ಭಾನುವಾರ, ಏಪ್ರಿಲ್ 16, 2017

ಜಾತಿ ಮತ್ತು ಕೋಮು ಭಾವನೆ

ಜಾತಿ ಮತ್ತು ಕೋಮು ಭಾವನೆ: Ramjan Darga
***************************************
ಜಾತಿ ಮತ್ತು ಕೋಮು ಭಾವನೆಗಳು ಭಾರತೀಯ ಮನಸ್ಸುಗಳನ್ನು ಆಳವಾಗಿ ಕಲುಷಿತಗೊಳಿಸಿವೆ.

ಶೂದ್ರರು ಮತ್ತು ಸವರ್ಣೀಯರು ಸಹಜ ಪ್ರವೃತ್ತಿ ಎಂಬಂತೆ ಜಾತಿಯತೆಯನ್ನು ಹಿಂದುಧರ್ಮದ ಹೆಸರಿನಲ್ಲಿ ರಕ್ತಗತಗೊಳಿಸಿಕೊಂಡಿರುವುದನ್ನು ನೋಡಿದರೆ ಮನುವಾದಿಗಳು ಕಳೆದ ಸಾವಿರಾರು ವರ್ಷಗಳಿಂದ ಎಂಥ ಕೀಳು ವ್ಯವಸ್ಥೆಯನ್ನು ಜನಮನದಲ್ಲಿ ರೂಢಿಸಿದ್ದಾರೆ ಎಂಬುದರ ಅರಿವಾಗದೆ ಇರದು. ಐರೋಪ್ಯ ರಾಷ್ಟ್ರಗಳಲ್ಲಿ ಕ್ರೈಸ್ತರು ಸೃಷ್ಟಿಸಿದ ನರಕಕ್ಕಿಂತಲೂ ಅಸಹ್ಯವಾದ ನರಕವನ್ನು ಭಾರತದಲ್ಲಿ ಬ್ರಾಹ್ಮಣರು ಸೃಷ್ಟಿಸಿದ್ದಾರೆ ಎಂದು ಕಾರ್ಲ್ ಮಾರ್ಕ್ಸ್ ಅವರು 1858ರಲ್ಲಿ ಬರೆದ 'ದ ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್' ಗ್ರಂಥದಲ್ಲಿ ತಿಳಿಸಿದ್ದಾರೆ.

ಜಾತಿ ಎಂಬುದು ಅಸಹ್ಯವಾದ ನರಕವಾಗಿದೆ. ಜಾತೀಯತೆಯು ಸವರ್ಣೀಯರಾದ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರ ಮಧ್ಯೆ ಮಾತ್ರ ಇದ್ದಿದ್ದರೆ ಜಾತಿವ್ಯವಸ್ಥೆಯನ್ನು ನಾಶ ಮಾಡುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಅದು ಬಹುಸಂಖ್ಯಾತರಾದ ಶೂದ್ರರಲ್ಲಿ ಹಾಸುಹೊಕ್ಕಾಗಿದೆ. ಶೇಕಡಾ ಹತ್ತರಷ್ಟಿರುವ ಸವರ್ಣೀಯರಿಗೆ ಜಾತಿಯತೆಯಿಂದ ಲಾಭವಾಗಿರುವ ಕಾರಣ ಅವರು ಜಾತಿವ್ಯವಸ್ಥೆಯನ್ನು ಬಿಟ್ಟು ಇರಲಾರರು. ಶೂದ್ರರ ಮತ್ತು ಪಂಚಮರ ಪ್ರತಿಯೊಂದು ಹೋರಾಟ ಅವರಿಗೆ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರದಂತೆ ತೋರುತ್ತದೆ. ಮಾನವೀಯತೆಗಾಗಿ ನಡೆಯುವ ಪ್ರತಿಯೊಂದು ಹೋರಾಟ ಸವರ್ಣೀಯರ ಶೋಷಣೆಯ ವ್ಯವಸ್ಥೆಯನ್ನು ಸಡಿಲುಗೊಳಿಸುವುದೇ ಆಗಿರುತ್ತದೆ. ಅಂಥ ಹೋರಾಟಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಅವರು ಬೌದ್ಧಿಕವಾಗಿ ಸದಾ ತಲ್ಲೀನರಾಗಿರುತ್ತಾರೆ. ಅವರ ಬುದ್ಧಿಯು ರಿಮೋಟ ಕಂಟ್ರೋಲ್ ಹಾಗೆ ಕೆಲಸ ಮಾಡುತ್ತಿರುತ್ತದೆ. ಯಾವ ಗಲಭೆಗಳಲ್ಲೂ ಅವರು ಕಂಡು ಬರುವುದಿಲ್ಲ. ಆದರೆ ಎಲ್ಲವನ್ನು ತಮ್ಮ ಸ್ವಾರ್ಥಸಾಧನೆಗೆ ಪೂರಕವಾಗಿ ನಿಯಂತ್ರಿಸುತ್ತಲೇ ಇರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ 'ಕೊಡಲಿಯ ಕಾವು ಕುಲಕ್ಕೆ ಮೂಲ' ಎಂಬಂತೆ ಶೂದ್ರರನ್ನೇ ನಾಯಕರನ್ನಾಗಿ ಮಾಡಿಕೊಂಡು ಶೂದ್ರರು ಶಕ್ತಿಗುಂದುವಂತೆ ಮಾಡುತ್ತಾರೆ. ಶೂದ್ರರು ಮತ್ತ ಪಂಚಮರ ಮಧ್ಯೆ ಸಂಘರ್ಷಗಳಾಗುವಂತೆ ನೋಡಿಕೊಳ್ಳುತ್ತಾರೆ. ಅಲ್ಪಸಂಖ್ಯಾತರ ಮೇಲೆ ದಾಳಿಯಾಗುವ ಸಂದರ್ಭದಲ್ಲಿ ಶೂದ್ರರನ್ನೂ ಪಂಚಮರನ್ನೂ ಒಂದುಗೂಡಿಸುವ ಚಾಕಚಕ್ಯತೆಯನ್ನೂ ಪ್ರದಶರ್ಿಸುತ್ತಾರೆ. ನಿಜವಾದ ಅರ್ಥದಲ್ಲಿ ಹಿಂದು ಎಂಬುದು ಸವರ್ಣೀಯರ ಹಿತಕಾಪಾಡಲು ಬಳಸುವ ಶಬ್ದವಾಗಿದೆ. ಅದು ಸನಾತನ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಇಲ್ಲ. ಆದರೆ ಸವರ್ಣೀಯ ಬುದ್ಧಿಜೀವಿಗಳ ಕುತಂತ್ರದಿಂದಾಗಿ ಜನಮನದಲಿ ತುಂಬಿಕೊಂಡಿದೆ. ಹಬ್ಬಹರಿದಿನಗಳು, ಜಾತ್ರೆಗಳು, ದೇವಸ್ಥಾನಗಳು, ಪುರಾಣ, ಕಲೆ, ಸಾಹಿತ್ಯ, ಪಂಚಾಂಗ, ಮೂಢನಂಬಿಕೆ, ಹೀಗೆ ಎಲ್ಲ ಕಡೆಗಳಲ್ಲಿ ಈ ಹಿಂದು ಶಬ್ದದ ಮೂಲಕ ಸವರ್ಣೀಯರು ಶೂದ್ರರನ್ನು ಮತ್ತು ಪಂಚಮರನ್ನೂ ಆಳುವಲ್ಲಿ ಸಾವಿರಾರು ವರ್ಷಗಳಿಂದ ಯಶಸ್ಸನ್ನು ಸಾಧಿಸುತ್ತಲೇ ಬಂದಿದ್ದಾರೆ. ಹಿಂದುಧರ್ಮಧ ಚೌಕಟ್ಟಿನೊಳಗೆ ಸಾವಿರಾರು ಜಾತಿ ಮತ್ತು ಉಪಜಾತಿಗಳಿಂದ ಕೂಡಿರುವ ಶ್ರೇಣೀಕೃತ ಸಮಾಜವನ್ನು ಬಂಧಿಸಿಟ್ಟಿದ್ದಾರೆ. ಜಾತಿವಂತರು ತಾವು ಇತರ ಜಾತಿಗಳವರಿಗಿಂತ ಶ್ರೇಷ್ಠರು ಅಥವಾ ಕನಿಷ್ಠರು ಎಂಬುದನ್ನು ಈ ಮೊದಲೇ ಸಾಂಪ್ರದಾಯಕವಾಗಿ ನಿರ್ಧರಿಸಿದ ಪ್ರಕಾರ ಸ್ವೀಕರಿಸಿಬಿಟ್ಟಿದ್ದಾರೆ. ಆ ಜಾತಿಯಲ್ಲಿ ಹುಟ್ಟಿದ ಮೂರ್ಖರು ಕೂಡ ಪ್ರಮುಖರೇ ಆಗಿರುತ್ತಾರೆ.

ಧರ್ಮಸ್ಯ ಬ್ರಾಹ್ಮಣೋ ಮೂಲಂ/
ಬ್ರಾಹ್ಮಣಃ ಸಂಭವೇನಮೈವ ದೇವಾನುನಾಮಪಿ ದೈವತಂ/
ಪ್ರಮಾಣ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕರಣಂ/
-ಮನುಸ್ಮೃತಿ (11.83, 84)
(ಬ್ರಾಹ್ಮಣನೇ ಧರ್ಮದ ಮೂಲ. ತನ್ನ ಹುಟ್ಟಿನಿಂದಲೇ ಅವನು ದೇವತೆಗಳಿಗೂ ದೇವರಾಗಿದ್ದಾನೆ. ಅವನ ಮಾತು ಜನರಿಗೆ ಪ್ರಮಾಣೀಭೂತವಾದುದು.)

ಮನು ಇಷ್ಟೊಂದು ನಾಚಿಕೆಗೆಟ್ಟು ಹೇಳಬೇಕಾದರೆ. ಈ ದೇಶದ ಶೋಷಿತವರ್ಗವನ್ನು ಯಾವ ಹೀನಾಯ ಸ್ಥಿತಿಗೆ ಇಳಿಸಿರಬಹುದು ಎಂಬುದರ ಅರಿವಾಗದೆ ಇರದು. ಹೀಗೆ ಜಾತಿ ಮತ್ತು ಹುಟ್ಟಿಗೆ ತಳಕು ಹಾಕುವುದರ ಮೂಲಕ ಕೆಳಜಾತಿಗಳ ಜನರಿಗೆ ಅಕ್ಷರದಿಂದ ವಂಚಿತರನ್ನಾಗಿ ಮಾಡುವುದರ ಮೂಲಕ ಅವರ ಮೇಲೆ ಬೌದ್ಧಿಕ ಗುಲಾಮಗಿರಿಯನ್ನು ಹೇರಿದರು. ಬಹುಸಂಖ್ಯಾತ ಶೂದ್ರರು ಒಂದಾಗದಂತೆ ನೋಡಿಕೊಳ್ಳಲು ಅವರೊಳಗೂ ಮೇಲುರಿಮೆ ಮತ್ತು ಕೀಳುರಿಮೆ ಬರುವಂಥ ಜಾತಿ ಮತ್ತು ಉಪಜಾತಿಗಳನ್ನು ಸೃಷ್ಟಿಸಿದರು. ಅವರ ಕಾಯಕಗಳ ಆಧರದ ಮೇಲೆ ಅವರಲ್ಲಿ ಜಾತಿಭೇದ ಮಾಡಲು ಅವರಿಗೆ ಸಾಧ್ಯವಾಯಿತು. ಈ ಕಾರಣದಿಂದಲೇ ಅಸ್ಪೃಶ್ಯತೆಯ ಕ್ರೌರ್ಯಕ್ಕೆ ಒಳಗಾದ ಎಡಗೈ ಮತ್ತು ಬಲಗೈನವರು ಕೂಡ ಒಂದಾಗಲಿಕ್ಕಾಗಲಿಲ್ಲ. ಬಲಗೈನವರು ಎಡಗೈನವರಿಗಿಂತ ಜಾತಿಯಲ್ಲಿ ಶ್ರೇಷ್ಠರು ಎಂದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಘಟನೆ ನೆನಪಾಗುತ್ತಿದೆ. ನಾನು ವಿಜಾಪುರದಲ್ಲಿ ಎಂಟನೆ ಇಯತ್ತೆಯಲ್ಲಿ ಓದುತ್ತಿರುವಾಗ ನಮ್ಮ ಮನೆಯ ಹತ್ತಿರ ಕಾಕಾ ಕಾಖಾನೀಸರು ಸ್ಥಾಪಿಸಿದ ಹರಿಜನ ಬೋರ್ಡಿಂಗ ಇತ್ತು. ಹೈಸ್ಕೂಲು ಓದಲು ಬಂದ ದಲಿತ ಮಕ್ಕಳಿಗೆ ಅಲ್ಲಿ ಉಚಿತ ಪ್ರವೇಶವಿತ್ತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಾನು ಆ ಹೈಸ್ಕೂಲು ಹುಡುಗರ ಜೊತೆಗೇ ಇರುತ್ತಿದ್ದೆ. ರಜೆಯ ಬಿಟ್ಟಮೇಲೆ ನನ್ನ ಇಬ್ಬರು ಗೆಳೆಯರು ತಮ್ಮ ಹತ್ತಿರದ ಹಳ್ಳಿಯಾದ ಮನಗೂಳಿಗೆ ಆಹ್ವಾನಿಸಿದರು. ಅವರಲ್ಲಿ ಒಬ್ಬಾತ ಎಡಗೈ ಜಾತಿಗೆ ಸೇರಿದವನು. ಇನ್ನೊಬ್ಬಾತ ಬಲಗೈ ಜಾತಿಗೆ ಸೇರಿದವನು. ನಾವು ಮೂವರೂ ಮನಗೂಳಿಗೆ ಹೊದೆವು. ಎಡಗೈ ಗೆಳಯನ ಮನೆ ಮೊದಲಿಗೆ ಸಿಗುವುದರಿಂದ ಅಲ್ಲಿಗೆ ಹೋದೆವು. ಆತನ ತಾಯಿ ಮಗ ಬರುವ ಖುಷಿಯಲ್ಲಿ ಹೋಳಿಗೆ ಮಾಡಿದ್ದಳು. ಒತ್ತಾಯದ ಕಾರಣ ನಾನು ಮತ್ತು ಬಲಗೈ ಗೆಳಯ ಜೊತೆಯಲ್ಲೇ ಊಟ ಮಾಡಿದೆವು. ನಂತರ ಬಲಗೈಯವನ ಮನೆಗೆ ಹೋದೆವು. ಆತನ ಅಕ್ಕ ಊಟಕ್ಕೆ ಕರೆದಳು. ಊಟ ಮಾಡಿ ಬಂದುದಾಗಿ ತಿಳಿಸಿದೆ. ತನ್ನ ತಮ್ಮ ಎಡಗೈಯವನ ಮನೆಯಲ್ಲಿ ಊಟ ಮಾಡಿ ಬಂದದ್ದಕ್ಕೆ ಬಹಳ ತರಾಟೆಗೆ ತೆಗೆದುಕೊಂಡಳು. ಬಹಳ ಕೆಟ್ಟದಾಗಿ ಬೈಯ್ದಳು. ಆ ಬಲಗೈ ಮಿತ್ರ ಅಪರಾಧಿಯಂತೆ ನಿಂತಿದ್ದ.

