*ಎಣ್ಣೆ ಬತ್ತಿದ ಲಾಟೀನಿನ ಬೆಳಕ ಹಿಂಬಾಲಿಸುತ್ತಾ...*
*ಹಿಂದಣ ಹೆಜ್ಜೆಯನರಿಯದೆ ನಿಂದ ಹೆಜ್ಜೆಯನರಿಯಬಾರದು – ಅಲ್ಲಮ ಪ್ರಭು*
‘ಎಣ್ಣೆ ಬತ್ತಿದ ಲಾಟೀನು’ - ಇದೊಂದು ಪ್ರವಾಸ ಕಥನವಲ್ಲ, ಲೇಖಕರು ಎಲ್ಲೂ ಕೂಡಾ ಈ ಪುಸ್ತಕದಲ್ಲಿ ಈ ಯಾತ್ರೆಯ ಬಗ್ಗೆ ಪ್ರವಾಸ ಎನ್ನುವ ಪದವನ್ನು ಉಲ್ಲೇಖಿಸುವುದೂ ಇಲ್ಲ. ಇದು ಪುಸ್ತಕದಲ್ಲಿ ಬರೆದಿರುವಂತೆ ‘ಉಮ್ರಾ ಅನುಭವ ( A Umra Journey Experience). ‘ ಪ್ರವಾಸ ಕಥನ’ಕ್ಕೂ ‘ಉಮ್ರಾ ಅನುಭವ’ಕ್ಕೂ ಇರುವ ವ್ಯತ್ಯಾಸ ಏನು ಎನ್ನುವುದು ಒಂದು ಪ್ರಶ್ನೆ. ಪ್ರವಾಸ ಕಥನಕ್ಕೆ ಒಂದು ಆಧ್ಯಾತ್ಮಿಕ ಆಯಾಮ ಇರಬೇಕೆಂದಿಲ್ಲ. ಒಂದಿಷ್ಟು ದುಡ್ಡು ನಮ್ಮ ಅಕೌಂಟಿನಲ್ಲಿದ್ದರೆ, ನಮಗಿಷ್ಟದ ಯಾವುದೇ ಹೊಸ ಜಾಗವನ್ನು ಸುತ್ತಾಡಿ, ಅಲ್ಲಿನ ವಿಶೇಷತೆಗಳನ್ನು ದಾಖಲಿಸಿ ಅದನ್ನು ಓದಿಸಿಕೊಳ್ಳುವ ಓಘದಲ್ಲಿ ಅಕ್ಷರದ ಮೂಲಕ ಕಟ್ಟಿಕೊಡುವುದು. ಅಲ್ಲಿನ ನಮ್ಮ ಅನುಭವಗಳನ್ನು ದಾಖಲಿಸುವಾಗ ಅಲ್ಲಿನ ಇತಿಹಾಸವನ್ನು ನಮೂದಿಸುವ ಪರಿಪಾಠವಿರುತ್ತದೆ. ಆ ಇತಿಹಾಸವನ್ನು ವಿವಿಧ ಮೂಲಗಳಿಂದ, ಉಲ್ಲೇಖಗಳಿಂದ ಎತ್ತಿಕೊಳ್ಳಲಾಗುತ್ತದೆ. ಮತ್ತು ಅದು ಸತ್ಯವೇ ಆಗಬೇಕೆಂದಿಲ್ಲ. ಉಮ್ರಾ ಅನುಭವದ ‘ಎಣ್ಣೆ ಬತ್ತಿದ ಲಾಟೀನು’ ವಿಶಿಷ್ಟವಾಗುವುದು ಈ ಕಾರಣಕ್ಕೆ. ಮಕ್ಕಾ ಹಾಗೂ ಮದೀನಾದ ಬಗೆಗಿನ ಇತಿಹಾಸಕ್ಕೆ ಸಂಪೂರ್ಣ ಅಥೆಂಟಿಸಿಟಿ ಇದೆ. ಇದು ಯಾವುದೋ ಒಬ್ಬ ಇತಿಹಾಸಕಾರ ಬರೆದುದಲ್ಲ. ಪವಿತ್ರ ಕುರ್ ಆನಿನಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ಐತಿಹಾಸಿಕ ನೆಲದಲ್ಲಿ ನಿಂದು, ಅಲ್ಲಿನ ಧಾರ್ಮಿಕ ಕರ್ಮಗಳನ್ನು, ಆರಾಧನೆಗಳನ್ನು ನಿರ್ವಹಿಸುತ್ತಾ ವರ್ತಮಾನದಲ್ಲಿ ಅದರ ಪ್ರಸ್ತುತತೆಯನ್ನು ವಿವರಿಸುವುದು – ಈ ‘ಎಣ್ಣೆ ಬತ್ತಿದ ಲಾಟೀನು’ ತೋರುವ ಬೆಳಕು.
