ಬುಧವಾರ, ಮೇ 31, 2017

ಗಲ್ಫ್ -ಹಣ

ಕರಾವಳಿ ಮುಸ್ಲಿಮರ ಆರ್ಥಿಕತೆ ಸುಧಾರೆಣೆಗೆ ಎಡೆ ಮಾಡಿಕೊಟ್ಟ ಊರೇ ಗಲ್ಫ್ ರಾಷ್ಟ್ರಗಳು

ಈ ಹೆಸರೇ ಯುವ ಜನತೆಗೆ ಮುದ ನೀಡುವ ಕನಸಿನ ಕಲ್ಪನಾ ಲೋಕ

ಕೈ ತುಂಬಾ ಸಂಬಳ, ರಿಯಾಲ್ ದಿರ‍್ಹಂ-ದಿನಾರ್'ಗಳನ್ನು ರೂಪಾಯಿಗೆ ಪರಿವರ್ತಿಸಿ ಎಣಿಸುವುದು ಸ್ಪ್ರೇ ಹಾಕಿದ ಟಾಕುಟೀಕಿನ ಕೋಟು-ಸೂಟು, ಸುತ್ತಾಡಲು ಕಾರು, ವಾಸಕ್ಕೆ ಬಂಗಲೆ ಹೀಗೆ ಕನಸಿನ ಗೋಪುರ ಕಟ್ಟಿಕೊಂಡು ಧ್ಯಾನಿಸುವ ಯುವ ಪೀಳಿಗೆಗೆ ಸುಲಭದಲ್ಲಿ ಕಾಣುವ ಹಾದಿಯೇ ಗಲ್ಫ್ ಯಾತ್ರೆ...!!!

ಹೌದು ವಿದೇಶ ಯಾತ್ರೆ ಎಂಬುದು ಯುವ ಜನತೆಯ ಮನದಾಳದ ಆಸೆ ನಿರೀಕ್ಷೆ ಎಲ್ಲವೂ ಆಗಿದೆ. #ಪ್ರವಾದಿ(ಸ.ಅ)ರವರು ಬದುಕಿಬಾಳಿದ #ಸೌದಿ ಅರೇಬಿಯಾ ಇರಲಿ #ಸ್ವಹಾಬಿಗಳ ದಅವಾ ಯಾತ್ರೆಯಿಂದ ಪುನೀತಗೊಂಡ #ತೈಲ ಸಂಪನ್ನ ರಾಷ್ಟ್ರವಾದ #ಗಲ್ಫ್‌ನ ಯಾವುದೇ #ಕಂಟ್ರಿಯಾಗಲೀ ಅದೊಂದು ಅನುಗ್ರಹಿತ ಪ್ರದೇಶವೇ. ಇಂದು ಜಗತ್ತಿಗೆ ತೈಲ ನೀಡುವ ಈ ಕೊಲ್ಲಿ ರಾಷ್ಟ್ರವನ್ನೇ ಅಂಥ ಅಮೇರಿಕಾ, ಜಪಾನ್, ಬ್ರಿಟನ್‌ಗಳೂ ಆಶ್ರಯಿಸಬೇಕು. ಏಕೆಂದರೆ ವಾಹನ ಓಡಬೇಕಿದ್ದರೆ ಅರಬನ ಪೆಟ್ರೋಲ್ ಬೇಕೆಬೇಕು