ನಾನು ಬಿ.ಎ. ಮೊದಲ ವರ್ಷದಲ್ಲಿದ್ದಾಗ ದಲಿತ ಮಿತ್ರರನ್ನು ಕರೆದುಕೊಂಡು ಅಂಬೇಡ್ಕರ ಜಯಂತಿಯನ್ನು ಎಸ್.ಬಿ. ಆರ್ಟ್ಸ್ ಕಾಲೇಜಿನ ಹಾಸ್ಟೇಲಿನಲ್ಲಿ ಆಚರಿಸಿದೆ. ಬಹಳ ಜನ ದಲಿತ ಮಿತ್ರರು ಮತ್ತು ಇತರರು ಸೇರಿದ್ದರು. ದಲಿತ ಮಿತ್ರರಲ್ಲಿನ ನಾಲ್ಕೈದು ಜನ ಮೂಕ ಪ್ರೇಕ್ಷಕರಂತೆ ಕಾಣುತ್ತಿದ್ದರು. ಸಮಾರಂಭ ಮುಗಿದ ಮೇಲೆ ಅವರನ್ನು ಮಾತನಾಡಿಸಿ ಕಾರಣ ಕೇಳಿದೆ. ಅವರು ವಿಷಣ್ಣ ವದನರಾಗಿ 'ನಾವು ಮಾದಿಗರು' ಎಂದು ಹೇಳಿದರು. ತಮಗೆ ಆ ಸಮಾರಂಭದಲ್ಲಿ ಪ್ರಾಮುಖ್ಯ ಇಲ್ಲ ಎಂಬ ಭಾವ ಅವರದಾಗಿತ್ತು. ನನಗೆ ಬಹಳ ಬೇಸರವಾಯಿತು. ಅವರಿಗೆ ಬಲಗೈ ಮಿತ್ರರು ಏನೂ ಹೇಳಿದ್ದಿಲ್ಲ. ಆದರೆ ಅವರ ಸಂಕೋಚದಿಂದಾಗಿ ಮತ್ತು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಿಂದಾಗಿ ಅವರು ದೂರ ಉಳಿದಿದ್ದರು. ಆ ರೀತಿಯ ಸಭೆಯನ್ನು ನಾನು ಮೊದಲ ಬಾರಿಗೆ ಶ್ರಮವಹಿಸಿ ಏಪರ್ಾಡು ಮಾಡಿದ್ದೆ. ಆ ಸಭೆಯ ಯಶಸ್ಸು ಸಂತೋಷ ಕೊಟ್ಟರೂ ಈ ನೋವು ಮಾತ್ರ ಹಾಗೇ ಉಳಿದುಕೊಂಡಿತು. ನಾಲ್ಕೈದು ದಶಕಗಳ ಹಿಂದೆ ನಮ್ಮ ನಾಡಿನಲ್ಲಿ ದಲಿತರ ಮಧ್ಯೆ ಎಚಿಥ ದುಗುಡ ಮನೆ ಮಾಡಿತ್ತು ಎಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಹೀಗೆ ಮನುವಾದಿಗಳ ಕುತಂತ್ರದಿಂದಾಗಿ ಮೇಲ್ಜಾತಿ ಮತ್ತು ಕೆಳಜಾತಿಗಳ ಮಧ್ಯೆ ಅಷ್ಟೇ ಅಲ್ಲದೆ. ಬಹುಸಂಖ್ಯಾತ ಕೆಳಜಾತಿಗಳ ಮಧ್ಯೆ ಕೂಡ ಮೇಲು ಕೀಳಿನ ಕಂದಕಗಳು ಸೃಷ್ಟಿಯಾಗಿವೆ. ಈ ಕಂದಕಗಳು ಎಷ್ಟು ಆಳವಾಗಿವೆ ಎಂದರೆ, ಪ್ರತಿಯೊಂದು ಜಾತಿಗಳವರು ತಮ್ಮತನವನ್ನು ಸಂರಕ್ಷಿಸಿಕೊಂಡು ಬದುಕುವುದರಲ್ಲೇ ರಕ್ಷಣೆ ಇದೆ. ಇಲ್ಲದಿದ್ದರೆ ಬದುಕು ಪ್ರಪಾತಕ್ಕೆ ಇಳಿಯುತ್ತದೆ ಎಂದು ಭಾವಿಸಿದ್ದಾರೆ. ಎಡಗೈ ಸಮಾಜದ ಯುವತಿಯೊಬ್ಬಳು ಬಲಗೈ ಸಮಾಜದ ಯುವಕನೊಬ್ಬನನ್ನು ಪ್ರೀತಿಸಿದಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಿಎಚ್.ಡಿ ಪಡೆದವರಾಗಿದ್ದಾರೆ. ಯುವತಿಯ ಮನೆಯವರೆಲ್ಲರೂ ಸ್ನಾತಕೋತ್ತರ ಪದವೀಧರರೇ ಆಗಿದ್ದಾರೆ. ಆ ಯುವತಿಯ ಅಕ್ಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದುಕೊಂಡು ದಲಿತ ರಾಜಕೀಯ ಚಿಂತಕಿಯೂ ಆಗಿದ್ದಾರೆ. ಆದರೆ ಅವರೆಲ್ಲ ಈ ಮದುವೆಗೆ ಅಡ್ಡಬಂದರು. ಯುವತಿಯ ಮನವೊಲಿಸಿ ಮದುವೆ ತಪ್ಪಿಸಿದರು. ಕೇವಲ 5 ವರ್ಷಗಳ ಹಿಂದಿನ ಘಟನೆ ಇದು. ಆ ಯುವತಿಯ ಭೇಟಿಯಾದಾಗ ಅವರ ಮದುವೆ ಬಗ್ಗೆ ವಿಚಾರಿಸಿದೆ. 'ಇಲ್ಲ ಬಿಡ್ರಿ, ಮುಂದ ಕಲ್ಚರಲ್ ಪ್ರಾಬ್ಲೆಮ್ಸ್ ಆಗ್ತಾವ್' ಎಂದು ತಟ್ಟನೆ ಹೇಳಿದಳು. ಹೀಗೆ ನಮ್ಮ ದೇಶದಲ್ಲಿ ಸಾಂಸ್ಕೃತಿಕ ಸಮಸ್ಯೆ ಎಂಬುದು ಎಲ್ಲ ಜಾತಿಗಳನ್ನೂ ಕಾಡುತ್ತಿದೆ. ಇಂಥ ಭ್ರಮೆಗಳು ವಾಸ್ತವ ರೂಪ ತಾಳಿದ್ದರಿಂದಲೇ ಜಾತಿಗಳು ಬಿಡಿಸಲಾಗದ ಕಗ್ಗಂಟಾಗಿ ಮುಂದುವರಿದುಕೊಂಡು ಹೋಗುತ್ತಿವೆ.

ಮನುವಾದಿಗಳ ಸಂಪ್ರದಾಯದಿಂದಾಗ ಉಂಟಾದ ಮಾನಸಿಕ ಗುಲಾಮಗಿರಿಯು ಇಂಥ ವಿಚಿತ್ರವಾದ ಭಯಗಳನ್ನು ಎಲ್ಲ ಜಾತಿಗಳವರಲ್ಲಿ ಸೃಷ್ಟಿಸುತ್ತಲೇ ಇದೆ. ಕೆಳಜಾತಿಗಳ ಕೀಳರಿಮೆ ಮತ್ತು ಮೇಲ್ಜಾತಿಗಳವರ ಮೇಲುರಿಮೆಯಿಂದಾಗಿ ಈ ಶ್ರೇಣೀಕೃತ ಸಮಾಜದಲ್ಲಿ ಒಂದು ಜಾತಿಯವರು ಇನ್ನೊಂದು ಜಾತಿಯಿಂದ ಮತ್ತು ಒಂದು ವರ್ಣದವರು ಇನ್ನೊಂದು ವರ್ಣದವರಿಂದ ಒಂದಿಲ್ಲೊಂದು ರೀತಿಯಲ್ಲಿ ಅಪಮಾನಕ್ಕೆ ಒಳಗಾಗುತ್ತಲೇ ಇರುತ್ತಾರೆ. ನಮ್ಮ ಸಂಪ್ರದಾಯಬದ್ಧ ಮಾನವತಾವಾದಿ ಕವಿ ಪು.ತಿ. ನರಸಿಂಹಾಚಾರ್ಯರು ವಿಶಿಷ್ಟಾದ್ವೈತದ ಶ್ರೀವೈಷ್ಣವರು. ಅವರ ಮಿತ್ರರೊಬ್ಬರು ಅದ್ವೈತ ಸ್ಮಾರ್ತರು. ಪು.ತಿ.ನ. ಅವರಿಗೆ ಮಿತ್ರನ ತಂಗಿಯನ್ನು ಮದುವೆಯಾಗುವ ಬಯಕೆಯಾಯಿತು. ತಮ್ಮ ತಂದೆಯವರಿಗೆ ಈ ಕುರಿತು ತಿಳಿಸಿದರು. ಆಗ ಅವರ ತಂದೆಯವರು. 'ಅಯ್ಯೋ ಅದು ಹೇಗೆ ಸಾಧ್ಯ? ಅವರು ಲಿಂಗಪೂಜಕರು; ಭಸ್ಮಭೂಸಿತರು' ಎಂದು ತಿರಸ್ಕರಿಸಿದರು. ಮದುವೆ ಪ್ರಸ್ತಾಪ ಅಲ್ಲಿಗೇ ನಿಂತು ಹೋಯಿತು.

