ಶನಿವಾರ, ಜುಲೈ 1, 2017

ಯುವ ಶಕ್ತಿ

ಯವ್ವನ ಎಂಬ ಪದವೇ ಮೈಯನ್ನು ರೋಮಾಂಚನಗೊಳಿಸುತ್ತದೆ. ಪ್ರೌಡ ಹಂತವು ಕಳೆದು ಚಿಗುರು ಮೀಸೆ ಮೊಳಕೆಯೊಡೆಯುವ ಸನ್ನಿವೇಶದಲ್ಲಿ ಮನಷ್ಯ ಭಯವೆಂಬ ಗುಣವನ್ನೇ ಮರೆತು ತಾನು ಬಯಸಿದ್ದನ್ನು ಮಾಡಿಯೇ ತೀರುವೆನೆಂಬ ದೃಡವಾದ ಸಂಕಲ್ಪವನ್ನು ಹೊಂದಿರುತ್ತಾನೆ. ಯುವ ಶಕ್ತಿ ಎಂದರೆ ಪರಮಾಣು ಶಕ್ತಿಗಿಂತಲೂ ಮಿಗಿಲು. “Atomic Power is not than Youth Power” ಎಂಬ ಅನುಭವ ನುಡಿಯು ಕೇವಲ ಉತ್ಪ್ರೇಕ್ಷೆಯಲ್ಲ.
ಚರಿತ್ರೆಯನ್ನು ಕೆದಕುವಾಗ ಅದೆಷ್ಟೋ ಸಾಹಸಗಳ, ಯುದ್ದಗಳ, ವೀರ ಕ್ರೂರ ಪರಾಕ್ರಮಗಳ, ಹಿಂದೆ ಯುವಕರಲ್ಲದೆ ಇನ್ಯಾರು.?
ಬಿಸಿ ರಕ್ತವು ನರನಾಡಿಗಳಲ್ಲಿ ಸಂಚರಿಸುವ ತಾರುಣ್ಯವು ಯಾವತ್ತೂ ಅಂಜಿಕೆಗಳಿಗೆ ಶರಣಾಗದು. ಹಿಮಾಲಯ ಪರ್ವತದ ತುತ್ತ ತುದಿಯನ್ನೇರಿ ನಿರಾಳವಾದ ನಿಟ್ಟುಸಿರನ್ನು ಬಿಟ್ಟ ತೇನ್‌ಸಿಂಗ್ ನೋರ್ಕೆ ಒಬ್ಬ ಯುವಕನಾಗಿದ್ದನು. ದೈತ್ಯವಾದ ಕಡಲಿನ ತೆರೆಮಾಲೆಗಳನ್ನು ಸೀಳಿ ಯುರೋಪ್‌ನಿಂದ ಜಲಮಾರ್ಗವಾಗಿ ಹಲವಾರು ತಿಂಗಳುಗಳ ಯಾನ ಮಾಡಿ ದಕ್ಷಿಣ ಭಾರತದ ಕಲ್ಲಿಕೋಟೆಯಲ್ಲಿ ಬಂದಿಳಿದ ನಾವಿಕ ಕೊಲಂಬಸನೂ ಬಿಸಿರಕ್ತ ಹರಿಯುವ ತರುಣನಾಗಿದ್ದನು. ದೇಶದ ಗಡಿಗಳನ್ನು ಹಗಲು ರಾತ್ರಿ ಎನ್ನದೆ ಪಹರೆ ಕಾಯುತ್ತಿರುವ ಸೇನಾಪಡೆಗಳು ಯುವಕರ ದಂಡುಗಳಾಗಿವೆ. ಪ್ರಾಣವನ್ನೇ ಒತ್ತೆಯಿಟ್ಟು ಗಣಿಗಳ ಆಳಕ್ಕಿಳಿದು ಕಚ್ಚಾ ವಸ್ತುಗಳನ್ನು ಹೊರತೆಗೆಯುವ ಸಾಹಸಿಗಳೂ ಯುವಕರಾಗಿದ್ದಾರೆ. ಒಟ್ಟಿನಲ್ಲಿ ಯವ್ವನವು ಅದ್ಭುತವಾದ ಕಾಲ.
