ಅಲ್ಲಿ ನೋಡಿದರೆ ಶರ್ಮಿಳಾ ಇರೋಮಳು ಹುಚ್ಚಿಯಂತೆ 16 ವರ್ಷ ತನ್ನವರ ಮೇಲಿನ ದೌರ್ಜನ್ಯ ತಡೆಯಲು ಉಪವಾಸ ಸತ್ಯಾಗ್ರಹ ಮಾಡಿ ವಿಶ್ವವೇ ಬೆರಗಾಗುವಂತೆ ಮಾಡಿದಳು.ಯಾವ ಕ್ರೀಡಾಪಟುವೂ ಯಾವ ಸಾಹಿತಿಯೂ ಯಾವ ವಿಜ್ಙಾನಿಯೂ ಯಾವ ಹೋರಾಟಗಾರನ ಸಾಧನೆಗೂ ಕಡಿಮೆ ಇಲ್ಲದ ಅದ್ಬುತ ಶಕ್ತಿ ಅದು. ಅಂತಹ ಹೆಣ್ಣು ಮಗಳು ಚುನಾವಣೆಗೆ ಸ್ಪರ್ಧಿಸಿದರೆ ಭಾರತದ ಸರ್ವಶ್ರೇಷ್ಠ ಮತದಾರ ಪ್ರಭಗಳಾದ ನಾವು ಆಕೆಗೆ ನೀಡಿದ್ದು 90 ( Drinks ಅಳತೆಯ ಲೆಕ್ಕದಲ್ಲಿ ಸರಿಯಾಗಿ Ninety ) ಅದರಲ್ಲಿ ಬಹಳಷ್ಟು ಯಾರೋ ಕುಡಿದು ತಪ್ಪಾಗಿ ಒತ್ತಿಬಿಟ್ಟಿರಬೇಕು.
ಇಲ್ಲಿ ನೋಡಿದರೆ ನಮ್ಮದೇ ಪುಂಡ ಹುಡುಗರು ಯೋಗೇಶ್ ಮಾಸ್ಟರ್ ಅವರ ಮೇಲೆ ತೀರಾ ಅಮಾನವೀಯವಾಗಿ ಕಪ್ಪುಮಸಿ ಎಸೆದು ತಮ್ಮ ಪೌರುಷ ಮೆರೆದಿದ್ದಾರೆ.ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಅವರೂ ನಮ್ಮವರೇ ಅಲ್ಲವೇ.ಒಂದಷ್ಟು ಪ್ರೀತಿಯಿಂದ ಮಾತನಾಡಬಹುದಿತ್ತು. ಬಂಧನ ಜಾಮೀನು ಪ್ರತಿಭಟನೆ ಎಲ್ಲವೂ National waste ನೆನಪಿರಲಿ ದೇಶಪ್ರೇಮಿಗಳೇ.
ನಮ್ಮಲ್ಲಿ ನೋಡಿದರೆ 70 ರ ಆಸುಪಾಸಿನ ಅಪಾರ ಜಾತಿ ಅಭಿಮಾನಿಗಳನ್ನು ಹೊಂದಿರುವ ಮೊಮ್ಮಕ್ಕಳನ್ನೂ ಪಡೆದಿರುವ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಬಹಳ ಅನಾಗರಿಕವಾಗಿ ತಮ್ಮ ವಯಸ್ಸು ಜವಾಬ್ದಾರಿಯನ್ನು ಮರೆತು ಬೀದಿ ಬದಿಯ ಪ್ರಾಣಿಗಳ ಹಾಗೇ ಸಾರ್ವಜನಿಕವಾಗಿ ಕಚ್ಚಾಡುತ್ತಿದ್ದಾರೆ. ಕರ್ನಾಟಕ ಇವರ ಅಪ್ಪನ ಆಸ್ತಿ ಎಂದು ತಿಳಿದರೆ ಅಥವಾ ಇಲ್ಲಿನ 7 ಕೋಟಿ ಜನ ಮೂರ್ಖರು ಎಂದು ಭಾವಿಸಿದರೆ ಅಥವಾ ನಿಜವಾಗಲೂ ನಾವು ಮೂರ್ಖರೇ ಇರಬಹುದೇ ?
