.....
ಅಂದು ನಿಮ್ಮ ಬಂದೂಕಿನಿಂದ ಸಿಡಿದ ಮೂರನೆಯ ಗುಂಡು ನನ್ನ ಹೃದಯವನ್ನು ಛಿದ್ರಗೊಳಿಸಿ ನನ್ನನ್ನು ನಿಸ್ತೇಜಗೊಳಿಸದೇ ಇದ್ದಿದ್ದರೆ, ಆಗ ಮೂಡಿದ ನನ್ನ ಒಡಲಾಳದ ಭಾವನೆಗಳು ಧ್ವನಿತರಂಗಗಳಾಗಿ ಗಂಟಲಿನಿಂದ ಹೊರಬಂದು ನಿಮ್ಮನ್ನು ಅಲ್ಲಿಯೇ ಕ್ಷಮಿಸುತ್ತಿದ್ದೆ. ದುರಾದೃಷ್ಟವಶಾತ್ ಅವು ಹೊರಬರದೆ ಅಡಗಿ ಹೋದವು. ಅದು ನಿಮಗೆ ಮತ್ತು ಅಲ್ಲಿದ್ದವರಿಗೆ ತಲುಪಲೇ ಇಲ್ಲ. ಅದು ನಾನು ಪಶ್ಚಾತಾಪದಿಂದ ಈಗಲೂ ನರಳುವಂತೆ ಮಾಡುತ್ತಿದೆ.
ಪ್ರೀತಿಯ ಘೋಡ್ಸೆ
ನನ್ನಿಂದಾಗಿ ನೀವು ಗಲ್ಲು ಶಿಕ್ಷೆಗೆ ಗುರಿಯಾಗಿ ಪ್ರಾಣ ಕಳೆದುಕೊಂಡಿದ್ದಕ್ಕೆ 69 ವರ್ಷಗಳ ನಂತರವೂ ನನ್ನ ಹೃದಯ ಮಿಡಿಯುತ್ತಿದೆ. ನಿಮ್ಮನ್ನು ಉಳಿಸಲಾಗದಿದ್ದಕ್ಕೆ ಪರಿತಪ್ಪಿಸುತ್ತಿದ್ದೇನೆ.
ಗೆಳೆಯ ನಾಥುರಾಂ,
ಪ್ರಕೃತಿಯ ಪ್ರತಿ ಜೀವವೂ ಅಮೂಲ್ಯ. ಅವುಗಳ ಸಾವು ಸಹಜ ಕ್ರಿಯೆಯಾಗಬೇಕೆ ಹೊರತು ಕೊಲೆ ಹತ್ಯೆ ಅಥವಾ ಶಿಕ್ಷೆಯಾಗಬಾರದು.
ಜೀಸಸ್ ಶಿಲುಬೆಗೇರುವಾಗ ಅವರನ್ನು ಶಿಕ್ಷಿಸುತ್ತಿರುವವರನ್ನು ಕುರಿತು " ಓ ದೇವರೆ , ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲ. ಆದ್ದರಿಂದ ಇವರನ್ನು ದಯವಿಟ್ಟು ಕ್ಷಮಿಸು " ಎಂದರು.
ಘೋಡ್ಸೆಜಿ, ನಾನು ನಿಮಗೂ ಇದನ್ನೇ ಪ್ರಾರ್ಥಿಸುತ್ತೇನೆ.
