ಬುಧವಾರ, ಮೇ 31, 2017

ಗಲ್ಫ್ -ಹಣ

ಕರಾವಳಿ ಮುಸ್ಲಿಮರ ಆರ್ಥಿಕತೆ ಸುಧಾರೆಣೆಗೆ ಎಡೆ ಮಾಡಿಕೊಟ್ಟ ಊರೇ ಗಲ್ಫ್ ರಾಷ್ಟ್ರಗಳು

ಈ ಹೆಸರೇ ಯುವ ಜನತೆಗೆ ಮುದ ನೀಡುವ ಕನಸಿನ ಕಲ್ಪನಾ ಲೋಕ

ಕೈ ತುಂಬಾ ಸಂಬಳ, ರಿಯಾಲ್ ದಿರ‍್ಹಂ-ದಿನಾರ್'ಗಳನ್ನು ರೂಪಾಯಿಗೆ ಪರಿವರ್ತಿಸಿ ಎಣಿಸುವುದು ಸ್ಪ್ರೇ ಹಾಕಿದ ಟಾಕುಟೀಕಿನ ಕೋಟು-ಸೂಟು, ಸುತ್ತಾಡಲು ಕಾರು, ವಾಸಕ್ಕೆ ಬಂಗಲೆ ಹೀಗೆ ಕನಸಿನ ಗೋಪುರ ಕಟ್ಟಿಕೊಂಡು ಧ್ಯಾನಿಸುವ ಯುವ ಪೀಳಿಗೆಗೆ ಸುಲಭದಲ್ಲಿ ಕಾಣುವ ಹಾದಿಯೇ ಗಲ್ಫ್ ಯಾತ್ರೆ...!!!

ಹೌದು ವಿದೇಶ ಯಾತ್ರೆ ಎಂಬುದು ಯುವ ಜನತೆಯ ಮನದಾಳದ ಆಸೆ ನಿರೀಕ್ಷೆ ಎಲ್ಲವೂ ಆಗಿದೆ. #ಪ್ರವಾದಿ(ಸ.ಅ)ರವರು ಬದುಕಿಬಾಳಿದ #ಸೌದಿ ಅರೇಬಿಯಾ ಇರಲಿ #ಸ್ವಹಾಬಿಗಳ ದಅವಾ ಯಾತ್ರೆಯಿಂದ ಪುನೀತಗೊಂಡ #ತೈಲ ಸಂಪನ್ನ ರಾಷ್ಟ್ರವಾದ #ಗಲ್ಫ್‌ನ ಯಾವುದೇ #ಕಂಟ್ರಿಯಾಗಲೀ ಅದೊಂದು ಅನುಗ್ರಹಿತ ಪ್ರದೇಶವೇ. ಇಂದು ಜಗತ್ತಿಗೆ ತೈಲ ನೀಡುವ ಈ ಕೊಲ್ಲಿ ರಾಷ್ಟ್ರವನ್ನೇ ಅಂಥ ಅಮೇರಿಕಾ, ಜಪಾನ್, ಬ್ರಿಟನ್‌ಗಳೂ ಆಶ್ರಯಿಸಬೇಕು. ಏಕೆಂದರೆ ವಾಹನ ಓಡಬೇಕಿದ್ದರೆ ಅರಬನ ಪೆಟ್ರೋಲ್ ಬೇಕೆಬೇಕು

ಅಂಥ ರಾಷ್ಟ್ರದಲ್ಲಿ ದುಡಿದು ಕೈ ತುಂಬಾ ಸಂಬಳ ಪಡೆದು ಶ್ರೀಮಂತನಾಗಬೇಕೆಂದು ಕನಸು ಕಾಣದವರು ಯಾರು? ಅದೇ ಕನಸು ಹೊತ್ತ ಪಯಾಣ ಮಲಬಾರ್ ಹಾಗೂ ನಮ್ಮ ಕರಾವಳಿಯ ಮುಸ್ಲಿಮರ ಬದುಕು ಬದಲಾಯಿಸಿದೆ ಎಂದರೆ ತಪ್ಪಲ್ಲ. ಇಂದು ಈ ಪರಿಸರದ ಸಾಮೂದಾಯಿಕ ಸರ್ವ ಕ್ಷೇತ್ರಗಳಲ್ಲೂ ಗಲ್ಫ್‌ನ ಲಿಂಕು ಸಂಪನ್ನಗೊಳಿಸಿದ್ದು, ದಿನಾರ್-ದಿರ್‌ಹಂ. ಸಣ್ಣ ಮಟ್ಟಿಗೆ ನಮ್ಮ ಬಡತನವನ್ನು ನೀಗಿಸಿದೆ ಎಂದರೆ ತಪ್ಪಲ್ಲ. ಒಂದು ಕಾಲದಲ್ಲಿ ಕಲಿಕೆ ಮುಗಿದರೆ(ಕೆಲವೊಮ್ಮೆ ಕಲಿಕೆಗೂ ಹೋಗದೆ) ಗದ್ದೆ, ತೋಟ, ಮತ್ತಿತರ ಕೃಷಿ ಕೆಲಸವೋ, ಸಣ್ಣಪುಟ್ಟ ವ್ಯಾಪಾರಗಳಲ್ಲೂ ತೊಡಗಿಸಿ ಕೊಳ್ಳುತ್ತಿದ್ದ ಯುವ ಪೀಳಿಗೆ ☞.೧೯೬೦-೭೦ರ ಜಮಾನದಲ್ಲಿ ಗಲ್ಫ್ ರಾಷ್ಟ್ರದತ್ತ ಚಿತ್ತ ಹರಿಸಲು ಶುರುವಿಟ್ಟರು. ಮರುಭೂಮಿಯ ದಿರ್‌ಹಂ-ದಿನಾರ್‌ಗಿರುವ ಹೆಚ್ಚಿನ ಮೌಲ್ಯವೇ ಇದಕ್ಕೆ ಮೈನ್ ರೀಸನ್. ಎಜುಕೇಶನ್ ಕೆಪಾಸಿಟಿ ಅದ್ಯಾವುದೋ ಇಲ್ಲದಿದ್ದ್ರೂ ಕನಸು ಕಟ್ಟಿ ಹಡಗು ಹತ್ತಿ ಗಲ್ಪ್‌ಗೆ ತೆರಳಿ ಅಷ್ಟು ಇಷ್ಟು ಸಂಪಾದಿಸಿ ಸಂತೃಪ್ತ ಕಂಡರು ಅದೆಷ್ಟೋ ಮಂದಿ.
ಸ್ವಂತ ನಾಡಲ್ಲಿ ಬೆನ್ನು ಬಗ್ಗಿಸಿ ದುಡಿದರೂ ಎಲ್ಲಿಗೂ ತಲುಪುತ್ತಿಲ್ಲ ಎಂದು ಅಸಂತುಷ್ಠರಾಗಿದ್ದ ಯುವ ಪೀಳಿಗೆ ಸಾಂಪ್ರದಾಯಿಕ ಕೆಲಸ ಹಾಗೂ ಪಾರಂಪರ‍್ಯದ ಬದುಕಿನ ಶೈಲಿಗೆ ಸಲಾಂ ಹೇಳಿ ಹೊಸತೊಂದು ಬದುಕನ್ನು ಕನವರಿಸುತ್ತಾ ಅರಸಿ ಹೋದದ್ದು ಮರುಭೂಮಿಗೆ.
ಕನಸಿನ ಬುತ್ತಿಯಲ್ಲಿದ್ದದ್ದು ಕೇವಲ ತಿಂದು ತೇಗುವುದು ಮಾತ್ರವಲ್ಲ, ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು, ಬಂಗಲೆಯಂಥ ಮನೆಗಳು, ಆಲಂಕೃತ ವರಾಂಡಗಳು, ಮನೆ ಮುಂದೆ ಕಾರು ಪಾರ್ಕಿಂಗ್ ಹೀಗೆ ಕನಸುಗಳ ಗೋಪುರ ಕಟ್ಟಿಕೊಂಡು ಗಲ್ಫ್‌ಗೆ ತೆರಳಿದ ಕಾರಣ ಶ್ರೀಮಂತ ಅರಬರ ಮನೆಯ ಕಿಚನ್ ಕೋಣೆಗಳು, ವರಾಂಡಗಳು, ಪಾರ್ಕಿಂಗ್‌ಗಳು ಇಲ್ಲೂ ತಲೆಯೆತ್ತಿ ನಿಂತವು. ಎಲ್ಲೆಲ್ಲೂ ಗಲ್ಫ್‌ನ ಕಾಂಚನ ಸದ್ದು ಮಾಡಿತು. ಲೈಫಿನ ಸ್ಟೈಲನ್ನೇ ಬದಲಿಸಿತು.

ಇಂದಿಗೂ ವಯೋವೃದ್ಧರಿಂದ ಹಿಡಿದು ಎಲ್ಕೇಜು ಮಕ್ಕಳವರೆಗೂ ಗಲ್ಫಿನ ಹಣದ ಪರಿಮಳವೆಂದರೆ ಇನ್ನಿಲ್ಲದ ಪ್ರೇಮ. ಕೊಲ್ಲಿಯ ಮರುಭೂಮಿಯಲ್ಲಿ ಬದುಕನ್ನು ಮೇಣದ ಬತ್ತಿಯಂತೆ ಕರಗಿ ಮುಗಿಸುವ ಮನುಷ್ಯ ತಂದೆಯೋ, ಅಣ್ಣನೋ ಬೇಡ ಗಂಡನೇ ಆದರೂ ಆ ಬಗ್ಗೆ ತಲೆಕೆಡಿಸುವ ಉಮೇದು ಊರಿನ ಹೆಚ್ಚಿನ ಮನೆ ಮಂದಿಗೂ ಇರುವುದಿಲ್ಲ. ಸ್ವಂತ ಊರಲ್ಲಿ ಬಂದು ಹಸುವಿನ ಕರುವನ್ನು ನೋಡಿಕಳ್ಳಲಾರದವ ಅರಬರನ ಮನೆಯ ಒಂಟೆ-ಆಡುಗಳನ್ನು ಹೊಲಕ್ಕೆ ಕೊಂಡೆಯ್ದು ಮೇಯಿಸಲೂ ಸಿದ್ಧನಿದ್ದಾನೆ ಎಂದರೆ ಅದರ ಹಿಂದಿರುವುದು ತನ್ನ ಹಾಗೂ ಕಟ್ಟಿಕೊಂಡವರ ಲಕ್ಸುರಿ ಲೈಫಿನ ಕನಸು ಮಾತ್ರ.

