ಮಂಗಳವಾರ, ಏಪ್ರಿಲ್ 18, 2017

ಮುಸ್ಲಿಮರು

ಮುಸ್ಲಿಮರು ಅತೀ ಹೆಚ್ಚು ನೀರು ಪೋಲು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮಸೀದಿಗಳ ವುಝೂ ಖಾನಗಳಿಗೆ ಮಹಾನಗರಪಾಲಿಕೆ ಬೇಸಿಗೆಯಲ್ಲಿ ಬೀಗ ಜಡಿದರೆ ತಪ್ಪು ಇಸ್ಲಾಮಿನದ್ದಲ್ಲ ಬದಲಾಗಿ ಮುಸ್ಲಿಮರದ್ದು"

"ತುಂಬಿ ಹರಿಯುವ ನದಿಯಿಂದಾದರೂ ಅವಶ್ಯಕತೆಗಿಂತ ಹೆಚ್ಚು ನೀರು ಉಪಯೋಗಿಸಬೇಡಿ ವ್ಯರ್ಥಗೊಳಿಸಬೇಡಿ" ಎಂಬ ಇಸ್ಲಾಮಿನ ಬೋಧನೆಗಳು ಯಾವುದೇ ಮಹಾನಗರ ಪಾಲಿಕೆಯ ನೀರು ನಿರ್ವಹಣೆ ಮಂಡಳಿಯ ಘೋಷವಾಕ್ಯವಾಗಲು ಯೋಗ್ಯವಾದದ ಬೋಧನೆಗಳು ನಿಜ. ಆದರೆ ಹಾಗೆ ಎಲ್ಲೂ ಆಗುವುದಿಲ್ಲ ,ಆಗಲಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರು ತಮ್ಮಲ್ಲಿಯೇ ಕೇಳಿಕೊಳ್ಳದ ವರೆಗೆ, ಮುಸ್ಲಿಮರು ಇಸ್ಲಾಮನ್ನು ಅರ್ಥೈಸಿಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ ಎಂಬುವುದು ಅವರಿಗೆ ಅರ್ಥವಾಗುವುದೇ ಇಲ್ಲ. 
    ಇದೊಂದು ಸ್ವಲ್ಪ ಕಹಿ ಪೀಠಿಕೆ, ಮುಂದುವರಿದರೆ ಮತ್ತೂ ಕಹಿ ಅನ್ನಿಸಬಹುದಾದ ವಿಮರ್ಷೆಗಳು. ಹಾಗಂದ ಮಾತ್ರಕ್ಕ ವಿಚಾರಗಳನ್ನು ಮಂಡಿಸದೇ ಉಳಿಯಲು, ಹೌದು ಬಸವ ಹೌದು ,ಅಲ್ಲ ಬಸವ ಅಲ್ಲ ಎಂಬುವುದು ಇಸ್ಲಾಂ ಅಲ್ಲ. ಅದು ಪ್ರಶ್ನೆಗಳ ,ವಿಮರ್ಷೆಗಳ, ವಿಚಾರವಂತಿಕೆಯ, ಮೌಢ್ಯಗಳ, ಶೋಷಣೆಗಳ ವಿರುದ್ಧ ಸೆಟೆದು ನಿಂತ ಒಂದು ಪ್ರಜಾಪ್ರಭುತ್ವ ಯಾ ಜೀವನ ಕ್ರಮ. ಹಾಗಾಗಿಯೇ ಇಲ್ಲಿ ಮೌಲ್ವಿಗಳಿಗೆ ಪ್ರಥಮ ಸಾಲು, ವ್ಯಾಪಾರಿಗೆ ನಂತರದ ಸಾಲು, ಕೂಲಿಯಾಳಿಗೆ ಕೊನೆಯ ಸಾಲು ಎಂಬ ವಿಂಗಡನೆಗಳು ಜಗತ್ತಿನ ಯಾವ ಮಸೀದಿಗಳ ಒಳಗೆ ನುಸುಳಲಿಲ್ಲ.

