ಭಾನುವಾರ, ಏಪ್ರಿಲ್ 22, 2018

*ನಾನೇಕೆ ಬಿಜೆಪಿಯನ್ನು ವಿರೋಧಿಸುತ್ತೇನೆ*…..

*ನಾನೇಕೆ ಬಿಜೆಪಿಯನ್ನು ವಿರೋಧಿಸುತ್ತೇನೆ*…..
----------------------
*1. ಭಾರತ ಎಂದರೆ ಅನೇಕತೆ. ಅನೇಕತೆಯಲ್ಲಿ ಏಕತೆ. ಅನೇಕತೆಯ ಮೂಲಕ ಏಕತೆ. ಬಹುತ್ವವೇ ಭಾರತದ ಬುನಾದಿ. ಆದರೆ ಬಿಜೆಪಿಗೆ ಈ ಬಹುತ್ವದಲ್ಲಿ ನಂಬಿಕೆಯಿಲ್ಲ. ಅದಕ್ಕೆ ಎಲ್ಲವೂ ‘ಏಕ’ವಾಗಬೇಕು. ‘ಏಕ ಮತಧರ್ಮ’, ‘ಏಕ ಭಾಷೆ’, ‘ಏಕ ಸಂಸ್ಕೃತಿ’, ‘ಏಕ ರಾಜಕೀಯ ಪಕ್ಷ’, ‘ಏಕ ನಾಯಕ’… ದೇಶವನ್ನು ಕಾಂಗ್ರೆಸ್ ನಿಂದ ಮುಕ್ತಗೊಳಿಸುವ ಬಯಕೆ, ದೇಶವನ್ನು ಪ್ರತಿಪಕ್ಷಗಳಿಂದ ಮುಕ್ತಗೊಳಿಸುವ ಬಯಕೆ. ಸ್ಪಷ್ಟವಾಗಿ ಇವೆಲ್ಲ ಫ್ಯಾಸಿಸ್ಟ್ ನಿಲುವುಗಳು.*

*2. ಬಿಜೆಪಿಗೆ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲ. ಸೌಜನ್ಯದಿಂದ ಕೂಡಿದ, ಸಭ್ಯತೆಯಿಂದ ಕೂಡಿದ ವಾದದಲ್ಲಿ, ಸಂವಾದದಲ್ಲಿ ನಂಬಿಕೆಯಿಲ್ಲ. ಪ್ರಶ್ನಿಸುವುದನ್ನು ಮಾನ್ಯ ಮಾಡಿದ ಸಂಸ್ಕೃತಿ ನಮ್ಮದು. ಚಾರ್ವಾಕನಿಗೂ ಜಾಗ ಕೊಟ್ಟ ಸಂಸ್ಕೃತಿ ನಮ್ಮದು. ಆದರೆ ಭಾರತೀಯ ಸಂಸ್ಕೃತಿಯ ಉತ್ತರಾಧಿಕಾರಿ ಎಂದು ಹೇಳಿಕೊಳ್ಳುವ ಈ ಪಕ್ಷಕ್ಕೆ ಈ ಉದಾರ ಪರಂಪರೆಯಲ್ಲಿ ನಂಬಿಕೆಯಿಲ್ಲ. ಭಿನ್ನ ಅಭಿಪ್ರಾಯವನ್ನು ಅದು ಒಪ್ಪಿಕೊಳ್ಳುವುದಿಲ್ಲ. ವಾದದಿಂದ ಗೆಲ್ಲುವ ಬದಲು ಎದುರಾಳಿಗಳ ಬಾಯಿ ಮುಚ್ಚಿಸುವ, ದೈಹಿಕ ಹಲ್ಲೆ ಮಾಡುವ, ಕೊಂದು ಮುಗಿಸುವ ಸಿದ್ಧಾಂತದಲ್ಲಿ ಅದಕ್ಕೆ ನಂಬಿಕೆ. ಮಹಾತ್ಮಾಗಾಂಧಿಯ ಹತ್ಯೆಯಿಂದ ಹಿಡಿದು ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಎಲ್ಲರ ಹತ್ಯೆಯ ಹಿಂದೆಯೂ ಇದ್ದುದು ಇದೇ ವಿಚಾರಧಾರೆ.*

