ಶುಕ್ರವಾರ, ಅಕ್ಟೋಬರ್ 27, 2017

ಎಣ್ಣೆ ಬತ್ತಿದ ಲಾಟೀನಿನ ಬೆಳಕ ಹಿಂಬಾಲಿಸುತ್ತಾ..

*ಎಣ್ಣೆ ಬತ್ತಿದ ಲಾಟೀನಿನ ಬೆಳಕ ಹಿಂಬಾಲಿಸುತ್ತಾ...*

 

*ಹಿಂದಣ ಹೆಜ್ಜೆಯನ­ರಿಯದೆ ನಿಂದ ಹೆಜ್ಜೆಯನರಿಯ­ಬಾರದು – ಅಲ್ಲಮ ಪ್ರಭು*

 

‘ಎಣ್ಣೆ ಬತ್ತಿದ ಲಾಟೀನು’ -  ಇದೊಂದು ಪ್ರವಾಸ ಕಥನವಲ್ಲ, ಲೇಖಕರು ಎಲ್ಲೂ ಕೂಡಾ ಈ ಪುಸ್ತಕದಲ್ಲಿ ಈ ಯಾತ್ರೆಯ ಬಗ್ಗೆ ಪ್ರವಾಸ ಎನ್ನುವ ಪದವನ್ನು ಉಲ್ಲೇಖಿಸುವುದೂ ಇಲ್ಲ. ಇದು ಪುಸ್ತಕದಲ್ಲಿ ಬರೆದಿರುವಂತೆ ‘ಉಮ್ರಾ ಅನುಭವ ( A Umra Journey Experience). ‘ ಪ್ರವಾಸ ಕಥನ’ಕ್ಕೂ ‘ಉಮ್ರಾ ಅನುಭವ’ಕ್ಕೂ ಇರುವ ವ್ಯತ್ಯಾಸ ಏನು ಎನ್ನುವುದು ಒಂದು ಪ್ರಶ್ನೆ. ಪ್ರವಾಸ ಕಥನಕ್ಕೆ ಒಂದು ಆಧ್ಯಾತ್ಮಿಕ ಆಯಾಮ ಇರಬೇಕೆಂದಿಲ್ಲ. ಒಂದಿಷ್ಟು ದುಡ್ಡು ನಮ್ಮ ಅಕೌಂಟಿನಲ್ಲಿದ್ದರೆ, ನಮಗಿಷ್ಟದ ಯಾವುದೇ ಹೊಸ ಜಾಗವನ್ನು ಸುತ್ತಾಡಿ, ಅಲ್ಲಿನ ವಿಶೇ‍ಷತೆಗಳನ್ನು ದಾಖಲಿಸಿ ಅದನ್ನು ಓದಿಸಿಕೊಳ್ಳುವ ಓಘದಲ್ಲಿ ಅಕ್ಷರದ ಮೂಲಕ ಕಟ್ಟಿಕೊಡುವುದು. ಅಲ್ಲಿನ ನಮ್ಮ ಅನುಭವಗಳನ್ನು ದಾಖಲಿಸುವಾಗ ಅಲ್ಲಿನ ಇತಿಹಾಸವನ್ನು ನಮೂದಿಸುವ ಪರಿಪಾಠವಿರುತ್ತದೆ. ಆ ಇತಿಹಾಸವನ್ನು ವಿವಿಧ ಮೂಲಗಳಿಂದ, ಉಲ್ಲೇಖಗಳಿಂದ ಎತ್ತಿಕೊಳ್ಳಲಾಗುತ್ತದೆ. ಮತ್ತು ಅದು ಸತ್ಯವೇ ಆಗಬೇಕೆಂದಿಲ್ಲ. ಉಮ್ರಾ ಅನುಭವದ ‘ಎಣ್ಣೆ ಬತ್ತಿದ ಲಾಟೀನು’ ವಿಶಿಷ್ಟವಾಗುವುದು ಈ ಕಾರಣಕ್ಕೆ. ಮಕ್ಕಾ ಹಾಗೂ ಮದೀನಾದ ಬಗೆಗಿನ ಇತಿಹಾಸಕ್ಕೆ ಸಂಪೂರ್ಣ ಅಥೆಂಟಿಸಿಟಿ ಇದೆ. ಇದು ಯಾವುದೋ ಒಬ್ಬ ಇತಿಹಾಸಕಾರ ಬರೆದುದಲ್ಲ. ಪವಿತ್ರ ಕುರ್ ಆನಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ಐತಿಹಾಸಿಕ ನೆಲದಲ್ಲಿ ನಿಂದು, ಅಲ್ಲಿನ ಧಾರ್ಮಿಕ ಕರ್ಮಗಳನ್ನು, ಆರಾಧನೆಗಳನ್ನು ನಿರ್ವಹಿಸುತ್ತಾ ವರ್ತಮಾನದಲ್ಲಿ ಅದರ ಪ್ರಸ್ತುತತೆಯನ್ನು ವಿವರಿಸುವುದು – ಈ ‘ಎಣ್ಣೆ ಬತ್ತಿದ ಲಾಟೀನು’ ತೋರುವ ಬೆಳಕು.

 

ಓರ್ವ ಪತ್ರಿಕೋದ್ಯೋಗಿಯಾಗಿ ಕುಕ್ಕಿಲರು ವರ್ತಮಾನದ ಆಗುಹೋಗುಗಳಿಗೆ ತೀಕ್ಷ್ಣವಾಗಿ ಹಾಗೂ ಲಾಜಿಕಲ್ಲಾಗಿ ಪ್ರತಿಕ್ರಿಯಿಸುತ್ತಿರುವವರು. ಅದನ್ನು ಅವರ ಪತ್ರಿಕಾ ಲೇಖನಗಳಲ್ಲಿ, ಸಾಮಾಜಿಕ ಮಾಧ್ಯಮ ಪೇಜುಗಳಲ್ಲಿ ಹಾಗೂ ಟಿವಿ ಪ್ಯಾನೆಲ್ ಚರ್ಚೆಗಳಲ್ಲಿ ನಾವು ಕಂಡಿದ್ದೇವೆ. ವರ್ತಮಾನದಲ್ಲಿ ಇಸ್ಲಾಮಿನ ಮೇಲೆ ಇರುವ ಪ್ರಮುಖ ಆರೋಪ ಅದು ಸ್ತ್ರೀ-ಪುರುಷ ತಾರತಮ್ಯ ಎಸಗುತ್ತಿದೆ ಎಂಬುದು. ಅದರಿಂದಲೇ, ಈ ಪುಸ್ತಕದ ಮೊದಲ ಭಾಗದಿಂದಲೇ ಇದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ಮಕ್ಕಾ ಹಾಗೂ ಮದೀನದಲ್ಲಿ ತಾನು ‘ದೃಕ್-ಸಾಕ್ಷಿ’ಯಾಗಿರುವುದರ ಉದಾಹರಣೆಯಿಂದಲೇ ವಿವರಿಸುತ್ತಾರೆ. ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿದ್ದ ಮುಕ್ತತೆ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಖಲೀಫಾ ಉಮರ್(ರ) ಬಳಿಕದ ಆಗಿರುವ ಬದಲಾವಣೆಯಿಂದ ಆಗಿರುವ ಪ್ರತ್ಯೇಕತೆಯನ್ನು ಎರಡು ಸಾಧ್ಯತೆಗಳ ಹಿನ್ನೆಲೆಯಲ್ಲಿ ಲೇಖಕರು ಗುರುತಿಸುತ್ತಾರೆ. ಈ ಎರಡು ಸಾಧ್ಯತೆಗಳೇ ಇಸ್ಲಾಮಿನಲ್ಲಿ ವೈಚಾರಿಕ ವೈವಿಧ್ಯಕ್ಕಿರುವ ಅತಿ ದೊಡ್ಡ ಪುರಾವೆ ಎನ್ನುವ ಲೇಖಕರು ಮುಸ್ಲಿಂ ಸಮುದಾಯದ ಈಗಿನ ದಾರಿ ಯಾವುದಾಗಿರಬೇಕು ಎಂಬುದನ್ನೂ ತಿಳಿಸುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ, “ಎಲ್ಲವನ್ನೂ ‘ನಿಷಿದ್ಧ’ಗಳ ಪಟ್ಟಿಯಲ್ಲಿಡುವ ಉಗ್ರ ನಿಲುವು ಮತ್ತು ಎಲ್ಲವನ್ನೂ ‘ಮುಕ್ತ’ಗಳ ಪಟ್ಟಿಯಲ್ಲಿಡುವ ಉದಾರ ನಿಲುವುಗಳ ನಡುವಿನ ನಿಲುವು ಇಸ್ಲಾಮಿನದ್ದು” – ಇದು ನಾವು  ಈಗಿನ ದಿನಗಳಲ್ಲಿ ಹೆಚ್ಚು ಅರ್ಥೈಸಿಕೊಳ್ಳಬೇಕಾದ ವಿಚಾರ.

