ಶುಕ್ರವಾರ, ಏಪ್ರಿಲ್ 28, 2017

ಸಿ.ಇ.ಟಿ ಮಾದರಿ ಪ್ರಶ್ನೆ ಪತ್ರಿಕೆ

ಆತ್ಮೀಯರೇ,

ಸಿ.ಇ.ಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2004 ರಿಂದ 2016 ರವರೆಗಿನ ಸಿ.ಇ.ಟಿ ವಿಷಯಗಳಾದ
1) ಫಿಜಿಕ್ಸ್
2) ಕೆಮೆಸ್ಟ್ರಿ
3) ಮ್ಯಾಥ್ಸ್
4) ಬಯಾಲಜಿ
ವಿಷಯಗಳ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ, ಉತ್ತರ ಸಹಿತದ  ಲಿಂಕ್ ಅನ್ನು ಶೇರ್ ಮಾಡಲಾಗಿದೆ. ದಯವಿಟ್ಟು ಹೆಚ್ಚು ಜನರಲ್ಲಿ ಈ ಲಿಂಕ್ ಶೇರ್ ಮಾಡಿ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಮಾಡಿ.
http://kea.kar.nic.in/qepaper.htm

ಪ್ರಶಾಂತತೆ

ನಿಂದನೆ ಆಪಾದನೆಯನ್ನು ಸ್ವಾಗತಿಸಿ ವ್ಯಕ್ತಿ ಇನ್ನಷ್ಟು ಪ್ರಶಾಂತತೆಯನ್ನು ಪಡೆಯುತ್ತಾನೆ..

ಜಪಾನಿನಲ್ಲಿ ನಡೆದ ಘಟನೆಯಿದು.
ಒಬ್ಬ ಬೌದ್ದ ಭಿಕ್ಕು ಆಗ ಎಲ್ಲಾ ಪ್ರಜೆಗಳಿಗೂ ತುಂಬಾ ಪ್ರೀತಿ ಪಾತ್ರನಾಗಿದ್ದ. ಭಿಕ್ಕುವಿನ ಬೋಧನೆ ಕೇಳಲು ಹಲವಾರು ಜನರು ಸದಾ ಬರುತ್ತಿದ್ದರು. ಭಿಕ್ಕುವಿನ ಪಕ್ಕದ ಮನೆಯಲ್ಲೇ ಒಂದು ಕುಟುಂಬ ವಾಸವಾಗಿತ್ತು. ಗಂಡ, ಹೆಂಡತಿ ಮತ್ತು ಹದಿಹರೆಯದ ಮಗಳು ಇದ್ದರು. ಇವರೂ ಭಿಕ್ಕುವಿನ ಬಳಿ ಸದಾ ಬೋಧನೆ ಕೇಳಲು ಹೋಗುತ್ತಿದ್ದರು.

    ಒಮ್ಮೆ ಈ ಕುಟುಂಬದ ಹದಿಹರೆಯದ ಮಗಳು ಗರ್ಭವತಿ ಆಗುತ್ತಾಳೆ. ಇವರ ತಂದೆ ತಾಯಿಗೆ ವಿಷಯ ತಿಳಿದು ಇದಕ್ಕೆ ಕಾರಣ ಯಾರೆಂದು ಚೆನ್ನಾಗಿ ಥಳಿಸಿ ಕೇಳುತ್ತಾರೆ. ಭಯಭೀತಳಾದ ಮಗಳು " ಆ ಬೌದ್ದ ಭಿಕ್ಕುವೇ ಕಾರಣ " ಎಂದು ಹೇಳುತ್ತಾಳೆ.
ಇದನ್ನು ಕೇಳಿದ್ದೆ ತಡ ಆ ಇಬ್ಬರೂ ಇಡೀ ಊರನ್ನು ಕರೆದು,  ಮಾಧ್ಯಮಗಳನ್ನು ಕರೆದು ಭಿಕ್ಕುವಿನ ಬಳಿ ಹೋಗುತ್ತಾರೆ. ಭಿಕ್ಕು ಧ್ಯಾನದಲ್ಲಿ ಕುಳಿತಿರುತ್ತಾನೆ. ಆಗ ಆ ದಂಪತಿಗಳು ಭಿಕ್ಕುವನ್ನು ಕುರಿತು " ನಮ್ಮ ಮಗಳ ಜೀವನ ನಾಶ ಮಾಡಿದ್ದು ನೀನೇ ಈಗ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ , ಇನ್ನು ಮುಂದೆ ನೀನೇ ಆ ಮಗುವನ್ನು ಸಾಕಬೇಕು " ಎಂದು ಹೇಳುತ್ತಾರೆ.
ಅದಕ್ಕೆ ಭಿಕ್ಕು ಒಂದು ಚೂರೂ ವಿಚಲಿತನಾಗದೇ " ಹೌದಾ,  ಸರಿ " ಎಂದು ಹೇಳುತ್ತಾನೆ. ಮಾಧ್ಯಮಗಳೆಲ್ಲಾ ಆ ಭಿಕ್ಕುವನ್ನು ಕಾಮಿಯೆಂದು,  ನೀಚನೆಂದು ಹೇಳಿ ಬರೆಯುತ್ತಾರೆ. ಅಂದಿನಿಂದ ಭಿಕ್ಕುವಿನ ಬಳಿ ಹೋಗುವುದನ್ನು ನಿಲ್ಲಿಸುತ್ತಾರೆ.
ಸ್ವಲ್ಪ ದಿನಗಳ ನಂತರ ದಂಪತಿಗಳ ಮಗಳಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸುತ್ತದೆ. ಆ ಮಗುವನ್ನು ತಂದು ಭಿಕ್ಕುವಿಗೆ ಒಪ್ಪಿಸಿ ನೀನೇ ಸಾಕಬೇಕೆಂದು ಹೇಳುತ್ತಾರೆ. ಆಗಲೂ ಭಿಕ್ಕು ಒಂದೇ ಮಾತು ಹೇಳುತ್ತಾನೆ " ಹೌದಾ,  ಸರಿ ".
ಆ ಎಳೆಯ ಮಗುವನ್ನು ಪ್ರೀತಿಯಿಂದ ಎತ್ತಿಕೊಂಡು ಸುಮಾರು ದಿನಗಳು ಅದರ ಲಾಲನೆ,  ಪಾಲನೆ ಮಾಡುತ್ತಾ ಬೆಳೆಸುತ್ತಿರುತ್ತಾನೆ. ಕೊನೆಗೆ ಒಂದು ದಿನ ಮಗುವಿನ ತಾಯಿಯಾದ ಆ ಹದಿಹರೆಯದ ಹೆಣ್ಣು ಮಗಳು ಯಾರೋ ಒಬ್ಬ ಯುವಕನ್ನು ಕರೆದುಕೊಂಡು ಬರುತ್ತಾಳೆ.  ಭಿಕ್ಕು ಮತ್ತು ಆ ದಂಪತಿಗಳ ಬಳಿ ಆ ಯುವಕನ್ನು ಕರೆತಂದು ಹೇಳುತ್ತಾಳೆ " ಓ ಮಹಾ ಭಿಕ್ಕುವೇ ನನ್ನನ್ನು ಕ್ಷಮಿಸಿ, ನಾನು ಮಾಡಿದ ತಪ್ಪಿಗೆ ನೀವು ಶಿಕ್ಷೆ ಅನುಭವಿಸುತ್ತಿದ್ದೀರ. ಈ ಯುವಕನೇ ಆ ಮಗುವಿನ ತಂದೆ ನಿಜವಾದ ತಂದೆ. ನಮ್ಮ ತಪ್ಪಿನ ಅರಿವಾಗಿದೆ ದಯವಿಟ್ಟು ನಮ್ಮ ಮಗುವನ್ನು ಹಿಂದಿರುಗಿಸಿ " ಎಂದು ಗೋಗರೆಯುತ್ತಾಳೆ. ಭಿಕ್ಕು ಏನೂ ಮಾತಾಡದೆ ಆ ಮಗುವನ್ನು ಅವರಿಗೆ ಒಪ್ಪಿಸುತ್ತಾನೆ. ಆ ದಂಪತಿಗಳೂ ಭಿಕ್ಕುವಿನ ಪಾದಕ್ಕೆರಗಿ ಕ್ಷಮೆ ಕೇಳುತ್ತಾರೆ.
ನಂತರ ಊರಿನ ಜನರು, ಮಾದ್ಯಮಗಳು ಬಂದು " ಭಿಕ್ಕುಗಳೇ ನೀವು ನಿರಪರಾಧಿ " ಎಂದು ಹೇಳುತ್ತಾರೆ.
ಆಗಲೂ ಆ ಭಿಕ್ಕು ಒಂದೇ ಮಾತು ಹೇಳುತ್ತಾರೆ " ಹೌದಾ,  ಸರಿ " ಎಂದು.
ಮೊದಲಿಗಿಂತಲೂ ಹೆಚ್ಚು ಜನರು ಭಿಕ್ಕುವಿನ ಬಳಿ ಬರಲು ಪ್ರಾರಂಭಿಸುತ್ತಾರೆ. ಮೊದಲಿಗಿಂತಲೂ ಹೆಚ್ಚು ಪ್ರಖ್ಯಾತರಾಗುತ್ತಾರೆ. ಆದರೆ ಭಿಕ್ಕು ಮಾತ್ರ ಮೊದಲು ಹೇಗಿದ್ದನೋ ಅದೇ ರೀತಿ ಇರುತ್ತಾನೆ.

ಮಿತ್ರರೇ ಒಂದೇ ಒಂದು ಸಣ್ಣ ಆಪಾದನೆಯನ್ನೂ ಸ್ವಾಗತಿಸಲು ಸಾಧ್ಯವಾಗದೇ over react ಆಗುವ ನಾವುಗಳು ಒಂದು ವಿಷಯ ನೆನಪಿಡಬೇಕು. ಆಪಾದನೆಗಳು ಎಷ್ಟೇ ಬರಲಿ ನಾವುಗಳು ನಮ್ಮ ಮಾರ್ಗದಲ್ಲಿ ಪ್ರಾಮಾಣಿಕರಾಗಿ ಇರುವವರೆಗೂ ಯಾವ ಆಪಾದನೆಗಳೂ ನಮ್ಮನ್ನು ಜಯಿಸಲು ಸಾಧ್ಯವಾಗುವುದಿಲ್ಲ.

ಜನಾ ನಾಗಪ್ಪ..

ಬುಧವಾರ, ಏಪ್ರಿಲ್ 26, 2017

ಸಮಾಜ

ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾ೦ತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ.
ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು,
ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ.
ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊ೦ಡ ವ್ಯಕ್ತಿಯ ಮನೆಯವರು ಆತನ,
ಎಲ್ಲಾ ಅ೦ಗಾ೦ಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ.
ಅ೦ಗವಿಕಲ ಹುಡುಗಿಯನ್ನು ಪ್ರೀತಿಸಿ ಮದುವೆಯಾದ,
ವಿದ್ಯಾವಂತ ಯುವಕನೊಬ್ಬ ಆಕೆಗೆ ಸು೦ದರ ಬದುಕು ನೀಡುತ್ತಾನೆ.
ಅಧಿಕಾರದ ಅನೇಕ ಹ೦ತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು,
ಈಗಲೂ ಒ೦ದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು ,
ಈಗಲೂ ಸರ್ಕಾರಿ ಬಸ್ಸುಗಳಲ್ಲೆ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ.
ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು,
ಬಹಳ ಸರಳವಾಗಿ ಮ೦ತ್ರ -ಮಾ೦ಗಲ್ಯದ ರೀತಿಯಲ್ಲಿ ಮಾಡಿದರು.
ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು,
ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ.
ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು ,
ಪರೋಕ್ಷವಾಗಿಯೂ ಲ೦ಚ ಮುಟ್ಟದ ಶುದ್ಧ ಹಸ್ತರು ಎ೦ದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ.
ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈ ಸಮಾಜದಲ್ಲಿಯೇ.
ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು.
ನಮ್ಮ ಆಶಯ ಇಡೀ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು.
ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು.
ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು.
ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ,
ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ,
ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ.
ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ
ವಿವೇಕಾನಂದ.ಹೆಚ್.ಕೆ.

ಮಂಗಳವಾರ, ಏಪ್ರಿಲ್ 18, 2017

ಮುಸ್ಲಿಮರು

ಮುಸ್ಲಿಮರು ಅತೀ ಹೆಚ್ಚು ನೀರು ಪೋಲು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮಸೀದಿಗಳ ವುಝೂ ಖಾನಗಳಿಗೆ ಮಹಾನಗರಪಾಲಿಕೆ ಬೇಸಿಗೆಯಲ್ಲಿ ಬೀಗ ಜಡಿದರೆ ತಪ್ಪು ಇಸ್ಲಾಮಿನದ್ದಲ್ಲ ಬದಲಾಗಿ ಮುಸ್ಲಿಮರದ್ದು"

"ತುಂಬಿ ಹರಿಯುವ ನದಿಯಿಂದಾದರೂ ಅವಶ್ಯಕತೆಗಿಂತ ಹೆಚ್ಚು ನೀರು ಉಪಯೋಗಿಸಬೇಡಿ ವ್ಯರ್ಥಗೊಳಿಸಬೇಡಿ" ಎಂಬ ಇಸ್ಲಾಮಿನ ಬೋಧನೆಗಳು ಯಾವುದೇ ಮಹಾನಗರ ಪಾಲಿಕೆಯ ನೀರು ನಿರ್ವಹಣೆ ಮಂಡಳಿಯ ಘೋಷವಾಕ್ಯವಾಗಲು ಯೋಗ್ಯವಾದದ ಬೋಧನೆಗಳು ನಿಜ. ಆದರೆ ಹಾಗೆ ಎಲ್ಲೂ ಆಗುವುದಿಲ್ಲ ,ಆಗಲಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರು ತಮ್ಮಲ್ಲಿಯೇ ಕೇಳಿಕೊಳ್ಳದ ವರೆಗೆ, ಮುಸ್ಲಿಮರು ಇಸ್ಲಾಮನ್ನು ಅರ್ಥೈಸಿಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ ಎಂಬುವುದು ಅವರಿಗೆ ಅರ್ಥವಾಗುವುದೇ ಇಲ್ಲ. 
    ಇದೊಂದು ಸ್ವಲ್ಪ ಕಹಿ ಪೀಠಿಕೆ, ಮುಂದುವರಿದರೆ ಮತ್ತೂ ಕಹಿ ಅನ್ನಿಸಬಹುದಾದ ವಿಮರ್ಷೆಗಳು. ಹಾಗಂದ ಮಾತ್ರಕ್ಕ ವಿಚಾರಗಳನ್ನು ಮಂಡಿಸದೇ ಉಳಿಯಲು, ಹೌದು ಬಸವ ಹೌದು ,ಅಲ್ಲ ಬಸವ ಅಲ್ಲ ಎಂಬುವುದು ಇಸ್ಲಾಂ ಅಲ್ಲ. ಅದು ಪ್ರಶ್ನೆಗಳ ,ವಿಮರ್ಷೆಗಳ, ವಿಚಾರವಂತಿಕೆಯ, ಮೌಢ್ಯಗಳ, ಶೋಷಣೆಗಳ ವಿರುದ್ಧ ಸೆಟೆದು ನಿಂತ ಒಂದು ಪ್ರಜಾಪ್ರಭುತ್ವ ಯಾ ಜೀವನ ಕ್ರಮ. ಹಾಗಾಗಿಯೇ ಇಲ್ಲಿ ಮೌಲ್ವಿಗಳಿಗೆ ಪ್ರಥಮ ಸಾಲು, ವ್ಯಾಪಾರಿಗೆ ನಂತರದ ಸಾಲು, ಕೂಲಿಯಾಳಿಗೆ ಕೊನೆಯ ಸಾಲು ಎಂಬ ವಿಂಗಡನೆಗಳು ಜಗತ್ತಿನ ಯಾವ ಮಸೀದಿಗಳ ಒಳಗೆ ನುಸುಳಲಿಲ್ಲ.

