹೆದರಿ ಮಕ್ಕಳು ಜಾಗರೂಕತೆಯಿಂದ ಆಹಾರ ಸೇವಿಸುತ್ತಿದ್ದರು. ಇಂದು ಹೆಚ್ಚಿನ ಮಕ್ಕಳಿಗೆ ಹಸಿವಿನ ಬಗ್ಗೆ ಗೊತ್ತೇ ಇಲ್ಲ. ಪ್ಲೇಟ್ ತುಂಬಾ ಆಹಾರ ತುಂಬಿಸಿಕೊಡುವ ಅಮ್ಮಂದಿರು, ಅರ್ಧಂಬರ್ಧ ತಿಂದು ಉಳಿದ ಆಹಾರವನ್ನು ಹಾಳುಗೆಡಹುವ ಮಕ್ಕಳಿಗೆ ಕಮಕ್ ಕಿಮಕ್ ಅನ್ನದೆ ಸಾಥ್ ಕೊಡುತ್ತಾರೆ.
ಮೊನ್ನೆ ಸ್ನೇಹಿತರೊಬ್ಬರು ಕಳುಹಿಸಿದ ವೀಡಿಯೋ ಒಂದನ್ನು ವೀಕ್ಷಿಸುತ್ತಿದ್ದೆ. ಬೆಚ್ಚಿಬೀಳಿಸುವಂತಹ ಘಟನೆಗಳನ್ನು ಕೇಳಿ ಮನಸ್ಸಿನ ನೆಮ್ಮದಿಯೇ ಹಾಳಾಗಿಹೋಯ್ತು. ಪ್ರಪಂಚದಲ್ಲಿ ಪ್ರತೀದಿನ ಹಸಿವಿನಿಂದ ಸಾಯುವ ಜನರ ಸಂಖ್ಯೆ, ಒಂದು ಹನಿ ಚಹಾಕ್ಕಾಗಿ ರೈಲ್ವೇ ಪ್ರಯಾಣಿಕರು ಕುಡಿದೆಸೆಯುವ ಮಣ್ಣಿನ ಪಾತ್ರೆಗೆ ಮುಗಿದುಬೀಳುವ ಬಡಮಕ್ಕಳು. ತಮ್ಮ ಜೀವನದಲ್ಲಿ ಹಾಲು ಎಂದರೇನೆಂದೇ ಕಂಡಿರದ ಕೂಸುಗಳು. ಹಸಿವಿನಿಂದ ಕಂಗೆಟ್ಟು ಮೃತದೇಹಗಳನ್ನೇ ಮಾರಿತಿನ್ನುವ ಜನರು ನಮ್ಮ ಭಾರತದಲ್ಲಿ ಇದ್ದಾರೆ ಎಂದರಿತಾಗ ಕಣ್ಣೀರುಕ್ಕಿತು.
ಬಡತನದಿಂದ, ಪೋಷಕಾಂಶ ಕೊರತೆಯಿಂದ ಸಾಯುವ ಸಾವಿರಾರು ಮಕ್ಕಳಿರುವಾಗ ನಾವು ನಮ್ಮ ಮಕ್ಕಳಿಗೆ ಅವಶ್ಯಕತೆಗಿಂತ ಹೆಚ್ಚುಕೊಟ್ಟು ಆಹಾರ ಹಾಳುಮಾಡುತ್ತಿದ್ದೇವಲ್ಲಾ ಎಂದುಕೊಂಡು ಬೇಸರವಾಯ್ತು. ಅಲ್ಲಾಹನು ನಮಗೆ ನೀಡಿರುವ ಸೌಭಾಗ್ಯವನ್ನು ನಾವು ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ. "ತನ್ನ ನೆರೆಯವನು ಹಸಿದಿರುವಾಗ ತಾನು ಹೊಟ್ಟೆತುಂಬಾ ಉಣ್ಣುವವನು ನನ್ನವನಲ್ಲ" ಎಂಬ ಪ್ರವಾದಿವಚನವನ್ನು ನೆನಪಿಟ್ಟುಕೊಂಡರೆ ನಾವ್ಯಾರೂ ಆಹಾರ ಹಾಳುಗೆಡವುವುದಾಗಲೀ, ಅನಗತ್ಯ ಖರ್ಚನ್ನಾಗಲೀ ಮಾಡಲಾರೆವು.
ಮಕ್ಕಳಿಗೆ ಆಹಾರದ ಮಹತ್ವವವನ್ನೂ, ಹಸಿವಿನ ನೋವನ್ನೂ ಚಿಕ್ಕಂದಿನಿಂದಲೇ ಕಲಿಸಿಕೊಡಬೇಕಿದೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ಬೇಡ ಎಂಬ ಡೈಲಾಗ್ ಅನ್ನು ಬದಿಗಿಟ್ಟು,
1. ಮಕ್ಕಳಿಗೆ ನಮಗಿಂತಲೂ ಉತ್ತಮ ಸಂಸ್ಕಾರ ನೀಡುವ ಎಂಬ ವಿಶಾಲ ಮನಸ್ಕತೆಯನ್ನು ಬೆಳೆಸಿಕೊಳ್ಳಿ.
2. ಪ್ರಪಂಚದ ಇತರ ಕಡೆ ನಡೆಯುವ ಘಟನೆಗಳನ್ನು ತಿಳಿಸಿ ಮಕ್ಕಳು ಸ್ವಯಂ ಆಹಾರವನ್ನು ಹಾಳುಮಾಡದಿರಲು ಕಲಿಸಿ.
3. ಯಾವುದಾದರೂ ವಸ್ತುವನ್ನು ಖರೀದಿಸಬೇಕೆಂದು ಹಠಹಿಡಿದರೆ ಅದು ನಿಜವಾಗಿಯೂ ಉಪಯುಕ್ತವೇ ಎಂದು ಧೃಢಪಡಿಸಿಕೊಂಡು, ಹೌದಾದರೆ ಮಾತ್ರ ಖರೀದಿಸಿ. ಇಲ್ಲವೆಂದಾದರೆ ನಯವಾಗಿ ತಿಳಿಹೇಳಿ.
4. ಚಿಕ್ಕಂದಿನಿಂದಲೇ ಪಾಕೆಟ್ ಮನಿಯ ಅಭ್ಯಾಸ ಬೇಡ. ಅದರ ಬದಲು "ಪಿಗ್ಗೀ ಬ್ಯಾಂಕ್" ನಂತಹ ಅಭ್ಯಾಸಗಳನ್ನು ರೂಢಿಸಿ ತಾವಾಗಿಯೇ ಉಳಿತಾಯ ಮಾಡುವಂತೆ ಪ್ರೋತ್ಸಾಹಿಸಿ.
5. ಅವಶ್ಯಕತೆಯಿರುವವರಿಗೆ ದಾನವನ್ನು ಮಕ್ಕಳ ಕೈಯಿಂದಲೇ ಕೊಡಿಸಿ, ಇದರಿಂದ ಮುಂದಕ್ಕೆ ಮಕ್ಕಳಿಗೂ ಆ ಅಭ್ಯಾಸ ಉಂಟಾಗಬಹುದು.
6. ದುಂದುವೆಚ್ಚದಿಂದ ತಡೆಯಿರಿ.
7. ಚಿಕ್ಕ ಮಕ್ಕಳ ಬಾಯಲ್ಲಿ ಬರುವ ಮಾತುಗಳು ಕೇಳಲು ಸೊಗಸು, ಹಾಗೆಂದು ತಪ್ಪಾಗಿ ಮಾತನಾಡಿದಾಗ ಕೂಡಲೇ ತಿದ್ದಿ, ತಪ್ಪು ಮಾತುಗಳನ್ನು ಯಾವತ್ತೂ ಪ್ರೋತ್ಸಾಹಿಸುವ ಪ್ರಯತ್ನ ಬೇಡ.
8. ಮಕ್ಕಳಿಗೆ ಅವರ ಸಾಮಾಜಿಕ ಜವಾಬ್ದಾರಿಗಳನ್ನೂ ತಿಳಿಸಿ. ಉದಾಹರಣೆಗೆ ರಸ್ತೆಯಲ್ಲಿ ಕಸ ಬಿಸಾಡುವುದಾಗಲೀ, ನೀರು, ವಿದ್ಯುತ್ ಪೋಲುಮಾಡುವುದಾಗಲೀ ಮಾಡದಂತೆ ತಡೆಯಿರಿ.
9. ಮಕ್ಕಳಿಗೆ ಲೌಕಿಕ ವಿಧ್ಯಾಭ್ಯಾಸದ ಜೊತೆಗೆ ಧಾರ್ಮಿಕ ವಿಧ್ಯಾಭ್ಯಾಸವನ್ನೂ ಕೊಡಿಸಿ.