 

ಉಮ್ರಾದಲ್ಲಿ ನಿರ್ವಹಿಸುವ ಆರಾಧನೆಗಳನ್ನು ಕೇವಲ ಧಾರ್ಮಿಕ ಕರ್ಮಗಳಾಚೆ ನೋಡುವುದು ಇಸ್ಲಾಮೀ ಇತಿಹಾಸದ ಅಧ್ಯಯನ ಬೆನ್ನಿಗಿರಿಸಿಕೊಂಡ ಎ.ಕೆ.ಕುಕ್ಕಿಲರ ಈ ಪುಸ್ತಕದ ಮುಖ್ಯ ವಸ್ತು. ಅದು ತವಾಫ್ ಆಗಿರಲಿ, ಸಫಾ-ಮರ್ವಾ ಮಧ್ಯೆಯ ನಡಿಗೆಯ ಬಗ್ಗೆ ಆಗಿರಲಿ, ಕಂದಕ್ ಯುದ್ಧದ ಬಗೆಗಿರುವ ಕುರುಹಿನ ಬಗೆಯಾಗಿರಲಿ -  ಈ ಪುಸ್ತಕ ಒಂದು ಹೊಸ ಹೊಳಹನ್ನು ನೀಡುತ್ತದೆ. ಇಂದು ಹಜ್ಜ್ – ಉಮ್ರಾ ಯಾತ್ರೆ ಕೈಗೊಂಡವರು ನಮ್ಮ ಸುತ್ತಮುತ್ತ ಧಾರಾಳವಾಗಿದ್ದಾರೆ. ಆದರೆ, ಅಲ್ಲಿನ ಆರಾಧನಾ ಕ್ರಮಗಳನ್ನು ಬಹುಪಾಲು ಕರ್ಮಶಾಸ್ತ್ರದ ಹಿನ್ನೆಲೆಯಲ್ಲಿ, ಧಾರ್ಮಿಕ ಆರಾಧನೆಯ ಹಿನ್ನೆಲೆಯಲ್ಲಿ ಮಾತ್ರ ನೋಡಿರುವವರು. ಆದರೆ, ಈ ಆರಾಧನಾ ಕ್ರಮಗಳು ವರ್ತಮಾನಕ್ಕೆ ಏನನ್ನು ಹೇಳುತ್ತಿದೆ? ಉಹುದ್ ಯುದ್ಧದಲ್ಲಿ ಪ್ರವಾದಿ(ಸ) ಸೈನ್ಯಕ್ಕೆ ಹಿನ್ನೆಲೆಯಾಗಲು ಅನುಸರಣೆ ಮಾಡದ ಅನುಯಾಯಿಗಳು ಜಬಲುರ್ರುಮಾತ್ ನಿಂದ ಇಳಿದು ಬಂದಿರುವುದ ಬಗ್ಗೆ ಐತಿಹಾಸಿಕ ಉಲ್ಲೇಖಗಳನ್ನು ಹೇಳುತ್ತಾ, ಅದನ್ನು ಪ್ರಸಕ್ತ ಜಾಗತಿಕ ಮುಸ್ಲಿಮರ ಹಿನ್ನೆಡೆಗೆ ರೂಪಕವಾಗಿ ಬಳಸಿ, ಭೂತ ಮತ್ತು ವರ್ತಮಾನವನ್ನು ಒಟ್ಟೊಟ್ಟಿಗೇ ನಮ್ಮೊಳಗೆ ಇಳಿಯುವಂತೆ ಮಾಡುವದು ಈ ಪುಸ್ತಕದ ಒಂದು ಹೆಗ್ಗಳಿಕೆ. ಜೊತೆಗೆ, ಬದ್ರ್ ನ ಗೆಲುವುಗಿಂತಲೂ ಉಹುದ್ ನ ಸೋಲಿನ ಬಗ್ಗೆ ಕುರಿಆನಿನಲ್ಲಿ ಹೆಚ್ಚಿನ ಮಹತ್ವವಿದೆ ಎಂದು ಹೇಳುವ ಲೇಖಕರು, ಅದರಿಂದ ನಾವು ಏನನ್ನು ಕಲಿಯಬೇಕು ಹಾಗೂ ಯಾವ ರೀತಿ ಕ್ರಿಯಾಶೀಲರಾಗಬೇಕು, ವರ್ತಮಾನದಲ್ಲಿ ಪರ್ಯಾಯಗಳನ್ನು ಯಾವ ರೀತಿ ರೂಪಿಸಬೇಕು ಎಂದೂ ಎಚ್ಚರಿಸುತ್ತಾರೆ.

 

 

ಉಮ್ರಾ ಕ್ಕೆ ಅನಿರೀಕ್ಷಿತವಾಗಿ ಹೊರಟ ಬಗೆ, ಅದಕ್ಕೆ ತಾನು ತನ್ನನ್ನು ಸಿದ್ದತೆಗೊಳಿಸಿದ ರೀತಿಯ ಬಗ್ಗೆ ಕುಕ್ಕಿಲರು ವಿವರಿಸುವಾಗ ನನಗೆ ಅಲ್ಲಿ ಕಂಡದ್ದು ಪ್ರಾಮಾಣಿಕತೆ ಮತ್ತು ಮುಗ್ಧತೆ. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಉಮ್ರಾ ಪ್ರಯಾಣಕ್ಕಾಗಿ ಅಗತ್ಯವಿರುವ 60-70 ಸಾವಿರ ರೂಪಾಯಿಗಳು ತನಗೆ ದೊಡ್ಡ ಮೊತ್ತ ಎಂದು ವಿವರಿಸುವಾಗ ಇರುವ ಪ್ರಾಮಾಣಿಕತೆ ಹಾಗೂ ವಿಮಾನ ಪ್ರಯಾಣದ ಬಗೆಗಿದ್ದ ಅತಿ ನಿರೀಕ್ಷೆ ಹಾಗೂ ಭಯವನ್ನು ವಿವರಿಸುವಾಗ ಕಾಣುವ ಬರಹದಲ್ಲಿನ ಮುಗ್ಧತೆ ನನಗೆ ವೈಯಕ್ತಿಕವಾಗಿ ಇಷ್ವವಾದ ವಿಷಯ. ಒಂದು ಕಡೆ ಕುಕ್ಕಿಲರು, ಅವರ ಪತ್ನಿಯ ಪ್ರಸವ ದಿನಾಂಕ ಎಪ್ರಿಲ್ 21ಕ್ಕೆ ಎಂದು ಸ್ಪಷ್ಟವಾಗಿದ್ದು, ಉಮ್ರಾ ಯಾತ್ರೆಯಿಂದ ಹಿಂದಿರುಗುವ ದಿನಾಂಕ ಎಪ್ರಿಲ್ 18 ಎಂದಾಗ ಅವರ ಪತ್ನಿ ಧೃತಿಗೆಡದೆ, ಅವರ ಉಮ್ರಾ ಯಾತ್ರೆಗೆ ಉತ್ತೇಜಿಸಿ ಹೇಳಿದ ಮಾತುಗಳನ್ನು ಹೇಳುತ್ತಾ ಅವರು ಬರೆಯುವುದು ಹೀಗೆ. “ ‘ಚಿಂತಿಸಬೇಡಿ, ನೀವು ಹೋಗಿಬನ್ನಿ, ನಮಗಾಗಿ ಪ್ರಾರ್ಥಿಸಿ’ ಎಂದೇ ಪ್ರೀತಿಸಿದ್ದಳು” ಎಂಬುದಾಗಿ. ಆ ವಾಕ್ಯದ ಕೊನೆಗೆ ‘ಪ್ರೀತಿಸಿದ್ದಳು’ ಬದಲಾಗಿ ಬೇರೆ ಯಾವುದಾದರೂ ಪದವನ್ನು ಬಳಸಬಹುದಿತ್ತು. ಆದರೂ, ‘ಪ್ರೀತಿಸಿದ್ದಳು’ ಎಂಬಲ್ಲಿ ಅವರ ಹಿಂದಿನ ‘ಸರಸ-ಸಲ್ಲಾಪ’ದ ಶೈಲಿಯನ್ನೂ ಗುರುತಿಸಬಹುದು. ಮತ್ತು, ಅದು ತುಂಬಾ ಪ್ರೀತಿಯ ವಾಕ್ಯ ಎಂದು ನನಗನ್ನಿಸಿತು.

 

ಲೇಖಕರು ಈಗಾಗಲೇ ತಮ್ಮ ವೈಚಾರಿಕ ಬರಹಗಳಿಂದಾಗಿ ತಮ್ಮದೇ ಶೈಲಿಯಿಂದ ಗುರುತಿಸಲ್ಪಟ್ಟವರು. ಓರ್ವ ಪ್ರಗತಿಪರನೆಂದು ಕರೆಯಿಸಿಕೊಳ್ಳುವ ಮುಸ್ಲಿಮ್ ಬರಹಗಾರನಿಗೂ ‘ಉಮ್ರಾ ಅನುಭವ’ ದಾಖಲಿಸಿರುವ ಲೇಖಕರಿಗೂ ಇರುವ ಮುಖ್ಯ ವ್ಯತ್ಯಾಸವನ್ನು ನಾನು ಗುರುತಿಸುವುದು ಕುಕ್ಕಿಲರು ಹಿಪಾಕ್ರಟಿಕ್ ಆಗಿಲ್ಲದ ಬರಹಗಾರ ಎಂದು. ತಾನು ಮುಸ್ಲಿಮ್ ಬರಹಗಾರ ಎಂದು ಗುರುತಿಸಿಕೊಂಡಿರುವುದನ್ನು ‘ಮೂಲಭೂತವಾದಿ’ ಎಂದು ಕೆಲವರಿಂದ ಕರೆಸಿಕೊಂಡಾಗ ಅದನ್ನು ತಿರಸ್ಕರಿಸುವ ಉಮೇದಿಗೆ ಹೋಗದೆ ಇದ್ದವರು ಕುಕ್ಕಿಲ. ಇಂದಿನ ಬರಹಗಾರರಲ್ಲಿರುವುದು ಎರಡೇ ವರ್ಗ. ಅದು ಮನುಷ್ಯ ಸ್ನೇಹಿ ಬರಹಗಾರ ಮತ್ತು ಮನುಷ್ಯ ವಿರೋಧಿ ಬರಹಗಾರ ಎಂಬುದು. ‘ಎಣ್ಣೆ ಬತ್ತಿದ ಲಾಟೀನು’ ಮನುಷ್ಯ ಸ್ನೇಹಿ ಬರಹದ ಒಂದು ಅದ್ಭುತ ಉದಾಹರಣೆ.