ಓರ್ವ ಪತ್ರಿಕೋದ್ಯೋಗಿಯಾಗಿ ಕುಕ್ಕಿಲರು ವರ್ತಮಾನದ ಆಗುಹೋಗುಗಳಿಗೆ ತೀಕ್ಷ್ಣವಾಗಿ ಹಾಗೂ ಲಾಜಿಕಲ್ಲಾಗಿ ಪ್ರತಿಕ್ರಿಯಿಸುತ್ತಿರುವವರು. ಅದನ್ನು ಅವರ ಪತ್ರಿಕಾ ಲೇಖನಗಳಲ್ಲಿ, ಸಾಮಾಜಿಕ ಮಾಧ್ಯಮ ಪೇಜುಗಳಲ್ಲಿ ಹಾಗೂ ಟಿವಿ ಪ್ಯಾನೆಲ್ ಚರ್ಚೆಗಳಲ್ಲಿ ನಾವು ಕಂಡಿದ್ದೇವೆ. ವರ್ತಮಾನದಲ್ಲಿ ಇಸ್ಲಾಮಿನ ಮೇಲೆ ಇರುವ ಪ್ರಮುಖ ಆರೋಪ ಅದು ಸ್ತ್ರೀ-ಪುರುಷ ತಾರತಮ್ಯ ಎಸಗುತ್ತಿದೆ ಎಂಬುದು. ಅದರಿಂದಲೇ, ಈ ಪುಸ್ತಕದ ಮೊದಲ ಭಾಗದಿಂದಲೇ ಇದೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ಮಕ್ಕಾ ಹಾಗೂ ಮದೀನದಲ್ಲಿ ತಾನು ‘ದೃಕ್-ಸಾಕ್ಷಿ’ಯಾಗಿರುವುದರ ಉದಾಹರಣೆಯಿಂದಲೇ ವಿವರಿಸುತ್ತಾರೆ. ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿದ್ದ ಮುಕ್ತತೆ ಮತ್ತು ಮದೀನಾದ ಮಸ್ಜಿದುನ್ನಬವಿಯಲ್ಲಿ ಖಲೀಫಾ ಉಮರ್(ರ) ಬಳಿಕದ ಆಗಿರುವ ಬದಲಾವಣೆಯಿಂದ ಆಗಿರುವ ಪ್ರತ್ಯೇಕತೆಯನ್ನು ಎರಡು ಸಾಧ್ಯತೆಗಳ ಹಿನ್ನೆಲೆಯಲ್ಲಿ ಲೇಖಕರು ಗುರುತಿಸುತ್ತಾರೆ. ಈ ಎರಡು ಸಾಧ್ಯತೆಗಳೇ ಇಸ್ಲಾಮಿನಲ್ಲಿ ವೈಚಾರಿಕ ವೈವಿಧ್ಯಕ್ಕಿರುವ ಅತಿ ದೊಡ್ಡ ಪುರಾವೆ ಎನ್ನುವ ಲೇಖಕರು ಮುಸ್ಲಿಂ ಸಮುದಾಯದ ಈಗಿನ ದಾರಿ ಯಾವುದಾಗಿರಬೇಕು ಎಂಬುದನ್ನೂ ತಿಳಿಸುತ್ತಾರೆ. ಅವರದೇ ಮಾತಿನಲ್ಲಿ ಹೇಳುವುದಾದರೆ, “ಎಲ್ಲವನ್ನೂ ‘ನಿಷಿದ್ಧ’ಗಳ ಪಟ್ಟಿಯಲ್ಲಿಡುವ ಉಗ್ರ ನಿಲುವು ಮತ್ತು ಎಲ್ಲವನ್ನೂ ‘ಮುಕ್ತ’ಗಳ ಪಟ್ಟಿಯಲ್ಲಿಡುವ ಉದಾರ ನಿಲುವುಗಳ ನಡುವಿನ ನಿಲುವು ಇಸ್ಲಾಮಿನದ್ದು” – ಇದು ನಾವು ಈಗಿನ ದಿನಗಳಲ್ಲಿ ಹೆಚ್ಚು ಅರ್ಥೈಸಿಕೊಳ್ಳಬೇಕಾದ ವಿಚಾರ.