ಅಂಥ ರಾಷ್ಟ್ರದಲ್ಲಿ ದುಡಿದು ಕೈ ತುಂಬಾ ಸಂಬಳ ಪಡೆದು ಶ್ರೀಮಂತನಾಗಬೇಕೆಂದು ಕನಸು ಕಾಣದವರು ಯಾರು? ಅದೇ ಕನಸು ಹೊತ್ತ ಪಯಾಣ ಮಲಬಾರ್ ಹಾಗೂ ನಮ್ಮ ಕರಾವಳಿಯ ಮುಸ್ಲಿಮರ ಬದುಕು ಬದಲಾಯಿಸಿದೆ ಎಂದರೆ ತಪ್ಪಲ್ಲ. ಇಂದು ಈ ಪರಿಸರದ ಸಾಮೂದಾಯಿಕ ಸರ್ವ ಕ್ಷೇತ್ರಗಳಲ್ಲೂ ಗಲ್ಫ್‌ನ ಲಿಂಕು ಸಂಪನ್ನಗೊಳಿಸಿದ್ದು, ದಿನಾರ್-ದಿರ್‌ಹಂ. ಸಣ್ಣ ಮಟ್ಟಿಗೆ ನಮ್ಮ ಬಡತನವನ್ನು ನೀಗಿಸಿದೆ ಎಂದರೆ ತಪ್ಪಲ್ಲ. ಒಂದು ಕಾಲದಲ್ಲಿ ಕಲಿಕೆ ಮುಗಿದರೆ(ಕೆಲವೊಮ್ಮೆ ಕಲಿಕೆಗೂ ಹೋಗದೆ) ಗದ್ದೆ, ತೋಟ, ಮತ್ತಿತರ ಕೃಷಿ ಕೆಲಸವೋ, ಸಣ್ಣಪುಟ್ಟ ವ್ಯಾಪಾರಗಳಲ್ಲೂ ತೊಡಗಿಸಿ ಕೊಳ್ಳುತ್ತಿದ್ದ ಯುವ ಪೀಳಿಗೆ ☞.೧೯೬೦-೭೦ರ ಜಮಾನದಲ್ಲಿ ಗಲ್ಫ್ ರಾಷ್ಟ್ರದತ್ತ ಚಿತ್ತ ಹರಿಸಲು ಶುರುವಿಟ್ಟರು. ಮರುಭೂಮಿಯ ದಿರ್‌ಹಂ-ದಿನಾರ್‌ಗಿರುವ ಹೆಚ್ಚಿನ ಮೌಲ್ಯವೇ ಇದಕ್ಕೆ ಮೈನ್ ರೀಸನ್. ಎಜುಕೇಶನ್ ಕೆಪಾಸಿಟಿ ಅದ್ಯಾವುದೋ ಇಲ್ಲದಿದ್ದ್ರೂ ಕನಸು ಕಟ್ಟಿ ಹಡಗು ಹತ್ತಿ ಗಲ್ಪ್‌ಗೆ ತೆರಳಿ ಅಷ್ಟು ಇಷ್ಟು ಸಂಪಾದಿಸಿ ಸಂತೃಪ್ತ ಕಂಡರು ಅದೆಷ್ಟೋ ಮಂದಿ.
ಸ್ವಂತ ನಾಡಲ್ಲಿ ಬೆನ್ನು ಬಗ್ಗಿಸಿ ದುಡಿದರೂ ಎಲ್ಲಿಗೂ ತಲುಪುತ್ತಿಲ್ಲ ಎಂದು ಅಸಂತುಷ್ಠರಾಗಿದ್ದ ಯುವ ಪೀಳಿಗೆ ಸಾಂಪ್ರದಾಯಿಕ ಕೆಲಸ ಹಾಗೂ ಪಾರಂಪರ‍್ಯದ ಬದುಕಿನ ಶೈಲಿಗೆ ಸಲಾಂ ಹೇಳಿ ಹೊಸತೊಂದು ಬದುಕನ್ನು ಕನವರಿಸುತ್ತಾ ಅರಸಿ ಹೋದದ್ದು ಮರುಭೂಮಿಗೆ.
ಕನಸಿನ ಬುತ್ತಿಯಲ್ಲಿದ್ದದ್ದು ಕೇವಲ ತಿಂದು ತೇಗುವುದು ಮಾತ್ರವಲ್ಲ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು, ಬಂಗಲೆಯಂಥ ಮನೆಗಳು, ಆಲಂಕೃತ ವರಾಂಡಗಳು, ಮನೆ ಮುಂದೆ ಕಾರು ಪಾರ್ಕಿಂಗ್ ಹೀಗೆ ಕನಸುಗಳ ಗೋಪುರ ಕಟ್ಟಿಕೊಂಡು ಗಲ್ಫ್‌ಗೆ ತೆರಳಿದ ಕಾರಣ ಶ್ರೀಮಂತ ಅರಬರ ಮನೆಯ ಕಿಚನ್ ಕೋಣೆಗಳು, ವರಾಂಡಗಳು, ಪಾರ್ಕಿಂಗ್‌ಗಳು ಇಲ್ಲೂ ತಲೆಯೆತ್ತಿ ನಿಂತವು. ಎಲ್ಲೆಲ್ಲೂ ಗಲ್ಫ್‌ನ ಕಾಂಚನ ಸದ್ದು ಮಾಡಿತು. ಲೈಫಿನ ಸ್ಟೈಲನ್ನೇ ಬದಲಿಸಿತು.

