#ಸಣ್ಣಕಥೆ
ಅಸರ್ ನಮಾಝ್ ಮುಗಿಸಿ ಬಂದ ಜಬ್ಬಾರ್ ಉಸ್ತಾದರು ದರ್ಸಿನ ಚಾವಡಿ ಯಲ್ಲಿ ಕುಳಿತು ತಾವೇ ಮಾಡಿದ ಚಹಾ ಹೀರುತ್ತಿದ್ದರು.ಪಕ್ಕದಲ್ಲಿ ಬುತ್ತಿ ತರುವ ಹಕೀಂ, ಉಸ್ತಾದರಿಗೆ ತಂದಿದ್ದ ಮಧ್ಯಾಹ್ನ ದ ಊಟದಲ್ಲಿ ಉಳಿದಿದ್ದ ನೈಚೋರನ್ನು ಉಣ್ಣುತ್ತಿದ್ದ. ಇವತ್ತು ಮೂಸಾ ಹಾಜಾರ್ ನ ಮನೆಯಿಂದ ಉಸ್ತಾದರಿಗೆ ಊಟ.ಹಾಜಾರ್ ನ ಊಟ ಅಂದ್ಮೇಲೆ ಕೇಳಬೇಕೇ!, ನೈಚೋರಿನ ಪರಿಮಳ ಜೋರಾಗೇ ಇತ್ತು. ಉಸ್ತಾದ್! ಉಸ್ತಾದ್!... ಕೂಗು ಕೇಳಿ ಉಸ್ತಾದರು ಚಹಾ ಬದಿಗಿಟ್ಟು ತಿರುಗಿದರು. ಸುಲೈಮಾನ್ ತನ್ನ ಹತ್ತು ತಿಂಗಳ ಮಗುವ ಹಿಡಿದು ಓಡೋಡಿ ಬಂದವನೇ ಉಸ್ತಾದರ ಕೈಯಲ್ಲಿಟ್ಟ.ಏನಾಯ್ತು?...ಉಸ್ತಾದ್ ಕೇಳಿದರು..ಬೆಳಿಗ್ಗೆಯಿಂದ ಒಂದೇ ಸಮನೆ ಹಟ,ಅಳು ನಿಲ್ಲಿಸುತ್ತಿಲ್ಲ ಎಂದನು ಸುಲೈಮಾನ್.ಉಸ್ತಾದರ ಕುರುಚಲು ಗಡ್ಡದಿಂದ ಆವೃತವಾದ ಮುಖ ದಿಟ್ಟಿಸುತ್ತಲೇ ಮಗುವಿನ ಅಳು ನಿಂತಿತ್ತು.ಉಸ್ತಾದರು ಆಯತುಲ್ ಕುರ್ಸಿ ಓದಿ ಊದಿದರು. ತನ್ನ ಪೆಟ್ಟಿಗೆಯಲ್ಲಿದ್ದ ಕಪ್ಪು ನೂಲೊಂದನ್ನು ತೆಗೆದು ಮಂತ್ರಿಸಿ ಮಗುವಿನ ರಟ್ಟೆಗೆ ಕಟ್ಟಿದರು.ಸ್ವಲ್ಪ ಝಂ ಝಂ ನೀರನು ಬಾಯಿಗೆ ಸುರಿಯಲು ಮಗುವಿನ ಮುಖ ಅರಳಿತು. ಮಗುವನ್ನೆತ್ತಿಕೊಂಡು ಸುಲೈಮಾನ್ ಹೊರಟ.ಉಸ್ತಾದರು ಕುಳಿತಿರುವಂತೇ ದರ್ಸಿಗೆ ಮಕ್ಕಳು ಒಂದೊಂದಾಗೇ ಬರ ತೊಡಗಿದ್ದರು. ಮಗ್ರಿಬ್ ಬಾಂಗ್ ಗೆ ಸಮಯವಾದಾಗ ಉಸ್ತಾದರು ಮಸೀದಿ ಒಳಗೆ ಹೋದರು.
ಜಬ್ಬಾರ್ ಉಸ್ತಾದರು ಆ ಊರಿನ ಮಸೀದಿಯ ಖತೀಬರು. ಇಪ್ಪತ್ತೈದು ವರ್ಷಗಳಿಂದ ಅದೇ ಊರಲ್ಲಿ ಸೇವೆ ಸಲ್ಲಿಸುತ್ತಿರುವರು.ಬಹಳ ಗಾಂಭೀರ್ಯ ತುಂಬಿದ ಮುಖದಲ್ಲಿ ನಮಾಜ್ ನ ಕಳೆ ಎದ್ದು ಕಾಣುತ್ತಿತ್ತು. ಕೊಂಚವೂ ತಾಳ್ಮೆ ಕಳೆದುಕೊಳ್ಳದ ಉಸ್ತಾದರದು ಮೇರು ವ್ಯಕ್ತಿತ್ವ. ವಯಸ್ಸಾಗಿದ್ದರೂ ಬಹಳ ಲವಲವಿಕೆಯಿಂದ ಇರುತ್ತಿದ್ದರು. ಜಬ್ಬಾರ್ ಉಸ್ತಾದ್ ಊರಿನ ಎಲ್ಲಾ ಧರ್ಮದವರ ಪಾಲಿಗೆ ಓರ್ವ ಆದರ್ಶ ವ್ಯಕ್ತಿ.ನ್ಯಾಯವೆಂದು ಬಂದಾಗ,ಜಾತಿ,ಬಂಧು ಬಳಗ,ಏನನ್ನೂ ನೋಡುತ್ತಿರಲಿಲ್ಲ.ಊರಿನ ಹಲವಾರು ಜನರ ಕ್ಲಿಷ್ಟಕರ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಸೂಚಿಸಿ ನ್ಯಾಯಯುತ ತೀರ್ಪು ನೀಡಿದ್ದರು.ಅವರು ಬಂದರೆಂದರೆ ಊರವರು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.ಅವರ ಸಂಸಾರ ಇಪ್ಪತ್ತು ಕಿಲೋ ಮೀಟರ್ ಆಚೆಗೆ ವಾಸವಿತ್ತು. ಮೂವರು ಮಕ್ಕಳಲ್ಲಿ ಒಬ್ಬಾಕೆ ಹೆಣ್ಣು. ಎಲ್ಲರಿಗೂ ಮದುವೆಯಾಗಿ ಮಕ್ಕಳಿವೆ. ವಾರದ ಮಧ್ಯದಲ್ಲಿ ಮನೆಗೆ ಹೋಗಿ ಬರುತ್ತಿದ್ದರು.
ಮಗ್ರಿಬ್ ನಮಾಝ್ ಮುಗಿಸಿದವರೇ,ಉಸ್ತಾದರು ದರ್ಸಿಗೆ ಬಂದರು. ಹಸನ್ ಮುಸ್ಲಿಯಾರ್ ಬೇರೆ ರಜೆಯಲ್ಲಿದ್ದರು.ಹಾಗಾಗಿ ಎರಡೂ ತರಗತಿಯ ಮಕ್ಕಳಿಗೆ ಒಟ್ಟಿಗೆ ಪಾಠ ಮಾಡುವ ಅನಿವಾರ್ಯತೆ..ಫಿಕ್ಹ್ ಕುರಿತು ತರಗತಿ ನಡೆಯಿತು.ನಿನ್ನೆ ಕಂಠಪಾಠ ಮಾಡಿ ಬರಲು ಹೇಳಿದ್ದ ಸೂರಃ ವನ್ನು ಕೇಳ ತೊಡಗಿದರು.ಮಕ್ಕಳೆಲ್ಲಾ ಒಬ್ಬೊಬ್ಬರಾಗಿ ಹೇಳಿದರು. ಸ್ವಲ್ಪ ಪೋಕಿರಿಯಾಗಿದ್ದ ಸಫ್ವಾನ್ ತಪ್ಪು ತಪ್ಪಾಗಿ ಹೇಳಿ ಒಂದೆರಡು ಏಟನ್ನೂ ತಿಂದ. ತರಗತಿಯ ನಂತರ ಪ್ರವಾದಿ ಮೊಹಮ್ಮದರ ಚರಿತ್ರೆ ಹೇಳೋದು ವಾಡಿಕೆ..ಉಸ್ತಾದರು ಹಾಜರಿ ಹಾಕಿದ ನಂತರ ಶಾಯಿನಾ ಉಸ್ತಾದ್ ಚರಿತ್ರೆ ಚರಿತ್ರೆ...! ಎಂದಳು..