ಮಂಗಳವಾರ, ಮೇ 30, 2017

ಸೆಲ್ಫಿ ಸಹಾಯಗಳು ಮತ್ತು ಕಾರುಣ್ಯದ ಕಡಲು

ಸೆಲ್ಫಿ ಸಹಾಯಗಳು ಮತ್ತು ಕಾರುಣ್ಯದ ಕಡಲು
(ಅಲ್ಲಾಹುಮ್ಮ ಸ್ವಲ್ಲಿ ಅಲಾ ಮುಹಮ್ಮದ್.)

ಮೊತ್ತ ಮೊದಲನೆಯದಾಗಿ,  ಸಣ್ಣ ಪುಟ್ಟ ಸಹಾಯ,ಸಹಕಾರ,ದಾನ, ಪರೋಪಕಾರ ಇದ್ಯಾವುದೂ ಒಬ್ಬ ವ್ಯಕ್ತಿಯ ಔದಾರ್ಯವಲ್ಲ ಬದಲಾಗಿ ಮುಸ್ಲಿಮನಾಗುವ ಕನಿಷ್ಟ ಅರ್ಹತೆಗಳು. ದಾರಿಯಲ್ಲಿರುವ ತೊಡಕು ಸರಿಸುವ ಕನಿಷ್ಟ ಅರ್ಹತೆಗಳಂತೆ. ಹಾಗಾಗಿ ಯಾರಾದರೂ ಇಲ್ಲಿ ನಾವು ಫೋಟೋ ತೋರಿಸಿದ್ದರಿಂದ ದಾನ ಹೆಚ್ಚಾಗಲು ಸಾಧ್ಯವಾಯಿತು ಎಂದು ವಾದಿಸುವವರಿದ್ದರೆ ಅವರು ಇಸ್ಲಾಂನೊಂದಿಗೆ ವಾದ ಮಾಡಿಕೊಳ್ಳಲಿ. ಬಲಗೈಯಿಂದ ಕೊಟ್ಟಿದ್ದು ಎಡಕೈ ತಿಳಿಯದಂತಿರಬೇಕು ಎಂದು ಕಲಿಸಿದ ಇಸ್ಲಾಮಿನೊಂದಿಗೆ ಅವರ ಕೌಂಟರ್ ಚರ್ಚೆಗಳಿರಲಿ. ಇನ್ನು ಉಪದೇಶ ಹೇಳುವವನು ಎಷ್ಟು ಮಾಡಿದ್ದಾನೆ ಎಂದು ಕೇಳಲು ಬರುವ ಸಹೋದರರೊಂದಿಗೂ ನಾನು ಹಸ್ಬುನಲ್ಲಾಹ ನಿ'ಅ್ ಮಲ್ ವಕೀಲ್ ಎಂದಷ್ಟೇ ಹೇಳಬಲ್ಲೆ, ಹೊರತು ವಾದ ಮಾಡುವ ಯಾವ ಆಸಕ್ತಿಯೂ ಇಲ್ಲ.

ತಿಳಿಯದೇ ಮಾಡುತ್ತಿರುವಿರಾದರೆ ದಯವಿಟ್ಟು ಇವಿಷ್ಟನ್ನು ಮಾಡಬೇಡಿ ಎಂಬುವುದು ನನ್ನ ಕಳಕಳಿಯ ವಿನಂತಿ

