ದೇವಿ ಮತ್ತು ಕೈವಲ್ಯಾ ಶಾಲೆ ಬಿಟ್ಟು ಮನೆಯಲ್ಲಿ ಓದುವ ನಿರ್ಧಾರ ಪ್ರಕಟಿಸಿದ್ದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.
ಶಾಲೆಯನ್ನು ತೊರೆದು ಕಲಿಯುವರಿಗೆಂದಿರುವ ತೆರೆದ ಶಾಲೆಯ ಬಗ್ಗೆ ಈ ಮಾಹಿತಿ.
ಕಾರಣಾಂತರಗಳಿಂದ ಬಾಲಾಪರಾಧಿಗಳಾಗಿ ಶಿಕ್ಷೆ ಅನುಭವಿಸುತ್ತಿರುವ ಮಕ್ಕಳು, ಬಡತನ, ನಿರ್ಲಕ್ಷ ಅಥವಾ ಇನ್ನಾವುದೇ ಕಾರಣದಿಂದ ಶಿಕ್ಷಣವನ್ನೇ ಪಡೆಯದ ಮಕ್ಕಳು ನಂತರ ಯಾವುದಾದರೂ ಸಂಘ ಸಂಸ್ಥೆ ಅಥವಾ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಈ ತೆರೆದ ಶಾಲೆಯಲ್ಲಿ ಕಲಿಯಬಹುದು. ಈ ತೆರೆದ ಶಾಲೆ ಅಥವಾ ಮಕ್ಕಳಿಗಾಗಿರುವ ಈ ಶಿಕ್ಷಣ ಕೇಂದ್ರದ ಹೆಸರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಅಥವಾ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ.
ಅದೊಂದು ಟೆಕ್ನೋ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ಮಕ್ಕಳು ತಮ್ಮ ಶಾಲೆಯ ಬಗ್ಗೆ ದೂರುತ್ತಿದ್ದರು. ತಮ್ಮ ಆಸಕ್ತಿಯ ಬೇರೆ ಯಾವ ವಿಷಯಗಳ ಕಡೆಗೆ ಗಮನ ಕೊಡದೇ ಒಂದೇ ಸಮನೆ ಪ್ರತಿದಿನವೂ ಪರೀಕ್ಷೆಗೆ ಓದುವಂತೆ ಒತ್ತಡದಲ್ಲಿ ಕಲಿಯಬೇಕು. ಅಲ್ಲದೇ ತಾವು ಮುಂದಿನ ವಿದ್ಯಾಭ್ಯಾಸ, ಉನ್ನತ ವ್ಯಾಸಂಗ, ತಮ್ಮ ವೃತ್ತಿ ಕ್ಷೇತ್ರ ಇವುಗಳನ್ನು ಗುರುತಿಸಿಕೊಂಡಿದ್ದೇವೆ. ಆದರೆ ಈಗ ಇಲ್ಲಿ ಓದುತ್ತಿರುವ ಎಲ್ಲಾ ವಿಷಯಗಳೂ ಆ ತಮ್ಮ ಉನ್ನತ ವ್ಯಾಸಂಗದ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿ ತಮ್ಮ ಮುಂದಿನ ಅಭ್ಯಾಸಕ್ಕೆ ಬೇಡದೇ ಇರುವ ವಿಷಯವನ್ನು ಅಷ್ಟೇಕೆ ಸಮಯ ಮತ್ತು ಶ್ರಮ ಕೊಟ್ಟು ಓದಬೇಕು?
ಮಕ್ಕಳ ಅನೇಕಾನೇಕ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದ ಮಕ್ಕಳ ಪೋಷಕರು ಮತ್ತೊಂದು ಟೆಕ್ನೋ ಶಾಲೆ ಅಲ್ಲದ ಸಾಧಾರಣ ಶಾಲೆಗೆ ಕಳುಹಿಸಿದರು. ಅವರಿಗೋ ಆ ಶಾಲೆಯಲ್ಲಿ ಪರೀಕ್ಷಾದೃಷ್ಟಿ ಅಥವಾ ಟೆಕ್ನೋ ಶಾಲೆಗಳಲ್ಲಿ ಇರುವಂತಹ ಸ್ಪರ್ಧಾತ್ಮಕ ವ್ಯವಸ್ಥೆಗೆ ಸಿದ್ಧವಾಗುವಂತಹ ಒತ್ತಡಗಳು ಇಲ್ಲದೇ ಇದ್ದು ಒಂದಿಷ್ಟು ಸ್ವತಂತ್ರವಾಗಿ ಉಸಿರಾಡುವುದಕ್ಕೆ ಅವಕಾಶವಿದ್ದು ಅವರ ಆಸಕ್ತಿಯ ವಿಷಯಗಳ ಕಡೆ ಹೆಚ್ಚು ಗಮನ ಕೊಡಬಹುದೆಂದು ಭಾವಿಸಿದ್ದರು. ಆದರೆ ಬಾಣಲಿಯಿಂದ ಬೆಂಕಿಗೆ ಬಂದ ಹಾಗಾಯ್ತು ಆ ಮಕ್ಕಳಿಗೆ.
ಹಳೆಯ ಕಾಲದ ಕಲಿಕೆಯ ಮಾದರಿ. ಸಾಮೂಹಿಕ ಶಿಕ್ಷೆಗಳ ಪದ್ಧತಿ. ಶಿಕ್ಷಣ ವೆಂದರೆ ಅದನ್ನು ಕೊಡುವುದು ಶಿಕ್ಷೆಯ ಮೂಲಕವೇ ಎಂಬಂತಹ ವಾತಾವರಣ. ಮಕ್ಕಳ ಪೂರ್ವಜ್ಞಾನಕ್ಕೆ ಪೂರಕವಾಗಿಲ್ಲದ ಶಿಕ್ಷಕರ ಬೋಧನಾ ಮಟ್ಟ. ಪ್ರಬುದ್ಧವಾಗಿ ಮತ್ತು ಮುಕ್ತವಾಗಿ ತಮ್ಮತನದ ಭಾವದಿಂದ ನಿರ್ಧಾರಗಳನ್ನು ತೆಗೆದುಕೊಳ್ಳದ ಶಿಕ್ಷಕರು! ಇದರಿಂದ ಮಕ್ಕಳ ಶಾಲಾ ಆಸಕ್ತಿ ಇನ್ನೂ ಕುಗ್ಗಿತು. ಮಕ್ಕಳು ನಿರ್ಧರಿಸಿದರು. ನಮಗೆ ಶಾಲೆ ಬೇಡ. ನಾವು ಶಾಲೆಗೆ ಹೋಗದೇನೇ ಕಲಿಯುತ್ತೇವೆ. ನಮ್ಮ ಆಸಕ್ತಿಯ ವಿಷಯಗಳನ್ನು ನಾವೇ ನಾವು ಕಲಿಯಲು ಸಮರ್ಥವಾಗಿದ್ದೇವೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.