  ಆದರೆ..‌ ಭಾರತದ ಮಸೀದಿಯ ಹೊರಗಡೆ  ಮುಸ್ಲಿಮರು ಅರಿವಿಲ್ಲದೆಯೇ ಜಾತಿವಾದಿಗಳಾಗುತ್ತಾರೆ. ಮದುವೆ ಸಂಬಂಧಗಳು ಆಯಾ ಅಂತಸ್ತಿನವರ ನಡುವೆಯೇ ಕುದುರುವುದು, ಮದುವೆ ಮನೆಗಳಲ್ಲಿ ವಿಐಪಿ ಊಟಗಳು ಪ್ರತ್ಯೇಕ ಆರ್ಡರ್ ಆಗುವುದು,ಮೌಲ್ವಿಗಳಿಗೆ ಪ್ರತ್ಯೇಕ ಊಟದ ಸುಪ್ರಗಳು ಸಿದ್ಧಗೊಳ್ಳುವುದು, ದಾನ ಮಾಡುವವನು ಮನೆಯ ಮುಂದೆ ರಾಶಿ ಹಾಕಿ ಜನರನ್ನು ಕಾಲಡಿಗೆ ಕರೆಸಿ ಬೋರ್ಡು ತಗುಲಿಸಿ ಸೆಲ್ಫಿ ಕ್ಲಿಕ್ಕಿಸಿ ಕೊಡುವುದು, ಯಾವುದೂ ಇಸ್ಲಾಂ ಅಲ್ಲವೇ ಅಲ್ಲ. ಇಸ್ಲಾಂನ ಆದರ್ಶಗಳನ್ನು ನುಚ್ಚು ನೂರುವ ಮಾಡುವ ಕ್ರತ್ಯಗಳಷ್ಟೇ ಅವುಗಳು. ಇದುವೇ ಭಾರತದ ಜಾತೀಯತೆಯ ಚರಂಡಿ ನಮ್ಮ ಅಂತರ್ಯದಲ್ಲಿ ಹರಿಯುತ್ತಿರುವುದರ ಬಗೆ. ಇದು ಒಪ್ಪಿಕೊಳ್ಳಲು ಅತ್ಯಂತ ಮುಜುಗರವಾಗುವ, ಹಸಿರು ಪಟ್ಟಿ ನೆತ್ತಿಗೆ ಕಟ್ಟಿಕೊಳ್ಳುವ ಮಸ್ಲಿಂ ಯುವಕರಿಗಂತೂ ಉಸಿರುಗಟ್ಟಿಸುವ ವಿಚಾರವೇ ನಿಜ‌.ಆದರೆ ಮೂಲದಲ್ಲಿ ಹಿಂದೂಗಳಾದ ನಾವು ಇಸ್ಲಾಮಿನ ಮೂಸೆಯಿಂದ ಒಂದು ಹನಿಯಷ್ಟೇ ಚಿಮುಕಿಸಿ ಪರಮ ಪವಿತ್ರರು ಎಂದು ಘೋಷಿಸಿಕೊಳ್ಳುತ್ತಾ, ಇಸ್ಲಾಮಿನ ಆದರ್ಶಗಳನ್ನು ಪರಿಪೂರ್ಣ ಜೀವಕ್ರಮವಾಗಿ ಅಳವಡಿಸಿಕೊಳ್ಳಲು ವಿಫಲವಾದ ನಮ್ಮ ಕೊರತೆಯನ್ನು  ಸುಮ್ಮನೇ ಮುಚ್ಚಿಟ್ಟ ಕಾರಣಕ್ಕೇ ಬಾಬಾ ಸಾಹೇಬರಂತಹ ಜ್ಙಾನದ ಬಂಢಾರಗಳೇ ಆದ ವ್ಯಕ್ತಿಗಳಿಗೂ ಇಸ್ಲಾಮನ್ನು ಅರ್ಥೈಸಿಕೊಡಲು ಭಾರತದ ಮುಸ್ಲಿಮರಿಂದ ಸಾಧ್ಯವಾಗಲಿಲ್ಲ‌. ಅದು