ಉಸ್ತಾದರು, ಪ್ರವಾದಿ ನಮಾಝ್ ಮಾಡುತ್ತಿರಲು ಒಬ್ಬ ವ್ಯಕ್ತಿಯು ಹಿಂದಿನಿಂದ ಬಂದು ಸತ್ತ ಒಂಟೆಯ ಚಿಂದಿಯಾದ ಕರುಳ ಬಳ್ಳಿಯನ್ನು ಅವರ ಕೊರಳಿಗೆ ಹಾಕಿದ ಕತೆಯನ್ನೂ,ಬಳಿಕ ಪ್ರವಾದಿ ಅವನನ್ನು ಕ್ಷಮಿಸಿದ್ದ ವಿಚಾರವನ್ನು ಮಕ್ಕಳಿಗೆ ವಿವರಿಸಿದರು.ತನ್ನ ಕೈಯಲ್ಲಿ ಆ ವ್ಯಕ್ತಿಯ ಶಿಕ್ಷಿಸುವ ಎಲ್ಲಾ ಅವಕಾಶವಿದ್ದಾಗಲೂ ನೆಬಿಯವರು ಅವನಿಗೆ ಕ್ಷಮೆ ನೀಡಿದ್ದರು ಎಂದ ಉಸ್ತಾದರು ಕೆಲವೊಮ್ಮೆ ನ್ಯಾಯ ನೋಡುವುದಕ್ಕಿಂತ ಕ್ಷಮಿಸುವುದಾಗಿದೆ ಉತ್ತಮ ಎಂದರು. ಆ ನೀತಿಯೊಂದಿಗೆ ಅಂದಿನ ತರಗತಿ ಮುಗಿಯಿತು.ಇಶಾ ನಮಾಝ್ ನಂತರ ಊಟ ಮುಗಿಸಿದ ಉಸ್ತಾದರು ನಿದ್ರೆಗೆ ಜಾರಿದರು.ರಾತ್ರಿ ಊಟವ ತಂದಿದ್ದ ಹಕೀಂ ಅದಾಗಲೇ ತನ್ನ ಮನೆಗೆ ಹೋಗಿದ್ದ.
ರಾತ್ರಿ ಮೂರು ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ಏಕಾಂತದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿ ಸುಬುಹ್ ಆಝಾನ್ ವರೆಗೆ ಇಬಾದತ್ ನಲ್ಲಿ ಮಗ್ನರಾಗುವುದು ಉಸ್ತಾದರ ದಿನಚರಿ. ಇಂದೂ ಅದೇ ರೀತಿ ಎದ್ದು ಪ್ರಾರ್ಥನಾ ಮಗ್ನರಾಗಿದ್ದರು. ಅಷ್ಟರಲ್ಲಿ..! ದೊಪ್ಪ್... ಅದೇನೋ ಸದ್ದು... ಕಿಟಕಿಯಿಂದ ಇಣುಕಲು, ಎರಡು ಮುಸುಕುದಾರಿ ಯುವಕರು ಮಸೀದಿಯ ಆವರಣದಲ್ಲಿದ್ದರು. ಅದೇನೋ ಮಸೀದಿಯ ಮುಂದೆ ಎಸೆದು ತಾವು ಬಂದಿದ್ದ ಬೈಕ್ ನತ್ತ ಓಡಿದರು.ಉಸ್ತಾದ್ ಏಯ್ ಯಾರದು ಎಂದು ಧ್ವನಿ ಏರಿಸಲು ಆ ಯುವಕರು ಬೈಕ್ ನಲ್ಲಿ ತೆರಳಿಯಾಗಿತ್ತು. ಉಸ್ತಾದರ ಹೊರ ಬಂದು ನೋಡಿದರು.ಅವರ ಊಹೆ ಸರಿಯಾಗಿತ್ತು. ಅದೊಂದು ಹಂದಿಯ ತಲೆಯಾಗಿತ್ತು. ಸುತ್ತ ಮುತ್ತಲಿನ ಊರುಗಳಲ್ಲಿ ಮಸೀದಿಯ ಮುಂದೆ ಹಂದಿ ತಲೆಯನ್ನೂ, ದೇವಸ್ಥಾನ ದ ಮುಂದೆ ದನದ ತಲೆ ಎಸೆದು ಓಡುವ ಕಿಡಿಗೇಡಿಗಳ ವಿಚಾರ ಅವರಿಗೂ ತಿಳಿದಿತ್ತು.