ಸೋಮವಾರ, ಜೂನ್ 5, 2017

ಗಿಡದ ವೃತ್ತಾಂತ

ಗಿಡದ ವೃತ್ತಾಂತ

ನಾನು ಹೈಸ್ಕೂಲ್ ಕಲಿತದ್ದು ಪುತ್ತಿಲ ಪ್ರೌಢ ಶಾಲೆಯಲ್ಲಿ. ಶಾಲೆಯ ಅಕ್ಕ ಪಕ್ಕ ತುಂಬಾ ಅಕೇಶಿಯಾ ಗಿಡಗಳು ಹೇರಳವಾಗಿ ತುಂಬಿಕೊಂಡಿದೆ. ಆಗಷ್ಟೇ ಬೆಳೆದು ಬರುತ್ತಿದ್ದ ಆ ಗಿಡಗಳು ನಮ್ಮ ಹುಡುಗಾಟಿಕೆಯ ವಯಸ್ಸಿಗೆ ಹೇರಳವಾಗಿ ಬಲಿಯಾಗಿದ್ದವು ಕೂಡ. ನಾನಾಗ ಎಸ್ಸೆಲ್ಸಿಯಲ್ಲಿದ್ದೆ. ಸಂಭ್ರಮದ ರಂಝಾನಿನ ಸಮಯ ನಾಲ್ಕಾರು ಅಕೇಶಿಯಾದ ಗಿಡಗಳನ್ನು ಬಗ್ಗಿಸಿ ಕಟ್ಟಿ "ದೊಂಪ" ಮಾಡಿ ಮದ್ಯಾಹ್ನದ ಬಿಡುವಿನ ಹೊತ್ತು ನಾವು ಹುಡುಗರೆಲ್ಲ ಅದರ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದವು. ಹೀಗೆ ವಿಶ್ರಾಂತಿ ಪಡೆದ ಅತಿರೇಕಕ್ಕೆ ಶಾಲೆಯ ಗುಡ್ಡೆಯಲ್ಲಿರುವ ಅಕೇಶಿಯಾ ಗಿಡಗಳೆಲ್ಲ ಭರತ ನಾಟ್ಯ ಮಾಡತೊಗಿದ್ದವು. ಕೆಲವಂತೂ ಸೊಂಟ ಮುರಿದ ಮುದಿಯಜ್ಜಿಯ ತರಹ ಅತ್ತ ಮೇಲೇಳಲೂ ಆಗದೆ ಕೆಳಗೆ ಬೀಳಲೂ ಆಗದೆ ಚಡಪಡಿಸುತ್ತಿದ್ದವು. ನಮ್ಮ ಈ ಹುಚ್ಚಾಟ ಎಷ್ಟು ದಿನ ಸಾಗೀತು? ದೌರ್ಜನ್ಯಕ್ಕೊಳಗಾದ ಅಕೇಶಿಯಾ ಗಿಡಗಳೆಲ್ಲ ಒಂದು ದಿನ ಹೈಸ್ಕೂಲ್ ಹೆಡ್ ಮಾಸ್ತರರಲ್ಲಿ ತಮ್ಮ ಅಹವಾಲು ತೋಡಿಕೊಂಡವು. ಹೆಡ್ ಮಾಸ್ತರರೋ ಖಡಕ್ಕಿನ ಮನುಷ್ಯ. ಮುಖ ಮುತಿ ನೋಡದೆ ಬಾರಿಸಿದ ಏಟಿಗೆ ಆಕಾಶಕ್ಕೆ ತಲುಪಲು ಹೊರಟ ಗಾಳಿಯ ಮರದ ಬೆತ್ತಗಳು ನಮ್ಮ ಅಗೈ ಮೇಲೆ ಅಪ್ಪಚ್ಚಿಯಾಗಿ ಬಿದ್ದಿದ್ದವು. ನಾವೇನು ಸುಮ್ಮನಿರುವವರೇ? ಒಟ್ಟಾರೆ ಏಟು ತಿಂದ ಕೋಪಕ್ಕಕೆ ಆಟದ ಸಮಯ ಮೈದಾನದಲ್ಲಿ "ರಂಝಾನ್ ತಿಂಗಳ ಉಪವಾಸ ಶಾಲೆಯ ಪರಿಸರ ಸರ್ವನಾಶ" ಅಂತ ಘೋಷಣೆಗಳನ್ನು ಕೂಗಿ ಸೇಡು ತೀರಿಸಿಕೊಂಡಿದ್ದೆವು.