ಇಂದಿಗೂ ವಯೋವೃದ್ಧರಿಂದ ಹಿಡಿದು ಎಲ್ಕೇಜು ಮಕ್ಕಳವರೆಗೂ ಗಲ್ಫಿನ ಹಣದ ಪರಿಮಳವೆಂದರೆ ಇನ್ನಿಲ್ಲದ ಪ್ರೇಮ. ಕೊಲ್ಲಿಯ ಮರುಭೂಮಿಯಲ್ಲಿ ಬದುಕನ್ನು ಮೇಣದ ಬತ್ತಿಯಂತೆ ಕರಗಿ ಮುಗಿಸುವ ಮನುಷ್ಯ ತಂದೆಯೋ, ಅಣ್ಣನೋ ಬೇಡ ಗಂಡನೇ ಆದರೂ ಆ ಬಗ್ಗೆ ತಲೆಕೆಡಿಸುವ ಉಮೇದು ಊರಿನ ಹೆಚ್ಚಿನ ಮನೆ ಮಂದಿಗೂ ಇರುವುದಿಲ್ಲ. ಸ್ವಂತ ಊರಲ್ಲಿ ಬಂದು ಹಸುವಿನ ಕರುವನ್ನು ನೋಡಿಕಳ್ಳಲಾರದವ ಅರಬರನ ಮನೆಯ ಒಂಟೆ-ಆಡುಗಳನ್ನು ಹೊಲಕ್ಕೆ ಕೊಂಡೆಯ್ದು ಮೇಯಿಸಲೂ ಸಿದ್ಧನಿದ್ದಾನೆ ಎಂದರೆ ಅದರ ಹಿಂದಿರುವುದು ತನ್ನ ಹಾಗೂ ಕಟ್ಟಿಕೊಂಡವರ ಲಕ್ಸುರಿ ಲೈಫಿನ ಕನಸು ಮಾತ್ರ.

