ಶುಕ್ರವಾರ, ಮಾರ್ಚ್ 3, 2017

ಪ್ರಾಮಾಣಿಕತೆ

ಪ್ಲಾಸ್ಟಿಕ್ ಅಕ್ಕಿ ತಯಾರಿಸುವವನು ಅಂದುಕೊಳ್ಳುತ್ತಾನೆ, ನಾನು ತುಂಬಾ ಹಣ ಸಂಪಾದಿಸುತ್ತೇನೆ, ಒರಿಜಿನಲ್ ಅಕ್ಕಿ ಖರೀದಿಸಿ  ಉಣ್ಣಬಲ್ಲೆ, ಮನೆ ಮಹಲು ವಾಹನ ಆಸ್ಥಿ ಅಂತಸ್ತು ಎಲ್ಲಾ ಮಾಡಿಕೊಳ್ಳಬಲ್ಲೆ . ಪ್ರಾಮಾಣಿಕವಾಗಿ ಸಂಪಾದಿಸುವ ಮೂರ್ಖನಿಗಿಂತ ಮೇಲಿನ ಸ್ಥರದಲ್ಲಿ ಬದುಕಬಲ್ಲೆ.

ಆದರೆ, ಉಣ್ಣುವ ಅಂಗದ, ಕರಗುವ ಜಠರದ ಚಟುವಟಿಕೆ ನಿಂತರೆ , ವಿಸರ್ಜನೆಯ ದಾರಿಗಳು ಕೆಲಸ ನಿರ್ವಸದೆ ಹೋದರೆ, ಮನೆ ಮಹಲಿನ ಅಂದವನ್ನು ಸವಿಯುವ ಕಣ್ಣು ದ್ರಷ್ಟಿ ಕಳಕೊಂಡುಬಿಟ್ಟರೆ, ವಾಹನಗಳಲ್ಲಿ ಅಬ್ಬರಿಸಲು ಅನುಮತಿಸದ ಹಾಗೆ ಕೈಯದ್ದೋ ಕಾಲಿನದ್ದೋ ಮಹತ್ತರ ನರವೊಂದು ನಿಶ್ಶಕ್ತಗೊಂಡುಬಿಟ್ಟರೆ, ಅಡ್ಡ ದಾರಿಯಲ್ಲಿ ಸಂಪಾದಿಸಿದ ಹಣ ಕ್ರತಕ ಅನ್ನ ನಾಳದ ಪೈಪ್, ವಾಕ್ ಸ್ಟಿಕ್, ವ್ಹೀಲ್ ಚೇರ್ , ಮುಂತಾದವುಗಳನ್ನು ಕೊಡಬಹುದು ಹೊರತು , ಸಹಜ ಮನುಷ್ಯನೊಬ್ಬನಿಗೆ ದೊರಕುವ ನೆಮ್ಮದಿಯನ್ನಲ್ಲ ಎಂಬುವುದನ್ನು ಎಲ್ಲಾ ಅಪ್ರಾಮಾಣಿಕರೂ ಮರೆತು ಬಿಡುತ್ತಾರೆ.

ಪ್ರಾಮಾಣಿಕತೆ ಕಳಕೊಂಡು ಮನುಷ್ಯರು ಮಾಡುತ್ತಿರುವ ಮೋಸಗಳಿಂದ ಇವತ್ತು ಮಾರುಕಟ್ಟೆಯಲ್ಲಿ ಆಹಾರದ ರೂಪದಲ್ಲಿ ವಿಷಗಳು ಮಾರಲ್ಪಡುತ್ತವೆ, ಅವುಗಳು ನೀಡುವ ಪರಿಣಾಮಗಳಿಗೆ ಔಷಧಿ ಒದಗಿಸಲು ಮಾಲ್ ಗಳನ್ನೂ ನಾಚಿಸುವ ರೀತಿಯ ಬೃಹತ್ ಮೆಡಿಕಲ್ ಗಳು ನಗರದಾದ್ಯಂತ ತಲೆ ಎತ್ತುತ್ತಿವೆ, ಅಲ್ಲಿಯೂ ಅಪ್ರಾಮಾಣಿಕರ ದುರಾಸೆಗೆ ಜನರನ್ನು ಮದ್ದು ಡ್ರಗ್ಸ್ ಗಳಿಗೆ ದಾಸರನ್ನಾಗಿಸಲಾಗುತ್ತಿದೆ. ಮನುಷ್ಯರು ಪರಸ್ಪರ ನಂಬಿಕೆ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಅಧೋಗತಿಗೆ ಸಾಗುತ್ತಿರುವ ಅತ್ಯಂತ ಬುದ್ಧಿವಂತ ಜೀವಿಯಾದ ಮನುಷ್ಯರೆಂಬ ಮನುಷ್ಯರು, ತಮ್ಮ ತಮ್ಮ ಹ್ರದಯವನ್ನು ಪ್ರಾಮಾಣಿಕವಾಗಿ ಇಟ್ಟುಕೊಳ್ಳಲು ಅವರವರಿಗೆ ಅವರವರೇ ಸಿಸಿಟಿವಿ ಅಳವಡಿಸಿಕೊಳ್ಳದೆ ಬೇರೆ ದಾರಿಯಿಲ್ಲ. ಎಲ್ಲಾ ತಿಳಿದೂ  ಅಹಂಕಾರಿಯಾದ ಮನುಷ್ಯ ಎಲ್ಲದರ ವಿರುಧ್ದ ತರ್ಕ ಹೂಡುತ್ತಾ ಕಾಲ ಕಳೆಯಲು ಹವಣಿಸುತ್ತಾನೆ. ಮನುಷ್ಯ ಸಂಕುಲ ತನ್ನ ವ್ಯವಸ್ಥೆಗಳೆಲ್ಲ ಸಂಪೂರ್ಣ ಹದಗೆಟ್ಟು ಭೂಮಿ ಬದುಕಲು ಯೋಗ್ಯವಲ್ಲದ ಗ್ರಹವಾಗಿ ಬದಲಾಗುವವರೆಗೂ ಸುಳ್ಳಿನ ಸುತ್ತ ಕಾಲಹರಣ ಮಾಡುತ್ತಲೇ ಇರುತ್ತದೆ ಹೊರತು ಪ್ರಾಮಾಣಿಕತೆಗೆ ಮರಳುವ ವಿನಯವನ್ನು ತೋರಿಸುವುದೇ ಇಲ್ಲ.

-ಮುಸಾಫಿರ್