ಶುಕ್ರವಾರ, ಏಪ್ರಿಲ್ 28, 2017

ಪ್ರಶಾಂತತೆ

ನಿಂದನೆ ಆಪಾದನೆಯನ್ನು ಸ್ವಾಗತಿಸಿ ವ್ಯಕ್ತಿ ಇನ್ನಷ್ಟು ಪ್ರಶಾಂತತೆಯನ್ನು ಪಡೆಯುತ್ತಾನೆ..

ಜಪಾನಿನಲ್ಲಿ ನಡೆದ ಘಟನೆಯಿದು.
ಒಬ್ಬ ಬೌದ್ದ ಭಿಕ್ಕು ಆಗ ಎಲ್ಲಾ ಪ್ರಜೆಗಳಿಗೂ ತುಂಬಾ ಪ್ರೀತಿ ಪಾತ್ರನಾಗಿದ್ದ. ಭಿಕ್ಕುವಿನ ಬೋಧನೆ ಕೇಳಲು ಹಲವಾರು ಜನರು ಸದಾ ಬರುತ್ತಿದ್ದರು. ಭಿಕ್ಕುವಿನ ಪಕ್ಕದ ಮನೆಯಲ್ಲೇ ಒಂದು ಕುಟುಂಬ ವಾಸವಾಗಿತ್ತು. ಗಂಡ, ಹೆಂಡತಿ ಮತ್ತು ಹದಿಹರೆಯದ ಮಗಳು ಇದ್ದರು. ಇವರೂ ಭಿಕ್ಕುವಿನ ಬಳಿ ಸದಾ ಬೋಧನೆ ಕೇಳಲು ಹೋಗುತ್ತಿದ್ದರು.