ಇಲ್ಲಿನ ಮುಸ್ಲಿಮರ ಸೋಲು ಹೊರತು ಇಸ್ಲಾಮಿನ ಸೋಲಲ್ಲ. ಮುಸ್ಲಿಮರು ಇದನ್ನು ಒಪ್ಪಿಕೊಳ್ಳುವಷ್ಟು ವಿಮರ್ಷೆಗಳಿಗೆ ತೆರೆದುಕೊಂಡಿದ್ದಿದ್ದರೆ, ಜಾತಿಕಾರಣಕ್ಕಾಗಿ ಹೀನಾಯವಾಗಿ ಶೋಷಣೆಗೊಳಗಾದ ಅತಿ ದೊಡ್ಡ ಸಮೂಹವೊಂದು ಇಲ್ಲಾ ನಮ್ಮದೇ ಸಹೋದರರು ಇಂದು ಸ್ವಾಭಿಮಾನದ ಬದುಕು ಕಟ್ಡಿಕೊಳ್ಳುತ್ತಿದ್ದರು. ಆದರೆ ಅಂತಹ ಅವಕಾಶವನ್ನು ನಾವು ನಮಗೇ ಸ್ವತಃ ಬಳಸಿಕೊಂಡಿಲ್ಲ.ಬದಲಾಗಿ ನಾವುಗಳೇ ಸಾಚಾರ್ ಸಮಿತಿಯ ವರದಿಯ ಅನುಷ್ಟಾನದ ಕನವರಿಕೆಯಲ್ಲಿ ಬೆನ್ನು ಬಾಗಿಸಿ ನಿಂತಿದ್ದೇವೆ.
     ಸತ್ಯದಲ್ಲಿ ಇಸ್ಲಾಂ ಅನುಸರಿಸಲು ಬಹಳವೇ ಸುಲಭವಾದ ಧರ್ಮವೇನೂ ಅಲ್ಲ.  "ನಾಳೆ ಲೋಕ ಪ್ರಳಯವಾಗುತ್ತದೆ ಎಂದು ತಿಖಳಿದಿದ್ದರೂ ಇವತ್ತು ಗಿಡಗಳನ್ನು ನೆಡು"  "ಅನಾಥರನ್ನು ನಿರ್ಗತಿಕರನ್ನು ದೂರ ತಳ್ಳುವವರು ಇಸ್ಲಾಮನ್ನು ಸುಳ್ಳು ಮಾಡಿದವರು" "ಯಾರ ಕೈ ಮತ್ತು ಬಾಯಿಯಿಂದ ನೆರೆಹೊರೆಯವರು ಸುರಕ್ಷಿತವಾಗಿಲ್ಲವೋ ಅವನು ಮುಸ್ಲಿಮನಲ್ಲ" "ನಿಮ್ಮ ಸಂಪತ್ತಿನಿಂದ ಬಡವರ ಪಾಲನ್ನು ನ್ಯಾಯಯುತವಾಗಿ ಎತ್ತಿಕೊಡಿರಿ" "ಜನರ ನಡುವೆ ಅಕ್ರಮವೆಸಗದಿರಿ, ಅಕ್ರಮ ಎಸಗುವವರನ್ನು ದೇವನು ಇಷ್ಟಪಡುವುದಿಲ್ಲ" "ಜನರಿಗೆ ವ್ಯವಹಾರ ತೂಕ ತಕ್ಕಡಿಗಳಲ್ಲಿ ವಂಚಿಸಬೇಡಿರಿ" "ಯುದ್ಧಗಳಲ್ಲಿ ಮಹಿಳೆಯರ ಮಕ್ಕಳ ವ್ರಧ್ದರ ಮೇಲೆ ಅಕ್ರಮಿಸದಿರಿ, ಇತರ ಧರ್ಮದ ಧರ್ಮಗುರುಗಳ ಮೇಲೆ, ಧಾರ್ಮಿಕ ಕೇಂದ್ರಗಳ ಮೇಲೆ ಆಕ್ರಮಣಗೈಯದಿರಿ"  "ಕರಿಯನಿಗಿಂತ ಬಿಳಿಯನು ಶ್ರೇಷ್ಟನಲ್ಲ, ಬಿಳಿಯನಿಗಿಂತ ಕರಿಯನು ಶ್ರೇಷ್ಠನಲ್ಲ, ಶ್ರೇಷ್ಠತೆಯು ಧರ್ಮನಿಷ್ಠೆ ಹೊಂದುವುದಾಗಿದೆ"  "ಆಹಾರ ಅನ್ನ ನೀರನ್ನು ದುಂದುವೆಚ್ಚದಿಂದ ವ್ಯರ್ಥಗೊಳಿಸಬೇಡಿರಿ" "ದಾರಿಯಲ್ಲಿರುವ ತೊಡಕುಗಳನ್ನು ನೀಗಿಸದೆ ಮುಂದೆ ಸಾಗಬೇಡಿರಿ"  ಇಂತಹ ಬೋಧನೆಗಳನ್ನು ಚಾಚೂ ತಪ್ಪದೆ ಪಾಲಿಸುವುದು ಸಾಧ್ಯವಾಗಲು ಮುಸ್ಲಿಮನೆಂಬ ಹೆಸರು ಹೊತ್ತಷ್ಟೇ ಸುಲಭವಲ್ಲ. ಅದು ಅದಮ್ಯ ಸಹನೆಯನ್ನು ಬೇಡುತ್ತದೆ. ಶರಣಾಗತಿಯ ಮನೋಭಾವವನ್ನು ಬೇಡುತ್ತದೆ. ಎಲ್ಲಾ ಅನಾಚಾರ ಅನ್ಯಾಯ ಮಿಥ್ಯೆ ಕೆಡುಕುಗಳಿಗೆ ಎದುರಾಗಿ ಅಲ್ಲಾಹನಿಗೆ ಶರಣಾಗುವ ಅತೀವ ವಿನಯ ಬೇಡುತ್ತದೆ. ಹಾಗಾಗಿ ಇಸ್ಲಾಂ ಅಹಂಕಾರವಿರುವಲ್ಲಿ ನೆಲೆ ನಿಲ್ಲುವುದಿಲ್ಲ. ಅಹಂಕಾರವೆಂದರೆ ವುಝೂ ಮಾಡುವ ಮುಂಚೆ ಬಾಯಿ ತೊಳೆಯುವ ಸಮಯದಲ್ಲಿ ತೆರೆದಿಟ್ಟು ಪೋಲಾಗಿಸುವ ನೀರೂ ಆಗಿರಬಹುದು.  ಒಂದು ಹನಿ ನೀರನ್ನೂ ವ್ಯರ್ಥಗೊಳಿಸಬಾರದು ಎಂಬುವುದಾಗಿದೆ ಅಲ್ಲಾಹನ ಆಜ್ಙೆ ಎಂದು ಸಂಪೂರ್ಣವಾಗಿ ಒಪ್ಪಿಕೊಳ್ಳುವ ವಿನಯ ಇರುವವರಿಗೆ ಆ ಅಹಂಕಾರ ಹತ್ತಿರ ಸುಳಿಯುವುದಿಲ್ಲ. ಅಲ್ಲಾಹನ್ನು ಅರ್ಧವೇ ತಿಳಿದುಕೊಂಡು  ಕಾಲುಭಾಗದಷ್ಟು ಅನುಸರಿಸುವ ಮುಸ್ಲಿಮರು ಇಸ್ಲಾಮಿನ ಪ್ರತಿನಿಧಿಗಳಾಗಿ ಬಿಟ್ಟರೆ ಇಸ್ಲಾಂ ಮನುಷ್ಯ ಸಂಕುಲದ ಒಳಿತು ಮತ್ತು ವಿಮೋಚನೆಯನ್ನು ಒಳಗೊಂಡಿದೆ ಎಂಬ ಸಂದೇಶವನ್ನು ತಲುಪಿಸುವುದು ಸುಲಭಸಾಧ್ಯವಲ್ಲ.