ಉಮ್ರಾದಲ್ಲಿ ನಿರ್ವಹಿಸುವ ಆರಾಧನೆಗಳನ್ನು ಕೇವಲ ಧಾರ್ಮಿಕ ಕರ್ಮಗಳಾಚೆ ನೋಡುವುದು ಇಸ್ಲಾಮೀ ಇತಿಹಾಸದ ಅಧ್ಯಯನ ಬೆನ್ನಿಗಿರಿಸಿಕೊಂಡ ಎ.ಕೆ.ಕುಕ್ಕಿಲರ ಈ ಪುಸ್ತಕದ ಮುಖ್ಯ ವಸ್ತು. ಅದು ತವಾಫ್ ಆಗಿರಲಿ, ಸಫಾ-ಮರ್ವಾ ಮಧ್ಯೆಯ ನಡಿಗೆಯ ಬಗ್ಗೆ ಆಗಿರಲಿ, ಕಂದಕ್ ಯುದ್ಧದ ಬಗೆಗಿರುವ ಕುರುಹಿನ ಬಗೆಯಾಗಿರಲಿ - ಈ ಪುಸ್ತಕ ಒಂದು ಹೊಸ ಹೊಳಹನ್ನು ನೀಡುತ್ತದೆ. ಇಂದು ಹಜ್ಜ್ – ಉಮ್ರಾ ಯಾತ್ರೆ ಕೈಗೊಂಡವರು ನಮ್ಮ ಸುತ್ತಮುತ್ತ ಧಾರಾಳವಾಗಿದ್ದಾರೆ. ಆದರೆ, ಅಲ್ಲಿನ ಆರಾಧನಾ ಕ್ರಮಗಳನ್ನು ಬಹುಪಾಲು ಕರ್ಮಶಾಸ್ತ್ರದ ಹಿನ್ನೆಲೆಯಲ್ಲಿ, ಧಾರ್ಮಿಕ ಆರಾಧನೆಯ ಹಿನ್ನೆಲೆಯಲ್ಲಿ ಮಾತ್ರ ನೋಡಿರುವವರು. ಆದರೆ, ಈ ಆರಾಧನಾ ಕ್ರಮಗಳು ವರ್ತಮಾನಕ್ಕೆ ಏನನ್ನು ಹೇಳುತ್ತಿದೆ? ಉಹುದ್ ಯುದ್ಧದಲ್ಲಿ ಪ್ರವಾದಿ(ಸ) ಸೈನ್ಯಕ್ಕೆ ಹಿನ್ನೆಲೆಯಾಗಲು ಅನುಸರಣೆ ಮಾಡದ ಅನುಯಾಯಿಗಳು ಜಬಲುರ್ರುಮಾತ್ ನಿಂದ ಇಳಿದು ಬಂದಿರುವುದ ಬಗ್ಗೆ ಐತಿಹಾಸಿಕ ಉಲ್ಲೇಖಗಳನ್ನು ಹೇಳುತ್ತಾ, ಅದನ್ನು ಪ್ರಸಕ್ತ ಜಾಗತಿಕ ಮುಸ್ಲಿಮರ ಹಿನ್ನೆಡೆಗೆ ರೂಪಕವಾಗಿ ಬಳಸಿ, ಭೂತ ಮತ್ತು ವರ್ತಮಾನವನ್ನು ಒಟ್ಟೊಟ್ಟಿಗೇ ನಮ್ಮೊಳಗೆ ಇಳಿಯುವಂತೆ ಮಾಡುವದು ಈ ಪುಸ್ತಕದ ಒಂದು ಹೆಗ್ಗಳಿಕೆ. ಜೊತೆಗೆ, ಬದ್ರ್ ನ ಗೆಲುವುಗಿಂತಲೂ ಉಹುದ್ ನ ಸೋಲಿನ ಬಗ್ಗೆ ಕುರಿಆನಿನಲ್ಲಿ ಹೆಚ್ಚಿನ ಮಹತ್ವವಿದೆ ಎಂದು ಹೇಳುವ ಲೇಖಕರು, ಅದರಿಂದ ನಾವು ಏನನ್ನು ಕಲಿಯಬೇಕು ಹಾಗೂ ಯಾವ ರೀತಿ ಕ್ರಿಯಾಶೀಲರಾಗಬೇಕು, ವರ್ತಮಾನದಲ್ಲಿ ಪರ್ಯಾಯಗಳನ್ನು ಯಾವ ರೀತಿ ರೂಪಿಸಬೇಕು ಎಂದೂ ಎಚ್ಚರಿಸುತ್ತಾರೆ.
