ಗುರುವಾರ, ಮಾರ್ಚ್ 9, 2017

ಗಾಯಕಿ ಸುಹಾನಾ

ಗಾಯಕಿ ಸುಹಾನಾಳ ಹಿಂದೆ ಬಿದ್ದಿರುವ ಕೆಲ ಮುಸ್ಲಿಮರ ಗಮನಕ್ಕೆ..

           ಸುಹಾನಾ ಕನ್ನಡದ  ಸರಿಗಮಪ ವೇದಿಕೆಯಲ್ಲಿ ಹಾಡೋದು ಮುಸ್ಲಿಂ ಸಮುದಾಯದ ಸಮಸ್ಯೆ ಅಲ್ಲವೇ ಅಲ್ಲ. ಆಕೆ  ಸಾರ್ವಜನಿಕ ವೇದಿಕೆಯಲ್ಲಿ ನಿಂತು ಹಾಡಿದರೆ ಆಕಾಶದಿಂದ ಸೂರ್ಯ ಭೂಮಿಗೆ ಉದುರಿ ಬಿದ್ದು ಈ ದೇಶದ ಮುಸ್ಲಿಮರೆಲ್ಲಾ ನಾಶ ಆಗೋದು ಇಲ್ಲ. ನಿಮಗೆ ಸಮುದಾಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲೇಬೇಕು ಅನ್ನೋ ಹಠ ಇದ್ದರೆ ಸಮುದಾಯದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿವೆ.
        ಈ ದೇಶದ ಹದಿನೇಳು ಕೋಟಿಗೂ ಅಧಿಕ ಮುಸ್ಲಿರಲ್ಲಿ ಶೇಕಡಾ 75ರಷ್ಟು ಮಂದಿ ಹೀನಾಯವಾದ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಸಂಕಷ್ಟ ಇದೆ. ನಗರ ಪ್ರದೇಶದ ಸ್ಲಂಗಳಲ್ಲಿ ವಾಸ ಮಾಡುತ್ತಿರೋ ಜನರಲ್ಲಿ ಹೆಚ್ಚಿನವರು ಮುಸ್ಲಿಮರು. ಈ ದೇಶದ ಶೇಕಡಾ 42ರಷ್ಟು ಮುಸಲ್ಮಾನರು ಅವಿದ್ಯಾವಂತರು. ಸ್ವಾತಂತ್ರ್ಯ ನಂತರ  ರಾಜಕೀಯವಾಗಿ ಗುಲಾಮರು, ಕೇವಲ ವೋಟ್ ‍ಬ್ಯಾಂಕ್.. ರಾಜಕೀಯ ಕ್ಷೇತ್ರದಲ್ಲಿ ಪೋಸ್ಟರ್ ಅಂಟಿಸೋಕೆ, ಕರಪತ್ರ ವಿತರಿಸೋಕೆ, ನಾಯಕನ ಮಾತಿಗೆ ಸಿಳ್ಳೆ ಹೊಡೆಯೋಕೆ, ಕೊನೆಗೆ ಬಿರಿಯಾನಿಯನ್ನು ತಿಂದು ಮತ ಹಾಕೋಕೆ ಮಾತ್ರ ಸೀಮಿತ. ಅಧಿಕಾರಿ ವರ್ಗದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಇರೋದು ಶೇಕಡ 2ರಷ್ಟು ಮಾತ್ರ. ಆದರೆ ಜೈಲುಗಳಲ್ಲಿ ಮಾತ್ರ ಮುಸ್ಲಿಮರೇ ಬಹುಸಂಖ್ಯಾತರು. ಯಾವುದೇ ರಂಗ ನೋಡಿದರೂ ಅಲ್ಲಿ ಮುಸಲ್ಮಾನರು ತೀರ ಹಿಂದುಳಿದ ಸಮುದಾಯ. ಇದೆಲ್ಲದರ ಮಧ್ಯೆ ಬಡ ಮುಸ್ಲಿಮರಿಗೆ ಸೇರಬೇಕಾದ ವಕ್ಫ್ ಆಸ್ತಿಗಳನ್ನ ನಮ್ಮದೇ ಸಮುದಾಯದ ಕೆಲ ತಿಮಿಂಗಿಲಗಳು ಹಾಗೂ ಬಲಾಢ್ಯರು ತಿಂದು ತೇಗುತ್ತಿದ್ದಾರೆ. ಸಮುದಾಯದ ಬಡತನ ನಿವಾರಿಸಬೇಕಾಗಿದ್ದ ಲಕ್ಷಲಕ್ಷ ಎಕರೆ ವಕ್ಫ್ ಆಸ್ತಿ ಯಾರ್ಯಾರದೋ ಕೈಯಲ್ಲಿವೆ.

