(ವಿಮರ್ಷಿಸಿಕೊಳ್ಳುವ ಮುಸ್ಲಿಂ- ಹಳೆಯ ಪೋಸ್ಟ್ ನಿಂದ ಮುಂದುವರಿಸುತ್ತಾ)
ನೀವು ದಿನನಿತ್ಯ ಭೇಟಿ ಕೊಡುವ ಪರಿಚಯದ ಹೆಸರಾಂತ ಉದ್ಯಮಿಯ ಹೋಟೆಲೊಂದರಲ್ಲಿ, ಅಥವಾ ನಿಮಗೆ ತುಂಬಾ ಬೇಕಾದವರ ಗತ್ತು ಗೈರತ್ತಿನನವರ ಗುತ್ತಿನ ಮನೆಯಲ್ಲಿ ಮೈಗೆ ಚಹಾ ಚೆಲ್ಲಿತು ಎಂಬ ಕಾರಣಕ್ಕೆ ನಿಮ್ಮ ಕಣ್ಣ ಮುಂದೆ ಒಬ್ಬ ಕೆಲಸದವನನ್ನ ಥಳಿಸಲಾಗುತ್ತದೆ ಅಂತಿಟ್ಟುಕೊಳ್ಳಿ. ಈ ಸಂದರ್ಭದಲ್ಲೆಲ್ಲ ನಾವು ಕಾಣಲು ಸಿಗುವುದು, "ಹೋಗಲಿ ಬಿಡಿ ಶೆಟ್ರೇ, ಕ್ಷಮಿಸಿ ಬಿಡಿ ಹಾಜಾರರೇ ಅನ್ನುತ್ತಾ ,ಹುಡುಗನಿಗೆ ನಾಲಕ್ಕು ಹುಸಿ ದಬಾಯಿಸಿದಂತೆ ಮಾಡಿ ಸರಿ ಕೆಲಸ ಮಾಡಲಿಕ್ಕಾಗುವುದಿಲ್ಲವೇನೋ ನಿನ್ಗೆ, ಹುಹ್ ಹೋಗು ಹೋಗು ಎಂದು ಅತ್ತ ಕೋಲೂ ಮುರಿಯದಂತೆ, ಇತ್ತ ಹಾವೂ ಸಾಯದಂತೆ ಶೆಟ್ಟರ ಹಾಜಾರರ ಸಂಭಂಧ ಏನೂ ಆಗದಂತೆ ಉಳಿಸಿಕೊಳ್ಳುವವರ ದೊಡ್ಡ ಸಂಖ್ಯೆಯ ಜನರು, ತದನಂತರ ಬರುವವರು ಹಾಜಾರರೊಂದಿಗೆ ಇಲ್ಗಾ ಶೆಟ್ಟರೊಂದಿಗೆ ಸೇರಿ ತಾನೂ ನಾಲಕ್ಕು ಬಾರಿಸುವ ಇಲ್ಲ ಬೈಯುವ ಕೆಡುಕಿನ ಗುಲಾಮಗಿರಿಗೆ ಜೋತುಬಿದ್ದ ಮತ್ತೊಂದು ವರ್ಗ, ಮತ್ತೆ ಅಲ್ಲಿ ಏನೂ ಮಾತನಾಡದೆ ಗೋಡೆಯ ಮರೆಯಲ್ಲಿ ಬಂದು ಅಳುವ ಹುಡುಗನ ಕಣ್ಣೊರೆಸುವ ಅತ್ತ ಧರಿ ಇತ್ತ ಪುಲಿ ವ್ಯವಸ್ಥೆಯ ನಡುವೆ ಕನಿಷ್ಟ ಪಕ್ಷದ ನೈತಿಕತೆ ಕಾಯ್ದುಕೊಳ್ಳುವ ವರ್ಗ. ಆದರೆ ಅದರ ನಂತರ ಬರುವ ಏಕೈಕ ವರ್ಗ, ಮತ್ತು ಅತೀ ಕಡಿಮೆ ಸಂಖ್ಯೆಯ ಜನರ ಒಂದು ವರ್ಗ, ಅವರಿಂದ ದೊರೆಯಬಹುದಾದ ಎಲ್ಲಾ ಉಪಕಾರಗಳನ್ನು ಬದಿಗೊತ್ತಿ, ಸಿಗಬಹುದಾದ ಪ್ರಯೋಜನಗಳನ್ನು ಕಳಕೊಳ್ಳಬಹುದಾದ ಭೀತಿಯನ್ನು ಬಿಟ್ಟು ," ಹಾಜಾರರೇ ನೀವು