ಹೌದು, ಮಕ್ಕಳಿಗೆ ಶಿಕ್ಷಣದ ಹಕ್ಕು ಇದೆ. ಆದರೆ ಅದು ಶಾಲೆಯಲ್ಲಿಯೇ ಆಗಬೇಕು ಎಂಬ ಅಗತ್ಯವೇನಿಲ್ಲ. ಮಕ್ಕಳನ್ನು ಶಿಕ್ಷಣದಿಂದ ವಂಚಿತರ ನ್ನಾಗಿ ಮಾಡಬಾರದು ನಿಜ. ಆದರೆ ಶಾಲೆ ಅದಕ್ಕೆ ಅನಿವಾರ್ಯವೇ? ಹಾಗೆ ನೋಡಲು ಹೋದರೆ ಮಕ್ಕಳಿಗೆ ಪಠ್ಯಾಧಾರಿತವಾದ ಶಿಕ್ಷಣ ಕ್ಕಷ್ಟೇ ಶಾಲೆಯಲ್ಲಿ ಹೆಚ್ಚು ಗಮನ ನೀಡುವುದು. ಅದರ ಹೊರತಾದ ತಿಳುವಳಿಕೆ ಮತ್ತು ಅರಿವು ಅವರ ಬದುಕಿನಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ. ಮಕ್ಕಳು ಮಾತ್ರವಲ್ಲ, ದೊಡ್ಡವರೂ ಕೂಡ, ಶಾಲೆಗೆ ಹೋಗಿ ಕಲಿತ ವಿದ್ಯಾವಂತರು ಮಾತ್ರವಲ್ಲ, ಶಾಲೆಯ ಯಾವ ಸಾಂಪ್ರದಾಯಿಕ ಶಿಕ್ಷಣ ಪಡೆಯದಿರುವವನೂ ಕೂಡಾ ತನ್ನ ಸುತ್ತಮುತ್ತಲ ಪರಿಸರದಲ್ಲಿ, ತನ ದಿನನಿತ್ಯದ ವಹಿವಾಟಿನಲ್ಲಿ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ. ಸರಿ, ರಾಕೆಟ್ ವಿಜ್ಞಾನ, ಇತರೇ ವೃತ್ತಿಪರತೆಯ ತಂತ್ರಜ್ಞಾನ ಮತ್ತು ವೈದ್ಯಕೀ ಯವೇ ಮೊದಲಾದ ಈಗ ಶಿಕ್ಷಣ ಆಧಾರಿತ ಕ್ಷೇತ್ರಗಳು ಸಮಾಜದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿರುತ್ತವೆ. ಅದು ಮನೆಯಲ್ಲಿಯಾಗಲಿ ಅಥವಾ ಸುತ್ತಮುತ್ತಲ ಪರಿಸರದಲ್ಲಾಗಲಿ ಅನೌಪಚಾರಿಕವಾಗಿ ದೊರೆಯದು. ಆಗ ಶಾಲೆಯನ್ನುನಿರಾಕರಿಸುವುದು ಹೇಗೆ? ಅದೇನೇ ಪ್ರಶ್ನೆಗಳಿರಲಿ, ಒಟ್ಟಾರೆ ಶಾಲೆ ಬೇಡ ಶಿಕ್ಷಣ ಬೇಕು ಎನ್ನು ವವರಿಗೆ ಅನುಕೂಲ ವಾಗುವಂತೆ ಒಂದು ತೆರೆದ ಶಾಲೆಯ ಅಗತ್ಯವನ್ನು ಕೇಂದ್ರ ಸರಕಾರ ಕಂಡುಕೊಂಡಿತು. ಅದರ ಫಲವೇ ಎನ್ಐಒಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್.
ಶಾಲೆಯನ್ನು ತೊರೆದವರಿಗೇ ಈ ತೆರೆದ ಶಾಲೆಗಳು ಎಂಬುದು ನೇರವಾದ ಅರ್ಥವಾದರೂ ಶಾಲೆಯನ್ನು ಬಿಡಬೇಕಾದ ಕಾರಣಗಳಾದರೂ ಏನು?
►ಕಲೆ ಮತ್ತು ಕ್ರೀಡೆಗಳಲ್ಲಿ ವಿಶೇಷ ತರಬೇತಿಗಳು: ಮಕ್ಕಳಲ್ಲಿರುವ ವಿಶೇಷ ಪ್ರತಿಭೆೆಗಳಲ್ಲಿ ಗಂಭೀರ ತರಬೇತಿಯನ್ನು ಹೊಂದುವಾಗ ಇತರ ಮಕ್ಕಳಂತೆ ಶಾಲೆಗೆ ನಿಯಮಿತವಾಗಿ ಹೋಗಲಾಗುವುದಿಲ್ಲ. ಉದಾಹರಣೆಗೆ ನೃತ್ಯ, ಸಂಗೀತ, ನಾಟಕ, ಕಿರುತೆರೆ, ಬೆಳ್ಳಿತೆರೆ ಇತ್ಯಾದಿ ಪ್ರದರ್ಶಕ ಕಲೆಗಳಲ್ಲಿ ವಿಶೇಷವಾದ ಪ್ರತಿಭೆೆ ಇದ್ದು ಅದರಲ್ಲಿ ನಿರತವಾಗಿರುವಂತಹ ಮಕ್ಕಳಿಗೆ ಶಾಲೆಯ ಕಡ್ಡಾಯ ಹಾಜರಾತಿಯನ್ನು ನಿಭಾಯಿಸಲು ಆಗುವುದಿಲ್ಲ. ಒಂದು ಸೀಮಿತ ಮತ್ತು ನಿರ್ದಿಷ್ಟ ಹಂತಗಳನ್ನು ಅನುಸರಿಸುವ ಶಾಲೆಗಳಲ್ಲಿನ ಪಠ್ಯಕ್ರಮಕ್ಕೆ ಒಳಗಾಗಿ ತಮ್ಮ ಓದನ್ನು ಅಥವಾ ಕಲಿಕೆಯನ್ನು ಹೊಂದಾಣಿಸಿಕೊಳ್ಳಲು ಆಗುವುದಿಲ್ಲ. ಅವರಿಗೆ ಈ ತೆರೆದ ಶಾಲೆಗಳು ವರದಾನವಾಗಿರುತ್ತವೆ. ಇದೇ ರೀತಿಯಲ್ಲಿ ಕ್ರೀಡೆಗಳಲ್ಲಿ ವಿಶೇಷ ತರಬೇತಿಗಳನ್ನು ಪಡೆಯುವ ಮಕ್ಕಳೂ ಕೂಡ ತೆರೆದ ಶಾಲೆಯಲ್ಲಿ ಕಲಿಯುವುದು ಬಹು ಉತ್ತಮ ವಿಧಾನ. ಕ್ರೀಡೆಯಲ್ಲಿ ಪರಿಣಿತಿ ಪಡೆಯುವುದರಲ್ಲಿ ಬಾಲ್ಯದ ತರಬೇತಿಗಳು ನಿಜಕ್ಕೂ ಬಹಳ ಅಗತ್ಯವೂ ಮತ್ತು ಪ್ರಾವೀಣ್ಯತೆಯನ್ನು ಪಡೆಯುವಲ್ಲಿ ಸಹಾಯಕವೂ ಆಗಿರುತ್ತದೆ. ಬ್ಯಾಸ್ಕೆಟ್ ಬಾಲ್, ಕ್ರಿಕೆಟ್, ಹಾಕಿ, ಪುಟ್ಬಾಲ್, ಜಿಮ್ನಾಸ್ಟಿಕ್ಸ್, ಬಾಕ್ಸಿಂಗ್, ಸ್ವಿಮ್ಮಿಂಗ್ ಇತ್ಯಾದಿ ಕ್ರೀಡೆಗಳು ಬಹಳ ಗಾಢ ಮತ್ತು ಗಂಭೀರ ತರಬೇತಿಗಳನ್ನು ಬೇಡುತ್ತದೆ. ತಾವು ಇಂತಹುದ್ದೇ ಕ್ರೀಡೆ ಅಥವಾ ಕಲೆಯನ್ನು ತಮ್ಮ ಸಾಧನೆಯ ಕ್ಷೇತ್ರವನ್ನಾಗಿ ಆಯ್ದುಕೊಳ್ಳುವುದಾದರೆ ಮತ್ತು ಗುರಿಯನ್ನು ಸ್ಪಷ್ಟಗೊಳಿಸಿಕೊಂಡಿದ್ದೇ ಆದರೆ ಆ ಮಕ್ಕಳು ಅದಕ್ಕೇ ಪೂರಕವಾ ದಂತಹ ವಿಷಯಗಳನ್ನು ಆಯ್ದುಕೊಂಡು ತಮ್ಮ ಶಿಕ್ಷಣವನ್ನು ತೆರೆದ ಶಾಲೆಯಲ್ಲಿ ಪಡೆಯಬಹುದು.
