ಶನಿವಾರ, ಜುಲೈ 8, 2017

ಕರಾವಳಿ

ರಸ್ತೆ ಅಪಘಾತವಾದರೆ, ಪ್ರಕೃತಿ ವಿಕೋಪ ಘಟಿಸಿದರೆ, ನೆರೆಮನೆಯಲ್ಲಿ ಅನಾಹುತ ಸಂಭವಿಸಿದರೆ ಅಪ್ಪಿತಪ್ಪಿಯೂ ಧರ್ಮದ ಐಡಿ ಕಾರ್ಡ್ ಕೇಳದೆ ಸಹಾಯಕ್ಕೆ ನುಗ್ಗುವ  ಹೃದಯವಂತ ನಾಗರಿಕರಿರುವ ಕರಾವಳಿಯ ಬಗ್ಗೆ ಹೆಮ್ಮೆ ಎನಿಸುತ್ತದೆ...

ಆದರೆ ವಾಸಕ್ಕೆ ದೇಶದಲ್ಲೇ ಸುರಕ್ಷಿತ ಪ್ರದೇಶ ಎಂಬ ಬಿರುದು ಪಡೆದಿರುವ ಇದೇ ಕರಾವಳಿಯಲ್ಲಿ ಯಾರೆ ಒಬ್ಬನ ಮೇಲೆ ದಾಳಿ ನಡೆದರೆ ದಾಳಿಗೊಳಗಾದವನ ಧರ್ಮದ ಐಡಿ ಕಾರ್ಡ್ ಮೇಲೆ ನಮ್ಮ ಮುಂದಿನ ಪ್ರತಿಕ್ರಿಯೆ ನಿರ್ಭರವಾಗಿರುವುದು ವಿಪರ್ಯಾಸವಾಗಿದೆ.

ಇಂತಹ ಘಟನೆ ನಡೆದ ಕೂಡಲೆ ಪರಸ್ಪರ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ತುದಿಗಾಲಲ್ಲಿ ಕೆಲವು ಅಬ್ಬೇಪಾರಿ (ಪದ ಬಳಕೆಗೆ ಕ್ಷಮೆ ಇರಲಿ) ರಾಜಕಾರಣಿಗಳು ಮತ ಎಣಿಕೆಗೆ ಕ್ಯಾಲಕ್ಯುಲೇಟರ್ ನೊಂದಿಗೆ ಪ್ರತ್ಯಕ್ಷರಾಗಿ ಬೂದಿ ಮುಚ್ಚಿದ ಕೆಂಡಕ್ಕೆ ಪೆಟ್ರೋಲ್ ಸುರಿದು ಮಾಯವಾಗುತ್ತಾರೆ.

ಅನ್ನ ಬೇಯಿಸಲು ನೀರು ಬಿಸಿ ಮಾಡು, ದಿನವಿಡಿ ದುಡಿದು ಅಕ್ಕಿ ತರುವೆ ಎಂದು ಹೊರಟ ಅಮಾಯಕ ರಿಕ್ಷಾ, ಟೆಂಪೋ ಚಾಲಕರ ವಾಹನಗಳ (ಅನ್ನದ ತಟ್ಟೆಯ) ಗಾಜುಗಳು ಪುಡಿಯಾಗುತ್ತವೆ. ಪುಡಿಯಾದ ಗಾಜಿನ ಚೂರುಗಳ ಮೇಲಿಂದ ಪೆಟ್ರೋಲ್ ಸುರಿದವರ ಕಾರುಗಳು ರೊಯ್ಯನೆ ಸಾಗುತ್ತವೆ. ದಾಳಿಗೊಳಗಾದ ಬಡ ವಾಹನ ಮಾಲಕ ತನ್ನ ಒಡೆದ ಗಾಜುಗಳ ಮೇಲಿಂದ ಸಾಗಿದ ಕಾರನ್ನೇ ಅಸಹಾಯಕನಾಗಿ ದಿಟ್ಟಿಸುತ್ತಾನೆ...

ಸಶೇಷ...

ಮುಖ್ತಾರ್ ಉಚ್ಚಿಲ.