 

ಹಜ್-ಉಮ್ರಾ ಪ್ರಯಾಣದ ಬಗ್ಗೆ ಕನಸಿರುವವರು, ಅಥವಾ ಹಜ್ ಉಮ್ರಾ ಆರಾಧನೆಗಳ ಧಾರ್ಮಿಕತೆಯಾಚೆಗಿನ ಪ್ರಸ್ತುತತೆ ಬಗೆಗಿನ ಅಧ್ಯಯನಕ್ಕೆ ಈ ‘ಎಣ್ಣೆ ಬತ್ತಿದ ಲಾಟೀನು’ ಓದುವುದು ಅವಶ್ಯ. ಜೊತೆಗೆ ಪುಸ್ತಕದ ಈ ಶೀರ್ಷಿಕೆಯ ಹಿನ್ನೆಲೆಯೇನು ಎಂಬುದನ್ನೂ ಅರಿತುಕೊಳ್ಳಲು ಒಮ್ಮೆಯಾದರೂ ಈ ಪುಸ್ತಕವನ್ನು ಓದಬೇಕು. ಒಂದೊಳ್ಳೆ ಓದಿಗೆ ಕಾರಣವಾದ ಎ.ಕೆ.ಕುಕ್ಕಿಲರಿಗೆ ಈ ಹಿನ್ನೆಲೆಯಲ್ಲಿ ನಾನು ಕೃತಜ್ಞನಾಗಿದ್ದೇನೆ.

*ಸುಲ್ತಾನ್ ಮನ್ಸೂರ್*

ಮಂಗಳವಾರ, ಅಕ್ಟೋಬರ್ 24, 2017

ನಮ್ಮ ಧರ್ಮ ನಮಗೆ-ನಿಮ್ಮ ಧರ್ಮ ನಿಮಗೆ

*"ಮತಿಗೆಟ್ಟವರ ಗತಿಕೇಡು"*
✍🏻 *ಎಂ.ಯು*
( ಹಿನ್ನಲೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದರಿಂದ ದೇವಸ್ಥಾನ ಅಪವಿತ್ರವಾಯಿತೆಂಬ ಕೂಗು ಎದ್ದ ವಿಚಾರ ಹಾಗೂ ಅಲ್ಲಿ ಆಡಳಿತಾಧಿಕಾರಿ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಬಾರದೆಂಬ ನಿಯಮವೇನೂ ಪ್ರಸ್ತುತ ದೇವಸ್ಥಾನದಲ್ಲಿ ಇಲ್ಲ. ಎಂಬ ಸ್ಪಷ್ಟೀಕರಣ ನೀಡಿರುತ್ತಾರೆ.)
ಈ ವಿಚಾರವಾಗಿ ವಿವಾದವೆಬ್ಬಿಸುತ್ತಾ
*ಸಿದ್ಧರಾಮಯ್ಯ* ರವರು ಹಂದಿ ತಿಂದು ಮಸ್ಜಿದ್'ಗೆ ಹೋಗಲಿ. ಎಂದು ಸವಾಲು ಹಾಕುತ್ತಾ ಕೆಲವು ಕೂಪಮಂಡೂಕಗಳು ವಟಗುಟ್ಟುತ್ತಾ ತಾವು ಅಜ್ಞಾನಿಗಳೆಂಬುವುದನ್ನು ಸಾಬೀತು ಪಡಿಸುತ್ತಿರುವುದು ಸಂತಸದ ವಿಚಾರವೇ ಸರಿ.😄
*ಮುಖ್ಯಮಂತ್ರಿ ಸಿದ್ಧರಾಮಯ್ಯ
ಏನುತಿನ್ಬೇಕು ; ಎಲ್ಲಿಗೆ ಹೋಗ್ಬೇಕು ಎಂದು ತೀರ್ಮಾನಿಸಲು ನೀವು ಯಾರು?

*ಈ ವಿಚಾರದಲ್ಲಿ ಇಸ್ಲಾಮನ್ನು ಏಕೆ ನಡುವೆ ಎಳೆದು ತರ್ತೀರಿ?
ಸಿದ್ಧರಾಮಯ್ಯರೂ ಹಿಂದೂ ಧರ್ಮೀಯರೇ ಆಗಿದ್ದಾರೆ ಹಾಗೂ ಅವರು ಮಾಂಸಾಹಾರ ಸೇವಿಸಿ ಪ್ರವೇಶಿಸಿದ ದೇವಾಲಯವೂ ಹಿಂದೂಗಳದ್ದೇ ಆಗಿದೆ. ಇಲ್ಲಿ ಮಸ್ಜಿದ್ ಹಾಗೂ ಹಂದಿ ಯಾಕೆ ಬಂತು? ನಿಮ್ಮ ಧರ್ಮದ ವಿಚಾರದಲ್ಲಿ ಇತರರನ್ನೇಕೆ ಎಳೆದು ತರ್ತಿದ್ದೀರಾ?
ಅಷ್ಟಕ್ಕೂ *"ಗೋಕುಲಾಷ್ಟಮಿಗೂ  ಮಕ್ಬೂಲ್ ಸಾಬರಿಗೂ ಏನು ಸಂಬಂಧ?"* ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ಇಸ್ಲಾಮಿನ ಸಹಾಯವನ್ನು ಪಡೆಯುತ್ತಿದ್ದೀರಲ್ಲಾ.. ಅಷ್ಟಕ್ಕೂ ಆಧಾರಗಳಿಲ್ಲದ ಧರ್ಮ ನಿಮ್ಮದೆಂದು ಸ್ವತಃ  ಒಪ್ಪಿಕೊಂಡಂತಲ್ಲವೇ?
ಮುಸ್ಲಿಮರು ಅವರ ಧರ್ಮದಲ್ಲಿ ಒಪ್ಪಿಕೊಂಡವುಗಳನ್ನು ನೀವು ಒಪ್ಪಿಕೊಳ್ಳುವಿರಾ?
ನಿಮ್ಮ ಧರ್ಮದ ನಿಯಮಗಳನ್ನು ಪ್ರತಿಪಾದಿಸಲು ನಿಮ್ಮ ಧರ್ಮದ ಆಧಾರ ಗ್ರಂಥಗಳನ್ನು ಬಳಸಿ ಸಮರ್ಥಿಸಿ. ಅದನ್ನ ಬಿಟ್ಟು ಹಂದಿ ತಿಂದರೆ ಅವರು ಒಪ್ಪಿಕೊಳ್ತಾರಾ; ಇವರು ಒಪ್ಪಿಕೊಳ್ತಾರ ಎಂಬ ಉಸಾಬರಿ ನಿಮಗೇಕೆ?

*ಇಸ್ಲಾಮ್ ಹಂದಿ ತಿನ್ನುವುದನ್ನು ನಿಷೇಧಿಸಿದೆ; ಹಂದಿ ತಿನ್ನುವವರನ್ನು ಅಸ್ಪೃಶ್ಯರಂತೆ ಕಂಡು ದೂರವಿಡಬೇಕು. ಅವರು ಮನೆ ಆರಾಧನಾಲಯಗಳಿಗೆ ಬಂದ್ರೆ ಮೈಲಿಗೆಯಾಗುತ್ತದೆ ಎಂದು ಎಲ್ಲೂ ಹೇಳಿಲ್ಲ.

