ಭಾನುವಾರ, ಜುಲೈ 17, 2016

ಮದ್ರಸಾ ಅಧ್ಯಾಪಕರು..?!!

ಆಡಳಿತ ಕಮಿಟಿಯವರ ತಾತ್ಸಾರ ನೋಟಗಳಿಗೆ ಬಲಿಪಶುವಾಗುತ್ತಿದ್ದಾರೆಯೇ ಮದ್ರಸಾ ಅಧ್ಯಾಪಕರು..?!!

ಕಳೆದ ರಂಝಾನ್ ತಿಂಗಳಲ್ಲಿ ತರಾವೀಹ್ ನಮಾಝ್ ಮುಗಿದೊಡನೆ ಒಂದು ವಯಸ್ಸಾದ ಉಸ್ತಾದರೊಬ್ಬರು ಮತಪ್ರಭಾಷಣಗೈಯಲು ಎದ್ದುನಿಂತರು. ಕೇವಲ ಇಪ್ಪತ್ತರಷ್ಟು ಮಂದಿ ಸೇರಿದ್ದ ಜನರ ನಡುವೆ ಕೆಲವು ಉಪದೇಶಗಳನ್ನು ಹೇಳಿ,ತನ್ನ ಸಮಸ್ಯೆಗಳನ್ನು,ಬೆಂಗಳೂರಿಗೆ ಬಂದ ಉದ್ದೇಶಗಳನ್ನು ಸವಿವರವಾಗಿ ಬಿಚ್ಚಿಡತೊಡಗಿದರು.
ಅವರ ಮಾತಿನಲ್ಲೇ ಹೇಳುವುದಾದರೆ "ನಾನು ಒಂದು ಮದ್ರಸಾದಲ್ಲಿ ಸಹ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿರುವೆ,ಮದ್ರಸ ಅಧ್ಯಾಪಕರಿಗೆ ಸಿಗುವ ಸಂಬಳ ಕಡಿಮೆಯಾಗಿದ್ದರೂ ಅದರಲ್ಲಿ ನನ್ನ ಕುಟುಂಬ ನಿರ್ವಹಣೆ ಚೆನ್ನಾಗಿ ನಡೆಯುತ್ತಿತ್ತು.ಆದರೆ ವಯಸ್ಸಿಗೆ ಬಂದ ನನ್ನ ಮಗಳ ಮದುವೆ ಬರುವ ದಿನಗಳಲ್ಲಿ ಇರುವುದರಿಂದ ಲಕ್ಷಾಂತರ ರೂಪಾಯಿಗಳ ಆವಶ್ಯಕತೆಯಿದೆ,ಅದಕ್ಕೋಸ್ಕರ ಈ ರಂಝಾನ್ ತಿಂಗಳಲ್ಲಿ  ಊರಿಡೀ ಸಂಚರಿಸಿ ಮಸೀದಿಗಳಲ್ಲಿ ಸಣ್ಣ ಪುಟ್ಟ ಉಪದೇಶಗಳು ನೀಡಿ ಅದರಲ್ಲಿ ಸಿಗುವ ಸಣ್ಣ ಪುಟ್ಟ ಮೊತ್ತಗಳು ನನ್ನ ಮಗಳ ಮದುವೆಗೆ ಸಹಾಯವಾಗಬಹುದು ಅಂದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ ಅಂತ ಹೇಳುತ್ತಾ ಭಾವುಕರಾದರು..!!
ಇದು ಕೇವಲ ಒಂದು ಮದ್ರಸದ ಅಧ್ಯಾಪಕರ,ಅಥವಾ ವಯಸ್ಸಿಗೆ ಬಂದ ಹೆಣ್ಣು ಮಗಳಿರುವ ಉಸ್ತಾದರೊಬ್ಬರ ಅವಸ್ಥೆಯಲ್ಲ ಬದಲಾಗಿ ಸಮುದಾಯದ ನಡುವೆ ಅದೆಷ್ಟೋ ಇಲ್ಮ್ ಕಲಿಸಿಕೊಡುವ ಉಸ್ತಾದರ ದಾರುಣ ಸ್ಥಿತಿಯಾಗಿದೆ..!!

