ಬೇಡವೆಂದರೂ ಬಿಡದೀ ಮಾಯೆ..14
------ ------ ------
ನಮ್ಮ ಕಡೆ ಘಟ್ಟದ ಕೆಳಗೆ ಮತ್ತು ಮೇಲೆ ಎಂಬ ಭಿನ್ನತೆಯ ಮಾತುಗಳು ಅಗಾಗ ಕೇಳಿ ಬರುತ್ತದೆ.ಹಾಗೆಯೇ ಬದುಕಿನ ಶ್ರೇಣಿಯೂ..!.ಹದಿಹರೆಯ ಘಟ್ಟದ ಮಧ್ಯೆಯ ಭಯಂಕರ ತಿರುವಿನ ಹಾದಿಯಾದರೆ ,ಬಾಲ್ಯ ಘಟ್ಟದ ಕೆಳಗಿನ ಸಮುದ್ರ ದಂಡೆಯ ಬದಿ ಕಳೆದ ಸಮಯ.ಅಂತೂ ಘಟ್ಟ ಹತ್ತಿ ಬಿಟ್ಟೆವಾದರೆ ಸಿಗುವುದು ತಾರುಣ್ಯವೆಂಬ ಸಮೃದ್ಧ ಬಯಲು.ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಜಗತ್ತ ನಾಳೆ ನೋಡುವ.
ಇವತ್ತು, ಪತ್ರಿಕೆಯೊಂದರಲ್ಲಿ ಪ್ರಕಟಿತ ಮತ್ತು ಪ್ರತಿಲಿಪಿಯಲ್ಲಿ ಲಭ್ಯವಿರುವ ಮತ್ತೊಂದು ಕಥೆ ಓದಿ...
ಒಂದು ಸಮಕಾಲೀನ ಕಥೆ.
===========
ಕೃಷ್ಣಮೂರ್ತಿ ಹೆಗಡೆ ಅಲಿಯಾಸ್ ಕಿಟ್ಟಿ ಹುಟ್ಟಿದ್ದು,ಬೆಳೆದದ್ದು,ಮತ್ತು ಈಗ ವಾಸಿಸುತ್ತಿರುವ ಊರು ರಮಣಗಿರಿಯೇ ಆಗಿದೆ.ಪಿ ಯು ಸಿ ಮತ್ತು ಎಂಜಿನಿಯರಿಂಗ್ ಓದುವಾಗ ಪರವೂರಿನಲ್ಲಿ ನೆಲೆಸಿದ್ದು ಬಿಟ್ಟರೆ,ಹೆಚ್ಚು ಕಾಲ ಕಳೆದದ್ದು ರಮಣಗಿರಿಯಲ್ಲಿಯೇ.
ರಮಣಗಿರಿ ಹೆಸರಿಗೆ ತಕ್ಕಂತೆ ಶಾಂತ,ಮತ್ತು ನಯನ ಮನೋಹರ ಸ್ಥಳ.ಮನೆ ಸ್ವಲ್ಪ ಶಿಖರದ ಜಾಗದಲ್ಲಿದ್ದರೆ,ಕಣಿವೆಯಲ್ಲಿ ಅಡಿಕೆ,ಎಲಕ್ಕಿ ಮತ್ತು ಬಾಳೆ ತೋಟ.ಮಧ್ಯದ ತಪ್ಪಲಿನಲ್ಲಿ ತೆಂಗು,ಮಾವು,ಚಿಕ್ಕು,ಲವಂಗ,ಜಾಯಿ ಕಾಯಿ ಮುಂತಾದ ಮರ ಗಿಡಗಳು.
ಒಂದಿಷ್ಟು ಶುಂಠಿ ,ಅನಾನಸುಗಳನ್ನೂ ಬೆಳೆದಿದ್ದಾರೆ.ಜೊತೆಗೊಂದಿಷ್ಟು ಭತ್ತದ ಗದ್ದೆ.