ಊರಿಗೆ ಬಂದಾಗ ಆತನ ಖಡಕ್ ಪ್ಯಾಂಟ್ ಸೂಟ್ ಕೆಲವರಿಗೆ ಸಂಭ್ರಮ ಇನ್ನು ಕೆಲವರಿಗೆ ಅಸೂಯೆ ಆಗಿರುತ್ತೇ ವಿನಾಃ ಯಾರಿಗೂ ಹಕೀಕತ್ತು ಅರ್ಥವಾಗುವುದೇ ಇಲ್ಲ.
ಅಷ್ಟೇ ಯಾಕೆ ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಊರ ಅಭಿವೃದ್ಧಿ ಕೆಲಸಕ್ಕೆ ಬಡವರ ಮನೆ ನಿರ್ಮಾಣಕ್ಕೆ ವಿವಾಹಕ್ಕೆ ಮಸೀದಿ-ಮದ್ರಸಗಳ ಕೆಲಸಕ್ಕೆ ಅನಾಥ-ನಿರ್ಗತಿಕರ ಮಂದಿರಗಳಿಗೆ ಜೊತೆಗೆ ಕುಟುಂಸ್ಥರ ಅಗತ್ಯಗಳಿಗೆ ನೆರವಿಗಾಗಿ ಜನ ಅವನ ಮನೆ ಮುಂದೆ ಬಂದು ಪೀಡಿಸುತ್ತಲೇ ಇರುತ್ತಾರೆ. ಪಾಪ ಗಲ್ಫ್‌ಗಾರನಿಗೆ ಇಲ್ಲ ಎನ್ನಲಾಗದು ಸಾಲ ಶೋಲಮಾಡಿ ಬಂದವರಿಗೆ ಕೈತುಂಬಾ ನೀಡುತ್ತಾನೆ. ಆದರೆ ಅದನ್ನು ತುಂಬಿಸಲು ಮತ್ತೊಂದು ಟ್ರಿಪ್ಪು. ನಾಡು, ಮನೆ, ಒಡಹುಟ್ಟಿದವರು, ಕಟ್ಟಿಕೊಂಡವರು ಜನ್ಮಕೊಟ್ಟವರಿಗಾಗಿ ಬದುಕು ಮೀಸಲಿಟ್ಟ ಮನುಷ್ಯ, ತಾನು ಮೊದ್ಲು ವಿದೇಶ ಪ್ರಯಾಣಕ್ಕೆ ಮಾಡಿ ಇಟ್ಟ ಸಾಲದ ಸಂದಾಯವನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಆಗಿ ಮುಗಿದು ಹೈರಾಣಾಗುವ ಗಲ್ಫ್‌ಗಾರನ ಬದುಕು ಯಾವ ’ಎಂಜಾಯ್ ಲೈಫ್’ ನೀವೇ ಹೇಳಿ...???

ಗಲ್ಫ್‌ನ ಕನಸು ಹೊತ್ತವನ ಭವಣೆ ಆರಂಭವಾಗುವುದು ಒಂದು ಪಾಸ್‌ಪೋರ್ಟ್‌ಗಾಗಿ ಅಲೆದಾಡುವ ಮೂಲಕ. ಅದು ಕೈಗೆ ಸಿಕ್ಕಿದಾಗ ನಂತರ ವಿಝಾಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾನೆ. ಇನ್ನು ವಿಝಾ ಸಿಗುತ್ತೆ ಅನ್ನಿ ಅದಕ್ಕೆ ಲಕ್ಷದಷ್ಟು ಹಣ ಗೂಡಿಸಬೇಕು ಎಲ್ಲಿಂದ ತರುವುದು. ಒಂದೋ ಸಾಲಶೋಲ ಮಾಡುತ್ತಾನೆ. ಇಲ್ಲವೇ ಹೆಂಡತಿಯ ಚಿನ್ನ ಮಾರುವುದೋ ಅಡವಿಡುವುದೋ ಮಾಡುತ್ತಾನೆ. ಇಲ್ಲದಿದ್ದರೆ ವಾಸಕ್ಕಿರುವ ಮನೆಯನ್ನೇ ಮರಾಟ ಮಾಡಿ ಬಿಡುತ್ತಾನೆ. ಈ ಎಲ್ಲಾವನ್ನು ಕಳಕೊಂಡು ಗಲ್ಫ್‌ಗೆ ತೆರಳುವ ಮನುಷ್ಯನ ಮನಸ್ಥಿತಿ ಬೇಗುದಿ ಹೇಗಿರಬೇಡ ಊಹಿಸಿ ನೋಡಿ.

ಎಲ್ಲವೂ ಕಳಕೊಂಡು ಕನಸಿನ ಗೋಪುರ ಕಟ್ಟಿ ಅರಬಿ ಮಣ್ಣಿಗೆ ತಲುಪಿದ ವ್ಯಕ್ತಿಯ ಬದುಕೇನು ಚಿನ್ನದ ಲೈಫೆಂದು ತಿಳಿಯಬೇಡಿ. ಇಂದು ವಿದೇಶಕ್ಕೆ ತೆರಳಿದ ನಮ್ಮ ಸಹೋದರರ ಪೈಕಿ ೭೫ ಶೇಖಡಾ ಮಂದಿಯೂ ಕಷ್ಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ಧಾರೆ. ಇಲ್ಲವೇ ಸರಿಯಾದ ಕೆಲಸವೇ ಇಲ್ಲದೇ ಕೊರಗುತ್ತಾ ದಿನದೂಡುತಿದ್ದಾರೆ. ಒಂದೈದು ಶೇಖಡಾ ಮಂದಿ ಮಾತ್ರ ಉನ್ನತ ಹುದ್ದೆಯಲ್ಲಿದ್ದಾರೆ. ೨೫ ಶೇಖಡಾ ಮಂದಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗಿನ ಕೆಲಸದಲ್ಲಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ

ಹಾಗೆ ನೋಡಿದರೆ ಅರಬರ ತೋಟ, ಹೊಲಗಳಲ್ಲಿ ಕೆಲಸ ಮಾಡುವವರು ಆಡು-ಒಂಟೆ ಮೇಯಿಸುವವರು, ರಸ್ತೆ, ಕಾರ್ಖಾನೆಗಳಲ್ಲಿ ಮೈಮುರಿದು ದುಡಿಯುವವರು ಹೀಗೆ ಅದೆಷ್ಟು ಮಂದಿಯ ಬವಣೆ ಹೇಳಿ ತೀರದ್ದು. ಇನ್ನು ಏಜೆನ್ಸಿಯ ಮರುಳ ಮಾತಿಗೆ ಒಪ್ಪಿಕೊಂಡು ಹಣ ಚೆಲ್ಲಿ ಹೋಗಿ ಸರಿಯಾದ ಕೆಲಸವೇ ದೊರೆಯದೆ ಕಂಗಾಲಾಗುವ ಮಂದಿಯ ಕಥಯೇ ಕರುಣಾಜನಕ, ಅದೇ ತೆರನಾಗಿ ಕೆಲಸವಿದ್ದರೂ ಸಂಬಳ ಕೊಡದೆ ಸತಾಯಿಸುವ ಅರಬರು ಬೇರೆ. ಹೀಗೆ ಎಲ್ಲವನ್ನು ಸಹಿಸಿ ಮರುಭೂಮಿಯ ಬಿಸಿಲಧಗೆಯಲ್ಲಿ ಕರಗಿ ಬದುಕು ಸವೆಸುವ ಗಲ್ಫ್‌ಗಾರನ ಬದುಕಿನ ಹಿಂದಿರುವ ಕರಾಳ ಕಥೆಯನ್ನು ತಿಳಿದವರೆಷ್ಟು...??? ನಾವು ಯೋಚಿಸಬೇಕಾದದ್ದಲ್ಲವೇ ಇದು...???