ಒಂದು ಸಣ್ಣ ಹೋಟೇಲಿನಲ್ಲಿ ಕೆಲಸ ಮಾಡುವ ಸಣ್ಣ ಹುಡುಗನಿಗೂ ತಿಂಗಳಿಗೆ ಹನ್ನೆರಡು ಸಾವಿರದಷ್ಟು ಸಂಬಳ ಪಡೆಯುತ್ತಿರುವಾಗ ಮದ್ರಸ ಶಿಕ್ಚಣ ಕಲಿಸಿಕೊಡುತ್ತಿರುವ ಉಸ್ತಾದರುಗಳಿಗೆ ಬಹುತೇಕ ಕಡೆಗಳಲ್ಲಿ ಈಗಲೂ ಸಿಗುತ್ತಿರುವ ಸಂಬಳ ಕೇವಲ ಎಂಟೋ, ಒಂಭತ್ತು ಸಾವಿರಗಳು..!!
ಮನೆ ಮಂದಿ,ಮಡದಿ,ಮಕ್ಕಳ ಸಂಸಾರವನ್ನು ನೋಡಿಕೊಳ್ಳಬೇಕಾದ ಉಸ್ತಾದರುಗಳಿಗೆ ಈ ಜುಜುಬಿ ಸಂಬಳಗಳು ವರದಾನವಾಗಬಹುದೇ..?!!
ತಮ್ಮ ಮಕ್ಕಳಿಗೆ ಲೌಕಿಕ ಶಿಕ್ಷಣವನ್ನು ನೀಡಲು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಆಯ್ದುಕೊಂಡು ,ದುಬಾರಿ ಶುಲ್ಕವನ್ನು ನೀಡುವ ಹೆತ್ತವರು, ಮಕ್ಕಳು ಹೆತ್ತವರೊಂದಿಗೆ ಯಾವ ರೀತಿ ವರ್ತಿಸಬೇಕು..? ಅನ್ನುವುದರಿಂದ ಹಿಡಿದು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದರ ಮೂಲಕ ಎಳೆ ಮನಸ್ಸುಗಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವಂತೆ ಕಲಿಸಿಕೊಡುವ ಉಸ್ತಾದರನ್ನು ಮಾತ್ರ ಕೆಲವರು ತಾತ್ಸಾರದಿಂದ ಕಾಣುತ್ತಿರುವುದು ಸಮುದಾಯದ ಅತೀ ದೊಡ್ಡ ದುರಂತವಾಗಿದೆ.!!

ಕೆಲವೊಂದು ಆಡಳಿತ ಕಮಿಟಿಗಳಲ್ಲಿ ಉಸ್ತಾದರು ಅಂದರೆ ಮಸೀದಿ ಕೆಲಸಗಳಿಗೆ ನಿಯೋಜಿಸಲ್ಪಟ್ಟವರು ಅನ್ನುವ ಧಾರಣೆಯು ಬೆಳೆಯತೊಡಗಿದೆ.ಉಸ್ತಾದರನ್ನು ಮಸೀದಿಯ ಕೆಲಸಗಳಿಗೆ ಬಳಸಲ್ಪಡುವಾಗ ಅವರಿಗೆ ನಾವು ನೀಡುವ ಸಂಬಳಗಳು ಅವರಿಗೆ ತೃಪ್ತಿಧಾಯಕವಾಗಿದೆಯೇ ಅಥವಾ ಅವರ ಮಟ್ಟಿಗೆ ಅರ್ಹವಾದದ್ದಾ ಅನ್ನುವುದರ ಕುರಿತು ಚಿಂತಿಸದೇ ಇರುವುದು ವಿಪರ್ಯಾಸ.

