ಬಿಜೆಪಿಯನ್ನು ಮತ್ತು ಮೋದಿಯನ್ನು ವಿರೋಧಿಸುವುದನ್ನು ಬಿಟ್ಟು ಬಿಡಿ. ನಿಮ್ಮ ವಿರೋಧವೇ ಅವರ ಆಯುಧ......
🌾
ಸುನ್ನೀಟುಡೇ
ಭಾಗ -3
ಮುಸ್ಲಿಮ್ ರಾಜಕೀಯ ನಿಲುವುಗಳ ಕುರಿತು ಜಾಗೃತಿ ಮೂಡಿಸಲು ಕಳೆದ ಎರಡು ಭಾಗದಲ್ಲಿ ನಾವು ಹಲವಾರು ವಿಚಾರಗಳನ್ನು ಜನರ ಮುಂದಿಟ್ಟೆವು. ಅದಕ್ಕೆ ಪೂರಕವಾಗಿ ಹಲವರು ನಮ್ಮಲ್ಲಿ ಅಭಿಪ್ರಾಯ ಹಂಚಿಕೊಂಡರು. ನಮ್ಮ ವಿಚಾರವನ್ನು ಸಮರ್ಥಿಸುವ ಮತ್ತು ಅದಕ್ಕೆ ಬಲನೀಡುವ ಹಲವು ವೀಡಿಯೋಗಳು - ವಾಯ್ಸ್ ಮೆಸೇಜ್ ಮತ್ತು ಹೇಳಿಕೆಗಳು ನಮಗೆ ಸಿಕ್ಕಿತು. ಅದರಿಂದಲೇ ನಾವು ಈ ಲೇಖನವನ್ನು ಬರೆಯುತ್ತಿದ್ದೇವೆ....
ಲೋಕಪ್ರಸಿದ್ದ ವಿದ್ವಾಂಸ ಎಪಿ ಅಬುಬಕ್ಕರ್ ಮುಸ್ಲಿಯಾರ್ ರವರ ಮಾತುಗಳಿರುವ ಒಂದು ವೀಡಿಯೋ ನನಗೆ ಹೆಚ್ಚು ಇಷ್ಟವಾಯಿತು ಅವರು ಹೇಳುತ್ತಾರೆ " ಯಾವುದೋ ಒಬ್ಬ ವ್ಯಕ್ತಿ ಅಸೆಂಬ್ಲಿ ಪ್ರವೇಶಿಸುವುದಕ್ಕೆ ನಾವೇಕೆ ಇಮಾನ್ ಮಾರಬೇಕು, ನಾವೇಕೆ ಪರಸ್ಪರ ದ್ವೇಷಕಾರಬೇಕು ? ನಮ್ಮ ಸ್ಥಾಪನೆಗಳಿಗೆ , ಸಮುದಾಯಕ್ಕೆ , ಸಮಾಜಕ್ಕೆ ಹಾಗೂ ರಾಜ್ಯಕ್ಕೆ ಪ್ರಯೋಜನವಾಗುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಬಹಳವಾಗಿ ಚಿಂತಿಸಿ ಮತದಾನ ಮಾಡಿ. 100% ಪೂರ್ತಿಯಾಗಿ ಯಾರೂ ಕೂಡ ನಮ್ಮ ಸಮಾಜದ ಹಿತವನ್ನು ಬಯಸಿದವರಲ್ಲ. ಅಲ್ಪಸ್ವಲ್ಪವಾದರೂ ನಮಗೆ ಹಿತವಾಗುವ ಪಕ್ಷವನ್ನು ನಾವು ಬೆಂಬಲಿಸಬೇಕು. ನಮ್ಮಲ್ಲಿ ಅಭಿಪ್ರಾಯ ವ್ಯತ್ಯಾಸವಿರ ಬಹುದು. ಮಸೀದಿಯ ಅಧ್ಯಕ್ಷ ಒಂದು ಪಕ್ಷವಾದರೆ ಕಾರ್ಯದರ್ಶಿಯು ಇನ್ನೊಂದು