ಅಪ್ಪ ಮಹಾಬಲ ಹೆಗಡೆಯವರು ತಮ್ಮ ತಂದೆಯ ಹೆಸರನ್ನೇ ಮಗನಿಗೆ ಇಟ್ಟಿದ್ದರು.ತಾಯಿ ಮಹಾದೇವಿ ವಾಳ್ಯದ ಸೀಮೆಯ ಸಂಪ್ರದಾಯಸ್ಥ ಸದ್ಗೃಹಿಣಿ. ಅವತ್ತಿನ ಕಾಲಕ್ಕೇ ಅನುಕೂಲಸ್ಥರಾದ ಮಹಾಬಲ ಹೆಗಡೆಯವರು ಇದ್ದೊಬ್ಬ ಮಗ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಐದನೇಯ ಇಯತ್ತೆಗೆ ಶಿರಸಿಯ ಕಾನ್ವೆಂಟ್ ಒಂದಕ್ಕೆ ಸೇರಿಸಿದ್ದರು.ಮಗನಿಗೆ ಮನೆಯಲ್ಲಿ ಇದ್ದ ಅಕ್ಕರೆಯೇ ಸಿಗಲಿ ಎಂದು ಮಾದೇವಿಯ ಅಕ್ಕನ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಿದ್ದರು.
ಹಾಗೆ ಊರಿಂದ ಹೊರ ಕಾಲಿಟ್ಟ ಕಿಟ್ಟಿ ವಾರೊಪ್ಪತ್ತಿನಲ್ಲೆ ಮತ್ತೆ ಮನೆ ಸೇರಿದ್ದ. ’ಹೋಗಲಿ ಬಿಡಿ ಪಾಪ,ಮನೆ ಬಿಟ್ಟು ಉಳಿದು ಅಭ್ಯಾಸವಿಲ್ಲ ನಮ್ಮನೆ ಮಾಣಿಗೆ ’ ಅಂದರು ಮಾದೇವಕ್ಕ.ಅವನಿಗೆ ಹೋಮ್ ಸಿಕ್ ಇರಬಹುದು ಎಂದು ಮಹಾಬಲರು ಸುಮ್ಮನಾದರು.
ಮುಂದೆ ಶಿರಸಿಯಲ್ಲಿ ಪಿಯೂ ಮುಗಿಸಿ ,ತುಮಕೂರಿನ ಸಿದ್ಧಗಂಗಾದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪೂರೈಸುವವರೆಗೂ ಕಿಟ್ಟಿಯ ಜೀವನದಲ್ಲಿ ವಿಶೇಷವಾದುದೇನು ಘಟಿಸಲಿಲ್ಲ.
ನೌಕರಿ ನಿಮಿತ್ತ ಬೆಂಗಳೂರು ಸೇರಿದ ಕಿಟ್ಟಿ ಆ ನಗರದ ವೇಗಕ್ಕೆ ಸ್ವಲ್ಪ ಹೆಚ್ಚೇ ಕಂಗಾಲಾಗಿದ್ದ. ಅದು ಸಾಫ್ಟವೇರ್ ಉದ್ಯಮ ಎಕ್ ದಮ್ ಶಿಖರಕ್ಕೇರಿದ ಸಮಯ.ಇನಫೋಸಿಸ್ ಸೇರಿದ ಕಿಟ್ಟಿಗೆ ಯಾವುದೊ ಮಾಯಾಲೋಕಕ್ಕೆ ಬಂದಂತೆ ಭಾಸವಾಗಿತ್ತು.ಅಲ್ಲಿ ಕಂಡ ಅಪ್ಸರೆಯೂ ಅದಕ್ಕೆ ಇಂಬುಕೊಡುವಂತಿದ್ದಳು.ಅವಳೇ ಅಲ್ಲಿ ಅಡ್ಮಿನ್ ಆಗಿದ್ದ ರಾಧಿಕಾ ಭಟ್.ಮೆಟ್ರೋ ಜೀವನ ಶೈಲಿ ಅವನಿಗೆ ಒಗ್ಗದಿದ್ದರೂ ಅದನ್ನು ಒಂದಿಷ್ಟು ಸಹ್ಯ ಮಾಡಿದ್ದು ರಾಧಿಕಾಳ ಸ್ನೇಹವೇ.