ಮತ್ತು ಅದರ ವಿಚಾರವಾಗಿ ದೊಡ್ಡ ಮಟ್ಟಿನ ಗಲಭೆಗಳು ನಡೆದಿರೋದೂ ಗೊತ್ತಿತ್ತು. ಆದರೆ ಆ ಊರಲ್ಲಿ ಯಾವುದೇ ಗಲಭೆ ಗಳು ನಡೆದಿರಲಿಲ್ಲ. ಸರ್ವ ಧರ್ಮೀಯರು ಅನ್ಯೋನ್ಯತೆಯಲ್ಲಿದ್ದರು. ಇನ್ನು ಈ ಹಂದಿ ತಲೆಯ ವಿಚಾರವಾಗಿ ಊರಲ್ಲಿ ಯಾವುದೇ ತರ್ಕ ನಡೆದು ಗಲಭೆ ಉಂಟಾಗುವುದು ಬೇಡವೆಂದು ನಿರ್ಧರಿಸಿದ ಉಸ್ತಾದರಿಗೆ ತಾನೇ ರಾತ್ರಿ ಹೇಳಿದ ನೀತಿಯ ನೆನಪಾಗಿ ಇಲ್ಲಿ ನ್ಯಾಯಕ್ಕಿಂತ ಕ್ಷಮೆ ಯೋಗ್ಯವೆಂದು ಕೊಂಡರು. ಯೋಚಿಸುತ್ತಿದ್ದಂತೆ ಮಳೆ ಜೋರಾಗಿ ಸುರಿಯ ತೊಡಗಿತು. ಆ ಮಳೆಯಲ್ಲೇ , ಹಾರೆಯ ಸಹಾಯದಿಂದ ಒಂದು ಗುಂಡಿ ತೋಡಿ ಒಂದು ಪ್ಲಾಸ್ಟಿಕ್ ಗೋಣಿಯ ಸಹಾಯದೊಂದಿಗೆ ಆ ತಲೆಯನ್ನು ದಫನ ಮಾಡಿದರು. ಸುರಿದಿದ್ದ ರಕ್ತವನ್ನೆಲ್ಲಾ ಶುದ್ಧೀಕರಿಸುವಷ್ಟರಲ್ಲಿ ಆ ಮುದಿ ಜೀವಕ್ಕೆ ಸಾಕಾಗ್ಬಿಟ್ಟಿತ್ತು. ಬಿರಬಿರನ ಸ್ನಾನವ ಮುಗಿಸಿ ಮಸೀದಿಯ ಒಳಗೆ ಓಡಲು ಅದಾಗಲೇ ಸುಬುಹ್ ಅಝಾನ್ ನ ಸಮಯ ಮೀರಿತ್ತು. ಅಲ್ಲಾಹು ಅಕ್ಬರ್! ಅಲ್ಲಾಹು ಅಕ್ಬರ್! ...ಹದಿನೈದು ನಿಮಿಷ ತಡವಾಗಿ ಮಸೀದಿಯ ಮಿನಾರದಲ್ಲಿ ಆಝಾನ್ ಮೊಳಗಿತು. ಸುಬುಹ್ ನಮಾಝ್ ಗೆ ಮಂದಿ ಆಗಮಿಸ ತೊಡಗಿದರು. ಬಂದವರು ಯಾಕೆ ತಡವಾಯ್ತು ಎಂದು ಕೇಳಲು ಉಸ್ತಾದರು, ನಿದ್ದೆಯಿಂದ ಎಚ್ಚರವಾಗಲು ತಡವಾಯಿತೆಂದರು. ಕೆಲವರು ಅಪಸ್ವರ ಎತ್ತ ತೊಡಗಿದರು. ಹೇಗೋ ಸುಬುಹ್ ನಮಾಝ್ ನಡೆಯಿತು..ಹತ್ತಿರದ ದೇವಸ್ಥಾನ ದಲ್ಲಿ "ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್".... ಸುಪ್ರಭಾತದ ಇಂಪು ಪಸರಿಸ ತೊಡಗಿತು...ಎಲ್ಲವೂ ಶಾಂತವಾಗಿತ್ತು. ಜನ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿದರು.
