ಮಂಗಳವಾರ, ಜೂನ್ 6, 2017

ಧರ್ಮ ಮತ್ತು ನಾವು..*

  *ಹಿಂದೂ ಮುಸಲ್ಮಾನ್ ಅಲಗ್ ಹೈ;ದೋನೋ ಕಾ ಭಗವಾನ್ ಏಕ್ ಹೈ* ಎಂದು ಕವಿಯೊಬ್ಬರು ಬರೆದಿದ್ದಾರೆ.ಹೆಸರುಗಳು ಬೇರೆ ಬೇರೆ ಇರಬಹುದು.ಆದರೆ ದೇವನು ಮಾತ್ರ ಒಬ್ಬನೇ.ಒಂದೊಂದು ಧರ್ಮವೂ ಒಂದೊಂದು ಹೆಸರಿನಿಂದ ಕರೆದುಕೊಂಡಿದೆ.

  ಇಸ್ಲಾಂ ಧರ್ಮದಲ್ಲಿ ಖುರ್'ಆನ್,ಹಿಂದೂ ಧರ್ಮದಲ್ಲಿ ಭಗವದ್ಗೀತೆ,ಕ್ರೈಸ್ತರು ಬೈಬಲ್,ಸಿಖ್ಖರಿಗೆ ಗ್ರಂಥ ಸಾಹೇಬ್....ಅಧಿಕೃತ ಗ್ರಂಥಗಳು.ಯಾವುದೇ ಧಾರ್ಮಿಕ ಗ್ರಂಥವೂ ಪರ-ಧರ್ಮಗಳನ್ನು ಅವಹೇಳನ ಮಾಡುವಂತೆ ಹೇಳುವುದಿಲ್ಲ.ಎಲ್ಲರಿಗೂ ಅವರವರ ಧರ್ಮದ ಮೇಲೆ ಗೌರವ,ಅಭಿಮಾನಗಳಿರುತ್ತದೆ.ಇದು ಸಹಜವೂ ಸಹ.ತನ್ನ ಧರ್ಮದ ಉನ್ನತಿಯನ್ನು ಪ್ರತಿಯೊಬ್ಬನೂ ಬಯಸುತ್ತಾನೆ.ಕೆಲವರು ಕ್ರಿಯಾತ್ಮಕವಾಗಿಯೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.ಇದು ಖಂಡಿತಾ ತಪ್ಪಲ್ಲ.ಆದರೆ ತನ್ನ ಧರ್ಮದ ಉಳಿವಿಗಾಗಿ,ಸಂಘಟನೆಗಾಗಿ ಪರ ಧರ್ಮವನ್ನು ಕೀಳಾಗಿ ಕಾಣುವುದು ತಪ್ಪು. *ಇತರ ಧರ್ಮಗಳ ಮೇಲೆ ನಿಂತು ನಾವು ನಮ್ಮ ಧರ್ಮವನ್ನು ಮೇಲೆತ್ತುವೆವು* ಎಂದು ಹೇಳಿಕೆ ನೀಡುವ ಪ್ರಜ್ಞಾವಂತರು ಎತ್ತ ಸಾಗುತ್ತಿದ್ದಾರೆಂದು ಚಿಂತಿಸಬೇಕಾಗಿದೆ.

  *_ಕೆಲವು ಪೂರ್ವಿಕ ರಾಜರುಗಳಿಗೆ ಇಂದು ಇತಿಹಾಸದಲ್ಲಿ ಉನ್ನತ ಸ್ಥಾನವಿದೆ.ಅವರು ಧರ್ಮ ಸಹಿಷ್ಣುಗಳು.ಇತರ ಧರ್ಮಗಳನ್ನು ಗೌರವ,ಅಭಿಮಾನಗಳಿಂದ ಕಂಡವರು.ಪರ ಧರ್ಮಗಳ ಮೇಲೆ ಆಕ್ರಮಣ ನಡೆಸಿದ ಕಾರಣಕ್ಕೆ ಕೆಲವರು ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿದ್ದಾರೆ.ಇನ್ನು ಕೆಲವು ರಾಜರ,ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತಿರುಚಿದ ಮತಾಂಧರು ನೈಜ ಚರಿತ್ರೆಯನ್ನೇ ನಾಶ ಮಾಡಿದವರಾಗಿದ್ದಾರೆ._*