  ಆದರೆ..‌ ಭಾರತದ ಮಸೀದಿಯ ಹೊರಗಡೆ  ಮುಸ್ಲಿಮರು ಅರಿವಿಲ್ಲದೆಯೇ ಜಾತಿವಾದಿಗಳಾಗುತ್ತಾರೆ. ಮದುವೆ ಸಂಬಂಧಗಳು ಆಯಾ ಅಂತಸ್ತಿನವರ ನಡುವೆಯೇ ಕುದುರುವುದು, ಮದುವೆ ಮನೆಗಳಲ್ಲಿ ವಿಐಪಿ ಊಟಗಳು ಪ್ರತ್ಯೇಕ ಆರ್ಡರ್ ಆಗುವುದು,ಮೌಲ್ವಿಗಳಿಗೆ ಪ್ರತ್ಯೇಕ ಊಟದ ಸುಪ್ರಗಳು ಸಿದ್ಧಗೊಳ್ಳುವುದು, ದಾನ ಮಾಡುವವನು ಮನೆಯ ಮುಂದೆ ರಾಶಿ ಹಾಕಿ ಜನರನ್ನು ಕಾಲಡಿಗೆ ಕರೆಸಿ ಬೋರ್ಡು ತಗುಲಿಸಿ ಸೆಲ್ಫಿ ಕ್ಲಿಕ್ಕಿಸಿ ಕೊಡುವುದು, ಯಾವುದೂ ಇಸ್ಲಾಂ ಅಲ್ಲವೇ ಅಲ್ಲ. ಇಸ್ಲಾಂನ ಆದರ್ಶಗಳನ್ನು ನುಚ್ಚು ನೂರುವ ಮಾಡುವ ಕ್ರತ್ಯಗಳಷ್ಟೇ ಅವುಗಳು. ಇದುವೇ ಭಾರತದ ಜಾತೀಯತೆಯ ಚರಂಡಿ ನಮ್ಮ ಅಂತರ್ಯದಲ್ಲಿ ಹರಿಯುತ್ತಿರುವುದರ ಬಗೆ. ಇದು ಒಪ್ಪಿಕೊಳ್ಳಲು ಅತ್ಯಂತ ಮುಜುಗರವಾಗುವ, ಹಸಿರು ಪಟ್ಟಿ ನೆತ್ತಿಗೆ ಕಟ್ಟಿಕೊಳ್ಳುವ ಮಸ್ಲಿಂ ಯುವಕರಿಗಂತೂ ಉಸಿರುಗಟ್ಟಿಸುವ ವಿಚಾರವೇ ನಿಜ‌.ಆದರೆ ಮೂಲದಲ್ಲಿ ಹಿಂದೂಗಳಾದ ನಾವು ಇಸ್ಲಾಮಿನ ಮೂಸೆಯಿಂದ ಒಂದು ಹನಿಯಷ್ಟೇ ಚಿಮುಕಿಸಿ ಪರಮ ಪವಿತ್ರರು ಎಂದು ಘೋಷಿಸಿಕೊಳ್ಳುತ್ತಾ, ಇಸ್ಲಾಮಿನ ಆದರ್ಶಗಳನ್ನು ಪರಿಪೂರ್ಣ ಜೀವಕ್ರಮವಾಗಿ ಅಳವಡಿಸಿಕೊಳ್ಳಲು ವಿಫಲವಾದ ನಮ್ಮ ಕೊರತೆಯನ್ನು  ಸುಮ್ಮನೇ ಮುಚ್ಚಿಟ್ಟ ಕಾರಣಕ್ಕೇ ಬಾಬಾ ಸಾಹೇಬರಂತಹ ಜ್ಙಾನದ ಬಂಢಾರಗಳೇ ಆದ ವ್ಯಕ್ತಿಗಳಿಗೂ ಇಸ್ಲಾಮನ್ನು ಅರ್ಥೈಸಿಕೊಡಲು ಭಾರತದ ಮುಸ್ಲಿಮರಿಂದ ಸಾಧ್ಯವಾಗಲಿಲ್ಲ‌. ಅದು ಇಲ್ಲಿನ ಮುಸ್ಲಿಮರ ಸೋಲು ಹೊರತು ಇಸ್ಲಾಮಿನ ಸೋಲಲ್ಲ. ಮುಸ್ಲಿಮರು ಇದನ್ನು ಒಪ್ಪಿಕೊಳ್ಳುವಷ್ಟು ವಿಮರ್ಷೆಗಳಿಗೆ ತೆರೆದುಕೊಂಡಿದ್ದಿದ್ದರೆ, ಜಾತಿಕಾರಣಕ್ಕಾಗಿ ಹೀನಾಯವಾಗಿ ಶೋಷಣೆಗೊಳಗಾದ ಅತಿ ದೊಡ್ಡ ಸಮೂಹವೊಂದು ಇಲ್ಲಾ ನಮ್ಮದೇ ಸಹೋದರರು ಇಂದು ಸ್ವಾಭಿಮಾನದ ಬದುಕು ಕಟ್ಡಿಕೊಳ್ಳುತ್ತಿದ್ದರು. ಆದರೆ ಅಂತಹ ಅವಕಾಶವನ್ನು ನಾವು ನಮಗೇ ಸ್ವತಃ ಬಳಸಿಕೊಂಡಿಲ್ಲ.ಬದಲಾಗಿ ನಾವುಗಳೇ ಸಾಚಾರ್ ಸಮಿತಿಯ ವರದಿಯ ಅನುಷ್ಟಾನದ ಕನವರಿಕೆಯಲ್ಲಿ ಬೆನ್ನು ಬಾಗಿಸಿ ನಿಂತಿದ್ದೇವೆ.
     ಸತ್ಯದಲ್ಲಿ ಇಸ್ಲಾಂ ಅನುಸರಿಸಲು ಬಹಳವೇ ಸುಲಭವಾದ ಧರ್ಮವೇನೂ ಅಲ್ಲ.  "ನಾಳೆ ಲೋಕ ಪ್ರಳಯವಾಗುತ್ತದೆ ಎಂದು ತಿಖಳಿದಿದ್ದರೂ ಇವತ್ತು ಗಿಡಗಳನ್ನು ನೆಡು"  "ಅನಾಥರನ್ನು ನಿರ್ಗತಿಕರನ್ನು ದೂರ ತಳ್ಳುವವರು ಇಸ್ಲಾಮನ್ನು ಸುಳ್ಳು ಮಾಡಿದವರು" "ಯಾರ ಕೈ ಮತ್ತು ಬಾಯಿಯಿಂದ ನೆರೆಹೊರೆಯವರು ಸುರಕ್ಷಿತವಾಗಿಲ್ಲವೋ ಅವನು ಮುಸ್ಲಿಮನಲ್ಲ" "ನಿಮ್ಮ ಸಂಪತ್ತಿನಿಂದ ಬಡವರ ಪಾಲನ್ನು ನ್ಯಾಯಯುತವಾಗಿ ಎತ್ತಿಕೊಡಿರಿ" "ಜನರ ನಡುವೆ ಅಕ್ರಮವೆಸಗದಿರಿ, ಅಕ್ರಮ ಎಸಗುವವರನ್ನು ದೇವನು ಇಷ್ಟಪಡುವುದಿಲ್ಲ" "ಜನರಿಗೆ ವ್ಯವಹಾರ ತೂಕ ತಕ್ಕಡಿಗಳಲ್ಲಿ ವಂಚಿಸಬೇಡಿರಿ" "ಯುದ್ಧಗಳಲ್ಲಿ ಮಹಿಳೆಯರ ಮಕ್ಕಳ ವ್ರಧ್ದರ ಮೇಲೆ ಅಕ್ರಮಿಸದಿರಿ, ಇತರ ಧರ್ಮದ ಧರ್ಮಗುರುಗಳ ಮೇಲೆ, ಧಾರ್ಮಿಕ ಕೇಂದ್ರಗಳ ಮೇಲೆ ಆಕ್ರಮಣಗೈಯದಿರಿ"  "ಕರಿಯನಿಗಿಂತ ಬಿಳಿಯನು ಶ್ರೇಷ್ಟನಲ್ಲ, ಬಿಳಿಯನಿಗಿಂತ ಕರಿಯನು ಶ್ರೇಷ್ಠನಲ್ಲ, ಶ್ರೇಷ್ಠತೆಯು ಧರ್ಮನಿಷ್ಠೆ ಹೊಂದುವುದಾಗಿದೆ"  "ಆಹಾರ ಅನ್ನ ನೀರನ್ನು ದುಂದುವೆಚ್ಚದಿಂದ ವ್ಯರ್ಥಗೊಳಿಸಬೇಡಿರಿ" "ದಾರಿಯಲ್ಲಿರುವ ತೊಡಕುಗಳನ್ನು ನೀಗಿಸದೆ ಮುಂದೆ ಸಾಗಬೇಡಿರಿ"  ಇಂತಹ ಬೋಧನೆಗಳನ್ನು ಚಾಚೂ ತಪ್ಪದೆ ಪಾಲಿಸುವುದು ಸಾಧ್ಯವಾಗಲು ಮುಸ್ಲಿಮನೆಂಬ ಹೆಸರು ಹೊತ್ತಷ್ಟೇ ಸುಲಭವಲ್ಲ. ಅದು ಅದಮ್ಯ ಸಹನೆಯನ್ನು ಬೇಡುತ್ತದೆ. ಶರಣಾಗತಿಯ ಮನೋಭಾವವನ್ನು ಬೇಡುತ್ತದೆ. ಎಲ್ಲಾ ಅನಾಚಾರ ಅನ್ಯಾಯ ಮಿಥ್ಯೆ ಕೆಡುಕುಗಳಿಗೆ ಎದುರಾಗಿ ಅಲ್ಲಾಹನಿಗೆ ಶರಣಾಗುವ ಅತೀವ ವಿನಯ ಬೇಡುತ್ತದೆ. ಹಾಗಾಗಿ ಇಸ್ಲಾಂ ಅಹಂಕಾರವಿರುವಲ್ಲಿ ನೆಲೆ ನಿಲ್ಲುವುದಿಲ್ಲ. ಅಹಂಕಾರವೆಂದರೆ ವುಝೂ ಮಾಡುವ ಮುಂಚೆ ಬಾಯಿ ತೊಳೆಯುವ ಸಮಯದಲ್ಲಿ ತೆರೆದಿಟ್ಟು ಪೋಲಾಗಿಸುವ ನೀರೂ ಆಗಿರಬಹುದು.  ಒಂದು ಹನಿ ನೀರನ್ನೂ ವ್ಯರ್ಥಗೊಳಿಸಬಾರದು ಎಂಬುವುದಾಗಿದೆ ಅಲ್ಲಾಹನ ಆಜ್ಙೆ ಎಂದು ಸಂಪೂರ್ಣವಾಗಿ ಒಪ್ಪಿಕೊಳ್ಳುವ ವಿನಯ ಇರುವವರಿಗೆ ಆ ಅಹಂಕಾರ ಹತ್ತಿರ ಸುಳಿಯುವುದಿಲ್ಲ. ಅಲ್ಲಾಹನ್ನು ಅರ್ಧವೇ ತಿಳಿದುಕೊಂಡು  ಕಾಲುಭಾಗದಷ್ಟು ಅನುಸರಿಸುವ ಮುಸ್ಲಿಮರು ಇಸ್ಲಾಮಿನ ಪ್ರತಿನಿಧಿಗಳಾಗಿ ಬಿಟ್ಟರೆ ಇಸ್ಲಾಂ ಮನುಷ್ಯ ಸಂಕುಲದ ಒಳಿತು ಮತ್ತು ವಿಮೋಚನೆಯನ್ನು ಒಳಗೊಂಡಿದೆ ಎಂಬ ಸಂದೇಶವನ್ನು ತಲುಪಿಸುವುದು ಸುಲಭಸಾಧ್ಯವಲ್ಲ.
       ಒಂದು ಹಂತಕ್ಕೆ, ಮುಸ್ಲಿಮರು ಇಸ್ಲಾಂನ ಬೋಧನೆಗಳನ್ನು ಪ್ರಾಮಾಣಿಕತೆಯಿಂದ ಪಾಲಿಸಿದ್ದೇ ಆದಲ್ಲಿ, ಕನಿಷ್ಟ ಹದಿನೆಂಟು ಕೋಟಿ ಜನತೆಯಾದರೂ ದೇಶಕ್ಕೆ ನೆಮ್ಮದಿ ನೀಡುವ ಪ್ರಜೆಗಳಿರುತ್ತಿದ್ದರು... ಮೋಸ ಮಾಡದ ವ್ಯಾಪಾರಿ, ವ್ಯಭಿಚಾರವೆಸಗದ ಯುವಕ, ಕಳ್ಳತನ ಕೊಲೆ ಸುಲಿಗೆ ಮಾಡದ ಯುವಸಮೂಹ, ಮದ್ಯ ಮಾದಕ ದ್ರವ್ಯಗಳ ದಾಸರಾಗದ ವಿಧ್ಯಾರ್ಥಿ ಸಮೂಹ, ಅನ್ಯಾಯವೆಸಗದ ಧನಿಕ, ಅನಾಥರನ್ನು ಸಲಹುವ ಮಹಿಳೆಯರು, ಕೆಡುಕನ್ನು ಪ್ರಚೋದಿಸದ ಗ್ರಹಸ್ಥ ಹೀಗೆ ಹಲವಾರು ವಿಧಗಳಲ್ಲಿ ದೇಶಕ್ಕೆ ನೆಮ್ಮದಿ ನೀಡುವ ಒಂದು ಜನವಿಭಾಗ ಸಿದ್ಧವಾಗುತ್ತಿತ್ತು.. ಸಿಧ್ದವಾಗಬೇಕಿತ್ತು. ಆದರೆ ಗಂಗೆಯ ಪ್ರವಾಹದೊಟ್ಟಿಗೆ ಹರಿದ ಭಾರತದ ಮುಸ್ಲಿಮರು ತಮ್ಮ ಮೂಲ ನೆಲೆಗಳಿಂದ ಸಶಕ್ತವಾಗಿ ಹೊರಬಂದಿದ್ದರೆ ಹಣೆಗೆ ತಿಲಕ ಇಟ್ಟವರು ನಮ್ಮ ಜನ ಅಲ್ಲ ಎಂದು ಹೇಳುವು ಮೂರ್ಖತನಗಳಲ್ಲಿ ಮಾತ್ರವೇ ಹೊರತು, ಇಸ್ಲಾಂನ ಸೌಂದರ್ಯದಿಂದ ಬಹಳ ದೂರದ ಅಂತರವನ್ನು ಕಾಯ್ದುಕೊಂಡಿದ್ದಾರೆ... ಇಸ್ಲಾಂ, ಅರ್ಧ ರಾತ್ರಿಯಲ್ಲಿ ಹಸಿದವರನ್ನು ಹುಡುಕಿ ನಡೆದ ಖಲೀಫಾ ಉಮರ್ ರವರ ಆಡಳಿತ ಜೀವನ ಕ್ರಮವನ್ನು ಪ್ರತಿನಿಧಿಸುತ್ತದೆಯೇ ಹೊರತು ಇಂದಿನ ಸೌದಿ ದೊರೆಗಳನ್ನಲ್ಲ‌. ಇಸ್ಲಾಂ ಶೋಷಣೆಗೊಳಗಾದವರ ವಿಮೋಚನೆಗಾಗಿ ಇರುವ ಧರ್ಮವಲ್ಲ ಎಂದು ಹೇಳುವ ಮುಸ್ಲಿಮರು ತಮ್ಮ ಹ್ರದಯವನ್ನು ವಿಮರ್ಷೆಗೊಳಪಡಿಸಿಯೇ ತೀರಬೇಕು‌. ಧರ್ಮವೆಂದರೆ ಅನಾಥರನ್ನು ನಿರ್ಗತಿಕರನ್ನು ಶೋಷಿತರನ್ನು ಪೋಷಿಸುವುದು, ಮೇಲೆತ್ತುವುದು ಎಂದು ಬೋಧಿಸಿದ ಧರ್ಮವೊಂದರ ಅನುಯಾಯಿಗಳಿಗೆ ಅಂತಹ ಕನಿಷ್ಠ ವಿವೇಚನೆಯಾದರೂ ಇರಲೇಬೇಕು
     (ಮುಂದುವರಿಯುವುದು)

KSRTC ಪ್ರವಾಸಿಗರಿಗೆ ವಾಹನ ಬಾಡಿಗೆಗೆ ಇದೆ.