ಊರಿಗೆ ಬಂದಾಗ ಆತನ ಖಡಕ್ ಪ್ಯಾಂಟ್ ಸೂಟ್ ಕೆಲವರಿಗೆ ಸಂಭ್ರಮ ಇನ್ನು ಕೆಲವರಿಗೆ ಅಸೂಯೆ ಆಗಿರುತ್ತೇ ವಿನಾಃ ಯಾರಿಗೂ ಹಕೀಕತ್ತು ಅರ್ಥವಾಗುವುದೇ ಇಲ್ಲ.
ಅಷ್ಟೇ ಯಾಕೆ ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಊರ ಅಭಿವೃದ್ಧಿ ಕೆಲಸಕ್ಕೆ ಬಡವರ ಮನೆ ನಿರ್ಮಾಣಕ್ಕೆ ವಿವಾಹಕ್ಕೆ ಮಸೀದಿ-ಮದ್ರಸಗಳ ಕೆಲಸಕ್ಕೆ ಅನಾಥ-ನಿರ್ಗತಿಕರ ಮಂದಿರಗಳಿಗೆ ಜೊತೆಗೆ ಕುಟುಂಸ್ಥರ ಅಗತ್ಯಗಳಿಗೆ ನೆರವಿಗಾಗಿ ಜನ ಅವನ ಮನೆ ಮುಂದೆ ಬಂದು ಪೀಡಿಸುತ್ತಲೇ ಇರುತ್ತಾರೆ. ಪಾಪ ಗಲ್ಫ್‌ಗಾರನಿಗೆ ಇಲ್ಲ ಎನ್ನಲಾಗದು ಸಾಲ ಶೋಲಮಾಡಿ ಬಂದವರಿಗೆ ಕೈತುಂಬಾ ನೀಡುತ್ತಾನೆ. ಆದರೆ ಅದನ್ನು ತುಂಬಿಸಲು ಮತ್ತೊಂದು ಟ್ರಿಪ್ಪು. ನಾಡು, ಮನೆ, ಒಡಹುಟ್ಟಿದವರು, ಕಟ್ಟಿಕೊಂಡವರು ಜನ್ಮಕೊಟ್ಟವರಿಗಾಗಿ ಬದುಕು ಮೀಸಲಿಟ್ಟ ಮನುಷ್ಯ, ತಾನು ಮೊದ್ಲು ವಿದೇಶ ಪ್ರಯಾಣಕ್ಕೆ ಮಾಡಿ ಇಟ್ಟ ಸಾಲದ ಸಂದಾಯವನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಆಗಿ ಮುಗಿದು ಹೈರಾಣಾಗುವ ಗಲ್ಫ್‌ಗಾರನ ಬದುಕು ಯಾವ ’ಎಂಜಾಯ್ ಲೈಫ್’ ನೀವೇ ಹೇಳಿ...???

ಗಲ್ಫ್‌ನ ಕನಸು ಹೊತ್ತವನ ಭವಣೆ ಆರಂಭವಾಗುವುದು ಒಂದು ಪಾಸ್‌ಪೋರ್ಟ್‌ಗಾಗಿ ಅಲೆದಾಡುವ ಮೂಲಕ. ಅದು ಕೈಗೆ ಸಿಕ್ಕಿದಾಗ ನಂತರ ವಿಝಾಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾನೆ. ಇನ್ನು ವಿಝಾ ಸಿಗುತ್ತೆ ಅನ್ನಿ ಅದಕ್ಕೆ ಲಕ್ಷದಷ್ಟು ಹಣ ಗೂಡಿಸಬೇಕು ಎಲ್ಲಿಂದ ತರುವುದು. ಒಂದೋ ಸಾಲಶೋಲ ಮಾಡುತ್ತಾನೆ. ಇಲ್ಲವೇ ಹೆಂಡತಿಯ ಚಿನ್ನ ಮಾರುವುದೋ ಅಡವಿಡುವುದೋ ಮಾಡುತ್ತಾನೆ. ಇಲ್ಲದಿದ್ದರೆ ವಾಸಕ್ಕಿರುವ ಮನೆಯನ್ನೇ ಮರಾಟ ಮಾಡಿ ಬಿಡುತ್ತಾನೆ. ಈ ಎಲ್ಲಾವನ್ನು ಕಳಕೊಂಡು ಗಲ್ಫ್‌ಗೆ ತೆರಳುವ ಮನುಷ್ಯನ ಮನಸ್ಥಿತಿ ಬೇಗುದಿ ಹೇಗಿರಬೇಡ ಊಹಿಸಿ ನೋಡಿ.