ಆ ದಿನಗಳು ಭಾರತದ ಇತಿಹಾಸದಲ್ಲಿ ಅತ್ಯಂತ ಘೋರ ಮತ್ತು ಯಾತನಾಮಯ ದಿನಗಳು. ಕೆಲವು ಶತಮಾನಗಳಷ್ಟು ದೀರ್ಘಕಾಲ ಒಡಹುಟ್ಟಿದ ಅಣ್ಣ ತಮ್ಮಂದಿರಂತಿದ್ದ ಹಿಂದೂ ಮುಸ್ಲೀಮರು ಬ್ರಿಟೀಷರ ಒಡೆದು ಆಳುವ ನೀತಿಗೆ ಬಲಿಯಾದರು. ಯಾವ ಸ್ವಾತಂತ್ರ್ಯಕ್ಕಾಗಿ ಇಡೀ ಭಾರತ ತನ್ನ ಶಕ್ತಿಯನ್ನು ಉಪಯೋಗಿಸಿತೊ ಅದೇ ಶಕ್ತಿ ಭಾರತವನ್ನು ಒಡೆಯಿತು. ಹೋಗಲಿ ಅದಾದರೂ ಸುಗಮವಾಗಿ ನಡೆಯಲಿಲ್ಲ. ಮಾನವ ಇತಿಹಾಸದ ಘೋರ ದುರಂತಗಳಲ್ಲಿ ಒಂದಾಗಿ ದಾಖಲಾಯಿತು. ರಕ್ತದ ಖೋಡಿಯೇ ಹರಿಯಿತು ಅದೂ ನನ್ನ ಕಣ್ಣ ಮುಂದೆ ನನ್ನ ಅರಿವಿನ ಅಂತರದಲ್ಲಿ.
ನಾಥುರಾಂಜಿ,
ನಿಮಗೆ ಮತ್ತು ನಿಮ್ಮಂತ ಎರಡೂ ಕಡೆಯ ಜನರಿಗೆ ಹತ್ಯೆಯಾದದ್ದು ಹಿಂದೂಗಳು ಮತ್ತು ಮುಸ್ಲೀಮರು.
ಆದರೆ ಸಂಪೂರ್ಣ ಬದುಕನ್ನು ಹೋರಾಟವನ್ನು ಅತ್ಯಂತ ಕಠೋರ ಸತ್ಯ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ನನ್ನ ದೇಹ ಮತ್ತು ಮನಸ್ಸಿಗೆ ಇದು ಮಾನವ ಜನಾಂಗದ ಮೇಲೆ ನಡೆದ ಅಮಾನುಷ ಮತ್ತು ಅನಾಗರಿಕ ವರ್ತನೆಯಾಗಿ ಕಂಡಿತು.
ಒಂದು ಮಗು ಮತ್ತು ಆಕೆಯ ತಾಯಿಯನ್ನು ಬೇರೆ ಧರ್ಮ ಎಂಬ ಒಂದೇ ಕಾರಣಕ್ಕಾಗಿ ಚಾಕುವಿನಿಂದ ಹಲವಾರು ಬಾರಿ ತಿವಿದು ರಕ್ತ ಸುರಿಯುತ್ತಿದ್ದರೂ ಗೋಳಾಡುತ್ತಿದ್ದರೂ ಮತ್ತೆ ಒಂದು ದೊಡ್ಡ ಕಲ್ಲನ್ನು ಆಕೆಯ ಮೇಲೆ ಹಾಕಿ ಮಗುವಿನ ತಲೆಯನ್ನು ಕತ್ತರಿಸಿ ಕೈಯಲ್ಲಿ ಹಿಡಿದು ಸಂಭ್ರಮಿಸಿವ ಜನರನ್ನು ಅದು ಹೇಗೆ ಧರ್ಮ ರಕ್ಷಕರು ಎಂದು ಕರೆಯುವುದು.
ಸನಾತನ ಧರ್ಮದಲ್ಲಿ ಅಚಲ ನಂಬಿಕೆಯಿದ್ದ ನಾನು ಅದು ಹೇಗೆ ಹಿಂದೂಗಳನ್ನು ದ್ವೇಷಿಸಲು ಸಾಧ್ಯ. ನಾನು ಮುಸ್ಲೀಮರ ಪರವೂ ಇರಲಿಲ್ಲ. ಕೇವಲ ಸತ್ಯ ಮತ್ತು ಅಹಿಂಸೆಯ ಪರವಾಗಿ ಎಲ್ಲಾ ಹತ್ಯೆಗಳನ್ನು ವಿರೋಧಿಸಿದೆ. ಹಿಂಸೆಗೆ ಹಿಂಸೆ ಪರಿಹಾರವಲ್ಲ ಎಂಬ ಅಚಲ ನಂಬಿಕೆ ನನಗೆ ಈಗಲೂ ಇದೆ.