ದೌರ್ಜನ್ಯವೆಸಗುತ್ತಿದ್ದೀರಿ, ಶೆಟ್ರೇ ನೀವು ಅಕ್ರಮಿಸುತ್ತಿದ್ದೀರಿ. ನೀವು ಕ್ಷಮೆ ಕೇಳಬೇಕು ಆ ಹುಡುಗನ ಬಳಿ ಎಂದು ಸ್ಪಟಿಕದಷ್ಟು ಸ್ಪಷ್ಟವಾಗಿ ನ್ಯಾಯ ಹೇಳುವವರು" . ಈ ಕಡೆಯ ವರ್ಗದ ಜೊತೆಗೆ ಗುರುತಿಸಿಕೊಳ್ಳುವ, ನ್ಯಾಯದಲ್ಲಿ ,ಸತ್ಯದ ಪರವಹಿಸುವಿಕೆಯಲ್ಲಿ ರಾಜಿ ಮಾಡಿಕೊಳ್ಳದ ಯಾರಾದರೂ ಈ ಪೋಸ್ಟನ್ನ ಓದುತ್ತಿದ್ದರೆ ನಾನವರನ್ನು ಮುಸ್ಲಿಂ ಎಂದು ಸಂಬೋಧಿಸುತ್ತೇನೆ. ಅರ್ಥಾತ್ ಸತ್ಯದ ಅನುಸರಣೆ ಉಳ್ಳವನು. ಸತ್ಯದ ನ್ಯಾಯದ ಮುಂದೆ ಸಮರ್ಪಿಸಿಕೊಂಡವನು. ಆತನ ಹೆಸರು ಗಣೇಶನೇ ಇರಲಿ ರಾಬರ್ಟ್ ಆಗಿರಲಿ ಆತ ಹ್ರದಯದ ಆಳದಲ್ಲಿ ಕನಿಷ್ಟ ಇಸ್ಲಾಮನ್ನು ಹೊಂದಿದ್ದಾನೆ. ಹೀಗೆ ಇಸ್ಲಾಂನ ಪ್ರಥಮ ಪಾಠ ಏನು ಎಂಬುವುದನ್ನು ನನ್ನದೇ ಧರ್ಮದ ಹುಡುಗರಿಗೆ ಅರಿವಿಗೆ ತರಲು ಬಯಸುತ್ತೇನೆ.
ಈ ಮೇಲಿನ ಉದಾಹರಣೆಯನ್ನು ಯಾಕೆ ಕೊಡಬೇಕಾಯಿತು ಅಂದರೆ, ನಾನು ಕಂಡಂತೆ ನಮ್ಮ ಮುಸ್ಲಿಂ ಹುಡುಗರು ಸದಾ ಕೊಟ್ಟುಬಿಡುವ ಒಂದು ತೀರ್ಪಿದೆ. "ಹಿದಾಯತ್ (ಅರ್ಥಾತ್ ದೇವಾನುಗ್ರಹ) ದೊರಕದೆ ಯಾರು ಏನು ಮಾಡಿದರೂ ಆತ ಮುಸ್ಲಿಮನಾಗುವುದಿಲ್ಲ" ಎಂದು ಸರಾಸಾಗಾಟವಾಗಿ ಎದುರಿಗಿರುವ ಅನ್ಯ ಧರ್ಮೀಯರನ್ನು ತುಚ್ಛವಾಗಿ ಕಾಣುವ ತೀರ್ಪು ನೀಡಿಬಿಡುವ ಹುಡುಗರಿದ್ದಾರೆ. ನಿಜಕ್ಕೂ ಇದು ಇಸ್ಲಾಮನ್ನು ಅರಿತುಕೊಳ್ಳದವರ ಇಲ್ಲಾ ಇಸ್ಲಾಮನ್ನು ನಿರ್ಧಿಷ್ಟ ಪರಿಧಿಯೊಳಗಿಟ್ಟು ನೋಡಿದರ ಪರಿಣಾಮ. ಹಿದಾಯತ್ ಕೊಡಲ್ಪಡುವುದು ಮತ್ತು ಮುಸ್ಲಿಮನಾಗುವುದು ಎಂದಷ್ಟೇ ಆಗಿದ್ದರೆ ಪ್ರವಾದಿಗಳು , ಅನುಯಾಯಿಯಗಳು ಯಾವ ಕಷ್ಟ ಕೋಟಲೆಗಳನ್ನೂ ಮೈಗೆಳೆದುಕೊಳ್ಳುತ್ತಿರಲಿಲ್ಲ. ಹುಟ್ಟಿದ ನಾಡಿನಿಂದ ಪಲಾಯನ ಮಾಡುವ ಕಠಿಣ ನಿರ್ಧಾರಗಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಿರಲಿಲ್ಲ. ಕುರಾನ್ ಓದುತ್ತಾ, ಜನರಿಗೆ ಕೇಳಿಸುತ್ತಾ, ಕೇಳಿದವರು ಕೇಳಲಿ ಬಿಟ್ಟವರು ಬಿಡಲಿ ಎಂದು ಕಳೆದುಬಿಡುತ್ತಿದ್ದರು. ಆದರೆ ಅವರೆಂದೂ ನಮ್ಮ ಹಾಗೆ ತೀರ್ಪು ನೀಡುತ್ತಾ ಕುಳಿತ ಸ್ವಾರ್ಥಿಗಳಾಗಿರಲಿಲ್ಲ. ಅವರು ತನ್ನಂತೆಯೇ ತನ್ನ ಇತರ ಮನುಷ್ಯ ಸಹೋದರರು ಕೂಡ, ಅವರನ್ನೂ ಒಳಿತಿನೆಡೆಗೆ ಆಹ್ವಾನಿಸಬೇಕು ಎಂದು ಅದಮ್ಯ ಬಯಕೆ ಹೊತ್ತ ಹಿದಾಯತ್ ಹೊಂದಿದವರಾಗಿದ್ದರು. ಹಾಗಾಗಿಯೇ ಪ್ರವಾದಿಯವರು ಪ್ರಾರ್ಥಸಿದ್ದು ಇಸ್ಲಾಮನ್ನು ಉಮರ್ ನ ಮೂಲಕ ಬಲಿಷ್ಟಗೊಳಿಸು, ಅರ್ಥಾತ್ ಕೆಡುಕಿನ ನಾಯಕನನ್ನೇ ಸತ್ಯದ ಕಡೆಗೆ ಕೊಡುವ ಮೂಲಕ ಉಮರ್ ನ ಸುತ್ತಲಿರುವ ಸರ್ವ ಯುವಕರಿಗೂ ಒಳಿತನ್ನು ಕೊಡು ಎಂಬಂತೆ. ಪರಿಣಾಮ ರುಂಡ ಎತ್ತಿಕೊಂಡು ಬರುತ್ತೇನೆಂದು ಸವಾಲು ಹಾಕುತ್ತಾ ಕುದುರೆಯೇರಿ ಹೊರಟ ಉಮರ್ ಮರಳಿದ್ದು ನಾನು ಮುಸ್ಲಿಮ್ ಎಂದು ಘೋಷಿಸಿಕೊಳ್ಳುತ್ತಾ. ಹೀಗಿರುವಾಗ, ಸದಾ ಧರ್ಮ ಧರ್ಮಗಳ ನಡುವೆ ಕೆಸರೆರಚುತ್ತಾ ಅನ್ಯರ ದೇವರು ನಂಬಿಕೆಗಳನ್ನು ಕೆಟ್ಟದಾಗಿ ಬೈಯುತ್ತಾ ಹಿದಾಯತ್ ನ ಕಾಂಟ್ರಾಕ್ಟ್ ಹೊತ್ತು ತಿರುಗುತ್ತಾ ಎಫ್ಬಿಯಲ್ಲಿ ಕಳೆಯುವ ಪ್ರತಿಯೊಬ್ಬ ಮುಸ್ಲಿಮನೂ ತನ್ನ ಧರ್ಮದ ಬೋಧನೆಯ ಕಡೆಗೆ ಸರಿಯಾಗಿ ಮರಳಿದ್ದಿದ್ದರೆ ಅದೆಷ್ಟು ಚೆಂದವಿರುತ್ತಿತ್ತು.