*ಮುಸ್ಲಿಮರ ಧಾರ್ಮಿಕ ಕೇಂದ್ರಗಳಾದ ದರ್ಗಾ,
ಮಸ್ಜಿದ್'ಗಳಿಗೆ ಅದೆಷ್ಟೋ ಮುಸ್ಲಿಮೇತರರು ಬರುತ್ತಾರೆ. ಅಲ್ಲಿ ಬಂದಾಗ ಮನುಷ್ಯನಿಗೆ ಯಾವರೀತಿಯ ಆದರ ಗೌರವಗಳು ಸಲ್ಲಬೇಕೋ ಅವುಗಳನ್ನು ನೀಡಲಾಗುತ್ತದೆ.  ಅವರು ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡರೆ ಅವುಗಳ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
*ಬಂದವರೊಂದಿಗೆ ನೀನು ಹಂದಿ,ಕುರಿ,ದನ,ಕೋಳಿ,ಮೀನು ತಿಂದು ಬಂದಿರುವೆಯಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸುವುದಿಲ್ಲ.
ಬಂದವರಿಗೆ ಬಾಯಾರಿಕೆ ಹಾಗೂ ಹಸಿದು ಬಂದವರ ಹಸಿವು ತಣಿಸುವ ಕಾರ್ಯ ನಡೆಯುತ್ತದೆ.
ಬಂದ ಅತಿಥಿಗಳೊಂದಿಗೆ ಏನು ತಿಂದು ಬಂದಿರಿ? ಎಂದು ಪ್ರಶ್ನಿಸಿ ನಿರಾಕರಿಸುವುದು ಮಾನವ ಸಂಸ್ಕೃತಿಯಂತೂ ಅಲ್ಲ.
ಬಂದವರನ್ನು ಮಾನವರಾಗಿ ಕಂಡು ಅವರ ದಾಹ ತಣಿಸುವುದು ಹಾಗೂ ಹಸಿದವರ ಆಹಾರ ನೀಡುವುದು ಮಾನವ ಸಂಸ್ಕೃತಿ.
ಏನು ತಿಂದು ಬಂದಿರಿ? ಎಂದು ಕೇಳುವ ಬದಲು ಬಂದವರೊಂದಿಗೆ ಏನು ತಿನ್ನುವಿರಿ? ಎಂದು ಆದರದಿಂದ ಕೇಳುವುದಾಗಿದೆ ಮಾನವೀಯತೆ.

*ಈವರೆಗೂ ಹಲವಾರು ರಾಜಕಾರಣಿಗಳು ಮಸೀದಿ, ದರ್ಗಾಗಳಿಗೆ ಭೇಟಿ ನೀಡಿದಾಗ ಯಾರಲ್ಲೂ *ನೀವು ಹಂದಿ ತಿಂದು ಬಂದಿರಾ? ಎಂದು ಪ್ರಶ್ನಿಸಿ ಪ್ರವೇಶ ನಿರಾಕರಿಸಿದ ಒಂದೇ ಒಂದು ನಿದರ್ಶನ ತೋರಿಸಲು ನಿಮಗೆ ಸಾಧ್ಯವಿಲ್ಲ.*

ಎಲ್ಲದಕ್ಕೂ ಇಸ್ಲಾಮನ್ನು ಎಳೆದು ತರ್ತೀರಲ್ಲಾ? ನಿಮಗೊಂದು ಸವಾಲು.

*ನಾವು ದರ್ಗಾ,ಮಸ್ಜಿದ್'ಗಳಿಗೆ ಮುಸ್ಲಿಮೇತರರು ಭೇಟಿ ಕೊಟ್ಟರೆ (ಅವರು ಹಂದಿ ತಿಂದು ಬಂದಿದ್ದರೂ) ಅವರಿಗೆ ಪ್ರವೇಶ ನಿರಾಕರಿಸಲ್ಲ.
ನಾವು ಅವರೇನು ತಿಂದು ಬಂದಿದ್ದಾರೆ ಎಂದು ಪ್ರಶ್ನಿಸುವುದೇ ಇಲ್ಲ.ಇನ್ನು ಪ್ರವೇಶ  ನಿರಾಕರಣೆಯ ವಿಚಾರ ಅಲ್ಲಿ ಇಲ್ಲವೇ ಇಲ್ಲ. ಅವರಿಗೆ ಮಾನವನಿಗೆ ಸಲ್ಲಬೇಕಾದ ಗೌರವಾದರಗಳು ನೀಡುತ್ತೇವೆ. ಹಂದಿ ತಿನ್ನುವವರು ಎಂಬ ಕಾರಣಕ್ಕೆ ಮೈಲಿಗೆಯಾಗುತ್ತದೆಂದು ಪ್ರವೇಶ ನಿರಾಕರಿಸಲ್ಲ. ಕುರ್-ಆನ್ ನಮಗೆ *"ಮನುಕುಲವನ್ನು ಗೌರವಿಸಿ."* ಎಂದು ಕಲಿಸಿದ್ದನ್ನು ನಾವು ಪಾಲಿಸ್ತೇವೆ. ನೀವು ಇತರ ಧರ್ಮೀರಿಗೆ ದೇವಾಲಯಗಳಲ್ಲಿ ಹಾಗೆ ಪ್ರವೇಶ ನೀಡಲು ಸಿದ್ಧರಿದ್ದೀರಾ?
ಇತರ ಧರ್ಮೀಯರು ಬಿಡಿ; ನೀವು *ನಾವೆಲ್ಲಾ ಹಿಂದೂ- ನಾವೆಲ್ಲ ಒಂದು* ಎಂದು ಘೋಷಿಸಿರುವ ವ್ಯಾಪ್ತಿಯೊಳಗೆ ಬರುವ ಹಿಂದುಳಿದವರು, ದಲಿತರು, ನೀವು ಅಸ್ಪೃಶ್ಯರೆಂದು ಪರಿಗಣಿಸಿದ ಹಿಂದೂಗಳಿಗಾದ್ರೂ ಮುಕ್ತ ಅವಕಾಶ ನೀಡಲು ಸಿದ್ಧರಿದ್ದೀರಾ?
ಇವರಿಗೆಲ್ಲಾ ಕೊನೆಯ ಪಕ್ಷ ಮಾನವನಿಗೆ ಸಲ್ಲಬೇಕಾದ ಆದರವನ್ನಾದರೂ ನೀಡ್ತೀರಾ? ಹೀಗೆ ಮಾಡುವ ಮೂಲಕ *"ವಸುದೈವ ಕುಟುಂಬಕಂ."* ಎಂಬುವುದನ್ನು ಪಾಲಿಸಲು ಸಿದ್ಧರಿದ್ದೀರಾ?

ಎಲ್ಲಕ್ಕೂ ಇಸ್ಲಾಮಿನ ವಿಧಿ-ವಿಧಾನಗಳನ್ನು ಎಳೆದು ತಂದು ಅವುಗಳನ್ನು ದುರ್ವ್ಯಾಖ್ಯಾನ ಮಾಡಿ ರಾಡಿಯೆಬ್ಬಿಸ್ತೀರಲ್ಲ??

*ಮುಸ್ಲಿಮರು ತಮ್ಮ ಧಾರ್ಮಿಕ ಕೇಂದ್ರಗಳಾದ ದರ್ಗಾ, ಮಸ್ಜಿದ್'ಗಳಲ್ಲಿ ಇಸ್ಲಾಮ್ ಅನುವದನೀಯಗೊಳಿಸಿದ ಪ್ರಾಣಿಗಳ ಮಾಂಸದೂಟದ ಪ್ರಸಾದವನ್ನು ನೀಡ್ತಾರೆ.
ನಿಮ್ಮ ದೇವಾಲಯಗಳಲ್ಲಿ ನಿಮಗೆ ತಿನ್ನಲು ಅನುವದನೀಯವಾದ ಪ್ರಾಣಿಗಳ ಮಾಂಸದೂಟವನ್ನು ಪ್ರಸಾದವಾಗಿ ನೀಡಲು ಸಿದ್ಧರಿದ್ದೀರಾ??

#ನಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಎಲ್ಲರೂ           *ಒಂದೇ ಲೋಟದಲ್ಲಿ ತುಟಿಹಚ್ಚಿ* ನೀರು ಕುಡಿಯುತ್ತೇವೆ.
ನಿಮ್ಮ ದೇವಾಲಯಗಳಲ್ಲಿ ಎಲ್ಲಾ ಜಾತಿಯ ಹಿಂದೂಗಳು ಕೂಡಾ ಒಂದೇ ಲೋಟದಲ್ಲಿ ತುಟಿಹಚ್ಚಿ ನೀರು ಕುಡಿಯುವ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಿರಾ?

#ನಮ್ಮ ಮಸ್ಜಿದ್'ಗಳಲ್ಲಿ ಮುಸ್ಲಿಮರು ಬಡವ-ಶ್ರೀಮಂತ ಕರಿಯ-ಬಿಳಿಯ ಹಾಗೂ ವೃತ್ತಿಯಾಧಾರಿತ ಯಾವುದೇ ತಾರತಮ್ಯವಿಲ್ಲದೆ ಭುಜಕ್ಕೆ ಭುಜ ಸೇರಿಸಿ ಸಾಲಾಗಿ ನಿಂತು ಪ್ರಾರ್ಥನೆ ಮಾಡ್ತೇವೆ.
ಪ್ರಾರ್ಥನೆಯಲ್ಲಿ ನಿರ್ದಿಷ್ಟ ವರ್ಗದವರಿಗೆ ವಿಶೇಷ ಪರಿಗಣನೆಯೆಂಬುವುದಿಲ್ಲ. ಒಬ್ಬ ಕೂಲಿಕೆಲಸದವ ಮೊದಲು ಬಂದಿದ್ದರೆ ಅವನು ಪ್ರಾರ್ಥನೆಗೆ ಮೊದಲ ಸಾಲಲ್ಲಿ ನಿಂತದ್ರೂ ಮೊದಲ ಸಾಲು ಪೂರ್ಣಗೊಂಡ ಬಳಿಕ ಎಷ್ಟೇ ದೊಡ್ಡ ಗಣ್ಯ, ಮಂತ್ರಿ ಬಂದರೂ ಅವನು ಹಿಂದೇನೇ ನಿಲ್ಲಬೇಕು.
ನಿಮ್ಮ ದೇವಾಲಯಗಳ ಪ್ರಾರ್ಥನೆಯಲ್ಲಿ ಎಲ್ಲ ಜಾತಿಯವರಿಗೂ ಈರೀತಿಯ ಸಮಾನ ಅವಕಾಶ ನೀಡುವಿರಾ?

ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ *"ಇಲ್ಲ".* ಎಂದಾಗಿದ್ದರೆ; ನಿಮ್ಮ ಧರ್ಮದ ಸಮಸ್ಯೆಗಳಿಗೆ ಇತರ ಧರ್ಮಗಳ ಕಡೆ ಕೈತೋರಿಸಿ ವಿವಾದವೆಬ್ಬಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಧರ್ಮದ ನಿಯಮಗಳನ್ನು ನೀವು ಪಾಲಿಸಿ. ನಮ್ಮ ಧರ್ಮದ ನಿಯಮಗಳನ್ನು ನಾವು ಪಾಲಿಸ್ತೇವೆ.
*"ನಮ್ಮ ಧರ್ಮ ನಮಗೆ-ನಿಮ್ಮ ಧರ್ಮ ನಿಮಗೆ."*

(ಸೂಚನೆ: ಈ ಲೇಖನವು ಹಿಂದೂಗಳ ಭಾವನೆಗಳನ್ನು ವಿರೋಧಿಸಲು ಬರೆದುದಲ್ಲ. ಇಸ್ಲಾಮ್ ಇತರರ ಭಾವನೆಗಳನ್ನು ಅವಹೇಳಿಸುವುದನ್ನು ವಿರೋಧಿಸುತ್ತದೆ. ಮೇಲಿನ ವಿಚಾರದಲ್ಲಿ ಅನವಶ್ಯಕವಾಗಿ ಇಸ್ಲಾಮನ್ನು ಎಳೆದು ತಂದುದಕ್ಕಾಗಿ ಪ್ರತಿಕ್ರಿಯೆ ನೀಡಲು ಬರೆದುದಾಗಿದೆ.)

ಶನಿವಾರ, ಅಕ್ಟೋಬರ್ 21, 2017

ಟಿಪ್ಪು ಸುಲ್ತಾನ್

ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಮೈಸೂರಿನ ಮೇಲಿನ ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ಯ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ. ಮೈಸೂರಿನ ಮೇಲೆ ಮೂರು ಬಾರಿ ದಾಳಿ ಮಾಡಿದ್ದರೂ ಅವರು ಯಶಸ್ವಿಯಾಗಿರಲಿಲ್ಲ. ಆದರೆ ಅವರು 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿ ಟಿಪ್ಪು ಅವಸಾನಕ್ಕೆ ಕಾರಣರಾದರು.

‘ಮೈಸೂರಿನ ಹುಲಿ’ಯೆಂದು ಪ್ರಖ್ಯಾತನಾಗಿದ್ದ ಟಿಪ್ಪು ಸುಲ್ತಾನನನ್ನು ಮತ್ತು ಆತನ ಹುಲಿಯ ರೂಪಕವನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪು ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಟಿಪ್ಪುಸುಲ್ತಾನ್ ‘ವ್ಯಾಘ್ರಸ್ವಪ್ನ’ವಾಗಿದ್ದ. ಬ್ರಿಟಿಷರನ್ನು ಎದುರಿಸುತ್ತಿದ್ದ ರೀತಿ ಹಾಗೂ ಬ್ರಿಟಿಷರ ಮೇಲಿನ ಅವನ ದ್ವೇಷ ಇಂಗ್ಲೆಂಡಿನಲ್ಲಿ ದಂತಕತೆಯೇ ಆಗಿತ್ತು.

ಟಿಪ್ಪು ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ನಗರದ ಹಲವೆಡೆ ವ್ಯಂಗ್ಯಚಿತ್ರಗಳೆನ್ನಬಹುದಾದ ಬೃಹತ್ ಚಿತ್ರಗಳನ್ನು ಬರೆಸಿದ್ದನೆಂಬ ಉಲ್ಲೇಖಗಳಿವೆ. ಅವುಗಳಲ್ಲಿ ಯೂರೋಪಿಯನ್ನರ, ವಿಶೇಷವಾಗಿ ಬ್ರಿಟಿಷರ ಮೇಲೆ ದಾಳಿ ಮಾಡುತ್ತಿರುವ ಹುಲಿ, ಆನೆಗಳ ಚಿತ್ರಗಳಿದ್ದವು. ಬ್ರಿಟಿಷರ ಬಗೆಗಿನ ಟಿಪ್ಪುವಿನ ಈ ವ್ಯಂಗ್ಯ ಭಾವನೆಯ ಉತ್ತುಂಗವೆಂದರೆ, ಆತ ಹೇಳಿ ಮಾಡಿಸಿದ ಬ್ರಿಟಿಷರ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಯಂತ್ರ ಗೊಂಬೆ.

1799ರಲ್ಲಿ ಟಿಪ್ಪೂನನ್ನು ಕೊಂದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಸೈನಿಕರು ಯಂತ್ರಹುಲಿಯನ್ನು ಲಂಡನ್ನಿಗೆ ಕೊಂಡೊಯ್ದು ಅಲ್ಲಿ ಪ್ರದರ್ಶನಕ್ಕಿರಿಸಿ, ಅವರೂ ಸಹ ಮನರಂಜನೆ ಪಡೆದುಕೊಂಡಿದ್ದಾರೆ. ಟಿಪ್ಪು ಸತ್ತನಂತರ 1800ರಲ್ಲಿ ಜೇಮ್ಸ್ ಸಾಲ್ಮಂಡ್ ಎಂಬಾತ ಬರೆದ ‘ಎ ರಿವ್ಯೂ ಆಫ್ ದ ಆರಿಜಿನ್, ಪ್ರೊಗ್ರೆಸ್ ಅಂಡ್ ರಿಸಲ್ಟ್ ಆಫ್ ದ ಲೇಟ್ ಡಿಸಿಸಿವ್ ವಾರ್ ಇನ್ ಮೈಸೂರ್ ವಿಥ್ ನೋಟ್ಸ್’ ಪುಸ್ತಕದ ಮುಖಪುಟದಲ್ಲೇ ಯಂತ್ರ ಹುಲಿಯ ಚಿತ್ರವಿತ್ತು ಹಾಗೂ ಆ ಯಂತ್ರ ಹುಲಿಯ ಮೊಟ್ಟಮೊದಲ ಚಿತ್ರವೂ ಸಹ ಇದೇ ಆಗಿದೆ.

ಟಿಪ್ಪು ಬ್ರಿಟಿಷರನ್ನು ಎದುರಿಸುತ್ತಿದ್ದ ದಂತಕತೆಯೂ ಸಹ ಟಿಪ್ಪು ವ್ಯಂಗ್ಯಚಿತ್ರದ ವಸ್ತುವಾಗಲು ಪ್ರೇರೇಪಣೆ ನೀಡಿದೆ. ಟಿಪ್ಪು ಬದುಕಿದ್ದಾಗಲೇ 1791ರಲ್ಲಿ ಜೇಮ್ಸ್ ಗಿಲ್‌ರೇ ಎಂಬ (ವ್ಯಂಗ್ಯ) ಚಿತ್ರಕಾರ ಇಂಗ್ಲೆಂಡಿನಲ್ಲಿ ‘ದ ಕಮಿಂಗ್ ಆನ್ ಆಫ್ ದ ಮಾನ್ಸೂನ್ಸ್ ಆರ್ ದ ರಿಟ್ರೀಟ್ ಫ್ರಂ ಸೆರಿಂಗಪಟಂ’ (The Coming-on of the monsoons or – the retreat from Seringapatam) (ಬ್ರಿಟಿಷರು ಶ್ರೀರಂಗಪಟ್ಟಣವನ್ನು ‘ಸೆರಿಂಗಪಟಂ’ ಎಂದು ಕರೆಯುತ್ತಿದ್ದರು) ಎಂಬ ವ್ಯಂಗ್ಯಚಿತ್ರ ಟಿಪ್ಪು ಬಗೆಗೆ ಬರೆದ ಜಗತ್ತಿನ ಮೊಟ್ಟಮೊದಲ ವ್ಯಂಗ್ಯಚಿತ್ರವೆನ್ನಬಹುದು. ಆ ವರ್ಣಚಿತ್ರದ ಮೂಲ ಪ್ರತಿ ಈಗಲೂ ಲಂಡನ್ನಿನ ‘ನ್ಯಾಶನಲ್ ಪೋರ್ಟ್ರೈಟ್ ಗ್ಯಾಲರಿ’ಯಲ್ಲಿದೆ.