ಮುಂದೆ ಅದು ಪ್ರೀತಿಗೆ ತಿರುಗಿದ್ದು ಎಲ್ಲ ನಿರೀಕ್ಷಿತವೇ.ಅಲ್ಲದೆ ಇಬ್ಬರೂ ಒಂದೇ ಜಾತಿಗೆ ಸೇರಿದ್ದರಿಂದ,ಆರ್ಥಿಕ ಸ್ವಾವಲಂಬಿಗಳಾದ್ದರಿಂದ ವಿಲನ್ ಗಳಾರು ಇಲ್ಲವಾಗಿ,ಎಲ್ಲವೂ ಸುಖಾಂತ್ಯವಾಗುವ ಹಂತ ತಲುಪಿತ್ತು.ಇಂತಹ ಹೊತ್ತಿನಲ್ಲೆ ಕಾಲದ ಓಟ ವೇಗ ಪಡೆದುಕೊಳ್ಳುವುದು.ಯುರೋಪ್ ಮತ್ತು ಅಮೇರಿಕದ ಆರ್ಥಿಕ ಮುಗ್ಗಟ್ಟಿನ ಬಿಸಿ ಇಲ್ಲಿಗೂ ತಲುಪಿತ್ತು.ಬೆಂಗಳೂರಿನ ಸಾಫ್ಟವೇರ್ ಪ್ರಪಂಚದಲ್ಲಿ ಸಣ್ಣದೊಂದು ಕಂಪನ ಆರಂಭವಾಗಿತ್ತು.ಮಿತವ್ಯಯದ ಕ್ರಮವಾಗಿ ಕಂಪನಿ ಕೈಬಿಟ್ಟ ನೌಕರರ ಮೊದಲ ಪಟ್ಟಿಯಲ್ಲಿ ಕಿಟ್ಟಿ ಹೆಸರಿತ್ತು.ಹಿ ವಾಸ್ ಫೈರಡ್..!.ಇನ್ನೇನು ಮದುವೆಯಾಗಿ ಲೈಫ್ ಸೆಟಲ್ ಆಗುವುದು ಎಂದುಕೊಂಡಿದ್ದ ಕಿಟ್ಟಿ ಸಂಪೂರ್ಣ ಅಧೀರನಾಗಿ ಬಿಟ್ಟ.ಜೊತೆಗೆ ಸಂಬಳದ ಆಧಾರದ ಮೇಲೆ ಕೊಂಡ ಕಾರ್,ಸೈಟುಗಳ ಲೋನ್ ಇನ್ನು ತೀರಿರಲಿಲ್ಲ.ದಿಕ್ಕೇ ತೋಚದ ಕಿಟ್ಟಿ ನಿಸ್ತೇಜನಾಗಿ ಬಿಟ್ಟ.
ಇಂತಹ ಸ್ಥಿತಿಯಲ್ಲಿ ,ಆ ಕ್ಷಣದಲ್ಲಿ ಪ್ರಿಯತಮೆ ರಾಧೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಿದ ನಿರ್ಧಾರವೊಂದು ಆತನ ಬದುಕನ್ನು ಅನಿರೀಕ್ಷಿತ ತಿರುವಿಗೆ ತಳ್ಳಿಬಿಟ್ಟಿತು.ಅದುವೇ ಬೆಂಗಳೂರಿನಿಂದ ಊರಿಗೆ ತೆರಳುವ ನಿರ್ಧಾರ !
ಸೈಟ್ ನ ಬೆಲೆ ದುಪ್ಪಟ್ಟಾದ್ದರಿಂದ ,ಅದನ್ನೊಂದು ಮಾರಿ ಬಿಟ್ಟರೆ ಸಾಲವೆಲ್ಲ ತೀರಿ ಒಂದಿಷ್ಟು ದುಡ್ಡಿನೊಂದಿಗೆ ಊರಿಗೆ ಮರಳುವುದು ಕಿಟ್ಟಿಗೆ ಸುಲಭದ ಮಾರ್ಗವಾಗಿ ಕಂಡಿತು.ಇನ್ನುಳಿದಿದ್ದು ಮನದನ್ನೆ ರಾಧೆಯನ್ನು ಒಪ್ಪಿಸುವ ಕೆಲಸ ಮಾತ್ರ.ತನ್ನನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅವಳು ಎದುರಾಡಿಯಾಳೇ?.ಖಂಡಿತ ಒಪ್ಪುತ್ತಾಳೆ ಎಂಬ ನಂಬಿಕೆ ಆತನದ್ದಾಗಿತ್ತು. ರಾಧಿಕಾಳ ವಾದ ಬೇರೆಯದ್ದೇ ಆಗಿತ್ತು.’ಈ ಆರ್ಥಿಕ ಹಿಂಜರಿತ ಎಲ್ಲ ತಾತ್ಕಾಲಿಕ ಕಣೋ,ಇದಕ್ಕೆ ಹೆದರಿ ಓಡಿಹೋಗಿ ಹೇಡಿಯಾಗ್ತಿಯಾ?.ಹೋಗೋದು ಬೇಡ ಅನ್ನಲ್ಲ ,ಇನ್ನು ಇಪ್ಪತ್ತು ವರ್ಷ ದುಡಿದು ಹೋಗೋಣ.ಪ್ಲೀಸ್ ಕಿಟ್ಟಿ ’ ಅಂದಿದ್ದಳು.