ನಮ್ಮ ಮನೆಯ ಬಳಿ ನಮಗೆ ಬಹಳ ಬೇಕಾದ ಒಂದು ಕುರುಬ ಸಮಾಜದ ಕುಟುಂಬವಿತ್ತು. ಅವರ ಮಗಳಿಗೆ ವರ ಹುಡುಕುತ್ತಿದ್ದರು. ನಮ್ಮ ತಂದೆ ತಮಗೆ ಪರಿಚಯವಿದ್ದ ಇನ್ನೊಂದು ಕುರುಬ ಸಮಾಜದ ಮಿತ್ರರ ಊರಿಗೆ ಹೋಗಿ ಅವರ ಹುಡುಗನನ್ನು ನೋಡಿಕೊಂಡು ಬಂದರು. ಆ ಹುಡುಗ ಮತ್ತು ಮನೆತನ ನನ್ನ ತಂದೆಗೆ ಬಹಳ ಹಿಡಿಸಿತ್ತು. ಹೀಗಾಗಿ ಖುಷಿಯಿಂದ ಎಲ್ಲ ವಿವರಿಸಿದರು. ಆಗ ಆ ಕನ್ನೆಯ ತಂದೆ ಹೇಳಿದರು. 'ಅದೆಲ್ಲ ಸರಿ. ಆದರೆ ನಮ್ಮದು ನೂರು ಕಂಕಣ. ಅವರದು ಉಣ್ಣೆ ಕಂಕಣ. ಮದುವೆ ಸಾಧ್ಯವಿಲ್ಲ' ಎಂದು ಹೇಳಿದರು!

ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದ್ದರೂ ಆ ಧರ್ಮದ ಬಹುಪಾಲು ಅನುಯಾಯಿಗಳ ಅವಜ್ಞೆಯಿಂದಾಗಿ ಅದು ಹಿಂದು ಧರ್ಮದ ಒಂದು ಭಾಗವಾಗಿ ಹೋದಂತೆ ಭಾಸವಾಗುತ್ತಿದೆ. ಲಿಂಗಾಯತರನೇಕರು ತಾವು ಹಿಂದು-ಲಿಂಗಾಯತ ಎಂದೇ ಭಾವಿಸಿದ್ದಾರೆ. ಅವರ ಶಾಲೆಯ ದಾಖಲಾತಿಗಳಲ್ಲಿ ಹಿಂದು-ಲಿಂಗಾಯತ ಎಂದೇ ಇರುತ್ತದೆ. ಹೀಗೆ ಲಿಂಗಾಯತ ಒಂದು ಜಾತಿಯಾಗಿ ನೋಡುವಾಗ ಒಳಪಂಗಡಗಳೆಲ್ಲ ಉಪಜಾತಿಗಳಾಗಿ ಎದ್ದು ಕಾಣುತ್ತಿವೆ. ಆರಾಧ್ಯ, ಆದಿ, ಬಣಜಿಗ, ಪಂಚಮಸಾಲಿ, ಕುಡು ಒಕ್ಕಲಿಗ, ನೊಣಬ, ಸಾದರ, ಶೀಲವಂತ, ಶಿವಸಿಂಪಿ, ರೆಡ್ಡಿಲಿಂಗಾಯತ ಮುಂತಾದ ಹಲವು ಹದಿನೆಂಟು ಶೇಣೀಕೃತ ಪಂಗಡಗಳಿಂದ ಲಿಂಗಾಯತ ಧರ್ಮ ತುಂಬಿಕೊಂಡಿದ್ದರಿಂದ ನಿರ್ಜಾತಿ ಶರಣರ ಆಶಯಗಳನ್ನು ಮೂಲೆಗುಂಪಾಗಿವೆ. ಈ ಒಳಪಂಗಡಗಳ ಮಧ್ಯೆ ಇಂದಿಗೂ ಮದುವೆ ಸಂಬಂಧಗಳು ಏರ್ಪಡುವುದು ಕಠಿಣ ಸಾಧ್ಯವಾಗಿದೆ.

ಗುಲ್ಬರ್ಗದಲ್ಲಿ ಆದಿ ಪಂಗಡಕ್ಕೆ ಸೇರಿದ ನನ್ನ ಮಿತ್ರನೊಬ್ಬ ಬಾಲಕನಾಗಿದ್ದಾಗ ಬಣಜಿಗರ ಮನೆಯಲ್ಲಿ ಉಂಡದ್ದಕ್ಕೆ ತಂದೆಯಿಂದ ಹೊಡೆತ ತಿಂದದ್ದನ್ನು ಜ್ಞಾಪಿಸಿಕೊಳ್ಳುತ್ತಾನೆ. ಪಂಚಮಸಾಲಿ ಜಗದ್ಗುರುವೊಬ್ಬರು ತಮ್ಮ ಪಂಗಡದವರನ್ನು ಬಣಜಿಗರು ಸಮಾನವಾಗಿ ಕಾಣುವುದಿಲ್ಲ ಎಂದು ಪ್ರವಚನದಲ್ಲೇ ಅಳಲು ತೋಡಿಕೊಂಡರುಸ. ಇನ್ನೊಬ್ಬ ಪಂಚಮಸಾಲಿ ಜಗದ್ಗುರು ಬಿ.ಜೆ.ಪಿ. ಸರ್ಕಾರದಲ್ಲಿ ಬಣಜಿಗರಿಗೇ ಹೆಚ್ಚಿನ ಪ್ರಾಧಾನ್ಯವಿದೆ. ಅವರಿಗಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಪಂಚಮಸಾಲಿ ಪಂಗಡವನ್ನು ಕಡೆಗಣಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗೆ ಇಡೀ ಸಮಾಜವನ್ನು ಒಡೆದು ಆಳುವ ನೀತಿಯನ್ನು ಜಾರಿಗೊಳಿಸಿ ಇಡೀ ವ್ಯವಸ್ಥೆಯು ವೈದಕಶಾಹಿಯ ಕಪಿಮುಷ್ಟಿಯಲ್ಲಿರುವಂತೆ ಮನುಸ್ಮೃತಿ ನೋಡಿಕೊಂಡಿದೆ. ಮನುಸ್ಮೃತಿಯು ಇಡೀ ಭಾರತೀಯ ಸಮಾಜವನ್ನು ಅಘೋಷಿತವಾಗಿ ಆಳುತ್ತಿದೆ. ಈ ವೈರಸ್ ನಿರ್ಜಾತಿ ಧರ್ಮಗಳಾದ ಕ್ರೈಸ್ತ, ಇಸ್ಲಾಂ, ಸಿಖ್ ಮುಂತಾದ ನಿರ್ಜಾತಿ ಧರ್ಮಗಳಲ್ಲೂ ಹಬ್ಬಿದೆ. ಅಂತೆಯೆ ದಲಿತ ಕ್ರೈಸ್ತರು ಮತ್ತು ದಲಿತ ಸಿಖ್ಖರು ಇದ್ದಾರೆ. ಮುಸ್ಲಿಮರಲ್ಲಿ ನದಾಫ್, ಪಿಂಜಾರ, ಬಾಗವಾನ, ಚಪ್ಪರಬಂದ, ನಾಲಬಂದ, ದರ್ವೇಶ್ ಮುಂತಾದ ಪಂಗಡಗಳವರ ಜೊತೆ ಸಯ್ಯದ್ ಮತ್ತು ಶೇಖ್ ಎಂದು ಹೇಳಿಕೊಳ್ಳುವವರು ರಕ್ತಸಂಬಂಧಕ್ಕೆ ಹಿಂದೇಟು ಹಾಕುತ್ತಾರೆ. ಹೀಗೆ ಜಾತಿಯ ಅಷ್ಟಪದಿ ಯಾರನ್ನೂ ಬಿಟ್ಟಿಲ್ಲ.