ಪಕ್ಷದವನಾಗಿರ ಬಹುದು. ನಾವು ಅದಕ್ಕಾಗಿ ಪರಸ್ಪರ ಕಾದಾಟ ಮಾಡಿ ವೈಷಮ್ಯದಿಂದ ಒಟ್ಟು ಸಮುದಾಯವನ್ನು ನಾಶಕ್ಕೆ ಕೊಡುವುದಕ್ಕಿಂತ ಪ್ರತೀಯೊಬ್ಬರ ಆಯ್ಕೆಯನ್ನು ನಾವು ಸ್ವಾಗತಿಸಿಕೊಂಡು ಚುನಾವಣೆಯ ನಂತರವೂ ಆ ಮಸೀದಿ ಆಡಳಿತವನ್ನು ಸಮುದಾಯಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಮುನ್ನಡೆಸಬೇಕು. ರಾಜಕೀಯಕ್ಕಾಗಿ ನಮ್ಮ ವಿಶ್ವಾಸ ಮತ್ತು ಸಮುದಾಯವನ್ನು ಛಿದ್ರಮಾಡದಿರಿ. ಯಾರದೋ ಲಾಭಕ್ಕೆ ಬಲಿಯಾಗದಿರಿ. ಪರಸ್ಪರ ದ್ವೇಷ ದೂಷಣೆ ಮತ್ತು ಹಿಯಾಲಿಸುವ ಮೂಲಕ ಮುಸ್ಲಿಮರ ಹೃದಯ ಒಡೆಯುವ ಕಾರ್ಯ ಮಾಡದಿರಿ. ರಾಜಕೀಯ ಅಭಿಪ್ರಾಯ ವ್ಯತ್ಯಾಸ ಮತ್ತು ಪಕ್ಷಗಳ ಆಯ್ಕೆಗಳಲ್ಲಿ ಸ್ವತಂತ್ರವಿದೆ. ಆದರೆ ಅದು ಸಮುದಾಯದ ಐಕ್ಯತೆ ಮತ್ತು ಸಹೋದರತ್ವಕ್ಕೆ ಹಾನಿ ಉಂಟು ಮಾಡಬಾರದು.
ಎರಡನೆಯದ್ದಾಗಿ ನಮಗೆ ಬಂದ ವಾಯ್ಸ್ ಮೆಸೇಜ್ ಹೀಗೆ ಹೇಳುತ್ತದೆ. ' ನೀವು ಬರೆಯುತ್ತಿರುವುದು ಚಿಂತಿಸುವಂತದ್ದೇ. ಆದರೆ ಅದು ಈ ವಿಷಮಯ ಸನ್ನಿವೇಶದಲ್ಲಿ ಜನರ ಮೆದುಳು ಪ್ರವೇಶಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಮುಸ್ಲಿಮರಿಗೆ ಆಯ್ಕೆಗಳಿಲ್ಲ. ಸಮುದಾಯವನ್ನು ಒಂದು ಕಡೆಯಿಂದ ಬಿಜೆಪಿಯವರು - ಕಾಂಗ್ರೇಸ್ಸ್ ನವರು - ಎಸ್ಡೀಪಿ ಐನವರು - ಸಮುದಾಯ ಪ್ರೇಮಿ ಎಂದು ಹೇಳುವವರು ಹರಿದು ತಿನ್ನಲು ಹವಣಿಸುತ್ತಿದ್ದಾರೆ. ಅವರಿಗೆ ಸಮುದಾಯದ ಪ್ರಯೋಜನ ಮತ್ತು ಭವಿಷ್ಯಕ್ಕಿಂತ ಹೆಚ್ಚಾಗಿ ತಮ್ಮ ಅಸ್ತಿತ್ವ ಮತ್ತು ಪ್ರತಿಷ್ಠೆಯು ಮಿಗಿಲಾಗಿದೆ.