ಇದೇ ಉಮರ್ ರ ಸಹಿತವೇ ಅಲ್ಲವೇ , ಮಕ್ಕಾದ ತುಂಬಾ ಹರಡಿಕೊಂಡಿದ್ದ ಜೂಜು, ಸುಲಿಗೆ, ವ್ಯಭಿಚಾರ,ಮದ್ಯಪಾನ, ಅತ್ಯಾಚಾರ, ದರೋಡೆ,ಡಕಾಯಿತಿ,ಕೊಲೆ, ಬಡ್ಡಿ ದಂಧೆ, ಹೆಣ್ಣು ಮಕ್ಕಳನ್ನು ಜೀವಂತ ಹೂಳುವುದು, ಕಾರ್ಮಿಕರನ್ನು ಕ್ರೂರವಾಗಿ ಮರ್ದಿಸುವುದು, ಅಸಹಾಯಕರ ಸೊತ್ತುಗಳನ್ನು ಕಬಳಿಸುವುದು ಮುಂತಾದ ಅನಾಚಾರಗಳನ್ನು ಇಸ್ಲಾಂ ತೊಲಗಿಸಿದ್ದು ? ನ್ಯಾಯ ಅನ್ಯಾಯಗಳು ಕಲಸುಮೇಲೊಗರವಾಗಿದ್ದಾಗ ಅವುಗಳನ್ನು ಸ್ಪಷ್ಟವಾಗಿ ವಿಂಗಡಿಸಿ ನ್ಯಾಯದ ಬದಿಯನ್ನು ಸ್ಪಷ್ಟವಾಗಿ ಎತ್ತಿ ಹಿಡಿದಿದ್ದು ? ಇಸ್ಲಾಂ ನ ಇಂತಹಾ ನ್ಯಾಯಪಾಲನೆಯೇ, ಯುಧ್ದ ರಂಗದಲ್ಲಿ ಎದುರಾಳಿಯ ಎದೆಯ ಮೇಲೆ ಕುಳಿತು ಇನ್ನೇನು ಕೊಲ್ಲಬೇಕು ಎನ್ನುವಾಗ ಆತ ಮುಖಕ್ಕೆ ಉಗುಳಿ ಬಿಟ್ಟ ಕಾರಣಕ್ಕೆ ಆತನನ್ನು ಕೊಲ್ಲದೇ ಬಿಟ್ಟು ಎದ್ದ ಪ್ರವಾದಿಯವರ ಅನುಯಾಯಿಗಳ ಚರಿತ್ರೆಗಳು ಕಾಣಸಿಗುವುದು. ಶತ್ರುವಿನ ಎದೆಯಿಂದ ಕೊಲ್ಲದೇ ಅವರು ಎದ್ದದ್ದಾದರೂ ಯಾಕಾಗಿತ್ತು ಗೊತ್ತೇ.? ಮೊದಲು ಆತನ ಎದೆಯ ಮೇಲೆ ಕುಳಿತು ಕತ್ತಿ ಎತ್ತಿದ್ದು, ಆತ ಜನ ಸಮೂಹದ ನಡುವೆ ಸುಲಿಗೆ ಡಕಾಯಿತಿ ಅತ್ಯಾಚಾರ ಬಡ್ಡಿ ದಂಧೆ ಮುಂತಾದ ಕಾರಣಗಳ ಮೂಲಕ ಕ್ಷೋಭೆ ಉಂಟು ಮಾಡುವ ಕಾರಣಕ್ಕಾಗಿಯಾಗಿತ್ತು. ಯಾವಾಗ ಆತ ಮುಖಕ್ಕೆ ಉಗುಳಿದನೋ, ಆ ಕ್ಷಣದಿಂದ ಅವರು ಎತ್ತಿದ ಕತ್ತಿ ಉಗುಳಿದ ದ್ವೇಷಕ್ಕೆ ಪ್ರತಿಯಾಗಿ ಅಥವಾ, ತನ್ನ ವೈಯಕ್ತಿಕ ಅಹಂ ಗೆ ಪೆಟ್ಟಾಗಿದುದಕ್ಕಾಗಿ ಆತನನ್ನು ಕೊಲ್ಲುವುದಾದರೆ ಇಸ್ಲಾಮಿನ ನ್ಯಾಯಾಲಯದಲ್ಲಿ ಅದು ಅನ್ಯಾಯವಾದೀತು ಎಂಬ ಅದಮ್ಯ ಸೂಕ್ಷ್ಮತೆಯಾಗಿತ್ತು ಅವರಲ್ಲಿ ಇಸ್ಲಾಂ ಬಿತ್ತಿ ಕೊಟ್ಟದ್ದು. ಅಂತಹ ಮುಸ್ಲಿಮನನ್ನು ಯಾರಾದರೂ ಭಯೋತ್ಪಾದಕರು, ಉಗ್ರಗಾಮಿಗಳು, ಮತೀಯವಾದಿಗಳು ಎಂದು ಬೆರಳು ತೋರಿಸಲು ಸಾಧ್ಯವಾಗುತ್ತಿತ್ತೇ. ಇದನ್ನೆಲ್ಲಾ ಅವಲೋಕಿಸುವಾಗ ನಾವು ಕೈಬಿಟ್ಟಿರುವ ಧರ್ಮ ಸೂಕ್ಷ್ಮತೆಗಳ ಕಡೆಗೆ, ನಮ್ಮ ಸ್ವಾರ್ಥಕ್ಕನುಸಾರವಾಗಿ ತಿರುಚಿರುವ ಧರ್ಮದ ರೀತಿ ರಿವಾಜುಗಳಿಂದ ಪರಿಪೂರ್ಣ, ಪರಿಶುದ್ಧತೆಯ ಧರ್ಮದ ಕಡೆಗೆ ಯಾ ಮಾರ್ಗದರ್ಶನಗಳ ಕಡೆಗೆ ಮರಳುವ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಮುಸ್ಲಿಮರು ಕೆಡಿಸಿಕೊಂಡಿರುವ ಇಲ್ಲಾ ಗಂಭೀರವಾಗಿ ತೆಗೆದುಕೊಳ್ಳದೇ ಹೋದ ಸರ್ವ ತಪ್ಪುಗಳಿಂದಲೂ ಮರಳಬೇಕಿರುವ ಅನಿವಾರ್ಯತರ ಇದ್ದೇ ಇದೆ.
ವ್ರತ್ತಿಯಲ್ಲಿ ಪುರೋಹಿತರಾದ, ವೇದಗಳ ವಿಧ್ಯಾರ್ಥಿಯಾಗಿರುವ ಗೆಳೆಯರೊಬ್ಬರು ನೆನಪು ಶಕ್ತಿಯ ವಿಷಯದ ಬಗ್ಗೆ ಮಾತನಾಡುತ್ತಾ ವೇದದ ಕಡೆಗೆ ತಿರುಗಿದರು. ಉತ್ತಮ ಜ್ಙಾನಾರ್ಜನೆ, ಅಥವಾ ಮನನ ಮಾಡಿಕೊಂಡದ್ದು ನೆನಪಿನಲ್ಲಿ ಉಳಿಯಬೇಕಾದರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಓದಬೇಕು ಎಂದು ಹೇಳುತ್ತಾ, ಮನುಷ್ಯನ ಚಟುವಟಿಕೆಗಳು ವೇದದ ಆಧಾರದಲ್ಲಿ ರಾತ್ರಿಯ ಪಶ್ಚಿಮ ಯಾಮದಲ್ಲಿ ಪ್ರಾರಂಭವಾಗಬೇಕು ಅಂದರು. ರಾತ್ರಿಯ ಪಶ್ಚಿಮ ಯಾಮ ಅಂದರೆ ಸೂರ್ಯೋದಯಕ್ಕಿಂತ ತೊಂಬತ್ತು ನಿಮಿಷ ಮೊದಲಂತೆ. ಹಾಗಾದರೆ ಆಜುಬಾಜು ಐದು ಗಂಟೆಗೆ , ಬೇಗ ಸೂರ್ಯೋದಯವಾಗುವ ದಿನ ನಾಲಕ್ಕು ವರೆ ಇಲ್ಲಾ ನಾಲಕ್ಕು ಮುಕ್ಕಾಲಿಗೆ ಹಿಂದೂ ಧರ್ಮದ ಅನುಯಾಯಿಯೊಬ್ಬ ವೇದಗಳ ಆಧಾರದಲ್ಲಿ ಏಳಬೇಕಿರುವುದು. ಆದರೆ ಇವತ್ತು ಅದು ಹೇಗೆ ತದ್ವಿರುದ್ಧವಾಗಿದೆ ಅಂದರೆ, ಮೊನ್ನೆ ನಾನು ಬೇಗ ಏಳುವುದಿಲ್ಲ ಎಂದು ದೇವರು ಧರ್ಮದಲ್ಲಿ ನಂಬಿಕೆ ಇಲ್ಲ ಎನ್ನುವ ಸೋನು ನಿಗಮ್ ತನ್ನ ಅಭಿಪ್ರಾಯ ವ್ಯಕ್ತಿಪಡಿಸುತ್ತಾ ಆಝಾನ್ ನ ಕಡೆಗೆ ಬೊಟ್ಟು