ಪಿತೃಪ್ರಧಾನ ವ್ಯವಸ್ಥೆಯ ದನಗಾಯಿ ಆರ್ಯರು ಏಷ್ಯಾ ಮೈನರ್ನಿಂದ ಪರ್ಸಿಯಾ, ಅಪಘಾನಿಸ್ತಾನ ಮುಂತಾದ ಪ್ರದೇಶಗಳನ್ನು ದಾಟುತ್ತ ಸಿಂಧೂನದಿ ಪ್ರದೇಶಕ್ಕೆ ಬಂದು ಆಯರ್ಾವರ್ತವನ್ನು ರೂಪಿಸುವ ಸಂದರ್ಭದಲ್ಲಿ ಸ್ಥಳೀಯರ ಮೇಲೆ ಹಲ್ಲೆ ಮಾಡಿದರು. ಅವರ ಮಾತೃಪ್ರಧಾನ ಸಿಂಧೂನದಿ ಸಂಸ್ಕೃತಿಯನ್ನು ಹಾಳುಮಾಡಿದರು. ಹೀಗೆ ಭಾರತದಲ್ಲಿ ಭಯೋತ್ಪಾದನೆಯನ್ನು ಆಮದು ಮಾಡಿಕೊಳ್ಳಲಾಯಿತು ಎಂಬುದಕ್ಕೆ ಋಗ್ವೇದದ ಒಂದು ಸೂತ್ರ ಸಾಕ್ಷಿಯಾಗಿದೆ.

ಕವಿ ಜಾನೀಹಿ ಆರ್ಯಾನ್ ಯೇ ಚ ದಸ್ಯವಃ
ಬಹರ್ಷ್ಮಿತೇ ರಂಧಯ ಶಾಸತ್ ಜೋದಿತಾ ಅವ್ರತಾನ್/ಸ
ಶಾಕೀಭವ ಯಜಮಾನಸ್ಯ ಚೋದಿತಾ ವಿಶ್ವಾ
ಇತ್ ತಾ ತೇ ಸಧಮಾದೇಷು ಚಾಕನ/
-ಋಗ್ವೇದ (1.10.518)
(ಎಲ್ಲ ಕಡೆಗಳಿಂದಲೂ ನಾವು ದಸ್ಯುಗಳಿಂದ ಸತ್ತುವರಿಯಲ್ಪಟ್ಟಿದ್ದೇವೆ. ಅವರು ಯಜ್ಞಗಳನ್ನು ಮಾಡುವುದಿಲ್ಲ. ಅವರು ನಾಸ್ತಿಕರು. ಅವರ ಆಚರಣೆಗಳೆಲ್ಲ ಭಿನ್ನ. ಅವರು ಮನುಷ್ಯರೇ ಅಲ್ಲ. ಓ ಶತ್ರುಹಂತಕನೇ! ಅವರನ್ನು ಕೊಲ್ಲು, ದಾಸ ಜನಾಂಗವನ್ನು ನಾಶ ಮಾಡು.)

ವೈದಿಕರ ಪ್ರಕಾರ ಯಜ್ಞ ಮಾಡದವರೆಲ್ಲ ನಾಸ್ತಿಕರೇ ಆಗಿದ್ದಾರೆ. ಯಜ್ಞ ಮಾಡದವರು ಮನುಷ್ಯರೇ ಅಲ್ಲ ಎಂಬುದು ಋಗ್ವೇದದ ವಾದವಾಗಿದೆ. ಆದ್ದರಿಂದ ಅವರು ಶತ್ರುಗಳು. ಅಂಥ ಶತ್ರುಗಳಾದ ದಾಸ ಜನಾಂಗವನ್ನು ಕೊಂದು ಸರ್ವನಾಶ ಮಾಡುವುದಕ್ಕೆ ಋಗ್ವೇದ ಶತ್ರುಹಂತಕರಾದ ಆರ್ಯರನ್ನು ಪ್ರಚೋದಿಸುತ್ತದೆ. ಭಾರತದ ಮೂಲಸನಿವಾಸಿಗಳಿದ್ದಲ್ಲಿಗೆ ನುಗ್ಗಿ ಬಂದು, ಕುದುರೆ, ರಥ, ಬಿಲ್ಲು ಮತ್ತು ಬಾಣಗಳು ಕೂಡ ಗೊತ್ತಿರದ ಆ ಶಾಂತಸ್ವಭಾವದ ಮೂಲನಿವಾಸಿಗಳನ್ನು ಶತ್ರುಗಳೆಂದು ಕರೆದು ಅವರನ್ನು ಧ್ವಂಸಮಾಡುವಲ್ಲಿ ಮತ್ತು ಅಳಿದುಳಿದವರನ್ನು ತಮ್ಮ ಕಟ್ಟಳೆಗಳ ಮೂಲಕ ನಿಯಂತ್ರಿಸುವಲ್ಲಿ ವೈದಿಕರು ಯಶಸ್ಸನ್ನು ಸಾಧಿಸಿದರು. ನಂತರ ಅವರನ್ನು ಒಡೆದು ಆಳುವ ಮೂಲಕ ಅವೈದಿಕ ಶೂದ್ರರು ಜಾತಿ ವಿಜಾತಿಗಳಲ್ಲೇ ಕೊಳೆಯುವಂತೆ ನೋಡಿಕೊಂಡರು.

ಅಂದಿನ ಒಡೆದು ಆಳುವ ನೀತಿಯಲ್ಲಿ ಇಂದು ಸಹಜವಾಗಿತ್ತು. ಇಂದು ಕಾಲಬದಲಾಗಿದೆ. ಕೋಮುವಾದಿಗಳು ಹಿಂದುತ್ವದ ಹೆಸರಿನಲ್ಲಿ ಶೇಕಡಾ 90ರಷ್ಟಿರುವ ಕೆಳಜಾತಿಗಳವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರ ಹೂಡಿದ್ದಾರೆ. ಎಲ್ಲ ಜಾತಿ, ಉಪಜಾತಿ ಮತ್ತು ಅಸ್ಪೃಶ್ಯತೆಯನ್ನು ಮುಂದುವರಿಸಿಕೊಂಡೇ 'ಗರ್ವಸೇ ಕಹೋ ಹಂ ಹಿಂದು ಹೈ' ಎಂಬ ಘೋಷನೆ ಕೂಗುತ್ತ ದಲಿತರು ಮತ್ತು ಹಿಂದುಳಿದ ವರ್ಗದ ಜನರನ್ನು ಮರಳು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವವಾದಿ ರಾಜಕಾರಣದ ಜಾಗದಲ್ಲಿ ಜಾತಿವಾದಿ ರಾಜಕಾರಣವನ್ನು ಗಟ್ಟಿಗೊಳಿಸುವ ಕುತಂತ್ರವನ್ನು ಕೋಮುವಾದಿ ಪಕ್ಷಗಳು ಮತ್ತು ಸಂಘಗಳು ಬಹಳ ಚಾಕಚಕ್ಯತೆಯಿಂದ ಮಾಡುತ್ತಿವೆ. ಈ ಹುನ್ನಾರಕ್ಕೆ ಹಿಂದುಳಿದವರು ಬಲಿಯಾಗುತ್ತಲೇಸ ಇದ್ದಾರೆ.

ಈ ಜಾತಿ ಕುತಂತ್ರವನ್ನು ಶರಣರು 12ನೇ ಶತಮಾನದಲ್ಲೇ ಬಯಲಿಗೆಳೆದಿದ್ದಾರೆ.

ಬ್ರಾಹ್ಮಣ ಭಕ್ತನಾದರೇನಯ್ಯಾ? ಸೂತಪಾತಕಂಗಳ ಬಿಡ.
ಕ್ಷತ್ರಿಯ ಭಕ್ತನಾದಡೇನಯ್ಯಾ? ಕ್ರೋಧವ ಬಿಡ.
ವೈಶ್ಯ ಭಕ್ತನಾದರೇನಯ್ಯಾ? ಕಪಟವ ಬಿಡ.
ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿ ಎಂಬುದ ಬಿಡ.
ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?

ಎಂದು ಚೆನ್ನಬಸವಣ್ಣನವರು ಪ್ರಶ್ನಿಸಿದ್ದಾರೆ.