ಇನ್ನೊಂದು ಬರಹದಲ್ಲಿ ನಮಗೆ ಹಿತವಚನವಿತ್ತು. "ನೀನು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೀ ? ಮನೆಯಲ್ಲಿ ಕೂತು ಬರೆದು ವಾಟ್ಸಾಪ್ ನಲ್ಲಿ ಹಾಕಿದ ತಕ್ಷಣ ಹೀರೋ ಆಗುತ್ತೀಯಾ ? ನಿನಗಿಂತ ದೊಡ್ಡವರು ನಮ್ಮ ನಾಯಕರು ಇರುವಾಗ ನಿನ್ನ ಲೇಖನದಿಂದ ಏನೂ ಬದಲಾಗುವುದಿಲ್ಲ..! ನಮ್ಮ ನಾಯಕರಿಗೆ ಗೊತ್ತುಂಟು ಸಮುದಾಯಕ್ಕೆ ಏನು ಕೊಡಬೇಕು ಮತ್ತು ಮಾಡಬೇಕು ಎಂದು....
ಕೊನೆಯದಾಗಿ ನನಗೆ ಇಷ್ಟವಾಗಿದ್ದು ಎನ್ ಡೀ ಟೀವಿಯ ರವೀಶ್ ಕುಮಾರ್ ರವರ ಅಭಿಪ್ರಾಯವಾಗಿತ್ತು. "ಮುಸ್ಲಿಮರೇ ಸುಮ್ಮನಿರಿ. ನೀವು ಆರ್ ಎಸ್ಸ್ ಎಸ್ಸ್ ಮತ್ತು ಬಿಜೆಪಿಯನ್ನು ವಿರೋಧಿಸಲು ಮತ್ತು ನಿಂಧಿಸಲು ಹೋಗಬೇಡಿ. ಅವರು ಈಗ ಬಲಿಷ್ಠರಾಗಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ಸ್ ಎಸ್ಸ್ ನ್ನು ಟೀಕಿಸುವುದನ್ನು ನಿಲ್ಲಿಸಿ. ಮುಸ್ಲಿಮರ ವಿರೋಧವೇ ಬಿಜೆಪಿಯ ಸಾಮರ್ಥ್ಯ. ಕಾಶ್ಮೀರ ಹೊರತು ಪಡಿಸಿ ನೀವು ಎಲ್ಲಿಯೂ ಮುಖ್ಯಮಂತ್ರಿಯಾಗಬಾರದು ಎಂಬುವುದೇ ಅವರ ತೀರ್ಮಾನ. ದೇಶದ ಕೇವಲ ಮೂರು ಭಾಗದಷ್ಟು ಜನರು ವ್ಯವಸ್ಥಿತವಾದ ತಂತ್ರದ ಮೂಲಕ ಅಧಿಕಾರ ಪಡೆದಿದ್ದಾರೆ. ಅವರು 80% ಹಿಂದೂಗಳಲ್ಲಿ 18% ಮುಸ್ಲಿಮರ ಭಯವನ್ನು ಸೃಷ್ಠಿಸಿ ಒಗ್ಗಟ್ಟಾಗಿದ್ದಾರೆ. ನಿಮ್ಮ ವಿರೋಧ ಹೆಚ್ಚಿದಾಗಲೆಲ್ಲಾ ಅವರು ಬಲಶಾಲಿಗಳಾಗುತ್ತಿದ್ದಾರೆ. ಅದಕ್ಕಾಗಿ ಅವರು ನಿಮ್ಮನ್ನು ಕೆರಳಿಸುತ್ತಾರೆ.