►ಕಲಿಕೆಯಲ್ಲಿ ನಿಧಾನ ಅಥವಾ ವೇಗಗತಿಯಲ್ಲಿರುವ ಮಕ್ಕಳು: ಕೆಲವು ಮಕ್ಕಳು ಅವರ ಬೌದ್ಧಿಕ ಸಾಮರ್ಥ್ಯದ ಅನುಸಾರವಾಗಿ ಕಲಿಕೆ ಯಲ್ಲಿ ಬಹಳ ನಿಧಾನಗತಿಯಲ್ಲಿರುತ್ತಾರೆ. ಇದಕ್ಕೆ ವಿರುದ್ಧವಾಗಿ ಕೆಲವು ಮಕ್ಕಳು ಬಹಳ ವೇಗವಾಗಿ ಕಲಿಯುತ್ತಾರೆ. ಈ ಎರಡೂ ಬಗೆಯ ಮಕ್ಕಳಿಗೆ ಶಾಲೆಯ ನಿಯಮಿತ ಮತ್ತು ನಿರ್ದಿಷ್ಟ ಪಠ್ಯಕ್ರಮದ ಕಲಿಕೆಯ ಹಂತಗಳು ತೊಡಕಾಗುತ್ತವೆ. ನಿಧಾನವಾಗಿ ಕಲಿಯುವ ಮಗುವಿಗೆ ಇತರ ಮಕ್ಕಳೊಂದಿಗೆ ತನ್ನ ಗತಿಯನ್ನು ಹೆಚ್ಚಿಸಿಕೊಳ್ಳಲಾ ಗದೇ ಕೀಳರಿಮೆ ಒಳಗಾಗುವುದು. ಅಲ್ಲದೇ ಅದರ ಮೇಲೆ ಒತ್ತಡ ವನ್ನು ಹೇರಲಾಗುವುದು. ಇದರಿಂದಾಗಿ ಆ ಮಗುವಿನ ಮಾನಸಿಕ ಮತ್ತು ಬೌದ್ಧಿಕ ಕ್ಷಮತೆ ಇನ್ನೂ ಕ್ಷೀಣಗೊಳ್ಳುವುದು. ಅಂತಹ ಮಗುವಿಗೆ ಮುಕ್ತವಾದ ಸಮಯಾವಕಾಶ ಮತ್ತು ಮುಕ್ತವಾದಂತಹ ಪರಿಸರ ಇರಬೇಕು. ಆಗ ಅದು ತನ್ನ ವೇಗಗತಿಗೆ ಅನುಗುಣವಾಗಿಸರಾಗವಾಗಿ ಉಸಿರಾಡಿಕೊಂಡು ಕಲಿಯಲು ಸಾಧ್ಯವಾಗುವುದು.
ಹಾಗೆಯೇ ಕಲಿಕೆಯಲ್ಲಿ ಚುರುಕು ಮತ್ತು ವೇಗವನ್ನು ಸಾಧಿಸಿರುವ ಮಕ್ಕಳು ಶಾಲೆಯಲ್ಲಿನ ಪಠ್ಯಕ್ರಮಕ್ಕೆ ಮತ್ತು ಅವುಗಳ ಹಂತಗಳಿಗೆ ಬದ್ಧರಾಗಿ ತಾವು ಹೆಚ್ಚಿನದನ್ನು ಓದಲಾಗದೇ ಅಥವಾ ಕಲಿಯಲಾ ಗದೇ ಕಾಯಬೇಕಾಗುತ್ತದೆ. ಇಂತಹ ಮಕ್ಕಳು ತಾವು ಕಲಿತು ಮುಗಿಸಿದರೂ ಶಿಕ್ಷಕರು ಅವರಿಗೆ ಇತರರ ಕಾರಣದಿಂದ ಅದನ್ನೇ ಮುಂದುವರಿಸುತ್ತಿರುತ್ತಾರೆ. ಇದರಿಂದ ಅವರಿಗೆ ಸಮಯ ಮತ್ತು ಶಕ್ತಿ ಎರಡೂ ವ್ಯರ್ಥವಾಗುವಂತಾಗುತ್ತದೆ. ಅವರು ತರಗತಿಗಳಲ್ಲಿ ಟಾಪರ್ ಎನಿಸಿಕೊಳ್ಳಬಹುದು. ರ್ಯಾಂಕ್ಗಳು ಅವರನ್ನು ಅಲಂಕರಿಸ ಬಹುದು. ಆದರೆ ಅವರ ಸಾಮರ್ಥ್ಯವು ಖಂಡಿತವಾಗಿ ವ್ಯರ್ಥ ವಾಗುತ್ತಿರುತ್ತದೆ. ತೆರೆದ ಶಾಲೆಗಳಲ್ಲಿಗಳಲ್ಲಿ ತಮ್ಮ ಸ್ಪಷ್ಟ ಗುರಿ ಮತ್ತು ಸಾಧನಾ ಕ್ಷೇತ್ರದ ಅನುಗುಣವಾಗಿ, ಪೂರಕ ವಿಷಯಗಳ ಇತರ ಸಂಪನ್ಮೂಲಗಳಿಂದಲೂ ಕಲಿಕೆಯನ್ನು ಪಡೆಯಬಹುದಾಗಿರುತ್ತದೆ. ಈ ತೆರೆದ ಶಾಲೆಯಲ್ಲಿ ಯಾವ್ಯಾವ ವಿಷಯಗಳಿರುತ್ತವೆ ಮತ್ತು ಮಕ್ಕಳ ಮುಂದಿನ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ಅವುಗಳನ್ನು ಹೇಗೆ ಓದಬಹುದು ಎಂಬುದನ್ನು ಮುಂದಿನ ಭಾಗಗಳಲ್ಲಿ ವಿವರಿಸುತ್ತೇನೆ.