*3. ಭಾರತವು ಅನೇಕ ಮತಧರ್ಮಗಳ ಬೀಡು. ನಾನಾ ಮತಧರ್ಮಗಳಿಗೆ ಸೇರಿದವರು ಶತ ಶತಮಾನಗಳಿಂದ ಇಲ್ಲಿ ಪರಸ್ಪರರ ಧರ್ಮವನ್ನು ಗೌರವಿಸುತ್ತ ಸೌಹಾರ್ದದಿಂದ ಬದುಕಿದ್ದಾರೆ. ಆದರೆ ಅನ್ಯಮತದ್ವೇಷವೇ ಬಿಜೆಪಿಯ ಮೂಲ ಅಜೆಂಡಾ. ಹಿಂದೂಧರ್ಮಿಯವರನ್ನು ಹೊರತು ಪಡಿಸಿ ಬೇರೆ ಧರ್ಮದವರೆಲ್ಲರೂ ಹೊರಗಿನಿಂದ ಬಂದವರು, ಅವರು ನಮ್ಮವರಲ್ಲ ಎಂದೇ ಅದು ಭಾವಿಸುತ್ತದೆ. ಅದರ ಪ್ರಕಾರ ಮುಸ್ಲಿಮರೆಲ್ಲರೂ ಭಯೋತ್ಪಾದಕರು. ಕ್ರೈಸ್ತರೆಲ್ಲರೂ ಮತಾಂತರಿಗಳು. ಪ್ರತಿಯೊಂದು ಸಮಸ್ಯೆಯನ್ನೂ, ಪ್ರತಿಯೊಂದು ಘಟನೆಯನ್ನೂ ಅದು ಮತೀಯ ನೆಲೆಯಲ್ಲಿಯೇ ನೋಡುತ್ತದೆ.*

*4. ಜನಸಾಮಾನ್ಯರಿಗೆ ಯಾವತ್ತೂ ತಮ್ಮ ಬದುಕಿನ ಸಮಸ್ಯೆಗಳ ಪರಿಹಾರದ್ದೇ ಚಿಂತೆ. ಅವರು ರಾಜಕೀಯ ಪಕ್ಷಗಳಿಂದ, ಸರಕಾರಗಳಿಂದ ನಿರೀಕ್ಷಿಸುವುದು ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ ಇತ್ಯಾದಿಗಳನ್ನು. ನೆಮ್ಮದಿಯ ಬದುಕನ್ನು. ಹೊರತು ದೇವರು ಮತಧರ್ಮದಂತಹ ಭಾವನಾತ್ಮಕ ವಿಷಯಗಳಲ್ಲ. ಆದರೆ ಬಿಜೆಪಿಗೆ ಭಾವನಾತ್ಮಕ ವಿಷಯಗಳೇ ಮುಖ್ಯ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಮಾಜವನ್ನು ಒಡೆದು ಅದರ ಮೂಲಕ ತಮ್ಮ ಗುರಿ ಸಾಧಿಸುವುದು. ಜನಸಾಮಾನ್ಯರ ಸಮಸ್ಯೆಗಳನ್ನು ಹಿಡಿದುಕೊಂಡು ಅದು ಬೀದಿಗಿಳಿದ ಉದಾಹರಣೆಗಳು ಕಡಿಮೆ. ಅದು ಬೀದಿಗಿಳಿಯುವುದು ಹೆಚ್ಚಾಗಿ ಕೋಮುವಾದಿ ವಿಷಯಗಳನ್ನು ಹಿಡಿದುಕೊಂಡೇ. ಅವರು ಹತ್ಯೆಯನ್ನು, ಒಂದು ಲೈಂಗಿಕ ಅತ್ಯಾಚಾರವನ್ನು ಕೂಡಾ ಮತೀಯ ನೆಲೆಯಲ್ಲಿಯೇ ನೋಡುತ್ತಾರೆ. ಮಾನವೀಯತೆ ಮರೆತು ಅಲ್ಲಿಯೂ ಹಿಂದೂ ಮುಸ್ಲಿಂ ವಿಷಯ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಾರೆ.*