ಅಷ್ಟಕ್ಕೂ ಹಿಂದಿನಂತೆ ಹೋದವರಿಗೆಲ್ಲ ಸುಲಭದ ಕೆಲಸ ಸಿಗಬೇಕೆಂದರೆ ಅಗಲ್ಲ. ಯಾವುದೇ ಕ್ವಾಲಿಫಿಕೇಶನ್ ಇಲ್ಲದೇ ಕೈ ತುಂಬಾ ಸಂಬಳ ಸಿಗಬೇಕು ಎಂದು ಯೋಚಿಸುವುದು ತಪ್ಪು. ಇಲ್ಲಿ ಉನ್ನತ ಶಿಕ್ಷಣ ಪಡೆದು ಯಾವುದಾದರೂ ಡಿಗ್ರಿ, ವೃತಿ ತರಬೇತಿ ಮುಗಿಸಿದವರಿಗೆ ಕೆಲವೊಮ್ಮೆ ಉದ್ದೇಶಿತ ಕೆಲಸ ದೊರಕುತ್ತದೆ. ಆದ್ದರಿಂಲೇ ಯುವ ಪೀಳಿಗೆ ಆ ಬಗ್ಗೆ ಗಮನ ಹರಿಸುವುದು ಇಂದಿಗೆ ಸೂಕ್ತ.ಈ ಭವಣೆಯ ಹಿಂದಿರುವ ಕಾರಣಗಳಾವುವು...???
ಮನುಷ್ಯ ಎಂಜಾಯ್ ಬದುಕು, ಕಾರು, ಬಂಗಲೆಗಳ ಕನವರಿಕೆಯಲ್ಲಿ ತೊಡಗಿದಾಗ ಗಲ್ಫ್ ನೆನಪಾಗಿ ಬಿಡುತ್ತೆ. ಕೆಲ ಮಹಿಳೆಯರ ಬಿಂದಾಸ್ ಬದುಕಿನ ಕಲ್ಪನೆಗಳು ಗಂಡನನ್ನು ಗಲ್ಫ್‌ಗೆ ಒತ್ತಾಯ ಪೂರ್ವಕ ಅಟ್ಟಿಸಿಬಿಡುತ್ತೆ. ಇನ್ನು ಸಮಾಜವನ್ನು ರಾಕ್ಷಸನಂತೆ ಕಾಡುತ್ತಿರುವ ವೈರಸ್ ವರದಕ್ಷಿಣೆ ಗಲ್ಫ್ ದುಡಿಮೆಗೆ ಕಾರಣವಾಗುತ್ತೆ. ಒಡಹುಟ್ಟಿದ ಸಹೋದರಿಯರ, ಮಕ್ಕಳ ಮದುವೆಗೆಂದು ಹಣ ಗೂಡಿಸಬೇಕಿದ್ದರೆ ಆ ಮರುಭೂಮಿಗೆ ತೆರಳಿ ನೆತ್ತರು ಬೆವರಾಗಿಸಿ ದುಡಿಯಬೆಕು. ಒಂದು ರೀತಿಯಲ್ಲಿ ನಾವು ನಿರ್ಮಿಸಿಕೊಳ್ಳುತ್ತಿರುವ ಕಟ್ಟಳೆಗಳು, ಹದ್ದು ಮೀರಿದ ಬದುಕಿನ ಶೈಲಿಗಳೇ ನಮ್ಮವರನ್ನು ಕಷ್ಟದ ತಳ್ಳಿ ಬಿಟ್ಟಿದೆ.

ದಾರಿ ತಪ್ಪುತ್ತಿಪುವ ಗಲ್ಫ್ ಮನೆಯ ಮಹಿಳೆಯರು

ಈ ಎಲ್ಲಾ ಕಷ್ಟಕಾರ್ಪಣ್ಯಗಳ ಮಧ್ಯೆ ದೂರದ ಮರುಭೂಮಿಯಲ್ಲಿ ಉರಿಬಿಸಿಲಿನಲ್ಲಿ ಗಂಡ, ತಂದೆ ದುಡಿಯುವಾಗ ಇತ್ತ ಹೆಂಡತಿ/ಮಗಳು ಮೈಮೆರೆತು ಎಂಜಾಯ್ ಬದುಕಿನಲ್ಲಿ ಸಖತ್ ಮಜಾ ಹೊಡೆದು ಸುದ್ದಿಯಾಗುವುದೂ ಇದೆ. ಕೆಲ ಮಹಿಳೆಯರು ಅನ್ಯರ ಸಂಪರ್ಕ ಬೆಳೆಸಿ ಕಟ್ಟಿಕೊಂಡವನಿಗೆ ದ್ರೋಹ ಬಗೆಯುತ್ತಾರೆ ಎಂದರೆ ಅಂಥವರನ್ನು ಏನನ್ನಬೇಕು? ತನ್ನ ಹೆಂಡತಿ ಮಕ್ಕಳೆಂದು ನೆತ್ತರು ಬೆವರಾಗಿಸಿ ದುಡಿಯುವ ಆ ಮನುಷ್ಯ ಏನು ಮಾಡಬೇಕು? ನಿರಂತರ ಮೊಬೈಲ್ ಮೂಲಕ ಅನ್ಯರೊಂದಿಗೆ ಮಾತುಕತೆ, ಚಾಟಿಂಗ್, ಮೀಟಿಂಗ್ ಜೊತೆಗೆ ಸುತ್ತಾಟ ನಡೆಸುವವರು ಎಷ್ಟಿಲ್ಲ? ಯಾಕೆ ಇವರಿಗೆ ಅರ್ಥವಾಗುವುದಿಲ್ಲ? ಕೆಲವೊಮ್ಮೆ ಈ ಅನಿಸ್ಲಾಮಿಕ್ ಚಟುವಟಿಕೆಗಳಿಗೆ ಗಂಡಸರು ಕಾರಣವಾಗುವುದೂ ಇದೆ. ಗಲ್ಫ್‌ನಲ್ಲಿ ಕಷ್ಟಪಟ್ಟು ಸಿಕ್ಕಾಪಟ್ಟೆ ಹಣ ಕಳುಹಿಸಿಕೊಡುತ್ತಾರೆ ವಿನಾ ಪತ್ನಿ ಮಕ್ಕಳನ್ನು ಇಟ್ಟುಕೊಳ್ಳುಬೇಕಾದಲ್ಲಿ ಇಟ್ಟುಕೊಂಡಿರುವುದಿಲ್ಲ. ಅವರನ್ನು ಧರ್ಮದ ನೀತಿ, ಚೌಕಟ್ಟಿನಡಿಯಲ್ಲಿ ಶಿಸ್ತು ಬದ್ಧವಾಗಿ ಇಟ್ಟುಕೊಂಡರೆ ಯಾವುದೇ ದುರಂತಗಳು ಸಂಭವಿಸುವುದಿಲ್ಲ. ಅಂಥ ಶಿಸ್ತಿನ ಕುಟುಂಬಗಳು ಅದೆಷ್ಟೋ ಇದೆ. ಯಾವುದಕ್ಕೂ ಇತಿ-ಮಿತಿಗಳಿವೆ, ಆ ಮಿತಿಗಳು ತಪ್ಪಿದಲ್ಲಿ ಮಾತ್ರ ಅನಾಹುತ ಸಂಭವಿಸುತ್ತದೆ. ಈ ಬಗ್ಗೆ ಅನಿವಾಸಿಗಳಾಗಲಿ, ಮನೆ ಮಂದಿಯಾಗಲಿ ತಿಳಿದರೆ ಯಾವುದೇ ಮಿಸ್ಟಿಕ್ ಇಲ್ಲ ಬಿಡಿ

ಯುವಜನತೆ ಚಿತ್ತ ಬದಲಿಸಬೇಕು

ಇಂದು ಗಲ್ಫ್ ರಾಷ್ಟಗಳಲ್ಲಿ ಹಿಂದಿನಂಥಲ್ಲ ಉದ್ಯೋಗವಕಾಶಗಳು ಕಡಿಮೆಯಾಗುತ್ತಿದೆ ಜಾಗತಿಕವಾಗಿ ಉಂಟಾದ ಆರ್ಥಿಕ ಮುಗ್ಗಟ್ಟು ಗಲ್ಫ್ ರಾಷ್ಟ್ರಗಳನ್ನು ಬಿಟ್ಟಿಲ್ಲ.ಆದ್ದರಿಂದ ಹೊರಗಿನವರಿಗೆ ಕೆಲಸ  ಕೊಡುವುದನ್ನು ಕಡಿತಗೊಳಿಸಿದ್ದಾರೆ. ಇನ್ನು ಕೆಲಸವಿದ್ದರೂ ಸಂಬಳ ಕಡಿಮೆ ಇಂಥ ಪರಿಸ್ಥಿತಿಯಲ್ಲಿ ವಿಝಾ, ಟಿಕೇಟ್‌ಗಳೆಂದು ಲಕ್ಷ ಸುರಿದು ಹೋಗಿ ಅಲ್ಲಿ ಮಾಡುವುದೇನು ಹೇಳಿ...??? ಇನ್ನು ಸಂಬಳ, ಮರ‍್ಯಾದೆ ಇರುವ ಕೆಲಸ ಸಿಗಬೇಕಾದರೆ ಉನ್ನತ ಶಿಕ್ಷಣ ಪಡೆದಿರಬೇಕು. ಏನು ಕಲಿಯದೆ ವಿಮಾನ ಹತ್ತಿ ಹೋದರೆ ಅಲ್ಲಿ ಕಷ್ಟ ಪಡಬೇಕಾಗುತ್ತದೆ. ಈ ಬಗ್ಗೆ ಯುವ ಜನತೆ ತಿಳಿಯಬೇಕು. ಕೇವಲ ಗಲ್ಫ್‌ನ ಕನವರಿಕೆಯನ್ನು ಕೈ ಬಿಡಬೇಕು.ಜುಜುಬಿ ಸಂಬಳಕ್ಕಾಗಿ ಲಕ್ಷ ಖರ್ಚುಮಾಡಿ ಬದುಕು ಪೂರ್ತಿ ವಿದೇಶದಲ್ಲಿ ಕರಗಿಸುವುದಕ್ಕಿಂತ ಅದೇ ಹಣವನ್ನು ಊರಿನಲ್ಲಿ ವ್ಯಾಪಾರ ಮುತ್ತಿತರ ವಹಿವಾಟಿಗೆ ವಿನಿಯೋಗಿಸಿದರೆ ಖಂಡಿತಾ ಯಶಸ್ವಿ ಕಾಣಬಹುದು. ಅದೇ ತೆರನಾಗಿ ಬೆಳೆದು ಬರುವ ಪೀಳಿಗೆ ಉನ್ನತ ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು. ಇಂದು ಕೆಲವಡೆ ಮಕ್ಕಳು ಶಿಕ್ಷಣದತ್ತ ಉತ್ಸಾಹಿಕರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.ಉನ್ನತ ಶಿಕ್ಷಣ ಪಡೆದ ನಂತರ ನಮ್ಮ ನಾಡಲ್ಲೂ ಉತ್ತಮ ಉದ್ಯೋಗವಕಾಶಗಳು ಇವೆ* ಈ ಬಗ್ಗೆ ಸಮಾಜದ ಸಂಘ-ಸಂಸ್ಥೆಗಳು ಜಾಗೃತಿ ಮೂಡಿಸಿ ನಮ್ಮ ಮಕ್ಕಳನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗ ಪಡೆಯುವಂತೆ ನೋಡಿಕೊಂಡರೆ ಅದೆಷ್ಟೋ ಉತ್ತಮ ನೋಡಿ. ಸಮಾಜ ಎಚ್ಚೆತ್ತು ಕೊಂಡರೆ ಯಾವುದು ಕಷ್ಟವಿಲ್ಲಬಿಡಿ.
ಅಷ್ಟಕ್ಕು ಮಗುವನ್ನು ಎಲ್ಕೇಜಿಗೆ ಸೇರಿಸುವಾಗಲೇ ಗಲ್ಫ್‌ನ ಕನಸು ಕಾಣುವ ಹೆತ್ತವರು ಕೂಡಾ ಯೋಚಿಸಬೇಕು. ಮಕ್ಕಳಲ್ಲಿ ಕೇವಲ ವಿದೇಶದ ಕನಸು ತುಂಬುವುದಕ್ಕಿಂತ ಉನ್ನತ ಶಿಕ್ಷಿತರಾಗಿ ರೂಪಿಸಿ ನಮ್ಮ ಕಣ್ಮುಂದೆನೆ ಉತ್ತಮ ಬದುಕು ರೂಪಿಸಿ ಕೊಟ್ಟರೆ ಅದೆಷ್ಟು ಚೆನ್ನಾ ಹೇಳಿ...??? ಅಲ್ಲವೇ....!!!!