ಜಾತಿ ಮತ್ತು ವರ್ಣಗಳಿಗೆ ಸಂಬಂಧಿಸಿದಂತೆ ಇದು ಬಹಳ ಮಹತ್ವದ ವಚನವಾಗಿದೆ. ಸವರ್ಣೀಯರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ಅವರ ಗುಣವೈಶಿಷ್ಟ್ಯಗಳಿಂದ ಚೆನ್ನಬಸವಣ್ಣನವರು ವಿಶ್ಲೇಷಿಸುತ್ತಾರೆ. ಬ್ರಾಹ್ಮಣನನದು ಸೂತಪಾತಕ ಗುಣ. ಕ್ಷತ್ರಿಯನದು ಕ್ರೋಧ ಗುಣ. ವೈಶ್ಯನದು ಕಪಟ ಗುಣ. ಇವರೆಲ್ಲರು ಈ ಗುಣವೈಶಿಷ್ಟಗಳನ್ನು ಉಳಿಸಿಕೊಂಡು ವರ್ಣ ಮತ್ತು ಜಾತಿವಾದಿಗಳಾಗಿದ್ದಾರೆ. ಇದರ ಜೊತೆ ಅವರ ಅಂತಸ್ತು ಮತ್ತು ಅಹಂಕಾರವನ್ನು ಹೆಚ್ಚಿಸುವ ಶೋಷಕ ವೃತ್ತಿ ಮತ್ತು ಕರ್ತವ್ಯಗಳಿವೆ. ಹೀಗಾಗಿ ಮೂರೂ ವರ್ಣಗಳು ಸುಲಿಗೆಯ ಮೂಲವಾಗಿವೆ. ಹೀಗೆ ಕಂದಾಚಾರದ ಗುರುತ್ವ, ಅಹಂ ಮತ್ತು ಕಪಟತನಗಳು ಒಂದುಗೂಡಿ ಸವರ್ಣೀಯರ ಮೇಲ್ವರ್ಗದ ಸೃಷ್ಟಿಯಾಗಿದೆ. ಬಹುಸಂಖ್ಯಾತರ ಕೆಳವರ್ಗವಾದ ಶೂದ್ರ ವರ್ಣದ ಜಾತಿಗಳವರು ಶೋಷಣೆಗೆ ಒಳಗಾದವರು. ಇವರಲ್ಲಿ ಸ್ವಜಾತಿ ಎಂಬುದನ್ನು ಬಿಟ್ಟರೆ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಸ್ವಜಾತಿಯನ್ನು ಕಳೆದುಕೊಂಡಾಗ ಮಾತ್ರ ಅವರು ಬಿಡುಗಡೆಯನ್ನು ಹೊಂದಬಲ್ಲರು ಎಂಬುದು ವಚನ ಚಳವಳಿಯ ಸಂದೇಶವನ್ನು ಸ್ವಜಾತಿಯ ಭ್ರಮೆಯಿಂದ ಅವರು ಅರಿತು ಕೊಳ್ಳದೆ ಹೋದರು. ಮೇಲ್ವರ್ಗದವರು ವ್ಯವಸ್ಥೆಯ ಮೇಲಿನ ಹಿಡಿತವನ್ನು ಮುಂದುವರಿಸುವುದಕ್ಕಾಗಿ ಭಕ್ತರಾಗಿಯೂ ತಮ್ಮ ತ್ರಿವರ್ಣಗಳಿಂದ ಕೂಡಿದ್ದ ವರ್ಗ ಗುಣವನ್ನು ಬಿಟ್ಟುಕೊಡಲಿಲ್ಲ. ಕೆಳವರ್ಗದವರು ತಮ್ಮ ಭಾವುಕತೆಯಿಂದ ಸ್ವಜಾತಿಗಳಿಗೆ ಅಂಟಿಕೊಳ್ಳುವುದರ ಮೂಲಕ ಮೇಲ್ವರ್ಗದ ಪಿತೂರಿಗೆ ಬಲಿಯಾದರು. ಹೀಗೆ ಶರಣಸಂಕುಲದಲ್ಲಿನ ಹಿಂದುಳಿದ ಮೂಲದವರುಸ ಚಳವಳಿಯ ಮೂಲ ಆಶಯಗಳನ್ನು ಅರಿತುಕೊಳ್ಳಲಿಲ್ಲ. ಆದರೆ ಚಳವಳಿ ಪ್ರಬಲವಾಗಿದ್ದ ಕಾರಣ ಮೇಲ್ಜಾತಿಯ ಮೂರೂ ವರ್ಣದವರು ಕೂಡ ಚಳವಳಿಯ ಭಾಗವಾಗುತ್ತ ಅದನ್ನುಸ ಶಿಥಿಲಗೊಳಿಸಿದರು. ಮುಂದೆ ಅಂಥವರ ಷಡ್ಯಂತ್ರದ ಕಾರಣ ಶರಣರ ಚಳವಳಿ ಕಲ್ಯಾಣದ ಹತ್ಯಾಕಾಂಡದಲ್ಲಿ ಪರ್ಯವಸಾನಗೊಂಡಿತು.

ಬಸವಣ್ಣನವರಿಗೆ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ನವಸಮಾಜಕ್ಕಾಗಿ ನವಮಾನವನ ಸೃಷ್ಟಿಯ ಅವಶ್ಯಕತೆ ಇತ್ತು. ಅವರು ಸಂಪ್ರದಾಯದ ಹಂಗುಗಳಿಂದ ವಿಮೋಚನೆಗೊಂಡ ಮಾನವರನ್ನು ರೂಪಿಸುವ ಮಹಾನ್ ಗುರಿಯನ್ನು ಹೊಂದಿದ್ದರು. ಆದರ ಜನರ ಮೆದುಳಿನಲ್ಲಿ ಹತ್ತಾರು ಸಹಸ್ರ ವರ್ಷಗಳಿಂದ ತುಂಬಿಕೊಂಡಿದ್ದ ಜಾತಿಯ ಕಸವನ್ನು ಹೊರಹಾಕುವುದು ಸುಲಭದ ಕೆಲಸವಾಗಿರಲಿಲ್ಲ.

ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.

ಎಂದು ಬಸವಣ್ಣನವರು ನವಮಾನವರನ್ನು ರೂಪಿಸುವಲ್ಲಿನ ತೊಡಕುಗಳನ್ನು ಮಾರ್ಮಿಕವಾಗಿ ಹೇಳಿದ್ದಾರೆ. ತಾವು ಬ್ರಾಹ್ಮಣ್ಯದ ಹಂಗಿನಲ್ಲಿ ಇಲ್ಲ. ಎಲ್ಲವನ್ನೂ ತೊರೆದು ಶರಣಸಂಸ್ಕೃತಿಯ ಹಂಗಿನಲ್ಲಿದ್ದ ಕಾರಣ ನವಮಾನವನಾಗಿದ್ದೇನೆ ಎಂದು ಸೂಚಿಸುತ್ತಾರೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು.
ಅವರೆಂತು ಕೀಳುಜಾತಿಯವರು? ಜಾತಿಗಳು ನೀವೇಕೆ ಕೀಳಾಗಿರೋ?

ಎಂದು ದಲಿತ ಮೂಲದ ಶರಣೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಸಾತ್ವಿಕ ಕೋಪ ವ್ಯಕ್ತಪಡಿಸುತ್ತಾಳೆ. ಹೀಗೆ ಶರಣಚಳವಳಿಯಲ್ಲಿ ಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಬಹಳಷ್ಟು ವೈಚಾರಿಕ ಸಂಘರ್ಷಗಳಾಗಿವೆ. ಐರೋಪ್ಯ ರಾಷ್ಟ್ರಗಳಲ್ಲಿ ವರ್ಗದ ಪರಿಕಲ್ಪನೆ ಮೂಡುವ ಮೊದಲೇ ಶರಣಚಳವಳಿಯಲ್ಲಿ ವರ್ಗದ ಕಲ್ಪನೆ ಮೂಡಿದ್ದು ಮಹತ್ವಪೂರ್ಣವಾಗಿದೆ. ಜಾತಿಗಳು ಸ್ಥಗಿತಗೊಂಡ ವರ್ಗಗಳು ಎಂಬುದರ ಸುಳಿವು ವಚನಸಾಹಿತ್ಯದಲ್ಲಿ ಸಿಗುತ್ತದೆ. ಅಂತೆಯೆ. 'ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ' ಎಂದು ಬಸವಣ್ಣನವರು ಹೇಳಲು ಸಾಧ್ಯವಾಯಿತು. ಮೇಲ್ಜಾತಿ, ಮೇಲ್ವರ್ಗದ ಬಸವಣ್ಣನವರು ಈ ತೆರನಾದ ಹೊಸತನದ ಮೂಲಕ ಕೇಳಜಾತೀಕರಣಕ್ಕೆ ಮತ್ತು ಕೆಳವಗರ್ೀಕರಣಕ್ಕೆ ಒಳಗಾದರು. ಇಂಥ ವೈಚಾರಿಕತೆಯ ಆಧಾರದ ಮೇಲೆ ಜಾತಿಗಳನ್ನು ಸಂಕರಗೊಳಿಸಿ ಶರಣಸಂಕುಲವೆಂಬ ಎಲ್ಲ ತೆರನಾದ ಮೇಲು ಕೀಳಿಲ್ಲದ ಸಮಾಜವನ್ನು ಸೃಷ್ಟಿಸಿದರು. ಆ ಸಮಾಜದೊಳಗಿದ್ದುಕೊಂಡೇ ತಮ್ಮ ವರ್ಗ ಹಿತಾಸಕ್ತಿಯನ್ನು ಪರೋಕ್ಷವಾಗಿ ಕಾಪಾಡಿಕೊಂಡು ಬಂದ ಪಟ್ಟಭದ್ರರು ಬಸವಣ್ಣನವರ ಈ ನವಸಮಾಜದ ಕನಸನ್ನು ಭಗ್ನಗೊಳಿಸಿದರು.