   ಜಾತ್ಯಾತೀತ ರಾಷ್ಟ್ರದಲ್ಲಿ ಇಂದು ಕೋಮುವಾದಿ ಪಕ್ಷಗಳು ಮೆರೆಯುತ್ತಿವೆ.ಧರ್ಮ ಮತ್ತು ರಾಜಕೀಯ ಬೇರೆ ಬೇರೆಯೇ ಇರಬೇಕೆಂದು ವಾದಿಸುತ್ತಿದ್ದ ಮಂದಿ ಇಂದು ನಿರ್ದಿಷ್ಟ ಕೋಮುಗಳ ಜನರನ್ನು ಓಲೈಸುತ್ತಿದ್ದಾರೆ.ದೇಶದ ಶಾಂತಿ ಕ್ಷುಲ್ಲಕ ಕಾರಣಗಳಿಗಾಗಿ ಹದಗೆಡುತ್ತಿವೆ.ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅಖಂಡ ಭಾರತ ವಿಭಜನೆವಾದಿಗಳಿಗೆ ಮಣಿದು ತುಂಡು ತುಂಡಾಗಿ ಹರಿದು ಹೋಗುವುದರಲ್ಲಿ ಸಂಶಯವಿಲ್ಲ.ರಾಷ್ಟ್ರದಲ್ಲಿರುವ ಕೋಮುವಾದಿ ಪಕ್ಷಗಳನ್ನು ನಿರ್ದಾಕ್ಷಿಣ್ಯವಾಗಿ ಬಹಿಷ್ಕರಿಸಿದರೇನೇ ಧರ್ಮ ರಾಜಕೀಯದಿಂದ ದೂರ ಉಳಿದೀತು.

  ನಮ್ಮ ಧರ್ಮದ ಹೆಸರಲ್ಲಿ ರಾಷ್ಟ್ರ ಗುರುತಿಸಲ್ಪಡಬೇಕು.ಅದು ಬಿಟ್ಟರೆ ನಮ್ಮ ಜೀವನದಲ್ಲಿ ಸಾಧಿಸಲು ಏನೇನೂ ಇಲ್ಲ ಎನ್ನುವ *ಮನೋಧರ್ಮಿಗಳು* ನಮ್ಮ ಜೊತೆ ಇರುವುದರಿಂದಲೇ ದೇಶವು ಪ್ರಕ್ಷುಬ್ಧ ಸ್ಥಿತಿಯಲ್ಲಿದೆ.ನಮ್ಮದೇ ಸಹೋದರರ ನೆತ್ತರು ಕ್ಷುಲ್ಲಕ ಕಾರಣಗಳಿಗಾಗಿ ಚೆಲ್ಲುತ್ತಿದೆ.ಕೋಮು ಸೌಹಾರ್ದತೆಯ ಬಗ್ಗೆ ಚಿಂತನಶೀಲರು *ಮಾನವ ಸರಪಳಿ*ಗಳನ್ನು ಬಿಗಿಯುವ ಪರಿಸ್ಥಿತಿ ತಲೆದೋರಿದೆ.

*ಯಾವ ಧರ್ಮವೂ ದೇಶದ ಅಖಂಡತೆಯನ್ನು ಒಡೆದು ರಕ್ತದೋಕುಳಿ ಹರಿಸಿ,ಶಾಂತಿ ಕೆಡಿಸಿ ತಮ್ಮ ಧರ್ಮಕ್ಕೆ ತಳಹದಿ ಹಾಸಬೇಕೆಂದು ಹೇಳುತ್ತಿಲ್ಲ.ವಿಶಾಲ ಧರ್ಮ ಸಹಿಷ್ಣುತೆ ಮತ್ತು ಸಮುದಾಯ ಮೈತ್ರಿಯನ್ನೇ ಎಲ್ಲಾ ಧರ್ಮಾಚಾರ್ಯರೂ, ಪ್ರವಾದಿಗಳೂ ಬೋಧಿಸಿದ್ದು.*

   ಇಸ್ಲಾಮಿನ ಕುರಿತು ತಿಳಿಯದ ಮುಸಲ್ಮಾನ, ಹಿಂದೂ ಧರ್ಮದ ಕುರಿತು ತಿಳಿಯದ ಹಿಂದು,ಕ್ರೈಸ್ತ ಧರ್ಮದ ಬಗ್ಗೆ ತಿಳಿಯದ ಕ್ರೈಸ್ತ ಈ ದೇಶದ ವೈರಿಗಳು.ಇಂದಿನ ಕೋಮು ವಿದ್ವೇಷಿಗಳಿಗೂ ವಿಭಾಜಕ ಕೃತ್ಯಗಳಿಗೂ ಇವರೇ ಮುಖ್ಯ ಕಾರಣ. ಕೋಮುವಾದಿ ಸ್ಪರ್ಧೆಯನ್ನು ಪುಷ್ಟೀಕರಿಸಿ ಪರಸ್ಪರ ಕಚ್ಚಾಡುವಂತೆ ಮಾಡಲು ಈ ಮಂದಿ ಸಮಯ ಕಾಯುತ್ತಿರುತ್ತಾರೆ.ಎಲ್ಲ ಧರ್ಮಗಳಿಗೆ ಸೇರಿದ ನಿರಪರಾಧಿ ಜನರು ಇಂಥ ದುಷ್ಕರ್ಮಿಗಳ ಮತಾಂಧ ಅಗ್ನಿ ಜ್ವಾಲೆಗೆ ಸಿಲುಕಿ ಸಜೀವ ದಹನ ಹೊಂದುತ್ತಾರೆ.