( ಸಂಗ್ರಹ )

ಮಂಗಳವಾರ, ಮೇ 30, 2017

ಸೆಲ್ಫಿ ಸಹಾಯಗಳು ಮತ್ತು ಕಾರುಣ್ಯದ ಕಡಲು

ಸೆಲ್ಫಿ ಸಹಾಯಗಳು ಮತ್ತು ಕಾರುಣ್ಯದ ಕಡಲು
(ಅಲ್ಲಾಹುಮ್ಮ ಸ್ವಲ್ಲಿ ಅಲಾ ಮುಹಮ್ಮದ್.)

ಮೊತ್ತ ಮೊದಲನೆಯದಾಗಿ,  ಸಣ್ಣ ಪುಟ್ಟ ಸಹಾಯ,ಸಹಕಾರ,ದಾನ, ಪರೋಪಕಾರ ಇದ್ಯಾವುದೂ ಒಬ್ಬ ವ್ಯಕ್ತಿಯ ಔದಾರ್ಯವಲ್ಲ ಬದಲಾಗಿ ಮುಸ್ಲಿಮನಾಗುವ ಕನಿಷ್ಟ ಅರ್ಹತೆಗಳು. ದಾರಿಯಲ್ಲಿರುವ ತೊಡಕು ಸರಿಸುವ ಕನಿಷ್ಟ ಅರ್ಹತೆಗಳಂತೆ. ಹಾಗಾಗಿ ಯಾರಾದರೂ ಇಲ್ಲಿ ನಾವು ಫೋಟೋ ತೋರಿಸಿದ್ದರಿಂದ ದಾನ ಹೆಚ್ಚಾಗಲು ಸಾಧ್ಯವಾಯಿತು ಎಂದು ವಾದಿಸುವವರಿದ್ದರೆ ಅವರು ಇಸ್ಲಾಂನೊಂದಿಗೆ ವಾದ ಮಾಡಿಕೊಳ್ಳಲಿ. ಬಲಗೈಯಿಂದ ಕೊಟ್ಟಿದ್ದು ಎಡಕೈ ತಿಳಿಯದಂತಿರಬೇಕು ಎಂದು ಕಲಿಸಿದ ಇಸ್ಲಾಮಿನೊಂದಿಗೆ ಅವರ ಕೌಂಟರ್ ಚರ್ಚೆಗಳಿರಲಿ. ಇನ್ನು ಉಪದೇಶ ಹೇಳುವವನು ಎಷ್ಟು ಮಾಡಿದ್ದಾನೆ ಎಂದು ಕೇಳಲು ಬರುವ ಸಹೋದರರೊಂದಿಗೂ ನಾನು ಹಸ್ಬುನಲ್ಲಾಹ ನಿ'ಅ್ ಮಲ್ ವಕೀಲ್ ಎಂದಷ್ಟೇ ಹೇಳಬಲ್ಲೆ, ಹೊರತು ವಾದ ಮಾಡುವ ಯಾವ ಆಸಕ್ತಿಯೂ ಇಲ್ಲ.

ತಿಳಿಯದೇ ಮಾಡುತ್ತಿರುವಿರಾದರೆ ದಯವಿಟ್ಟು ಇವಿಷ್ಟನ್ನು ಮಾಡಬೇಡಿ ಎಂಬುವುದು ನನ್ನ ಕಳಕಳಿಯ ವಿನಂತಿ

ಕೈಚಾಚುವವನ ಆತ್ಮಗೌರವ ಕಸಿಯುವ, ಅಥವಾ ತಾನೊಬ್ಬ ಯಾಚಕ ಎಂದು ಆತ ಭಾವಿಸಿಬಿಡುವ ದಾನಗಳಿಂದ ಭಯಪಡಿರಿ. ಎಡಗೈಗೆ ತಿಳಿಯದ ರಹಸ್ಯ ದಾನಗಳು ಮಾತ್ರ ನಿಮ್ಮನ್ನು ಅಲ್ಲಾಹನನ್ನು ಭಯಪಡುವಂತೆ ಮಾಡುತ್ತದೆ. ಅಲ್ಲಾಹನ ಭಯವಿದ್ದ ದಾನಗಳು ಎದುರಿನವನನ್ನು ಆಪ್ತನಂತೆ, ಗೆಳೆಯನಂತೆ ,ಸ್ವಂತ ರಕ್ತ ಸಂಬಂಧಿಯಂತೆ ನಿಮಗೆ ಹತ್ತಿರವಾಗಿಸುತ್ತದೆ. ಅಲ್ಲಿ ಮಾತ್ರ ಮೇಲು ಕೀಳಿನ ಸಂಕೋಲೆಗಳು ,ಉಳ್ಳವ ಇಲ್ಲದವ ಎಂಬ ಅಹಮ್ಮುಗಳು ಧೂಳೀಪಟವಾಗುತ್ತದೆ. ಹಾಗಾಗಿ ದಾನದ ಮೂಲ ಉದ್ದೇಶವನ್ನು ಅರಿಯಿರಿ. ಲೋಕದ ಜನರ ಬಹುಪರಾಕಿಗಾಗಿ ಏನನ್ನೂ ಮಾಡಬೇಡಿರಿ. ನಾಶವಾಗದ ಸ್ಟೋರೇಜ್ ಇರುವ ಸೆಲ್ಫಿ ಕ್ಯಾಮರಾವೊಂದು ನಿಮ್ಮ ನಡೆಗಳನ್ನು ದಾಖಲಿಸುತ್ತಿದೆ ಎಂಬುವುದನ್ನು ಮರೆಯದಿರಿ .
ಇನ್ನೊಂದು ನೋವಿನ ವಿಷಯ, ಅದು ಯಾಕಾಗಿ ಇನ್ನೂರು ಮುನ್ನೂರು ರುಪಾಯಿಯ ಪುಸ್ತಕಕ್ಕೆ ಆ ಪುಟ್ಟ ಮಕ್ಕಳ ಫೋಟೋ ತೆಗೆದು ಪ್ರಪಂಚ ಪಸರಿಸುತ್ತೀರಿ ? ಒಮ್ಮೆ ಕಲ್ಪಿಸಿಕೊಳ್ಳಿ ನಿಮ್ಮ ತಂಗಿ ಅಥವಾ ತಮ್ಮ ಕೈಚಾಚುತ್ತಾ ನಿಂತ ಫೋಟೋ ನಿಮ್ಮನ್ನು ಹೇಗೆ ನೋಯಿಸಿಬಿಡಬಹುದು ? ಹಾಗಾದರೆ ಒಬ್ಬ ತಂಗಿಯಾಗಿ ತಮ್ಮನಾಗಿ ಆ ಪುಟ್ಟ ಮಕ್ಕಳನ್ನು ಕಾಣುವ, ಅವರ ಪ್ರೀತಿಯ ಮಮತೆಯ ಅಣ್ಣನಾಗುವ ಹ್ರದಯವಿಲ್ಲದ ಈ ಯಾಂತ್ರಿಕ ಸಹಾಯಗಳು ಯಾರನ್ನು ಮೆಚ್ಚಿಸಲು ? ಅಲ್ಲಾಹನನ್ನೇ ? ನಿಮಗೆ ಸರ್ವಸ್ವನ್ನೂ ಕೊಟ್ಟ ಅಲ್ಲಾಹನಿಗೆ ತಲುಪುವ ಯೋಗ್ಯತೆಯಾದರೂ ಏನಿದೆ ಅದಕ್ಕೆ ? ಮತ್ಯಾರನ್ನು ಮೆಚ್ಚಿಸಲು ? ಕಾರುಣ್ಯದ ಕಡಲು ಮುಹಮ್ಮದರನ್ನೇ ? ಮಕ್ಕಾ ಮದೀನ ಸಹಿತ ಅರಬ್ ರಾಷ್ಟ್ರಗಳ ನಾಯಕನಾಗಿಯೂ ಅನಾಥರನ್ನು ಹೆಗಲಿನ ಮೇಲೆ ಕುಳ್ಳಿರಿಸಿ ಈದ್ ನ ನಮಾಜಿಗೆ ಕರೆದೊಯ್ದ ಮುಹಮ್ಮದರನ್ನು ಮೆಚ್ಚಿಸಲಿದೆಯೇ ? ನಿಮಗೇನಾದರೂ ಬೋಧವಿದೆಯೇ ಮುಹಮ್ಮದರ ಮುಹಮ್ಮದರ ಅನುಯಾಯಿಗಳ ತ್ಯಾಗ ಕರುಣೆ ಮಾನವೀಯ ಗುಣಗಳ ಆಳವೇನು ಎಂಬುವುದರ ಬಗ್ಗೆ. ?