ನಿರ್ಧಾರ ಮತ್ತು ರಾಧಿಕಾ ,ಎರಡರಲ್ಲಿ ಒಂದರ ಆಯ್ಕೆ ಮಾತ್ರ ಅವನ ಪಾಲಿಗಿತ್ತು.ಒಂದು ವಾರ ರೂಮಿನಲ್ಲಿ ಮಲಗಿಯೇ ಕಳೆದ ಕಿಟ್ಟಿಗೆ ಯಾವುದಕ್ಕೂ ಊರಿಗೆ ಹೋಗಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಅನಿಸಿತ್ತು.ನಡೆದ ವಿಷಯಗಳೆಲ್ಲವನ್ನೂ ಅಪ್ಪನಿಗೆ ತಿಳಿಸಿದ ಕಿಟ್ಟಿ,ರಾಧೆ ಮತ್ತವಳ ಹೆತ್ತವರಿಗೆ ವಿಷಯ ತಿಳಿಸುವ ಜವಾಬ್ದಾರಿಯನ್ನು ಅಪ್ಪನ ಹೆಗಲಿಗೇರಿಸಿ ಚಿತ್ತ ನಿವೃತ್ತನಾದ.ಮುಂದೊಂದು ದಿನ ರಾಧಿಕಾಳ ಮದುವೆಯ ಕರೆಯೋಲೆ ಕಣ್ಣಿಗೆ ಬಿತ್ತು. ಆಗ ಬ್ರಹ್ಮಚಾರಿಯಾಗಿಯೇ ಇರುವ ನಿರ್ಣಯ ಕೈಗೊಂಡ ಕಿಟ್ಟಿ,ತನ್ನ ಪಾಡಿಗೆ ಕೃಷಿ ಮತ್ತು ಊರಿನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ.
ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೆ ಅಮ್ಮ ಮಾದೇವಿ ಹೃದಯಾಘಾತದಿಂದ ತೀರಿಕೊಂಡಳು.ಪ್ರಾಜ್ಞ ಮಹಾಬಲರು ,ಸಂಸಾರಕ್ಕೆ ಹೆಣ್ಣೊಬ್ಬಳ ಅನಿವಾರ್ಯತೆಯನ್ನು ,ಕಿಟ್ಟಿಗೆ ಮನನ ಮಾಡಲು ಯಶಸ್ವಿಯಾದರು.ಆದರೆ ಆ ಹೊತ್ತಿಗೆ ಹವ್ಯಕರಲ್ಲಿ ಉಂಟಾದ ವಧುವಿನ ಕೊರತೆ ದೊಡ್ಡ ಹೆಗಡೆಯವರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಬಿಟ್ಟಿತು.ಇದರಿಂದ ಬಳಲಿದ ಎಲ್ಲರಂತೆ ಇವರೂ, ಕೆಳ-ಮಧ್ಯಮ ವರ್ಗದ, ದೂರದ ಗುಲಬರ್ಗಾದ ರುಕ್ಮಿಣಿಯನ್ನು ಸೊಸೆಯಾಗಿ ಮನೆ ತುಂಬಿಸಿಕೊಂಡರು.ಸಂಸಾರವೆಂಬ ಸೋಜಿಗದ ವ್ಯವಸ್ಥೆಗೆ ಕಾಲಿಟ್ಟ ಕಿಟ್ಟಿಗೆ ವರ್ಷೊಪ್ಪತ್ತಿನೊಳಗೆ ಮಗುವೂ ಹುಟ್ಟಿತು.
