ಶುಕ್ರವಾರ, ಮಾರ್ಚ್ 3, 2017

ದುಡಿದು ಕಲಿತ ವಿದ್ಯಾರ್ಥಿಗೆ ಪ್ರಥಮ ರ್ಯಾಂಕ್

ಆಟೋ ಚಾಲಕನ ಪುತ್ರ ಗೋಲ್ಡ್ ಮೆಡಲಿಸ್ಟ್..!
**************************************

ಈತ ಮಡಿಕೇರಿ ಸಮೀಪದ ಮಾದಾಪುರದ ರಿಕ್ಷಾ ಚಾಲಕ ಹಸೈನಾರ್ ಕೆ.ಎ.ಅವರ ಪುತ್ರ. ಹೆಸರು ಮುಸ್ತಫಾ ಕೆ.ಎಚ್. ಮುಸ್ತಫಾರ ಏಕೈಕ ಸಹೋದರಿ ರಿಯಾನಾ ಹುಟ್ಟಿನಿಂದಲೇ ಅನಾರೋಗ್ಯ ಪೀಡಿತೆ. ಮನೆಯೊಡತಿ ತಾಯಿ ಝುಬೈದಾ ಅವರು ರಿಯಾನಾಳ ಕೇರ್ ಟೇಕರ್.

ಮುಸ್ತಫಾನಿಗೆ ಕಲಿಯುವ ಅದಮ್ಯ ಬಯಕೆ. ಆದರೆ ಆರ್ಥಿಕ ಮುಗ್ಗಟ್ಟು ಬಿಡಬೇಕಲ್ಲಾ. ತಂದೆ ರಿಕ್ಷಾ ಚಲಾಯಿಸಿ ದುಡಿದು ಮನೆಯವರನ್ನು ಸಾಕಬೇಕು. ಮನೆಯಲ್ಲಿ ಕಷ್ಟದ ಜೀವನ ಬೇರೆ. ಹೀಗಿದ್ದರೂ ಮುಸ್ತಫಾ ದೃತಿಗೆಡಲಿಲ್ಲ. ಓದುವ ಹುಚ್ಚು, ಕಲಿಯುವ ಕೆಚ್ಚು ದಿನೇದಿನೇ ಹೆಚ್ಚಿತು. ಇಂತಹ ಕಷ್ಟಕಾಲದ ಸಂದರ್ಭದಲ್ಲಿ ಮುಸ್ತಫಾನಿಗೆ ಅಭಯ ನೀಡಿದವರೇ ಅವರ ದೂರದ ಸಂಬಂಧಿ ಅಝೀಝ್ ಮಾದಾಪುರ. ಅಝೀಝ್ ಅವರು ಮಾದಾಪುರದಲ್ಲಿ ಎ.ಕೆ.ಶಾಮಿಯಾನ ಮತ್ತು ಸೌಂಡ್ ಸಿಸ್ಟಮ್ ನಡೆಸುತ್ತಿದ್ದಾರೆ. ಮುಸ್ತಫಾ 8ನೇ ತರಗತಿ ಕಲಿಯುತ್ತಿರುವಾಗಲೇ ಸಭೆ ಸಮಾರಂಭಗಳಿಗೆ ಶಾಮಿಯಾನ ಹಾಕುವ, ಸೌಂಡ್ ಸಿಸ್ಟಮ್ ಸೆಟ್ ಮಾಡುವ ಕೆಲಸವನ್ನು ಮಾಡಿ ಓದತೊಡಗಿದರು. ಹಗಲು ವಿದ್ಯಾಭ್ಯಾಸ, ಉಳಿದ ಸಮಯ ದುಡಿಮೆ. ಹೀಗೇ ಮುಸ್ತಫಾ ಡಿಗ್ರಿ ಮಾಡುವ ತನಕ ಶಾಮಿಯಾನದಲ್ಲಿ ಶ್ರಮಜೀವಿಯಾಗಿ ದುಡಿದರಲ್ಲದೆ ವಿದ್ಯಾಭ್ಯಾಸದ ಒಂದೊಂದೇ ಮಜಲನ್ನು ಏರಿದರು. ತಂದೆ ಹಸೈನಾರ್ ಹಾಗೂ ಸಂಬಂಧಿ ಅಝೀಝ್ ಮುಸ್ತಫಾರ ಬೆನ್ನಿಗೆ ನಿಂತರು.

ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಬಿ.ಎ.ಜರ್ನಲಿಸಂ ನ್ನು ಶೇಕಡಾ 76 ಅಂಕದೊಂದಿಗೆ ಪೂರ್ತಿಗೊಳಿಸಿದ ಮುಸ್ತಫಾ ನಂತರ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗೆ ಕುಳಿತರು. 2014-2016 ರಲ್ಲಿ 2 ವರ್ಷದ ಎಂ.ಎ. ಮಾಡಿದ ಮುಸ್ತಫಾ ಇಂದು ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಹೆಮ್ಮೆಯ ವಿದ್ಯಾರ್ಥಿ. ಒಂದು ರೀತಿಯಲ್ಲಿ ರಿಯಲ್ ಹೀರೋ. ಯಾರೂ ಮಾಡದ ಸಾಧನೆಯನ್ನು ಮಾಡಿದ ಬಡಕುಟುಂಬದ ಹಳ್ಳಿ ಹುಡುಗ. ಮುಸ್ತಫಾ ಕನ್ನಡ ಎಂ.ಎ.ಯಲ್ಲಿ ಮಂಗಳೂರು ವಿ.ವಿ.ಗೆ ಪ್ರಥಮ ರ್ಯಾಂಕ್ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಹಲವು ವರ್ಷಗಳ ಶ್ರಮಕ್ಕೆ ತಕ್ಕ ಫಲಿತಾಂಶ ಸಿಕ್ಕಿದ ಖುಷಿ ಆತನದ್ದು. ಇಂದು (03/03/2017) ಮಂಗಳೂರು ವಿ.ವಿ.ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ರ್ಯಾಂಕ್ ವಿಜೇತ ಮುಸ್ತಫಾರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಇದೊಂದು ಅಭೂತಪೂರ್ವ ಸನ್ನಿವೇಶ.

ಮುಸ್ತಫಾ ಪ್ರಸ್ತುತ ಮೂಡಬಿದ್ರಿ ಆಳ್ವಾಸ್ ನಲ್ಲಿ ಕನ್ನಡ ಉಪನ್ಯಾಸಕರು. ಜತೆಗೆ ಬರೆಯುವ ಗೀಳಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯುವ ಬರಹಗಾರರ ಕಮ್ಮಟದಲ್ಲಿ ಮುಸ್ತಫಾ ಬರೆದ "ಕಂಡದ್ದು-ಕಾಡಿದ್ದು" ಪುಸ್ತಕ ಬಿಡುಗಡೆ ಆಗಿದೆ. ಶಾರ್ಜಾ ಕನ್ನಡ ಸಂಘದ ಕಥಾ ಸ್ಪರ್ಧೆಯಲ್ಲಿ ಮುಸ್ತಫಾರ "ನಿಮ್ಮವಳಲ್ಲ" ಕಥೆ ದ್ವಿತೀಯ ಬಹುಮಾನ ಪಡೆದಿದೆ. ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯ ಬೇಂದ್ರೆ ಕವನ ಸ್ಪರ್ಧೆ, ಅನಕೃ ಕಥಾ ಸ್ಪರ್ಧೆಗೆ ಮುಸ್ತಫಾ ಅವರ ಕವನ ಮತ್ತು ಕಥೆ ಎರಡೂ ಆಯ್ಕೆಯಾಗಿವೆ. ಮುಸ್ತಫಾ ಆಳ್ವಾಸ್ ನ ಉಪನ್ಯಾಸಕ ವೃತ್ತಿಯನ್ನು ಬಿಡುವುದರಲ್ಲಿದ್ದಾರೆ. ಕಾರಣ ಇಷ್ಟೆ. ಮುಸ್ತಫಾ ಮಂಗಳೂರು ವಿ.ವಿ.ಯಲ್ಲಿ ಪಿ.ಎಚ್.ಡಿ. ಮಾಡಲು ಹೊರಟಿದ್ದಾರೆ. ಸಾಹಿತಿ ಕಿ.ರಂ.ನಾಗರಾಜರಂತಹವರ "ಮೌಖಿಕ ಪರಂಪರೆ" ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಮಾಡಬೇಕೆಂಬ ಹಂಬಲ ಮುಸ್ತಫಾ ಅವರದ್ದು. 8ನೇ ತರಗತಿಯಿಂದ ಪ್ರಾರಂಭವಾದ ಅವರ ಶಾಮಿಯಾನ ಹಾಕುವ ಕೂಲಿ ಕೆಲಸ ಕನ್ನಡ ಎಂ.ಎ. ಮುಗಿಸುವ ತನಕ ಮುಂದುವರಿದಿದೆ. ಬಹಳ ಕಷ್ಟದಲ್ಲಿ ಕಲಿತು ನಾಡಿಗೆ ಹೆಸರು ತಂದ ಮುಸ್ತಫಾ ಅವರಿಗೆ ನಿಮ್ಮದೊಂದು ಶುಭಾಶಯವಿರಲಿ. ಅವರ ಮೊಬೈಲ್ ಸಂಖ್ಯೆ: +91 9590428211. ನಮ್ಮಲ್ಲಿ ಎಲ್ಲಾ ಸೌಲಭ್ಯಗಳಿದ್ದೂ ಕಲಿಯದೇ ಪುಂಡರಾಗುವ ವಿದ್ಯಾರ್ಥಿಗಳಿಗೆ ಮುಸ್ತಫಾರಂತಹ ಹುಡುಗರು ಆದರ್ಶಪ್ರಾಯರು. ಮುಸ್ತಫಾ ಕುಟುಂಬದ ಮುಂದಿನ ಜೀವನ ಹಸನಾಗಲೆಂದು ಹಾರೈಸುವ.

-ರಶೀದ್ ವಿಟ್ಲ.