ಪ್ರವಾಸ ಮುಂತಾದವುಗಳಿಗೆ ಹೋಗುವಾಗ ಪ್ರವಾಸಿಗಳ ಸಂಖ್ಯೆಗನುಗುಣವಾಗಿ ವಾಹನಗಳನ್ನು ಬಾಡಿಗೆಗೆ ಪಡೆಯುತ್ತೇವೆ.
ಇಂತಹವುಗಳಿಗಾಗಿ ಖಾಸಗಿ ಟೂರಿಸ್ಟ್ ವ್ಯಾನು, ಬಸ್ಸುಗಳ ಜೊತೆಗೆ ಸರಕಾರಿ ಸ್ವಾಮ್ಯದ KSRTC ಕೂಡ ವಾಹನಗಳನ್ನು ಒದಗಿಸುತ್ತದೆ. ಇಲ್ಲಿ ಖಾಸಗಿಯವರಿಗೂ KSRTC ಯವರಿಗೂ ವ್ಯತ್ಯಾಸವೆಂದರೆ KSRTC ಯವರದ್ದು ಸಂಪೂರ್ಣ ಪಾರದರ್ಶಕ ಹಾಗೂ ಜನಸ್ನೇಹಿ ಮತ್ತು ಒಂದಂಶ ಹಣ ಸರಕಾರಕ್ಕೂ ಸಲ್ಲುತ್ತದೆ ಮತ್ತು ಆ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ.
55 ಜನರು ಪ್ರಯಾಣಿಸಬಹುದಾದ ಕರ್ನಾಟಕ ಸಾರಿಗೆ ಬಸ್ಸಿನ ದರ ಪ್ರತಿ ಕಿಲೋಮೀಟರ್ ಗೆ 32 ರೂಪಾಯಿಗಳು ಮತ್ತು ದಿನವೊಂದಕ್ಕೆ ಕನಿಷ್ಠ 300 ಕಿಲೋಮೀಟರ್ ಗಳು. ಅಂದರೆ ದಿನವೊಂದರಲ್ಲಿ ನೀವು 300 ಕಿ.ಮೀ. ಗಿಂತ ಕಡಿಮೆ ಎಷ್ಟೇ ಪ್ರಯಾಣಿಸಿದರೂ ಪಾವತಿಸಬೇಕಾದ್ದು 9600 ರೂಪೈಗಳು. ಅದಕ್ಕಿಂತ ಹೆಚ್ಚಿನ ಪ್ರತಿ ಕಿ.ಮೀ. ಗಳಿಗೆ ತಲಾ 32 ರೂ. ಗಳಂತೆ ಪಾವತಿಸಬೇಕು. ಉದಾಹರಣೆಗೆ ನೀವು 305 ಕಿ.ಮೀ ಪ್ರಯಾಣಿಸಿದ್ದರೆ 305*32=9760 ರೂ. ಗಳನ್ನು ಪಾವತಿಸಬೇಕು. ನಿಮಗಿಷ್ಟವಾದ ದಾರಿಯಿಂದ ಪ್ರಯಾಣಿಸಬಹುದು. ಅದು ನಿಮ್ಮ ಆಯ್ಕೆ. ಒಂದರ್ಥದಲ್ಲಿ ಪ್ರವಾಸದ ಅಂತ್ಯದ ವರೆಗೂ ಆ ವಾಹನಕ್ಕೆ ನೀವೇ ಮಾಲಕರಾಗಿರುತ್ತೀರಿ..
.
ಚಾಲಕನು ಕೂಡ ಸರಕಾರಿ ಉದ್ಯೋಗಿಯಾಗಿರುವುದರಿಂದ ಸಭ್ಯನಾಗಿರುತ್ತಾನೆ. ಚಾಲಕನಿಗೆ ಯಾವುದೇ ಹೆಚ್ಚುವರಿ TIPS ಕೊಡಬೇಕಾಗಿಲ್ಲ. ನಿಮಗಿಷ್ಟವಿದ್ದರೆ ಕೊಡಬಹುದು ಇಲ್ಲವಾದರೆ ಬೇಡ. ಅವನೆಂದೂ ನಿಮ್ಮಿಂದ ಬಲಾತ್ಕಾರವಾಗಿ TIPS ಕಿತ್ತುಕೊಳ್ಳುವುದಿಲ್ಲ..
.
ಈಗ ಖಾಸಗಿ ಟೂರಿಸ್ಟ್ ವ್ಯಾನ್ ಗಳ ಬಗ್ಗೆ ತಿಳಿದುಕೊಳ್ಳೋಣ.
.
ಖಾಸಗಿ ಟೂರಿಸ್ಟ್ ವ್ಯಾನ್ ಗಳ ಆಸನ ಸಾಮರ್ಥ್ಯ 21 ಸೀಟುಗಳ. ಇದು ಮೇಲೆ ಹೇಳಿದ 55 ಸೀಟುಗಳ KSRTC ಬಸ್ಸುಗಳಿಗಿಂತ ಅರ್ಧಕ್ಕಿಂತಲೂ ಕಡಿಮೆ. ಇವುಗಳ ದರ ಪ್ರವಾಸಕ್ಕೆ ಮೊದಲು ಪ್ರತೀ ಕಿ.ಮೀ. ಗೆ 20 ರೂ. ಗಳು. ಆದರೆ ಅರ್ಧ ದಾರಿ ಕ್ರಮಿಸುತ್ತಲೇ ಚಾಲಕನು ರೌಡಿಸಂ ಪ್ರಾರಂಭಿಸುತ್ತಾನೆ. ನಾವು ಕಿ.ಮೀ. ಲೆಕ್ಕದಲ್ಲಿ ಬರುವುದೇ ಇಲ್ಲ. ಒಟ್ಟು ಪ್ರವಾಸಕ್ಕೆ ಇಷ್ಟು ಅಂತ ನಿಗದಿಪಡಿಸಿಕೊಂಡು ಹೋಗುವುದು ಅಂತಾನೆ. ಅರ್ಧಕ್ಕೆ ಬಂದಾಗಿದೆ. ಇನ್ನು ಜಗಳ ಬೇಡ ಎಂಬ ಕಾರಣಕ್ಕೆ ನೀವು ಒಪ್ಪಿಕೊಳ್ಳುತ್ತೀರಿ..
ಇನ್ನೂ ಮುಂದೆ ಹೋಗುತ್ತಲೇ, ರಸ್ತೆ ಚೆನ್ನಾಗಿಲ್ಲ, ರೇಟು ಜಾಸ್ತಿಯಾಗುತ್ತದೆ ಎನ್ನುತ್ತಾನೆ. 200 ಕಿ.ಮೀ. ಕ್ರಮಿಸುತ್ತಲೇ ನಿಮ್ಮದು 350 ಕಿ.ಮೀ  ಮುಗಿಯಿತು. ಇನ್ನು EXTRA CHARGE ಅಂತಾನೆ. ಅಂತಿಮವಾಗಿ ನಿಮ್ಮ 300 ಕಿ.ಮೀ ಗಳ ಪ್ರವಾಸವು ಅವನ ಲೆಕ್ಕದಲ್ಲಿ 500 ಕಿ.ಮೀ. ದಾಟಿರುತ್ತದೆ. ಜೊತೆಗೆ ಬಲಾತ್ಕಾರದಿಂದ TIPS ವಸೂಲಿ ಮಾಡುತ್ತಾನೆ.
ನಿಮ್ನ ಪ್ರವಾಸ ಕೊನೆಯಾಗುವ ಹೊತ್ತಿಗೆ ನೀವು 21 ಆಸನಗಳ ಟೂರಿಸ್ಟ್ ವ್ಯಾನುಗಳಿಗೆ 55 ಆಸನಗಳ KSRTC ಬಸ್ಸುಗಳಿಗಿಂತಲೂ ಜಾಸ್ತಿ ಕೊಟ್ಟಿರುತ್ತೀರಿ. ಅದರ ಜೊತೆಗೆ ಮನಸ್ಸಿನ ತುಂಬಾ ಕಹಿ ಪ್ರವಾಸದ ಸಿಹಿಯನ್ನೆಲ್ಲಾ ನುಂಗಿ ಬಿಡುತ್ತದೆ.
.
ಒಳ್ಳೆಯವರು ಇಲ್ಲ ಅಂತ ಹೇಳ್ತಾ ಇಲ್ಲ. ಆದರೆ ಅಂತಹವರನ್ನು ಗುರುತಿಸುವುದು ಕಷ್ಟ. ಮೊದಲ ನೋಟಕ್ಕೆ ಎಲ್ಲರೂ ಒಳ್ಳೆಯವರಂತೆಯೇ ಕಾಣುತ್ತಾರೆ. ಆದರೆ ನಿಜಬಣ್ಣ ತಿಳಿಯುವುದು ಅರ್ಧದಾರಿಯನ್ನು ಕ್ರಮಿಸಿದ ಮೇಲೆ. ಅಷ್ಟೊತ್ತಿಗೆ ನೀವು ಅಸಹಾಯಕರಾಗಿರುತ್ತೀರಿ...
.
ಅದೇನೇ ಇರಲಿ, ನಿಮ್ಮ ಪ್ರಥಮ ಪ್ರಾಶಸ್ತ್ಯ KSRTC ಗೆ ಇರಲಿ. ಯಾಕೆಂದರೆ ಇಲ್ಲಿ ಯಾವುದೇ ಮುಚ್ಚುಮರೆಯಿರುವುದಿಲ್ಲ. ಹಗಲು ದರೂಡೆ ಇಲ್ಲ. ನಿಮ್ಮ ಹಣದ ಒಂದಂಶ ಸರಕಾರಕ್ಕೂ ಸಲ್ಲುತ್ತದೆ. ಚಾಲಕನು ತೆರಿಗೆ ಕಟ್ಟುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸದ ಸಿಹಿ ಹಾಗೇ ಇರುತ್ತದೆ....

ಭಾನುವಾರ, ಏಪ್ರಿಲ್ 16, 2017

ಜೀವನ

ಪ್ರತಿದಿನ ನಾವು ಈ ಬಂಡವಾಳವಿಲ್ಲದ ಜೀವನದ ವ್ಯಾಪಾರ ಪ್ರಾರಂಭಿಸಿದಾಗ, ಈ ದಿನ ಹೇಗೆ ಕಳೆಯುವುದೋ ಎಂದು ಒಮ್ಮೆಯೂ ಆಲೋಚಿಸಲು ಸಮಯವಿಲ್ಲದಂತಾಗುತ್ತದೆ. ಸಂಜೆ ಸುಂದರವಾಗಿರುತ್ತದೆ. ಸುತ್ತಲಿರುವ ಪ್ರಪಂಚವೆಲ್ಲಾ ನಮ್ಮೊಟ್ಟಿಗೆ ಓಡುವಾಗ ಎಲ್ಲಾ ನಮ್ಮವರಾಗಿಯೇ ಕಾಣುತ್ತಾರೆ. ಒಂಟಿಯಾಗಿ, ಎಂದು ತನ್ನ ಬಗ್ಗೆ ಯೋಚಿಸಲು ಸಮಯ ಸಿಗುತ್ತದೋ ಎಂದೆನಿಸುತ್ತದೆ. ಆದರೆ ಸುತ್ತಲಿನ ಬಂಧುಗಳ,ಸ್ನೇಹಿತರ ಹಾಗೂ ಪ್ರತಿ ಕ್ಷಣ ತಲೆಯಲ್ಲಿ ಗುಂಯ್ ಗುಟ್ಟುವ ನಮ್ಮ ಕರ್ತವ್ಯಗಳ ಆಲೋಚನೆಗಳಿಂದ ಸಮಯ ಓಡುತ್ತದೆ. ಅದೊಂದು ಯಾಂತ್ರಿಕ ಬದುಕೆನ್ನಿಸುತ್ತದೆ.

ಒಮ್ಮೆ ಆಲೋಚಿಸಿ ನೋಡೋಣ... ಸ್ಕೂಲಿನಲ್ಲಿ, ಓದಿ ಮುಂದೆ ಬರುವುದೊಂದೇ ಗುರಿ, ಯಾಕೆಂದರೆ ಆಗ ಅರಿವಾಗಿದ್ದು ಅಷ್ಟೆ. ಎಲ್ಲರಂತೆ ತಾನೂ ಯಾವುದಾದರೊಂದು ಕೆಲಸಕ್ಕೆ ಸೇರಿ ಇಷ್ಟ ಬಂದದ್ದೆಲ್ಲಾ ಖರೀದಿಸುವೆ ಎಂಬ ತವಕದಲ್ಲಿ ಇದರಿಂದ ಏನು ಪ್ರಯೋಜನ ಎಂದು ಅರಿಯದವರಾಗುತ್ತೇವೆ. ಬದುಕು ಅರ್ಥವಾಗಬೇಕೆಂದು ಮದುವೆ, ಮಕ್ಕಳು. ನನ್ನ ಮಕ್ಕಳಿಗೆ ನಾನೇ ದಿಕ್ಕು ಎಂಬಂತೆ ಎಲ್ಲವನ್ನು ಕೂಡಿ ಹಾಕುವ ಸಮಯ. ಮುಪ್ಪಾಯಿತು, ಅಂಟಿಕೊಂಡದ್ದೆಲ್ಲಾ ಕೊಳೆ ಎಂದರಿವಾದಾಗ, ತೊಳೆದುಕೊಳ್ಳಲು ಶಕ್ತಿಯಿರದ ಪರಿಸ್ಥಿತಿ. ತನು, ಮನಕ್ಕೆರಡಕ್ಕೂ ಮುಪ್ಪು ಹಿಡಿದು ಸುಕ್ಕುಗಟ್ಟಿರುವ ಮುಖದಲ್ಲಿ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಒಂಟಿ ಜೀವವಾಗುತ್ತದೆ. ತಮ್ಮಷ್ಟಕ್ಕೆ ಒಂಟಿಯಾಗಿ ಕುಳಿತು ಆಲೋಚಿಸಲು ಸಾಕಷ್ಟು ಸಮಯ...ಆದರೆ ಆಲೋಚಿಸಿ ಪ್ರಯೋಜನ? ಕಾಲ ಮುಗಿಯಿತು..ಹೋಗುತ್ತೇನೆಯೆಂದು ಹೊರಡುವುದು. ಇದೇ ಸುತ್ತಲು ಕಾಣುತ್ತಿರುವ ಚಿತ್ರಣ.