ಉಮ್ರಾ ಕ್ಕೆ ಅನಿರೀಕ್ಷಿತವಾಗಿ ಹೊರಟ ಬಗೆ, ಅದಕ್ಕೆ ತಾನು ತನ್ನನ್ನು ಸಿದ್ದತೆಗೊಳಿಸಿದ ರೀತಿಯ ಬಗ್ಗೆ ಕುಕ್ಕಿಲರು ವಿವರಿಸುವಾಗ ನನಗೆ ಅಲ್ಲಿ ಕಂಡದ್ದು ಪ್ರಾಮಾಣಿಕತೆ ಮತ್ತು ಮುಗ್ಧತೆ. ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಉಮ್ರಾ ಪ್ರಯಾಣಕ್ಕಾಗಿ ಅಗತ್ಯವಿರುವ 60-70 ಸಾವಿರ ರೂಪಾಯಿಗಳು ತನಗೆ ದೊಡ್ಡ ಮೊತ್ತ ಎಂದು ವಿವರಿಸುವಾಗ ಇರುವ ಪ್ರಾಮಾಣಿಕತೆ ಹಾಗೂ ವಿಮಾನ ಪ್ರಯಾಣದ ಬಗೆಗಿದ್ದ ಅತಿ ನಿರೀಕ್ಷೆ ಹಾಗೂ ಭಯವನ್ನು ವಿವರಿಸುವಾಗ ಕಾಣುವ ಬರಹದಲ್ಲಿನ ಮುಗ್ಧತೆ ನನಗೆ ವೈಯಕ್ತಿಕವಾಗಿ ಇಷ್ವವಾದ ವಿಷಯ. ಒಂದು ಕಡೆ ಕುಕ್ಕಿಲರು, ಅವರ ಪತ್ನಿಯ ಪ್ರಸವ ದಿನಾಂಕ ಎಪ್ರಿಲ್ 21ಕ್ಕೆ ಎಂದು ಸ್ಪಷ್ಟವಾಗಿದ್ದು, ಉಮ್ರಾ ಯಾತ್ರೆಯಿಂದ ಹಿಂದಿರುಗುವ ದಿನಾಂಕ ಎಪ್ರಿಲ್ 18 ಎಂದಾಗ ಅವರ ಪತ್ನಿ ಧೃತಿಗೆಡದೆ, ಅವರ ಉಮ್ರಾ ಯಾತ್ರೆಗೆ ಉತ್ತೇಜಿಸಿ ಹೇಳಿದ ಮಾತುಗಳನ್ನು ಹೇಳುತ್ತಾ ಅವರು ಬರೆಯುವುದು ಹೀಗೆ. “ ‘ಚಿಂತಿಸಬೇಡಿ, ನೀವು ಹೋಗಿಬನ್ನಿ, ನಮಗಾಗಿ ಪ್ರಾರ್ಥಿಸಿ’ ಎಂದೇ ಪ್ರೀತಿಸಿದ್ದಳು” ಎಂಬುದಾಗಿ. ಆ ವಾಕ್ಯದ ಕೊನೆಗೆ ‘ಪ್ರೀತಿಸಿದ್ದಳು’ ಬದಲಾಗಿ ಬೇರೆ ಯಾವುದಾದರೂ ಪದವನ್ನು ಬಳಸಬಹುದಿತ್ತು. ಆದರೂ, ‘ಪ್ರೀತಿಸಿದ್ದಳು’ ಎಂಬಲ್ಲಿ ಅವರ ಹಿಂದಿನ ‘ಸರಸ-ಸಲ್ಲಾಪ’ದ ಶೈಲಿಯನ್ನೂ ಗುರುತಿಸಬಹುದು. ಮತ್ತು, ಅದು ತುಂಬಾ ಪ್ರೀತಿಯ ವಾಕ್ಯ ಎಂದು ನನಗನ್ನಿಸಿತು.