ರಾಧಿಕಾಳಿಗೆ ಸುಲಭವಾಗಿ ಕಿಟ್ಟಿಯನ್ನು ಮರೆಯಲು ಸಾಧ್ಯವಿರಲಿಲ್ಲ.ಕಿಟ್ಟಿ ಕೈಕೊಟ್ಟು ಊರಿಗೆ ಹೊರಟಾಗ ಅವಳು ಸ್ತಂಭೀಭೂತಳಾಗಿದ್ದು ನಿಜ.ಆದರೆ ಹೇಡಿಯಂತೆ ಓಡಿಹೋದ ಕಿಟ್ಟಿಯ ಬಗ್ಗೆ ಅವಳಿಗೆ ಹುಟ್ಟಿದ್ದು ಕೇವಲ ಅಸಹ್ಯ.ಅದೇ ಅವಳಿಗೆ ಅವನನ್ನು ಮರೆಯಲು ಔಷಧವಾಗಿದ್ದು ಸುಳ್ಳಲ್ಲ.ನಂತರ ಮನೆಯವರ ಒತ್ತಾಸೆಗೆ ಟೆಕ್ಕಿ ರಾಜೇಶನನ್ನು ಮದುವೆಯಾಗಿ ಇಡೀ ಭರತ ಖಂಡವನ್ನು ಸುತ್ತಾಡಿದ್ದಲ್ಲದೆ,ಹತ್ತಾರು ಬೇರೆ ದೇಶಗಳನ್ನು ಕಂಡಳು.ಇದು ತಿಕ್ಕಲು ಕಿಟ್ಟಿಯನ್ನು ಕಟ್ಟಿಕೊಂಡಿದ್ದರೆ ಆಗುತ್ತಿತ್ತೆ,?,ಜೊತೆಗೆ ಮಡಿ -ಮೈಲಿಗೆಯ ಮಾದೇವತ್ತೆ ಯ ಸಂಗಡ ತನಗೆ ಏಗಿ ಬರುತ್ತಿತ್ತೆ ? ಎಂಬ ಸಮರ್ಥನೆಗಳು ಅವಳನ್ನು ಸಮಾಧಾನ ಪಡಿಸುತ್ತಿದ್ದವು.
ರಾಧಿಕಾಳದ್ದು ಚಿಕ್ಕ ಚೊಕ್ಕ ಕುಟುಂಬ .ತಿಂಗಳಿಗೆ ಆರಂಕಿ ಸಂಬಳ ಪಡೆಯುವ ಗಂಡ,ವಂಶೋದ್ಧಾರಕ್ಕೆ ಒಬ್ಬ ಮಗ.ಆದರೆ ಆ ಸಂಭ್ರಮ ಬಹಳ ಕಾಲ ಇರಲಿಲ್ಲ.ಪತಿ ಯಂತ್ರಮಾನವನಾಗಿಯೂ ,ಮಗ ಸಿದ್ಧವಸ್ತುವಾಗಿ ಶಾಲೆಯೆಂಬ ಕಾರ್ಖಾನೆಯಲ್ಲಿ ತಯಾರಾಗುತ್ತಿರುವ ಕಚ್ಚಾವಸ್ತುವಾಗಿಯೂ ಕಾಣಿಸತೊಡಗಿದ್ದರು.ಆದರೂ ತನ್ನಿಂದ ಕುಟುಂಬಕ್ಕೆ ಧಕ್ಕೆಯಾಗದಂತೆ ಕರ್ತವ್ಯ ನಿಭಾಯಿಸುವಲ್ಲಿ ಒಂದು ಹಂತಕ್ಕೆ ರಾಧಿಕಾ ಯಶಸ್ವಿಯಾದಳು.
