ಭಾನುವಾರ, ಏಪ್ರಿಲ್ 16, 2017

ಅಂತರಂಗ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊ೦ದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ.
ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,
ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿ೦ಬಾಲಕರಾಗಿರುವಿರಿ.
ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,
ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎ೦ದು ದುರಾಸೆ ಪಡುವಿರಿ.
ಪತ್ರಿಕೆಗಳಲ್ಲಿ ವೃದ್ದ ತ೦ದೆತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,
ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ.
ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,
ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆ೦ದು ಆಸೆ ಪಡುವಿರಿ.
ಬೇರೆ ಶ್ರೀಮಂತ ಸಮಾರ೦ಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,
ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ.
ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,
ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ.
ಪೋಟೋಗಳಲ್ಲಿ ಸು೦ದರ ಪರಿಸರ, ವಾತಾವರಣ ನೋಡಿ ಆನ೦ದಿಸುವಿರಿ,
ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ.
ಆ೦ತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು,
ಬಹಿರ೦ಗವಾಗಿ ತ್ಯಾಗ ಜೀವಿಗಳನ್ನು ಕೊ೦ಡಾಡುತ್ತೇವೆ.
ಮಾತಿಗೂ, ಕೃತಿಗೂ ಅ೦ತರ ಹೆಚ್ಚಾದಾಗ ಈ ಆತ್ಮವ೦ಚಕತನ ಬೆಳೆಯುತ್ತದೆ.
ಇದಕ್ಕೆ ನಾವ್ಯಾರು ಹೊರತಲ್ಲ, ಆದರೆ ಇದು ಅಪಾಯಕಾರಿ.
ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ನಮ್ಮ ನಡೆಗೂ, ನುಡಿಗೂ ಅ೦ತರ ಕಡಿಮೆ ಇರಲಿ.
ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ - ಮಾಡುವುದನ್ನು ಹೇಳೋಣ.
ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ.
ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ

ವಿವೇಕಾನಂದ. ಹೆಚ್.ಕೆ.