*5. ಬಿಜೆಪಿಯ ಹಿಂದಿರುವ ವಿಚಾರಧಾರೆಗೆ ಅಹಿಂಸೆಯಲ್ಲಿ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆಯಿಲ್ಲ. ಮಹಾತ್ಮಾಗಾಂಧಿಯವರ ನಿಲುವು ಸರಿ ಇಲ್ಲ ಅನಿಸಿತು. ತಕ್ಷಣ ಅವರನ್ನು ಗುಂಡು ಹಾರಿಸಿ ಕೊಂದುಬಿಟ್ಟರು. ದೇಶದ ಜನತೆಯ ಪಾಲಿಗೆ ಏನೇನೂ ಪ್ರಸ್ತುತವಲ್ಲದ ರಾಮಜನ್ಮಭೂಮಿ ಬಾಬರಿ ಮಸೀದಿ ವಿಷಯ ಎತ್ತಿಕೊಂಡರು, ಬಾಬರಿ ಮಸೀದಿಗೆ ಹಾನಿ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ಬರೆದುಕೊಟ್ಟರು. ಬಳಿಕ ಮಸೀದಿಯನ್ನು ಒಡೆದು ಹಾಕಿದರು. ದೇಶದಾದ್ಯಂತ ರಕ್ತಪಾತಕ್ಕೆ ಕಾರಣರಾದರು. ಗುಜರಾತಿನಲ್ಲಿ, ಕಂದಮಾಲ್ ನಲ್ಲಿ, ಮುಝಫರ್ ನಗರದಲ್ಲಿ ಹತ್ಯಾಕಾಂಡ ನಡೆಸಿದರು. ದೇಶದ ಯಾವುದೇ ಕೋಮು ಗಲಭೆ ತೆಗೆದುಕೊಳ್ಳಿ ಅಲ್ಲಿ ಅವರಿದ್ದಾರೆ.*