    ಒಮ್ಮೆ ಈ ಕುಟುಂಬದ ಹದಿಹರೆಯದ ಮಗಳು ಗರ್ಭವತಿ ಆಗುತ್ತಾಳೆ. ಇವರ ತಂದೆ ತಾಯಿಗೆ ವಿಷಯ ತಿಳಿದು ಇದಕ್ಕೆ ಕಾರಣ ಯಾರೆಂದು ಚೆನ್ನಾಗಿ ಥಳಿಸಿ ಕೇಳುತ್ತಾರೆ. ಭಯಭೀತಳಾದ ಮಗಳು " ಆ ಬೌದ್ದ ಭಿಕ್ಕುವೇ ಕಾರಣ " ಎಂದು ಹೇಳುತ್ತಾಳೆ.
ಇದನ್ನು ಕೇಳಿದ್ದೆ ತಡ ಆ ಇಬ್ಬರೂ ಇಡೀ ಊರನ್ನು ಕರೆದು,  ಮಾಧ್ಯಮಗಳನ್ನು ಕರೆದು ಭಿಕ್ಕುವಿನ ಬಳಿ ಹೋಗುತ್ತಾರೆ. ಭಿಕ್ಕು ಧ್ಯಾನದಲ್ಲಿ ಕುಳಿತಿರುತ್ತಾನೆ. ಆಗ ಆ ದಂಪತಿಗಳು ಭಿಕ್ಕುವನ್ನು ಕುರಿತು " ನಮ್ಮ ಮಗಳ ಜೀವನ ನಾಶ ಮಾಡಿದ್ದು ನೀನೇ ಈಗ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ , ಇನ್ನು ಮುಂದೆ ನೀನೇ ಆ ಮಗುವನ್ನು ಸಾಕಬೇಕು " ಎಂದು ಹೇಳುತ್ತಾರೆ.
ಅದಕ್ಕೆ ಭಿಕ್ಕು ಒಂದು ಚೂರೂ ವಿಚಲಿತನಾಗದೇ " ಹೌದಾ,  ಸರಿ " ಎಂದು ಹೇಳುತ್ತಾನೆ. ಮಾಧ್ಯಮಗಳೆಲ್ಲಾ ಆ ಭಿಕ್ಕುವನ್ನು ಕಾಮಿಯೆಂದು,  ನೀಚನೆಂದು ಹೇಳಿ ಬರೆಯುತ್ತಾರೆ. ಅಂದಿನಿಂದ ಭಿಕ್ಕುವಿನ ಬಳಿ ಹೋಗುವುದನ್ನು ನಿಲ್ಲಿಸುತ್ತಾರೆ.
ಸ್ವಲ್ಪ ದಿನಗಳ ನಂತರ ದಂಪತಿಗಳ ಮಗಳಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸುತ್ತದೆ. ಆ ಮಗುವನ್ನು ತಂದು ಭಿಕ್ಕುವಿಗೆ ಒಪ್ಪಿಸಿ ನೀನೇ ಸಾಕಬೇಕೆಂದು ಹೇಳುತ್ತಾರೆ. ಆಗಲೂ ಭಿಕ್ಕು ಒಂದೇ ಮಾತು ಹೇಳುತ್ತಾನೆ " ಹೌದಾ,  ಸರಿ ".
ಆ ಎಳೆಯ ಮಗುವನ್ನು ಪ್ರೀತಿಯಿಂದ ಎತ್ತಿಕೊಂಡು ಸುಮಾರು ದಿನಗಳು ಅದರ ಲಾಲನೆ,  ಪಾಲನೆ ಮಾಡುತ್ತಾ ಬೆಳೆಸುತ್ತಿರುತ್ತಾನೆ. ಕೊನೆಗೆ ಒಂದು ದಿನ ಮಗುವಿನ ತಾಯಿಯಾದ ಆ ಹದಿಹರೆಯದ ಹೆಣ್ಣು ಮಗಳು ಯಾರೋ ಒಬ್ಬ ಯುವಕನ್ನು ಕರೆದುಕೊಂಡು ಬರುತ್ತಾಳೆ.  ಭಿಕ್ಕು ಮತ್ತು ಆ ದಂಪತಿಗಳ ಬಳಿ ಆ ಯುವಕನ್ನು ಕರೆತಂದು ಹೇಳುತ್ತಾಳೆ " ಓ ಮಹಾ ಭಿಕ್ಕುವೇ ನನ್ನನ್ನು ಕ್ಷಮಿಸಿ, ನಾನು ಮಾಡಿದ ತಪ್ಪಿಗೆ ನೀವು ಶಿಕ್ಷೆ ಅನುಭವಿಸುತ್ತಿದ್ದೀರ. ಈ ಯುವಕನೇ ಆ ಮಗುವಿನ ತಂದೆ ನಿಜವಾದ ತಂದೆ. ನಮ್ಮ ತಪ್ಪಿನ ಅರಿವಾಗಿದೆ ದಯವಿಟ್ಟು ನಮ್ಮ ಮಗುವನ್ನು ಹಿಂದಿರುಗಿಸಿ " ಎಂದು ಗೋಗರೆಯುತ್ತಾಳೆ. ಭಿಕ್ಕು ಏನೂ ಮಾತಾಡದೆ ಆ ಮಗುವನ್ನು ಅವರಿಗೆ ಒಪ್ಪಿಸುತ್ತಾನೆ. ಆ ದಂಪತಿಗಳೂ ಭಿಕ್ಕುವಿನ ಪಾದಕ್ಕೆರಗಿ ಕ್ಷಮೆ ಕೇಳುತ್ತಾರೆ.
ನಂತರ ಊರಿನ ಜನರು, ಮಾದ್ಯಮಗಳು ಬಂದು " ಭಿಕ್ಕುಗಳೇ ನೀವು ನಿರಪರಾಧಿ " ಎಂದು ಹೇಳುತ್ತಾರೆ.
ಆಗಲೂ ಆ ಭಿಕ್ಕು ಒಂದೇ ಮಾತು ಹೇಳುತ್ತಾರೆ " ಹೌದಾ,  ಸರಿ " ಎಂದು.
ಮೊದಲಿಗಿಂತಲೂ ಹೆಚ್ಚು ಜನರು ಭಿಕ್ಕುವಿನ ಬಳಿ ಬರಲು ಪ್ರಾರಂಭಿಸುತ್ತಾರೆ. ಮೊದಲಿಗಿಂತಲೂ ಹೆಚ್ಚು ಪ್ರಖ್ಯಾತರಾಗುತ್ತಾರೆ. ಆದರೆ ಭಿಕ್ಕು ಮಾತ್ರ ಮೊದಲು ಹೇಗಿದ್ದನೋ ಅದೇ ರೀತಿ ಇರುತ್ತಾನೆ.

ಮಿತ್ರರೇ ಒಂದೇ ಒಂದು ಸಣ್ಣ ಆಪಾದನೆಯನ್ನೂ ಸ್ವಾಗತಿಸಲು ಸಾಧ್ಯವಾಗದೇ over react ಆಗುವ ನಾವುಗಳು ಒಂದು ವಿಷಯ ನೆನಪಿಡಬೇಕು. ಆಪಾದನೆಗಳು ಎಷ್ಟೇ ಬರಲಿ ನಾವುಗಳು ನಮ್ಮ ಮಾರ್ಗದಲ್ಲಿ ಪ್ರಾಮಾಣಿಕರಾಗಿ ಇರುವವರೆಗೂ ಯಾವ ಆಪಾದನೆಗಳೂ ನಮ್ಮನ್ನು ಜಯಿಸಲು ಸಾಧ್ಯವಾಗುವುದಿಲ್ಲ.

ಜನಾ ನಾಗಪ್ಪ..