ಚಿಕ್ಕ ಮಕ್ಕಳನ್ನು ನೋಡಿದರೆ, ಏನೂ ಅರಿಯದ ಮುಗ್ದತೆ...
ಹರಯದವರ ಕಂಡರೆ, ಜೀವನವ ಸವಿಯುವ ಆಸೆ, ಕನಸು...
ಹಿರಿಯರಲ್ಲಿ, ಅನುಭವದ ಪ್ರತಿಬಿಂಬ...
ಒಂದಕ್ಕೊಂದು ಅಂಟದಂತೆ, ಅರಿವಿಲ್ಲದಂತೆ ನಡೆದು ಹೋಗುತ್ತದೆ....

ಏಕೆ ಹೀಗೆ...ಎಲ್ಲಿಂದ ಬಂದೆವು? ಎಲ್ಲಿದ್ದೇವೆ? ಎಲ್ಲಿಗೆ ಹೋಗುತ್ತೇವೆ? ಚಿಕ್ಕಂದಿನಿಂದ ಕಾಡಿದ ಪ್ರಶ್ನೆಗಳು... ಆಗ, ಒಂದೆರಡು ನಿಮಿಷ ಬೆಚ್ಚಿಬಿದ್ದಂತಾಗಿ ’ಇದು ಅರಿವಾಗದ ವಿಷಯ’ ಎಂದು ಬಿಟ್ಟೆ. ಈಗ, ಅರಿಯಲು ಯತ್ನಿಸುತ್ತೇನೆ...ಆದರೆ ’ಹೌದು, ಇದು ಸರಿ’ ಎಂದು ಹೇಳುವವರಾರು?

’ಒಂಟಿಯಾಗಿ ಬಂದೆವು, ಒಂಟಿಯಾಗೇ ಹೋಗುತ್ತೇವೆ’, ನಿಜ, ಆದರೆ...ಒಂಟಿ ಬದುಕು ಆರಂಭವಾದರೆ, ಸುತ್ತಲೂ ಇರುವ ಕಲ್ಲು ಬಂಡೆಗಳಿಗೂ, ಸಂತೋಷವನ್ನೂ,ನೋವನ್ನೂ ಹಂಚಲಾಗದ ಜೀವವಿರುವಂತೆ ಕಾಣುವ ಮರ ಗಿಡಗಳಿಗೂ ಯಾವ ಬೇಧವಿಲ್ಲ.

ಆದರೆ...ಈ ರೀತಿ ಆಲೋಚನೆ ಮಾಡುವ ಗುಣವಿದ್ದು, ಮಾನವರು ಎಂದೆನಿಸಿಕೊಂಡ ನಾವು ಒಂಟಿಯಾಗಿ ಸಾಗಿಹೋಗುವುದು ನಿಜವಾದರೂ..ನಮ್ಮ ಬರುವಿಕೆಗೇ ಹಲವರು ನಮ್ಮ ದಾರಿ ಹಿಡಿದು ಕಾದರೆ....ಆಲೋಚಿಸಿ....!!! ಅಂಥ ಏನೆಲ್ಲಾ ಕೆಲಸಗಳು ನಮ್ಮಿಂದ ಸಾಧ್ಯ???

   *ಗುಡ್ಡು ಮಾರ್ನಿಂಗೂ*

ಅಂತರಂಗ

ಟಿವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊ೦ದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ,
ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ.
ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ,
ಆದರೆ ನಿಜ ಜೀವನದಲ್ಲಿ ಅದೇ ರಾಜಕಾರಣಿಗಳ ಹಿ೦ಬಾಲಕರಾಗಿರುವಿರಿ.
ಕಥೆಗಳಲ್ಲಿ ಇಡೀ ಬದುಕನ್ನೇ ಇತರರಿಗಾಗಿ ತ್ಯಾಗ ಮಾಡುವ ಪಾತ್ರಗಳಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳುತ್ತೀರಿ,
ಆದರೆ ವಾಸ್ತವದಲ್ಲಿ ಅದೇ ಎಲ್ಲವೂ ನನಗೆ ಇರಲಿ ಎ೦ದು ದುರಾಸೆ ಪಡುವಿರಿ.
ಪತ್ರಿಕೆಗಳಲ್ಲಿ ವೃದ್ದ ತ೦ದೆತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸಿದ ಮಕ್ಕಳ ವಿಷಯ ಕೇಳಿ ಶಾಪ ಹಾಕುವಿರಿ,
ಆದರೆ ನಿಮ್ಮ ಅಮ್ಮ ಅಪ್ಪನಿಗಾಗಿ ವೃದ್ದಾಶ್ರಮ ಹುಡುಕುವಿರಿ.
ವರದಕ್ಷಿಣೆ ಸಾವುಗಳನ್ನುವ ನೋಡಿ ಆಕ್ರೋಶ ವ್ಯಕ್ತಪಡಿಸುವಿರಿ,
ನಿಮ್ಮ ಮಕ್ಕಳ ಮದುವೆಗೆ ಚಿನ್ನ, ಕಾರು ಮನೆ ಬೇಕೆ೦ದು ಆಸೆ ಪಡುವಿರಿ.
ಬೇರೆ ಶ್ರೀಮಂತ ಸಮಾರ೦ಭಗಳಲ್ಲಿ ವ್ಯರ್ಥವಾಗುವ ಆಹಾರ ನೋಡಿ ಬೇಸರದಿಂದ ಲೊಚಗುಟ್ಟುವಿರಿ,
ನಿಮ್ಮ ಮನೆಯ ಕಾರ್ಯಕ್ರಮಗಳಲ್ಲಿ ಅದನ್ನು ಮರೆಯುವಿರಿ.
ಗುರುಹಿರಿಯರ ಅಮೂಲ್ಯ ಹಿತನುಡಿಗಳನ್ನು ಕೇಳಿ ಚಪ್ಪಾಳೆ ಹೊಡೆಯುವಿರಿ,
ನಿಜ ಜೀವನದಲ್ಲಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವಿರಿ.
ಪೋಟೋಗಳಲ್ಲಿ ಸು೦ದರ ಪರಿಸರ, ವಾತಾವರಣ ನೋಡಿ ಆನ೦ದಿಸುವಿರಿ,
ನಿಮ್ಮ ಸುತ್ತ ಮುತ್ತ ಕೆಟ್ಟ ವಾತಾವರಣ ಇಟ್ಟುಕೊಂಡಿರುತ್ತೀರಿ.
ಆ೦ತರ್ಯದಲ್ಲಿ ಸ್ವಾರ್ಥಿಗಳಾಗಿರುವ ನಾವು,
ಬಹಿರ೦ಗವಾಗಿ ತ್ಯಾಗ ಜೀವಿಗಳನ್ನು ಕೊ೦ಡಾಡುತ್ತೇವೆ.
ಮಾತಿಗೂ, ಕೃತಿಗೂ ಅ೦ತರ ಹೆಚ್ಚಾದಾಗ ಈ ಆತ್ಮವ೦ಚಕತನ ಬೆಳೆಯುತ್ತದೆ.
ಇದಕ್ಕೆ ನಾವ್ಯಾರು ಹೊರತಲ್ಲ, ಆದರೆ ಇದು ಅಪಾಯಕಾರಿ.
ಇದನ್ನು ನಾವು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನಿಸೋಣ.
ನಮ್ಮ ನಡೆಗೂ, ನುಡಿಗೂ ಅ೦ತರ ಕಡಿಮೆ ಇರಲಿ.
ಸಾಧ್ಯವಾದಷ್ಟೂ ಹೇಳುವುದನ್ನು ಮಾಡೋಣ - ಮಾಡುವುದನ್ನು ಹೇಳೋಣ.
ನಮ್ಮ ಮಕ್ಕಳೂ ಅದನ್ನೇ ಮುಂದುವರಿಸುತ್ತಾರೆ.
ಈ ವಿಷಯದಲ್ಲಿ ಈಗಿನಿಂದಲೇ ಬದಲಾಗೋಣ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಇದು ಮನಸ್ಸುಗಳ ಅಂತರಂಗದ ಚಳವಳಿ

ವಿವೇಕಾನಂದ. ಹೆಚ್.ಕೆ.

ಜಾತಿ ಮತ್ತು ಕೋಮು ಭಾವನೆ

ಜಾತಿ ಮತ್ತು ಕೋಮು ಭಾವನೆ: Ramjan Darga
***************************************
ಜಾತಿ ಮತ್ತು ಕೋಮು ಭಾವನೆಗಳು ಭಾರತೀಯ ಮನಸ್ಸುಗಳನ್ನು ಆಳವಾಗಿ ಕಲುಷಿತಗೊಳಿಸಿವೆ.

ಶೂದ್ರರು ಮತ್ತು ಸವರ್ಣೀಯರು ಸಹಜ ಪ್ರವೃತ್ತಿ ಎಂಬಂತೆ ಜಾತಿಯತೆಯನ್ನು ಹಿಂದುಧರ್ಮದ ಹೆಸರಿನಲ್ಲಿ ರಕ್ತಗತಗೊಳಿಸಿಕೊಂಡಿರುವುದನ್ನು ನೋಡಿದರೆ ಮನುವಾದಿಗಳು ಕಳೆದ ಸಾವಿರಾರು ವರ್ಷಗಳಿಂದ ಎಂಥ ಕೀಳು ವ್ಯವಸ್ಥೆಯನ್ನು ಜನಮನದಲ್ಲಿ ರೂಢಿಸಿದ್ದಾರೆ ಎಂಬುದರ ಅರಿವಾಗದೆ ಇರದು. ಐರೋಪ್ಯ ರಾಷ್ಟ್ರಗಳಲ್ಲಿ ಕ್ರೈಸ್ತರು ಸೃಷ್ಟಿಸಿದ ನರಕಕ್ಕಿಂತಲೂ ಅಸಹ್ಯವಾದ ನರಕವನ್ನು ಭಾರತದಲ್ಲಿ ಬ್ರಾಹ್ಮಣರು ಸೃಷ್ಟಿಸಿದ್ದಾರೆ ಎಂದು ಕಾರ್ಲ್ ಮಾರ್ಕ್ಸ್ ಅವರು 1858ರಲ್ಲಿ ಬರೆದ 'ದ ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್' ಗ್ರಂಥದಲ್ಲಿ ತಿಳಿಸಿದ್ದಾರೆ.

ಜಾತಿ ಎಂಬುದು ಅಸಹ್ಯವಾದ ನರಕವಾಗಿದೆ. ಜಾತೀಯತೆಯು ಸವರ್ಣೀಯರಾದ ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರ ಮಧ್ಯೆ ಮಾತ್ರ ಇದ್ದಿದ್ದರೆ ಜಾತಿವ್ಯವಸ್ಥೆಯನ್ನು ನಾಶ ಮಾಡುವುದು ಕಷ್ಟದ ಕೆಲಸವಾಗಿರಲಿಲ್ಲ. ಆದರೆ ಅದು ಬಹುಸಂಖ್ಯಾತರಾದ ಶೂದ್ರರಲ್ಲಿ ಹಾಸುಹೊಕ್ಕಾಗಿದೆ. ಶೇಕಡಾ ಹತ್ತರಷ್ಟಿರುವ ಸವರ್ಣೀಯರಿಗೆ ಜಾತಿಯತೆಯಿಂದ ಲಾಭವಾಗಿರುವ ಕಾರಣ ಅವರು ಜಾತಿವ್ಯವಸ್ಥೆಯನ್ನು ಬಿಟ್ಟು ಇರಲಾರರು. ಶೂದ್ರರ ಮತ್ತು ಪಂಚಮರ ಪ್ರತಿಯೊಂದು ಹೋರಾಟ ಅವರಿಗೆ ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರದಂತೆ ತೋರುತ್ತದೆ. ಮಾನವೀಯತೆಗಾಗಿ ನಡೆಯುವ ಪ್ರತಿಯೊಂದು ಹೋರಾಟ ಸವರ್ಣೀಯರ ಶೋಷಣೆಯ ವ್ಯವಸ್ಥೆಯನ್ನು ಸಡಿಲುಗೊಳಿಸುವುದೇ ಆಗಿರುತ್ತದೆ. ಅಂಥ ಹೋರಾಟಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಅವರು ಬೌದ್ಧಿಕವಾಗಿ ಸದಾ ತಲ್ಲೀನರಾಗಿರುತ್ತಾರೆ. ಅವರ ಬುದ್ಧಿಯು ರಿಮೋಟ ಕಂಟ್ರೋಲ್ ಹಾಗೆ ಕೆಲಸ ಮಾಡುತ್ತಿರುತ್ತದೆ. ಯಾವ ಗಲಭೆಗಳಲ್ಲೂ ಅವರು ಕಂಡು ಬರುವುದಿಲ್ಲ. ಆದರೆ ಎಲ್ಲವನ್ನು ತಮ್ಮ ಸ್ವಾರ್ಥಸಾಧನೆಗೆ ಪೂರಕವಾಗಿ ನಿಯಂತ್ರಿಸುತ್ತಲೇ ಇರುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ 'ಕೊಡಲಿಯ ಕಾವು ಕುಲಕ್ಕೆ ಮೂಲ' ಎಂಬಂತೆ ಶೂದ್ರರನ್ನೇ ನಾಯಕರನ್ನಾಗಿ ಮಾಡಿಕೊಂಡು ಶೂದ್ರರು ಶಕ್ತಿಗುಂದುವಂತೆ ಮಾಡುತ್ತಾರೆ. ಶೂದ್ರರು ಮತ್ತ ಪಂಚಮರ ಮಧ್ಯೆ ಸಂಘರ್ಷಗಳಾಗುವಂತೆ ನೋಡಿಕೊಳ್ಳುತ್ತಾರೆ. ಅಲ್ಪಸಂಖ್ಯಾತರ ಮೇಲೆ ದಾಳಿಯಾಗುವ ಸಂದರ್ಭದಲ್ಲಿ ಶೂದ್ರರನ್ನೂ ಪಂಚಮರನ್ನೂ ಒಂದುಗೂಡಿಸುವ ಚಾಕಚಕ್ಯತೆಯನ್ನೂ ಪ್ರದಶರ್ಿಸುತ್ತಾರೆ. ನಿಜವಾದ ಅರ್ಥದಲ್ಲಿ ಹಿಂದು ಎಂಬುದು ಸವರ್ಣೀಯರ ಹಿತಕಾಪಾಡಲು ಬಳಸುವ ಶಬ್ದವಾಗಿದೆ. ಅದು ಸನಾತನ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಇಲ್ಲ. ಆದರೆ ಸವರ್ಣೀಯ ಬುದ್ಧಿಜೀವಿಗಳ ಕುತಂತ್ರದಿಂದಾಗಿ ಜನಮನದಲಿ ತುಂಬಿಕೊಂಡಿದೆ. ಹಬ್ಬಹರಿದಿನಗಳು, ಜಾತ್ರೆಗಳು, ದೇವಸ್ಥಾನಗಳು, ಪುರಾಣ, ಕಲೆ, ಸಾಹಿತ್ಯ, ಪಂಚಾಂಗ, ಮೂಢನಂಬಿಕೆ, ಹೀಗೆ ಎಲ್ಲ ಕಡೆಗಳಲ್ಲಿ ಈ ಹಿಂದು ಶಬ್ದದ ಮೂಲಕ ಸವರ್ಣೀಯರು ಶೂದ್ರರನ್ನು ಮತ್ತು ಪಂಚಮರನ್ನೂ ಆಳುವಲ್ಲಿ ಸಾವಿರಾರು ವರ್ಷಗಳಿಂದ ಯಶಸ್ಸನ್ನು ಸಾಧಿಸುತ್ತಲೇ ಬಂದಿದ್ದಾರೆ. ಹಿಂದುಧರ್ಮಧ ಚೌಕಟ್ಟಿನೊಳಗೆ ಸಾವಿರಾರು ಜಾತಿ ಮತ್ತು ಉಪಜಾತಿಗಳಿಂದ ಕೂಡಿರುವ ಶ್ರೇಣೀಕೃತ ಸಮಾಜವನ್ನು ಬಂಧಿಸಿಟ್ಟಿದ್ದಾರೆ. ಜಾತಿವಂತರು ತಾವು ಇತರ ಜಾತಿಗಳವರಿಗಿಂತ ಶ್ರೇಷ್ಠರು ಅಥವಾ ಕನಿಷ್ಠರು ಎಂಬುದನ್ನು ಈ ಮೊದಲೇ ಸಾಂಪ್ರದಾಯಕವಾಗಿ ನಿರ್ಧರಿಸಿದ ಪ್ರಕಾರ ಸ್ವೀಕರಿಸಿಬಿಟ್ಟಿದ್ದಾರೆ. ಆ ಜಾತಿಯಲ್ಲಿ ಹುಟ್ಟಿದ ಮೂರ್ಖರು ಕೂಡ ಪ್ರಮುಖರೇ ಆಗಿರುತ್ತಾರೆ.