ಪ್ರವಾದಿ(ಸ.ಅ) ಹೇಳುತ್ತಾರೆ, ನಾಳೆ ಪರಲೋಕದಲ್ಲಿ ಅಲ್ಲಾಹನ ಮುಂದೆ ಎಲ್ಲರೂ ಸಂಗಮಿಸುವ ವೇಳೆಯಲ್ಲಿ ಅಲ್ಲಾಹನ ವಿಚಾರಣೆಯು ಬಹಳ ಗೌರವ ಪೂರ್ಣವಾಗಿರುತ್ತದೆ. ಪ್ರಮುಖವಾಗಿ ನಮ್ಮ ಯವ್ವನದ ಬಗ್ಗೆ ಅಲ್ಲಾಹು ಕೇಳುವನು. ಓ ಮನುಷ್ಯ ನಿನಗೆ ನಾನು ಆರೋಗ್ಯಪೂರ್ಣ ಯವ್ವನವನ್ನು ನೀಡಲಿಲ್ಲವೇ? ಅದನ್ನು ನೀನು ಹೇಗೆ ವ್ಯಯಿಸಿದೆ.?”
ಈ ಪ್ರಶ್ನೆಗೆ ಉತ್ತರಿಸದೇ ನಿಂತಲ್ಲಿಂದ ಒಂದು ಹೆಜ್ಜೆಯನ್ನು ಮುಂದಿಡಲು ಸಾದ್ಯವಿಲ್ಲ. ಎಲ್ಲರೂ ಕೈಕಟ್ಟಿ ಉತ್ತರಿಸಬೇಕಾದ ದಿನವದು. ಲಹರಿ ಪದಾರ್ಥಗಳ ದಾಸರಾಗಿ ಸುಂದರ ಭವಿಷ್ಯವನ್ನು ಬಲಿಕೊಡುತ್ತಿರುವ ಮುಗ್ದ ಯುವಕರು ಆಲೋಚಿಸಲು ಈ ಪವಿತ್ರ ಹದೀಸ್ ಸಾಕಾಗಿದೆ. ಆಡಂಭರದ ಜೀವನವನ್ನು ಕನಸು ಕಂಡು ಅದರ ನೆನಪಿಗಾಗಿ ಏನನ್ನು ಮಾಡಲೂ ಹೇಸದ ಲಜ್ಜಗೆಟ್ಟ ಯುವ ಸಮೂಹವೊಂದು ಬೆಳೆದು ಬರುತ್ತಿರುವಾಗ ಅದರ ವಿರುದ್ದ ಧಾರ್ಮಿಕ ಚಿಂತನೆಗಳಿಂದ ನೈತಿಕತೆಯ ಹಾದಿಯನ್ನು ತುಳಿಯುವ ಯುವಕರ ತಂಡವೂ ಸೃಷ್ಟಿಯಾಗಬೇಕಿದೆ.
ಸತ್ಯಮಾರ್ಗದಲ್ಲಿ ನಿರಂತರವಾಗಿ ಹೋರಾಡುವ ಒಂದು ವಿಭಾಗವು ನನ್ನ ಸಮುದಾಯದಲ್ಲಿದೆ. ಎಂಬ ಪ್ರವಾದಿ ವಚನದಡಿಯಲ್ಲಿ ಒಗ್ಗೂಡುವ ಮಾದರಿ ಯುವಕರ ಗುಂಪನ್ನು ನಾವು ರೂಪಿಸುವುದು ಅನಿವಾರ್ಯವಾಗಿದೆ.
ಚಿಕ್ಕಾಸಿನ ಆಮಿಷಕ್ಕೆ ಯುವಕರನ್ನು ಬಲಿ ನೀಡುವ ಭ್ರಷ್ಟ ಅಧಿಕಾರಿಗಳ ಕಪಟ ನಾಟಕವನ್ನು ಅರ್ಥೈಸುವಂತಹ ಪ್ರಜ್ಷೆಯುಳ್ಳ ಯುವಕರು ಸೃಷ್ಟಿಯಾಗಬೇಕು. ಪಕ್ಷ, ಹಣ, ಕೋಮು ಮುಂತಾದ ವಿಷಪ್ರಾಶನ ನೀಡಿ ಯುವಕರ ಬ್ರೈನ್‌ವಾಶ್ ನಡೆಸುವ ದುರುಳರನ್ನು ಗುರುತಿಸುವ ಯುವಕರು ಸಮಾಜಕ್ಕೆ ಅವಶ್ಯವಾಗಿದೆ.
ಮೇಯಿಸುವವನಿಲ್ಲದ ಮೇಕೆಗಳಂತೆ” ನಾಯಕತ್ವವಿಲ್ಲದೆ ನಮ್ಮ ಯುವ ಪೀಳಿಗೆ ಚೆಲ್ಲಾಪಿಲ್ಲಿಯಾಗಿದೆ. ಸುಭದ್ರವಾದ ನಾಯಕತ್ವ ಮತ್ತು ಉತ್ತಮವಾದ ಮಾರ್ಗದರ್ಶನ ಲಭಿಸಿದರೆ ಖಂಡಿತಾ ಯುವಶಕ್ತಿಯನ್ನು ಸರಿದಾರಿಯಲ್ಲಿ ಮುನ್ನಡೆಸಬಹುದು.
ಸಮುದಾಯದಲ್ಲಿರುವ ಅನೈಕ್ಯತೆ, ಪಕ್ಷಪಾತ ಧೋರಣೆಗಳನ್ನು ಕಂಡು ಯುವಶಕ್ತಿಯು ಮುಜುಗರ ಪಟ್ಟುಕೊಳ್ಳುತ್ತಿವೆ. ದರ್ಮದ ಹೆಸರಿನಲ್ಲಿ ಆಂತರಿಕ ಕಚ್ಚಾಟ ನಡೆಸುವವರಿಗೆ ಕುಮ್ಮಕ್ಕು ನೀಡಿ ತಮ್ಮ ಬೇಳೆ ಬೇಯಿಸಲು ಬಾಹ್ಯ ವೈರಿಗಳಿಗೆ ಬಹಳ ಸುಲಭವಾಗುತ್ತದೆ.
ಚಿಲ್ಲರೆ ವಿಷಯಗಳಿಗಾಗಿ ಮುಖ ತಿರುಗಿಸಿ ನಡೆಯುತ್ತಿರುವ, ಸಂಕುಚಿತ ಮುನೋಭಾವಗಳನ್ನು ಕೊನೆಗೊಳಿಸಬೇಕು. ಸ್ವ-ಹಿತಾಶಕ್ತಿಗಳನ್ನು ಬದಿಗಿರಿಸಿ ಸಮುದಾಯಕ್ಕಾಗಿ ದುಡಿಯುವ ವಿಶಾಲ ಮನಸನ್ನು ಬೆಳೆಸಬೇಕು. ವೇದಿಕೆಗಳನ್ನು ಕಟ್ಟಿ ಪರಸ್ಪರ ದೂಷಣೆಗಳನ್ನು ಮಾಡುವ ವಿಷಕಾರಿ ಭಾಷಣಗಳನ್ನು ಕೊನೆಗೊಳಿಸಿ ನಮ್ಮ ನಾಲಗೆ ಮತ್ತು ಕೈಗಳಿಂದ ಒಳಿತನ್ನು ಮಾತ್ರವೇ ಮಾಡುವ ಪ್ರತಿಜ್ಞೆಗಳನ್ನು ಕೈಗೊಳ್ಳಬೇಕು.
ಪರಸ್ಪರ ಮೈ ಪರಚಿಕೊಳ್ಳುವ ಕಾರ್ಯಕ್ರಮಗಳನ್ನು ಯುವಕರು ತಣ್ಣೀರೆರಚಿ ನೀರಸಗೊಳಿಸಬೇಕು. ವಿದ್ಯಾಭ್ಯಾಸದ ವಿಷಯದಲ್ಲಿ ಮುಂದುವರಿಯುವ ಉನ್ನತ ಸಮುದಾಯವಾಗಿ ರೂಪುಗೊಳ್ಳಬೇಕು. ಮೋರಿಗಳ ಮೇಲೆ, ಅಂಗಡಿ ಬದಿಯಲ್ಲಿ, ಬೀದಿಗಳಲ್ಲಿ ನಿಂತು ಸಮಯವನ್ನು ಕೊಲ್ಲುವ ಬೀದಿ ಬೀಕಾರಿಗಳ ಸಂಘಗಳಲ್ಲಿ ನಮ್ಮ ಹೆಸರು ಶಾಮಿಲಾಗದಂತೆ ನೋಡಿಕೊಳ್ಳಬೇಕು. ಪ್ರವಾದಿ (ಸ.ಅ) ಹೇಳುತ್ತಾರೆ. ’ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಅವರ ಅವಕಾಶಗಳನ್ನು ಬಿಟ್ಟುಕೊಡಿ. ಅವರಿಗೆ ತೊಂದರೆ ಕೀಟಲೆಗಳನ್ನು ನೀಡಬಾರದು. ವಿನಾಕಾರಣ ದಾರಿಹೋಕರನ್ನು ನಿಂದಿಸಿ ಛೇಡಿಸಿ ಅವರ ತೇಜೋವಧೆ ನಡೆಸುವ ಯುವಕರ ಕೆಲವು ಸಂಘಗಳನ್ನು ಕಾಣಬಹುದು. ಕೆಲವರಂತೂ ಮುಗ್ದ ಹೆಂಗಸರನ್ನು ಈ ರೀತಿ ಕೀಟಲೆ ಮಾಡುವುದುಂಟು. ನಿಜವಾಗಿಯು ಇದು ಮಹಾ ಅಪರಾಧ. ರಸ್ತೆಯಲ್ಲಿರುವ ಮುಳ್ಳುಗಳನ್ನು ಬದಿಗೆ ಸರಿಸಿರಿ ಅದು ಮಹತ್ತರವಾದ ದಾನ ಧರ್ಮವಾಗಿದೆ. ಎಂದು ಸಾರಿ ಹೇಳಿದ ಪ್ರವಾದಿ ಅನುಯಾಯಿಗಳಿಗೆ ಇದು ಭೂಷಣವಲ್ಲ.