ಮಾಡಿದಾಗ, ತಮ್ಮನ್ನು ಕಟ್ಟರ್ ಹಿಂದೂಗಳೆಂದು ಘೋಷಿಸಿಕೊಳ್ಳುವ , ಹಿಂದುತ್ವಕ್ಕಾಗಿ ಪ್ರಾಣವನ್ನೂ ಅರ್ಪಿಸಲು ಸಿದ್ಧವೆನ್ನುವ ಹುಡುಗರೆಲ್ಲ ಆಝಾನ್ ನ ಮೇಲೆ ಮುಗಿ ಬಿದ್ದದ್ದೇ ಬಿದ್ದಿದ್ದು. ಆಡಿಕೊಂಡಿದ್ದೇ ಆಡಿಕೊಂಡಿದ್ದು. ನಮ್ಮ ನಿದಿರೆಗೆ ಕಂಟಕವಾಗಿರುವ ಸಾಬರನ್ನು ಕಿತ್ತೊಗೆಯಬೇಕು ಎಂದು ಆವೇಶ ತೋರಿಸಿದ್ದೇ ತೋರಿಸಿದ್ದು. ವಾಸ್ತವದಲ್ಲಿ ಅವರೆಲ್ಲರೂ ಆಝಾನ್ ಮತ್ತು ಮುಸ್ಲಿಮರ ವಿರುದ್ಧ ಮುಗಿಬೀಳುವ ಧಾವಂತದಲ್ಲಿ ವೇದ ಗ್ರಂಥಗಳು ಬೋಧಿಸುವ ರಾತ್ರಿಯ ಪಶ್ಚಿಮ ಯಾಮದಲ್ಲಿ ಏಳುವ ನಿರ್ದೇಶನಗಳಿಗೆ ವಿರುದ್ಧವಾಗುತ್ತಿದ್ದಾರೆ ಎಂಬ ಯಾವ ಆಲೋಚನೆಯೂ ಅವರಲ್ಲಿರಲಿಲ್ಲ. ತಾನು ಅತಿಯಾಗಿ ಪ್ರೀತಿಸುವ ಹಿಂದೂ ಧರ್ಮದ ಬೋಧನೆಯನ್ನು ಧಿಕ್ಕರಿಸುತ್ತಿರುವ ಬಗ್ಗೆ ಅವರಿಗೆ ಯಾವ ಅರಿವೂ ಇರಲಿಲ್ಲ.ಇಲ್ಲಿಯಾಗಿದೆ ಧರ್ಮದ ಗುತ್ತಿಗೆ ವಹಿಸಿಕೊಳ್ಳಲು ಹೊರಡುವ ಪ್ರತಿಯೊಬ್ಬರೂ ಸೂಕ್ಷತೆಯನ್ನು ಹೊಂದಬೇಕಿರುವುದರ ಅನಿವಾರ್ಯತೆ. ನಮ್ಮ ವರ್ತನೆಗಳು ಧರ್ಮದ ವಿರುದ್ಧವಾಗಿ ಇಟ್ಟುಕೊಂಡು ಧರ್ಮದ ರಕ್ಷಕರಾಗಲು ಹೊರಟು, ಜನರ ಒಳಿತಿಗಿರುವ ಮಾರ್ಗದರ್ಶನಗಳನ್ನು ಜನರ ಕೆಡುಕಿಗಾಗಿ ಮಾಡಲಾಗಿದೆ ಎಂದು ಬಿಂಬಿಸಿಬಿಡುವ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕು. ನಾವು ದಾರಿ ತಪ್ಪಿದಲ್ಲಿಗೆ ಮತ್ತೆ ಮರಳಬೇಕು. ಸರಿ ದಾರಿಗಳನ್ನು ಮೊದಲು ನಮಗೆ ನಾವು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಎಲ್ಲಾ ಭ್ರಷ್ಟಾಚಾರಗಳಿಗಿಂತ ,ದೇವನೊಂದಿಗೆ ಭಾಗೀದಾರಿಕೆಯುಂಟುಮಾಡುವುದು ಯಾಕೆ ಅತೀ ದೊಡ್ಡ ಭ್ರಷ್ಟತೆಯಾಗಿದೆ ಎಂಬುವುದನ್ನು, ಧರ್ಮ ದೇವರನ್ನು ನಂಬದವನಿಗೂ ಕೂಡ ಅತ್ಯಂತ ತಾರ್ಕಿಕವಾಗಿ, ಆತ ತಲೆದೂಗುವಂತೆ ವಿವರಿಸಿಕೊಡಲು ಸಾಧ್ಯವಾಗುವುದು. ಅನಾಥರಿಗೆ ನಿರ್ಗತಿಕರಿಗೆ ದಾನ ಮಾಡಿ, ಆ ಮೂಲಕ ಜನರ ನಡುವೆ ಮೂಲಭೂತ ಅವಶ್ಯಕತೆಗಳಲ್ಲಿ ತಾರತಮ್ಯವಾಗದಂತೆ ನೋಡಿಕೊಳ್ಳುವ ಮೂಲಕ ದೇವನ ಆಜ್ಞಾಪಾಲನೆ ಮಾಡುವವರಾಗಿ ತಮ್ಮ ದೇವನಿಷ್ಟೆಯನ್ನು ಸಾಬೀತುಪಡಿಸಿ, ಪುಣ್ಯಗಳನ್ನು ಗಳಿಸಿಕೊಳ್ಳಿ ಎಂದು ಎಲ್ಲಾ ಧರ್ಮಗ್ರಂಥಗಳು ಬೋಧಿಸಿದಾಗ, ಮನುಷ್ಯ ಅದನ್ನು ಮಾಡದೆ, ಅವುಗಳು ಉಂಟುಮಾಡಬಹುದಾದ ಸಮಾನತೆ ತನ್ನ ಪಟ್ಟಭಧ್ರತೆಯ ಸ್ವಾರ್ಥಕ್ಕೆ ಅಪಾಯ ತಂದೊಡ್ಡಬಲ್ಲದು ಎಂಬುದನ್ನು ಮನಗಂಡು, ವೇದಗಳನ್ನು ಓದುವ ಕೆಳಜಾತಿಯವನ ಕಿವಿಗೆ ಕಾದ ಕಬ್ಬಿನ ಸುರಿಯುವ, ಕುರಾನ್ ಅರ್ಥ ಓದುವವನು ನೂತನವಾದಿ ಮತ್ತು ಧರ್ಮಭ್ರಷ್ಟ ಎಂದು ಘೋಷಿಸುವ ಪ್ರಯತ್ನಗಳನ್ನು ಮಾಡಿದರತ್ತ ಅಮಾಯಕ ಜನರ ಕಣ್ಣು ತೆರೆಸಲು ಸಾಧ್ಯವಾಗುವುದು. ದಾನ ಸಹಾಯಗಳ ಬದಲಾಗಿ, ಮಾರ್ಬಲ್ಲಿನ ಮಸೀದಿ ನಿರ್ಮಿಸುವ, ಗುಡಿಗೆ ಕೆಜಿಗಟ್ಟಲೆ ಚಿನ್ನ ಹಾಸುವ ಮೂಲಕ ಮನುಷ್ಯ ದೇವನಿಗೇ ಲಂಚ ಕೊಡುವ ಪರಮ ಭ್ರಷ್ಟನಾದ ಬಗೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ,ಜನರನ್ನು ಅಂತರಾತ್ಮದ ಭ್ರಷ್ಟತೆಯಿಂದ ಮುಕ್ತಗೊಳಿಸಿ ,ಸಮಾಜಕ್ಕೆ ಉಪಕಾರಿಯಾಗಿಸಲು ಸಾಧ್ಯವಾಗುವುದು. ಸಕಲ ಭ್ರಷ್ಟಾಚಾರಗಳನ್ನೂ ತೊಡೆದು ಹಾಕುವ ಮಾರ್ಗವೇನೆಂದು ಕೇಳಿದರೆ ಇದೋ ಇಲ್ಲಿದೆ ಎಂದು ವಿಮೋಚನೆಯ ಹಾದಿ ಬಯಸುವವರ ಬಳಿ ಸ್ಪಷ್ಟವಾಗಿ ಮುಂದಿಡಲು ಸಾಧ್ಯವಾಗುವುದು.
(ಮುಂದುವರಿಯುವುದು)