ಎಲ್ಲವೂ ಕಳಕೊಂಡು ಕನಸಿನ ಗೋಪುರ ಕಟ್ಟಿ ಅರಬಿ ಮಣ್ಣಿಗೆ ತಲುಪಿದ ವ್ಯಕ್ತಿಯ ಬದುಕೇನು ಚಿನ್ನದ ಲೈಫೆಂದು ತಿಳಿಯಬೇಡಿ. ಇಂದು ವಿದೇಶಕ್ಕೆ ತೆರಳಿದ ನಮ್ಮ ಸಹೋದರರ ಪೈಕಿ ೭೫ ಶೇಖಡಾ ಮಂದಿಯೂ ಕಷ್ಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ಧಾರೆ. ಇಲ್ಲವೇ ಸರಿಯಾದ ಕೆಲಸವೇ ಇಲ್ಲದೇ ಕೊರಗುತ್ತಾ ದಿನದೂಡುತಿದ್ದಾರೆ. ಒಂದೈದು ಶೇಖಡಾ ಮಂದಿ ಮಾತ್ರ ಉನ್ನತ ಹುದ್ದೆಯಲ್ಲಿದ್ದಾರೆ. ೨೫ ಶೇಖಡಾ ಮಂದಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗಿನ ಕೆಲಸದಲ್ಲಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ

ಹಾಗೆ ನೋಡಿದರೆ ಅರಬರ ತೋಟ, ಹೊಲಗಳಲ್ಲಿ ಕೆಲಸ ಮಾಡುವವರು ಆಡು-ಒಂಟೆ ಮೇಯಿಸುವವರು, ರಸ್ತೆ, ಕಾರ್ಖಾನೆಗಳಲ್ಲಿ ಮೈಮುರಿದು ದುಡಿಯುವವರು ಹೀಗೆ ಅದೆಷ್ಟು ಮಂದಿಯ ಬವಣೆ ಹೇಳಿ ತೀರದ್ದು. ಇನ್ನು ಏಜೆನ್ಸಿಯ ಮರುಳ ಮಾತಿಗೆ ಒಪ್ಪಿಕೊಂಡು ಹಣ ಚೆಲ್ಲಿ ಹೋಗಿ ಸರಿಯಾದ ಕೆಲಸವೇ ದೊರೆಯದೆ ಕಂಗಾಲಾಗುವ ಮಂದಿಯ ಕಥಯೇ ಕರುಣಾಜನಕ, ಅದೇ ತೆರನಾಗಿ ಕೆಲಸವಿದ್ದರೂ ಸಂಬಳ ಕೊಡದೆ ಸತಾಯಿಸುವ ಅರಬರು ಬೇರೆ. ಹೀಗೆ ಎಲ್ಲವನ್ನು ಸಹಿಸಿ ಮರುಭೂಮಿಯ ಬಿಸಿಲಧಗೆಯಲ್ಲಿ ಕರಗಿ ಬದುಕು ಸವೆಸುವ ಗಲ್ಫ್‌ಗಾರನ ಬದುಕಿನ ಹಿಂದಿರುವ ಕರಾಳ ಕಥೆಯನ್ನು ತಿಳಿದವರೆಷ್ಟು...??? ನಾವು ಯೋಚಿಸಬೇಕಾದದ್ದಲ್ಲವೇ ಇದು...???