►ಅಲೆಮಾರಿ ಕುಟುಂಬಗಳು: ಕೆಲವು ಕುಟುಂಬಗಳು ಸ್ವಂತ ವ್ಯಾಪಾರದಲ್ಲಿರುವುದರಿಂದಲೋ ಅಥವಾ ವರ್ಗಾವಣೆಯಾ ಗುವಂತಹ ಕೆಲಸಗಳಲ್ಲಿರುವುದರಿಂದಲೋ ಊರೂರು ಅಥವಾ ದೇಶವಿದೇಶಗಳನ್ನು ಸುತ್ತುತ್ತಿರುತ್ತವೆ. ಎಷ್ಟೋ ಬಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗುವುದು ಎಂದು ಅವರನ್ನು ಹಾಸ್ಟೆಲ್ಲಿನಲ್ಲೋ, ಬೋರ್ಡಿಂಗ್ ಸ್ಕೂಲ್ಗಳಲ್ಲೋ ಅಥವಾ ನೆಂಟ ರಿಷ್ಟರ ಮನೆಗಳಲ್ಲೋ ಮಕ್ಕಳನ್ನು ಬಿಡುವುದುಂಟು. ಇದರಿಂದ ಮಕ್ಕಳು ಪೋಷಕರ ಭಾವನಾತ್ಮಕ ಸಾಮಿಪ್ಯದಿಂದ ವಂಚಿತರಾ ಗುತ್ತಾರೆ. ಮಕ್ಕಳೂ ಕೂಡ ಊರೂರು ಸುತ್ತುವುದರಿಂದ ವಿವಿಧ ರೀತಿಯ ಜನರು ಮತ್ತು ಸಂಸ್ಕೃತಿಗಳ ಪರಿಚಯ ಮತ್ತು ಅನುಭವ ಮಾಡಿಕೊಳ್ಳುತ್ತಾರೆ. ಅವರ ಅರಿವಿನ ಮತ್ತು ಅನುಭವದ ವಿಸ್ತಾ ರವೂ ವಿಕಾಸವೂ ಆಗುತ್ತದೆ. ಆದ್ದರಿಂದ ಮಕ್ಕಳನ್ನು ಯಾವಾಗಲೂತಾವು ಅಲೆದುಕೊಂಡು ಹೋದಂತೆ ವ್ಯವಸ್ಥಿತ ರೀತಿಯಲ್ಲಿ ಕರೆದುಕೊಂಡು ಹೋಗುವುದು ಬಹಳ ಒಳ್ಳೆಯದೇ. ನೋಡಿ, ಆಗೆಲ್ಲಾ ಈ ತೆರೆದ ಶಾಲೆ ನೆರವಿಗೆ ಬರುತ್ತದೆ. ಮಕ್ಕಳು ತಾವೆಲ್ಲಿರು ತ್ತಾರೋ ಅಲ್ಲಿಯೇ ಓದಬಹುದು. ತಮ್ಮ ಓದಿನ ಮತ್ತು ಕಲಿಕೆಗೆ ಅನುಗುಣವಾಗಿ ಪರೀಕ್ಷೆಗೆ ತಮ್ಮನ್ನು ಒಡ್ಡಿಕೊಳ್ಳಬಹುದು. ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಿಲ್ಲ. ಬದಲಿಗೆ ಮುಕ್ತವಾಗಿ ಕಲಿಯುವಂತಹ ಅವಕಾಶ ಇರುತ್ತದೆ.
►ಕಾಯಿಲೆ ಬಂದಿರುವವರು: ಕೆಲವು ಮಕ್ಕಳು ವಿವಿಧ ಕಾಯಿಲೆ ಯಿಂದ ಬಳಲುತ್ತಿರುತ್ತಾರೆ. ಅಪರೂಪವಾದಂತಹ ರೋಗಗಳಿಗೆ ತುತ್ತಾ ಗಿರುತ್ತಾರೆ. ಕೆಲವೊಮ್ಮೆ ಸೂಕ್ಷ್ಮ ಸ್ವರೂಪದಲ್ಲಿ ಅಥವಾ ಗಂಭೀರ ಸ್ಥಿತಿಯಲ್ಲಿ ಬಳಲುತ್ತಿರುವ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ವಾಗುವುದಿಲ್ಲ. ಶಾಲೆಯಲ್ಲಿ ಇವರಿಂದ ಮಕ್ಕಳಿಗೆ ಅಥವಾ ಮಕ್ಕಳಿಂದ ಇವರಿಗೆ ಸೋಂಕು ತಗುಲುವುದೋ ಅಥವಾ ರೋಗ ಉಲ್ಬಣಗೊ ಳ್ಳುವುದೋ ಆಗಬಹುದು. ಆದ್ದರಿಂದ ಅಂತಹ ಮಕ್ಕಳೂ ಕೂಡ ತೆರೆದ ಶಾಲೆಗಳಲ್ಲಿ ಅಧ್ಯಯನ ಮಾಡಬಹುದು. ಎಚ್ಐವಿ ಪೀಡಿತ ಮಕ್ಕಳು, ಕ್ಯಾನ್ಸರ್ ಪೀಡಿತ ಮಕ್ಕಳು, ಅಂಗಗಳ ನ್ಯೂನತೆಗಳಿರು ವವರು, ವಿವಿಧ ಅಂಗಾಂಗಗಳ ಸಮಸ್ಯೆ ಇರುವವರು ಶಾಲೆಯಲ್ಲಿ ಸಾಮಾನ್ಯರಂತೆ ಕಲಿಯಲು ಹೋಗಲು ಸಾಧ್ಯವಾಗದು. ಅಂಥವರ ಕಲಿಕೆಯ ನೆರವಿಗೂ ಈ ತೆರೆದ ಶಾಲೆ ಇರುವುದು.
►ಇತರ ವಿಶೇಷ ಮಕ್ಕಳು: ಕಾರಣಾಂತರಗಳಿಂದ ಬಾಲಾಪರಾಧಿ ಗಳಾಗಿ ಶಿಕ್ಷೆ ಅನುಭವಿಸುತ್ತಿರುವ ಮಕ್ಕಳು, ಬಡತನ, ನಿರ್ಲಕ್ಷ ಅಥವಾ ಇನ್ನಾವುದೇ ಕಾರಣದಿಂದ ಒಂದು ವಯಸ್ಸಿನವರೆಗೆ ಶಿಕ್ಷಣವನ್ನೇ ಪಡೆಯದ ಮಕ್ಕಳು ನಂತರ ಯಾವುದಾದರೂ ಸಂಘ ಸಂಸ್ಥೆ ಅಥವಾ ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ಈ ತೆರೆದ ಶಾಲೆಯಲ್ಲಿ ಕಲಿಯಬಹುದು. ಈ ತೆರೆದ ಶಾಲೆ ಅಥವಾ ಮಕ್ಕಳಿಗಾಗಿರುವ ಈ ದೂರ ಕಲಿಕೆಯ ಅಥವಾ ಮುಕ್ತ ಶಿಕ್ಷಣ ಕೇಂದ್ರದ ಹೆಸರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಅಥವಾ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ. ಕೇಂದ್ರ ಸರಕಾ ರದ ಸುಪರ್ದಿನಲ್ಲಿರುವ ಸಂಸ್ಥೆ ಇದರ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿ ಇಲ್ಲ. ಈ ಸಂಸ್ಥೆಯು ಹೇಗೆ ಕೆಲಸ ಮಾಡುವುದೆಂದೂ, ಅದರ ಸಾಧಕ ಬಾಧಕಗಳೇನೆಂದೂ ಮುಂದೆ ತಿಳಿಯೋಣ.
ಶಿಕ್ಷಣದ ಕೇಂದ್ರ ಯಾವುದಾಗಬೇಕು? ಕಾಲದಿಂದ ಕಾಲಕ್ಕೆ ಶಿಕ್ಷಣವು ತನ್ನ ವ್ಯಾಪ್ತಿ, ಕೇಂದ್ರ, ವಿಧಾನ ಎಲ್ಲವನ್ನೂ ಬದಲಿಸಿಕೊಳ್ಳುತ್ತಾ ಬಂದಿದೆ. ಇದು ಆಯಾ ಕಾಲದ, ಸಂದರ್ಭಗಳ ಅಗತ್ಯವೂ ಕೂಡ ಹೌದು, ವಿಕಾಸಗೊಳ್ಳುವ ರೀತಿಯೂ ಹೌದು. ಪ್ರಾಚೀನ ಶಿಕ್ಷಣ ಪದ್ಧತಿಗಳೇ ಶ್ರೇಷ್ಠ ಎಂದು ಹಲುಬುವವರು ಈಗಲೂ ಇದ್ದಾರೆ. ಅದರಂತೆ ಗುರುಕುಲ ಎಂದು ಹೆಸರಿಟ್ಟುಕೊಂಡು ಅದೇ ರೀತಿಯಲ್ಲಿ ಶಾಲೆಯನ್ನು ನಡೆಸುವವರೂ ಇದ್ದಾರೆ. ಆಗ ಗುರು ಕೇಂದ್ರಿತ ಶಿಕ್ಷಣ ಪದ್ಧತಿ ಇದ್ದು, ಗುರುವಿನ ಅನುಗ್ರಹದಿಂದ ವಿದ್ಯೆಯನ್ನು ಪಡೆಯುವಂತಹ ಅನಿವಾರ್ಯತೆ ಇತ್ತು. ಹಾಗಾಗಿಯೇ ಗುರು ಬ್ರಹ್ಮ, ವಿಷ್ಣು, ಮಹೇಶ್ವರ ಎನ್ನುತ್ತಾ ಗುರುವೇ ಎಲ್ಲವೂ ಎನ್ನುವುದನ್ನು ಮಂತ್ರವಾಗಿಸಿಕೊಂಡಿದ್ದರು. ಗುರುವಿನ ಆಧಿಪತ್ಯದ ಜೊತೆಗೆ ಅವನ ಕರುಣೆ ಮತ್ತು ಔದಾರ್ಯದಿಂದ ವಿದ್ಯೆಯನ್ನು ಕಲಿಯುವ ಅನಿವಾರ್ಯತೆ ಇತ್ತು. ಗುರುವು ತನಗೆ ಲಾಯಕ್ಕಾದ ಶಿಷ್ಯ ಇವನಲ್ಲ ಎನಿಸಿದರೆ ಅವನನ್ನು ತಿರಸ್ಕರಿಸಬಹುದಾಗಿತ್ತು.