ಧರ್ಮಸ್ಯ ಬ್ರಾಹ್ಮಣೋ ಮೂಲಂ/
ಬ್ರಾಹ್ಮಣಃ ಸಂಭವೇನಮೈವ ದೇವಾನುನಾಮಪಿ ದೈವತಂ/
ಪ್ರಮಾಣ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕರಣಂ/
-ಮನುಸ್ಮೃತಿ (11.83, 84)
(ಬ್ರಾಹ್ಮಣನೇ ಧರ್ಮದ ಮೂಲ. ತನ್ನ ಹುಟ್ಟಿನಿಂದಲೇ ಅವನು ದೇವತೆಗಳಿಗೂ ದೇವರಾಗಿದ್ದಾನೆ. ಅವನ ಮಾತು ಜನರಿಗೆ ಪ್ರಮಾಣೀಭೂತವಾದುದು.)

ಮನು ಇಷ್ಟೊಂದು ನಾಚಿಕೆಗೆಟ್ಟು ಹೇಳಬೇಕಾದರೆ. ಈ ದೇಶದ ಶೋಷಿತವರ್ಗವನ್ನು ಯಾವ ಹೀನಾಯ ಸ್ಥಿತಿಗೆ ಇಳಿಸಿರಬಹುದು ಎಂಬುದರ ಅರಿವಾಗದೆ ಇರದು. ಹೀಗೆ ಜಾತಿ ಮತ್ತು ಹುಟ್ಟಿಗೆ ತಳಕು ಹಾಕುವುದರ ಮೂಲಕ ಕೆಳಜಾತಿಗಳ ಜನರಿಗೆ ಅಕ್ಷರದಿಂದ ವಂಚಿತರನ್ನಾಗಿ ಮಾಡುವುದರ ಮೂಲಕ ಅವರ ಮೇಲೆ ಬೌದ್ಧಿಕ ಗುಲಾಮಗಿರಿಯನ್ನು ಹೇರಿದರು. ಬಹುಸಂಖ್ಯಾತ ಶೂದ್ರರು ಒಂದಾಗದಂತೆ ನೋಡಿಕೊಳ್ಳಲು ಅವರೊಳಗೂ ಮೇಲುರಿಮೆ ಮತ್ತು ಕೀಳುರಿಮೆ ಬರುವಂಥ ಜಾತಿ ಮತ್ತು ಉಪಜಾತಿಗಳನ್ನು ಸೃಷ್ಟಿಸಿದರು. ಅವರ ಕಾಯಕಗಳ ಆಧರದ ಮೇಲೆ ಅವರಲ್ಲಿ ಜಾತಿಭೇದ ಮಾಡಲು ಅವರಿಗೆ ಸಾಧ್ಯವಾಯಿತು. ಈ ಕಾರಣದಿಂದಲೇ ಅಸ್ಪೃಶ್ಯತೆಯ ಕ್ರೌರ್ಯಕ್ಕೆ ಒಳಗಾದ ಎಡಗೈ ಮತ್ತು ಬಲಗೈನವರು ಕೂಡ ಒಂದಾಗಲಿಕ್ಕಾಗಲಿಲ್ಲ. ಬಲಗೈನವರು ಎಡಗೈನವರಿಗಿಂತ ಜಾತಿಯಲ್ಲಿ ಶ್ರೇಷ್ಠರು ಎಂದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ಘಟನೆ ನೆನಪಾಗುತ್ತಿದೆ. ನಾನು ವಿಜಾಪುರದಲ್ಲಿ ಎಂಟನೆ ಇಯತ್ತೆಯಲ್ಲಿ ಓದುತ್ತಿರುವಾಗ ನಮ್ಮ ಮನೆಯ ಹತ್ತಿರ ಕಾಕಾ ಕಾಖಾನೀಸರು ಸ್ಥಾಪಿಸಿದ ಹರಿಜನ ಬೋರ್ಡಿಂಗ ಇತ್ತು. ಹೈಸ್ಕೂಲು ಓದಲು ಬಂದ ದಲಿತ ಮಕ್ಕಳಿಗೆ ಅಲ್ಲಿ ಉಚಿತ ಪ್ರವೇಶವಿತ್ತು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ನಾನು ಆ ಹೈಸ್ಕೂಲು ಹುಡುಗರ ಜೊತೆಗೇ ಇರುತ್ತಿದ್ದೆ. ರಜೆಯ ಬಿಟ್ಟಮೇಲೆ ನನ್ನ ಇಬ್ಬರು ಗೆಳೆಯರು ತಮ್ಮ ಹತ್ತಿರದ ಹಳ್ಳಿಯಾದ ಮನಗೂಳಿಗೆ ಆಹ್ವಾನಿಸಿದರು. ಅವರಲ್ಲಿ ಒಬ್ಬಾತ ಎಡಗೈ ಜಾತಿಗೆ ಸೇರಿದವನು. ಇನ್ನೊಬ್ಬಾತ ಬಲಗೈ ಜಾತಿಗೆ ಸೇರಿದವನು. ನಾವು ಮೂವರೂ ಮನಗೂಳಿಗೆ ಹೊದೆವು. ಎಡಗೈ ಗೆಳಯನ ಮನೆ ಮೊದಲಿಗೆ ಸಿಗುವುದರಿಂದ ಅಲ್ಲಿಗೆ ಹೋದೆವು. ಆತನ ತಾಯಿ ಮಗ ಬರುವ ಖುಷಿಯಲ್ಲಿ ಹೋಳಿಗೆ ಮಾಡಿದ್ದಳು. ಒತ್ತಾಯದ ಕಾರಣ ನಾನು ಮತ್ತು ಬಲಗೈ ಗೆಳಯ ಜೊತೆಯಲ್ಲೇ ಊಟ ಮಾಡಿದೆವು. ನಂತರ ಬಲಗೈಯವನ ಮನೆಗೆ ಹೋದೆವು. ಆತನ ಅಕ್ಕ ಊಟಕ್ಕೆ ಕರೆದಳು. ಊಟ ಮಾಡಿ ಬಂದುದಾಗಿ ತಿಳಿಸಿದೆ. ತನ್ನ ತಮ್ಮ ಎಡಗೈಯವನ ಮನೆಯಲ್ಲಿ ಊಟ ಮಾಡಿ ಬಂದದ್ದಕ್ಕೆ ಬಹಳ ತರಾಟೆಗೆ ತೆಗೆದುಕೊಂಡಳು. ಬಹಳ ಕೆಟ್ಟದಾಗಿ ಬೈಯ್ದಳು. ಆ ಬಲಗೈ ಮಿತ್ರ ಅಪರಾಧಿಯಂತೆ ನಿಂತಿದ್ದ.

ನಾನು ಬಿ.ಎ. ಮೊದಲ ವರ್ಷದಲ್ಲಿದ್ದಾಗ ದಲಿತ ಮಿತ್ರರನ್ನು ಕರೆದುಕೊಂಡು ಅಂಬೇಡ್ಕರ ಜಯಂತಿಯನ್ನು ಎಸ್.ಬಿ. ಆರ್ಟ್ಸ್ ಕಾಲೇಜಿನ ಹಾಸ್ಟೇಲಿನಲ್ಲಿ ಆಚರಿಸಿದೆ. ಬಹಳ ಜನ ದಲಿತ ಮಿತ್ರರು ಮತ್ತು ಇತರರು ಸೇರಿದ್ದರು. ದಲಿತ ಮಿತ್ರರಲ್ಲಿನ ನಾಲ್ಕೈದು ಜನ ಮೂಕ ಪ್ರೇಕ್ಷಕರಂತೆ ಕಾಣುತ್ತಿದ್ದರು. ಸಮಾರಂಭ ಮುಗಿದ ಮೇಲೆ ಅವರನ್ನು ಮಾತನಾಡಿಸಿ ಕಾರಣ ಕೇಳಿದೆ. ಅವರು ವಿಷಣ್ಣ ವದನರಾಗಿ 'ನಾವು ಮಾದಿಗರು' ಎಂದು ಹೇಳಿದರು. ತಮಗೆ ಆ ಸಮಾರಂಭದಲ್ಲಿ ಪ್ರಾಮುಖ್ಯ ಇಲ್ಲ ಎಂಬ ಭಾವ ಅವರದಾಗಿತ್ತು. ನನಗೆ ಬಹಳ ಬೇಸರವಾಯಿತು. ಅವರಿಗೆ ಬಲಗೈ ಮಿತ್ರರು ಏನೂ ಹೇಳಿದ್ದಿಲ್ಲ. ಆದರೆ ಅವರ ಸಂಕೋಚದಿಂದಾಗಿ ಮತ್ತು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಿಂದಾಗಿ ಅವರು ದೂರ ಉಳಿದಿದ್ದರು. ಆ ರೀತಿಯ ಸಭೆಯನ್ನು ನಾನು ಮೊದಲ ಬಾರಿಗೆ ಶ್ರಮವಹಿಸಿ ಏಪರ್ಾಡು ಮಾಡಿದ್ದೆ. ಆ ಸಭೆಯ ಯಶಸ್ಸು ಸಂತೋಷ ಕೊಟ್ಟರೂ ಈ ನೋವು ಮಾತ್ರ ಹಾಗೇ ಉಳಿದುಕೊಂಡಿತು. ನಾಲ್ಕೈದು ದಶಕಗಳ ಹಿಂದೆ ನಮ್ಮ ನಾಡಿನಲ್ಲಿ ದಲಿತರ ಮಧ್ಯೆ ಎಚಿಥ ದುಗುಡ ಮನೆ ಮಾಡಿತ್ತು ಎಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಹೀಗೆ ಮನುವಾದಿಗಳ ಕುತಂತ್ರದಿಂದಾಗಿ ಮೇಲ್ಜಾತಿ ಮತ್ತು ಕೆಳಜಾತಿಗಳ ಮಧ್ಯೆ ಅಷ್ಟೇ ಅಲ್ಲದೆ. ಬಹುಸಂಖ್ಯಾತ ಕೆಳಜಾತಿಗಳ ಮಧ್ಯೆ ಕೂಡ ಮೇಲು ಕೀಳಿನ ಕಂದಕಗಳು ಸೃಷ್ಟಿಯಾಗಿವೆ. ಈ ಕಂದಕಗಳು ಎಷ್ಟು ಆಳವಾಗಿವೆ ಎಂದರೆ, ಪ್ರತಿಯೊಂದು ಜಾತಿಗಳವರು ತಮ್ಮತನವನ್ನು ಸಂರಕ್ಷಿಸಿಕೊಂಡು ಬದುಕುವುದರಲ್ಲೇ ರಕ್ಷಣೆ ಇದೆ. ಇಲ್ಲದಿದ್ದರೆ ಬದುಕು ಪ್ರಪಾತಕ್ಕೆ ಇಳಿಯುತ್ತದೆ ಎಂದು ಭಾವಿಸಿದ್ದಾರೆ. ಎಡಗೈ ಸಮಾಜದ ಯುವತಿಯೊಬ್ಬಳು ಬಲಗೈ ಸಮಾಜದ ಯುವಕನೊಬ್ಬನನ್ನು ಪ್ರೀತಿಸಿದಳು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಿಎಚ್.ಡಿ ಪಡೆದವರಾಗಿದ್ದಾರೆ. ಯುವತಿಯ ಮನೆಯವರೆಲ್ಲರೂ ಸ್ನಾತಕೋತ್ತರ ಪದವೀಧರರೇ ಆಗಿದ್ದಾರೆ. ಆ ಯುವತಿಯ ಅಕ್ಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದುಕೊಂಡು ದಲಿತ ರಾಜಕೀಯ ಚಿಂತಕಿಯೂ ಆಗಿದ್ದಾರೆ. ಆದರೆ ಅವರೆಲ್ಲ ಈ ಮದುವೆಗೆ ಅಡ್ಡಬಂದರು. ಯುವತಿಯ ಮನವೊಲಿಸಿ ಮದುವೆ ತಪ್ಪಿಸಿದರು. ಕೇವಲ 5 ವರ್ಷಗಳ ಹಿಂದಿನ ಘಟನೆ ಇದು. ಆ ಯುವತಿಯ ಭೇಟಿಯಾದಾಗ ಅವರ ಮದುವೆ ಬಗ್ಗೆ ವಿಚಾರಿಸಿದೆ. 'ಇಲ್ಲ ಬಿಡ್ರಿ, ಮುಂದ ಕಲ್ಚರಲ್ ಪ್ರಾಬ್ಲೆಮ್ಸ್ ಆಗ್ತಾವ್' ಎಂದು ತಟ್ಟನೆ ಹೇಳಿದಳು. ಹೀಗೆ ನಮ್ಮ ದೇಶದಲ್ಲಿ ಸಾಂಸ್ಕೃತಿಕ ಸಮಸ್ಯೆ ಎಂಬುದು ಎಲ್ಲ ಜಾತಿಗಳನ್ನೂ ಕಾಡುತ್ತಿದೆ. ಇಂಥ ಭ್ರಮೆಗಳು ವಾಸ್ತವ ರೂಪ ತಾಳಿದ್ದರಿಂದಲೇ ಜಾತಿಗಳು ಬಿಡಿಸಲಾಗದ ಕಗ್ಗಂಟಾಗಿ ಮುಂದುವರಿದುಕೊಂಡು ಹೋಗುತ್ತಿವೆ.