ಉಸ್ತಾದರು ಹದಿನೈದು ನಿಮಿಷ ತಡವಾಗಿ ಬಾಂಗ್ ಕೊಟ್ಟಿದ್ದು ದೊಡ್ಡ ಸುದ್ದಿಯಾಯಿತು..ಉಸ್ತಾದರ ನ್ಯಾಯ ಇರುವಲ್ಲಿಯ ವರೆಗೆ ಆ ಊರಲ್ಲಿ ತಮ್ಮ ಬೇಳೆ ಬೇಯುವುದಿಲ್ಲವೆಂದು ಅರಿತಿದ್ದ ಎರಡು ಪುಂಡ ನಾಯಕರು ಎಚ್ಚರವಾದರು. ಇದೇ ತಕ್ಕ ಸಮಯವೆಂದು ಕೊಂಡು ಜಮಾತ್ ನ ಒಂದೆರೆಡು ಜನರನ್ನು ಸೇರಿಸಿ ಇಂದೇ ಸಭೆ ನಡೆಯ ಬೇಕೆಂದು ಪಟ್ಟು ಹಿಡಿದರು.ಸುಬುಹ್ ನಮಾಝ್ ಗೆ ಯಾವತ್ತೂ ಬರದವರೂ ಕೂಡ ಅವರ ಜೊತೆ ಸೇರಿ ಕೊಂಡರು. ಸಭೆ ನಡೆಯಿತು. ಕಳೆದ ವಾರ ನಡೆದ ಪಂಚಾಯಿತಿಗೆಯಲ್ಲಿ ಯೂಸುಫನ ವಿರುದ್ಧವಾಗಿ ಉಸ್ತಾದರು ತೀರ್ಪು ಕೊಟ್ಟಿದ್ದರು. ಹಾಗಾಗಿಯೋ ಏನೋ..ಉಸ್ತಾದರಿಗೆ ವಯಸ್ಸಾಗಿದೆ ,ನಿದ್ದೆಯಿಂದ ಎಚ್ಚರವಾಗದವರೆಲ್ಲಾ ನಮಗೆ ಖತೀಬರಾಗಿ ಬೇಡ ಎಂದು ಗುಡುಗಿದರು.ಹಲವರು ದನಿಗೂಡಿಸಿದರು.ಪರವಿರೋಧ ಚರ್ಚೆ ನಡೆಯಿತು. ಕಡೆಗೆ ಅಲ್ಲಿ ಉಸ್ತಾದರನ್ನು ಕಳಿಸಿಕೊಡುವ ತೀರ್ಪು ನೀಡಲಾಯಿತು. ಬಹುಪಾಲು ಮಂದಿ ಉಸ್ತಾದರನ್ನು ಬೆಂಬಲಿಸಿದ್ದರೂ ಎದುರಾಳಿ ಗಳು ಪ್ರಬಲವಾಗಿದ್ದರಿಂದ ಉಸ್ತಾದರನ್ನು ಕಳಿಸಿ ಕೊಡಲೇಬೇಕಾಯಿತು. ಉಸ್ತಾದರು ಸತ್ಯ ಹೇಳಿದ್ದರೆ ಕೆಲಸ ಉಳಿಯುತ್ತಿತ್ತು. ಆದರೆ ಊರು ಉರಿಯುವುದು ಅವರಿಗೆ
ಬೇಕಿರಲಿಲ್ಲ.
ಉಸ್ತಾದರು ನಗುಮುಖದಿಂದಲೇ ವಿದಾಯ ಹೇಳಿದರು.ಸನ್ಮನಸ್ಸಿನ ಜಮಾತಿಗರು ದುಃಖ ದಲ್ಲಿದ್ದರು.ಜಬ್ಬಾರ್ ಉಸ್ತಾದರು ಮನೆ ಕಡೆ ಹೆಜ್ಜೆ ಯಾಕ ತೊಡಗಿದರು.ಅವರಲ್ಲಿ ಸಂತೃಪ್ತಿ ಮನೆ ಮಾಡಿತ್ತು. " ಹೋಗಿದ್ದು ಒಂದು ಕೆಲಸ, ಉಳಿಸಿದ್ದು ಒಂದು ಊರು " ಅನ್ನೋ ಸಂತೃಪ್ತಿ...
ದರ್ಸ್ : ಮದರಸ , ನೈಚೋರ್: ತುಪ್ಪದ ಊಟ , ಸುಬುಹ್ : ಮುಂಜಾನೆ..
#ಇರ್ಫಾನ್_ಹಕ್