ಅಲ್ಲಿ ನೋಡಿದರೆ ನಮ್ಮ ಪ್ರಧಾನಿಯವರು ಎರಡು ರಾಜ್ಯಗಳ ಚುನಾವಣೆ ಗೆದ್ದ ಮಾತ್ರಕ್ಕೆ ಹಿಂದಿನ ಕಾಲದ ರಾಜರುಗಳಂತೆ ದೆಹಲಿಯ ಬೀದಿಗಳಲ್ಲಿ ತಮ್ಮದೇ ಇನ್ನೊಂದು ವರ್ಗದ ಮತದಾರರನ್ನು ಅಣಕಿಸುವಂತೆ ವಿಜಯೋತ್ಸವ ಆಚರಿಸುತ್ತಾರೆ. ಮಾಡಲು ಅದಕ್ಕಿಂತ ಗಂಭೀರ ಕೆಲಸಗಳಿವೆ. ಸಂಭ್ರಮ ಪಕ್ಷದ ಕಾರ್ಯಕರ್ತರ ಆ ಕ್ಷಣದ ಒಂದು ಝಲಕ್ ಅಷ್ಟೆ. " ಸಬ್ ಕಾ ಸಾಥ್ ಸಬ್ ಕಾ ವಿಕಾಸ್ " ಘೋಷಣೆಯಾಗದೆ ನಡವಳಿಕೆಯಾಗಬೇಕು.
ಇನ್ನು ಸಮಾಜವಾದಿ ಪಕ್ಷ ಅಧಿಕಾರಕ್ಕಾಗಿ ಅಪ್ಪ ಮಕ್ಕಳೇ ಸಾರ್ವಜನಿಕವಾಗಿ ಕಿತ್ತಾಡಿ ಮಾನವೀಯತೆಗೇ ಕಳಂಕ ತಂದರು. ಬಹುಜನ ಸಮಾಜ ಪಕ್ಷ ಪ್ರತಿ ಚುನಾವಣೆಗೂ ಇಸ್ಪೀಟು ಆಟದಂತೆ ಜಾತಿ ಧರ್ಮದ ಕಾರ್ಡ್ ಉಪಯೋಗಿಸುತ್ತದೆ.
ಕಾಂಗ್ರೇಸ್ ಪಕ್ಷವಂತೂ ಓಟ್ ಬ್ಯಾಂಕ್ ರಾಜಕೀಯದಲ್ಲಿ ಮುಳುಗಿ ಈಗ ಅದು ವಿಫಲವಾಗುತ್ತಿರುವುದರಿಂದ ದಿಕ್ಲು ತಪ್ಪಿದಂತಾಗಿ ಅಸ್ತಿತ್ವ ಉಳಿಸಿಕೊಳ್ಳಲೂ ಪರದಾಡುತ್ತಿದೆ.
ಪಕ್ಜದ ತಮಿಳುನಾಡಿನಲ್ಲಿ ನಡೆದ ಅಸಹ್ಯ ರಾಜಕೀಯ ಇನ್ನೂ ಮರೆಯಲಾಗುತ್ತಿಲ್ಲ. ತೆಲಂಗಾಣದ ಮುಖ್ಯಮಂತ್ರಿ ಸರ್ವಶಕ್ತನೆಂದು ಹೇಳಲಾದ ವಿಶ್ವದ ಶ್ರೀಮಂತ ದೇವರು ವೆಂಕಟೇಶ್ವರನಿಗೂ ಸರ್ಕಾರದ ಖಜಾನೆಯಿಂದ 4.5 ಕೋಟಿ ಬೆಲೆಯ ವಜ್ರಖಚಿತ ಕಿರೀಟ ದಾನ ಮಾಡಿ ಮುಠ್ಢಾಳತನ ಪ್ರದರ್ಶಿಸಿದ.
ಇನ್ನು ಎಂತಹ ಸಂಧರ್ಭದಲ್ಲಿಯೂ ಸತ್ಯ ಮತ್ತು ವಾಸ್ತವದ ಹುಡುಕಾಟ ನಡೆಸಿ ವಿಶಾಲ ದೃಷ್ಟಿಕೋನದ ದೂರದೃಷ್ಟಿಯ ನಿಲುವುಗಳನ್ನು ತಳೆದು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕಾದ ಮಾಧ್ಯಮಗಳು ಜನಪ್ರಿಯತೆಯ ಚುಂಗು ಹಿಡಿದು ಓಡುವ ಕುದುರೆಯ ಬಾಲದ ಹಿಂದೆ ಓಡುತ್ತಿವೆ.
ಆದ್ದರಿಂದ ಕನಿಷ್ಠ ಜಾಗೃತ ಮನಸ್ಥಿತಿಯವರು ಈ ರೀತಿಯ ಅಸಹನೆ ಅಜಾಗರೂಕತೆಗೆ ಬಲಿಯಾಗದೆ ತಾಳ್ಮೆ ಸಹನೆಯಿಂದ ಪ್ರತಿಕ್ರಿಯಿಸಿ ಉಡಾಫೆಗಿಂತ ಕ್ರಿಯಾತ್ಮಕತೆಗೆ ಹೆಚ್ಚಿನ ಮಹತ್ವ ನೀಡುವಂತಾಗಲಿ ಎಂದು ಆಶಿಸುತ್ತಾ.....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.