1997-98 ರ ಸಮಯ. ಮಂಗಳೂರಿನ ಕೆಲವು ಪ್ರಮುಖ ಸ್ಥಳಗಳಲ್ಲಿ ಏರ್ ಟೆಲ್ ಮೊಬೈಲ್ ನೆಟ್ ವರ್ಕ್ ಸಿಗ್ತಾ ಇತ್ತು. ಅದಕ್ಕೂ ಮೊದಲು ಪೇಜರ್ ಪ್ಯಾಂಟ್ ಬೆಲ್ಟ್ ನ್ನು ಅಲಂಕರಿಸಿತ್ತು. ಮಂಗಳೂರಲ್ಲಿ ಮೊಬೈಲ್ ಸಿಗುತ್ತೆ ಅಂತ ತಿಳಿದದ್ದೇ ತಡ ದುಬೈ ನಲ್ಲಿದ್ದ ಅಣ್ಣನಿಗೆ ದಂಬಾಲು ಬಿದ್ದಿದ್ದೆ. ಆತ ಅಲ್ಲಿಂದ 30,000/- ರೂ. ದುಬಾರಿ ಬೆಲೆತೆತ್ತು ಸಣ್ಣ ಆಂಟೆನಾ ಇರುವ ದೊಡ್ಡ ಸೆಟ್ ಕಳುಹಿಸಿದ್ದ. ಆವಾಗ ಬೇರೆಲ್ಲೂ ನೆಟ್ ವರ್ಕ್ ಇಲ್ಲ. ಮೊಬೈಲಲ್ಲೇ ಮಾತಾಡ್ಬೇಕಾದ್ರೆ ಒಂದಾ ಮಂಗ್ಳೂರು ಅಥವಾ ವೀರಕಂಭ ಮೈಕ್ರೋಸ್ಟೇಶನ್ ತುದಿಗೆ ಹತ್ತಬೇಕಾಗಿತ್ತು. ಆವಾಗ ಈಗಿನಂತೆ ಚಿಲ್ಲರೆ ಪೈಸೆಗೆ ಫೋನ್ ಹೋಗ್ತಾ ಇರ್ಲಿಲ್ಲ. ಅಲ್ಲದೆ ಪ್ರಿಪೇಯ್ಡ್ ಸಿಮ್ ಕೂಡಾ ಇರ್ಲಿಲ್ಲ. ತಿಂಗಳಿಗೊಮ್ಮೆ ಪ್ರತ್ಯೇಕ ಬಾಡಿಗೆ ಸೇರಿ ಏರ್ ಟೆಲ್ ಬಿಲ್ ಬರ್ತಿತ್ತು. ನಾನು ಮೊಬೈಲ್ ಹಿಡಿಯುವ ಸಮಯ ಲೋಕಲ್ ಕಾಲ್ ನಿಮಿಷಕ್ಕೆ ಔಟ್ ಗೋಯಿಂಗ್ 14/- ರೂ. ಇನ್ ಕಮಿಂಗ್ ಗೆ 7/- ರೂ. ನಾನಾವಾಗ ಸಣ್ಣ ಪ್ರಾಯ. ಮಂಗ್ಳೂರು ಹೋಗುವಾಗ ಸ್ನೇಹಿತರಲ್ಲಿ ಮೊಬೈಲ್ ಗೆ ಫೋನ್ ಮಾಡಿ ಅಂತ ವಿನಂತಿಸುತ್ತಿದ್ದೆ. ಮೊಬೈಲ್ ರಿಂಗಣಿಸಿ ನಾನು ಮಾತಾಡುವಾಗ ಎಲ್ಲರೂ ನನ್ನ ಮುಖಾನೆ ತದೇಕಚಿತ್ತದಿಂದ ನೋಡುತ್ತಿದ್ದರು. ಅಂದಿನ ಮೊಬೈಲ್ ದೊಡ್ಡ ಗಾತ್ರವಾದುದರಿಂದ ಸೊಂಟ ಬೆಲ್ಟ್ ನಲ್ಲಿ ಸಿಕ್ಕಿಸುವ ಸಂವಿಧಾನವಿತ್ತು. ಅದು ಕೂಡಾ ಒಂದು ಶೋ ನೆ.