*6. ಬಿಜೆಪಿ ಒಂದು ಮಹಿಳಾ ವಿರೋಧಿ ಪಕ್ಷ. ದಲಿತ ವಿರೋಧಿ ಪಕ್ಷ. ಬಹಿರಂಗವಾಗಿ ಹೇಳುವುದಿಲ್ಲ, ಆದರೆ ಮಹಿಳೆಯರು ಮನೆಯೊಳಗಿದ್ದು ದೇಶಭಕ್ತ ಮಕ್ಕಳನ್ನು ಹೆರುತ್ತಿರಬೇಕು, ಅವರು ಹೊಸಿಲು ದಾಟಿ ಹೊರ ಬರಬಾರದು ಎಂಬುದು ಅದರ ಮೂಲ ನಿಲುವು. ಆರ್ ಎಸ್ ಎಸ್ ನ ಮುಖ್ಯಸ್ಥರು ಇದನ್ನು ಪರೋಕ್ಷವಾಗಿ ಅನೇಕ ಬಾರಿ ಹೇಳಿದ್ದಾರೆ. ಬಿಜೆಪಿ ಪಕ್ಷ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡುವುದು ತುಂಬ ಕಡಿಮೆ. ಈಗ ನೋಡಿ ಕಳೆದ 40 ವರ್ಷದಲ್ಲಿ ಇರದಂತಹ ಪರಿಸ್ಥಿತಿ ಲೋಕಸಭೆಯಲ್ಲಿದ್ದು ಬಿಜೆಪಿ ಸ್ಪಷ್ಟ ಬಹುಮತವನ್ನು ಹೊಂದಿದೆ. ಆದರೆ ಅದು 'ಮಹಿಳಾ ಮೀಸಲಾತಿ ಮಸೂದೆ'ಯನ್ನು ಪಾಸ್ ಮಾಡುವುದಿಲ್ಲ. ಮಹಿಳೆಯರ ರಕ್ಷಣೆ, ಏಳಿಗೆಯ ಬಗೆಗಿನ ಅದರ ಎಲ್ಲ ಮಾತುಗಳೂ ಕೇವಲ ಬೂಟಾಟಿಕೆಯವು. ಸಾಲದೆಂಬಂತೆ ಮಹಿಳೆಯರ ಮೇಲಿನ ದೌರ್ಜನ್ಯದ ಅನೇಕ ಪ್ರಕರಣಗಳಲ್ಲಿ ಬಿಜೆಪಿಯವರ ಹೆಸರು ಕೇಳಿಬಂದಿದೆ. ಆದರೆ ಅವರನ್ನು ಶಿಕ್ಷಿಸಿಲ್ಲ, ಬದಲಿಗೆ ರಕ್ಷಿಸಲು ಯತ್ನಿಸಲಾಗಿದೆ. ಅವರಿಗೆ ಪ್ರೊಮೋಶನ್ ನೀಡಿ ಮಂತ್ರಿ ಮಾಡಿದ ಉದಾಹರಣೆಯೂ ಇದೆ. ಅತ್ಯಾಚಾರಿಗಳನ್ನೂ ಬಿಜೆಪಿ ಹೇಗೆ ಬೆಂಬಲಿಸುತ್ತದೆ ಎಂಬುದಕ್ಕೆ ಇತ್ತೀಚಿನ ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಹತ್ಯೆ ಪ್ರಕರಣಗಳೇ ಸಾಕ್ಷಿ. ದಲಿತರ ವಿಷಯದಲ್ಲಿಯೂ ಬಿಜೆಪಿ ಉದಾರವಾಗಿಲ್ಲ. ಅವರನ್ನು ತುಳಿಯುವ ಅವಕಾಶ ಸಿಕ್ಕಾಗಲೆಲ್ಲ ಬಳಸಿಕೊಂಡಿದೆ. ಇತ್ತೀಚೆಗೆ ನಡೆದ ದಲಿತ ದಂಗೆಯ ಸಮಯದಲ್ಲಿ ಚಳುವಳಿಗಾರರ ಮೇಲೆ ಅದು ನಿರ್ದಯವಾಗಿ ದೌರ್ಜನ್ಯ ನಡೆಸಿತು. ಅನೇಕ ಮಂದಿ ಜೀವ ಕಳೆದುಕೊಂಡು. ಅಸಂಖ್ಯ ಮಂದಿ ಜೈಲು ಸೇರಿದರು. ಉತ್ತರಪ್ರದೇಶದ ದಲಿತ ನಾಯಕ ಚಂದ್ರಶೇಖರ್ ಅಝಾದ್ ದಲಿತಪರ ಹೋರಾಟದ ನಾಯಕತ್ವ ವಹಿಸಿದ್ದಕ್ಕೆ ಅಲ್ಲಿನ ಬಿಜೆಪಿ ಸರಕಾರ ಆತನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಅನೇಕ ತಿಂಗಳಿಂದ ಜೈಲಿನಲ್ಲಿಟ್ಟಿದೆ.*

*7. ಬಿಜೆಪಿ ಸುಳ್ಳಿನ ಮೇಲೆ ನಿಂತ ಒಂದು ರಾಜಕೀಯ ಪಕ್ಷ. ಸುಳ್ಳು ಅದರ ಮನೆದೇವರು. ಹೇಳುವುದು ಸದಾ ಸುಳ್ಳು. ಸೃಷ್ಟಿಸುವುದು ಕೇವಲ ಭ್ರಮೆಗಳನ್ನು. ಇತಿಹಾಸದಿಂದ ಹಿಡಿದು ವಿಜ್ಞಾನದವರೆಗೂ ಯಾವ ಲಜ್ಜೆಯೂ ಇಲ್ಲದೆ ಅವರು ಸುಳ್ಳು ಹೇಳ ಬಲ್ಲರು. ಅವರ ಬೆಂಬಲಿಗರೂ ಅಷ್ಟೇ.. ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ನಿಸ್ಸೀಮರು. ಲವ್ ಜಿಹಾದ್.. ಮತಾಂತರ.. ಗೋಹತ್ಯೆ…. ಒಂದೇ ಎರಡೇ.. ಈಗಂತೂ ಸುಳ್ಳು ಸುದ್ದಿಯ ಫ್ಯಾಕ್ಟರಿಗಳನ್ನೇ ವೆಬ್ ಸೈಟುಗಳ ಮೂಲಕ ಸ್ಥಾಪಿಸಿಕೊಂಡಿದ್ದಾರೆ. ಅವರು ತಮ್ಮ ಗುರಿ ಸಾಧನೆಗಾಗಿ ರಾಷ್ಟ್ರಪಿತನಿಂದ ಹಿಡಿದು ದೇಶವನ್ನು ಆಳಿದ ಅನೇಕ ಪ್ರಧಾನಿಗಳ ತೇಜೊವಧೆ ಮಾಡಲೂ ಹೇಸದವರು.*