               ನನಗೆ ಬಾಲ್ಯದಲ್ಲಿ ಗಿಡ ಬೆಳೆಸುವ ಹುಚ್ಚು ಸ್ವಲ್ಪ ಜಾಸ್ತಿಯೇ ಇತ್ತು. ಎಲ್ಲಾದರೂ ಹೊಸ ಬಗೆಯ ಗಿಡಗಳನ್ನು ಕಂಡರೆ ಅದನ್ನು ಕಿತ್ತು ತಂದು ನಮ್ಮ ಮನೆಯ ಹಿತ್ತಲಲ್ಲಿ ನೆಟ್ಟು ಅದರ ಬೆಳವಣಿಗೆಯನ್ನೇ ನೋಡುತ್ತಿದ್ದೆ. ಶಾಲೆಯ ಸುತ್ತ ಮುತ್ತ ಬೆಳೆಯುತ್ತಿದ್ದ ಒಂದೆರಡು ಅಕೇಶಿಯಾ ಗಿಡಗಳೂ ಅದೇ ಕಾರಣದಿಂದ ನಮ್ಮ ಹಿತ್ತಲಿಗೆ ಬಂದಿದ್ದವು. ಅದೂ ಕೂಡ ಮುಂಗಾರಿನ ವೇಳೆ. ಬಹುಷ ಅವಕ್ಕೆ ನಮ್ಮ ಹಿತ್ತಲಿಗೆ ಬಂದುದು ಸ್ವರ್ಗಕ್ಕೆ ಬಂದಂತೆ ಆಗಿರಬೇಕು ನಿರೀಕ್ಷೆಗೂ ಮೀರಿ ಬೆಳೆಯತೊಡಗಿತ್ತು. ಒಂದೆರಡು ವರ್ಷಗಳಲ್ಲೇ ಅವುಗಳು ಸರಸ ಸಲ್ಲಾಪಕ್ಕೊಳಗಾಗಿ ಹಿತ್ತಲಿನ ತುಂಬೆಲ್ಲಾ ತಮ್ಮ ಮಕ್ಕಳನ್ನು ಸಾಕತೊಡಗಿದ್ದವು. ಕೆಲವು ವರ್ಷಗಳಲ್ಲಿ ಹಿತ್ತಲ ತುಂಬಾ ಅಕೇಶಿಯಾ ಸಾಮ್ರಾಜ್ಯ...