ಲೇಖಕರು ಈಗಾಗಲೇ ತಮ್ಮ ವೈಚಾರಿಕ ಬರಹಗಳಿಂದಾಗಿ ತಮ್ಮದೇ ಶೈಲಿಯಿಂದ ಗುರುತಿಸಲ್ಪಟ್ಟವರು. ಓರ್ವ ಪ್ರಗತಿಪರನೆಂದು ಕರೆಯಿಸಿಕೊಳ್ಳುವ ಮುಸ್ಲಿಮ್ ಬರಹಗಾರನಿಗೂ ‘ಉಮ್ರಾ ಅನುಭವ’ ದಾಖಲಿಸಿರುವ ಲೇಖಕರಿಗೂ ಇರುವ ಮುಖ್ಯ ವ್ಯತ್ಯಾಸವನ್ನು ನಾನು ಗುರುತಿಸುವುದು ಕುಕ್ಕಿಲರು ಹಿಪಾಕ್ರಟಿಕ್ ಆಗಿಲ್ಲದ ಬರಹಗಾರ ಎಂದು. ತಾನು ಮುಸ್ಲಿಮ್ ಬರಹಗಾರ ಎಂದು ಗುರುತಿಸಿಕೊಂಡಿರುವುದನ್ನು ‘ಮೂಲಭೂತವಾದಿ’ ಎಂದು ಕೆಲವರಿಂದ ಕರೆಸಿಕೊಂಡಾಗ ಅದನ್ನು ತಿರಸ್ಕರಿಸುವ ಉಮೇದಿಗೆ ಹೋಗದೆ ಇದ್ದವರು ಕುಕ್ಕಿಲ. ಇಂದಿನ ಬರಹಗಾರರಲ್ಲಿರುವುದು ಎರಡೇ ವರ್ಗ. ಅದು ಮನುಷ್ಯ ಸ್ನೇಹಿ ಬರಹಗಾರ ಮತ್ತು ಮನುಷ್ಯ ವಿರೋಧಿ ಬರಹಗಾರ ಎಂಬುದು. ‘ಎಣ್ಣೆ ಬತ್ತಿದ ಲಾಟೀನು’ ಮನುಷ್ಯ ಸ್ನೇಹಿ ಬರಹದ ಒಂದು ಅದ್ಭುತ ಉದಾಹರಣೆ.
ಹಜ್-ಉಮ್ರಾ ಪ್ರಯಾಣದ ಬಗ್ಗೆ ಕನಸಿರುವವರು, ಅಥವಾ ಹಜ್ ಉಮ್ರಾ ಆರಾಧನೆಗಳ ಧಾರ್ಮಿಕತೆಯಾಚೆಗಿನ ಪ್ರಸ್ತುತತೆ ಬಗೆಗಿನ ಅಧ್ಯಯನಕ್ಕೆ ಈ ‘ಎಣ್ಣೆ ಬತ್ತಿದ ಲಾಟೀನು’ ಓದುವುದು ಅವಶ್ಯ. ಜೊತೆಗೆ ಪುಸ್ತಕದ ಈ ಶೀರ್ಷಿಕೆಯ ಹಿನ್ನೆಲೆಯೇನು ಎಂಬುದನ್ನೂ ಅರಿತುಕೊಳ್ಳಲು ಒಮ್ಮೆಯಾದರೂ ಈ ಪುಸ್ತಕವನ್ನು ಓದಬೇಕು. ಒಂದೊಳ್ಳೆ ಓದಿಗೆ ಕಾರಣವಾದ ಎ.ಕೆ.ಕುಕ್ಕಿಲರಿಗೆ ಈ ಹಿನ್ನೆಲೆಯಲ್ಲಿ ನಾನು ಕೃತಜ್ಞನಾಗಿದ್ದೇನೆ.
*ಸುಲ್ತಾನ್ ಮನ್ಸೂರ್*