ಮನುವಾದಿಗಳ ಸಂಪ್ರದಾಯದಿಂದಾಗ ಉಂಟಾದ ಮಾನಸಿಕ ಗುಲಾಮಗಿರಿಯು ಇಂಥ ವಿಚಿತ್ರವಾದ ಭಯಗಳನ್ನು ಎಲ್ಲ ಜಾತಿಗಳವರಲ್ಲಿ ಸೃಷ್ಟಿಸುತ್ತಲೇ ಇದೆ. ಕೆಳಜಾತಿಗಳ ಕೀಳರಿಮೆ ಮತ್ತು ಮೇಲ್ಜಾತಿಗಳವರ ಮೇಲುರಿಮೆಯಿಂದಾಗಿ ಈ ಶ್ರೇಣೀಕೃತ ಸಮಾಜದಲ್ಲಿ ಒಂದು ಜಾತಿಯವರು ಇನ್ನೊಂದು ಜಾತಿಯಿಂದ ಮತ್ತು ಒಂದು ವರ್ಣದವರು ಇನ್ನೊಂದು ವರ್ಣದವರಿಂದ ಒಂದಿಲ್ಲೊಂದು ರೀತಿಯಲ್ಲಿ ಅಪಮಾನಕ್ಕೆ ಒಳಗಾಗುತ್ತಲೇ ಇರುತ್ತಾರೆ. ನಮ್ಮ ಸಂಪ್ರದಾಯಬದ್ಧ ಮಾನವತಾವಾದಿ ಕವಿ ಪು.ತಿ. ನರಸಿಂಹಾಚಾರ್ಯರು ವಿಶಿಷ್ಟಾದ್ವೈತದ ಶ್ರೀವೈಷ್ಣವರು. ಅವರ ಮಿತ್ರರೊಬ್ಬರು ಅದ್ವೈತ ಸ್ಮಾರ್ತರು. ಪು.ತಿ.ನ. ಅವರಿಗೆ ಮಿತ್ರನ ತಂಗಿಯನ್ನು ಮದುವೆಯಾಗುವ ಬಯಕೆಯಾಯಿತು. ತಮ್ಮ ತಂದೆಯವರಿಗೆ ಈ ಕುರಿತು ತಿಳಿಸಿದರು. ಆಗ ಅವರ ತಂದೆಯವರು. 'ಅಯ್ಯೋ ಅದು ಹೇಗೆ ಸಾಧ್ಯ? ಅವರು ಲಿಂಗಪೂಜಕರು; ಭಸ್ಮಭೂಸಿತರು' ಎಂದು ತಿರಸ್ಕರಿಸಿದರು. ಮದುವೆ ಪ್ರಸ್ತಾಪ ಅಲ್ಲಿಗೇ ನಿಂತು ಹೋಯಿತು.

ನಮ್ಮ ಮನೆಯ ಬಳಿ ನಮಗೆ ಬಹಳ ಬೇಕಾದ ಒಂದು ಕುರುಬ ಸಮಾಜದ ಕುಟುಂಬವಿತ್ತು. ಅವರ ಮಗಳಿಗೆ ವರ ಹುಡುಕುತ್ತಿದ್ದರು. ನಮ್ಮ ತಂದೆ ತಮಗೆ ಪರಿಚಯವಿದ್ದ ಇನ್ನೊಂದು ಕುರುಬ ಸಮಾಜದ ಮಿತ್ರರ ಊರಿಗೆ ಹೋಗಿ ಅವರ ಹುಡುಗನನ್ನು ನೋಡಿಕೊಂಡು ಬಂದರು. ಆ ಹುಡುಗ ಮತ್ತು ಮನೆತನ ನನ್ನ ತಂದೆಗೆ ಬಹಳ ಹಿಡಿಸಿತ್ತು. ಹೀಗಾಗಿ ಖುಷಿಯಿಂದ ಎಲ್ಲ ವಿವರಿಸಿದರು. ಆಗ ಆ ಕನ್ನೆಯ ತಂದೆ ಹೇಳಿದರು. 'ಅದೆಲ್ಲ ಸರಿ. ಆದರೆ ನಮ್ಮದು ನೂರು ಕಂಕಣ. ಅವರದು ಉಣ್ಣೆ ಕಂಕಣ. ಮದುವೆ ಸಾಧ್ಯವಿಲ್ಲ' ಎಂದು ಹೇಳಿದರು!

ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದ್ದರೂ ಆ ಧರ್ಮದ ಬಹುಪಾಲು ಅನುಯಾಯಿಗಳ ಅವಜ್ಞೆಯಿಂದಾಗಿ ಅದು ಹಿಂದು ಧರ್ಮದ ಒಂದು ಭಾಗವಾಗಿ ಹೋದಂತೆ ಭಾಸವಾಗುತ್ತಿದೆ. ಲಿಂಗಾಯತರನೇಕರು ತಾವು ಹಿಂದು-ಲಿಂಗಾಯತ ಎಂದೇ ಭಾವಿಸಿದ್ದಾರೆ. ಅವರ ಶಾಲೆಯ ದಾಖಲಾತಿಗಳಲ್ಲಿ ಹಿಂದು-ಲಿಂಗಾಯತ ಎಂದೇ ಇರುತ್ತದೆ. ಹೀಗೆ ಲಿಂಗಾಯತ ಒಂದು ಜಾತಿಯಾಗಿ ನೋಡುವಾಗ ಒಳಪಂಗಡಗಳೆಲ್ಲ ಉಪಜಾತಿಗಳಾಗಿ ಎದ್ದು ಕಾಣುತ್ತಿವೆ. ಆರಾಧ್ಯ, ಆದಿ, ಬಣಜಿಗ, ಪಂಚಮಸಾಲಿ, ಕುಡು ಒಕ್ಕಲಿಗ, ನೊಣಬ, ಸಾದರ, ಶೀಲವಂತ, ಶಿವಸಿಂಪಿ, ರೆಡ್ಡಿಲಿಂಗಾಯತ ಮುಂತಾದ ಹಲವು ಹದಿನೆಂಟು ಶೇಣೀಕೃತ ಪಂಗಡಗಳಿಂದ ಲಿಂಗಾಯತ ಧರ್ಮ ತುಂಬಿಕೊಂಡಿದ್ದರಿಂದ ನಿರ್ಜಾತಿ ಶರಣರ ಆಶಯಗಳನ್ನು ಮೂಲೆಗುಂಪಾಗಿವೆ. ಈ ಒಳಪಂಗಡಗಳ ಮಧ್ಯೆ ಇಂದಿಗೂ ಮದುವೆ ಸಂಬಂಧಗಳು ಏರ್ಪಡುವುದು ಕಠಿಣ ಸಾಧ್ಯವಾಗಿದೆ.

ಗುಲ್ಬರ್ಗದಲ್ಲಿ ಆದಿ ಪಂಗಡಕ್ಕೆ ಸೇರಿದ ನನ್ನ ಮಿತ್ರನೊಬ್ಬ ಬಾಲಕನಾಗಿದ್ದಾಗ ಬಣಜಿಗರ ಮನೆಯಲ್ಲಿ ಉಂಡದ್ದಕ್ಕೆ ತಂದೆಯಿಂದ ಹೊಡೆತ ತಿಂದದ್ದನ್ನು ಜ್ಞಾಪಿಸಿಕೊಳ್ಳುತ್ತಾನೆ. ಪಂಚಮಸಾಲಿ ಜಗದ್ಗುರುವೊಬ್ಬರು ತಮ್ಮ ಪಂಗಡದವರನ್ನು ಬಣಜಿಗರು ಸಮಾನವಾಗಿ ಕಾಣುವುದಿಲ್ಲ ಎಂದು ಪ್ರವಚನದಲ್ಲೇ ಅಳಲು ತೋಡಿಕೊಂಡರುಸ. ಇನ್ನೊಬ್ಬ ಪಂಚಮಸಾಲಿ ಜಗದ್ಗುರು ಬಿ.ಜೆ.ಪಿ. ಸರ್ಕಾರದಲ್ಲಿ ಬಣಜಿಗರಿಗೇ ಹೆಚ್ಚಿನ ಪ್ರಾಧಾನ್ಯವಿದೆ. ಅವರಿಗಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಪಂಚಮಸಾಲಿ ಪಂಗಡವನ್ನು ಕಡೆಗಣಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿ ಕರೆದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗೆ ಇಡೀ ಸಮಾಜವನ್ನು ಒಡೆದು ಆಳುವ ನೀತಿಯನ್ನು ಜಾರಿಗೊಳಿಸಿ ಇಡೀ ವ್ಯವಸ್ಥೆಯು ವೈದಕಶಾಹಿಯ ಕಪಿಮುಷ್ಟಿಯಲ್ಲಿರುವಂತೆ ಮನುಸ್ಮೃತಿ ನೋಡಿಕೊಂಡಿದೆ. ಮನುಸ್ಮೃತಿಯು ಇಡೀ ಭಾರತೀಯ ಸಮಾಜವನ್ನು ಅಘೋಷಿತವಾಗಿ ಆಳುತ್ತಿದೆ. ಈ ವೈರಸ್ ನಿರ್ಜಾತಿ ಧರ್ಮಗಳಾದ ಕ್ರೈಸ್ತ, ಇಸ್ಲಾಂ, ಸಿಖ್ ಮುಂತಾದ ನಿರ್ಜಾತಿ ಧರ್ಮಗಳಲ್ಲೂ ಹಬ್ಬಿದೆ. ಅಂತೆಯೆ ದಲಿತ ಕ್ರೈಸ್ತರು ಮತ್ತು ದಲಿತ ಸಿಖ್ಖರು ಇದ್ದಾರೆ. ಮುಸ್ಲಿಮರಲ್ಲಿ ನದಾಫ್, ಪಿಂಜಾರ, ಬಾಗವಾನ, ಚಪ್ಪರಬಂದ, ನಾಲಬಂದ, ದರ್ವೇಶ್ ಮುಂತಾದ ಪಂಗಡಗಳವರ ಜೊತೆ ಸಯ್ಯದ್ ಮತ್ತು ಶೇಖ್ ಎಂದು ಹೇಳಿಕೊಳ್ಳುವವರು ರಕ್ತಸಂಬಂಧಕ್ಕೆ ಹಿಂದೇಟು ಹಾಕುತ್ತಾರೆ. ಹೀಗೆ ಜಾತಿಯ ಅಷ್ಟಪದಿ ಯಾರನ್ನೂ ಬಿಟ್ಟಿಲ್ಲ.

ಪಿತೃಪ್ರಧಾನ ವ್ಯವಸ್ಥೆಯ ದನಗಾಯಿ ಆರ್ಯರು ಏಷ್ಯಾ ಮೈನರ್ನಿಂದ ಪರ್ಸಿಯಾ, ಅಪಘಾನಿಸ್ತಾನ ಮುಂತಾದ ಪ್ರದೇಶಗಳನ್ನು ದಾಟುತ್ತ ಸಿಂಧೂನದಿ ಪ್ರದೇಶಕ್ಕೆ ಬಂದು ಆಯರ್ಾವರ್ತವನ್ನು ರೂಪಿಸುವ ಸಂದರ್ಭದಲ್ಲಿ ಸ್ಥಳೀಯರ ಮೇಲೆ ಹಲ್ಲೆ ಮಾಡಿದರು. ಅವರ ಮಾತೃಪ್ರಧಾನ ಸಿಂಧೂನದಿ ಸಂಸ್ಕೃತಿಯನ್ನು ಹಾಳುಮಾಡಿದರು. ಹೀಗೆ ಭಾರತದಲ್ಲಿ ಭಯೋತ್ಪಾದನೆಯನ್ನು ಆಮದು ಮಾಡಿಕೊಳ್ಳಲಾಯಿತು ಎಂಬುದಕ್ಕೆ ಋಗ್ವೇದದ ಒಂದು ಸೂತ್ರ ಸಾಕ್ಷಿಯಾಗಿದೆ.

ಕವಿ ಜಾನೀಹಿ ಆರ್ಯಾನ್ ಯೇ ಚ ದಸ್ಯವಃ
ಬಹರ್ಷ್ಮಿತೇ ರಂಧಯ ಶಾಸತ್ ಜೋದಿತಾ ಅವ್ರತಾನ್/ಸ
ಶಾಕೀಭವ ಯಜಮಾನಸ್ಯ ಚೋದಿತಾ ವಿಶ್ವಾ
ಇತ್ ತಾ ತೇ ಸಧಮಾದೇಷು ಚಾಕನ/
-ಋಗ್ವೇದ (1.10.518)
(ಎಲ್ಲ ಕಡೆಗಳಿಂದಲೂ ನಾವು ದಸ್ಯುಗಳಿಂದ ಸತ್ತುವರಿಯಲ್ಪಟ್ಟಿದ್ದೇವೆ. ಅವರು ಯಜ್ಞಗಳನ್ನು ಮಾಡುವುದಿಲ್ಲ. ಅವರು ನಾಸ್ತಿಕರು. ಅವರ ಆಚರಣೆಗಳೆಲ್ಲ ಭಿನ್ನ. ಅವರು ಮನುಷ್ಯರೇ ಅಲ್ಲ. ಓ ಶತ್ರುಹಂತಕನೇ! ಅವರನ್ನು ಕೊಲ್ಲು, ದಾಸ ಜನಾಂಗವನ್ನು ನಾಶ ಮಾಡು.)

ವೈದಿಕರ ಪ್ರಕಾರ ಯಜ್ಞ ಮಾಡದವರೆಲ್ಲ ನಾಸ್ತಿಕರೇ ಆಗಿದ್ದಾರೆ. ಯಜ್ಞ ಮಾಡದವರು ಮನುಷ್ಯರೇ ಅಲ್ಲ ಎಂಬುದು ಋಗ್ವೇದದ ವಾದವಾಗಿದೆ. ಆದ್ದರಿಂದ ಅವರು ಶತ್ರುಗಳು. ಅಂಥ ಶತ್ರುಗಳಾದ ದಾಸ ಜನಾಂಗವನ್ನು ಕೊಂದು ಸರ್ವನಾಶ ಮಾಡುವುದಕ್ಕೆ ಋಗ್ವೇದ ಶತ್ರುಹಂತಕರಾದ ಆರ್ಯರನ್ನು ಪ್ರಚೋದಿಸುತ್ತದೆ. ಭಾರತದ ಮೂಲಸನಿವಾಸಿಗಳಿದ್ದಲ್ಲಿಗೆ ನುಗ್ಗಿ ಬಂದು, ಕುದುರೆ, ರಥ, ಬಿಲ್ಲು ಮತ್ತು ಬಾಣಗಳು ಕೂಡ ಗೊತ್ತಿರದ ಆ ಶಾಂತಸ್ವಭಾವದ ಮೂಲನಿವಾಸಿಗಳನ್ನು ಶತ್ರುಗಳೆಂದು ಕರೆದು ಅವರನ್ನು ಧ್ವಂಸಮಾಡುವಲ್ಲಿ ಮತ್ತು ಅಳಿದುಳಿದವರನ್ನು ತಮ್ಮ ಕಟ್ಟಳೆಗಳ ಮೂಲಕ ನಿಯಂತ್ರಿಸುವಲ್ಲಿ ವೈದಿಕರು ಯಶಸ್ಸನ್ನು ಸಾಧಿಸಿದರು. ನಂತರ ಅವರನ್ನು ಒಡೆದು ಆಳುವ ಮೂಲಕ ಅವೈದಿಕ ಶೂದ್ರರು ಜಾತಿ ವಿಜಾತಿಗಳಲ್ಲೇ ಕೊಳೆಯುವಂತೆ ನೋಡಿಕೊಂಡರು.

