ಭಾನುವಾರ, ಮೇ 28, 2017

ನಾಲ್ಕು ತುಂಡು ಖರ್ಜೂರ

೧.
ಅಂದು ಅದೆಷ್ಟೋ ದಿನ ಹೊಟ್ಟೆಗಿಲ್ಲದ
ಸಿಟ್ಟನ್ನು ಅದುಮಿಡಲಾಗದೆ
ನಾ ತುಳಿದ ಅಡುಪಿನ ತಿಟ್ಟೆ ಮೌನವಾಗಿ
ಅಣಕಿಸಿದಾಗ ಸಿಟ್ಟು ಕೊಟ್ಟ ಪೆಟ್ಟು ಅಷ್ಟಿಷ್ಟಲ್ಲ.

ನಾನಿಲ್ಲಿ ಉಚಿತವಾಗಿ ಛತ್ರವಿಟ್ಟಿಲ್ಲ
ಹಳೆಯ ಬಾಕಿ ಪೂರ್ತಿ ತೀರಿಸಿದ ಮೇಲೆ
ಇಪ್ತಾರಿನ ರೇಶನಿಗೆ ಮತ್ತೆ ಕಾಲಿಟ್ಟರೆ ಸಾಕು
ಎಂದ ಮೂಸಾಕರ ಮಾತೂ ಮರೆಯಲಾಗುತ್ತಿಲ್ಲ.

೨.
ಅಂದು ನಾಲ್ಕಾರು  ಮನೆಯಿಂದ ಮಸೀದಿಗೆ
ಹೊತ್ತು ತರುತ್ತಿದ್ದ ಕಂಞಯ ಪರಿಮಳ.
ಮೋನಾಕ ಹಂಚಿದ ಈತಫಳದ ರುಚಿಯಲ್ಲಿ
ಉಪವಾಸ ಮುಗಿದದ್ದೇ ತಿಳಿಯುತ್ತಿರಲಿಲ್ಲ.

ರುಚಿ ರುಚಿ ಸೀರಣಿಯ ಆಸೆಯಿಂದ
ಬದ್ರೀಂಙಳ ಆಂಡ್,ಲೈಲತುಲ್ ಕದ್ರ್
ಮತ್ತೆ ಮತ್ತೆ ಬರಬಾರದೆ?
ಎಂದು ಪ್ರಾರ್ಥಿಸದ ದಿನವೇ ಇರಲಿಲ್ಲ.

೩.
ಈಗಂತೂ ನನಗೆ ತೊಂದರೆಯೇ ಇಲ್ಲ.
ಬರುತ್ತಿವೆ ದಿನಾ ರಂಗು ರಂಗಿನ ಕಿಟ್ಟುಗಳು.
ನೂರಾರು ಬಗೆ ಕ್ಲಿಕ್ಕಿಸುವ ಪೋಟೋಗಳು
ಆದರೆ ಯಾಕೋ ಈಗ ಹಸಿವೆಯೇ ಆಗುತ್ತಿಲ್ಲ.

ಹೊಟ್ಟೆಗಿಲ್ಲದಿದ್ದರೂ ಮನದಿ ನೆಮ್ಮದಿ ಇತ್ತು
ಜತನದಿಂದ ಕಾಪಾಡಿದ ಅಮೂಲ್ಯ ಮಾನವಿತ್ತು.
ಅಲ್ಲಾಹನ ಪರೀಕ್ಷೆ ಎದುರಿಸುವ ತಾಳ್ಮೆಯೂ ಇತ್ತು
ನಿರೀಕ್ಷೆ ಗಳೆದುರು ಸೋಲದ ಅಚಲ ವಿಶ್ವಾಸವಿತ್ತು.

೪.
ಕೊಡುವ ಕೈ ಪಡೆಯುವ ಕೈಗಿಂತ ಮಿಗಿಲು
ನೆಬಿ ವಚನವ ಚಿಕ್ಕ ಮಗುವೂ ತಿಳಿದಿರಲು
ಸ್ವಾಭಿಮಾನ ಅಡವಿಡಲು ಮನವಿರದಿದ್ದರೂ
ವಿಧಿಯಿಲ್ಲದೆ ಕೈಯೊಡ್ಡಿ ಕಂಬನಿಗೆರೆದಿದ್ದೇನೆ.

ಹಳೆ ಪಳೆಯುಳಿಕೆಯ ಸುಳಿವಿಲ್ಲದಂತೆ ಮರೆತ
ಉಳ್ಳವರ ಹೆಸರಿನ ತೆವಳಿಕೆಯೇ ಮೆರೆದಿರಲು
ಇಪ್ತಾರಿನ ಪುಣ್ಯ ಹರಾಜಿಗಿಡುವವರ ಶೋಕಿಯ
ಕಂಡು ಕೊರಗಿದ ಮನಕೆ ಶಾಂತಿಯ ಬೇಡುತ್ತೇನೆ.

#ಉಫಾಕು#