10. ಹಿರಿಯರಿಗೆ ಗೌರವಿಸುವುದು, ಮಾತು ಪಾಲಿಸುವುದು ಇವೆಲ್ಲವನ್ನು ನಯವಾಗಿಯೇ ತಿಳಿಸಿ ಕಲಿಸಿ ಕೊಡಬೇಕಾದದ್ದು ಹೆತ್ತವರ ಕರ್ತವ್ಯ.
11. ಚಿಕ್ಕಂದಿನಿಂದಲೇ ಮೊಬೈಲ್ ಫೋನ್, ಟ್ಯಾಬ್, ಟಿವಿಯ ಅಭ್ಯಾಸವನ್ನು ಮಾಡಿಸದಿರಿ. ಬದಲಿಗೆ ಹೊರಾಂಗಣ ಆಟಕ್ಕೆ ಪ್ರೋತ್ಸಾಹಿಸಿ. ಆಗದಿದ್ದರೆ ಮೆದುಳು ಚುರುಕಾಗಿಸುವ ಆಟವನ್ನು ಆಡಿಸಿ.
ಕೆಲ ತಾಯಂದಿರು ಹೆಮ್ಮೆಯಿಂದ ನಮ್ಮ ಮಗುವಿಗೆ ಮೊಬೈಲ್ ಒತ್ತಲು ಗೊತ್ತು, ಟಿವಿ ಚಾನೆಲ್ ಬದಲಾಯಿಸಲು ಗೊತ್ತು ಎಂದು ಹೆಮ್ಮೆ ಪಡುತ್ತಾರೆ. ಇದು ಹೆಮ್ಮೆಯ ವಿಚಾರ ಅಲ್ಲವೇ ಅಲ್ಲ. ಬದಲಿಗೆ ಮಗುವಿನ ಬೆಳವಣಿಗೆಯ ಬಹುಮುಖ್ಯ ಘಟ್ಟದಲ್ಲಿ ಹೆತ್ತವರಿಡವ ತಪ್ಪು ಹೆಜ್ಜೆಯಾಗಿದೆ. ಮಗುವಿಗೆ ಹತ್ತು ವಯಸ್ಸಾಗುವವರೆಗೆ ಯಾವ ಮೌಲ್ಯವನ್ನು ಮಗುವಿನ ಮನದಲ್ಲಿ ತುಂಬುತ್ತೇವೆಯೋ ಆ ಮೌಲ್ಯಗಳು ಜೀವನ ಪರ್ಯಂತ ಅವರ ಜತೆಯಿರುತ್ತವೆ.
ನಮಗೆ ಸಿಗದೇ ಇದ್ದದ್ದು ನಮ್ಮ ಮಕ್ಕಳಿಗೆ ಸಿಗಲಿ ಎಂಬ ವಾದವನ್ನಿಟ್ಟುಕೊಂಡು ದುಂದುವೆಚ್ಚದ ಅಭ್ಯಾಸ ಮಾಡಿದರೆ ನಾಳೆ ನಮ್ಮ ಮಕ್ಕಳು ದುರಭ್ಯಾಸದ ದಾಸರಾದರೆ ಕೊರಗಬೇಕಾದೀತು. ಅದಕ್ಕಾಗಿ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸುವ ಸಲುವಾಗಿ ಶಿಸ್ತಿನಿಂದ ಬೆಳೆಸಿ.
ಕೊನೆಯದಾಗಿ ಪುಟ್ಟ ಮಕ್ಕಳ ಮನಸ್ಸು ಹಸಿಮಣ್ಣಿನಂತೆ. ಏನನ್ನು ಬಿತ್ತುತ್ತೇವೆಯೋ ಅದೇ ಬೆಳೆಯುತ್ತದೆ. ಹಾಗಾಗಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಸ್ನೇಹ, ಪ್ರೀತಿಯ ಬೀಜವನ್ನು ಬಿತ್ತಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿಸೋಣ. ದ್ವೇಷದ ಬೀಜ ಬಿತ್ತಿ ಸಮಾಜಕಂಟಕರನ್ನಾಗಿಸುವುದು ಬೇಡ.
ಉಮ್ಮು ಸಾರಾ ಶಾಝಿಯಾ
(ಉಮ್ಮು ಅರೂಶ್ ಮಹಮ್ಮದ್)