      ಎಲ್ಲಕ್ಕಿಂತ ಅಪಾಯಕಾರಿ ಅಂದರೆ ಈ ದೇಶದ ಮುಸ್ಲಿಮರಿಗೆ ಅಸ್ಮಿತೆಯ ಭೂತ ಬೆನ್ನು ಬಿದ್ದಿದೆ. ದಿನಾಲೂ ನಾವು ಕೂಡ ಭಾರತೀಯರು, ದೇಶಪ್ರೇಮಿಗಳು ಎಂದು ಬೊಬ್ಬೆ ಹೊಡೆದು ಹೇಳಬೇಕಾದ ದುಸ್ಥಿತಿ. ಮುಸಲ್ಮಾನರ ದೇಶಪ್ರೇಮದ ಸರ್ಟಿಫಿಕೇಟ್ ಆಗಿಂದ್ದಾಗೆ ಪರೀಕ್ಷೆಗೆ ಒಳಪಡುತ್ತಿರುತ್ತೆ. ಮುಸ್ಲಿಂ ನಾಮಧಾರಿಯೊಬ್ಬನ ಉಗ್ರ ಕೃತ್ಯವನ್ನ ಇಡೀ ಸಮುದಾಯಕ್ಕೆ ತಾಳೆ ಹಾಕಲಾಗುತ್ತಿದೆ. ಇದೆಲ್ಲದರ ವಿರುದ್ಧ ಧ್ವನಿ ಎತ್ತಬೇಕಾದವರು ಸುಹಾನಾಳ ಹಿಂದೆ ಬಿದ್ದಿರೋದು ಸಮುದಾಯದ ನಿಜವಾದ ದುರಂತ. ಕೆಲವೇ ದಿನಗಲ್ಲಿ ರಾಜ್ಯ ಸರ್ಕಾರ ಬಜೆಟ್ ಮಂಡಿಸಲಿದೆ. ಸುಹಾನಾಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದಷ್ಟು, ಬಜೆಟ್‍ನಲ್ಲಿ ಸರ್ಕಾರ ಮುಸ್ಲಿಮರಿಗೆ ಏನೆಲ್ಲಾ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದಿದ್ದರೆ ಸಮುದಾಯಕ್ಕೆ ಏನಾದರೂ ಲಾಭ ಆಗುತ್ತಿತ್ತೇನೋ?
    
     ಸುಹಾನ ಹಾಡೋದು ಹರಾಂ ಅಂತ ಹೇಳೋ ನೀವುಗಳು ಮಾಡುತ್ತಿರೋದೆಲ್ಲ ಏನು ಹಲಾಲ? ನೀವು ಸಂಗೀತಾ ಕೇಳೋದೇ ಇಲ್ವ? ಸಿನಿಮಾ ನೋಡೋದೇ ಇಲ್ವ? ಬಡ್ಡಿ ವ್ಯವಹಾರ ಮಾಡ್ತಿಲ್ವ? ಮದ್ಯಪಾನ ಮಾಡೋ ಮುಸ್ಲಿಮರು ಎಷ್ಟಿಲ್ಲ? ಬೆಟ್ಟಿಂಗ್ ದಂಧೆ, ಗಾಂಜಾ ಮಾರಾಟದಂಥ ಅಕ್ರಮ ಕೆಲಸಗಳಲ್ಲೂ ಮುಸ್ಲಿಮರು ಭಾಗಿಯಾಗ್ತಿದ್ದಾರೆ.. ಆದರೆ ಇವೆಲ್ಲವನ್ನೂ ಬಿಟ್ಟು ಕೇವಲ ಸುಹಾನಾಳಿಂದ ಮಾತ್ರ ಧರ್ಮಕ್ಕೆ ಅಪಚಾರವಾಯ್ತು ಅಂತ ಬೊಬ್ಬೆ  ಹೊಡೆಯೋದೇ ಧರ್ಮಕ್ಕೆ ಮಾಡುವ ನಿಜವಾದ ಅಪಚಾರ.
   