ಸಮುದಾಯ ನಿರಂತರವಾಗಿ ಅನುಭವಿಸಿಕೊಂಡು ಬರುತ್ತಿರುವ ಹಲವಾರು ಸಮಸ್ಯೆಗಳನ್ನು ಬೊಟ್ಟುಮಾಡಿ ಅದರ ನಿವಾರಣೆಗಾಗಿ ಪರಿಹಾರ ಮಾರ್ಗವನ್ನು ಕಂಡು ಹಿಡಿಯಲು ಯುವಶಕ್ತಿ ಮುಂದಾಗಬೇಕು. ಸಮುದಾಯದ ಉಲಮಾಗಳಿಂದ ಮಾರ್ಗದರ್ಶನ ಪಡೆದು ಮುಂದುವರಿದರೆ ಖಂಡಿತಾ ಯಶಸ್ಸನ್ನು ಸಾಧಿಸಬಹುದು.
ಸಮಾಜದಲ್ಲಿ ಪೆಡಂಭೂತವಾಗಿ ವಕ್ಕರಿಸುತ್ತಿರುವ ವರದಕ್ಷಿಣೆ, ಮೌಢ್ಯ, ನೂತನವಾದಗಳು ಕೊನೆಗೊಳ್ಳದೆ ಸಮುದಾಯ ತಲೆ ಎತ್ತಿ ನಿಲ್ಲಲು ಸಾದ್ಯವಿಲ್ಲ. ಆಲೋಚನಾ ಶಕ್ತಿಯುಳ್ಳ ಯುವಶಕ್ತಿ ಒಂದು ನಾಡಿನಲ್ಲಿದ್ದರೆ ಆ ನಾಡನ್ನು ಅಭಿವೃದ್ಧಿಗೊಳಿಸಲು ಬಹಳ ಸುಲಭ. ಮಸೀದಿಗಳ ಮುಂದೆ ಇನ್ನೊಂದು ಮಸೀದಿ ಕಟ್ಟುವ ಸಂಪ್ರದಾಯವನ್ನು ಕೊನೆಗೊಳಿಸಬೇಕು. ಧರ್ಮದ ಪ್ರಚಾರ ಅವಶ್ಯಕತೆ ಇರುವ ಅದೆಷ್ಟೋ ಊರು ಕೇರಿಗಳು ನಮ್ಮ ಕರ್ನಾಟಕದಲ್ಲೇ ಇದೆ. ಧರ್ಮದ ಸಂದೇಶಗಳು ಅತ್ತ ರವಾನಿಸಬೇಕು. ಮಾಡುವ ಕಾರ್ಯಗಳೆಲ್ಲವೂ ಅಲ್ಲಾಹನಿಗಾಗಿ ಎಂಬ ನಿಯ್ಯತ್ತಿನಲ್ಲಿರಬೇಕು. ಬಡತನ ನಿರುದ್ಯೋಗ ಮುಂತಾದ ಹಲವಾರು ಸಮಸ್ಯೆಗಳು ಸಮುದಾಯವನ್ನು ತಲ್ಲಣಗೊಳಿಸಿದೆ. ಇವುಗಳನ್ನು ತೊಡೆದು ಹಾಕಿ ಸಮುದಾಯವನ್ನು ಮೇಲಕ್ಕೆತ್ತುವ ಕಾರ್ಯಗಳನ್ನು ರೂಪಿಸಿಕೊಂಡು ನಿರಂತರವಾಗಿ ಸಮುದಾಯ ತ್ಯಾಗಿಗಳಾಗಿ ಬಾಳುವ ಪ್ರತಿಜ್ಞೆಯನ್ನು ಕೈಗೊಳೋಣ…