ರುಕ್ಮಿಣಿ ಒರಟು ಮತ್ತು ಬಿರುಬಿಸಿಲಿನ ನಾಡಾದ ಕಲಬುರ್ಗಿಯಿಂದ ಬಂದವಳು.ಬಡತನದ ಬೇಗೆ ಅವಳನ್ನು ಇನ್ನೊಂದಿಷ್ಟು ಕರಕಲು ಮಾಡಿತ್ತು.ಅವಳಿಗೆ ರಮಣಗಿರಿಯಲ್ಲಿ ಎಲ್ಲವೂ ಶೀತಲ.ಮಲೆನಾಡಿನ ಮಳೆ,ತಂಗಾಳಿ ಎಲ್ಲ ಸಂತಸ ಕೊಟ್ಟಿವೆ.ಇಲ್ಲಿಗೆ ಬಂದ ಒಂದೆರಡು ವರ್ಷ ಹೊಂದಾಣಿಕೆ ಕಷ್ಟ ಆಗಿತ್ತು.ಇಲ್ಲಿಯ ಭಾಷೆ ,ಆಹಾರಗಳಿಗೆ ಪಡಿಪಾಟಲು ಪಟ್ಟಿದ್ದಳು.ಈಗ ಎಲ್ಲವೂ ಸರಾಗ.ತನ್ನ ಊರಕಡೆಯ ಒಂದಿಷ್ಟು ಹೆಣ್ಣುಮಕ್ಕಳು ಈ ಕಡೆಯ ಸಂಬಂಧ ಮಾಡಿ ಸುಖವಾಗಿರಲಿ ಎಂದು ನೆಂಟಸ್ತಿಕೆ ಮಾಡಿಸಲು ಪ್ರಯತ್ನ ನಡೆಸುತ್ತಿದ್ದಾಳೆ.
* * *
ಅಂತೂ ಎಲ್ಲವೂ ಶುಭಂ ಎಂದು ಶರಾ ಬರೆಯುವ ವೇಳೆಗೆ ಎಲ್ಲರೂ ವರ್ತಮಾನದಲ್ಲಿ ಬಂದು ನಿಂತಿದ್ದಾರೆ.ಕಿಟ್ಟಿ ಇತ್ತೀಚಿಗೆ ಅಂತರ್ಮುಖಿಯಾಗಿದ್ದಾನೆ.ಯಾವ ಕೆಲಸ ಮಾಡಲೂ ಮನಸ್ಸಿಲ್ಲ.ಸುಮ್ಮನೆ ಸಿಡುಕುತ್ತಾನೆ.ಹೆಂಡತಿ ಮತ್ತು ಅವಳದೇ ಬಣ್ಣ ಪಡೆದ ಮಗಳೂ ಕುರೂಪಿಯಾಗಿ ಕಾಣುತ್ತಾರೆ.ತಾನು ರಾಧೆಗೆ ಮೋಸ ಮಾಡಿದೆ ಅಂತ ತೀವ್ರವಾಗಿ ಅನ್ನಿಸತೊಡಗಿದೆ.ನಗರ ಬಿಟ್ಟು ಬಂದು ತಪ್ಪು ಮಾಡಿದೆ ಎಂದು ಗೊಣಗಿಕೊಳ್ಳ ತೊಡಗಿದ್ದಾನೆ.ಇಲ್ಲಿರಲಾರೆ,ಅಲ್ಲಿಗೂ ಹೊಗಲಾರೆ ಎಂಬ ಸ್ಥಿತಿ ಕಿಟ್ಟಿಯದು.ಮಾಯೆಯೊಳು ತಾನೊ,ತನ್ನೊಳು ಮಾಯೆಯೋ ಎಂಬ ಭ್ರಮಾತ್ಮಕ ಜಗತ್ತಿನಲ್ಲಿ ಅವನಿದ್ದಾನೆ ಅಂತ ಖುದ್ದು ಅವನಿಗೆ ಅನ್ನಿಸತೊಡಗಿದೆ.