ಅದು ನಂತರದ ದಿನಗಳಲ್ಲಿ ಶಿಶು ಕೇಂದ್ರಿತವಾಯಿತು. ಶಿಶುವೇ ಸಮಾಜದ ವರ್ತಮಾನ ಮತ್ತುಭವಿಷ್ಯವಾದ್ದರಿಂದ ಶಿಕ್ಷಕರಿಗೆ ತರಬೇತಿಗಳನ್ನು ನೀಡುವಾಗ ನೀವು ಅವರ ಮನಸ್ಸನ್ನು ಅರಿತು, ಅವರ ದೌರ್ಬಲ್ಯ ಮತ್ತು ಶಕ್ತಿಗಳನ್ನು ಅರಿತು, ಅವರ ಮಟ್ಟಕ್ಕೆ ಇಳಿದು, ಅವರಲ್ಲಿರುವ ಪ್ರತಿಭೆಯನ್ನು ಮತ್ತು ಅರಿವಿನ ಸಾಮರ್ಥ್ಯವನ್ನು ಹೊರದೆಗೆಯುವವರಾಗಬೇಕು ಎಂದು ತಿಳುವಳಿಕೆ ನೀಡಲಾಯಿತು. ಹಾಗಾಗಿಯೇ ಮಕ್ಕಳ ಮನಶಾಸ್ತ್ರ ಮತ್ತು ಕಲಿಕೆಯ ವಿವಿಧ ವಿಧಾನಗಳನ್ನು ಗ್ರಹಿಸುವಲ್ಲಿ ಗಮನ ಹರಿಸಲಾಯಿತು. ಇಲ್ಲಿ ಮಕ್ಕಳು ಗುರುವಿನ ಧೋರಣೆ ಅಥವಾ ಒಲವು ನಿಲುವುಗಳಿಗೆ ಒಗ್ಗುವುದಿಲ್ಲ ಎಂದು ಯಾವುದೋ ಕಾರಣವನ್ನು ಕೊಟ್ಟು ತಿರಸ್ಕರಿಸುವ ಮಾತೇ ಇಲ್ಲವಾಯಿತು. ಶಿಕ್ಷಕರ ತರಬೇತಿಗಳಲ್ಲಿ ಈ ಧೋರಣೆ ಬಹಳ ದಟ್ಟವಾಯಿತು ಮತ್ತು ನೀವು ಅವರಿಗೆ ತಾತ್ವಿಕವಾಗಿ ಬಲವಾಗಬೇಕು ಮತ್ತು ಮಾರ್ಗದರ್ಶಿಗಳಾಗಬೇಕು, ಮುಖ್ಯವಾಗಿ ಅವರಲ್ಲಿರುವ ಸಾಮರ್ಥ್ಯ ಮತ್ತು ಪ್ರತಿಭೆಗಳನ್ನು ಹೊರತರುವವರಾಗಬೇಕು ಎಂಬ ಸ್ಪಷ್ಟ ನಿದೆರ್ೀಶನಗಳಿಂದ ಶಿಕ್ಷಕರಾಗಿಸುವರು.
ಈಗಲೂ ಶಿಕ್ಷಣ ಪದ್ಧತಿ ಶಿಶುಕೇಂದ್ರಿತವಾಗಿಯೇ ಮುಂದುವರಿದರೂ, ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು. ಅದೇನೆಂದರೆ ವಿಷಯ ಕೇಂದ್ರಿತ ಶಿಕ್ಷಣ. ವಿಷಯ ಕೇಂದ್ರಿತ ಆಸಕ್ತಿಯಿಂದಲೇ ಆಸಕ್ತರು ತಮಗೆ ಗುರುಗಳನ್ನು ಹುಡುಕುತ್ತಿದ್ದದು, ಸಾಧನೆಗಳನ್ನು ಮಾಡುತ್ತಿರುವುದು ಪುರಾತನ ಕಾಲದಿಂದಲೂ ನಿಜವಾದರೂ ಈಗ ಅದಕ್ಕೆ ಇನ್ನೂ ಸರಿಯಾದ ಆಯಾಮ ದೊರಕಿದೆ. ಶಿಕ್ಷಣದ ಕೇಂದ್ರ ಶಿಶು ಮತ್ತು ಆ ಶಿಶುವು ಅಥವಾ ವಿದ್ಯಾರ್ಥಿಯು ಗುರುಮಂತ್ರವನ್ನು ಹೇಳುತ್ತಾ ತನ್ನ ಕಲಿಕೆಯನ್ನು ಗುರುಕೇಂದ್ರಿತವಾಗಿಸಿಕೊಳ್ಳುವ ಅಗತ್ಯವೇನೂ ಇಲ್ಲದೇ ವಿಷಯ ಕೇಂದ್ರಿತವನ್ನಾಗಿಸಿಕೊಳ್ಳುವುದು ಈ ಸದ್ಯದ ಕಲಿಕೆಯ ಮುಖವಾಗಿದೆ. ಇದು ಸರಿಯಾಗಿದೆ ಕೂಡ. ತಾನು ಗುರುವೆಂಬ ಅಹಂಕಾರದಿಂದಲೇ ಶಿಷ್ಯರನ್ನು ನಾನಾ ರೀತಿಯಲ್ಲಿ ಶೋಷಣೆಗಳನ್ನು ಮಾಡುತ್ತಾ ತನ್ನ ಮೇಲ್ಮೈಯನ್ನು ಸಾಧಿಸಿಕೊಳ್ಳುವ ಶಿಕ್ಷಕರು ತಮ್ಮ ಕೆಲಸದ ಮಹತ್ವಕ್ಕಿಂತ, ತನ್ನ ಸ್ಥಾನಮಾನ ಅಗತ್ಯಕ್ಕಿಂತ ಮಾನ್ಯತೆಯನ್ನು ಕ್ಲೈಮ್ ಮಾಡಿಕೊಳ್ಳುವುದನ್ನು ಅಥವಾ ಅಹಂಭಾವದಲ್ಲಿ ಸಾರಿಕೊಳ್ಳುವುದನ್ನು ಇನ್ನಾದರೂ ನಿಲ್ಲಿಸಬೇಕು. ಹಳೆಯ ಗುರುಕೇಂದ್ರಿತ ಶಿಕ್ಷಣ ಪದ್ಧತಿಯಲ್ಲಿದ್ದ ಗುರುವಿನ ಮೇಲರಿಮೆಯನ್ನು ಇಂದಿನ ಶಿಕ್ಷಕರೂ ಮುಂದುವರಿಸಿಕೊಂಡು ಮಾನ್ಯತೆಯ ಭ್ರಮೆಯಲ್ಲಿದ್ದಾರೆ ಎಂದು ಯಾವ ಮುಜುಗರವೂ ಮತ್ತು ಸಂಕೋಚವೂ ಇಲ್ಲದೇ ಹೇಳುತ್ತೇನೆ. ಈಗ ವಿಷಯವೇನೆಂದರೆ, ಯಾವ ಗುರುವಿನ ಅನುಗ್ರಹ ಎಂದೇನೂ ತಲೆ ಕೆಡಿಸಿಕೊಳ್ಳದೇ, ಶಾಲೆಯ ಹೇರಿಕೆಯ ಶಿಸ್ತಿನ ಬಿಗಿತವಿಲ್ಲದೇ ವಿಷಯ ಕೇಂದ್ರಿತವಾಗಿ ಮತ್ತು ಶಿಶು ಪ್ರಧಾನವಾಗಿ ಶಿಕ್ಷಣವನ್ನು ಪಡೆಯುವ ರೀತಿ ನೀತಿಗಳನ್ನು ತಿಳಿಯೋಣ.