                 ಯಾವುದೂ ಅತಿಯಾಗಬಾರದು ಅನ್ನುತ್ತಾರಲ್ಲಾ ಹಾಗೆಯೇ ಆಯಿತು. ಓರೆಕೋರೆ ಬೆಳೆದವುಗಳೆಲ್ಲ ಅಪ್ಪನ ಕಟ್ಟಿಗೆಯ ಆಸೆಗೆ ಬಲಿಯಾದವು. ಮನೆಯ ಸುತ್ತ ಮುತ್ತ ಕೂಡ ಒಪ್ಪ ಓರಣವಾಯಿತು. ಹಾಗೆಯೇ ಬಲಿಯಾಗಿ ಬಲಿಯಾಗಿ ಕೊನೆಯಲ್ಲಿ ಬೆರಳೆಣಿಕೆಯಷ್ಟು ದಷ್ಟಪುಷ್ಟವಾದ ಮರಗಳು ಮಾತ್ರ ಉಳಿದಿದ್ದವು.ನಾನು ಊರಿಗೆ ಹೋದಾಗಲೆಲ್ಲ ಅವುಗಳನ್ನು ನೋಡಿ ಸಂಭ್ರಮಪಡುತ್ತಿದ್ದೆ. ಶಾಲಾ ದಿನಗಳ ಮೆರೆಯದ ಕುರುಹಾಗಿ ಅವುಗಳು ನನಗೆ ನೆನಪುಗಳನ್ನು ಹೇರಳವಾಗಿ ಕಟ್ಟಿಕೊಡುತ್ತಿದ್ದವು. ಈಗ ಇತ್ತೀಚೆಗೆ ಗೆಳೆಯ ಪ್ರಗತ್ ಬರೆದ ಸಾಮಾಜಿಕ ಕಳಕಳಿಯ ಲೇಖನವೊಂದು ಭಾರಿ ಸುದ್ದಿಮಾಡಿತು. ಅದೇನೆಂದರೆ ಆ ಲೇಖನದಲ್ಲಿ ಅಕೇಶಿಯಾ ಗಿಡಗಳು ಪರಿಸರಕ್ಕೆ ಮಾರಕ ಅನ್ನುವುದು! ಅಕೇಶಿಯ ಗಿಡಗಳು ಯಥೇಚ್ಛವಾಗಿ ನೀರನ್ನು ಕುಡಿಯುತ್ತವಂತೆ. ಆದ್ದರಿಂದ ಅಕೇಶಿಯಾ ಗಿಡಗಳನ್ನು ಕಡಿಯಬೇಕೆಂದೂ ಮತ್ತು ಆ ಗಿಡಗಳನ್ನು ಬೆಳೆಸಬಾರದೆಂದೂ ಸಾಕ್ಷಿ ಸಮೇತ ನಿರ್ದೇಶನವಿತ್ತು.
ಈಗ ಚಿಂತೆಗೆ ಬೀಳಬೇಕಾದ ಸಂದರ್ಭ ನನ್ನದು. ಮನೆಯ ಸುತ್ತ ಇರುವ ನಾಲ್ಕಾರು ಮರಗಳನ್ನು ಕಡಿಯುವುದಾ ಬಿಡುವುದಾ? ದ್ವಂದ್ವದಲ್ಲಿಯೇ ವರ್ಷವೂ ಕಳೆಯಿತು. ಇತ್ತೀಚೆಗೆ ಅಣ್ಣ ಜಾಗವನ್ನು ಸಮತಟ್ಟು ಮಾಡಲು ಬುಲ್ಡೋಝರ್ ನುಗ್ಗಿಸಿದಾಗ ಎರಡ್ಮೂರು ಮರಗಳು ಢಮಾರ್ ಆಯಿತು ಅಂದ್ಕೊಂಡಿದ್ದೆ ಆದರೆ ಅವು ಬದುಕಿದೆಯಾ ಬಡಜೀವವೇ ಎಂಬಂತೆ ಬಚಾವ್ ಆಗಿದ್ದವು.