ಅಷ್ಟಕ್ಕೂ ಹಿಂದಿನಂತೆ ಹೋದವರಿಗೆಲ್ಲ ಸುಲಭದ ಕೆಲಸ ಸಿಗಬೇಕೆಂದರೆ ಅಗಲ್ಲ. ಯಾವುದೇ ಕ್ವಾಲಿಫಿಕೇಶನ್ ಇಲ್ಲದೇ ಕೈ ತುಂಬಾ ಸಂಬಳ ಸಿಗಬೇಕು ಎಂದು ಯೋಚಿಸುವುದು ತಪ್ಪು. ಇಲ್ಲಿ ಉನ್ನತ ಶಿಕ್ಷಣ ಪಡೆದು ಯಾವುದಾದರೂ ಡಿಗ್ರಿ, ವೃತಿ ತರಬೇತಿ ಮುಗಿಸಿದವರಿಗೆ ಕೆಲವೊಮ್ಮೆ ಉದ್ದೇಶಿತ ಕೆಲಸ ದೊರಕುತ್ತದೆ. ಆದ್ದರಿಂಲೇ ಯುವ ಪೀಳಿಗೆ ಆ ಬಗ್ಗೆ ಗಮನ ಹರಿಸುವುದು ಇಂದಿಗೆ ಸೂಕ್ತ.ಈ ಭವಣೆಯ ಹಿಂದಿರುವ ಕಾರಣಗಳಾವುವು...???
ಮನುಷ್ಯ ಎಂಜಾಯ್ ಬದುಕು, ಕಾರು, ಬಂಗಲೆಗಳ ಕನವರಿಕೆಯಲ್ಲಿ ತೊಡಗಿದಾಗ ಗಲ್ಫ್ ನೆನಪಾಗಿ ಬಿಡುತ್ತೆ. ಕೆಲ ಮಹಿಳೆಯರ ಬಿಂದಾಸ್ ಬದುಕಿನ ಕಲ್ಪನೆಗಳು ಗಂಡನನ್ನು ಗಲ್ಫ್‌ಗೆ ಒತ್ತಾಯ ಪೂರ್ವಕ ಅಟ್ಟಿಸಿಬಿಡುತ್ತೆ. ಇನ್ನು ಸಮಾಜವನ್ನು ರಾಕ್ಷಸನಂತೆ ಕಾಡುತ್ತಿರುವ ವೈರಸ್ ವರದಕ್ಷಿಣೆ ಗಲ್ಫ್ ದುಡಿಮೆಗೆ ಕಾರಣವಾಗುತ್ತೆ. ಒಡಹುಟ್ಟಿದ ಸಹೋದರಿಯರ, ಮಕ್ಕಳ ಮದುವೆಗೆಂದು ಹಣ ಗೂಡಿಸಬೇಕಿದ್ದರೆ ಆ ಮರುಭೂಮಿಗೆ ತೆರಳಿ ನೆತ್ತರು ಬೆವರಾಗಿಸಿ ದುಡಿಯಬೆಕು. ಒಂದು ರೀತಿಯಲ್ಲಿ ನಾವು ನಿರ್ಮಿಸಿಕೊಳ್ಳುತ್ತಿರುವ ಕಟ್ಟಳೆಗಳು, ಹದ್ದು ಮೀರಿದ ಬದುಕಿನ ಶೈಲಿಗಳೇ ನಮ್ಮವರನ್ನು ಕಷ್ಟದ ತಳ್ಳಿ ಬಿಟ್ಟಿದೆ.