      ಸಂಗೀತ ಕ್ಷೇತ್ರ ಮುಸ್ಲಿಮರಿಗೆ ಹೊಸದಲ್ಲ.. ಬಿಸ್ಮಿಲ್ಲಾ ಖಾನ್, ಜಾಕೀರ್ ಹುಸೇನ್, ಮಹಮ್ಮದ್ ರಫಿ, ನುಸ್ರತ್ ಫತ್-ಅಲಿ-ಖಾನ್, ಎಆರ್ ರೆಹಮಾನ್, ಯೂಸುಫ್ ಇಸ್ಲಾಂ ಮುಂತಾದ ಸಂಗೀತ ದಿಗ್ಗಜರು ನಮ್ಮ ಸಮುದಾಯದವರು ಎಂದು ಹೆಮ್ಮೆ ಪಡುವ ನಾವು, ಸುಹಾನಾಳನ್ನು ವಿರೋಧಿಸೋದರಲ್ಲಿ ನ್ಯಾಯ ಇದೆಯಾ? ಶಾರುಕ್, ಸಲ್ಮಾನ್, ಆಮೀರ್, ಸೈಫ್ ಅಲಿ ಖಾನ್ ಪರವಾಗಿರುವ ನಾವು, ನಮ್ಮದೇ ಮಲೆನಾಡಿನ ಹಳ್ಳಿಯಿಂದ ಬಂದಿರೋ ಹುಡುಗಿಯನ್ನು ವಿರೋಧಿಸಿದರೆ ಸ್ವರ್ಗದ ಟಿಕೆಟ್ ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುತ್ತೇನೋ? ಸರಿಯೋ ತಪ್ಪೊ, ಬುರ್ಖಾ ಧರಿಸಿನೇ ಮುಸ್ಲಿಂ ಮಹಿಳೆಯರು ಥಿಯೇಟರ್‍ಗೂ ಬರುತ್ತಿರೋ ಕಾಲ ಇದು. ಸುಹಾನಾ ಒಬ್ಬಳನ್ನ ವಿರೋಧಿಸಿ ಏನು ಪ್ರಯೋಜನ ಹೇಳಿ?

     ಸುಹಾನಾ ಬುರ್ಖಾ  ಧರಿಸಿ ಹಾಡಿದ್ದು ತಪ್ಪು ಅಂತ ಕೊಂಕು ತೆಗೆಯುತ್ತಿರುವ ಇದೇ ಜನ ಆಕೆ ಬುರ್ಖಾ ಧರಿಸದೇ ಹಾಡುತ್ತಿದ್ದರೆ ಅದಕ್ಕೂ ಆಕ್ಷೇಪ ತೆಗೆಯುತ್ತಿದ್ದರು. ಆಕೆಯ ಜೀವನ ಆಕೆಯ ಇಷ್ಟ. ಆಕೆಯ ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ಮಾಡಬಾರದು. ಕೆಲವು ಜನರ ಟೀಕೆಗಳೇ ಮತ್ತಷ್ಟು ಎತ್ತರಕ್ಕೆ ಏರಲು ಆಕೆಗೆ  ಇಂಧನ ಒದಗಿಸಿದೆ. ವಿರೋಧ ಹೆಚ್ಚಾದಂತೆ ಆಕೆಯ ಪ್ರಸಿದ್ಧಿ ಹೆಚ್ಚಾಗುತ್ತಿದೆ. TRP ಲೋಕದಲ್ಲಿ ಟಿವಿ ವಾಹಿನಿಯ ಉದ್ದೇಶನೂ ಈಡೇರುತ್ತಿದೆ. ಕೊಳಚೆ ಗುಂಡಿಯಲ್ಲಿ ಬಿದ್ದು ಮಲ ಹೊರುವವರು ಸತ್ತ ಬಗ್ಗೆ ಚರ್ಚೆ ಮಾಡಲು ಸಮಯ ಇಲ್ಲದ 24*7 ಮೀಡಿಯಾಗಳು ಸುಹಾನ ಬಗ್ಗೆ ಇಡೀ ದಿನ ಚರ್ಚೆ ಮಾಡುತ್ತಿವೆ.  ಹುತಾತ್ಮ ಯೋಧನ ಮಗಳನ್ನು ಅವಮಾನ ಮಾಡಿದವರೆಲ್ಲಾ  ಮುಸ್ಲಿಮರಿಗೆ ಪಾಠ ಮಾಡುತ್ತಿದ್ದಾರೆ. ಇದೆಲ್ಲ ಬೇಕಿತ್ತಾ?

ಕೊನೆಯದಾಗಿ ಒಂದು ಪ್ರಶ್ನೆ... ಸದ್ಯ ಸುಹಾನಾಳನ್ನು ಎತ್ತಿ ಮುದ್ದಾಡಿಸುತ್ತಿರೋ ಇದೇ ಮಂದಿ(ಮಾಧ್ಯಮ ಸೇರಿದಂತೆ) ಸಾಗರದ ಕಾಲೇಜಿನಲ್ಲಿ ಬುರ್ಖಾ ಧರಿಸಿದ ಕಾರಣಕ್ಕೆ ಸುಹಾನಳಿಗೆ ಅಡ್ಡಿ ಆತಂಕ ಎದುರಾಗಿದ್ದಿದ್ದರೆ ಬೆಂಬಲ ನೀಡುತ್ತಿದ್ದರಾ?

  # ಶಫೀಕ್ ಅಬ್ಬಾಸ್