ಅತ್ತ ರಾಧಿಕಾಳಿಗೂ ಎನೋ ತಳಮಳ.ಈ ಮೆಟ್ರೋ ಜಗತ್ತು ಅವಳನ್ನು ಏಕಾಂಗಿಯಾಗಿಸಿದೆ.ಗಂಡ,ಮಗ ಯಾರಿಗೂ ಸಮಯವಿಲ್ಲ.ಈ ಯಾಂತ್ರಿಕ ಜಗತ್ತು ತನ್ನನ್ನು ಹುಚ್ಚಳನ್ನಾಗಿಸುತ್ತಿದೆಯಾ ಎಂಬ ಹೆದರಿಕೆ ಅವಳನ್ನು ಕಾಡುತ್ತಿದೆ.ಆಪ್ತ ಸಮಾಲೋಚಕರನ್ನೂ ಭೇಟಿಯಾಗಿ ಆಗಿದೆ.ಒಮ್ಮೆ ಹಗುರವಾಯ್ತು ಅನ್ನಿಸುವಾಗಲೆ,ಮತ್ತೆ ಹಳೆ ನೆನಪುಗಳು ಕಾಡಿ ಬೇಸರವಾಗುತ್ತದೆ.ಆದರೂ ಅವಡುಗಚ್ಚಿ ತನ್ನ ಸಂಸಾರ ರಥದ ಒಂದು ಚಕ್ರವಾಗಿ ಅವಳು ಸಾಗುತ್ತಿದ್ದಾಳೆ.
ಏನೂ ಅರಿಯದ ,ಜೊತೆಗೆ ಅನಿವಾರ್ಯವೂ ಆಗಿರುವ ಬದುಕನ್ನು ಸಂತೃಪ್ತವೋ ನಿರ್ಲಿಪ್ತವೋ ಆದ ಭಾವದಿಂದ ಸುಗಮವಾಗಿ ಸಾಗಿಸುತ್ತಿರುವವಳು ರುಕ್ಮಿಣಿಯೇ.ವಿಶೇಷ ಆಸೆ ಆಸಕ್ತಿಗಳು ಇಲ್ಲದ, ವೈರಾಗ್ಯವೂ ಅಲ್ಲದ ,ಬತ್ತದ ಚಿಲುಮೆಯಂತಹ ರೂಪಕವಾಗಿ ನಿಂತವಳು ಕೃಷ್ಣನ ಪತ್ನಿಯೇ.ತಾನು ಎನೂ ಕೊರತೆಯಿಲ್ಲದೆ ಸುಖವಾಗಿದ್ದೇನೆ ಎಂಬ ಭಾವವೇ ಅವಳನ್ನು ನಿಶ್ಚಿಂತಳನ್ನಾಗಿಸಿದೆ.ಕಾಲ ಕ್ರಮಿಸುತ್ತಿದೆ ನಿಧಾನವಾಗಿ.
******
ನಾವೂ ಕಥೆಯಲ್ಲಿ ಬರುವ ಕೃಷ್ಣ,ರಾಧೆ ಮತ್ತು ರುಕ್ಮಿಣಿ ಯರ ಹಾಗೆ.ಕೃಷ್ಣನಿಗೆ ಹಳ್ಳಿಯಲ್ಲಿದ್ದು ತಪ್ಪು ಮಾಡಿಬಿಟ್ಟೆ ಎಂಬ ಕೊರಗು.ರಾಧೆಗೆ ತದ್ವಿರುದ್ಧ ,ಪೇಟೆ ಸಾಕಾಗಿದೆ ಆದರೆ ತಿರುಗಿ ಬರದ ಹಾದಿಯದು.ರುಕ್ಮಿಣಿಗೆ ಪಾಲಿಗೆ ಬಂದದ್ದು ಪಂಚಾಮೃತ ಎಂಬ ಸ್ಥಿತಪ್ರಜ್ಞತೆ.ನಮ್ಮ ನಮ್ಮ ಪಾತ್ರಗಳ ಆಯ್ಕೆ ನಮ್ಮದು ಎಂಬ ಪ್ರಾಯೋಗಿಕ ನೆಲೆಯಲ್ಲಿ ನಿಂತಾಗಲೂ ,ಎಲ್ಲವೂ ವಿಧಿಯ ಲೀಲೆ ಎಂಬ ವೇದಾಂತ ಸೂಜಿಗಲ್ಲಿನಂತೆ ಎಳೆಯುವುದು ಈ ಬದುಕಿನ ವಿಸ್ಮಯ ಎನ್ನಿಸುವುದು ಸಹಜ!.
* * *
ಮುಂದುವರೆಯುವುದು...
-ಡಾ.ಅಜಿತ್ ಹರೀಶಿ