ದಾರಿ ತಪ್ಪುತ್ತಿಪುವ ಗಲ್ಫ್ ಮನೆಯ ಮಹಿಳೆಯರು

ಈ ಎಲ್ಲಾ ಕಷ್ಟಕಾರ್ಪಣ್ಯಗಳ ಮಧ್ಯೆ ದೂರದ ಮರುಭೂಮಿಯಲ್ಲಿ ಉರಿಬಿಸಿಲಿನಲ್ಲಿ ಗಂಡ, ತಂದೆ ದುಡಿಯುವಾಗ ಇತ್ತ ಹೆಂಡತಿ/ಮಗಳು ಮೈಮೆರೆತು ಎಂಜಾಯ್ ಬದುಕಿನಲ್ಲಿ ಸಖತ್ ಮಜಾ ಹೊಡೆದು ಸುದ್ದಿಯಾಗುವುದೂ ಇದೆ. ಕೆಲ ಮಹಿಳೆಯರು ಅನ್ಯರ ಸಂಪರ್ಕ ಬೆಳೆಸಿ ಕಟ್ಟಿಕೊಂಡವನಿಗೆ ದ್ರೋಹ ಬಗೆಯುತ್ತಾರೆ ಎಂದರೆ ಅಂಥವರನ್ನು ಏನನ್ನಬೇಕು? ತನ್ನ ಹೆಂಡತಿ ಮಕ್ಕಳೆಂದು ನೆತ್ತರು ಬೆವರಾಗಿಸಿ ದುಡಿಯುವ ಆ ಮನುಷ್ಯ ಏನು ಮಾಡಬೇಕು? ನಿರಂತರ ಮೊಬೈಲ್ ಮೂಲಕ ಅನ್ಯರೊಂದಿಗೆ ಮಾತುಕತೆ, ಚಾಟಿಂಗ್, ಮೀಟಿಂಗ್ ಜೊತೆಗೆ ಸುತ್ತಾಟ ನಡೆಸುವವರು ಎಷ್ಟಿಲ್ಲ? ಯಾಕೆ ಇವರಿಗೆ ಅರ್ಥವಾಗುವುದಿಲ್ಲ? ಕೆಲವೊಮ್ಮೆ ಈ ಅನಿಸ್ಲಾಮಿಕ್ ಚಟುವಟಿಕೆಗಳಿಗೆ ಗಂಡಸರು ಕಾರಣವಾಗುವುದೂ ಇದೆ. ಗಲ್ಫ್‌ನಲ್ಲಿ ಕಷ್ಟಪಟ್ಟು ಸಿಕ್ಕಾಪಟ್ಟೆ ಹಣ ಕಳುಹಿಸಿಕೊಡುತ್ತಾರೆ ವಿನಾ ಪತ್ನಿ ಮಕ್ಕಳನ್ನು ಇಟ್ಟುಕೊಳ್ಳುಬೇಕಾದಲ್ಲಿ ಇಟ್ಟುಕೊಂಡಿರುವುದಿಲ್ಲ. ಅವರನ್ನು ಧರ್ಮದ ನೀತಿ, ಚೌಕಟ್ಟಿನಡಿಯಲ್ಲಿ ಶಿಸ್ತು ಬದ್ಧವಾಗಿ ಇಟ್ಟುಕೊಂಡರೆ ಯಾವುದೇ ದುರಂತಗಳು ಸಂಭವಿಸುವುದಿಲ್ಲ. ಅಂಥ ಶಿಸ್ತಿನ ಕುಟುಂಬಗಳು ಅದೆಷ್ಟೋ ಇದೆ. ಯಾವುದಕ್ಕೂ ಇತಿ-ಮಿತಿಗಳಿವೆ, ಆ ಮಿತಿಗಳು ತಪ್ಪಿದಲ್ಲಿ ಮಾತ್ರ ಅನಾಹುತ ಸಂಭವಿಸುತ್ತದೆ. ಈ ಬಗ್ಗೆ ಅನಿವಾಸಿಗಳಾಗಲಿ, ಮನೆ ಮಂದಿಯಾಗಲಿ ತಿಳಿದರೆ ಯಾವುದೇ ಮಿಸ್ಟಿಕ್ ಇಲ್ಲ ಬಿಡಿ