ಕಲಿಕೆಯ ಸ್ವಾತಂತ್ರ
ಎನ್ಐಒಎಸ್, ನ್ಯಾಷನಲ್ ಇನ್ಸ್ಟ್ಟಿಟ್ಯೂಟ್ ಆಪ್ ಓಪನ್ ಸ್ಕೂಲಿಂಗ್. ಇಲ್ಲಿ ಮಗುವಿಗೆ ತನಗೆ ಬೇಕಾದ್ದನ್ನು ಕಲಿಯುವ ಸ್ವಾತಂತ್ರ್ಯವೇ ಪ್ರಧಾನ. ಏನನ್ನು ಕಲಿಯಬೇಕು? ಯಾವಾಗ ಕಲಿಯಬೇಕು? ಹೇಗೆ ಕಲಿಯಬೇಕು ಎಂಬುದನ್ನು ವಿದ್ಯಾರ್ಥಿಯೇ ನಿರ್ಧರಿಸಿ, ಪರೀಕ್ಷೆಯನ್ನು ಯಾವಾಗ ಪಡೆಯಬೇಕು ಎಂಬುದನ್ನೂ ತಾನೇ ನಿರ್ಧರಿಸುತ್ತಾನೆ. ಇಲ್ಲಿ ಕಲಿಕೆಯ ಸ್ಥಳ, ಕಲಿಕೆಯ ಸಮಯ ಮತ್ತು ಕಲಿಕೆಯ ವೇಗ ಸಾಮರ್ಥ್ಯದ ನಿರ್ಬಂಧವಿಲ್ಲ.
ವಿದ್ಯಾರ್ಥಿಯು ತನ್ನ ಆಸಕ್ತಿ ಮತ್ತು ಮುಂದೆ ತಾನು ಏನಾಗಬೇಕು ಅಥವಾ ಯಾವ ವಿಷಯದಲ್ಲಿ ಮುಂದುವರಿಯಬೇಕು ಎಂದು ಪಡುವ ಆಸೆಗೆ ಅನುಗುಣವಾಗಿ ವಿಷಯಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ ಇರುತ್ತದೆ. ಉದಾಹರಣೆಗೆ, ಪತ್ರಿಕೋದ್ಯಮವನ್ನೋ, ಮಾನವಶಾಸ್ತ್ರವನ್ನೋ ಅಥವಾ ಇತಿಹಾಸ ಅಧ್ಯಯನವನ್ನೋ ಮಾಡುವವರಿಗೆ ಗಣಿತ, ರಸಾಯನಶಾಸ್ತ್ರ ಅಥವಾ ಭೌತಶಾಸ್ತ್ರ ಇತ್ಯಾದಿ ಬೇಡದ ವಿಷಯಗಳನ್ನು ಪ್ರಾರಂಭದಲ್ಲಿಯೇ ಕೈ ಬಿಟ್ಟು ತಮ್ಮ ಅಧ್ಯಯನ ಮತ್ತು ವೃತ್ತಿಗೆ ಪೂರಕವಾಗಿರುವಂತಹ ಸಮಾಜ ಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಇತಿಹಾಸ ಅಧ್ಯಯನ ಇತ್ಯಾದಿಗಳನ್ನು ಮಾತ್ರವೇ ತೆಗೆದುಕೊಳ್ಳಬಹುದು. ಇದರಿಂದ ತಮ್ಮ ಆಸಕ್ತಿಗೆ ಒಗ್ಗದ ಹಾಗೂ ತಮ್ಮ ವೃತ್ತಿಗೆ ಮತ್ತು ಹೆಚ್ಚಿನ ಅಧ್ಯಯನಕ್ಕೆ ಬೇಡದ ವಿಷಯಗಳನ್ನು ಕಡ್ಡಾಯವಾಗಿ ಓದುವುದರಿಂದ ತಪ್ಪಿಸಿಕೊಳ್ಳಬಹುದು. ಅಗತ್ಯಕ್ಕೆ ಮಾನ್ಯತೆ, ಅನಗತ್ಯಕ್ಕೆ ವಿದಾಯ
ನಾನಾ ಕಾರಣಗಳಿಂದ ಶಾಲೆಗಳಿಗೆ ಹೋಗಲಾಗದ ಮಕ್ಕಳು ವಿಷಯ ಕೇಂದ್ರಿತವಾಗಿ ಕಲಿಕೆಯನ್ನು ಹೊಂದಬಹುದು. ತಮ್ಮ ಶಿಕ್ಷಣವನ್ನೂ ಮುಂದುವರಿಸುವುದಲ್ಲದೇ, ಮುಂದಿನ ಉನ್ನತ ವ್ಯಾಸಂಗಕ್ಕೂ ಪ್ರಾಥಮಿಕ ಹಂತದಿಂದಲೇ ಳಪಾಯವನ್ನು ಹಾಕಿಕೊಳ್ಳಬಹುದು.