       ಒಂದು ಹಂತಕ್ಕೆ, ಮುಸ್ಲಿಮರು ಇಸ್ಲಾಂನ ಬೋಧನೆಗಳನ್ನು ಪ್ರಾಮಾಣಿಕತೆಯಿಂದ ಪಾಲಿಸಿದ್ದೇ ಆದಲ್ಲಿ, ಕನಿಷ್ಟ ಹದಿನೆಂಟು ಕೋಟಿ ಜನತೆಯಾದರೂ ದೇಶಕ್ಕೆ ನೆಮ್ಮದಿ ನೀಡುವ ಪ್ರಜೆಗಳಿರುತ್ತಿದ್ದರು... ಮೋಸ ಮಾಡದ ವ್ಯಾಪಾರಿ, ವ್ಯಭಿಚಾರವೆಸಗದ ಯುವಕ, ಕಳ್ಳತನ ಕೊಲೆ ಸುಲಿಗೆ ಮಾಡದ ಯುವಸಮೂಹ, ಮದ್ಯ ಮಾದಕ ದ್ರವ್ಯಗಳ ದಾಸರಾಗದ ವಿಧ್ಯಾರ್ಥಿ ಸಮೂಹ, ಅನ್ಯಾಯವೆಸಗದ ಧನಿಕ, ಅನಾಥರನ್ನು ಸಲಹುವ ಮಹಿಳೆಯರು, ಕೆಡುಕನ್ನು ಪ್ರಚೋದಿಸದ ಗ್ರಹಸ್ಥ ಹೀಗೆ ಹಲವಾರು ವಿಧಗಳಲ್ಲಿ ದೇಶಕ್ಕೆ ನೆಮ್ಮದಿ ನೀಡುವ ಒಂದು ಜನವಿಭಾಗ ಸಿದ್ಧವಾಗುತ್ತಿತ್ತು.. ಸಿಧ್ದವಾಗಬೇಕಿತ್ತು. ಆದರೆ ಗಂಗೆಯ ಪ್ರವಾಹದೊಟ್ಟಿಗೆ ಹರಿದ ಭಾರತದ ಮುಸ್ಲಿಮರು ತಮ್ಮ ಮೂಲ ನೆಲೆಗಳಿಂದ ಸಶಕ್ತವಾಗಿ ಹೊರಬಂದಿದ್ದರೆ ಹಣೆಗೆ ತಿಲಕ ಇಟ್ಟವರು ನಮ್ಮ ಜನ ಅಲ್ಲ ಎಂದು ಹೇಳುವು ಮೂರ್ಖತನಗಳಲ್ಲಿ ಮಾತ್ರವೇ ಹೊರತು, ಇಸ್ಲಾಂನ ಸೌಂದರ್ಯದಿಂದ ಬಹಳ ದೂರದ ಅಂತರವನ್ನು ಕಾಯ್ದುಕೊಂಡಿದ್ದಾರೆ... ಇಸ್ಲಾಂ, ಅರ್ಧ ರಾತ್ರಿಯಲ್ಲಿ ಹಸಿದವರನ್ನು ಹುಡುಕಿ ನಡೆದ ಖಲೀಫಾ ಉಮರ್ ರವರ ಆಡಳಿತ ಜೀವನ ಕ್ರಮವನ್ನು ಪ್ರತಿನಿಧಿಸುತ್ತದೆಯೇ ಹೊರತು ಇಂದಿನ ಸೌದಿ ದೊರೆಗಳನ್ನಲ್ಲ‌. ಇಸ್ಲಾಂ ಶೋಷಣೆಗೊಳಗಾದವರ ವಿಮೋಚನೆಗಾಗಿ ಇರುವ ಧರ್ಮವಲ್ಲ ಎಂದು ಹೇಳುವ ಮುಸ್ಲಿಮರು ತಮ್ಮ ಹ್ರದಯವನ್ನು ವಿಮರ್ಷೆಗೊಳಪಡಿಸಿಯೇ ತೀರಬೇಕು‌. ಧರ್ಮವೆಂದರೆ ಅನಾಥರನ್ನು ನಿರ್ಗತಿಕರನ್ನು ಶೋಷಿತರನ್ನು ಪೋಷಿಸುವುದು, ಮೇಲೆತ್ತುವುದು ಎಂದು ಬೋಧಿಸಿದ ಧರ್ಮವೊಂದರ ಅನುಯಾಯಿಗಳಿಗೆ ಅಂತಹ ಕನಿಷ್ಠ ವಿವೇಚನೆಯಾದರೂ ಇರಲೇಬೇಕು
     (ಮುಂದುವರಿಯುವುದು)