ಕೈಚಾಚುವವನ ಆತ್ಮಗೌರವ ಕಸಿಯುವ, ಅಥವಾ ತಾನೊಬ್ಬ ಯಾಚಕ ಎಂದು ಆತ ಭಾವಿಸಿಬಿಡುವ ದಾನಗಳಿಂದ ಭಯಪಡಿರಿ. ಎಡಗೈಗೆ ತಿಳಿಯದ ರಹಸ್ಯ ದಾನಗಳು ಮಾತ್ರ ನಿಮ್ಮನ್ನು ಅಲ್ಲಾಹನನ್ನು ಭಯಪಡುವಂತೆ ಮಾಡುತ್ತದೆ. ಅಲ್ಲಾಹನ ಭಯವಿದ್ದ ದಾನಗಳು ಎದುರಿನವನನ್ನು ಆಪ್ತನಂತೆ, ಗೆಳೆಯನಂತೆ ,ಸ್ವಂತ ರಕ್ತ ಸಂಬಂಧಿಯಂತೆ ನಿಮಗೆ ಹತ್ತಿರವಾಗಿಸುತ್ತದೆ. ಅಲ್ಲಿ ಮಾತ್ರ ಮೇಲು ಕೀಳಿನ ಸಂಕೋಲೆಗಳು ,ಉಳ್ಳವ ಇಲ್ಲದವ ಎಂಬ ಅಹಮ್ಮುಗಳು ಧೂಳೀಪಟವಾಗುತ್ತದೆ. ಹಾಗಾಗಿ ದಾನದ ಮೂಲ ಉದ್ದೇಶವನ್ನು ಅರಿಯಿರಿ. ಲೋಕದ ಜನರ ಬಹುಪರಾಕಿಗಾಗಿ ಏನನ್ನೂ ಮಾಡಬೇಡಿರಿ. ನಾಶವಾಗದ ಸ್ಟೋರೇಜ್ ಇರುವ ಸೆಲ್ಫಿ ಕ್ಯಾಮರಾವೊಂದು ನಿಮ್ಮ ನಡೆಗಳನ್ನು ದಾಖಲಿಸುತ್ತಿದೆ ಎಂಬುವುದನ್ನು ಮರೆಯದಿರಿ .
ಇನ್ನೊಂದು ನೋವಿನ ವಿಷಯ, ಅದು ಯಾಕಾಗಿ ಇನ್ನೂರು ಮುನ್ನೂರು ರುಪಾಯಿಯ ಪುಸ್ತಕಕ್ಕೆ ಆ ಪುಟ್ಟ ಮಕ್ಕಳ ಫೋಟೋ ತೆಗೆದು ಪ್ರಪಂಚ ಪಸರಿಸುತ್ತೀರಿ ? ಒಮ್ಮೆ ಕಲ್ಪಿಸಿಕೊಳ್ಳಿ ನಿಮ್ಮ ತಂಗಿ ಅಥವಾ ತಮ್ಮ ಕೈಚಾಚುತ್ತಾ ನಿಂತ ಫೋಟೋ ನಿಮ್ಮನ್ನು ಹೇಗೆ ನೋಯಿಸಿಬಿಡಬಹುದು ? ಹಾಗಾದರೆ ಒಬ್ಬ ತಂಗಿಯಾಗಿ ತಮ್ಮನಾಗಿ ಆ ಪುಟ್ಟ ಮಕ್ಕಳನ್ನು ಕಾಣುವ, ಅವರ ಪ್ರೀತಿಯ ಮಮತೆಯ ಅಣ್ಣನಾಗುವ ಹ್ರದಯವಿಲ್ಲದ ಈ ಯಾಂತ್ರಿಕ ಸಹಾಯಗಳು ಯಾರನ್ನು ಮೆಚ್ಚಿಸಲು ? ಅಲ್ಲಾಹನನ್ನೇ ? ನಿಮಗೆ ಸರ್ವಸ್ವನ್ನೂ ಕೊಟ್ಟ ಅಲ್ಲಾಹನಿಗೆ ತಲುಪುವ ಯೋಗ್ಯತೆಯಾದರೂ ಏನಿದೆ ಅದಕ್ಕೆ ? ಮತ್ಯಾರನ್ನು ಮೆಚ್ಚಿಸಲು ? ಕಾರುಣ್ಯದ ಕಡಲು ಮುಹಮ್ಮದರನ್ನೇ ? ಮಕ್ಕಾ ಮದೀನ ಸಹಿತ ಅರಬ್ ರಾಷ್ಟ್ರಗಳ ನಾಯಕನಾಗಿಯೂ ಅನಾಥರನ್ನು ಹೆಗಲಿನ ಮೇಲೆ ಕುಳ್ಳಿರಿಸಿ ಈದ್ ನ ನಮಾಜಿಗೆ ಕರೆದೊಯ್ದ ಮುಹಮ್ಮದರನ್ನು ಮೆಚ್ಚಿಸಲಿದೆಯೇ ? ನಿಮಗೇನಾದರೂ ಬೋಧವಿದೆಯೇ ಮುಹಮ್ಮದರ ಮುಹಮ್ಮದರ ಅನುಯಾಯಿಗಳ ತ್ಯಾಗ ಕರುಣೆ ಮಾನವೀಯ ಗುಣಗಳ ಆಳವೇನು ಎಂಬುವುದರ ಬಗ್ಗೆ. ?