ದಯವಿಟ್ಟು ಮಾಡಬೇಡಿ ಇವುಗಳನ್ನು. ನೀವು ನಿಜಕ್ಕೂ ಅಲ್ಲಾಹನ ಲೆಕ್ಕಪತ್ರಗಳಲ್ಲಿ ಭರವಸೆಯಿಡುವವರಾದರೆ ನೀವು ಕಾರಿರುಳ ಕತ್ತಲಲಿ ಅನಾಥರನ್ನು ಬಡವರನ್ನು ಹುಡುಕಿ ನಡೆದು ಒಂದು ಕಣ ಸಕ್ಕರೆ ದಾನ ಮಾಡಿದ್ದರೂ ಅದರ ಪ್ರತಿಫಲ ನೀವು ಪಡೆದೇ ತೀರುತ್ತೀರಿ. ದಯವಿಟ್ಟು ಜನರಿಗಾಗಿ, ಲೋಕದ ತೋರಿಕೆಗಾಗಿ ಏನೋ ಮಾಡಲು ಹೊರಟು ಜನರನ್ನು ಅಪಮಾನಿಸುವ ಕ್ರೌರ್ಯ ತೋರಬೇಡಿ.  ಫೋಟೋ ತೋರಿಸದೆ ದುಡ್ಡು ಸಿಗುವುದಿಲ್ಲ ಎಂಬ ವಾದಗಳನ್ನು ಹೂಡಬೇಡಿ. ಬದಲಾಗಿ ತೋರಿಕೆಯ ದಾನಗಳ ಕಡೆಗೆ ಅರಿಯದೇ ವಾಲಿರುವ ಅವರ ಚಿಂತನೆಗಳನ್ನು ಬದಲಾಯಿಸಲು ಪ್ರಯತ್ನಿಸಿ. ಪ್ಲೀಸ್ ಯಾವ ಮಗುವೂ ತಾನೊಂದು ದಿನ ದೊಡ್ಡವನಾದಾ/ಳಾದಾಗ ಕೈಚಾಚಿ ನಿಂತ ತನ್ನ ಫೋಟೋ ನೋಡುವಷ್ಟು ಗಟ್ಟಿ ಗುಂಡಿಗೆ ಹೊಂದಿರುವುದಿಲ್ಲ. ಹಾಗಾಗಿ ಅವರ ಅಣ್ಣಂದಿರಾಗಿ, ಚಿಕ್ಕಪ್ಪ ,ಮಾವ ಮತ್ತೇನೋ ಆಗಬಲ್ಲ ಆತ್ಮೀಯ ಗೆಳೆಯರಾಗಿ.ಅವರನ್ನು ಪ್ರೀತಿಸಿರಿ. ಮತ್ತೊಮ್ಮೆ ನೆನಪಿಸುತ್ತಾ ಹೆಗಲ ಮೇಲೆ ಅನಾಥರ ಹೊತ್ತು ನಡೆದ ಮುಹಮ್ಮದರ ಅಣುಸರಣೆಯಿರಲಿ.

ಇದು ಯಾರನ್ನೇ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ಗೆಳೆಯನೊಬ್ಬ ಕಳುಹಿಸಿದ ಪುಸ್ತಕ ವಿತರಣೆಯ ಸಾಲು ಸಾಲು ಫೋಟೋಗಳು ಹ್ರದಯಕ್ಕೆ ತಾಕಿದಾಗ ಅನಿವಾರ್ಯಾಗಿ ಬರೆದೆ.ಅದರ ಹೊರತಾಗಿಯೂ ಯಾರಾದರೂ ಬೈಯುವುದಾದರೆ ಸ್ವೀಕರಿಸುತ್ತೇನೆ ಮುಹಮ್ಮದರ ಮೇಲಿನ ಪ್ರೀತಿಗಾಗಿ.

-ಕಂದ

ಸೋಮವಾರ, ಮೇ 29, 2017

ನೋಂಬು

ನೋಂಬು ಅಂದ ತಕ್ಷಣ ಬಾಲ್ಯದ ಜಲಕ್ ಗಳು:

1)ನನಗೆ ಇಂದು ನೋಂಬು ಇದೆ, ಎಂದು ಗೆಳೆಯರ ಮುಂದೆ ಮಾಡಿದ ಆ ಶೋಕಿಯ ದಿನಗಳು.

2)ತರಾವೀಹ್'ಗೆ ಖುಷಿಯಾಗಿ ಹೋಗಿ,ಅಲ್ಲಿ ಜೋರಾಗಿ ಆಮೀನ್ ಹೇಳಿ ನಾ ಮುಂದು ತಾ ಮುಂದು ಎಂದು ಗೆಳೆಯರ ನಡುವೆ ಪೈಪೋಟಿ, ನಡುವೆ ಇದನ್ನು ನಿಯಂತ್ರಿಸಲು ಬರುತ್ತಿದ್ದ ಹಾಸ್ಯಮಯ ಊರ ಮುಖಂಡರು .

3)ಸುಬುಹಿ ನಮಾಜ್ ಮಾಡಿ ಸೀದಾ , ಕ್ರಿಕೆಟ್ ಮೈದಾನಕ್ಕೆ ಹೋಗಿ ಕಾರಕ್ಕೆ ,ಈತಫಲ ವನ್ನು ಬೆಟ್ಟಿಂಗ್ ಆಕಿ ಆಡಿದ ಆ ಆಟಗಳು, ಕಡೆಗೆ ನೋಂಬು ಅಲ್ಲವಾ 1 ಕ್ಕೆ 70 ಎಂದು ಬೆಟ್ಟಿಂಗ್ ರದ್ದು ಗೊಳಿಸುತ್ತಿದ್ದ ಆ ಜಾಲಿ ಮುಮೆಂಟ್ಸ್.

4)ಮಧ್ಯಾಹ್ನ ಬ್ರೇಕ್ ಟೈಮ್ ನಮಾಜ್ ಗೆ ತೆರಳಿ, ನಾ ಮುಂದು ತಾ ಮುಂದು ಎಂದಂತೆ ಕುರ್'ಆನ್ ಕತಾ ಓದುತ್ತಿದ್ದ ಮಧುರ ಕ್ಷಣಗಳು, ಆ ವೇಳೆ ನಿಮಿಷಕ್ಕೆ ಕಣ್ಣಾಡಿಸುತ್ತಲೇ ಬೇಗ ಬೇಗ ಪುಟ ಮರುಚಿ ನನ್ನದು ಇಷ್ಟು ಪುಟ ವಾಯಿತು ಎಂದು ಗರ್ವಪಡುತ್ತಿದ್ದ ಆ ತಿಳಿಗೇಡಿತನದ ಸ್ವೀಟ್ ಡೇಸ್.

5)ಆಟದ ಸಮಯ ನೋಂಬು ಇರುವುದು ಮರೆತೋಯಿತು ಎಂಬ ನೆಪ ಹೇಳಿ ನೀರು ಕುಡಿಯುತ್ತಿದ್ದ ಆ ಕ್ಷಣಗಳು.

6)ನೋಂಬು ತೆರೆಯುವ ಕ್ಷಣ ಸಮೋಸಕ್ಕಾಗಿ ಮಾಡಿದ ಹೇಳಲಾಗದ ಕಿತಾಪತಿಗಳು.

7)29 ನೋಂಬು ಆದ ತಕ್ಷಣ ನಾಳೆ ಪೆರ್ಣಾಳ್ ಎಂದು ಕಾದು ಕುಳಿತು ಕಡೆಗೆ 30 ರ ತರಾವೀಹ್ ಗೆ ಸಪ್ಪೆ ಮುಖ ಹೊತ್ತು ಹೋಗಿ ಗೆಳೆಯರ ಮುಂದೆ ನಾನು 30 ಪೂರ್ತಿಯಾಗಬೇಕೆಂದು ಪ್ರಾರ್ಥಿಸಿದ್ದೆ ಎಂದು ಹೇಳಿದ ಕ್ಷಣಗಳು.

8)ಪೆರ್ನಾಳ್ ಗೆ ಎಂದು ಬಾಪ ತರುತ್ತಿದ್ದ ಆ ಚಂದದ ಬಟ್ಟೆಗಳನ್ನು , ದಿನಕ್ಕೆ ನಾಲ್ಕು ಬಾರಿ ಕಬಾರ್ಟ್ ತೆರೆದು ನೋಡುತ್ತಿದ್ದ ಆ ಮರೆಯಲಾಗದ ಕ್ಷಣಗಳು.

9)ಪೆರ್ಣಾಳ್ ನಮಾಜ್ ಮಾಡಿ ತಕ್ಷಣ , "ಪೆರ್ಣಾಳ್ ಡೊ ಕಾಸ್ ತರು" ಎಂದು ಕೇಳುತ್ತಿದ್ದ ಆ ತುಂಟಾಟದ ನೆನಪುಗಳು.
      ವ್ಹಾ ವ್ಹಾ ಎಷ್ಟು ಮಧುರವಲ್ಲವೇ ಬಾಲ್ಯ,ಬುದ್ದಿ ಇರದ ಆ ದಿನಗಳ ನೋಂಬಿನ ದಿವಸಗಳನ್ನು ಮತ್ತೆ ಮತ್ತೆ ನೆನೆಸಿದರೆ ಮನಸ್ಸಿಗೆ ಒಂತರಾ ಖುಷಿ . ಅಲ್ಲವೇ...!!
                     -ಚಪ್ಪಿ.