ಅಂದಿನ ಒಡೆದು ಆಳುವ ನೀತಿಯಲ್ಲಿ ಇಂದು ಸಹಜವಾಗಿತ್ತು. ಇಂದು ಕಾಲಬದಲಾಗಿದೆ. ಕೋಮುವಾದಿಗಳು ಹಿಂದುತ್ವದ ಹೆಸರಿನಲ್ಲಿ ಶೇಕಡಾ 90ರಷ್ಟಿರುವ ಕೆಳಜಾತಿಗಳವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರ ಹೂಡಿದ್ದಾರೆ. ಎಲ್ಲ ಜಾತಿ, ಉಪಜಾತಿ ಮತ್ತು ಅಸ್ಪೃಶ್ಯತೆಯನ್ನು ಮುಂದುವರಿಸಿಕೊಂಡೇ 'ಗರ್ವಸೇ ಕಹೋ ಹಂ ಹಿಂದು ಹೈ' ಎಂಬ ಘೋಷನೆ ಕೂಗುತ್ತ ದಲಿತರು ಮತ್ತು ಹಿಂದುಳಿದ ವರ್ಗದ ಜನರನ್ನು ಮರಳು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವವಾದಿ ರಾಜಕಾರಣದ ಜಾಗದಲ್ಲಿ ಜಾತಿವಾದಿ ರಾಜಕಾರಣವನ್ನು ಗಟ್ಟಿಗೊಳಿಸುವ ಕುತಂತ್ರವನ್ನು ಕೋಮುವಾದಿ ಪಕ್ಷಗಳು ಮತ್ತು ಸಂಘಗಳು ಬಹಳ ಚಾಕಚಕ್ಯತೆಯಿಂದ ಮಾಡುತ್ತಿವೆ. ಈ ಹುನ್ನಾರಕ್ಕೆ ಹಿಂದುಳಿದವರು ಬಲಿಯಾಗುತ್ತಲೇಸ ಇದ್ದಾರೆ.

ಈ ಜಾತಿ ಕುತಂತ್ರವನ್ನು ಶರಣರು 12ನೇ ಶತಮಾನದಲ್ಲೇ ಬಯಲಿಗೆಳೆದಿದ್ದಾರೆ.

ಬ್ರಾಹ್ಮಣ ಭಕ್ತನಾದರೇನಯ್ಯಾ? ಸೂತಪಾತಕಂಗಳ ಬಿಡ.
ಕ್ಷತ್ರಿಯ ಭಕ್ತನಾದಡೇನಯ್ಯಾ? ಕ್ರೋಧವ ಬಿಡ.
ವೈಶ್ಯ ಭಕ್ತನಾದರೇನಯ್ಯಾ? ಕಪಟವ ಬಿಡ.
ಶೂದ್ರ ಭಕ್ತನಾದರೇನಯ್ಯಾ? ಸ್ವಜಾತಿ ಎಂಬುದ ಬಿಡ.
ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?

ಎಂದು ಚೆನ್ನಬಸವಣ್ಣನವರು ಪ್ರಶ್ನಿಸಿದ್ದಾರೆ.

ಜಾತಿ ಮತ್ತು ವರ್ಣಗಳಿಗೆ ಸಂಬಂಧಿಸಿದಂತೆ ಇದು ಬಹಳ ಮಹತ್ವದ ವಚನವಾಗಿದೆ. ಸವರ್ಣೀಯರಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ಅವರ ಗುಣವೈಶಿಷ್ಟ್ಯಗಳಿಂದ ಚೆನ್ನಬಸವಣ್ಣನವರು ವಿಶ್ಲೇಷಿಸುತ್ತಾರೆ. ಬ್ರಾಹ್ಮಣನನದು ಸೂತಪಾತಕ ಗುಣ. ಕ್ಷತ್ರಿಯನದು ಕ್ರೋಧ ಗುಣ. ವೈಶ್ಯನದು ಕಪಟ ಗುಣ. ಇವರೆಲ್ಲರು ಈ ಗುಣವೈಶಿಷ್ಟಗಳನ್ನು ಉಳಿಸಿಕೊಂಡು ವರ್ಣ ಮತ್ತು ಜಾತಿವಾದಿಗಳಾಗಿದ್ದಾರೆ. ಇದರ ಜೊತೆ ಅವರ ಅಂತಸ್ತು ಮತ್ತು ಅಹಂಕಾರವನ್ನು ಹೆಚ್ಚಿಸುವ ಶೋಷಕ ವೃತ್ತಿ ಮತ್ತು ಕರ್ತವ್ಯಗಳಿವೆ. ಹೀಗಾಗಿ ಮೂರೂ ವರ್ಣಗಳು ಸುಲಿಗೆಯ ಮೂಲವಾಗಿವೆ. ಹೀಗೆ ಕಂದಾಚಾರದ ಗುರುತ್ವ, ಅಹಂ ಮತ್ತು ಕಪಟತನಗಳು ಒಂದುಗೂಡಿ ಸವರ್ಣೀಯರ ಮೇಲ್ವರ್ಗದ ಸೃಷ್ಟಿಯಾಗಿದೆ. ಬಹುಸಂಖ್ಯಾತರ ಕೆಳವರ್ಗವಾದ ಶೂದ್ರ ವರ್ಣದ ಜಾತಿಗಳವರು ಶೋಷಣೆಗೆ ಒಳಗಾದವರು. ಇವರಲ್ಲಿ ಸ್ವಜಾತಿ ಎಂಬುದನ್ನು ಬಿಟ್ಟರೆ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಸ್ವಜಾತಿಯನ್ನು ಕಳೆದುಕೊಂಡಾಗ ಮಾತ್ರ ಅವರು ಬಿಡುಗಡೆಯನ್ನು ಹೊಂದಬಲ್ಲರು ಎಂಬುದು ವಚನ ಚಳವಳಿಯ ಸಂದೇಶವನ್ನು ಸ್ವಜಾತಿಯ ಭ್ರಮೆಯಿಂದ ಅವರು ಅರಿತು ಕೊಳ್ಳದೆ ಹೋದರು. ಮೇಲ್ವರ್ಗದವರು ವ್ಯವಸ್ಥೆಯ ಮೇಲಿನ ಹಿಡಿತವನ್ನು ಮುಂದುವರಿಸುವುದಕ್ಕಾಗಿ ಭಕ್ತರಾಗಿಯೂ ತಮ್ಮ ತ್ರಿವರ್ಣಗಳಿಂದ ಕೂಡಿದ್ದ ವರ್ಗ ಗುಣವನ್ನು ಬಿಟ್ಟುಕೊಡಲಿಲ್ಲ. ಕೆಳವರ್ಗದವರು ತಮ್ಮ ಭಾವುಕತೆಯಿಂದ ಸ್ವಜಾತಿಗಳಿಗೆ ಅಂಟಿಕೊಳ್ಳುವುದರ ಮೂಲಕ ಮೇಲ್ವರ್ಗದ ಪಿತೂರಿಗೆ ಬಲಿಯಾದರು. ಹೀಗೆ ಶರಣಸಂಕುಲದಲ್ಲಿನ ಹಿಂದುಳಿದ ಮೂಲದವರುಸ ಚಳವಳಿಯ ಮೂಲ ಆಶಯಗಳನ್ನು ಅರಿತುಕೊಳ್ಳಲಿಲ್ಲ. ಆದರೆ ಚಳವಳಿ ಪ್ರಬಲವಾಗಿದ್ದ ಕಾರಣ ಮೇಲ್ಜಾತಿಯ ಮೂರೂ ವರ್ಣದವರು ಕೂಡ ಚಳವಳಿಯ ಭಾಗವಾಗುತ್ತ ಅದನ್ನುಸ ಶಿಥಿಲಗೊಳಿಸಿದರು. ಮುಂದೆ ಅಂಥವರ ಷಡ್ಯಂತ್ರದ ಕಾರಣ ಶರಣರ ಚಳವಳಿ ಕಲ್ಯಾಣದ ಹತ್ಯಾಕಾಂಡದಲ್ಲಿ ಪರ್ಯವಸಾನಗೊಂಡಿತು.

ಬಸವಣ್ಣನವರಿಗೆ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ನವಸಮಾಜಕ್ಕಾಗಿ ನವಮಾನವನ ಸೃಷ್ಟಿಯ ಅವಶ್ಯಕತೆ ಇತ್ತು. ಅವರು ಸಂಪ್ರದಾಯದ ಹಂಗುಗಳಿಂದ ವಿಮೋಚನೆಗೊಂಡ ಮಾನವರನ್ನು ರೂಪಿಸುವ ಮಹಾನ್ ಗುರಿಯನ್ನು ಹೊಂದಿದ್ದರು. ಆದರ ಜನರ ಮೆದುಳಿನಲ್ಲಿ ಹತ್ತಾರು ಸಹಸ್ರ ವರ್ಷಗಳಿಂದ ತುಂಬಿಕೊಂಡಿದ್ದ ಜಾತಿಯ ಕಸವನ್ನು ಹೊರಹಾಕುವುದು ಸುಲಭದ ಕೆಲಸವಾಗಿರಲಿಲ್ಲ.

ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ!
ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ!
ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ!
ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ!
ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ
ಕೂಡಲಸಂಗಮದೇವಾ.

ಎಂದು ಬಸವಣ್ಣನವರು ನವಮಾನವರನ್ನು ರೂಪಿಸುವಲ್ಲಿನ ತೊಡಕುಗಳನ್ನು ಮಾರ್ಮಿಕವಾಗಿ ಹೇಳಿದ್ದಾರೆ. ತಾವು ಬ್ರಾಹ್ಮಣ್ಯದ ಹಂಗಿನಲ್ಲಿ ಇಲ್ಲ. ಎಲ್ಲವನ್ನೂ ತೊರೆದು ಶರಣಸಂಸ್ಕೃತಿಯ ಹಂಗಿನಲ್ಲಿದ್ದ ಕಾರಣ ನವಮಾನವನಾಗಿದ್ದೇನೆ ಎಂದು ಸೂಚಿಸುತ್ತಾರೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತಿಯೆಂಬರು.
ಅವರೆಂತು ಕೀಳುಜಾತಿಯವರು? ಜಾತಿಗಳು ನೀವೇಕೆ ಕೀಳಾಗಿರೋ?

ಎಂದು ದಲಿತ ಮೂಲದ ಶರಣೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಸಾತ್ವಿಕ ಕೋಪ ವ್ಯಕ್ತಪಡಿಸುತ್ತಾಳೆ. ಹೀಗೆ ಶರಣಚಳವಳಿಯಲ್ಲಿ ಜಾತಿ ಮತ್ತು ವರ್ಗಕ್ಕೆ ಸಂಬಂಧಿಸಿದಂತೆ ಬಹಳಷ್ಟು ವೈಚಾರಿಕ ಸಂಘರ್ಷಗಳಾಗಿವೆ. ಐರೋಪ್ಯ ರಾಷ್ಟ್ರಗಳಲ್ಲಿ ವರ್ಗದ ಪರಿಕಲ್ಪನೆ ಮೂಡುವ ಮೊದಲೇ ಶರಣಚಳವಳಿಯಲ್ಲಿ ವರ್ಗದ ಕಲ್ಪನೆ ಮೂಡಿದ್ದು ಮಹತ್ವಪೂರ್ಣವಾಗಿದೆ. ಜಾತಿಗಳು ಸ್ಥಗಿತಗೊಂಡ ವರ್ಗಗಳು ಎಂಬುದರ ಸುಳಿವು ವಚನಸಾಹಿತ್ಯದಲ್ಲಿ ಸಿಗುತ್ತದೆ. ಅಂತೆಯೆ. 'ಉಳ್ಳವರು ಶಿವಾಲಯ ಮಾಡಿಹರು, ನಾನೇನ ಮಾಡುವೆ ಬಡವನಯ್ಯಾ' ಎಂದು ಬಸವಣ್ಣನವರು ಹೇಳಲು ಸಾಧ್ಯವಾಯಿತು. ಮೇಲ್ಜಾತಿ, ಮೇಲ್ವರ್ಗದ ಬಸವಣ್ಣನವರು ಈ ತೆರನಾದ ಹೊಸತನದ ಮೂಲಕ ಕೇಳಜಾತೀಕರಣಕ್ಕೆ ಮತ್ತು ಕೆಳವಗರ್ೀಕರಣಕ್ಕೆ ಒಳಗಾದರು. ಇಂಥ ವೈಚಾರಿಕತೆಯ ಆಧಾರದ ಮೇಲೆ ಜಾತಿಗಳನ್ನು ಸಂಕರಗೊಳಿಸಿ ಶರಣಸಂಕುಲವೆಂಬ ಎಲ್ಲ ತೆರನಾದ ಮೇಲು ಕೀಳಿಲ್ಲದ ಸಮಾಜವನ್ನು ಸೃಷ್ಟಿಸಿದರು. ಆ ಸಮಾಜದೊಳಗಿದ್ದುಕೊಂಡೇ ತಮ್ಮ ವರ್ಗ ಹಿತಾಸಕ್ತಿಯನ್ನು ಪರೋಕ್ಷವಾಗಿ ಕಾಪಾಡಿಕೊಂಡು ಬಂದ ಪಟ್ಟಭದ್ರರು ಬಸವಣ್ಣನವರ ಈ ನವಸಮಾಜದ ಕನಸನ್ನು ಭಗ್ನಗೊಳಿಸಿದರು.