ಕ್ರಮೇಣ ಮೊಬೈಲ್ ಮೋಡೆಲ್ ಸಣ್ಣದಾಗುತ್ತಾ ಬರುತ್ತಿದ್ದಂತೆ ನೆಟ್ ವರ್ಕ್ ನಲ್ಲೂ ಕೆಲವೊಂದು ಬದಲಾವಣೆಗಳಾದವು. ಆವಾಗ ರೈಸಿದ ಮೋಡೆಲ್ ಅಂದ್ರೆ ನೋಕಿಯಾ 3310 ಮತ್ತು 1100. ಪ್ರಾರಂಭದಲ್ಲಿ ಏರ್ಟೆಲ್ ನೆಟ್ ವರ್ಕ್ ಇತ್ತಾದರೂ ಕ್ರಮೇಣ ಬಿಎಸ್ಸೆನ್ನೆಲ್ ಸೆಲ್ ವನ್, ಸ್ಪೈಸ್ ಮತ್ತಿತರ ನೆಟ್ ವರ್ಕ್ ಗಳು ಮಾರುಕಟ್ಟೆಗೆ ಕಾಲಿಡಲಾರಂಭಿಸಿತು. ಪ್ರಿಪೇಯ್ಡ್ ಸಿಮ್ ಪೋಸ್ಟ್ ಪೇಯ್ಡ್ ಆಯಿತು. ಔಟ್ ಲೆಟ್ ಗೆ ತೆರಳಿ ಮೊಬೈಲ್ ಸೆಟ್ ಕೊಟ್ಟು ಕೇಬಲ್ ಮೂಲಕ ಕರೆನ್ಸಿ ತುಂಬಿಸುವ ಸಂವಿಧಾನ ಬಂತು. ಒಂದು ಮೊಬೈಲ್ ಗೆ ಕರೆನ್ಸಿ ಹಾಕಬೇಕಾದರೆ 20 ರಿಂದ 30 ನಿಮಿಷ ಅಂಗಡಿ ಜಗುಲಿಯಲ್ಲಿ ಕಾದದ್ದಿದೆ. ನಂತರದ ದಿನಗಳಲ್ಲಿ ಅದುಹೋಗಿ ರಿಚಾರ್ಜ್ ಗೆ ನಂಬ್ರ ಕೊಡುವ ಸಿಸ್ಟಮ್ ಬಂತು. ಮತ್ತೆ ಸ್ಕ್ರಾಚ್ ಕಾರ್ಡು ಬಳಿಕ ಇ ರಿಚಾರ್ಜ್ ನ ಜಮಾನ. ಈಗ ಇಂಟರ್ ನೆಟ್ ಯುಗವಾದುದರಿಂದ ಮೊಬೈಲ್ ನಲ್ಲೇ ರಿಚಾರ್ಜ್ ಅಪ್ಲಿಕೇಶನ್ ಅಳವಡಿಸಿ ಬೇಕೆಂದಾಗ ಕರೆನ್ಸಿ ತುಂಬಬಹುದು. ಅಂದಿನಿಂದ ಇಂದಿನ ತನಕ ಮೊಬೈಲ್ ಯುಗ ಎಷ್ಟು ಬದಲಾವಣೆ ಕಂಡಿತು ನೋಡಿ. ಇದು ನನ್ನ 19 ವರ್ಷದ ಮೊಬೈಲ್ ಬಳಕೆಯ ಅನುಭವದ ಸಂಕ್ಷಿಪ್ತ ನೋಟವಷ್ಟೆ. ಪ್ರಾರಂಭದಲ್ಲಿ ಬೆರಳೆಣಿಕೆಯ ಜನರ ಕೈಯ್ಯಲ್ಲಿದ್ದ ಮೊಬೈಲ್ ಇಂದು ಎಲ್ಲರ ಬೆರಳ ತುದಿಯಲ್ಲೂ ಇದೆ. ಒಂದು ಕಾಲದಲ್ಲಿ ಪ್ರಿಪೇಯ್ಡ್ ಸಿಮ್ ಸಿಗದೆ ಸಂಸದರ, ಶಾಸಕರ ಶಿಫಾರಸ್ಸಿನಲ್ಲಿ ಪಡೆದದ್ದೂ ಇದೆ. ಅಧಿಕ ಹಣಕೊಟ್ಟು ಖರೀದಿಸಿದ್ದೂ ಇದೆ. ಇಂದು ಸಿಮ್ ಧರ್ಮಕ್ಕೆ ಸಿಕ್ಕರೂ ನೋಡೋರಿಲ್ಲ. ವಿಟ್ಲದಂತಹ ಪ್ರದೇಶಕ್ಕೆ ಬಿಎಸ್ಸೆನ್ನೆಲ್ ಸೆಲ್ ವನ್ ಮೊಬೈಲ್ ಟವರ್ ಅಳವಡಿಕೆಯಾದಾಗ ಅದನ್ನು ಕಣ್ತುಂಬಿಸಿಕೊಳ್ಳಲು ಎಷ್ಟು ಜನ. ನೆಟ್ ವರ್ಕ್ ಕಾರ್ಯಾರಂಭಿಸಿದಾಗ ಬಿಎಸ್ಸೆನ್ನೆಲ್ ಸಿಮ್ ನ್ನು ಕ್ಯೂ ನಲ್ಲಿ ಪಡೆಯಲು ಕಛೇರಿ ಮುಂದೆ ರಾತ್ರಿಯಿಡೀ ಜಾಗರಣೆ ಮಾಡಿದವರೂ ನಮ್ಮಲ್ಲಿದ್ದಾರೆ. ಇಂದು ಮೊಬೈಲ್ ಒಂದು ಕಿರಿಕಿರಿ ವಸ್ತುವಾಗಿದೆ. ಅದಿಲ್ಲದೆ ದಿನವೂ ಹೋಗದು ಎಂಬ ಪರಿಸ್ಥಿತಿ ತಲೆದೋರಿದೆ. ಸರಿ ತಾನೇ?
-ರಶೀದ್ ವಿಟ್ಲ.