ಭ್ರಷ್ಟಾಚಾರದ ಪ್ರಥಮ ಪಾಠ ದೇವರಿಗೆ ಲಂಚ ಕೊಡುವುದರ ಮೂಲಕ ನಮ್ಮೊಳಗೆ ಇಳಿಯುತ್ತದೆ. ಒಂಥರಾ ಕೆಲಸ ಮಾಡಿಕೊಡು ಇಷ್ಟು ಕೊಡ್ತೀನಿ ಅನ್ನುವ ಮನಸ್ಥಿತಿಯ ಮೂಲ ರೂಪವೇ ಅದು. ಅದರದೇ ಮುಂದುವರಿದ ಭಾಗ ಅಥವಾ ಗಾಢ ಪರಿಣಾಮದ ಕಾರಣ ಸಮಾಜದ ಎಲ್ಲ ಕಡೆಯೂ ಲಂಚ ಕೊಡುವ ಪಡಕೊಳ್ಳುವ ಆಚರಣೆಗೆ ನಾವು ತಳ್ಳಲ್ಪಟ್ಟಿದ್ದೇವೆ. ಇಲ್ಲಿ ನೈತಿಕತೆ ಅನೈತಿಕತೆಯ ಪ್ರಶ್ನೆಯಿಲ್ಲ, ನ್ಯಾಯ ಅನ್ಯಾಯಗಳ ತಲೆಬಿಸಿಯಿಲ್ಲ. ಒಂದಿಷ್ಟು ದೇವರ ಹುಂಡಿಗೆ ಹಾಕಿದರಾಯಿತು ಎಂಬ ಸುಲಭದ ಪರಿಹಾರದ ಹಾದಿ ಇದ್ದೇ ಇದೆ. ಹೀಗಿರುವ ಸಮಾಜ ಭ್ರಷ್ಟಾಚಾರದಿಂದ ವಿಮುಖವಾಗುವುದು, ಅಥವಾ ವಿಮುಖಗೊಳಿಸುವುದು ಸುಲಭವಲ್ಲ.
ಮೊತ್ತ ಮೊದಲನೆಯದಾಗಿ ಜನರಿಗೆ ಶಿಕ್ಷಣ ಬೇಕಿರುವುದು ದೇವರು ಅಂದರೆ ನಮ್ಮ ಲೋನ್ ಪಡೆದು ಬದುಕುವವರ ಕೂಟವಲ್ಲ. ನಮ್ಮಿಂದ ಪಡೆದು ಹೊಟ್ಟೆ ತುಂಬಿಸುಕೊಳ್ಳುವ ಅವಶ್ಯಕತೆ ಇರುವವರು ದೇವರು ಎನ್ನುವ ಪರಿಕಲ್ಪನೆ ಅಲ್ಲ. ನಮ್ಮ ಹರಕೆ, ನೈವೇದ್ಯ ,ದರ್ಗಾಗಳ ಮೇಲೆ ಸುರಿವ ಮಲ್ಲಿಗೆ, ಬಕ್ರೀದ್ ನ ಬಲಿ ಯಾವುದೂ ದೇವರನ್ನು ತಲುಪುವುದಿಲ್ಲ. ನಕಲಿ ಬಾಬಾಗಳ ,ಊದುಗಡ್ಡಿ ಸ್ವಾಮೀಜಿಗಳ ಬಳಿ ಜೀವನವೆಂಬ ಊಹಿಸಲಾಗದ ಜಂಜಡದಿಂದ ಬಳಲಿ ಪರಿಹಾರ ಹುಡುಕುವ ಮನುಷ್ಯರಿಗೆ ಇವೆಲ್ಲವನ್ನೂ ಅರ್ಥೈಸುವುದು ಅಷ್ಟು ಸುಲಭವಲ್ಲ ನಿಜ. ಪ್ರತಿಯೊಂದು ಧರ್ಮವೂ ಬಡ ಬಗ್ಗರಿಗೆ ಅಸಹಾಯಕರಿಗೆ ನಿರ್ಗತಿಕರಿಗೆ ನೆರವಾಗುವ ಮೂಲಕ ಧರ್ಮವನ್ನು ಸಂಸ್ಥಾಪಿಸಿ ಎಂದು ಬೋಧಿಸುತ್ತದೆಯೇ ಹೊರತು ನನಗೆ ಕೊಡಿ ಎಂದು ಕೇಳುವಷ್ಟು ಯಾವ ದೇವನೂ ಫಕೀರನಲ್ಲ ಎಂದು ವಿವರಿಸುವುದು ಕಷ್ಟ ಸಾಧ್ಯವಾದಷ್ಟೂ ಕಾಲ ನಮ್ಮ ಭ್ರಷ್ಟತೆ ಹೀಗೆಯೇ ಉಳಿಯುತ್ತದೆ. ಮನುಷ್ಯನ ಸ್ವಾರ್ಥದ ಬೇಲಿಗಳು ದೇವರಿಗೂ ಬಿದ್ದು ಅವನನ್ನೂ ತನ್ನ ಅನುಕೂಲಕ್ಕೆ ಇರುವಂತೆ ಮಾಡಲು ಮನುಷ್ಯನೆಂಬ ಮೂರ್ಖ ಕಂಡುಕೊಂಡಿರುವ ದಾರಿಗಳು ಈ ಹಲವು ತರದ ದೇವರಿಗೆ ಲಂಚ ಕೊಡುವ ವಿಧಾನಗಳು.
ಬದಲಿಗೆ ಮನುಷ್ಯ ತನ್ನ ಬಳಿಯಿರುವುದನ್ನು ಹೇಗೆ ವ್ಯಯಿಸಬೇಕಿರುವುದು ಎಂದು ಕೇಳುವುದಾದರೆ ಇಸ್ಲಾಂ ಕಲಿಸಿಕೊಡುವ ಝಕಾತ್ ನ ಒಂದು ಉದಾಹರಣೆ ಕೊಡಬಹುದು. ಒಬ್ಬ ವ್ಯಕ್ತಿ ತನ್ನ ಬಳಿಯಿರುವ ಸ್ಥಿರ ಸಂಪತ್ತಿನಿಂದ ಎರಡೂವರೆ ಶತಮಾನದಷ್ಟು ವಾರ್ಷಿಕವಾಗಿ ಕಡ್ಡಾಯ ದಾನ ಮಾಡಬೇಕು. ಅದರ ಅವಕಾಶಿಗಳು ಯಾರು ಎಂದು ಕೇಳಿದರೆ, ಫಕೀರ್, ಮಿಸ್ಕೀನ್, ಸಾಲಗಾರ, ಯಾತ್ರಿಕ ಮತ್ತು ಹೊಸದಾಗಿ ಧರ್ಮ ಸ್ವೀಕರಿಸಿದವರು. ಫಕೀರ್ ಅಂದರೆ ಯಾಚಿಸಿ ಬದುಕುವ ತೀರಾ ಬಡವ, ಮಿಸ್ಕೀನ್ ಅಂದರೆ ಅತ್ತ ಬೇಡಲೂ ಆಗದ ಇತ್ತ ಬದುಕಲೂ ಹೆಣಗುವ ವರ್ಗ, ಸಾಲಗಾರ ,ರೋಗಕ್ಕೆ ಮದ್ದು ಮಾಡಲೋ, ಮಗಳ ಮದುವೆಗೋ ,ನಷ್ಟ ಹೊಂದಿದ ವ್ಯಾಪಾರ ಅಥವಾ ಇನ್ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲದ ಸುಳಿಗೆ ಸಿಲುಕಿದವನು, ಯಾತ್ರಿಕನೆಂದರೆ ಬದುಕಿನ ಅವಶ್ಯಕತೆ ಗಾಗಿ ಯಾತ್ರೆ ಹೊರಡುವವ, ಕೂಲಿ ದುಡಿಯಲು ಬೆಂಗಳೂರಿಗೆ ಹೋಗಲು ಬಸ್ಸಿಗೆ ದುಡ್ಡಿಲ್ಲದ ಸಂಕಷ್ಟಕ್ಕೀಡಾದವನು ಅಂತನೇ ಇಟ್ಟುಕೊಳ್ಳಿ ಇಲ್ಲಾ ಎಲ್ಲಿಂದಲೋ ಯಾತ್ರೆ ಹೊರಟು ಬಂದು ನಡು ದಾರಿಯಲ್ಲಿ ಸಂಕಷ್ಟಕ್ಕೀಡಾದವನು, ಕೊನೆಯದ್ದನ್ನು ಚರ್ಚಿಸುವುದು ಬೇಡ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅದರ ಸಾರ್ವಜನಿಕ ಚರ್ಚೆ ಅನವಶ್ಯಕವಾದರೂ ನಾಲಕ್ಕು ವರ್ಗಕ್ಕೆ ಸೀಮಿತಗೊಳಿಸಿ ತಪ್ಪು ಮಾಹಿತಿ ನೀಡುವುದು ಬೇಡ ಎಂಬ ಕಾರಣಕ್ಕಾಗಿಯಷ್ಟೇ ಸೇರಿ ಸಿದ್ದೇನೆ. ಇಲ್ಲಿ ಈ ಮೇಲಿನ ನಾಲಕ್ಕು ವರ್ಗಗಳು ಪ್ರತಿನಿಧಿಸುವ ಸಮಾಜದ ವಿವಿಧ ಸ್ತರಗಳನ್ನು ಒಮ್ಮೆ ಯೋಚಿಸಿ ನೋಡಿ. ದೇವರ ಹುಂಡಿಯಿಂದ, ದರ್ಗಾಗಳ ಚಾದರ ಮಲ್ಲಿಗೆಗಳಿಂದ ನಮ್ಮ ಸಂಪತ್ತು ಹೀಗೆ ವಿನಿಯೋಗಿಸಲ್ಪಟ್ಟರೆ ಸಮಾಜದಲ್ಲಿ ಆಗುವ ಪ್ರೀತಿಯ ಕೊಡುಕೊಳ್ಳುವಿಕೆ ಹೇಗಿರಬಹುದು ? ಅದು ನಮ್ಮ ನಡುವಿನ ಬೇಲಿಗಳನ್ನು ಹೇಗೆ ಕಿತತೆಸೆಯಬಹುದು ? ನಮ್ಮ ಭ್ರಷ್ಟ ಹ್ರದಯಗಳನ್ನು ಹೇಗೆ ಶುಚಿಗೊಳಿಸಬಹುದು ?
ಇಲ್ಲಾ ಇದೆಲ್ಲಾ ಸಾಧ್ಯವಿದೆ ಎಂದು ಬರೆದೆ ಎಂದಲ್ಲ. ಝಕಾತ್ ಕಡ್ಡಾಯವಾಗಿರುವ ಮುಸ್ಲಿಮನೇ ಪ್ರಾಮಾಣಿಕವಾಗಿ ಪಾಲಿಸದ ವಿಚಾರ ಆಚರಣೆಗೆ ಬಂದೀತು ಎಂಬ ಭ್ರಮೆಯೂ ಅಲ್ಲ. ನನ್ನ ದೇಶ ದೇವರಿಗೆ ಲಂಚ ಕೊಡುವ ಪ್ರಮಾಣಕ್ಕೆ ಬಡವನ ಬದುಕು ಹಸನಾಗಿಸುವ ಸಾಮರ್ಥ್ಯ ವಿದೆ ಎಂಬುದರ ಕಡೆಗೆ ಒಂದು ಆಸೆ ಹೊತ್ತ ನೋಟವಷ್ಟೇ.
(ನನಗೆ ಜ್ಞಾನವಿರುವುದರಿಂದ ನನ್ನ ಧರ್ಮದ ಉದಾಹರಣೆ ಬಳಸಿದೆ. ದಯವಿಟ್ಟು ಅಪಾರ್ಥಗಳು ಬೇಡ. ವೇದಗಳಿಂದ ,ಗೀತೆಗಳಿಂದ, ಬೈಬಲ್ ನಿಂದ ಇಂತಹ ಸತ್ಯಗಳನ್ನು ತೆರೆದು ಮಾತನಾಡುವ ಸಹೋದರರು ಮುಂದೆ ಬರಲಿ ಎಂಬುವುದು ನನ್ನ ಆಸೆಯೂ ಕೂಡ)