ಭಾರತೀಯ ಜಾತಿ ವ್ಯವಸ್ಥೆಯಲ್ಲಿನ ವರ್ಗ ಲಕ್ಷಣಗಳನ್ನು ಬಾಬಾಸಾಹೇಬ ಅಂಬೇಡ್ಕರರು ಕೂಡ ಗುರುತಿಸಿದ್ದಾರೆ. 'ಭಾರತದ ಪ್ರತಿ ಹಳ್ಳಿಯಲ್ಲೂ ದಲಿತರ ಮೇಲೆ ಮೇಲ್ಜಾತಿಗಳು ಕೇವಲ ಜಾತಿಯಾಗಿ ಅಲ್ಲದೆ ವರ್ಗವಾಗಿ ಶೋಷಣೆ ಮಾಡುತ್ತವೆ. ಈ ಪರಿಕಲ್ಪನೆಯನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ಯಾವತ್ತೂ ದಲಿತಪರ ಸಂಘಟನೆಯನ್ನು ಕಟ್ಟಲು ಸಾಧ್ಯವೇ ಇಲ್ಲ. ಆದ್ದರಿಂದ ದಲಿತರು ಕೂಡ ವರ್ಗವಾಗಿಯೇ ಸಂಘಟಿತರಾಗಬೇಕು. ಅದಕ್ಕೆ ಮೊದಲ ಹೆಜ್ಜೆಯಾಗಿ ಹೊಲೆಮಾದಿಗರು ಒಂದುಗೂಡಬೇಕು. ಇತರ ಅಸ್ಪೃಶ್ಯ ಜಾತಿಗಳೂ ಸೇರಬೇಕು. ನಂತರ ದಲಿತಪರ ಇತರ ಹಿಂದುಳಿದ ಜಾತಿಗಳ ಒಳ ವರ್ಗವನ್ನು ಸ್ವಾಗತಿಸಬೇಕು. ಇದು ಮುಂದೆ ಬ್ರಾಹ್ಮಣರ ವರೆಗೂ ವ್ಯಾಪಿಸಬೇಕು' ಎಂದು ಅಂಬೇಡ್ಕರರು ತಿಳಿಸುತ್ತಾರೆ. ಹೀಗೆ ಅವರು ಬ್ರಾಹ್ಮಣರೊಳಗಿನ ಬಡವರ ಬಗ್ಗೆಯೂ ಕಾಳಜಿ ವ್ಯಕ್ತಪಡಿಸುತ್ತಾರೆ. ಆದರೆ ಸಾಧ್ಯವಾಗುವುದು ದಲಿತರು ಮತ್ತು ಹಿಂದುಳಿದವರು ಒಂದು ವರ್ಗವಾಗಿ ಸದೃಢವಾದಾಗ ಮಾತ್ರ ಎಂಬುದನ್ನೂ ಅವರು ಮಾರ್ಮಿಕವಾಗಿ ಸೂಚಿಸಿದ್ದಾರೆ.

'ಹಿಂದುಗಳು ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ತಮ್ಮ ಶಕ್ತಿಯನ್ನು ಹರಣ ಮಾಡಬಾರದು. ಆಂತರಿಕ ವೈರಿಗಳಾದ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯೂನಿಸ್ಟರ ವಿರುದ್ಧ ಹೋರಾಡುವುದಕ್ಕಾಗಿ ನಿಮ್ಮ ಶಕ್ತಿಯನ್ನು ಮೀಸಲಿಡಬೇಕು' ಎಂದು ಅಂದಿನ ಆರ್.ಎಸ್.ಎಸ್. ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲಕರ್ ಹಿಂದುಗಳಿಗೆ ಕರೆನೀಡುವಾಗ, ಎಲ್ಲ ವೈರುಧ್ಯಗಳ ಮಧ್ಯೆ ಕೂಡ ಬ್ರಾಹ್ಮಣರಿಂದ ಹಿಡಿದು ದಲಿತರ ವರೆಗೆ ಎಲ್ಲರೂ ಹಿಂದುಗಳೇ ಎಂಬ ಭ್ರಮೆಯನ್ನು ಹುಟ್ಟಿಸಿದರು.

ಇಂದು ಸರಸಂಘಚಾಲಕರಾಗಿರುವ ಮೋಹನ ಭಾಗವತರು ಇದೇ ರಾಗವನ್ನು ಆಧುನಿಕ ಕಾಲಕ್ಕೆ ತಕ್ಕಂತೆ ತೆಗೆದಿದ್ದಾರೆ. 'ಹಿಂದುತ್ವ ಎಂದರೆ ನ್ಯಾಷನಲ್ ಐಡೆಂಟಿಟಿ (ರಾಷ್ಟ್ರೀಯ ಸಮರೂಪತಾ)' ಎಂದು ಇತ್ತೀಚೆಗೆ ದೂರದರ್ಶನ ಭಾಷಣದಲ್ಲಿ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಚುನಾವಣೆಗೆ ಮೊದಲು 'ನಾನು ಹಿಂದು ರಾಷ್ಟ್ರೀಯವಾದಿ' ಎಂದು ಹೇಳಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 'ಭಾಗವತ ಅವರು ಹೇಳಿದ್ದು ಬಹಳ ಸಂದಭೋಚಿತ' ಎಂದು ತಿಳಿಸಿದ್ದಾರೆ. ಹೀಗೆ ಹಿಂದೂ ಧರ್ಮ ಮತ್ತು ರಾಜಕಾರಣವನ್ನು ಕೂಡಿಸುವ ಪ್ರಯತ್ನವನ್ನು ಈ ಜನ ಮೊದಲಿನಿಂದಲೂ ಮಾಡುತ್ತಲೇ ಬರುತ್ತಿದ್ದಾರೆ.

ಈ ಗಂಡಾಂತರದ ಬಗ್ಗೆ ಗಾಂಧೀಜಿಯವರು ಬಹಳ ಹಿಂದೆಯೆ ಎಚ್ಚರಿಸಿದ್ದಾರೆ. 'ನಾನು ಸರ್ವಾಧಿಕಾರಿಯಾಗಿದ್ದರೆ ಧರ್ಮ ಮತ್ತು ರಾಜ್ಯಶಕ್ತಿಯನ್ನು ಬೇರ್ಪಡಿಸುತ್ತಿದೆ. ನಾನು ನನ್ನ ಧರ್ಮದ ಹೆಸರಿನಲ್ಲಿ ಶಪಥ ಮಾಡಿ ಹೇಳುತ್ತೇನೆ. ನಾನು ಅದಕ್ಕಾಗಿ ಸಾಯುತ್ತೇನೆ. ಆದರೆ ಅದು ನನ್ನ ವ್ಯಯಕ್ತಿಕ ವಿಚಾರ. ಇದಕ್ಕೂ ರಾಜಕೀಯ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ನಿಮ್ಮ ಸರ್ವಧರ್ಮೀಯ ಕಲ್ಯಾಣ, ಆರೋಗ್ಯ, ಸಂಪರ್ಕ, ವಿದೇಶಿ ಸಂಬಂಧಗಳು, ಕರೆನ್ಸಿ ಮುಂತಾದವುಗಳನ್ನು ನಿಭಾಯಿಸುವುದು ಸಕರ್ಾರದ ಕರ್ತವ್ಯವಾಗಿರುತ್ತದೆ. ನಿಮ್ಮ ಅಥವಾ ನನ್ನ ಧರ್ಮಕ್ಕೆ ಅದು ಸಂಬಂಧಿಸಿದುದಲ್ಲ. ಅದು ಪ್ರತಿಯೊಬ್ಬರ ಖಾಸಗಿ ವಿಚಾರ.' ಎಂದು ಗಾಂಧೀಜಿಯರು ಧರ್ಮ ಮತ್ತು ರಾಜಕಾರಣದ ಸಂಬಂಧವನ್ನು ಅಲ್ಲಗಳೆಯುವುದರ ಮೂಲಕ ಕೋಮುರಾಜಕೀಯಕ್ಕೆ ಕಡಿವಾಣ ಹಾಕುವ ಕ್ರಮವನ್ನು ಸೂಚಿಸಿದ್ದಾರೆ.

ಆದರೆ ಇಂದು ಕೋಮು ರಾಜಕಾರಣ ಅಭಿವೃದ್ಧಿಯ ಭ್ರಮೆಗಳನ್ನು ಸೃಷ್ಟಿಸುವ ಮೂಲಕ ದೇಶವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಷ್ಟು ಬೆಳೆಯುತ್ತಿದೆ. ಕೇವಲ ಬ್ರಾಹ್ಮಣರ ಮನೆಗಳನ್ನು ಒಳಗೊಂಡಂಥ 'ಶಂಕರ ಅಗ್ರಹಾರಂ' ಎಂಬ ವೈದಿಕ ನಗರವನ್ನು ಬೆಂಗಳೂರಿನಿಂದ 75 ಕಿಲೊ ಮೀಟರ್ ದೂರದಲ್ಲಿ ನಿರ್ಮಿಸುತ್ತಿದ್ದಾರೆ. ಬ್ರಹ್ಮಜ್ಞಾನವುಳ್ಳವನೇ ಬ್ರಾಹ್ಮಣ ಎಂದು ವಾದಿಸುವ ಇಂಥವರು ಅಂಥ ಜ್ಞಾನವುಳ ಅಸ್ಪೃಶ್ಯರನ್ನು ಸೇರಿಸಿಕೊಳ್ಳುವರೆ? ಇಂಥ ಪ್ರಯತ್ನಗಳು ಪರೋಕ್ಷವಾಗಿ ರಾಜ್ಯದ ವಿವಿಧ ನಗರಗಳಲ್ಲಿ ನಡೆಯುತ್ತಿವೆ. ಗುಲ್ಬರ್ಗದಲ್ಲಿ ನನಗೊಂದು ವಿಚಿತ್ರ ಅನುಭವವಾಯಿತು. ಮುಸ್ಲಿಮರೊಬ್ಬರು ಬಹಳ ಸುಂದರವಾದ ಅಪಾರ್ಟ್ ಮೆಂಟ್ ಅನ್ನು ನಿರ್ಮಿಸಿದ್ದರು. 'ಒಂದೇ ಫ್ಲ್ಯಾಟ್ ಉಳಿದಿದೆ. ಕೂಡಲೆ ಸಂಪರ್ಕಿಸಿ' ಎಂದು ಬೋರ್ಡ್ ಹಾಕಿದ್ದರು. ವಿಚಾರಿಸಲು ಹೋದೆ. ಮಾತುಕತೆಯಾಯಿತು. ನನ್ನ ಹೆಸರು ಕೇಳಿದರು. ಅಪಾರ್ಟ್ ಮೆಂಟ್ ಮಾಲಿಕ ವಿನಮ್ರವಾಗಿ ಮುಸ್ಲಿಮರಿಗೆ ಕೊಡುವುದಿಲ್ಲ ಸರ್ ಎಂದು ತಿಳಿಸಿದರು. 'ನಮಗೆ ಬ್ರಾಹ್ಮಣರು ಮನೆ ಬಾಡಿಗೆ ಕೂಡ ಕೊಡುವುದಿಲ್ಲ. ಈ ಅನುಭವ ನನಗೆ ಬೆಂಗಳೂರಿನಲ್ಲಿ ಆಗಿದೆ. ನೀವು ಮುಸ್ಲಿಮರಾಗಿ ಒಬ್ಬ ಮುಸ್ಲಿಮನಿಗೆ ಕೊಡುವುದಿಲ್ಲ ಎಂದರೆ ಹೇಗೆ? ನಾನೇನು ಕಡಿಮೆ ದರಕ್ಕೆ ಕೇಳುತ್ತಿಲ್ಲ. ನೀವು ಹೇಳಿದ್ದಕ್ಕೆ ಒಪ್ಪಿಕೊಳ್ಳುತ್ತಿದ್ದೇನಲ್ಲ ಎಂದೆ. ಆಗ ಆತ 'ತಪ್ಪು ತಿಳಿದುಕೊಳ್ಳಬೇಡಿ ಸರ್; ಈ ಅಪಾರ್ಟ್ ಮೆಂಟ್ ನಲ್ಲಿ ಫ್ಲ್ಯಾಟ್ ತೆಗೆದುಕೊಂಡವರೆಲ್ಲ ಬ್ರಾಹ್ಮಣರು. ಅವರು ಕಟ್ಟಡ ಆರಂಭವಾಗುವುದಕ್ಕೆ ಮೊದಲೇ ಬುಕ್ ಮಾಡಿ ಅಡ್ವಾನ್ಸ್ ಕೊಟ್ಟಿದ್ದಾರೆ. ಆಗ ಅವರು ಮುಸ್ಲಿಮರಿಗೆ ಫ್ಲ್ಯಾಟ್ ಕೊಡಬಾರದು ಎಂಬ ಕಂಡಿಷನ್ ಹಾಕಿದ್ದಾರೆ. ನಾನು ಕೊಟ್ಟ ಮಾತಿಗೆ ತಪ್ಪುವವನಲ್ಲ ಎಂದರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಧಾರ್ಮಿಕ ಮೌಲ್ಯಗಳು ಕಾಲಕಸವಾಗುತ್ತಿವೆ ಎಂಬುದರ ಅರಿವಿದ್ದ ನಾನು ಥ್ಯಾಂಕ್ಸ್ ಹೇಳಿ ಮರಳಿದೆ.

ಬೇಜವಾಬ್ದಾರಿ ಸರ್ಕಾರಗಳಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಸಿಂಗಾಪುರ ಕೇವಲ 20 ಮೈಲಿ ಉದ್ದ ಮತ್ತು 18 ಮೈಲಿ ಅಗಲದ ದೇಶ. ಅಲ್ಲಿ ಇಂಥ ಗೊಂದಲಗಳಿಲ್ಲ. ಅಲ್ಲಿ ಎಲ್ಲ ಜನಾಂಗದವರಿಗೆ ಅವರ ಜನಸಂಖ್ಯೆಯ ಆಧಾರದ ಮೇಲೆ ಫ್ಲ್ಯಾಟಗಳನ್ನು ಹಂಚಲಾಗುತ್ತದೆ. ಅದೊಂದು ಅನುಕರಣೀಯವಾದ ಮೀಸಲಾತಿ ವ್ಯವಸ್ಥೆ. ವಿವಿಧ ಧರ್ಮಗಳಿಂದ ಕೂಡಿದ ಅಲ್ಲಿಯ ಜನರಿಗೆ ಕೋಮುವಾದ ಗೋತ್ತೇ ಇಲ್ಲ. ನಮ್ಮಲ್ಲಿ ಕೂಡ ಈ ವ್ಯವಸ್ಥೆ ಜಾರಿಗೆ ಬಂದಾಗ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಮತ್ತು ದಲಿತರಿಗೆ ನ್ಯಾಯ ಸಿಗುವುದು.

ವಿಚಿತ್ರವೆಂದರೆ ಸಾಮಾನ್ಯ ದಿನಗಳಲ್ಲಿ ದಲಿತರು ಮತ್ತು ಹಿಂದುಳಿದವರು ತಮಗಾಗುವ ಸಾಮಾಜಿಕ ಅಪಮಾನಗಳ ಬಗ್ಗೆ ಮತ್ತು ರಾಜಕೀಯ ಮೋಸಗಾರಿಕೆ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಆದರೆ ಕೋಮುಗಲಭೆಗಳ ಸಂದರ್ಭದಲ್ಲಿ ಅವರಲ್ಲಿನ ಬಹುಪಾಲು ಜನರು ತಾವು ಹಿಂದುಗಳೆಂದು ಸುಲಿಗೆಕೋರರ ಜೊತೆ ಒಂದಾಗುತ್ತಾರೆ. ಬುದ್ಧ, ಬಸವ ಮತ್ತು ಅಂಬೇಡ್ಕರರ ವಿಚಾರಗಳು ಮಾತ್ರ ಈ ದೇಶವನ್ನು ಜಾತಿ ಮತ್ತು ಕೋಮುವಾದಿಗಳಿಂದ ರಕ್ಷಿಸುವ ಸಾಮರ್ಥ್ಯ ಪಡೆದಿವೆ.