ಎಂಐಎಂ ನಂತಹ ಪಕ್ಷಗಳು ಅವರಿಗೆ ಲಾಭದಾಯಕವಾಗಿದೆ. ಅವರು 30 ಅಥವಾ 40 ವರ್ಷಗಳ ನಂತರ ಬಲಿಷ್ಠರಾಗಿ ಅದನ್ನೂ ನಿಷೇಧಿಸುತ್ತಾರೆ. ನೀವು ಇಷ್ಟಪಡುವ ಯಾವುದೇ ಪಕ್ಷಕ್ಕೂ ನೀವು ಮತ ನೀಡಿ. ಆದರೆ ಎಂದಿಗೂ ಬಿಜೆಪಿಗೆ - ಆರ್ ಎಸ್ಸ್ ಎಸ್ಸ್ ಗೆ ಮತ್ತು ಮೋದಿಗೆ ಟೀಕಿಸಬೇಡಿ. ಅವರನ್ನು ವಿರೋಧಿಸಬೇಡಿ. ಆರ್ ಎಸ್ಸ್ ಎಸ್ಸ್ ಸಂಘಟನೆ ಇದೆ ಎಂಬುವುದನ್ನು ಮರೆತು ಬಿಡಿ. ಬಿಜೆಪಿ ಎಂಬ ಪಕ್ಷ ಇದೆ ಎಂಬುವುದನ್ನೂ ಮರೆತು ಬಿಡಿ. ಮೋದಿಯೆಂಬ ನಾಯಕ ಇರುವುದನ್ನೂ ಮರೆತು ಬಿಡಿ. ನಿಮ್ಮನ್ನು ಕಾಂಗ್ರೇಸ್ಸ್ - ಬಿಎಸ್ಪಿ - ಎಸ್ಪೀ ಎಲ್ಲರೂ ದೂರ ಮಾಡುವ ಕಾಲ ಸಮೀಪದಲ್ಲಿದೆ. ಕಾರಣ ಬಿಜೆಪಿ ನಿಮ್ಮನ್ನು ರಾಜಕೀಯವಾಗಿ ಅಸ್ಪ್ರಷ್ಯ ಮಾಡುವ ಎಲ್ಲಾ ತಂತ್ರಗಳನ್ನೂ ಪ್ರಯೋಗಿಸುತ್ತಿದೆ.
ನೀವು ಸುರಕ್ಷಿತರಾಗುವುದಕ್ಕೆ ಯಾವುದೇ ಮೀಸಲಾತಿ ಅಥವಾ ಪಕ್ಷಗಳ ಅಗತ್ಯವಿಲ್ಲ. ನಿಮ್ಮ ಗುರುತುಗಳನ್ನು ದೇಶದಲ್ಲಿ ಸ್ಥಿರಪಡಿಸಲು ನೀವು ಆಧುನಿಕ ತಂತ್ರಜ್ಞಾನ ಮತ್ತು ಶಿಕ್ಷಣದತ್ತ ಹೆಚ್ಚು ಗಮನ ಹರಿಸಿರಿ. ಸರಕಾರಿ ಇಲಾಖೆಗಳಲ್ಲಿ ಸ್ಥಾನ ಪಡೆಯುವ ಅಂಕಗಳನ್ನು ಪಡೆಯಲು ಪ್ರಯತ್ನಿಸಿ. ಮೀಸಲಾತಿ ಇಲ್ಲದೇ ನೀವು ನಿಮ್ಮ ಝಾಕಾತ್ ಮತ್ತು ಸದಕಾವನ್ನು ಶೈಕ್ಷಣಿಕ ಪ್ರಗತಿಗಾಗಿ ವಿನಿಯೋಗಿಸಲು ಪ್ರಯತ್ನಿಸಿ. ಇದು ಸ್ಪರ್ಧಾತ್ಮಕ ಯುಗ ಇಲ್ಲಿ ಗೆಲ್ಲುವುದು ಅಧ್ಯಯನಶೀಲ ಮತ್ತು ಜಗತ್ತಿಗೆ ಕೊಡುಗೆ ನೀಡುವ ಸಮುದಾಯ ಮಾತ್ರ. ನೀವು ಮೋದಿಯನ್ನು - ಆರ್ ಎಸ್ಸ್ ಎಸ್ಸ್ ನ್ನು ವಿರೋಧಿಸುವುದರಲ್ಲೇ ಸಮಯ ವ್ಯರ್ಥ ಮಾಡಿ ಅವರನ್ನು ಬೆಳೆಸುತ್ತಿದ್ದೀರಿ. ನೀವು ನಿಮ್ಮ ಸಮಾಜವನ್ನು ಬೆಳೆಸಿ - ನಿಮ್ಮ ಸಮುದಾಯವನ್ನು ಎಲ್ಲಾ ಕ್ಷೇತ್ರದಲ್ಲೂ ಪ್ರಬುದ್ದರನ್ನಾಗಿಸಿ. ಸ್ವಾತಂತ್ರ ಪೂರ್ವದಲ್ಲಿ ನೀವು 35% ಜನಸಂಖ್ಯೆ ಹೊಂದಿದ್ದೀರಿ. ಆಗ ಯಾವುದೇ ರಿಸರ್ವೇಶನ್ ಇಲ್ಲದೇ ನಿಮ್ಮ ಸಮುದಾಯ 35% ಸರಕಾರಿ ಕೆಲಸದಲ್ಲಿ ಪಾಲು ಪಡೆದಿತ್ತು. ಈಗ ನಿಮ್ಮ ಸ್ಥಿತಿ ಹೀಗೆ ಆಗಲು ನೀವೇ ಕಾರಣರು. ನೀವು ಮೋದಿಯನ್ನು - ಆರ ಎಸ್ಸ್ ಎಸ್ಸ್ ನ್ನು ಬದಲಾಯಿಸಲು ಆಗುವುದಿಲ್ಲ. ನೀವು ನಿಮ್ಮನ್ನು ಬದಲಾಯಿಸಿ ಆಗ ದೇಶಕ್ಕೆ ನಿಮ್ಮ ಅನಿವಾರ್ಯತೆಯ ಅರಿವಾಗುತ್ತದೆ.
ಈ ನಾಲ್ಕು ಅಭಿಪ್ರಾಯಗಳು ನಮ್ಮ ಮಟ್ಟಿಗೆ ಅಮೂಲ್ಯವಾಗಿದೆ. ಒಂದನೇ ಅಭಿಪ್ರಾಯದ ಜನರು 10% ಇದ್ದಾರೆ, ಎರಡನೇ ಅಭಿಪ್ರಾಯದ ಜನರು 30% ಇದ್ದಾರೆ, ಮೂರನೇ ಅಭಿಪ್ರಾಯದ ಜನರು 60% ಇದ್ದಾರೆ, ನಾಲ್ಕನೇ ಅಭಿಪ್ರಾಯದ ಜನರನ್ನು ನಾವು ಸೃಷ್ಟಿಸಬೇಕಾಗಿದೆ. ಅದಕ್ಕಾಗಿರುವ ವಿಚಾರವನ್ನು ಹರಡುವುದು ನಮ್ಮ ಬಾಧ್ಯತೆಯಾಗಿದೆ. ಸಮುದಾಯಕ್ಕೆ ನಾವು ಏನು ಮಾಡಿದ್ದೇವೆ ಎಂಬುವುದರ ಜೊತೆಗೆ ಅಲ್ಲಾಹನು ನಾಳೆ ನಮ್ಮಲ್ಲಿ "ನಿನಗೆ ನಾನು ನೀಡಿದ ಜ್ಞಾನವನ್ನು ನೀನು ಯಾವುದಕ್ಕೆ ಉಪಯೋಗಿಸಿದೆ ಎಂದು ಕೇಳುವಾಗ ನಮಗೆ ಉತ್ತರಿಸುವ ಅವಕಾಶಕ್ಕಾಗಿ ಈ ವಿಚಾರ ಜಾರಿಯಲ್ಲಿರಿಸುತ್ತೇವೆ".
🌾
ಸುನ್ನೀಟುಡೇ
(ಮುಂದುವರಿಯುವುದು)