ನನಗೆ ತಿಳಿದ ಒಂದು ವಿದ್ಯಾರ್ಥಿನಿ ಶಿಕ್ಷಣ ಸಂಸ್ಥೆ ನಡೆಸುವ, ಪತ್ರಿಕೋದ್ಯಮದ ಬಗ್ಗೆ ಒಲವಿರುವ ಹಾಗೂ ಕಲೆ ಮತ್ತು ಸಾಹಿತ್ಯದ ಬಗ್ಗೆ ಅತೀವ ಆಸಕ್ತಿಯಿದ್ದು, ಅವಳು ಈಗ ಮನಶಾಸ್ತ್ರ, ಸಮಾಜ ಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಪರಂಪರೆ, ಕಲೆಯನ್ನು ತೆಗೆದುಕೊಂಡಿದ್ದಾಳೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳು ಜೊತೆಗಿವೆ. ಅವಳೀಗ ಸಾಮಾನ್ಯ ತರಗತಿಗಳ ಮಾನದಂಡದ ಪ್ರಕಾರ ಏಳನೆ ತರಗತಿ. ಈಗ ಅವಳಿಗೆ ಮುಂದೆ ಲಲಿತ ಕಲೆ ಅಥವಾ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಯಾವುದೇ ವಿಷಯದಲ್ಲಿ ತನ್ನ ಅಧ್ಯಯನ ಮುಂದುವರಿಸಿದರೂ, ಈಗಾಗಲೇ ವಿಷಯ ಕೇಂದ್ರಿತವಾಗಿ ಮನಶಾಸ್ತ್ರ, ಸಮಾಜ ಶಾಸ್ತ್ರಗಳನ್ನು ಕಲಿಯಲು ಸಾಧ್ಯ. ನಿಜಕ್ಕೂ ಆಶ್ಚರ್ಯದ ಸಂಗತಿ ಎಂದರೆ, ಮನಶಾಸ್ತ್ರ ಮತ್ತು ಮಾನವಶಾಸ್ತ್ರದ ಬಗ್ಗೆ ಯಾವ ವಿಷಯಗಳನ್ನೂ ಸಾಮಾನ್ಯ ಪಠ್ಯ ಕ್ರಮದಲ್ಲಿ ಅಳವಡಿಸದೇ ಇರುವುದು. ಅವಳ ತಂಗಿ ವೈದ್ಯಕೀಯ ಮತ್ತು ಇತರ ವಿಜ್ಞಾನ ಸಂಬಂಧದ ವಿಷಯಗಳಲ್ಲಿ ಆಸಕ್ತಿ ವಹಿಸಿರುವುದರಿಂದ ಗಣಿತ, ವಿಜ್ಞಾನ, ಮನಶಾಸ್ತ್ರ ಇತ್ಯಾದಿ ವಿಷಯಗಳನ್ನು ತೆಗೆದುಕೊಂಡಿದ್ದಾಳೆ. ಅವಳು ಸಾಮಾನ್ಯ ತರಗತಿಗಳ ಮಾನದಂಡದ ಪ್ರಕಾರ ನಾಲ್ಕನೆ ತರಗತಿ.
ಹೀಗೆ ತಮ್ಮ ಕಲಿಕೆಯ ಆಸಕ್ತಿಯ ಪ್ರಕಾರ ಅವರು ತಮಗೆ ಬೇಕಾದ ವಿಷಯವನ್ನು ಪ್ರಾಥಮಿಕ ಹಂತದಿಂದಲೇ ತೆಗೆದುಕೊಂಡು ಅದರಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸುವ ಮತ್ತು ಅಧ್ಯಯನವನ್ನು ಗಾಢ ಗೊಳಿಸಿಕೊಳ್ಳುವ ರೀತಿಯನ್ನು ಎನ್ಐಒಎಸ್ನಲ್ಲಿ ಕಾಣಬಹುದಾಗಿದೆ.
ಕರ್ನಾಟಕದಲ್ಲಿ ಎನ್ಐಒಎಸ್
ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಮಕ್ಕಳ ಕಲಿಕೆಗೆ ಎನ್ಐಒಎಸ್ ನೆರವಾಗುತ್ತದೆ. ಇಂಟರ್ನೆಟ್ನಲ್ಲಿ ಬೇಕಾದ ಎಲ್ಲಾ ಮಾಹಿತಿಯೂ ದೊರಕುತ್ತದೆ. ಅಷ್ಟೇ ಅಲ್ಲ, ಎಲ್ಲಾ ಅಧ್ಯಯನದ ಪಠ್ಯ ಸಾಮಗ್ರಿಯೂ ದೊರಕುತ್ತದೆ. ಮಗುವು ತನ್ನ ಆಸಕ್ತಿ ಮತ್ತುಸಾಮರ್ಥ್ಯದ ಪ್ರಕಾರ ಕಲಿಯಬಹುದು. ಕೆಲವು ಶಾಲೆಗಳಲ್ಲಿ ಸುಲಿಗೆಗೆ ಒಳಗಾಗುವುದರಿಂದಲೂ ಮುಕ್ತಿಯನ್ನು ಹೊಂದಬಹುದು. ನಮ್ಮ ಕರ್ನಾಟಕದಲ್ಲಿ ಮಲ್ಲೇಶ್ವರಂನಲ್ಲಿ ಪಿಯು ಬೋರ್ಡ್ನ ನಾಲ್ಕನೆ ಅಂತಸ್ತಿನಲ್ಲಿ ಎನ್ಐಒಎಸ್ ಕಾರ್ಯಾಲಯವಿದ್ದು, ಅದರ ನಿರ್ದೇಶಕರಾಗಿ ಚಂದ್ರಶೇಖರ್ ಇದ್ದಾರೆ. ಮೆದು ಭಾಷೆಯ ಮತ್ತು ಸಕಾರಾತ್ಮಕ ಧೋರಣೆಯ ಅವರು ಮುಕ್ತಶಾಲೆಯ ಕಲಿಕೆಯ ಆಳ ಮತ್ತು ಎತ್ತರಗಳನ್ನು ಬಹು ವಿಸ್ತಾರವಾಗಿ ತಿಳಿಸಿಕೊಡುತ್ತಾರೆ. ಅಲ್ಲದೇ ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಉಪನ್ಯಾಸಗಳನ್ನಾಗಲಿ ಮತ್ತು ತಿಳುವಳಿೆಗಳನ್ನಾಗಲಿ ಅವರು ಕೊಡುತ್ತಾರೆ.
ಮಗುವಿನ ನೋಂದಣಿ ಆನ್ಲೈನ್ನಲ್ಲೇ ಮಾಡುವುದು. ನಂತರ ಮಗುವಿನ ಆಯ್ಕೆಯ ಎಲ್ಲಾ ವಿಷಯಗಳ ಪಠ್ಯಗಳು ಆನ್ಲೈನ್ನಲ್ಲಿಯೇ ದೊರಕುವುದು. ಮಗುವು ತನ್ನ ಓದಿನ ಪ್ರಕಾರ ಒಂದೊಂದಾಗಿ ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು. ಹಾಗೆಯೇ, ಈ ಮುಕ್ತ ಶಾಲೆಯ ಕಲಿಕೆಗೆ ಸಂಬಂಧಪಟ್ಟಂತೆ ಅಧ್ಯಯನ ಕೇಂದ್ರ, ಕಲಿಕೆಗೆ ಪೂರಕವಾಗಿರುವ ಪ್ರಾದೇಶಿಕ ಕೇಂದ್ರಗಳು, ಸೌಲಭ್ಯ ಕೇಂದ್ರಗಳೂ ಕೂಡ ಇವೆ. ಇವು ನಿಮ್ಮ ಮಗುವಿನ ಮುಕ್ತಶಾಲೆಯ ಕಲಿಕೆಗೆ ಪೂರಕವಾಗಿ ಕೆಲಸ ಮಾಡುವವು. ಕೆಲವು ವಿಷಯಗಳಿಗೆ ಪ್ರಾಯೋಗಿಕ ತರಗತಿಗಳ, ತರಬೇತಿಗಳ ಅಗತ್ಯವಿರುವುದನ್ನು ಇವು ಪೂರೈಸುತ್ತವೆ. ಹಾಗೆಯೇ ಇಲ್ಲಿನ ಈ ಪೂರಕ ಕೇಂದ್ರಗಳು ಮಾರ್ಗದರ್ಶನ ಮಾಡುತ್ತವೆಯೇ ಹೊರತು ಶಾಲೆಯ ರೀತಿಯಲಿಲ್ಲ ಬೋಧನೆ ಮಾಡುವುದಿಲ್ಲ.
ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಎಂಬ ಎರಡು ಹಂತಗಳಿದ್ದು, ಸೆಕೆಂಡರಿ ಎಂದರೆ ಹದಿನಾಲ್ಕು ವರ್ಷಗಳ ನಂತರ ತೆಗೆದುಕೊಳ್ಳುವ ಪರೀಕ್ಷೆಯಾಗಿದ್ದು, ಸೀನಿಯರ್ ಸೆಕೆಂಡರಿಯು ಹದಿನಾರು ವರ್ಷಗಳ ನಂತರ ತೆಗೆದುಕೊಳ್ಳುವ ಪರೀಕ್ಷೆಯಾಗಿರುತ್ತದೆ. ಇವು ಕ್ರಮವಾಗಿ ಎಸೆಸೆಲ್ಸಿ ಮತ್ತು ಪಿಯುಸಿಗಳ ಮಟ್ಟದ್ದಾಗಿರುತ್ತದೆ. ಈ ಪರೀಕ್ಷೆಯಿಂದ ದೊರಕುವ ಅರ್ಹತಾ ಪತ್ರವು ಸಿಬಿಎಸ್ಸಿ ಸಿಲಬಸ್ನ ಮಟ್ಟದ್ದೇ ಆಗಿರುತ್ತದೆ. ಸ್ಟೇಟ್ ಅಥವಾ ಸಿಬಿಎಸ್ಸಿ ಮಾನದಂಡದ ಮಾನ್ಯತೆ ಇದಕ್ಕಿದೆ. ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ಒರಿಯಾ, ತೆಲುಗು, ಗುಜರಾತಿ, ತಮಿಳು ಮತ್ತು ಮಲಯಾಳಂ ಭಾಷೆಯ ಮಾಧ್ಯಮಗಳಲ್ಲಿ ಸೆಕೆಂಡರಿ ಕೋರ್ಸ್ (ಹತ್ತನೆ ತರಗತಿಗೆ ಸಮಾನವಾದ) ಮಾಡಬಹುದು. ಕನ್ನಡ ಐಚ್ಛಿಕ ಭಾಷೆಯಾಗಿ ತೆಗೆದುಕೊಳ್ಳಬಹುದು. ಆದರೆ ಮಾಧ್ಯಮ ಇಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮವೂ ಮುಕ್ತಶಾಲೆಯಲ್ಲಿ ಇದ್ದರೆ ಅನೇಕ ವರ್ಗಗಳ ಮಕ್ಕಳಿಗೆ ವರದಾನವಾಗುತ್ತದೆ. ಇಂಗ್ಲಿಷ್, ಹಿಂದಿ, ಒರಿಯಾ, ಬೆಂಗಾಲಿ, ಗುಜರಾತಿ ಮತ್ತು ಉರ್ದು ಮಾಧ್ಯಮಗಳಲ್ಲಿ ಸೀನಿಯರ್ ಸೆಕೆಂಡರಿ (ಪಿಯುಸಿ) ಕೋರ್ಸ್ಗಳಿವೆ. ಕನ್ನಡವೂ ಸೇರಿದಂತೆ, ಹಿಂದಿ, ಇಂಗ್ಲಿಷ್, ಉರ್ದು, ಸಂಸ್ಕೃತ, ಬೆಂಗಾಲಿ, ಒರಿಯಾ, ಮರಾಠಿ, ತೆಲುಗು, ಗುಜರಾತಿ, ಪಂಜಾಬಿ, ಪರ್ಷಿಯನ್, ತಮಿಳ್, ಅರೇಬಿಕ್, ನೇಪಾಳಿ, ಅಸ್ಸಾಮಿ, ಮಲಯಾಳಂ; ಹೀಗೆ ಐಚ್ಛಿಕ ವಿಷಯಗಳೊಡನೆ, ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಗೃಹ ವಿಜ್ಞಾನ, ಮನಶಾಸ್ತ್ರ, ಭಾರತದ ಸಂಸ್ಕೃತಿ ಮತ್ತು ಪರಂಪರೆ, ಕಲೆ, ಡಾಟಾ ಎಂಟ್ರಿ ಆಪರೇಶನ್, ಅಂಕಶಾಸ್ತ್ರ; ಹೀಗೆ ಹದಿನೇಳು ಭಾಷೆಗಳು ಸೇರಿದಂತೆ ಇಪ್ಪತ್ತೆಂಟು ವಿಷಯಗಳು ಹತ್ತನೇ ತರಗತಿಯ ಮಟ್ಟದ ಅಧ್ಯಯನಕ್ಕೆ ತೆರೆದಿಡಲಾಗಿದೆ.
ಹಾಗೆಯೇ ಪಿಯುಸಿ ಅಥವಾ ಪ್ಲಸ್ ಟೂ ಹಂತಕ್ಕೆ ಹಿಂದಿ, ಇಂಗ್ಲಿಷ್, ಬೆಂಗಾಳಿ, ಒರಿಯಾ, ತಮಿಳು, ಉರ್ದು, ಸಂಸ್ಕೃತ, ಗುಜರಾತಿ, ಪಂಜಾಬಿ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಚರಿತ್ರೆ, ಭೂಗೋಳ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಾಣಿಜ್ಯ ಶಾಸ್ತ್ರ, ಅಂಕಶಾಸ್ತ್ರ, ಗೃಹವಿಜ್ಞಾನ, ಮನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಸಮಾಜ ಶಾಸ್ತ್ರ, ಕಲೆ, ಪರಿಸರ ವಿಜ್ಞಾನ, ಸಮೂಹ ಮಾಧ್ಯಮ (ಮಾಸ್ ಕಮ್ಯೂನಿಕೇಶನ್) ಡಾಟಾ ಎಂಟ್ರಿ ಆಪರೇಶನ್, ಕಾನೂನು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ; ಹೀಗೆ ಒಂಬತ್ತು ಭಾಷೆಗಳನ್ನು ಒಳಗೊಂಡಂತೆ ಇಪ್ಪತ್ತೊಂಬತ್ತು ವಿಷಯಗಳಿವೆ. ನಿಜಕ್ಕೂ ಮಕ್ಕಳು ತಾವು ಮುಂದೆ ಉನ್ನತ ವ್ಯಾಸಂಗ ಮಾಡುವಂತಹ ವಿಷಯಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪರಿಚಯಿಸಿಕೊಳ್ಳುವುದು ಮತ್ತು ಶಾಸ್ತ್ರೀಯವಾಗಿ ಅಧ್ಯಯನ ನಡೆಸಲು ಪ್ರಾರಂಭಿಸುವುದರಿಂದ ಅವರಿಗೆ ಆಯಾ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಲು ನೆರವಾಗುತ್ತದೆ.
ಆದರೆ ಈ ಮುಕ್ತ ಶಾಲೆಯಲ್ಲಿ ಕಲಿಕೆಯನ್ನು ಪಡೆಯಲು ಎಲ್ಲರಿಗೂ ಸಾಧ್ಯವೇ? ಇದು ಎಲ್ಲರಿಗೂ ತೆರೆದಿರುವುದಂತಹುದ್ದೇ ನಿಜ. ಆದರೆ, ಇಲ್ಲಿ ಓದಲು ವ್ಯಕ್ತಿಗತವಾಗಿ ವಿದ್ಯಾರ್ಥಿಗೂ ಮತ್ತು ಮನೆಯವರಿಗೂ ಕೆಲವು ಅರ್ಹತೆಗಳು ಇರಬೇಕು. ಹಾಗೆಯೇ ಈ ಮುಕ್ತ ಶಾಲೆಯಲ್ಲಿ ಪಡೆದುಕೊಳ್ಳುವುದೆಷ್ಟೋ ಇದ್ದರೂ ಕಳೆದುಕೊಳ್ಳುವುದೂ ಕೆಲವಿವೆ. ಇದು ಎಷ್ಟೇ ಮುಕ್ತವೆಂದರೂ ಕೂಡ ಕೆಲವು ಶಿಸ್ತನ್ನು ಬೇಡುತ್ತದೆ. ಅವು ಏನೆಂದು ಮುಂದೆ ನೋಡೋಣ.
ಯೋಗೇಶ್ ರಾಜಮಾರ್ಗ