*8. “ಸಬ್ ಕಾ ಸಾತ್…” ಎನ್ನುವ ಈ ಪಕ್ಷ ಸ್ಪಷ್ಟವಾಗಿ ಒಂದು ಧರ್ಮಕ್ಕೆ ಮೀಸಲಾದ ಪಕ್ಷ. ಸ್ಪಷ್ಟವಾಗಿ ಮುಸ್ಲಿಂ ವಿರೋಧಿಯಾದ ಪಕ್ಷ. ಸಂವಿಧಾನದ ಆಶಯಕ್ಕೆ ಸಂಪೂರ್ಣ ಮತ್ತು ಬಹಿರಂಗವಾಗಿಯೇ ನಡೆದುಕೊಳ್ಳುವ ಈ ಪಕ್ಷಕ್ಕೆ ಒಂದು ರಾಜಕೀಯ ಪಕ್ಷ ಎಂದು ಅದು ಹೇಗೆ ಚುನಾವಣಾ ಆಯೋಗ ಮಾನ್ಯತೆ ನೀಡಿದೆ ಎನ್ನುವುದೇ ಅಚ್ಚರಿಯ ಸಂಗತಿ.*

*9. ಬಹಿರಂಗವಾಗಿ ಹೇಳುವುದಿಲ್ಲ, ಆದರೆ ಬಿಜೆಪಿಗೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ನಂಬಿಕೆಯಿಲ್ಲ. ಜಾತಿ ಶ್ರೇಣೀಕರಣಕ್ಕೆ ಆದ್ಯತೆ ನೀಡುವ ಮನುಸಂವಿಧಾನದಲ್ಲಿಯೇ ಅದಕ್ಕೆ ಹೆಚ್ಚಿನ ನಂಬಿಕೆ. ಸಂವಿಧಾನ ರಚನೆಯ ಕಾಲದಲ್ಲಿಯೂ ಆರ್ ಎಸ್ ಎಸ್ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಈಗಲೂ ಅವರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಲೇ ಇದ್ದಾರೆ (ಅಕುಹೆಗಡೆ ಸುಮ್ಮನೆ ಹೇಳಿದ್ದಲ್ಲ ನೆನಪಿರಲಿ). ಇದರ ಹಿಂದಿನ ಉದ್ದೇಶ ಎಲ್ಲರಿಗೂ ಗೊತ್ತಿರುವಂಥದ್ದೇ. ಅವಕಾಶ ಸಿಕ್ಕರೆ ಬಿಜೆಪಿ ಸಂವಿಧಾನ ಬದಲಿಸಿಯೇ ಬದಲಿಸುತ್ತದೆ.*

*10. ಬಿಜೆಪಿಗೆ ಸೆಕ್ಯುಲರ್ ಸಿದ್ಧಾಂತದಲ್ಲಿ ನಂಬಿಕೆಯಿಲ್ಲ. ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವುದು ಅದರ ಅಜೆಂಡಾದಲ್ಲಿಲ್ಲ. ಹಿಂದೂ ರಾಷ್ಟ್ರ ಸ್ಥಾಪನೆಯೇ ಅದರ ಅಂತಿಮ ಗುರಿ.*

*ಈ ಎಲ್ಲ ಕಾರಣಗಳಿಂದ ನಾನು ಬಿಜೆಪಿಯನ್ನು ವಿರೋಧಿಸುತ್ತೇನೆ.*

✍🏻  *ಶ್ರೀನಿವಾಸ ಕಾರ್ಕಳ*