ಭಾರತೀಯ ಜಾತಿ ವ್ಯವಸ್ಥೆಯಲ್ಲಿನ ವರ್ಗ ಲಕ್ಷಣಗಳನ್ನು ಬಾಬಾಸಾಹೇಬ ಅಂಬೇಡ್ಕರರು ಕೂಡ ಗುರುತಿಸಿದ್ದಾರೆ. 'ಭಾರತದ ಪ್ರತಿ ಹಳ್ಳಿಯಲ್ಲೂ ದಲಿತರ ಮೇಲೆ ಮೇಲ್ಜಾತಿಗಳು ಕೇವಲ ಜಾತಿಯಾಗಿ ಅಲ್ಲದೆ ವರ್ಗವಾಗಿ ಶೋಷಣೆ ಮಾಡುತ್ತವೆ. ಈ ಪರಿಕಲ್ಪನೆಯನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ಯಾವತ್ತೂ ದಲಿತಪರ ಸಂಘಟನೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಆದ್ದರಿಂದ ದಲಿತರು ಕೂಡ ವರ್ಗವಾಗಿಯೇ ಸಂಘಟಿತರಾಗಬೇಕು. ಅದಕ್ಕೆ ಮೊದಲ ಹೆಜ್ಜೆಯಾಗಿ ಹೊಲೆಮಾದಿಗರು ಒಂದುಗೂಡಬೇಕು. ಇತರ ಅಸ್ಪೃಶ್ಯ ಜಾತಿಗಳೂ ಸೇರಬೇಕು. ನಂತರ ದಲಿತಪರ ಇತರ ಹಿಂದುಳಿದ ಜಾತಿಗಳ ಒಳ ವರ್ಗವನ್ನು ಸ್ವಾಗತಿಸಬೇಕು. ಇದು ಮುಂದೆ ಬ್ರಾಹ್ಮಣರ ವರೆಗೂ ವ್ಯಾಪಿಸಬೇಕು' ಎಂದು ಅಂಬೇಡ್ಕರರು ತಿಳಿಸುತ್ತಾರೆ. ಹೀಗೆ ಅವರು ಬ್ರಾಹ್ಮಣರೊಳಗಿನ ಬಡವರ ಬಗ್ಗೆಯೂ ಕಾಳಜಿ ವ್ಯಕ್ತಪಡಿಸುತ್ತಾರೆ. ಆದರೆ ಸಾಧ್ಯವಾಗುವುದು ದಲಿತರು ಮತ್ತು ಹಿಂದುಳಿದವರು ಒಂದು ವರ್ಗವಾಗಿ ಸದೃಢವಾದಾಗ ಮಾತ್ರ ಎಂಬುದನ್ನೂ ಅವರು ಮಾರ್ಮಿಕವಾಗಿ ಸೂಚಿಸಿದ್ದಾರೆ.

'ಹಿಂದುಗಳು ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ತಮ್ಮ ಶಕ್ತಿಯನ್ನು ಹರಣ ಮಾಡಬಾರದು. ಆಂತರಿಕ ವೈರಿಗಳಾದ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯೂನಿಸ್ಟರ ವಿರುದ್ಧ ಹೋರಾಡುವುದಕ್ಕಾಗಿ ನಿಮ್ಮ ಶಕ್ತಿಯನ್ನು ಮೀಸಲಿಡಬೇಕು' ಎಂದು ಅಂದಿನ ಆರ್.ಎಸ್.ಎಸ್. ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲಕರ್ ಹಿಂದುಗಳಿಗೆ ಕರೆನೀಡುವಾಗ, ಎಲ್ಲ ವೈರುಧ್ಯಗಳ ಮಧ್ಯೆ ಕೂಡ ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರೂ ಹಿಂದುಗಳೇ ಎಂಬ ಭ್ರಮೆಯನ್ನು ಹುಟ್ಟಿಸಿದರು.

ಇಂದು ಸರಸಂಘಚಾಲಕರಾಗಿರುವ ಮೋಹನ ಭಾಗವತರು ಇದೇ ರಾಗವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ತೆಗೆದಿದ್ದಾರೆ. 'ಹಿಂದುತ್ವ ಎಂದರೆ ನ್ಯಾಷನಲ್ ಐಡೆಂಟಿಟಿ (ರಾಷ್ಟ್ರೀಯ ಸಮರೂಪತಾ)' ಎಂದು ಇತ್ತೀಚೆಗೆ ದೂರದರ್ಶನ ಭಾಷಣದಲ್ಲಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಚುನಾವಣೆಗೆ ಮೊದಲು 'ನಾನು ಹಿಂದು ರಾಷ್ಟ್ರೀಯವಾದಿ' ಎಂದು ಹೇಳಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 'ಭಾಗವತ ಅವರು ಹೇಳಿದ್ದು ಬಹಳ ಸಂದಭೋಚಿತ' ಎಂದು ತಿಳಿಸಿದ್ದಾರೆ. ಹೀಗೆ ಹಿಂದೂ ಧರ್ಮ ಮತ್ತು ರಾಜಕಾರಣವನ್ನು ಕೂಡಿಸುವ ಪ್ರಯತ್ನವನ್ನು ಈ ಜನ ಮೊದಲಿನಿಂದಲೂ ಮಾಡುತ್ತಲೇ ಬರುತ್ತಿದ್ದಾರೆ.

ಈ ಗಂಡಾಂತರದ ಬಗ್ಗೆ ಗಾಂಧೀಜಿಯವರು ಬಹಳ ಹಿಂದೆಯೆ ಎಚ್ಚರಿಸಿದ್ದಾರೆ. 'ನಾನು ಸರ್ವಾಧಿಕಾರಿಯಾಗಿದ್ದರೆ ಧರ್ಮ ಮತ್ತು ರಾಜ್ಯಶಕ್ತಿಯನ್ನು ಬೇರ್ಪಡಿಸುತ್ತಿದೆ. ನಾನು ನನ್ನ ಧರ್ಮದ ಹೆಸರಿನಲ್ಲಿ ಶಪಥ ಮಾಡಿ ಹೇಳುತ್ತೇನೆ. ನಾನು ಅದಕ್ಕಾಗಿ ಸಾಯುತ್ತೇನೆ. ಆದರೆ ಅದು ನನ್ನ ವ್ಯಯಕ್ತಿಕ ವಿಚಾರ. ಇದಕ್ಕೂ ರಾಜಕೀಯ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ನಿಮ್ಮ ಸರ್ವಧರ್ಮೀಯ ಕಲ್ಯಾಣ, ಆರೋಗ್ಯ, ಸಂಪರ್ಕ, ವಿದೇಶಿ ಸಂಬಂಧಗಳು, ಕರೆನ್ಸಿ ಮುಂತಾದವುಗಳನ್ನು ನಿಭಾಯಿಸುವುದು ಸಕರ್ಾರದ ಕರ್ತವ್ಯವಾಗಿರುತ್ತದೆ. ನಿಮ್ಮ ಅಥವಾ ನನ್ನ ಧರ್ಮಕ್ಕೆ ಅದು ಸಂಬಂಧಿಸಿದುದಲ್ಲ. ಅದು ಪ್ರತಿಯೊಬ್ಬರ ಖಾಸಗಿ ವಿಚಾರ.' ಎಂದು ಗಾಂಧೀಜಿಯರು ಧರ್ಮ ಮತ್ತು ರಾಜಕಾರಣದ ಸಂಬಂಧವನ್ನು ಅಲ್ಲಗಳೆಯುವುದರ ಮೂಲಕ ಕೋಮುರಾಜಕೀಯಕ್ಕೆ ಕಡಿವಾಣ ಹಾಕುವ ಕ್ರಮವನ್ನು ಸೂಚಿಸಿದ್ದಾರೆ.