       ನಮ್ಮ ಮನೆಯಲ್ಲಿ ಮಳೆಗಾಲದ ಕಟ್ಟಿಗೆಯನ್ನು ಬೇರೆ ಕಡೆಯಿಂದ ಕ್ರಯಕ್ಕೆ ಕೊಂಡು ಪಿಕಪ್ಪಿನಲ್ಲಿ ತುಂಬಿಸಿ ತರುವುದು ವಾಡಿಕೆ. ಆದರೆ ಕಳೆದ ವಾರ ಉಮ್ಮನಿಗೆ ಕರೆ ಮಾಡಿದಾಗ ಕಟ್ಟಿಗೆ ರೆಡಿ ಮಾಡುವ ಸುದ್ದಿ ಸಿಕ್ಕಿತು. ಗ್ಯಾಸ್ ಒಲೆಯ ಜೊತೆ ಎಲೆಕ್ಟ್ರಿಕ್ ಒಲೆಯೂ ಮನೆಯ ಅಡುಗೆ ಕೋಣೆಯಲ್ಲಿ ಜಾಗ ಪಡೆದ ಮೇಲೆ ಕಟ್ಟಿಗೆಯ ಜರೂರತ್ತು ಕಮ್ಮಿ ಆದರೂ ಕೂಡ ಒಂದಷ್ಟು ಕಟ್ಟಿಗೆಯನ್ನು ಕುಯ್ದು ಒಡೆದು ಜೋಡಿಸಿ ಇಡದಿದ್ದರೆ ಮನೆಯ ಎರಡು ಜೀವಗಳಿಗಂತೂ ಕಮ್ಮಿ ತೃಪ್ತಿಯೇ. ಉಮ್ಮನೊಂದಿಗೆ ಕುಶಲೋಪರಿಯ ನಡುವೆ ಕಟ್ಟಿಗೆ ಎಲ್ಲಿಂದ ಅಂದೆ. "ಇತ್ತಲ್ಲ ನಾಲ್ಕು ಏಕೆಸಿ ಮರಗಳು" ಉಮ್ಮನ ಒಮ್ಮತದ ಉತ್ತರಕ್ಕೆ ಎದೆ ಝಲ್ ಎಂದಿತು. ಒಂದೆರಡು ನಿಮಿಷ ಸೂತಕಕ್ಕಾಗಿ ಮೌನವಾಗಿ ಕುಳಿತೆ. ಎಷ್ಟು ಮರಗಳು ಉರುಳಿದವೋ? ಬಾಕಿಯೆಷ್ಟೋ ಇನ್ನಷ್ಟೇ ಹೋಗಿ ನೋಡಬೇಕು. ಮಕಾಡೆ ಮಲಗಿದ ಅಕೇಶಿಯಾ ಮರಗಳು ಅಂತ್ಯ ಸಂಸ್ಕಾರಕ್ಕೆ ಸಿದ್ದಗೊಂಡಿರುವುದನ್ನಾದರೂ ಒಮ್ಮೆ ಹೋಗಿ ನೋಡಿ ಬರಲೇಬೇಕು. ಇರಲಿ ಇವತ್ತು ಪರಿಸರ ದಿನ! ಯಾರು ಎಷ್ಟು ಗಿಡ ನೆಟ್ಟರೋ ಅದರಲ್ಲಿ ಎಷ್ಟು ಬದುಕು ಪಡೆದಾವೋ? ಗಿಡನೆಡುವುದೂ ಕೂಡ ಪ್ರಚಾರದ ಅಮಲೇರಿಸಿಕೊಂಡ ಈ ಕಾಲಕ್ಕೆ ನನ್ನ ಅಂಗಡಿಯ ಓನರಮ್ಮನವರ ಮಹಡಿ ಮೇಲಿನ ಕೈತೋಟಕ್ಕೆ ಈಗಷ್ಟೇ ಒಂದು ಸುತ್ತು ಬಂದೆ, ಎರಡು ವಾರದ ಹಿಂದೆ ನಮ್ಮ ಮನೆಯಿಂದ ತಂದು ಹಾಕಿದ ಕರಿ ಬೇವಿನ ಗಿಡ ಒಂದೆರಡು ಚಿಗುರೊಡೆದು ಹಾಲುಗಲ್ಲದ ಕಂದನಂತೆ ಕಣ್ಣಾಮುಚ್ಚಾಲೆಯಲ್ಲಿ ತೊಡಗಿದ ಮೋಡ ಮತ್ತು ಭಾಸ್ಕರನೊಂದಿಗೆ ನಗು ಹಂಚಿಕೊಂಡು ಮೇಲೇಳುವ ಭರವಸೆಯಲ್ಲಿದೆ.

ಯಂಶ ಬೇಂಗಿಲ ಬೆಂಗಳೂರು