ದಯವಿಟ್ಟು ಮಾಡಬೇಡಿ ಇವುಗಳನ್ನು. ನೀವು ನಿಜಕ್ಕೂ ಅಲ್ಲಾಹನ ಲೆಕ್ಕಪತ್ರಗಳಲ್ಲಿ ಭರವಸೆಯಿಡುವವರಾದರೆ ನೀವು ಕಾರಿರುಳ ಕತ್ತಲಲಿ ಅನಾಥರನ್ನು ಬಡವರನ್ನು ಹುಡುಕಿ ನಡೆದು ಒಂದು ಕಣ ಸಕ್ಕರೆ ದಾನ ಮಾಡಿದ್ದರೂ ಅದರ ಪ್ರತಿಫಲ ನೀವು ಪಡೆದೇ ತೀರುತ್ತೀರಿ. ದಯವಿಟ್ಟು ಜನರಿಗಾಗಿ, ಲೋಕದ ತೋರಿಕೆಗಾಗಿ ಏನೋ ಮಾಡಲು ಹೊರಟು ಜನರನ್ನು ಅಪಮಾನಿಸುವ ಕ್ರೌರ್ಯ ತೋರಬೇಡಿ.  ಫೋಟೋ ತೋರಿಸದೆ ದುಡ್ಡು ಸಿಗುವುದಿಲ್ಲ ಎಂಬ ವಾದಗಳನ್ನು ಹೂಡಬೇಡಿ. ಬದಲಾಗಿ ತೋರಿಕೆಯ ದಾನಗಳ ಕಡೆಗೆ ಅರಿಯದೇ ವಾಲಿರುವ ಅವರ ಚಿಂತನೆಗಳನ್ನು ಬದಲಾಯಿಸಲು ಪ್ರಯತ್ನಿಸಿ. ಪ್ಲೀಸ್ ಯಾವ ಮಗುವೂ ತಾನೊಂದು ದಿನ ದೊಡ್ಡವನಾದಾ/ಳಾದಾಗ ಕೈಚಾಚಿ ನಿಂತ ತನ್ನ ಫೋಟೋ ನೋಡುವಷ್ಟು ಗಟ್ಟಿ ಗುಂಡಿಗೆ ಹೊಂದಿರುವುದಿಲ್ಲ. ಹಾಗಾಗಿ ಅವರ ಅಣ್ಣಂದಿರಾಗಿ, ಚಿಕ್ಕಪ್ಪ ,ಮಾವ ಮತ್ತೇನೋ ಆಗಬಲ್ಲ ಆತ್ಮೀಯ ಗೆಳೆಯರಾಗಿ.ಅವರನ್ನು ಪ್ರೀತಿಸಿರಿ. ಮತ್ತೊಮ್ಮೆ ನೆನಪಿಸುತ್ತಾ ಹೆಗಲ ಮೇಲೆ ಅನಾಥರ ಹೊತ್ತು ನಡೆದ ಮುಹಮ್ಮದರ ಅಣುಸರಣೆಯಿರಲಿ.

ಇದು ಯಾರನ್ನೇ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಗೆಳೆಯನೊಬ್ಬ ಕಳುಹಿಸಿದ ಪುಸ್ತಕ ವಿತರಣೆಯ ಸಾಲು ಸಾಲು ಫೋಟೋಗಳು ಹ್ರದಯಕ್ಕೆ ತಾಕಿದಾಗ ಅನಿವಾರ್ಯಾಗಿ ಬರೆದೆ.ಅದರ ಹೊರತಾಗಿಯೂ ಯಾರಾದರೂ ಬೈಯುವುದಾದರೆ ಸ್ವೀಕರಿಸುತ್ತೇನೆ ಮುಹಮ್ಮದರ ಮೇಲಿನ ಪ್ರೀತಿಗಾಗಿ.

-ಕಂದ