ಆದರೆ ಇಂದು ಕೋಮು ರಾಜಕಾರಣ ಅಭಿವೃದ್ಧಿಯ ಭ್ರಮೆಗಳನ್ನು ಸೃಷ್ಟಿಸುವ ಮೂಲಕ ದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಷ್ಟು ಬೆಳೆಯುತ್ತಿದೆ. ಕೇವಲ ಬ್ರಾಹ್ಮಣರ ಮನೆಗಳನ್ನು ಒಳಗೊಂಡಂಥ 'ಶಂಕರ ಅಗ್ರಹಾರಂ' ಎಂಬ ವೈದಿಕ ನಗರವನ್ನು ಬೆಂಗಳೂರಿನಿಂದ 75 ಕಿಲೊ ಮೀಟರ್ ದೂರದಲ್ಲಿ ನಿರ್ಮಿಸುತ್ತಿದ್ದಾರೆ. ಬ್ರಹ್ಮಜ್ಞಾನವುಳ್ಳವನೇ ಬ್ರಾಹ್ಮಣ ಎಂದು ವಾದಿಸುವ ಇಂಥವರು ಅಂಥ ಜ್ಞಾನವುಳ ಅಸ್ಪೃಶ್ಯರನ್ನು ಸೇರಿಸಿಕೊಳ್ಳುವರೆ? ಇಂಥ ಪ್ರಯತ್ನಗಳು ಪರೋಕ್ಷವಾಗಿ ರಾಜ್ಯದ ವಿವಿಧ ನಗರಗಳಲ್ಲಿ ನಡೆಯುತ್ತಿವೆ. ಗುಲ್ಬರ್ಗದಲ್ಲಿ ನನಗೊಂದು ವಿಚಿತ್ರ ಅನುಭವವಾಯಿತು. ಮುಸ್ಲಿಮರೊಬ್ಬರು ಬಹಳ ಸುಂದರವಾದ ಅಪಾರ್ಟ್ ಮೆಂಟ್ ಅನ್ನು ನಿರ್ಮಿಸಿದ್ದರು. 'ಒಂದೇ ಫ್ಲ್ಯಾಟ್ ಉಳಿದಿದೆ. ಕೂಡಲೆ ಸಂಪರ್ಕಿಸಿ' ಎಂದು ಬೋರ್ಡ್ ಹಾಕಿದ್ದರು. ವಿಚಾರಿಸಲು ಹೋದೆ. ಮಾತುಕತೆಯಾಯಿತು. ನನ್ನ ಹೆಸರು ಕೇಳಿದರು. ಅಪಾರ್ಟ್ ಮೆಂಟ್ ಮಾಲಿಕ ವಿನಮ್ರವಾಗಿ ಮುಸ್ಲಿಮರಿಗೆ ಕೊಡುವುದಿಲ್ಲ ಸರ್ ಎಂದು ತಿಳಿಸಿದರು. 'ನಮಗೆ ಬ್ರಾಹ್ಮಣರು ಮನೆ ಬಾಡಿಗೆ ಕೂಡ ಕೊಡುವುದಿಲ್ಲ. ಈ ಅನುಭವ ನನಗೆ ಬೆಂಗಳೂರಿನಲ್ಲಿ ಆಗಿದೆ. ನೀವು ಮುಸ್ಲಿಮರಾಗಿ ಒಬ್ಬ ಮುಸ್ಲಿಮನಿಗೆ ಕೊಡುವುದಿಲ್ಲ ಎಂದರೆ ಹೇಗೆ? ನಾನೇನು ಕಡಿಮೆ ದರಕ್ಕೆ ಕೇಳುತ್ತಿಲ್ಲ. ನೀವು ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತಿದ್ದೇನಲ್ಲ ಎಂದೆ. ಆಗ ಆತ 'ತಪ್ಪು ತಿಳಿದುಕೊಳ್ಳಬೇಡಿ ಸರ್; ಈ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ತೆಗೆದುಕೊಂಡವರೆಲ್ಲ ಬ್ರಾಹ್ಮಣರು. ಅವರು ಕಟ್ಟಡ ಆರಂಭವಾಗುವುದಕ್ಕೆ ಮೊದಲೇ ಬುಕ್ ಮಾಡಿ ಅಡ್ವಾನ್ಸ್ ಕೊಟ್ಟಿದ್ದಾರೆ. ಆಗ ಅವರು ಮುಸ್ಲಿಮರಿಗೆ ಫ್ಲ್ಯಾಟ್ ಕೊಡಬಾರದು ಎಂಬ ಕಂಡಿಷನ್ ಹಾಕಿದ್ದಾರೆ. ನಾನು ಕೊಟ್ಟ ಮಾತಿಗೆ ತಪ್ಪುವವನಲ್ಲ ಎಂದರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಧಾರ್ಮಿಕ ಮೌಲ್ಯಗಳು ಕಾಲಕಸವಾಗುತ್ತಿವೆ ಎಂಬುದರ ಅರಿವಿದ್ದ ನಾನು ಥ್ಯಾಂಕ್ಸ್ ಹೇಳಿ ಮರಳಿದೆ.

ಬೇಜವಾಬ್ದಾರಿ ಸರ್ಕಾರಗಳಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಸಿಂಗಾಪುರ ಕೇವಲ 20 ಮೈಲಿ ಉದ್ದ ಮತ್ತು 18 ಮೈಲಿ ಅಗಲದ ದೇಶ. ಅಲ್ಲಿ ಇಂಥ ಗೊಂದಲಗಳಿಲ್ಲ. ಅಲ್ಲಿ ಎಲ್ಲ ಜನಾಂಗದವರಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಫ್ಲ್ಯಾಟಗಳನ್ನು ಹಂಚಲಾಗುತ್ತದೆ. ಅದೊಂದು ಅನುಕರಣೀಯವಾದ ಮೀಸಲಾತಿ ವ್ಯವಸ್ಥೆ. ವಿವಿಧ ಧರ್ಮಗಳಿಂದ ಕೂಡಿದ ಅಲ್ಲಿಯ ಜನರಿಗೆ ಕೋಮುವಾದ ಗೋತ್ತೇ ಇಲ್ಲ. ನಮ್ಮಲ್ಲಿ ಕೂಡ ಈ ವ್ಯವಸ್ಥೆ ಜಾರಿಗೆ ಬಂದಾಗ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ನ್ಯಾಯ ಸಿಗುವುದು.

ವಿಚಿತ್ರವೆಂದರೆ ಸಾಮಾನ್ಯ ದಿನಗಳಲ್ಲಿ ದಲಿತರು ಮತ್ತು ಹಿಂದುಳಿದವರು ತಮಗಾಗುವ ಸಾಮಾಜಿಕ ಅಪಮಾನಗಳ ಬಗ್ಗೆ ಮತ್ತು ರಾಜಕೀಯ ಮೋಸಗಾರಿಕೆ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಕೋಮುಗಲಭೆಗಳ ಸಂದರ್ಭದಲ್ಲಿ ಅವರಲ್ಲಿನ ಬಹುಪಾಲು ಜನರು ತಾವು ಹಿಂದುಗಳೆಂದು ಸುಲಿಗೆಕೋರರ ಜೊತೆ ಒಂದಾಗುತ್ತಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರರ ವಿಚಾರಗಳು ಮಾತ್ರ ಈ ದೇಶವನ್ನು ಜಾತಿ ಮತ್ತು ಕೋಮುವಾದಿಗಳಿಂದ ರಕ್ಷಿಸುವ ಸಾಮರ್ಥ್ಯ ಪಡೆದಿವೆ.