ಭಾನುವಾರ, ಮೇ 28, 2017

ನಾಲ್ಕು ತುಂಡು ಖರ್ಜೂರ

೧.
ಅಂದು ಅದೆಷ್ಟೋ ದಿನ ಹೊಟ್ಟೆಗಿಲ್ಲದ
ಸಿಟ್ಟನ್ನು ಅದುಮಿಡಲಾಗದೆ
ನಾ ತುಳಿದ ಅಡುಪಿನ ತಿಟ್ಟೆ ಮೌನವಾಗಿ
ಅಣಕಿಸಿದಾಗ ಸಿಟ್ಟು ಕೊಟ್ಟ ಪೆಟ್ಟು ಅಷ್ಟಿಷ್ಟಲ್ಲ.

ನಾನಿಲ್ಲಿ ಉಚಿತವಾಗಿ ಛತ್ರವಿಟ್ಟಿಲ್ಲ
ಹಳೆಯ ಬಾಕಿ ಪೂರ್ತಿ ತೀರಿಸಿದ ಮೇಲೆ
ಇಪ್ತಾರಿನ ರೇಶನಿಗೆ ಮತ್ತೆ ಕಾಲಿಟ್ಟರೆ ಸಾಕು
ಎಂದ ಮೂಸಾಕರ ಮಾತೂ ಮರೆಯಲಾಗುತ್ತಿಲ್ಲ.

೨.
ಅಂದು ನಾಲ್ಕಾರು  ಮನೆಯಿಂದ ಮಸೀದಿಗೆ
ಹೊತ್ತು ತರುತ್ತಿದ್ದ ಕಂಞಯ ಪರಿಮಳ.
ಮೋನಾಕ ಹಂಚಿದ ಈತಫಳದ ರುಚಿಯಲ್ಲಿ
ಉಪವಾಸ ಮುಗಿದದ್ದೇ ತಿಳಿಯುತ್ತಿರಲಿಲ್ಲ.

ರುಚಿ ರುಚಿ ಸೀರಣಿಯ ಆಸೆಯಿಂದ
ಬದ್ರೀಂಙಳ ಆಂಡ್,ಲೈಲತುಲ್ ಕದ್ರ್
ಮತ್ತೆ ಮತ್ತೆ ಬರಬಾರದೆ?
ಎಂದು ಪ್ರಾರ್ಥಿಸದ ದಿನವೇ ಇರಲಿಲ್ಲ.

೩.
ಈಗಂತೂ ನನಗೆ ತೊಂದರೆಯೇ ಇಲ್ಲ.
ಬರುತ್ತಿವೆ ದಿನಾ ರಂಗು ರಂಗಿನ ಕಿಟ್ಟುಗಳು.
ನೂರಾರು ಬಗೆ ಕ್ಲಿಕ್ಕಿಸುವ ಪೋಟೋಗಳು
ಆದರೆ ಯಾಕೋ ಈಗ ಹಸಿವೆಯೇ ಆಗುತ್ತಿಲ್ಲ.

ಹೊಟ್ಟೆಗಿಲ್ಲದಿದ್ದರೂ ಮನದಿ ನೆಮ್ಮದಿ ಇತ್ತು
ಜತನದಿಂದ ಕಾಪಾಡಿದ ಅಮೂಲ್ಯ ಮಾನವಿತ್ತು.
ಅಲ್ಲಾಹನ ಪರೀಕ್ಷೆ ಎದುರಿಸುವ ತಾಳ್ಮೆಯೂ ಇತ್ತು
ನಿರೀಕ್ಷೆ ಗಳೆದುರು ಸೋಲದ ಅಚಲ ವಿಶ್ವಾಸವಿತ್ತು.

೪.
ಕೊಡುವ ಕೈ ಪಡೆಯುವ ಕೈಗಿಂತ ಮಿಗಿಲು
ನೆಬಿ ವಚನವ ಚಿಕ್ಕ ಮಗುವೂ ತಿಳಿದಿರಲು
ಸ್ವಾಭಿಮಾನ ಅಡವಿಡಲು ಮನವಿರದಿದ್ದರೂ
ವಿಧಿಯಿಲ್ಲದೆ ಕೈಯೊಡ್ಡಿ ಕಂಬನಿಗೆರೆದಿದ್ದೇನೆ.

ಹಳೆ ಪಳೆಯುಳಿಕೆಯ ಸುಳಿವಿಲ್ಲದಂತೆ ಮರೆತ
ಉಳ್ಳವರ ಹೆಸರಿನ ತೆವಳಿಕೆಯೇ ಮೆರೆದಿರಲು
ಇಪ್ತಾರಿನ ಪುಣ್ಯ ಹರಾಜಿಗಿಡುವವರ ಶೋಕಿಯ
ಕಂಡು ಕೊರಗಿದ ಮನಕೆ ಶಾಂತಿಯ ಬೇಡುತ್ತೇನೆ.

#ಉಫಾಕು#

ಬುಧವಾರ, ಮೇ 24, 2017

ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ

http://www.nadakacheri.karnataka.gov.in/

*ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದೀರಾ?*

*ಅಲ್ಲಿ, ಇಲ್ಲಿ ಎಂದು ನಿಮ್ಮನ್ನು ಅಲೆದಾಡಿಸುತ್ತಿದ್ದಾರಾ?*

*ತೊಂದರೆ ಕೊಡುವ ಅಧಿಕಾರಿಗಳಿಂದ/ಏಜೆಂಟ್ ಗಳಿಂದ ಬೇಸತ್ತಿದ್ದೀರಾ?*

*_ಹಾಗಾದರೆ ಇನ್ನು ನೀವು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ._*

*ಇನ್ನು ನೀವು ಜಾತಿ ಮತ್ತು ಆದಾಯ ಪತ್ರ ಪಡೆಯಲು ಯಾರನ್ನೂ ಕಾಯಬೇಕಾಗಿಲ್ಲ. online ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಸರಕಾರ ಅವಕಾಶ ಕಲ್ಪಿಸಿದೆ.*

*www.nadakacheri.karnataka.gov.in*
*ಈ Website ನ ಮೂಲಕ ಅರ್ಜಿ ಸಲ್ಲಿಸಿ, ಬಳಿಕ ನಿಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೆಮ್ಮದಿ ಕೇಂದ್ರಕ್ಕೆ ತೆರಳಿ ಪಡೆದುಕೊಳ್ಳಬಹುದು.*

*ಇಲಾಖೆ ಈಗಾಗಲೇ ನಿಗದಿಪಡಿಸಿದ ಶುಲ್ಕವನ್ನು Online ಮುಖಾಂತರವೇ ಕಟ್ಟಬಹುದು.*

*ನಿಮ್ಮಲ್ಲಿ ಇರಬೇಕಾದ ದಾಖಲೆಗಳು:*

1. ಬ್ಯಾಂಕ್ ಅಕೌಂಟ್
(ATM Card)

2. ವಿಳಾಸದ ಬಗೆಗಿನ ದಾಖಲೆಗಳ ಮೂಲ ಪ್ರತಿ.(ಒರಿಜಿನಲ್)
(ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ)

3. ಮೊಬೈಲ್ ಸಂಖ್ಯೆ

*_(ನಿಮ್ಮ ಪಂಚಾಯತಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರಬೇಕು)_*

*_ನಿಮ್ಮ ಸಮಸ್ಯೆ, ನಮ್ಮ ಸೇವೆ_*

*(ವಾರದ ಪ್ರತೀ ಬುಧವಾರ & ಗುರುವಾರ ನಮ್ಮ ಕಚೇರಿಯಲ್ಲಿ ಉಚಿತ ಸೇವೆ ಲಭ್ಯ)*

*ಸಮಯ: ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ*

*ಮಾಹಿತಿ & ಉಚಿತ ಸೇವೆಗಾಗಿ:*

*ಇರ್ಷಾದ್ ವೇಣೂರ್*
*ಸಂಯೋಜಕರು,*
*ಸರಕಾರಿ ಸೌಲಭ್ಯಗಳ ಮಾಹಿತಿ ವಿಭಾಗ,*
*ಸಮಾಜ ಸೇವಾ ಘಟಕ,*
*ಜಮಾಅತೆ ಇಸ್ಲಾಮೀ ಹಿಂದ್,*
*ಹಿದಾಯತ್ ಸೆಂಟರ್,*
*ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು-575001*

ಮೊ:
9844963059
7676413059

E-mail: ssuhelpline@gmail.com

Facebook/Social Service Unit-SSU

ರಮಝಾನ್ ಹಬ್ಬವಲ್ಲ

*ರಮಝಾನ್ ಹಬ್ಬವಲ್ಲ..!!*

   ಇಸ್ಲಾಮಿಕ್ ಕ್ಯಾಲೆಂಡರಿನ 9ನೇ ತಿಂಗಳಿನಲ್ಲಿ ಬರುವ ರಮಝಾನ್, ರಮದಾನ್, ಅಥವಾ ರಂಜಾನ್ ಎಂದು ಕರೆಯಲ್ಪಡುವ ಈ ಪವಿತ್ರ ಮಾಸವು ಜಾಗತಿಕ ಮುಸ್ಲಿಮರ‌ ಹಬ್ಬವೆಂದು ಹೆಚ್ಚಿನ ಮುಸ್ಲಿಮೇತ ಸಹೋದರ, ಸಹೋದರಿಯರಲ್ಲಿ ಒಂದು ತಪ್ಪು ಕಲ್ಪನೆಯಾಗಿದೆ..