ಭಾರತದ ಏಕತೆ ಮತ್ತು ಐಕ್ಯತೆ ಉಳಿದಿರುವುದೇ ಇಲ್ಲಿನ ಸತ್ಯ ಅಹಿಂಸೆ ಮತ್ತು ಶಾಂತಿಪ್ರಿಯ ಮನಸ್ಥಿತಿಯ ಜನರಿಂದ.
ಸನ್ಮಾನ್ಯ ನಾಥುರಾಂ ಘೋಡ್ಸೆಯವರೆ,
ನೀವು ನನ್ನನ್ನು ಕೊಂದದ್ದು ಈ ದೇಶದ ರಕ್ಷಣೆಗಾಗಿಯಲ್ಲವೇ. ಹಿಂಸೆಯಿಂದ ದೇಶದ ರಕ್ಷಣೆ ಸಾಧ್ಯವಾಗಿದೆಯೇ ?
ನನ್ನ ಸಾವು ನಿಮ್ಮ ಗುರಿ ಈಡೇರಿಸಿದೆಯೇ ?
ಹಿಂದೂಗಳ ಮಾರಣಹೋಮ ಮಾಡಿದ ಪಾಕಿಸ್ತಾನ ನೆಮ್ಮದಿಯಿಂದ ಇದೆಯೇ ?
ಈ ಎಲ್ಲಾ ಪ್ರಶ್ನೆಗಳಿಗೆ ನನ್ನ ಉತ್ತರ " ಓ ಭಾರತ ಮಾತೆಯೇ ಇವರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ಇವರನ್ನು ಕ್ಷಮಿಸು "
ಅಂದು ಒಬ್ನ ದೇಶಭಕ್ತ ಘೋಡ್ಸೆ ನನ್ನನ್ನು ಕೊಂದರೆ ಇಂದು ಹಲವಾರು ಘೋಡ್ಸೆಗಳಿದ್ದಾರೆ.
ಹಾಗಾದರೆ ಭಾರತ ಈಗ ಅತ್ಯಂತ ಸುರಕ್ಷಿತ ಎನ್ನೋಣವೇ ? ಅಹಿಂಸೆ ಮತ್ತು ಸತ್ಯದ ವಿರುದ್ಧ ಹಿಂಸೆ ಮತ್ತು ಅಸತ್ಯ ಜಯಗಳಿಸಿದೆ ಎಂದು ಭಾವಿಸೋಣವೇ ?
ಅಂದು ಸಾವಿರಾರು ಸಂಖ್ಯೆಯಲ್ಲಿದ್ದ ನನ್ನಂತವರು ಇಂದು ಅವಸಾನದ ಅಂಚಿಗೆ ಬಂದು ನಿಂತಿದ್ದಾರಲ್ಲವೇ ?
ಅದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತಾ...
ನಾಥುರಾಂ ಜಿ,
ನಿಮ್ಮ ಸಾವಿಗೆ ನಾನು ಕಾರಣವಾಗಿದ್ದಕ್ಕಾಗಿ ಮತ್ತೊಮ್ಮೆ ನಿಮ್ಮಲ್ಲಿ ಕ್ಷಮೆಕೋರುತ್ತಾ...
ಭಾರತೀಯರಲ್ಲಿ ನಾಗರಿಕ ಪ್ರಜ್ಞೆ ಮೂಡಲಿ ಎಂದು ಹಾರೈಸುವ..
ನಿಮ್ಮ ಪ್ರೀತಿಯ...
M K . ಗಾಂಧಿ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.