ಒಬ್ಬ ವಿದ್ಯಾರ್ಥಿಗೆ ವಿದ್ಯೆ ಕಲಿಸುವುದು ಅನ್ನುವುದು ನಾವಂದುಕೊಂಡಂತೆ ಸುಲಭವೂ ಅಲ್ಲ.ಉಸ್ತಾದರು ಅಂದರೆ ಎಲ್ಲವನ್ನೂ ಸಹಿಸಿ ಜೀವಿಸಬೇಕಾಗಿರುವವರಲ್ಲ.ಅವರಿಗೂ ಅವರದೇ ಆದ ಕಷ್ಟಗಳು ಸಮಸ್ಯೆಗಳು ಇರಬಹುದು. ಕೆಲವೊಮ್ಮೆ ಕೆಲವೊಂದು ವಿಷಯಗಳು ಅರ್ಥವಾಗಿಸಿಕೊಡುವಾಗ ಮಕ್ಕಳನ್ನು ಗದರಿಸಿಯೋ,ಸಣ್ಣ ಮಟ್ಟದಲ್ಲಿ ಬಲಪ್ರಯೋಗ ಮಾಡಬೇಕಾದಂತಹ ಸಂದರ್ಭಗಳು ಬಂದರೆ ಒಂದು ವೇಳೆ ಅದು ಆಡಳಿತ ಕಮಿಟಿಯಲ್ಲಿರುವವರ ಮಕ್ಕಳಾಗಿದ್ದಲ್ಲಿ ಕೆಲವೊಮ್ಮೆ ಗಂಟುಮೂಟೆ ಕಟ್ಟಿಕೊಂಡು ಮನೆಯ ಹಾದಿಯನ್ನು ಹಿಡಿಯಬೇಕಾದಂತಹ ಪರಿಸ್ಥಿತಿಗಳೂ ಬಂದೊದಗುತ್ತದೆ.

ಲೌಕಿಕ ಶಿಕ್ಷಣದ ನಡುವೆ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡದೆ ಒಂದು ಕಡೆ ಅವರನ್ನು ಅಧಾರ್ಮಿಕತೆಯತ್ತ ಕೊಂಡೊಯ್ಯುವ ಹೆತ್ತವರು ಇರುವಾಗ, ಮತ್ತೊಂದು ಕಡೆಯಿಂದ ಆಡಳಿತ ಕಮಿಟಿಯವರು ಧಾರ್ಮಿಕ ಶಿಕ್ಷಣವನ್ನು ನೀಡುವ ಅಧ್ಯಾಪಕರಿಗೆ ಗೌರವಯುತವಾದ ಸಂಬಳ ನೀಡದೆ  ಇರುವುದರಿಂದ ಇಂದು ಧಾರ್ಮಿಕ ವಿದ್ಯೆಯನ್ನು ನೀಡುವ ಉಸ್ತಾದರುಗಳಿಗೆ ಕೊರತೆಯನ್ನು ಅನುಭವಿಸುವಂತಹ ಪ್ರಮೇಯಗಳು ಬಂದೊದಗಿದೆ.ಇದೇ ರೀತಿ ಮುಂದುವರಿದರೆ ಮುಂದಿನ ತಲೆಮಾರುಗಳಿಗೆ ಧಾರ್ಮಿಕ ವಿದ್ಯೆಯನ್ನು ನೀಡಲು ಉಸ್ತಾದರುಗಳ ಕೊರತೆ ಕಾಡುವುದರಲ್ಲಿ ಸಂಶಯವಿಲ್ಲ.

ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿರುವ ಪ್ರಸಕ್ತ ಸನ್ನಿವೇಶಗಳಲ್ಲಿ,  *ಜೀವನದಲ್ಲಿ ಹಲವು ಗುರಿ,ಉದ್ದೇಶಗಳನ್ನು ಇಟ್ಟುಕೊಂಡು ಇಲ್ಮ್ ಕಲಿಸಿಕೊಡುವ ಕಾರ್ಯವನ್ನು ಮಾಡಿ,ಅದರಲ್ಲಿ ತೃಪ್ತಿದಾಯಕ, ಸ್ವಾವಲಂಬಿ ಜೀವನ ನಡೆಸುವ ಮದ್ರಸಾ ಅಧ್ಯಾಪಕರನ್ನು ಗೌರವಯುತವಾಗಿ ಕಾಣುವಂತವರು ನಾವುಗಳಾಗೋಣ.ಪ್ರತಿಯೊಂದು ಜಮಾಅತ್ ಕಮಿಟಿಗಳು ಇದರ ಕುರಿತು ಗಂಭೀರವಾದ ಚಿಂತನೆ ನಡೆಸಿ, ಭವಿಷ್ಯದ ನಾಳೆಗಳಲ್ಲಿ ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗದಂತೆ ಈಗಿಂದೀಗಲೇ ಜಾಗೃತರಾಗಿರೋಣ.*

✍🏻 ಸ್ನೇಹಜೀವಿ ಅಡ್ಕ