      ವಾಸ್ತವದಲ್ಲಿ ರಮಝಾನ್ ಮಾಸವು ಪ್ರಪಂಚಾದ್ಯಂತ ಸರ್ವ ಮುಸ್ಲಿಮರು ಮಾಡುತ್ತಿರುವ ಒಂದು ಆರಾಧನೆಯಾಗಿದೆ. ಇಸ್ಲಾಮಿನಲ್ಲಿರುವ ಐದು ಆಧಾರ ಸ್ತಂಭಗಳಲ್ಲಿ (ಕಡ್ಡಾಯ ಕಾರ್ಯ) ನಾಲ್ಕನೆಯ ಸ್ತಂಭವಾಗಿದೆ ಈ ರಮಝಾನ್. ಈ ರಮಝಾನ್ ಎಂದರೆ ಬೆಳಗ್ಗೆ ಬೇಗನೆ ಎದ್ದು ಹೊಟ್ಟೆ ತುಂಬಾ ತಿಂದುಂಡು ಮಲಗಿ ಮತ್ತೆ ಸಂಜೆ ಮಗರಿಬ್ ಅಝಾನಿನ ಸಮಯದಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಿಂದು ಸಂಭ್ರಮಿಸುವ ಹಬ್ಬವಲ್ಲ.. ಈ ಮಾಸವು ಓರ್ವ ಸಾಧಾರಣ ಮುಸ್ಲಿಮನಿಗೆ ತನ್ನೆಲ್ಲ ಸಣ್ಣ ಮತ್ತು ದೊಡ್ಡ ಪಾಪಗಳಿಂದ ಸಂಪೂರ್ಣವಾಗಿ ಮುಕ್ತಿಹೊಂದಿ ತನ್ನ ಜೀವನದ ಕೊನೆಯ ಕ್ಷಣದವರೆಗೂ ಓರ್ವ ನೈಜ್ಯ ಮುಸ್ಲಿಮನಾಗಿ ಪರಿಶುದ್ಧ ಮನದೊಂದಿಗೆ ತನ್ನನ್ನು ತಾನು ಅಲ್ಲಾಹನಿಗೆ ಅರ್ಪಿಸುವ ಒಂದು ವಿಧಾನವಾಗಿದೆ ಈ ಪರಿಶುದ್ಧ ರಮಝಾನ್ ಮಾಸ..

    ವರ್ಷದ ಹಣ್ಣೊಂದು ತಿಂಗಳುಗಳ ಕಾಲ ಪರಲೋಕದ ಬಗ್ಗೆ ಚಿಂತಿಸದೆ ಸುಖವಾಗಿ ಜೀವಿಸುತ್ತಾ, ಮೂರು ಹೊತ್ತು ಉಣ್ಣಲು ಗತಿಯಿಲ್ಲದಿರುವ ಸಂಬಂಧಿಕರು, ನೆರೆಹೊರೆಯರವನ್ನು ನಿರ್ಲಕ್ಷಿಸಿ ಜೀವಿಸುವವರಿಗೆ ಈ ಮಾಸವು ಹೆಚ್ಚಿನ ಪರಿಣಾಮವನ್ನು ಬೀರಿಸುತ್ತದೆ. ಮನುಷ್ಯ ಒಂದು ತಿಂಗಳ ಕಾಲ ಹಸಿವು ಮತ್ತು ಬಾಯಾರಿಕೆಯ ತಡೆಗಟ್ಟುವ ಮೂಲಕ ದೇವನ ಸ್ಮರಣೆಯಲ್ಲಿ ತೊಡಗಿಸಿಕೊಂಡು ಇತರರ ಹಸಿವಿನ ನೋವ ಅರಿತಾಗ ಮನುಷ್ಯ ಮನುಷ್ಯನ ನಡುವಿನ ಸಂಬಂಧವು ಇನ್ನಷ್ಟು ಧೃಡವಾಗುತ್ತದೆ. ಇದರ ಮಧ್ಯೆ ಶ್ರೀಮಂತ-ಬಡವ ಎನ್ನುವ ತಾರತಮ್ಯವೂ ಹೋಗಲಾಡಿಸಲ್ಪಡುತ್ತದೆ. ಈ ಒಂದು ಪವಿತ್ರ ಮಾಸವು ಜಗತ್ತಿನಾದ್ಯಂತ ಅದೆಷ್ಟೋ ಜನರ ಮನಸ್ಥಿತಿಯನ್ನು ಬದಲಾಯಿಸಿ ವಿಶ್ವ ಭ್ರಾತೃತ್ವ ಸಾಧಿಸುವುದರಲ್ಲಿ ಯಶಸ್ವಿಯಾಗಿದೆ..

    ಅಂತೇಯೇ ಕೇವಲ ಉಪವಾಸವಿದ್ದು ವರ್ಷದ ಹನ್ನೊಂದು ತಿಂಗಳಿನಂತೆ ಈ ತಿಂಗಳನ್ನೂ ನಿರ್ಲಕ್ಷ್ಯ ಭಾವನೆಯಿಂದ ಕಂಡು ಕ್ಷೋಭೆಯನ್ನುಂಟು ಮಾಡುವವರಿಗೆ ಈ ಮಾಸವು ಯಾವುದೇ ಪರಿಣಾಮವನ್ನು ಬೀರುವುದಿಲ್ಲ‌. ಪವಿತ್ರ ಕುರ್‌ಆನಿನ 2/183ರಲ್ಲಿ ಅಲ್ಲಾಹನು ಹೇಳುತ್ತಾನೆ "ಓ ಸತ್ಯವಿಶ್ವಾಸಿಗಳೇ! ನಿಮಗಿಂತ ಮುಂಚಿನವರ ಮೇಲೆ ವಿಧಿಸಲಾದಂತೆ ನಿಮ್ಮ ಮೇಲೂ ಉಪವಾಸ ಆಚರಿಸುವುದನ್ನು ಕಡ್ಡಾಯವಾಗಿ ವಿಧಿಸಲಾಗಿದೆ. ನೀವು ಭಯಭಕ್ತಿ ಪಾಲಿಸುವ ಸಲುವಾಗಿ."

*ಸಲಾಂ ಸಮ್ಮಿ, ತಾಳಿತ್ತನೂಜಿ*

ರಂಝಾನ್

ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳಾಗಲಿ

ಪಾವನ ತಿಂಗಳು ರಂಝಾನ್ ಮಗದೊಮ್ಮೆ ಆಗತವಾಗಿದೆ .ತಿಂಗಳುಗಳ ಪೈಕಿ ಶ್ರೇಷ್ಟತೆಯನ್ನು ಹೊಂದಿದ ರಂಝಾನ್ ನಮ್ಮ ತಪ್ಪುಗಳನ್ನು ತಿದ್ದಿಕೊಂಡು, ಪ್ರಾಯಶ್ಚಿತಪಟ್ಟು ಜೀವಿಸಲು ನಮಗಿರುವ ಅವಕಾಶವಾಗಿದೆ.
ಒಳಿತನ್ನು ಬೋಧಿಸುವ,ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳೆಂದು ಕಲಿಸಿಕೊಟ್ಟ ಧರ್ಮದ ಅನುಯಾಯಿಗಳಿಂದು ಕೆಡುಕಿನತ್ತ ಆಕರ್ಷಿತರಾಗುತ್ತಿದ್ದಾರೆ.ಒಳಿತನ್ನು ಸಂಪೂರ್ಣವಾಗಿ ನಾಮಾವಶೇಷ ಮಾಡಿ ಕೆಡುಕಿನತ್ತ ಧಾವಿಸುತ್ತಿರುವ ಯುವ ಸಮೂಹದ ನಡೆಯು ಒಂದು ರೀತಿಯಲ್ಲಿ ಅಚ್ಚರಿಯನ್ನುಂಟು ಮಾಡುವಾಗ, ಸಮುದಾಯದ ಶ್ರೀಮಂತ ವರ್ಗವು ತಮ್ಮಲ್ಲಿರುವ ಸಂಪತ್ತನ್ನು ಕೆಡುಕಿಗೆ ಉಪಯೋಗಿಸಲ್ಪಡುವಂತಹ ಸನ್ನಿವೇಶಗಳನ್ನು ನಮಗೆ ಕಾಣಿಸಲು ಸಾಧ್ಯ.

ಐಹಿಕವಾದ ಜೀವನದ ಲಾಲಸೆಗಳ ಹಿಂದೆ ಜೋತುಬಿದ್ದ ಮನುಷ್ಯನು,ಪಾರತ್ರಿಕ ಜೀವನದ ಕುರಿತಾದ ಚಿಂತೆಯಿಂದ ದೂರವಾಗಿದ್ದಾನೆ.
ಅತೀ ಗೌರವದಿಂದ ಸ್ವೀಕರಿಸಲ್ಪಡಬೇಕಾದ ರಂಝಾನನ್ನು ಮನುಷ್ಯನಿಂದು ತಿರಸ್ಕಾರದ ನೋಟಗಳಿಂದ  ಕಾಣುತ್ತಿದ್ದಾನೆ.ಕಳೆದ ತಲೆ ಮಾರುಗಳು ರಂಝಾನ್ ತಿಂಗಳ ಆಗಮನವಾಗುವಾಗ ಮನೆಯ ಪರಿಸರಗಳನ್ನೆಲ್ಲಾ ಶುಚಿಯಾಗಿಸಿ,ರಂಜಾನ್ ನನ್ನು ಸ್ವೀಕರಿಸಲು ಸಕಲ ತಯಾರಿಗಳನ್ನು ನಡೆಸುತ್ತಿದ್ದರು ಆದರೆ ಕಾಲಕ್ರಮೇಣ ಮನುಷ್ಯರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಜೀವಿಸಲು ಪ್ರಾರಂಭಿಸಿದರು.ರಂಜಾನ್ ತಿಂಗಳ ಮಹತ್ವವು ಗೊತ್ತಿದ್ದೂ, ಗೊತ್ತಿಲ್ಲದವರಂತೆ ನಟಿಸಿ ಸ್ವೇಚ್ಛಾಚಾರ ದ ಜೀವನವನ್ನು ಅವಲಂಬಿಸತೊಡಗಿದರು.