ಯುವಜನತೆ ಚಿತ್ತ ಬದಲಿಸಬೇಕು

ಇಂದು ಗಲ್ಫ್ ರಾಷ್ಟಗಳಲ್ಲಿ ಹಿಂದಿನಂಥಲ್ಲ ಉದ್ಯೋಗವಕಾಶಗಳು ಕಡಿಮೆಯಾಗುತ್ತಿದೆ ಜಾಗತಿಕವಾಗಿ ಉಂಟಾದ ಆರ್ಥಿಕ ಮುಗ್ಗಟ್ಟು ಗಲ್ಫ್ ರಾಷ್ಟ್ರಗಳನ್ನು ಬಿಟ್ಟಿಲ್ಲ.ಆದ್ದರಿಂದ ಹೊರಗಿನವರಿಗೆ ಕೆಲಸ  ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇನ್ನು ಕೆಲಸವಿದ್ದರೂ ಸಂಬಳ ಕಡಿಮೆ ಇಂಥ ಪರಿಸ್ಥಿತಿಯಲ್ಲಿ ವಿಝಾ, ಟಿಕೇಟ್‌ಗಳೆಂದು ಲಕ್ಷ ಸುರಿದು ಹೋಗಿ ಅಲ್ಲಿ ಮಾಡುವುದೇನು ಹೇಳಿ...??? ಇನ್ನು ಸಂಬಳ, ಮರ‍್ಯಾದೆ ಇರುವ ಕೆಲಸ ಸಿಗಬೇಕಾದರೆ ಉನ್ನತ ಶಿಕ್ಷಣ ಪಡೆದಿರಬೇಕು. ಏನು ಕಲಿಯದೆ ವಿಮಾನ ಹತ್ತಿ ಹೋದರೆ ಅಲ್ಲಿ ಕಷ್ಟ ಪಡಬೇಕಾಗುತ್ತದೆ. ಈ ಬಗ್ಗೆ ಯುವ ಜನತೆ ತಿಳಿಯಬೇಕು. ಕೇವಲ ಗಲ್ಫ್‌ನ ಕನವರಿಕೆಯನ್ನು ಕೈ ಬಿಡಬೇಕು.ಜುಜುಬಿ ಸಂಬಳಕ್ಕಾಗಿ ಲಕ್ಷ ಖರ್ಚುಮಾಡಿ ಬದುಕು ಪೂರ್ತಿ ವಿದೇಶದಲ್ಲಿ ಕರಗಿಸುವುದಕ್ಕಿಂತ ಅದೇ ಹಣವನ್ನು ಊರಿನಲ್ಲಿ ವ್ಯಾಪಾರ ಮುತ್ತಿತರ ವಹಿವಾಟಿಗೆ ವಿನಿಯೋಗಿಸಿದರೆ ಖಂಡಿತಾ ಯಶಸ್ವಿ ಕಾಣಬಹುದು. ಅದೇ ತೆರನಾಗಿ ಬೆಳೆದು ಬರುವ ಪೀಳಿಗೆ ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಇಂದು ಕೆಲವಡೆ ಮಕ್ಕಳು ಶಿಕ್ಷಣದತ್ತ ಉತ್ಸಾಹಿಕರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.ಉನ್ನತ ಶಿಕ್ಷಣ ಪಡೆದ ನಂತರ ನಮ್ಮ ನಾಡಲ್ಲೂ ಉತ್ತಮ ಉದ್ಯೋಗವಕಾಶಗಳು ಇವೆ* ಈ ಬಗ್ಗೆ ಸಮಾಜದ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಿ ನಮ್ಮ ಮಕ್ಕಳನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗ ಪಡೆಯುವಂತೆ ನೋಡಿಕೊಂಡರೆ ಅದೆಷ್ಟೋ ಉತ್ತಮ ನೋಡಿ. ಸಮಾಜ ಎಚ್ಚೆತ್ತು ಕೊಂಡರೆ ಯಾವುದು ಕಷ್ಟವಿಲ್ಲಬಿಡಿ.
ಅಷ್ಟಕ್ಕು ಮಗುವನ್ನು ಎಲ್ಕೇಜಿಗೆ ಸೇರಿಸುವಾಗಲೇ ಗಲ್ಫ್‌ನ ಕನಸು ಕಾಣುವ ಹೆತ್ತವರು ಕೂಡಾ ಯೋಚಿಸಬೇಕು. ಮಕ್ಕಳಲ್ಲಿ ಕೇವಲ ವಿದೇಶದ ಕನಸು ತುಂಬುವುದಕ್ಕಿಂತ ಉನ್ನತ ಶಿಕ್ಷಿತರಾಗಿ ರೂಪಿಸಿ ನಮ್ಮ ಕಣ್ಮುಂದೆನೆ ಉತ್ತಮ ಬದುಕು ರೂಪಿಸಿ ಕೊಟ್ಟರೆ ಅದೆಷ್ಟು ಚೆನ್ನಾ ಹೇಳಿ...??? ಅಲ್ಲವೇ....!!!!

( ಸಂಗ್ರಹ )