   *ಪಟ್ಟ ಭದ್ರತೆ ಮತ್ತು ಸ್ವಾರ್ಥ ಹಿತಾಸಕ್ತಿಯ ರಕ್ಷಣೆಯು ವಿಜೃಂಭಿಸುತ್ತಿರುವ ಇಂದಿನ ರಾಜಕೀಯದಲ್ಲಿ ಪ್ರಜಾಸತ್ತೆ,ಧರ್ಮ ನಿರಪೇಕ್ಷತೆ,ದೇಶೀಯ ಅಖಂಡತೆ ಮುಂತಾದ ಸಾಂವಿಧಾನಿಕ ಮೌಲ್ಯಗಳು ಕೇವಲ ನಿರರ್ಥಕ ಶಬ್ಧಗಳಾಗಿ ಉಳಿಯುವುದರಿಂದ ದೇಶವು ವ್ಯಾಪಕ ಕೋಮು ದಳ್ಳುರಿಯಿಂದ ತತ್ತರಿಸಲು ಕಾರಣವಾಗುತ್ತದೆ.ಸಕಲರೊಂದಿಗೂ ಅತ್ಯಂತ ಪ್ರೀತಿ-ವಿಶ್ವಾಸಗಳೊಂದಿಗೆ ವರ್ತಿಸಬೇಕೆಂದು ಎಲ್ಲಾ ಧರ್ಮಗಳೂ ಸಾರುತ್ತವೆ.ತಮ್ಮ ಧರ್ಮಗಳ ಆದೇಶಕ್ಕಿಂತ ಮಿಗಿಲಾಗಿ ಆವೇಶ-ಆಕ್ರೋಶಗಳನ್ನು ತೋರ್ಪಡಿಸುವವರು ತಮ್ಮ ಧರ್ಮಕ್ಕೇ ಗಂಡಾಂತರವಾಗಿದ್ದಾರೆ.ದೇಶೀಯ ಐಕ್ಯತೆ ಮತ್ತು ಕೋಮುವಾರು ಮೈತ್ರಿಗೆ ಹೆಚ್ಚಿನ ಮಹತ್ವ ನೀಡಿ ಸಾಮಾಜಿಕ ಒಗ್ಗಟ್ಟು ಮತ್ತು ಭದ್ರತೆಯನ್ನು ಕಾಪಾಡಿಕೊಂಡು ಬಂದ ಬಹಳಷ್ಟು ಮುಸ್ಲಿಂ ಆಡಳಿತಗಾರರು ಇಂದಿನ ತಥಾಕತಿಥ ಇತಿಹಾಸಗಾರರ ದೃಷ್ಟಿಯಲ್ಲಿ ಕೋಮುವಾದಿಗಳಾಗಿ ಚಿತ್ರೀಕರಿಸಲ್ಪಟ್ಟಿರುವುದು ಇತಿಹಾಸದ ಮೇಲೆ ನಡೆದ ಕ್ರೂರ ಅತ್ಯಾಚಾರವಾಗಿದೆ ಮಾತ್ರವಲ್ಲ; ಕೋಮುವಾದಿಗಳನ್ನಾಗಿ ಚಿತ್ರೀಕರಿಸುವುದರಲ್ಲಿ ಪೈಪೋಟಿ ನಡೆಸುತ್ತಿರುವುದು ಇಂದಿನ ಅಶಾಂತಿಗೆ ಮೂಲ ಕಾರಣಗಳಲ್ಲೊಂದಾಗಿದೆ.*