ಕೆಲವು ವರ್ಷಗಳ ಮೊದಲು ರಂಜಾನ್ ತಿಂಗಳು ಬಂತೆಂದರೆ ಮನೆಯೊಳಗಿನ ಟಿ.ವಿ, ಅದ್ಯಾವುದೋ ಮೂಲೆಗಳಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿತ್ತು.ಆದರೆ,ಇಂದು ಕೆಲವೊಂದು ಮನೆಗಳಲ್ಲಿ ಮಗ್ರಿಬ್ - ಇಶಾ ಬಾಂಗ್ ನ ನಡುವೆ ಧಾರವಾಹಿಗಳದ್ದೇ ಸದ್ದು ಕೇಳಿಸುವಷ್ಡರ ಮಟ್ಟಿಗೆ ಮುಸ್ಲಿಂ ಸಮುದಾಯವು ಮುಂದುವರಿದಿದೆ ಅನ್ನುವುದು ವಿಪರ್ಯಾಸ.

ಸಮುದಾಯದ ನಡುವೆ ಅದೆಷ್ಟೋ ಜನರು ಬಡತನದ ಬೇಗುದಿಯಲ್ಲಿ ದಿನದೂಡುತ್ತಿದ್ದರೂ, ಶ್ರೀ ಮಂತಿಕೆಯಿಂದ ಮೆರೆಯುವ ಒಂದು ವರ್ಗವು ತಮ್ಮ ಸಂಪತ್ತನ್ನು ಅದ್ಯಾವುದೋ ಕ್ರಿಕೆಟ್ ಟೂರ್ನಮೆಂಟಿಗೋ,ಅಥವಾ ಇನ್ನಿತರ ಮನರಂಜನೆ ಕಾರ್ಯಕ್ರಮಗಳಿಗೋ ಲಕ್ಷ, ಲಕ್ಷ ದೇಣಿಗೆಯನ್ನಾಗಿ ನೀಡುವಾಗ ತಮ್ಮ ಪರಿಸರದಲ್ಲೇ ಇರುವ ಬಡವರಿಗೆ ಸಹಾಯ ಮಾಡದೆ ಕುರುಡುತನ ಪ್ರದರ್ಶಿಸುವ ಕಾರಣಗಳಿಂದ ಮುಸ್ಲಿಂ ಸಮುದಾಯದ ಕೆಲವರು ರಂಝಾನ್ ತಿಂಗಳನ್ನು ಭಿಕ್ಷಾಟನೆಯ ತಿಂಗಳನ್ನಾಗಿ ಪರಿವರ್ತಿಸಿರುವುದು ಸಮುದಾಯದ ದುರಂತ.

ಒಂದು ಕಡೆಯಲ್ಲಿ ಉಪವಾಸಿರಾದ ಬಡವರು, ಉಪವಾಸವನ್ನು ತೊರೆಯಲು ಒಂದು ಗ್ಲಾಸ್ ನೀರು,ಒಂದು ಖರ್ಜೂರವನ್ನು ಉಪಯೋಗಿಸಿ ಉಪವಾಸ ತೊರೆಯುವಾಗ ,ಮತ್ತೊಂದು ಕಡೆ ಪ್ರತಿಷ್ಠೆಯ ಹೆಸರಿನಲ್ಲಿ ಸಂಘಟನೆಗಳು ಇಫ್ತಾರ್ ಕೂಟವನ್ನು ಏರ್ಪಡಿಸಿ ,ಸಾವಿರಾರು ರೂಪಾಯಿಗಳ ಆಹಾರ ಪದಾರ್ಥಗಳನ್ನು ಅನಗತ್ಯವಾಗಿ ನಷ್ಟಗೊಳಿಸುತ್ತಿದ್ದಾರೆ.
ಕರಾವಳಿಯ ಹಲವು ಆಸ್ಪತ್ರೆಗಳಲ್ಲಿ ಇಂದು ಖಾಯಿಲೆ ಪೀಡಿತರಾಗಿ ಕಳೆಯುತ್ತಿರುವವರಲ್ಲಿ ಮುಸ್ಲಿಮರ ಸಂಖ್ಯೆಯು ಅಧಿಕವಾಗಿದೆ.ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳು ಇಲ್ಲದಿರುವ ಕಾರಣಗಳಿಂದಲೋ,ಅಥವಾ ಬಡತನದ ಕಾರಣಗಳಿಂದಲೋ ಅಲ್ಲಿ ಉಪವಾಸ ಹಿಡಿಯಲು ಸಾಧ್ಯವಾಗದೆ ಕಷ್ಟಪಡುವವರೂ ಇದ್ದಾರೆ,ಒಂದು ದಿನದ ಮುಂಚೆ ತಂದಿರಿಸಿದ ಆಹಾರ ಹಳಸಿದ ಕಾರಣದಿಂದ, ಉಪವಾಸ ನೋಡದೆ ಅಸಹಾಯಕ ನೋಟ ಬೀರುವವರಿಗೆ ಉಪವಾಸ ಹಿಡಿಯಲು ಅನುಕೂಲವಾಗುವ ವ್ಯವಸ್ಥೆ ಮಾಡುವ ಪ್ರಯತ್ನ ಯಾರೂ ಮಾಡುವುದಿಲ್ಲ.

ಸರ್ವಶಕ್ತನು ನೀಡಿದ ಅನುಗ್ರಹ,ಸಂಪತ್ತಿನ ಹೆಸರಿನಲ್ಲಿ ಮೆರೆದಾಡಿ, ಬಡ ಜನತೆಯ ಮೇಲೆ ದ್ವೇಷವನ್ನು ಸಾಧಿಸಿ ಮೆರೆದಾಡುವಾಗ, ನನಗೆ ಸಂಪತ್ತು ನೀಡಿ ಪರೀಕ್ಷಿಸಿದ ಸರ್ವಶಕ್ತನಿಗೆ ನನ್ನನ್ನು ಬಡವನನ್ನಾಗಿ ಮಾಡಲು ಸಾಧ್ಯವಿದೆ ಅನ್ನುವ ವಾಸ್ತವ ಸತ್ಯವನ್ನು ಮಾತ್ರ ಯಾರೂ ಅರ್ಥೈಸುವುದಿಲ್ಲ.

ರಂಝಾನ್ ತಿಂಗಳು ನಮ್ಮ ಪಾಲಿಗೆ ಪರಿವರ್ತನೆಯ ತಿಂಗಳಾಗಿ ಬದಲಾಗಲಿ .ಮನದಲ್ಲಿ ಹುದುಗಿರುವ ದ್ವೇಷ,ಮತ್ಸರ, ಅಹಂಕಾರಗಳಿಗೆ ತಿಲಾಂಜಲಿಯಿಟ್ಟು ಪ್ರೀತಿಯಿಂದ ಜೀವಿಸುವಂತವರಾಗೋಣ.
ಧಾರವಾಹಿಯ ಹಿಂದೆ ಜೋತು ಬಿದ್ದು,ಅದರಲ್ಲಿ ಬರುವ ಕಾಲ್ಪಣಿಕ ದೃಶ್ಯಗಳಿಗೆ ಕಂಬನಿ ಮಿಡಿಯುವ ಕಣ್ಣುಗಳು ಪಾರತ್ರಿಕ ನೋಟವ ಬೀರಿ ಕಣ್ಣೀರು ಮಿಡಿಯುವಂತಾಗಲಿ.ಮನೆಯ ಪರಿಸರವನ್ನು ಒಳಿತಿನೆಡೆಗೆ ಆಕರ್ಷಿಸುವಂತೆ ಬದಲಾಯಿಸಿ,ರಂಜಾನ್ ನನ್ನು ಭಿಕ್ಷಾಟನೆಯ ತಿಂಗಳಾಗಿ ಕಾಣುವ ವರ್ಗವನ್ನು ತಡೆಯುವಂತವರಾಗಿ,ತಮ್ಮ ಝಕಾತನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಕಳೆದ ರಂಝಾನ್ ನಲ್ಲಿ ನಮ್ಮೊಂದಿಗಿದ್ದ ಅದೆಷ್ಟೋ ಮಂದಿ ಇಂದು ಆರಡಿ ಮಣ್ಣಿನಡಿಯಲ್ಲಿದ್ದಾರೆ.ಅವರಿಗೂ ನಿರೀಕ್ಷೆಗಳಿದ್ದಿರಬಹುದಿತ್ತು,ಬಣ್ಣ, ಬಣ್ಣದ ಆಸೆಗಳೂ ಇದ್ದಿರಬಹುದಿತ್ತು.ಆದರೆ,ಸರ್ವಶಕ್ತನ ಅನುಲ್ಲಂಘನೀಯವಾದ ವಿಧಿಯ ಮುಂದೆ ಅವರಿಗೆ ತಲೆ ಬಾಗಲೇ ಬೇಕಾಯಿತು.ನಮಗೂ ಈ ಜೀವನ ಶಾಶ್ವತವಲ್ಲ,ಮರಣ ಯಾವ ಸಮಯದಲ್ಲಿ,ಯಾವ ರೂಪದಲ್ಲಿ ಬಂದೊದಗುತ್ತೆ ಅಂತ ಯಾರಿಗೆ ತಾನೇ ಹೇಳಲು ಸಾಧ್ಯ..?
ಅಂತಹ ಅವಘಡ ಮರಣಗಳಿಂದ ನಮ್ಮನ್ನು ರಕ್ಷಿಸಲಿ.(ಆಮೀನ್ )
ಈ ರಂಝಾನ್ ನಮ್ಮ ಪಾಲಿನ ಪರಿವರ್ತನೆಯ ತಿಂಗಳನ್ನಾಗಿ ಸ್ವೀಕರಿಸುವವರು ನಾವುಗಳಾಗೋಣವಲ್ಲವೇ..?

*ಸ್ನೇಹಜೀವಿ ಅಡ್ಕ*