ಈ ವ್ಯಂಗ್ಯಚಿತ್ರದಲ್ಲಿ ಚಾರ್ಲ್ಸ್ ಕಾರ್ನ್‌ವಾಲಿಸ್ ಟಿಪ್ಪೂವಿನ ‘ದಾಳಿ’ಗೆ ಹೆದರಿ ತನ್ನ ಹೇಸರಕತ್ತೆಯ ಮೇಲೆ ಕೂತು ಓಡುತ್ತಿದ್ದಾನೆ. ಕೋಟೆಯ ಹಿಂದೆ ಗಹಗಹಿಸುತ್ತಾ ನಿಂತಿರುವ ಟಿಪ್ಪು ಕತ್ತಿ ಹಿಡಿದು ಕಾರ್ನ್‌ವಾಲಿಸ್ ಹಾಗೂ ಓಡುತ್ತಿರುವ ಬ್ರಿಟಿಷ್ ಸೈನಿಕರ ಮೇಲೆ ಮೇಲೆ ಅತ್ಯಂತ ರಭಸದಿಂದ (‘ಕಮಿಂಗ್ ಆನ್ ಆಫ್ ದ ಮಾನ್ಸೂನ್!’) ಮೂತ್ರ ಮಾಡುತ್ತಿದ್ದಾನೆ. ಕಾರ್ನ್‌ವಾಲಿಸ್‌ನ ಟೋಪಿ ಹಾರಿದೆ, ಕತ್ತಿ ಕೈಯಿಂದ ಜಾರಿದೆ ಹಾಗೂ ಪಿಸ್ತೂಲು ಕೆಳಗೆ ಬಿದ್ದಿದೆ. ಬ್ರಿಟಿಷ್ ಸೈನಿಕರು ನೆಲದ ಮೇಲೆ ಸತ್ತು ಬಿದ್ದಿದ್ದಾರೆ. ಇದರಿಂದಲೇ ಬ್ರಿಟಿಷರಿಗೆ ಟಿಪ್ಪೂನನ್ನು ಕಂಡರೆ ಎಷ್ಟು ಹೆದರಿಕೆ ಇತ್ತೆಂದು ತಿಳಿಯುತ್ತದೆ.

ಟಿಪ್ಪೂನನ್ನು ಕೊಂದದ್ದೂ ಸಹ ಇಂಗ್ಲೆಂಡಿನಲ್ಲಿ ವ್ಯಂಗ್ಯಚಿತ್ರದ ವಿಷಯವಾಯಿತು. ಆದರೆ ಅದರಲ್ಲಿ ಲೇವಡಿ ಮಾಡಿರುವುದು ಟಿಪ್ಪೂವನ್ನಲ್ಲ, ಅವನನ್ನು ಕೊಂದ ಬ್ರಿಟಿಷರನ್ನು. 1760ರಿಂದ 1790ರವರೆಗೂ ಬ್ರಿಟಿಷರಿಗೆ ಮೈಸೂರನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಟಿಪ್ಪು ಬ್ರಿಟಿಷರನ್ನು ಬಗ್ಗುಬಡೆಯಲು ಫ್ರೆಂಚರ ಸಹಾಯ ಕೋರುತ್ತಿದ್ದ. ನೆಪೋಲಿಯನ್ ಈಜಿಪ್ಟಿಗೆ ಧಾವಿಸಿದಾಗ ಆತ ಭಾರತಕ್ಕೂ ಬಂದುಬಿಡಬಹುದೆಂಬ ಹೆದರಿಕೆ ಬ್ರಿಟಿಷರನ್ನು ಕಾಡಿತು. ಅದಕ್ಕೆ ಮೊದಲೇ ಮೈಸೂರನ್ನು ವಶಪಡಿಸಿಕೊಳ್ಳಲು ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ’ ಯೋಜನೆ ಹಾಕಿತು. ಇಪ್ಪತ್ತೈದು ಸಾವಿರ ಸೈನಿಕರ ಸೇನೆಯೊಂದಿಗೆ ಮಾರ್ಚ್ 1799ರಲ್ಲಿ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದರು. ಒಂದು ತಿಂಗಳಿಗೂ ಹೆಚ್ಚು ಕಾಲ ಟಿಪ್ಪೂ ಕೋಟೆ ಅಭೇದ್ಯವಾಗಿತ್ತು. ಕೊನೆಗೂ ಬ್ರಿಟಿಷರು ಒಳನುಗ್ಗುವಲ್ಲಿ ಯಶಸ್ವಿಯಾದರು. ಅವರೊಂದಿಗೆ ವೀರಾವೇಶದಿಂದ ಹೋರಾಡಿದ ಟಿಪ್ಪು ಸಾವನ್ನಪ್ಪಿದ. ಅವನ ಸಾವಿನ ನಂತರ ನಲವತ್ತೆಂಟು ಗಂಟೆಗಳ ಕಾಲ ಬ್ರಿಟಿಷರು ಟಿಪ್ಪು ಅರಮನೆ ಹಾಗೂ ನಗರವನ್ನು ಕೊಳ್ಳೆಹೊಡೆಯುತ್ತಾರೆ, ಸಾವಿರಾರು ಜನರನ್ನು ಕೊಲ್ಲುತ್ತಾರೆ. ಟಿಪ್ಪು ಸಾವಿನಿಂದ ಬ್ರಿಟನ್ನಿನ ಜನ ಸಂತೋಷದಿಂದ ಕುಣಿದಾಡಿದರಂತೆ.

ಆಗ ಅಕ್ಟೋಬರ್ 8, 1799ರಂದು ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ (The death of Tippoo or Besieging the haram!!!) ) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.  ಆ ವ್ಯಂಗ್ಯಚಿತ್ರದಲ್ಲಿ ಟಿಪ್ಪೂನನ್ನು ಕೊಂದನಂತರ ಅವನ ಅಂತಃಪುರಕ್ಕೆ ನುಗ್ಗಿ ಟಿಪ್ಪೂನ ರಾಣಿಯರನ್ನು ಅತ್ಯಾಚಾರ ಮಾಡುತ್ತಿರುವ ದೃಶ್ಯವಿದೆ. ಒಬ್ಬ ಮಹಿಳೆಯನ್ನು ಕೊಂಡೊಯ್ಯುತ್ತಿರುವ ಒಬ್ಬಾತ, ‘Hurrah my Honey, now for the Black Joke’ ಎನ್ನುತ್ತಿದ್ದಾನೆ (‘ಬ್ಲಾಕ್ ಜೋಕ್’ ಎನ್ನುವುದು ಆಗಿನ ಇಂಗ್ಲಿಷಿನಲ್ಲಿ ಹೆಣ್ಣಿನ ಜನನಾಂಗಕ್ಕೆ ಇದ್ದ ಅಡ್ಡಹೆಸರು). ಮತ್ತೊಬ್ಬಾತ ‘Cheer up my girls, will supply his place well’ ಎನ್ನುತ್ತಿದ್ದಾನೆ. ಹೆಣ್ಣೊಬ್ಬಳು ಒಬ್ಬನನ್ನು ಕೆಳಕ್ಕೆ ದಬ್ಬಿ ಕುತ್ತಿಗೆ ಹಿಸುಕುತ್ತಿದ್ದಾಳೆ.

ಬ್ರಿಟನ್ನಿನ ವಸಾಹತುಶಾಹಿ ದಬ್ಬಾಳಿಕೆ, ಆಕ್ರಮಣವನ್ನು ಬ್ರಿಟನ್ನಿನ ಹಲವಾರು ಜನ ವಿರೋಧಿಸುತ್ತಿದ್ದರು. ‘ದ ಡೆತ್ ಆಫ್ ಟಿಪ್ಪು ಆರ್ ಬಿಸೀಜಿಂಗ್ ದ ಹೇರಂ’ ವ್ಯಂಗ್ಯಚಿತ್ರ ಅಂತಹ ಒಂದು ವಿರೋಧದ ಅಭಿವ್ಯಕ್ತಿ ಎನ್ನುವವರಿದ್ದಾರೆ. ‘ಭಾರತೀಯರು ಅನಾಗರಿಕರು ಹಾಗೂ ಅಲ್ಲಿನ ರಾಜ, ಮಹಾರಾಜರುಗಳಿಂದಲೇ ದಬ್ಬಾಳಿಕೆಗೆ ಒಳಗಾದವರು. ಅಲ್ಲಿನ ಜನರನ್ನು ಸಭ್ಯ, ನಾಗರಿಕ ಬ್ರಿಟಿಷರಾದ ನಾವು ಕಾಪಾಡುತ್ತಿದ್ದೇವೆ’ ಎನ್ನುವ ಚಿತ್ರಣವನ್ನು ಬ್ರಿಟನ್ನಿಗೆ ಕೊಟ್ಟಿದ್ದ ‘ಈಸ್ಟ್ ಇಂಡಿಯಾ ಕಂಪೆನಿ’ಯ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ಈ ವ್ಯಂಗ್ಯಚಿತ್ರದ್ದಾಗಿತ್ತು. ಆದರೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಿರುವ ಹೆಣ್ಣಿನ ಸಾಕಷ್ಟು ನಗ್ನತೆ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯನ್ನು ತೋರಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಆಗಿನ ಬ್ರಿಟಿಷ್ ‘ಸಭ್ಯ ನಾಗರಿಕರ’ ಮನಸ್ಸಿಗೆ ಕಚಗುಳಿ ಇಡುವುದಷ್ಟೇ ಆಗಿತ್ತು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚರಿತ್ರಕಾರ ತನ್ನ 2006ರ ‘City of Laughter: Sex and Satire in Eighteenth-century London’ ಪುಸ್ತಕದಲ್ಲಿ, ಆ ಸಮಯದ ವ್ಯಂಗ್ಯಚಿತ್ರ ಮತ್ತು ಅಶ್ಲೀಲ ಸಾಹಿತ್ಯದ ನಡುವಿನ ಸಂಬಂಧಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾನೆ.   ಈ ಚಿತ್ರ ಬಿಡಿಸಿದ ಕಲಾಕಾರನಿಗೆ ಆಗಿನ ಭಾರತೀಯ ಸಮಾಜದ ಹೆಣ್ಣಿನ ಚಿತ್ರಣ ಇರಲಿಲ್ಲವೆನ್ನಿಸುತ್ತದೆ, ಏಕೆಂದರೆ ಆ ಚಿತ್ರದಲ್ಲಿನ ಹೆಣ್ಣುಗಳು ಧರಿಸಿರುವ ವಸ್ತ್ರಗಳು ಯೂರೋಪಿಯನ್ ಹೆಣ್ಣುಗಳ ವಸ್ತ್ರಗಳಂತಿವೆ. ಆ ವ್ಯಂಗ್ಯಚಿತ್ರ ಬಿಡಿಸಿದ ಕಲಾವಿದ ಯಾರೆಂಬುದರ ಬಗ್ಗೆ ಈಗಲೂ ಏಕಾಭಿಪ್ರಾಯವಿಲ್ಲ. ಕೆಲವರು ರೋಲ್ಯಾಂಡ್‌ಸನ್ ಎಂದರೆ ಆ ಚಿತ್ರರಚನೆ ಹಾಗೂ ಅದರಲ್ಲಿನ ಬರಹದ ಶೈಲಿಯಿಂದ ಕೆಲವರು ಜಾನ್ ಕಾಸ್ ಎನ್ನುತ್ತಾರೆ.

ಟಿಪ್ಪು ಸುಲ್ತಾನ್ ಹುಟ್ಟು ಹಾಕಿದ್ದ ಹುಲಿಯ ರೂಪಕ ಬ್ರಿಟಿಷರಿಗೆ ಸವಾಲಾಗಿತ್ತು. ಬ್ರಿಟಿಷರ ಲಾಂಛನ ಸಿಂಹವಾಗಿತ್ತು ಹಾಗೂ ಅವರು ಹುಲಿಯನ್ನು ಸಿಂಹ ಕೊಲ್ಲುವ ಚಿತ್ರಗಳನ್ನು ಸಾಧ್ಯವಾದೆಡೆಯಲ್ಲೆಲ್ಲ ಬಳಸಿದರು. ಟಿಪ್ಪೂನನ್ನು ಕೊಂದ ಸೈನಿಕರಿಗೆ ಇಂಗ್ಲೆಂಡಿನಲ್ಲಿ ‘ಸೆರಿಂಗಪಟಂ ಪದಕ’ ನೀಡಿ ಸನ್ಮಾನಿಸಿದರು. ಆ ಪದಕದಲ್ಲಿ ಒಂದೆಡೆ ಹುಲಿಯನ್ನು ಸಿಂಹ ಕೊಲ್ಲುತ್ತಿರುವ ಚಿತ್ರವಿತ್ತು. ಟಿಪ್ಪೂ ಸಾವಿನ ನಂತರವೂ ಸಹ ಹುಲಿಯ ಸಂಕೇತದ ಮೇಲಿನ ಅವರ ಸಿಟ್ಟು ಕಡಿಮೆಯಾಗಲಿಲ್ಲ. ಅದೇ ಸಿಟ್ಟಿನಿಂತ ಭಾರತದ ಕಾಡುಗಳಲ್ಲಿ ಹುಲಿಗಳನ್ನು ಕೊಂದು, ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು.

1857ರ ‘ಸಿಪಾಯಿ ದಂಗೆ’ಯ ಸಮಯದಲ್ಲಿ ಬ್ರಿಟನ್ನಿನ ವ್ಯಂಗ್ಯಚಿತ್ರಗಳಿಗೆಂದೇ ಮೀಸಲಾಗಿರುವ ಪತ್ರಿಕೆ ‘ಪಂಚ್’ನ, 1857ರ ಆಗಸ್ಟ್ 22ರ ಸಂಚಿಕೆಯಲ್ಲಿ ಜಾನ್ ಟೆನ್ನಿಯಲ್ ಎಂಬಾತನ ‘ದ ಬ್ರಿಟಿಷ್ ಲಯನ್ಸ್ ವೆನ್‌ಜಿಯೆನ್ಸ್ ಆನ್ ದ ಬೆಂಗಾಲ್ ಟೈಗರ್’ (The British Lion’s Vengeance on the Bengal Tiger) ಎಂಬ ವ್ಯಂಗ್ಯಚಿತ್ರ ಪ್ರಕಟವಾಯಿತು.

ಅದರಲ್ಲಿ ಹುಲಿಯೊಂದು ಮಗು ಹಾಗೂ ಮಹಿಳೆಯ ಮೇಲೆ ದಾಳಿ ಮಾಡಿದೆ. ಆ ಮಗು ಮತ್ತು ಹೆಣ್ಣನ್ನು ಕಾಪಾಡಲೋ ಎಂಬಂತೆ ಸಿಂಹವೊಂದು ಹುಲಿಯ ಮೇಲೆ ದಾಳಿ ಮಾಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷನ ಮೇಲೆ ದಾಳಿ ಮಾಡಿ ಗರ್ಜಿಸುತ್ತಿದ್ದರೆ, ‘ಪಂಚ್’ನ ವ್ಯಂಗ್ಯಚಿತ್ರ ಅದಕ್ಕೆ ವಿರುದ್ಧವಾಗಿ ಹುಲಿಯ ಮೇಲೆ ದಾಳಿ ಮಾಡಿ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಅದರ ಶೀರ್ಷಿಕೆಯೂ ಅದನ್ನೇ ಹೇಳುತ್ತದೆ. 
                            - ಡಾ. ಜೆ. ಬಾಲಕೃಷ್ಣ

--------------------------------------------------------------------

ಟಿಪ್ಪು ಜಯಂತಿಯನ್ನ ಅವನನ್ನ ಮೆಚ್ಚುವ, ಆರಾಧಿಸುವ ಸಂಘಟನೆಗಳು ದಶಕಗಳಿಂದ ನಡೆಸುತ್ತಿವೆ. ಇಸ್ಲಾಂ ಪ್ರಕಾರ ಜಯಂತಿ ಆಚರಣೆ ನಿಷಿದ್ಧವಾದರೂ....! ಇದನ್ನ ಸರ್ಕಾರ ಆಚರಿಸುತ್ತಿರುವುದು ಖಂಡಿತ ರಾಜಕೀಯಕ್ಕಾಗಿ.
ಆದ್ರೆ, ಟಿಪ್ಪು, ಕಿತ್ತೂರು ಚನ್ನಮ್ಮ ಹಾಗೂ ಮೈಸೂರಿನ ಒಡೆಯರ್ ಅವರು ಕರ್ನಾಟಕದ ಎಲ್ಲ ರಾಜರಂತೆ ಅಂತ ಸಾಮಾನ್ಯೀಕರಿಸುವುದು ತಪ್ಪು. ಕುವೆಂಪು, ಬೇಂದ್ರೆ, ಎಸ್.ಎಲ್‌. ಭೈರಪ್ಪ, ಅನಂತ ಮೂರ್ತಿ, ದೇವನೂರರು ಒಂದೇ ಗಮನಾರ್ಹವಾದುದನ್ನು ಬರೆಯದ ಬರಹಗಾರರು ಒಂದೇ ಎಂಬಂತಾಗಲಿದೆ.

ಟಿಪ್ಪು, ಒಡೆಯರ್ ಅವರ ಆಳ್ವಿಕೆ, ಆಡಳಿತಗಳು ಆಗಿ ಶತಮಾನಗಳು ಕಳೆದು ಹೋದರು ಅವರ ದೂರದರ್ಶಿತ್ವದ ಕೊಡುಗೆಗಳನ್ನ ಈಗಲು ಅನುಭವಿಸುತ್ತಿದ್ದೇವೆ. ಟಿಪ್ಪು ತಂದ ರೇಷ್ಮೆ, ಕ್ಷಿಪಣಿ ತಂತ್ರಜ್ಞಾನ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಒಡೆಯರ್ ಕೊಡುಗೆಗಳು ರಾಜ್ಯದುಗ್ಗಲಕ್ಕೂ ಸಿಗುತ್ತವೆ.
ಈ ನವ ಇತಿಹಾಸಕಾರರ ಹಾವಳಿ‌ ನನ್ನ ತಂದೆ, ತಾತ ಮುತ್ತಾತ ಹೇಳಿದ್ದೇ ಸುಳ್ಳು ಎನ್ನಲು ಹೊರಟಿವೆ. ಇತಿಹಾಸ ಬರೆಯುವವ ಎಲ್ಲ ಕಾಲಕ್ಕೂ ಎಡ - ಬಲ ಪೆನ್ನು ಕನ್ನಡಕದವನೇ ಆಗಿರುತ್ತಾನೆ. ಜನಪದ ಹಾಗೆ ಆಗಲಾರದು. ನಾನು ಮಂಡ್ಯದಲ್ಲೇ ಹುಟ್ಟಿ ಬೆಳೆದವನು. ನಾವು ಬೆಳೆಯುವ ಕಾಲಕ್ಕೆ ಮೂರು ಫೋಟೋಗಳು ನಮ್ಮೂರ ಮನೆಗಳಲ್ಲಿ ಕಾಯಂ ಆಗಿರುತಿತ್ತು. ಮೈಸೂರ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಡಾ. ರಾಜಕುಮಾರ್. ಸರ್.ಎಂ.ವಿ ಅವರನ್ನು ಮಂಡ್ಯದ ಅನ್ನದಾತ ಎಂದೇ ಕರೆದೆವು. ಮಂಡ್ಯದ ಹಳ್ಳಿಹಳ್ಳಿಗಳಲ್ಲಿ ಅವರ ಪುತ್ಥಳಿ, ಪ್ರತಿಮೆಗಳಿವೆ. ಒಕ್ಕಲಿಗರೇ ತುಂಬಿರುವ ಮಂಡ್ಯದಲ್ಲಿ ಬ್ರಾಹ್ಮಣರಾದ ಸರ್ ಎಂವಿ ಆರಾಧನೆಗೆ ಯಾರೂ ಒತ್ತಡ ಹೇರಿದ್ದು ಗೊತ್ತಿಲ್ಲ.