   ಮತಾಂಧತೆಯ ಕುರುಡು ನಿಷ್ಠೆಯಿಂದ ಮಾನವರೊಂದಿಗೆ ಕ್ರೌರ್ಯ ತೋರುವುದನ್ನು ಇಸ್ಲಾಂ ಸಹಿಸುವುದಿಲ್ಲ.ಇತರ ಧರ್ಮಗಳೂ ಅಪವಾದವೇನಲ್ಲ.ಯಾವುದೇ ಕ್ಷುಲ್ಲಕ ಸಮಸ್ಯೆಗಳನ್ನು ಹುಟ್ಟು ಹಾಕಲು ಕೆಲವು ಕಿಡಿಗೇಡಿಗಳು ಸಮಯ ಕಾಯುತ್ತಿರುತ್ತಾರೆ.ವಾಸ್ತವವಾಗಿ ಇದು ನಿರಪರಾಧಿಗಳಾದ ಹಿಂದು-ಮುಸ್ಲಿಮ್ ಸಮುದಾಯಗಳೆರಡರಲ್ಲೂ ಆಳವಾಗಿ ಬೇರು ಬಿಟ್ಟು ಅವರೊಳಗಿದ್ದ ಸ್ನೇಹ-ವಿಶ್ವಾಸಗಳ ಪರಂಪರೆಯನ್ನು ಭಗ್ನಗೊಳಿಸುತ್ತದೆ.ಪರಿಣಾಮವಾಗಿ ಪರಸ್ಪರ ದ್ವೇಷ-ವಿರಸ ಮತ್ತು ಸಂಶಯ ಪ್ರವೃತ್ತಿಗಳಿಗೆ ಇದು ನಾಂದಿಯಾಗುತ್ತದೆ.ಮುಂದೆ ಯಾವುದಾದರೂ ಸಂಶಯದ ಗಾಳಿ ಬೀಸಿತೆಂದಾದರೆ ಒಳಗೇ ಕುದಿಯುತ್ತಿದ್ದ ದ್ವೇಷದ ಕಿಚ್ಚಿಗೆ ತಗಲಿ ಇಡೀ ಸಮಾಜವನ್ನೇ ಬೂದಿ ಮಾಡುತ್ತದೆ.ದೇಶವನ್ನು ಆವರಿಸಿರುವ ಈ ಧಾರ್ಮಿಕ ಉನ್ಮಾದಕ್ಕೆ ಸರಕಾರವು ತನ್ನಿಂದಾದ ಕೊಡುಗೆಯನ್ನು ನೀಡುತ್ತಲೇ ಇದೆ;ಜೊತೆಗೆ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳು ಮತ್ತು ಕೆಲವು ಭದ್ರತಾಗಾರರ ರಕ್ಷಣೆಯ ಮರೆಯಲ್ಲಿ ವಂಚನೆಯನ್ನು ಪುಷ್ಠೀಕರಿಸುವ ಕರ್ತವ್ಯ ಮರೆತವರೂ ಇದ್ದಾರೆ.

*ಇಂದು ನಮಗೆ ಬೇಕಾಗಿರುವುದು ಮಸೀದಿ,ಮಂದಿರ,ಇಗರ್ಜಿಗಳ ಹೆಸರಿನಲ್ಲಿ ಕಾದಾಟವಲ್ಲ.ಶಾಂತಿ,ಸೌಹಾರ್ದ,ನೆಮ್ಮದಿಗಳೇ ನಮ್ಮ ಮೂಲಭೂತ ಅವಶ್ಯಕತೆಗಳು.ಅದನ್ನು ದುರ್ಬಲಗೊಳಿಸುವ ಯಾರು ಕೂಡಾ ಶ್ರೇಷ್ಠತೆಯನ್ನು ಮೆರೆಸಲು ಸಾಧ್ಯವಿಲ್ಲ. ನಾವು ಆಯಾ ಧರ್ಮದವರೆಂಬ ಭಿನ್ನತೆಯನ್ನು ಮರೆತು ನಾವು ಭಾರತೀಯರೆಂಬ ಐಕ್ಯ ಮಂತ್ರವನ್ನು ಸಾರಬೇಕು.ದೇಶ ನನಗೇನು ನೀಡಿದೆ ಎಂದು ಯೋಚಿಸುವ ಬದಲು ದೇಶಕ್ಕಾಗಿ ನಾನೇನು ಮಾಡಿದೆ ಎಂಬುವುದನ್ನು ಚಿಂತಿಸಬೇಕು.ಇತಿಹಾಸವನ್ನು ವಿಕೃತವಾಗಿ ವ್ಯಾಖ್ಯಾನಿಸಿ ಆದರ್ಶ ವ್ಯಕ್ತಿಗಳನ್ನು ಮತಾಂಧರೆಂದು ಚಿತ್ರೀಕರಿಸಿ ವೈಭವೀಕರಿಸುವ ಕುರುಡು ಮತಾಂಧರು ಎಲ್ಲಾ ಧರ್ಮಗಳ ಬಗ್ಗೆ ಆಳವಾಗಿ ಅಭ್ಯಸಿಸಿ ಧರ್ಮದ ತಾತ್ವಿಕ ಮೌಲ್ಯಗಳನ್ನು ವೈಯುಕ್ತಿಕ ಬದುಕಿನಲ್ಲೂ,ಸಮಾಜದ ಏರಿಳಿತಗಲ್ಲೂ ಅಳವಡಿಸಿಕೊಳ್ಳುವುದೇ ಇಂದಿನ ಮತೀಯ ಸಾಂಕ್ರಾಮಿಕ ಪಿಡುಗಿಗೆ ಮುಖ್ಯ ಚಿಕಿತ್ಸೆ...*
〰〰〰〰〰〰〰〰
✒Ⓜ💲 *ಜಲ್ಲಿ...*