ಆದರೆ, ಒಂದು ದಶಕದಿಂದ ಈಚೆಗೆ ನವ ಇತಿಹಾಸಕಾರರು ಚಿಕ್ಕ ಅವಕಾಶವನ್ನು ಬಿಡದೆ ಸರ್ ಎಂವಿ ಅವರನ್ನು ವಿಲನ್ ರಂತೆ ಚಿತ್ರೀಕರಿಸುವ ಕೆಲಸ ನಡೆಸುತ್ತಿದ್ದಾರೆ. ಮೀಸಲಾತಿ ವಿರೋಧಿಸಿದರು ಅನ್ನೋ ಅಭಿಪ್ರಾಯ ಬೇಧಕ್ಕೆ ಸರ್ ಎಂವಿ ಅವರ ಒಳ್ಳೆ ಕೆಲಸಗಳನ್ನು ಅವರವು ಅಲ್ಲವೇ ಅಲ್ಲ ಎಂದು ಸಾಕ್ಷಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈ ನವ ಇತಿಹಾಸಕಾರರು ಯಾರೂ ಆ ಕಾಲಮಾನದಲ್ಲಿ ಬದುಕಿ, ಬಾಳಿದವರು ಅಲ್ಲ. ಪುಸ್ತಕದ ಸಾಲುಗಳ ಅರ್ಥವನ್ನ ಅರ್ಥೈಸಿ ಹೊಸ ಇತಿಹಾಸದ ಪಾಠ ಬರೆಯತೊಡಗಿದ್ದಾರೆ. ನಮ್ಮ ಜನಪದ, ನಮ್ಮ ತಾತ ಹೇಳಿಕೊಟ್ಟಿದ್ದು ಸುಳ್ಳು ಎನ್ನುತ್ತಿದ್ದಾರೆ. ಹಾಗಾದರೆ ನಮ್ಮ ತಾತನ ಅಪ್ಪಂದಿರ ಕಾಲದಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಲು ಮನೆಗೊಬ್ಬರು ಹೋಗಿ ಬಂದು ಸರ್ ಎಂವಿ ಬಗ್ಗೆ ತಮ್ಮ‌ಮಕ್ಕಳಿಗೆ ಹೇಳಿದ್ದು. ಅದು ಹಾಗೆ ತಲೆ ಮಾರಿಂದ ತಲೆಮಾರಿಗೆ ಹೇಳಿದ್ದೆಲ್ಲಾ ಸುಳ್ಳೇ?

ನನ್ನ ಪ್ರಕಾರ ಇತಿಹಾಸಕಾರ ಎಡ - ಬಲ ಕನ್ನಡಕ ಹಾಕಬಲ್ಲ, ಪೆನ್ನು ಹಿಡಿಯಬಲ್ಲ, ಜನಪದಕ್ಕೆ ಮುಲಾಜಿರುವುದಿಲ್ಲ. ಇತಿಹಾಸಕಾರನಷ್ಟು ಸುಳ್ಳು ಹೇಳಲಾರದು.
ಹಾಗೆಯೇ, ಟಿಪ್ಪು ಕೂಡ ನನ್ನ ಜಿಲ್ಲೆಯವನೇ, ಅವನನ್ನ ಹೊಗಳಿ ಹಾಡುವ ಲಾವಣಿ, ಪದಗಳನ್ನು ಕೇಳುತ್ತಲೇ ಬೆಳೆದವರು ನಾವು. ಎಂದೂ ಟಿಪ್ಪು ವಿರೋಧಿ ಪದಗಳೇ ನಮ್ಮ ಕಿವಿಗೆ ತಾಕಿರಲಿಲ್ಲ. ಆದರೆ ನವ ಇತಿಹಾಸಕಾರರು ಆತನನ್ನು ಹೈದಾರಾಬಾದಿನ ನಿಜಾಮರು, ರಜಾಕಾರರಂತೆ ಚಿತ್ರಿಸುತ್ತಿದ್ದಾರೆ. ಹೈದರಾಬಾದಿನ ನಿಜಾಮರು, ರಜಾಕಾರರ ಬಗ್ಗೆ ಜನಪದ ಹೇಳುವುದನ್ನೇ ಇತಿಹಾಸವು ಹೇಳಿದೆ. ಅಲ್ಲಿ ಕನ್ನಡಕ - ಪೆನ್ನಿನ ಸಮಸ್ಯೆ ಯಾಕೆ ಬಂದಿಲ್ಲವೋ ಗೊತ್ತಿಲ್ಲ. ನಿಜಾಮರನ್ನು ಹಾಡಿ ಹೊಗಳುವ‌ ನವ ಇತಿಹಾಸ ಸೃಷ್ಟಿಯಾಗಿ ಜಯಂತಿ ಶುರುವಾದರು ಅಚ್ಚರಿ ಇಲ್ಲ. ನಿಜಾಮರು, ರಜಾಕಾರರ ಹಾವಳಿಯನ್ನು ಕಂಡುಂಡವರೆಲ್ಲಾ ಸತ್ತು ಹೋಗಲಿ ಎಂದು ನವ ಇತಿಹಾಸಕಾರರು ಕಾಯುತ್ತಿರಬಹುದು.
ಕಾರಣ, ಈ ನವ ಇತಿಹಾಸಕಾರರು ಯಾರೂ ಆ ಕಾಲಮಾನದಲ್ಲಿ ಬದುಕಿದವರಲ್ಲ. ತಮಗೆ ಒಪ್ಪಿಗೆಯಾಗುವ ಪುಸ್ತಕ, ಪಳೆಯುಳಿಕೆ ಹಿಡಿದು ಕತೆ ಕಟ್ಟುವವರೆ.

ಒಂದು ಉದಾಹರಣೆ:- ಕಾರ್ಗಿಲ್ ಯುದ್ದ ಗೆದ್ದಿದ್ದು ಭಾರತ ಎಂಬುದು ವಿಶ್ವಕ್ಕೆ ಗೊತ್ತಿದೆ. ಆದರೆ, ಕಾರ್ಗಿಲ್ ಯುದ್ದದ ದಳಪತಿಯಾಗಿದ್ದ ಪರ್ವೇಜ್ ಮುಶ್ರಫ್ ತಮ್ಮ ಆತ್ಮಕತೆ ಇನ್ ದ ಲೈನ್ ಆಫ್ ಫೈರ್ ಪುಸ್ತಕದಲ್ಲಿ‌ ಕಾರ್ಗಿಲ್ ಯುದ್ದ ಗೆದ್ದಿದ್ದು ಪಾಕಿಸ್ತಾನ ಅಂತ ಬರೆದುಕೊಳ್ತಾರೆ. ಬೇರೆ ಬೇರೆ ಟಿವಿ ಸಂದರ್ಶನಗಳಲ್ಲೂ ಅದನ್ನೇ ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ಐದನೇ ತರಗತಿಗೆ ಇದು ಒಂದು ಕಾಲಕ್ಕೆ ಪಠ್ಯವೂ ಆಗಿತ್ತು. ಇನ್ನು ಮುನ್ನೂರು ವರ್ಷ ಆದಮೇಲೆ ಕಾರ್ಗಿಲ್ ಯುದ್ದವೂ ಆ ಕಾಲಕ್ಕೆ ಉದಯವಾಗುವ ನವ ಇತಿಹಾಸಕಾರರಿಂದ ವಿವಾದ ಆಗೋದ್ರಲ್ಲಿ ಡೌಟೇ ಇಲ್ಲ.
ನನ್ನ ಪ್ರಕಾರ, ಇತಿಹಾಸದಲ್ಲಿ ನಮಗೆ ಏನು ಬೇಕೋ ಅದು ಸಿಗುತ್ತದೆ. ಕುರುಡನೊಬ್ಬ ಆನೆ ಮುಟ್ಟಿ ವರ್ಣಿಸಿದಂತೆ ಎಂದರೂ ತಪ್ಪಿಲ್ಲ ಏನಂತೀರಿ...? - Avinash Hs